ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ನಡೆದಿದೆ. ಗುರುರಾಜ್ ಕುಲಕರ್ಣಿ (35) ಕೊಲೆಯಾದ ವ್ಯಕ್ತಿ.
ಪಕ್ಕದ ಮನೆಯ ಪವನ್ ಜಾಗಿರದಾರ್ ಎಂಬಾತ ಗುರುರಾಜ್ ನ ಮನೆಯ ನಾಯಿಗೆ ಕಲ್ಲು ಹೊಡೆಯುತ್ತಿದ್ದ. ಇದೇ ವಿಚಾರಕ್ಕೆ ಎರಡು ತಿಂಗಳ ಹಿಂದೆ ಇಬ್ಬರ ಮಧ್ಯೆ ಗಲಾಟೆಯಾಗಿತ್ತು.
ನಿನ್ನೆ ರಾತ್ರಿ ಸಂಧಾನ ಮಾಡಿಕೊಳ್ಳಲು ಗುರುರಾಜ್ನನ್ನು ಕರೆಸಿಕೊಂಡಿದ್ದ ಪವನ್ ಜಾಗಿರದಾರ್, ತನ್ನ ಸ್ನೇಹಿತರೊಂದಿಗೆ ಸೇರಿ ಹತ್ತೆಗೈದಿದ್ದಾನೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರ ಮೂರ್ತಿ ಮೇಲೆ ಕಾಲಿಟ್ಟು ವಿಕೃತಿ ಮೆರೆದ ಯುವಕನಿಗೆ ಗ್ರಾಮಸ್ಥರು ಥಳಿಸಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀಸ್ವಾಮಿ ಕೋಟೆ ಕಲ್ಲಪ್ಪನ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟು ದುರ್ವರ್ತನೆ ತೋರಿದ್ದು, ಯುವಕನ ವರ್ತನೆ ಕಂಡು ಆಕ್ರೋಶಗೊಂಡ ಗ್ರಾಮಸ್ಥರು ಯುವಕನನ್ನು ಹಿಡಿದು ಥಳಿಸಿದ್ದಾರೆ.
ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧುಗಿರಿ ತಾಲೂಕಿನ ದಬ್ಬೆಗಟ್ಟ ಗ್ರಾಮದ ಶ್ರೀಕಾಂತ ಈ ದುಷ್ರ್ಕತ್ಯ ಎಸೆಗಿದಾತ ಎಂಬುದು ತಿಳಿದು ಬಂದಿದೆ. ಯುವಕನ ವಿರುದ್ಧ ಮಧುಗಿರಿ ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಸುರಪೂರ ತಾಲೂಕು ವೈದ್ಯಾಧಿಕಾರಿ ಆರ್. ವಿ. ನಾಯಕ್ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಬಂಧಿಸಿದ್ದಾರೆ. ಶಿವಾನಂದ ಹಿರೇಮಠ, ಸದ್ದಾಮ್ ಹುಸೇನ್ ಬಂಧಿತ ಆರೋಪಿಗಳು.
ಆರೋಪಿಗಳು ಯಾದಗಿರಿಯ ಸುರಪುರದ ದೇವತ್ಕಲ ಗ್ರಾಮದಲ್ಲಿ ರೋಗಿಗಳಿಗೆ ಆಲೋಪಥಿ ಚಿಕಿತ್ಸೆ ನೀಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತಾಲೂಕು ವೈದ್ಯಾಧಿಕಾರಿಗಳು ಹಾಗೂ ತಂಡ ಇಬ್ಬರನ್ನೂ ಬಂಧಿಸಿ ಅಲೋಪಥಿ ಔಷಧ ಜಫ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಸುರಪೂರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಖಾಸಗೀಯ ವೈದಕೀಯ ನೋಂದಣಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿಗೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಹೊರವಲಯದ ತಮಟಕಲ್ಲ ಸಮೀಪ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿ ಸಿಲುಕಿದ್ದ ಮೃತರ ದೇಹ ಹೊರತೆಗೆಯಲು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಬೇಕಾಯಿತು.
ನಿದ್ದೆ ಮಂಪರಿನಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಥಣಿಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಹಾಗೂ ಕಚೇರಿಯ ಮ್ಯಾನೇಜರ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಇಇ ರಾಜೇಂದ್ರ ಇಂದ್ರಪ್ಪ ಪರಣಾಕರ ಹಾಗೂ ಮ್ಯಾನೇಜರ್ ದೀಪಕ ಕೃಷ್ಣಾಜಿ ಕುಲಕರ್ಣಿ ಇವರು ಇಲಾಖೆಯ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಬೆಳಗಾವಿಯ ಗುತ್ತಿಗೆದಾರರೊಬ್ಬರಿಂದ ಶೇ.3 ರಷ್ಟು ಅಂದರೆ, 68,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ಗುತ್ತಿಗೆದಾರ ಎಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ಇಂದು ಲಂಚದ ಹಣ ಸ್ವೀಕರಿಸುವಾಗ ಎಸಿಬಿ ಎಸ್ಪಿ ಬಿ.ಎಸ್. ನ್ಯಾಮಗೌಡರ ಮಾರ್ಗದರ್ಶನ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ, ಸುನಿಲಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಎಸಿಬಿ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಮೇಲಧಿಕಾರಿ ಇಲ್ಲದೆಯೇ ಆರ್ ಟಿಓ ಚಾಲಕನೋರ್ವ ರಸ್ತೆ ಬದಿ ಇಲಾಖೆ ಜೀಪ್ ನಿಲ್ಲಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡಲು ಹೋಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಹೊರವಲಯದ ಶಾಂತಿ ಕಾಲೇಜಿನ ಬಳಿ ಮಂಡ್ಯ ಆರ್ ಟಿಓ ಇಲಾಖೆಯ ಜೀಪ್ ಚಾಲಕ ತನ್ನ ಮೇಲಧಿಕಾರಿ ಜಾಗದಲ್ಲಿ ಬೇರೊಬ್ಬರನ್ನು ಕುಳ್ಳರಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿ ನಮ್ ಸಾಹೇಬ್ರು ಇದ್ದಾರೆ, ಅವ್ರಿಗೆ ಕೊಡಬೇಕು ಎಂದು ಹಣ ವಸೂಲಿ ಮಾಡಿದ್ದಾನೆ.
ಸ್ಥಳೀಯ ಕೆಲ ಜನರು ಅನುಮಾನಗೊಂಡು ಈ ಚಾಲಕನ ಕಳ್ಳಾಟವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸುತ್ತುವರಿದು ಪ್ರಶ್ನೆ ಮಾಡಿದ್ದಾರೆ.
ಇದರಿಂದ ತಬ್ಬಿಬ್ಬಾದ ಚಾಲಕ ನಮ್ ಸಾಹೇಬ್ರು ಕೋರ್ಟ್ ಗೆ ಹೋಗಿದ್ದಾರೆ, ಬರ್ತಾರೆ. ಅದಕ್ಕೆ ನಾವು ತಪಾಸಣೆ ಮಾಡುತ್ತಿದ್ದೇವೆ ಎಂದು ಸಬೂಬು ಹೇಳಿ ಜಾರಿಕೊಳ್ಳಲು ಯತ್ನಿಸಿದ್ದಾನೆ. ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಿದ್ದಂತೆ ಚಾಲಕ ಜೀಪ್ ತೆಗೆದುಕೊಂಡು ಅಲ್ಲಿಂದ ಪಲಾಯನ ಮಾಡಿದ್ದಾನೆ.
ಆರ್ ಟಿಒ ಚಾಲಕನ ಈ ವಸೂಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು, ಭಾರೀ ವೈರಲ್ ಆಗುತ್ತಿದೆ. ಆರ್ ಟಿಒ ಇಲಾಖೆಯ ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ದ ಜಾಲತಾಣದಲ್ಲಿ ಜನರು ಆಕ್ರೋಶ ಹೊರ ಹಾಕಿದ್ದಾರೆ.
ವಿಜಯಸಾಕ್ಷಿ ಸಿನಿಮಾ ಸುದ್ದಿ, ಬೆಂಗಳೂರು: ನವರಸ ನಾಯಕ ಸದ್ಯ ತೋತಾಪುರಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಜಿ ಇದ್ದಾರೆ. ಅದಾದ ನಂತರ ನಿರ್ದೇಶಕ ಗುರುಪ್ರಸಾದ್ ಜೊತೆ ಮೂರನೇ ಸಿನಿಮಾ ರಂಗನಾಯಕನಾಗಿ ಬಣ್ಣ ಹಚ್ಚಲಿದ್ದಾರೆ. ಅಷ್ಟರೊಳಗೆ ಜಗ್ಗೇಶ್ ರಾಘವೇಂದ್ರ ಸ್ಟೋರ್ಸ್ ಶುರು ಮಾಡಲಿದ್ದಾರೆ. ಸ್ಟೋರ್ ಆರಂಭಕ್ಕೆ ನವೆಂಬರ್ 22 ಎಂದು ದಿನವನ್ನೂ ನಿಗದಿಪಡಿಸಲಾಗಿದೆ!
ಅರೆ! ಇದೇನಿದು..! ಜಗ್ಗೇಶ್ ಅವರು ಸಿನಿಮಾ ಬಿಟ್ಟು ಅಂಗಡಿ ಆರಂಭಿಸುತ್ತಿದ್ದಾರೆಯೇ? ಎಂದು ಗಾಬರಿಯಾಗಬೇಡಿ. ಇದು ಅವರ ಮುಂದಿನ ಸಿನಿಮಾದ ಹೆಸರು. ರಾಘವೇಂದ್ರ ಸ್ವಾಮಿಗಳ ಪರಮಭಕ್ತನಾಗಿರುವ ಜಗ್ಗೇಶ್ ಅವರಿಗೆ ಅವರ ಹೆಸರಿನಲ್ಲೇ ಆರಂಭಗೊಳ್ಳುತ್ತಿರುವ ಸಿನಿಮಾದಿಂದ ಸಖತ್ ಖುಷಿಯಾಗಿದ್ದಾರೆ.
ಅದಕ್ಕೆ ಕಾರಣ ಬರೀ ಸಿನಿಮಾ ಹೆಸರು ಮಾತ್ರವಲ್ಲ. ರಾಘವೇಂದ್ರ ಸ್ಟೋರ್ಸ್ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕ!
ಈಗಾಗಲೇ ರಾಜಕುಮಾರ, ಯುವರತ್ನ ಸಿನಿಮಾಗಳ ಮೂಲಕ ಹಿಟ್ ಸಿನಿಮಾ ನಿರ್ಮಿಸುವ, ನಿರ್ದೇಶಿಸುವ ಜೋಡಿ ಎನಿಸಿರುವ ವಿಜಯ ಕಿರಂಗದೂರು ಮತ್ತು ಸಂತೋಷ್ ಆನಂದರಾಮ್ ರಾಘವೇಂದ್ರ ಸ್ಟೋರ್ಸ್ ಶುರು ಮಾಡಲಿದ್ದಾರೆ. ನವರಸ ನಾಯಕ ಜಗ್ಗೇಶ್ ಈ ಸಿನಿಮಾದಲ್ಲಿ ನಾಯಕನಾಗಿ ವಿಜೃಂಭಿಸಲಿದ್ದಾರೆ.
ರಾಘವೇಂದ್ರ ಸ್ಟೋರ್ಸ್ ಸಿನಿಮಾಗೆ since 1972 ಎಂಬ ಟ್ಯಾಗ್ ಲೈನ್ ಇದ್ದು, ಇದರಲ್ಲಿ ಜಗ್ಗೇಶ್ ಪಾಕಶಾಲೆಯ ಮೇಷ್ಟ್ರ ಪಾತ್ರ ಮಾಡಲಿರುವ ಸುಳಿವು ನೀಡಿದ್ದಾರೆ.
ಅದೇನೇ ಇರಲಿ ಜಗ್ಗೇಶ್ ವೃತ್ತಿ ಬದುಕಿಗೆ ರಾಘವೇಂದ್ರ ಸ್ಟೋರ್ಸ್ ದೊಡ್ಡ ಸಂಪತ್ತಾಗಲಿ ಎಂಬ ಆಶಯ ನಮ್ಮದು.
ಅಗ್ರಿಗೋಲ್ಡ್ ಕಂಪನಿಯ ಏಜೆಂಟ್ ನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲ್ಲೂಕಿನ ಹೊಲ್ಲಂಬಳ್ಳಿ ಗ್ರಾಮದಲ್ಲಿ ನಡೆದಿದಿದೆ.
ಗ್ರಾಮದ ಡಿ.ಎಂ. ಶ್ರೀನಿವಾಸಪ್ಪ (53) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. 2004 ರವರೆಗೂ ಅಗ್ರಿಗೋಲ್ಡ್ ನಲ್ಲಿ ಏಜೆಂಟ್ ಆಗಿ ಸಂಸ್ಥೆಗೆ ಜನರಿಂದ 2 ಕೋಟಿಗೂ ಅಧಿಕ ಹಣ ಸಂದಾಯ ಮಾಡಿಸಿದ್ದ. ಆದರೆ, ಕಂಪನಿ ಗ್ರಾಹಕರಿಗೆ ವಂಚಿಸಿರುವುದು ಬಹಿರಂಗವಾಗಿದ್ದರಿಂದ ಹಣ ತುಂಬಿದವರು ವಾಪಸ್ಸು ಕೊಡಿಸುವಂತೆ ದುಂಬಾಲು ಬಿದ್ದಿದ್ದರು.
ಆದರೆ, ಅಗ್ರಿಗೋಲ್ಡ್ ಪ್ರಕರಣ ನ್ಯಾಯಾಲಯದಲ್ಲಿ ತನಿಖೆ ಹಂತದಲ್ಲಿರುವ ಕಾರಣ ಹಣ ಮರಳಿಸುವುದು ಅಸಾಧ್ಯವಾಗಿತ್ತು. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಸರಕಾರ ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆಗೆ ಮೂಗುದಾರ ಹಾಕಿದ್ದು, ಅಧಿಕಾರಿಗಳು ನಂಬಿಕಾರ್ಹ ಅಧಿಕೃತ ಕರ್ತವ್ಯ ನಿರ್ವಹಿಸುವುದನ್ನು ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆಗಳ ಮೂಲಕ ಅನಪೇಕ್ಷಿತ ಹೇಳಿಕೆ ನೀಡುವುದನ್ನು ನಿಷೇಧಿಸಿ ಮುಖ್ಯ ಕಾರ್ಯದರ್ಶಿ ರವಿಕುಮಾರ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ನೌಕರ, ಆಕಾಶವಾಣಿ, ದೂರದರ್ಶನ, ಸಾರ್ವಜನಿಕ ಮಾಧ್ಯಮಗಳಲ್ಲಿ ವಾಸ್ತವ ಹೇಳಿಕೆ ಅಥವಾ ಅಭಿಪ್ರಾಯ ನೀಡುವುದಾಗಲಿ, ಅನಾಮಧೇಯವಾಗಿ, ಗುಪ್ತನಾಮದಲ್ಲಿ ಬೇರೊಬ್ಬರ ಹೆಸರಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಾರದು.
ಅಧಿಕೃತ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದೇ ಸರ್ಕಾರದ ನೀತಿ, ನಿರ್ಧಾರದ ಬಗ್ಗೆ ಪ್ರತಿಕೂಲ ಟೀಕೆ, ಮಾನಹಾನಿ, ನಿಂದನೆ ಸೇರಿದಂತೆ ಇತರ ವಿಷಯಗಳ ಸಮರ್ಥನೆಗಾಗಿ ನ್ಯಾಯಾಲಯ ಅಥವಾ ಪತ್ರಿಕೆಗಳ ಮೊರೆ ಹೋಗುವಂತಿಲ್ಲ.
ಅಗತ್ಯವಿದ್ದಲ್ಲಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಅಥವಾ ಇತರ ಅಧಿಕೃತ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಲು ವೈಯಕ್ತಿಕ ಸಾಮಾಜಿಕ ಖಾತೆಗಳನ್ನು ಬಳಸದೇ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಸರ್ಕಾರ ಅಥವಾ ಇಲಾಖೆಯ ಅಧಿಕೃತ ಖಾತೆಗಳನ್ನು ಬಳಸಬೇಕು.
ಇಲಾಖೆಯ ಅಥವಾ ಸರ್ಕಾರದ ಸಾಧನೆಗಳನ್ನು ಅಧಿಕಾರಿಗಳು ವೈಯಕ್ತಿಕ ಸಾಧನೆ ಎಂಬoತೆ ಬಿಂಬಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಈ ಆದೇಶಕ್ಕೆ ವ್ಯತಿರಿಕ್ತವಾಗಿ ಅಧಿಕಾರಿ, ನೌಕರ ಸರ್ಕಾರದ ಕಾರ್ಯನೀತಿಗೆ ಅನಪೇಕ್ಷಿತ ವೇದಿಕೆಗಳಲ್ಲಿ ಸ್ವಂತ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಿಸ್ಸಿಗೆ ಧಕ್ಕೆ ಉಂಟು ಮಾಡುವ, ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.