Home Blog Page 3311

ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ ವಾಟ್ಸಪ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ವಾಟ್ಸಪ್, ಬುಧವಾರದಿಂದ ಜಾರಿಗೆ ಬರುತ್ತಿರುವ ತಡೆ ನಿಯಂತ್ರಣದ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ತಜ್ಞರ ಅಭಿಪ್ರಾಯದಂತೆ, ಕ್ಯಾಲಿಫೋರ್ನಿಯಾ ಮೂಲದ- ಫೇಸ್ಬುಕ್ ನ ಘಟಕವಾಗಿರುವ ವಾಟ್ಸಾಪ್ ನಿಂದ ಖಾಸಗಿತನ ಸುರಕ್ಷತೆ ಕಸಿದುಕೊಳ್ಳಲು ಬಲವಂತ ಮಾಡಲಾಗುತ್ತಿದೆ ಎಂದು ದೂರಿರುವುದಾಗಿ ಮೂಲಗಳು ತಿಳಿಸಿವೆ.

ಒಂದು ಮಾಹಿತಿಯು ಎಲ್ಲಿಂದ ಹರಡಿದೆ ಎಂಬುವುದನ್ನು ತಿಳಿದುಕೊಳ್ಳಲು ಅಧಿಕಾರಿಗಳು ಮುಂದಾದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಕಂಪೆನಿಗಳು ಆ ವಿವರ ನೀಡಬೇಕು. ಇದು ಭಾರತೀಯ ಸಂವಿಧಾನ ರೀತಿಯಲ್ಲಿ ಖಾಸಗಿತನ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ವಾದ ಮಂಡಿಸಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಸರ್ಕಾರ ಮಾತ್ರ, ಯಾರು ತಪ್ಪು ಮಾಡುತ್ತಾರೆಯೋ ಅಂತಹ ವ್ಯಕ್ತಿಗಳ ಮಾಹಿತಿ ಮಾತ್ರ ಬಹಿರಂಗಪಡಿಸುವುಕ್ಕೆ ಕಾನೂನು ತರಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಒಬ್ಬರಿಗೆ ಒಂದು ಹಾಗೂ ಇನ್ನೊಬ್ಬರಿಗೆ ಒಂದು ಇರುವ ರೀತಿಯಲ್ಲಿ ಕಾನೂನು ತರಲು ಸಾಧ್ಯವಿಲ್ಲ. ಕಾರಣ, ಸಂದೇಶಗಳು ಎಂಡ್-ಟು-ಎಂಡ್ ಎನ್ ಕ್ರಿಪ್ಟೆಡ್.

ಒಂದು ವೇಳೆ ನಿಯಮದಂತೆ ಕಾನೂನು ಜಾರಿಗೆ ತಂದರೆ, ಸಂದೇಶ ಪಡೆದುಕೊಳ್ಳುವವರ ಎನ್ ಕ್ರಿಪ್ಷನ್ ಮುರಿಯಬೇಕಾಗುತ್ತದೆ. ಮಾಹಿತಿಯ ಮೂಲ ತಿಳಿದುಕೊಳ್ಳಲು ಇದು ಅನ್ವಯವಾಗುತ್ತದೆ. 

ದೇಶದಲ್ಲಿ 40 ಕೋಟಿಯಷ್ಟು ವಾಟ್ಸಪ್ ಬಳಕೆದಾರರು ಇದ್ದಾರೆ. ವಾಟ್ಸಾಪ್ ಕಾನೂನು ಸಮರಕ್ಕೆ ಮುಂದಾಗಿರುವುದೇ ಖಾತ್ರಿಯಾದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮತ್ತು ಫೇಸ್ಬುಕ್, ಗೂಗಲ್, ಟ್ವಿಟ್ಟರ್ನಂಥ ಟೆಕ್ ದೈತ್ಯ ಕಂಪೆನಿಗಳ ನಡುವಿನ ತಿಕ್ಕಾಟ ಹೆಚ್ಚಾಗಲಿದೆ.

ಕಳ್ಳನನ್ನು ಹಿಡಿಯಲು ಸಹಾಯ ಮಾಡಿದ ಲಾಕ್ ಡೌನ್!

ವಿಜಯಸಾಕ್ಷಿ ಸುದ್ದಿ, ಕಾರವಾರ

ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕಾರು ಕಳ್ಳ ಲಾಕ್ ಡೌನ್ ನಿಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ವ್ಯಕ್ತಿ ಕಳೆದ ಎರಡು ವರ್ಷಗಳ ಹಿಂದೆ ನಗರದ ವಕೀಲ ವಿವೇಕ ಪ್ರಭು ಎಂಬುವವರ ಕಾರಿನ ಚಾಲಕನಾಗಿದ್ದ. ಈ ವ್ಯಕ್ತಿಯ ಸಿದ್ದರ ಮೂಲದ ಸಂದೀಪ್ ಗಾಂವಕರ್(40) ಎಂದು ಗುರುತಿಸಲಾಗಿದೆ.

ಈತ ಮಾಲೀಕರ ಕಾರನ್ನೇ ಕದ್ದು ಪರಾರಿಯಾಗಿದ್ದ. ಆ ನಂತರ ಮುಂಬಿಯಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿ ಲಾಕ್ ಡೌನ್ ಆಗಿದ್ದರಿಂದಾಗಿ ಮರಳಿ ನಗರಕ್ಕೆ ಬಂದಿದ್ದ. ಆತನ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ.

ನಗರದ ಪಿ.ಎಸ್.ಐ ಸಂತೋಷ್ ನೇತೃತ್ವದ ತಂಡ ಅವನನ್ನು ಹಿಡಿದಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರುಗಳ ಬಿಡಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊರೊನಾ ನಿಯಮ ಉಲ್ಲಂಘಿಸಿ ಸಭೆ ಆಯೋಜಿಸಿದ್ದಕ್ಕೆ ದಂಡ ಮಾತ್ರ ಏಕೆ? ಎಪ್ ಐಆರ್ ಇಲ್ಲವಾ? ಸಭೆಯಲ್ಲಿ ಭಾಗಿಯಾಗಿದ್ದವರು ಯಾರು?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ನಿಯಮ ಉಲ್ಲಂಘಿಸಿ ಜ. 17ರಂದು ಬೆಳಗಾವಿಯಲ್ಲಿ ನಡೆಸಿದ್ದ ಬಿಜೆಪಿ ಸಮಾವೇಶದ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳದ ಬಗ್ಗೆ ಜಿಲ್ಲಾ ಪೊಲೀಸ್ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೊನಾ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದ ತಪ್ಪಿತಸ್ಥರ ವಿರುದ್ಧ ಪೊಲೀಸರು ದಂಡ ವಿಧಿಸಿದ್ದರು.

ಕೇವಲ ದಂಡ ವಿಧಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಕೋರ್ಟ್, ಪೊಲೀಸ್ ಆಯುಕ್ತರಿಗೆ ಕಾಯ್ದೆಯ ಬಗ್ಗೆ ಅರಿವಿದ್ದಂತೆ ಕಾಣಿಸುತ್ತಿಲ್ಲ. ಆಯೋಜಕರ ವಿರುದ್ಧ ಎಫ್‌ ಐಆರ್ ದಾಖಲಿಸಿಲ್ಲ. ಕಾಯ್ದೆಯ ನಿಯಮಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಈ ಪ್ರಮಾಣ ಪತ್ರ ಒಪ್ಪಲು ಆಗುವುದಿಲ್ಲ. ಜೂ. 3ರೊಳಗಾಗಿ ಹೊಸ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಿದೆ.

ಅಲ್ಲದೇ, ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ವಿರುದ್ಧ ಎಫ್‌ ಐಆರ್ ದಾಖಲಿಸುವಂತೆ ಈ ಹಿಂದೆ ನೀಡಿದ್ದ ಆದೇಶ ಪಾಲಿಸಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ. ಹೀಗಾಗಿ ವಿಚಾರಣೆಯನ್ನು ಜೂ. 4ಕ್ಕೆ ಮುಂದೂಡಲಾಗಿದೆ. ಜನವರಿ 17 ರಂದು ನಡೆದ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು.

ಸನ್ನಡತೆಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಜನರ ಬಿಡುಗಡೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಸನ್ನಡತೆಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಸೆಂಟ್ರಲ್‌ ಜೈಲಿನಿಂದ 16 ಜನ ಪುರುಷರು ಹಾಗೂ ಇಬ್ಬರು ಮಹಿಳಾ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.

ಸನ್ನಡತೆಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 125 ಕೈದಿಗಳ ಬಿಡುಗಡೆಗೆ ಸರ್ಕಾರ ಆದೇಶ ನೀಡಿತ್ತು. ಸರ್ಕಾರದ ಆದೇಶದಂತೆ‌ ಕಲಬುರಗಿ ಸೆಂಟ್ರಲ್‌ ಜೈಲಿನಿಂದ 18 ಜನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯ ಹೊರವಲಯದ ನಂದಿಕೂರ ಗ್ರಾಮದ ಬಳಿಯಿರುವ ಸೆಂಟ್ರಲ್ ಜೈಲ್ ನಲ್ಲಿ ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರವನ್ನು ಕಾರಾಗೃಹದ ಮುಖ್ಯ ಅಧೀಕ್ಷಕ ಅಧೀಕ್ಷಕ ಪಿ.ಎಸ್. ರಮೇಶ್ ನೀಡಿದ್ದಾರೆ.

ಒಂದೇ ಕುಟುಂಬದ ಮೂವರು ಮಹಾಮಾರಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಕೊರೊನಾ ಮಹಾಮಾರಿಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಿಲ್ಲೆಯ ಕುರುಗೋಡು ತಾಲೂಕಿನ ಮದೀರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾಗಿದ್ದ ಸನೀತಮ್ಮ(45)ರುದ್ರಪ್ಪ(56) ನಂದಿನಿ (18) ಸೋಂಕಿಗೆ ಬಲಿಯಾದ ಒಂದೇ ಕುಟುಂಬದ ದುರ್ದೈವಿಗಳು.

ಪ್ರಾರಂಭದಲ್ಲಿ ರುದ್ರಪ್ಪ ಅವರ ಮಗ ತಿಪ್ಪೇಸ್ವಾಮಿಗೆ ಕೋವಿಡ್ ಲಕ್ಷಣ ಕಂಡು ಬಂದಿತ್ತು. ಇವರು ಹೈದ್ರಾಬಾದ್ ನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೊರೊನಾ ಲಾಕ್ ಡೌನ್ ನಿಂದಾಗಿ ಊರಿಗೆ ಆಗಮಿಸಿದ್ದರು. ಅವರಿಗೆ ಸೋಂಕು ಕಾಣಿಸಿಕೊಂಡ ನಂತರ ಅವರ ತಾಯಿ ಸುನಿತಮ್ಮಳಿಗೆ ಸೋಂಕು ತಗುಲಿದೆ. ಆ ನಂತರ ಅವರ ತಂದೆ ರುದ್ರಪ್ಪ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮೂರನೇಯದಾಗಿ ಸಹೋದರಿ ನಂದಿನಿಗೆ ಕಾಣಿಸಿಕೊಂಡಿದೆ. ಆದರೆ, ಮಗ ತಿಪ್ಪೇಸ್ವಾಮಿ(22) ಸೋಂಕಿನಿಂದ ಗುಣಮುಖವಾಗಿದ್ದು, ಉಳಿದ ಮೂವರು ಸಾವನ್ನಪ್ಪಿದ್ದಾರೆ. ಸದ್ಯ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಒಂದೇ ಕುಟುಂಬದ ಮೂವರ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.

ಕೊರೊನಾ ಸಮಯದಲ್ಲಿ ಮಾರಿ ಹಬ್ಬ – ಪ್ರಶ್ನಿಸಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆ ಮನೆಗೆ ನುಗ್ಗಿ ಹಲ್ಲೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಲಾಕ್ ಡೌನ್ ನಡುವೆ ಮಾರಿ ಹಬ್ಬ ಆಚ್ಚರಿಸುತ್ತಿರುವುದನ್ನು ತಡೆಯಲು ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆಯ ಮೇಲೆಯೇ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಈ ಗ್ರಾಮದಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿದ್ದರೂ ಜನರು ಮಾರಿ ಹಬ್ಬ ಆಚರಿಸುತ್ತಿದ್ದರು. ಇದನ್ನು ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ ತಡೆಯಲು ಪ್ರಯತ್ನಿಸಿದ್ದರು. ಹೀಗಾಗಿ ಇದರಿಂದ ಕೋಪಗೊಂಡ ಗ್ರಾಮಸ್ಥರು, ಕಾರ್ಯಕರ್ತೆಯ ಮನೆಗೆ ನುಗ್ಗಿ ಮಂಗಳಗೌರಿ ಸೇರಿದಂತೆ ಅವರ ಸಹೋದರಿ ಸರೋಜಮ್ಮ, ಪುತ್ರ ಶರತ್ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇದರಿಂದ ಅವರಿಗೆ ಗಾಯವಾಗಿವೆ.

ಹೊಸೂರು ಗ್ರಾಮದಲ್ಲಿ ನಿನ್ನೆ ಗ್ರಾಮ ದೇವತೆಯ ಹಬ್ಬವಿತ್ತು. ಹೀಗಾಗಿ ದೇವಾಲಯದ ಮುಂಭಾಗದಲ್ಲಿ ಮೇಕೆ ಬಲಿ ಕೊಡುವ ಮೂಲಕ ಹಬ್ಬ ಆಚರಿಸಲಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ, ಸದ್ಯ ರಾಜ್ಯದಲ್ಲಿ ಕೊರೊನಾ ಹರಡುತ್ತಿದೆ. ಗುಂಪುಗೂಡಬೇಡಿ ಎಂದು ಮನವಿ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಜನ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೋವಿಡ್ ನಿಯಮ ಉಲ್ಲಂಘನೆ; ಮೂವರು ಅರ್ಚಕರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಸೇರಿದಂತೆ ಹತ್ತು ಹಲವು ನಿರ್ಬಂಧಗಳನ್ನು ಹೇರಿದೆ. ಜಿಲ್ಲಾಧಿಕಾರಿಗಳು ಕೂಡ ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.‌ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರ ಪೂಜೆ-ಪುನಸ್ಕಾರ ಮಾಡಬೇಕು, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅವಕಾಶ ಕೊಡಬಾರದು ಎಂದು ಆದೇಶ ಹೊರಡಿಸಲಾಗಿದೆ.

ಹೀಗೆ ಭಕ್ತರ ಕೋರಿಕೆಯ ಮೇರೆಗೆ ದೇವಸ್ಥಾನದ ಬಾಗಿಲು ತಗೆದು ದರ್ಶನಕ್ಕೆ ಅವಕಾಶ ಕಲ್ಪಿಸಿದ ಆರೋಪದ ಮೇಲೆ ಮೂವರು ಅರ್ಚಕರನ್ನು ಬಂಧಿಸಲಾಗಿದೆ.

ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಿನ್ನೆ ಗ್ರಾಮದಲ್ಲಿ ಆಚರಿಸುವ ಕೊನೆ ಮಂಗಳವಾರದ ಹಿನ್ನೆಲೆಯಲ್ಲಿ ಯಲ್ಲಮ್ಮದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿ ಮೂರು ‌ಜನ ಅರ್ಚಕರನ್ನು ಬಂಧಿಸಿದ್ದಾರೆ.

ಫಕ್ಕೀರಪ್ಪ ಚನ್ನಪ್ಪ ಬಾರಕೇರ, ಚನ್ನಪ್ಪ ಫಕ್ಕೀರಪ್ಪ ಬಾರಕೇರ ಹಾಗೂ ಸಂತೋಷ ಫಕ್ಕೀರಪ್ಪ ಬಾರಕೇರ ಎಂಬುವವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ನಾಗಾವಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗಣೇಶ ಹನಮಪ್ಪ ಪೂಜಾರ ಎಂಬುವವರು ದೂರು ದಾಖಲು ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನದಾಫ್ ಸಂಘದ ಅಧ್ಯಕ್ಷರ ಪತ್ನಿ ಹಬೀದಾ ಬೇಗಂ ನಿಧನ; ಅಬ್ದುಲ್ ರಜಾಕ್ ಸಂತಾಪ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ಅಧ್ಯಕ್ಷ ಜನಾಬ್ ಜಲೀಲ್ ಸಾಹೇಬ್ ಅವರ ಧರ್ಮಪತ್ನಿ ಹಬೀದಾ ಬೇಗಂ ಅವರ ನಿಧನಕ್ಕೆ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ತೀವ್ರ ಸಂತಾಪ ಸೂಚಿಸಿದೆ.

ಮರ್ಹೂಮಾ ಹಬೀದಾ ಬೇಗಂ ರವರಿಗೆ ಆ ಅಲ್ಹಾನು ಮೃತರ ಅತ್ಮಕ್ಕೆ ಶಾಂತಿ (ಮಘ್ಪಿರತ್) ದಯಪಾಲಿಸಲಿ ಎಂದ ಅಬ್ದುಲ್ ರಜಾಕ್ ನದಾಫ್, ಹುಜೂರ್ ಮೋಹ್ಮದ್ ಮುಸ್ತಫಾ (ಸ್ವ) ಇವರ ನೆರವಾಗಲಿ ಎಂದು ಆಶಿಸಿದ್ದಾರೆ.

ಪಿಂಜಾರ್ ನದಾಫ್ ಸಮಾಜ ಮುಂಚೂಣಿಯಲ್ಲಿ ನಿಂತು ಜನ ಪರ ಧ್ವನಿಯಾಗಿ ಹೋರಾಡುತ್ತಿದ್ದ ಇವರ ನಿಧನವು ಸಮುದಾಯದಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಹಬೀದಾ ಬೇಗಂ ಅವರಿಗೆ ಸ್ವರ್ಗಪ್ರಾಪ್ತಿ ಮತ್ತು ಅವರ ಕುಟುಂಬದರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ಅಲ್ಲ್ಹಾತಾಲ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಶಾಸಕರಿಗೆಲ್ಲ ಕೊರೊನಾ ನಿಯಮ ಅನ್ವಯಿಸುವುದಿಲ್ಲವೇ?

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ರಾಜ್ಯದಲ್ಲಿ ಮಹಾಮಾರಿಯ ಅಬ್ಬರ ಜೋರಾಗಿದೆ. ನಿಯಂತ್ರಣಕ್ಕಾಗಿ ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದ ಜನರಿಗೆ ತಕ್ಕ ಪಾಠ ಕಲಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಬಿಜೆಪಿ ಶಾಸಕ ಮಾತ್ರ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಜಗಳೂರು ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರೇ ನಿಯಮ ಗಾಳಿಗೆ ತೂರಿರುವ ವ್ಯಕ್ತಿ. ಇವರು ಲಾಕ್ ಡೌನ್ ನಿಂದಾಗಿ ದೇವಸ್ಥಾನಗಳು ಬಂದ್ ಆಗಿದ್ದರೂ ಬಾಗಿಲು ತೆಗೆಯಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಕುಟುಂಬಸ್ಥರೊಂದಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇವರ ವರ್ತನೆ ಕಂಡು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಮಾಡ್ರಳ್ಳಿ ಗ್ರಾಮದ ಚೌಡೇಶ್ವರಿ ದೇವಿಯ ದೇವಸ್ಥಾನದ ಬಾಗಿಲು ತೆರೆಯಿಸಿ ಶಾಸಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಇಂದಿರಾ ರಾಮಚಂದ್ರಪ್ಪ, ಪುತ್ರ ಅಜಯೇಂದ್ರ ಸಿಂಹ ಇದ್ದರು.

ನಿಮ್ಮ ತೆವಲಿಗೆ ಜನರ ಹೆಣ ಕೆಡವಬೇಡಿ – ಸರ್ಕಾರದ ವಿರುದ್ಧ ಗುಡುಗಿದ ವಿಶ್ವನಾಥ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡಬೇಡಿ ಎಂದು ತಮ್ಮದೆ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮುಂದುವರಿಸುವುದು ಸರಿಯಲ್ಲ. ಬಡವರಿಗೆ ಸರ್ಕಾರ ಸರಿಯಾದ ಪ್ಯಾಕೇಜ್ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಸದ್ಯ ಕೊರೊನಾದಿಂದ ಜನ ಸಾಯುತ್ತಿದ್ದಾರೆ. ಇದೇ ರೀತಿ ಸರ್ಕಾರದ ದುರ್ವರ್ತನೆ ಮುಂದುವರೆದರೆ ಜನ ಮುಂದೆಯೂ ಸಾಯುತ್ತಾರೆ ಎಂದು ಗುಡುಗಿದ್ದಾರೆ.

ನಾಯಕತ್ವದ ಬದಲಾವಣೆ ಹೈಕಮಾಂಡ್‍ ಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿನ ಗೊಂದಲ ಮುಂದುವರೆಸಲು ಲಾಕ್ ಡೌನ್ ಅನ್ನು ರಕ್ಷಣೆಯಾಗಿ ಪಡೆಯುವುದು ಬೇಡ. ಸದ್ಯ ರಾಜ್ಯದಲ್ಲಿ ಕೊರೊನಾದಿಂದಾಗಿ ಜನ ಕಂಗಾಲಾಗುತ್ತಿದ್ದಾರೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದ್ದಾರೆ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದ್ದಾರೆ. ಒಬ್ಬರನ್ನು ಆಕ್ಸಿಜನ್ ಮಂತ್ರಿ ಮಾಡಿದ್ದಾರೆ. ಆದರೆ, ಇವರಿಂದಲೂ ಜನರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಹೆಣದ ಮೇಲೆ ಹಣ ಎತ್ತಬೇಡಿ ಎಂದು ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದ್ದಾರೆ.

ತಜ್ಞರ ಮಾತನ್ನು ಸರ್ಕಾರ ಎಂದಿಗೂ ಕೇಳಿಲ್ಲ. ಸಚಿವ ಸಂಪುಟದಲ್ಲಿ ತಮಗೆ ಇಷ್ಟಬಂದಂತೆ ನಿರ್ಧಾರ ಕೈಗೊಂಡಿದ್ದಾರೆ. ಈಗ ತಜ್ಞರ ಸಲಹೆ ಎಂದು ಹೇಳಿ ಲಾಕ್ ಡೌನ್ ಮುಂದುವರಿಸಬೇಡಿ. ಮತ್ತೊಮ್ಮೆ ಲಾಕ್ ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ ರೂ. 10 ಸಾವಿರ ಕೊಟ್ಟು ನಂತರ ಮಾಡಿ. ನಿಮ್ಮ ತೆವಲಿಗಾಗಿ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆಯೂ ವಿಶ್ವನಾಥ್ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ಭೂಮಿ ಪರಭಾರೆ ತೀರ್ಮಾನ ಧೃಡಿಕರಣಕ್ಕೆ ಬರುತ್ತದೆ. ಅದನ್ನು ಧೃಡಿಕರಣ ಮಾಡಬಾರದು. ಯಡಿಯೂರಪ್ಪ ಇದೇ ವಿಚಾರದಲ್ಲಿ ಅಹೋರಾತ್ರಿ ಹೋರಾಟ ಮಾಡಿದ್ದರು. ಈಗ ಅವರೆ ಭೂಮಿ ಕೊಡಲು ಹೊರಟ್ಟಿದ್ದಾರೆ. ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

error: Content is protected !!