ದೇವರ ದರ್ಶನಕ್ಕೆಂದು ಹೋಗಿದ್ದ ಒಂದೇ ಕುಟುಂಬದ ಮೂವರು ಮಲಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬಾದಾಮಿ ತಾಲೂಕಿನ ಶಿವಯೋಗಮಂದಿರದಲ್ಲಿ ಸಂಭವಿಸಿದೆ.
ವಿಶ್ವನಾಥ್ ಮಾವಿನಮರದ (40), ಅತ್ತಿಗೆ(ಸಹೋದರನ ಪತ್ನಿ) ಶ್ರೀದೇವಿ ಮಾವಿನಮರದ (32) ಹಾಗೂ ಶ್ರೀದೇವಿ ಮಗಳು ನಂದಿನಿ ಮಾವಿನಮರದ (12) ಮೃತ ದುರ್ದೈವಿಗಳು.
ಮೂಲತಃ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾದ ಮೃತರು ಸದ್ಯ ಗದಗ ನಗರದ ಹಾಲಕೇರಿ ಮಠದ ಬಳಿ ವಾಸವಾಗಿದ್ದರು ಎನ್ನಲಾಗಿದೆ.
ರವಿವಾರ ಬೆಳಿಗ್ಗೆ 8 ಜನರು ಕುಟುಂಬ ಸಮೇತ ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆದು ಬಳಿಕ ಸಮೀಪದ ಶಿವಯೋಗಮಂದಿರಕ್ಕೆ ತೆರಳಿದ್ದರು.
ಉಪಾಹಾರ ಸೇವಿಸಲು ಶಿವಯೋಗಮಂದಿರ ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದಾಗ ನಂದಿನಿ ಮಾವಿನಮರದ ಕೈ ತೊಳೆಯಲು ನದಿಯತ್ತ ಹೋಗಿದ್ದು, ಈ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಇದನ್ನು ಕಂಡ ತಂದೆ ವಿಶ್ವನಾಥ್, ದೊಡ್ಡಮ್ಮ ಶ್ರೀದೇವಿ ಸಹಾಯಕ್ಕೆ ಧಾವಿಸಿ ನದಿಗೆ ಹಾರಿದ್ದು, ಈಜು ಬಾರದೇ ಮೂವರೂ ನೀರುಪಾಲಾಗಿದ್ದಾರೆ.
ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿ ಶ್ರೀದೇವಿ ಮಾವಿನಮರದ ಹಾಗೂ ವಿಶ್ವನಾಥ ಮಾವಿನಮರದ ಅವರ ಮೃತದೇಹ ಹೊರಕ್ಕೆ ತೆಗೆದಿದ್ದು, ಬಾಲಕಿ ನಂದಿನಿ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.
ನುರಿತ ಈಜುಗಾರರ ಜೊತೆಗೆ ಅಗ್ನಿಶಾಮಕದಳದ ಸಿಬ್ಬಂದಿ ನಂದಿನಿ ಮೃತದೇಹ ಪತ್ತೆಗೆ ಶೋಧಕಾರ್ಯ ಮುಂದುವರೆಸಿದ್ದಾರೆ.
ಕನ್ನಡಿಗರು ಅತ್ಯಂತ ಕಾತುರದಿಂದ ಕಾಯುತ್ತಿದ್ದ ಕೆಜಿಎಫ್-2 ಸಿನಿಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ.
ಈ ಕುರಿತು ಹೊಸ ಪೋಸ್ಟರ್ ಅಭಿಮಾನಿಗಳ ಜೊತೆ ಟ್ವಿಟರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಾಹಿತಿ ಹಂಚಿಕೊಂಡಿದ್ದು,
2022ರ ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.
ಇಷ್ಟೊತ್ತಿಗಾಗಲೇ ಕೆಜಿಎಫ್-2 ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುತ್ತಲೇ ಇತ್ತು. ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದರು. ಕೊನೆಗೂ ಸಿನಿಪ್ರಿಯರ ಬಹುದಿನದ ಕಾತರಕ್ಕೆ ತೆರೆ ಬಿದ್ದಿದೆ.
ಗಣೇಶೋತ್ಸವ ಅದ್ದೂರಿಯಾಗಿ ಆಚರಿಸುತ್ತೇವೆ. ಬಾಳ ಅಂದ್ರ ನನಗೆ ಗುಂಡು ಹಾಕಬಹುದು, ನಾ ಸತ್ತರೂ ಹೆಸರು ತಗೊಂಡ ಸಾಯಬೇಕು, ತೊಂದರೆ ಮಾಡಬ್ಯಾಡ್ರಿ ಅಂತ ಸಿಎಂಗೂ ಹೇಳಿದ್ದೇನೆ. ಇಂತಹ ಗೊಳ್ಳ ಕಾಯಿದೆಗಳಿಗೆ ನಾವೇನು ಕೇಳಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಹಬ್ಬಕ್ಕೆ ರಿಸ್ಟಿಂಕ್ಷನ್ ಹಾಕಿದ್ದಾರೆ, ಜನ ಇಷ್ಟೇ ಸೇರಬೇಕು, ಗಣಪತಿ ಕೂಡಿಸುವಾಗ ಇಷ್ಟೇ ಜನ ಇರಬೇಕು ಮುಂತಾದ ರೂಲ್ಸ್ ಮಾಡಿದ್ದಾರೆ. ಇದಕ್ಕೆಲ್ಲ ನಾವು ತಲೆ ಕೆಡಿಸಿಕೊಳ್ಳಲ್ಲ. ಎಸ್ ಪಿ ಹಾಗೂ ಡಿಸಿ ಬರೀ ಹಿಂದೂ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವೇನು ಕೇಳಲ್ಲ ಎಂದು ಹೇಳಿದರು.
ಗಣೆಶೋತ್ಸವಕ್ಕೆ 50 ಕಂಡಿಷನ್ ಹಾಕಿದ್ದಾರೆ. ಹತ್ತತ್ತು ಸಾವಿರ ಜನರನ್ನ ಸೇರಿಸಿ ಸಭೆ ಮಾಡುತ್ತಿದ್ದೀರಾ, ಗಣಪತಿ ಬಂದಾಗ ಮಾತ್ರ ಕೊರೊನಾ ನೆನಪಾಗತ್ತಾ. ಈ ಕುರಿತು ಸಿಎಂ ಅವರೊಂದಿಗೆ ಮಾತನಾಡಿರುವೆ. ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಾರೂ ಅಂಜಬೇಡಿ ಎಂದು ಅಭಯ ನೀಡಿದರು.
ಈಗ ಪ್ರತಿದಿನ ಜಿಲ್ಲೆಯಲ್ಲಿ ಒಂದೇ ಪಾಸಿಟಿವ್ ಬರುತ್ತಿದೆ. ಆದರೂ ವೀಕೆಂಡ್ ಕರ್ಪೂ ಹಾಕಿದ್ದಾರೆ. ಕೊರೊನಾ ಏನು ಶನಿವಾರ, ರವಿವಾರ ಅಷ್ಟೇ ಬರುತ್ತಾ ಎಂದು ಪ್ರಶ್ನಿಸಿದ ಅವರು, ಎಕ್ಸಪರ್ಟ್ ಗಳು ಯಾವ ಆಧರಾದ ಮೇಲೆ ಮಾಹಿತಿ ಕೊಟ್ಟಿದ್ದಾರೊ ನನಗೆ ಗೊತ್ತಿಲ್ಲ, ನಮ್ಮ ಜನ ಮಾಸ್ಕ್ ಹಾಕೊಳ್ಳದೇ ಓಡಾಡುತ್ತಾರೆ. ಏನೂ ಆಗ್ತಿಲ್ಲ ಎಂದರು.
ನಮ್ಮ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು, ವೈದ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲೇ ವಿಜಯಪುರ ನಗರ ವ್ಯಾಕ್ಸಿನೇಷನ್ ನಲ್ಲಿ ನಂಬರ್ ಒನ್ ಇದೆ, ಮೂರನೇ ಅಲೆಯ ಪರಿಣಾಮ ಜಿಲ್ಲೆಯ ಮೇಲೆ ಬೀರಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಕೊಪ್ಪಳದಲ್ಲಿ ನಾಟಕಗಳ ಕಲರವ ಹೊಸತೇನಲ್ಲ. ಆಗಾಗ ಕಂಪನಿ ನಾಟಕಗಳು ಬಿಡಾರ ಹೂಡುತ್ತಾ ಬಂದಿವೆ. ಈಗ ಬಂದಿರೊ ಕೆಬಿಆರ್ ನಾಟಕ ಕಂಪನಿ ಕೊಪ್ಪಳದ ಮಟ್ಟಿಗೆ ಹೊಸ ಪ್ರಯೋಗ ಮಾಡುತ್ತಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಇದುವರೆಗೂ ಕಂಪನಿಯಲ್ಲಿ ಆಸನಗಳಿಗೆ ನಂಬರ್ ವ್ಯವಸ್ಥೆ ಇರಲಿಲ್ಲ. ಈ ಕಂಪನಿ ಸೀಟುಗಳಿಗೆ ನಂಬರ್ ನೀಡಿರುವುದರಿಂದ, ಅಂತರ ಕಾಪಾಡಿರುವುದರಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಹಿಳಾ ಪ್ರೇಕ್ಷಕರಿಗೆ ಸಂತಸದ ಸಂಗತಿ. ಜೊತೆಗೆ ನಾಟಕದ ದೃಶ್ಯಗಳಲ್ಲಿ ಹೈಟೆಕ್ ಸ್ಪರ್ಶ ನೀಡಿದ್ದು ಎಲ್ಲ ವರ್ಗದವರಿಗೂ ಮುದ ನೀಡುತ್ತದೆ. ಪಾತ್ರಧಾರಿಗಳಿಗೆಲ್ಲ ಕಾಲರ್ ಮೈಕ್ ನೀಡಿದ್ದು ಹೊಸ ಅಲೆಯ ನಾಟಕಗಳ ಜೊತೆಗಿನ ಕಂಪನಿ ನಾಟಕಗಳ ಸ್ಪರ್ಧೆ ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಕಂಡಿದೆ.
over to review…
“ನಿಮಗೆ ಸಂಪತ್ತು ಮುಖ್ಯ, ನನಗೆ ಸಂಬಂಧ ಮುಖ್ಯ” ಎನ್ನುವ ಕ್ಲೈಮ್ಯಾಕ್ಸ್ ಸೀನ್ನ ಡೈಲಾಗ್ ಇಡೀ ನಾಟಕ್ ತಿರುಳನ್ನು ಒತ್ತಿ ಹೇಳುತ್ತದೆ. ನಾಟಕದ ಟೈಟಲ್ “ಹೆಂಡತಿನ ಕೇಳಿ ಮದುವೆಯಾಗು”- ಹೆಸರನ್ನು ಕೇಳಿದಾಕ್ಷಣ ಇದೊಂದು ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಅನಿಸುತ್ತದೆ. ಆದರೆ ಈ ನಾಟಕದಲ್ಲಿ ಕಾಮಿಡಿಯ ಜೊತೆಗೆ ಕೌಟುಂಬಿಕ ಸಂಗತಿಗಳಿಗೆ ಹೆಚ್ಚಿನ ಆದ್ಯತೆ.
3 ಗಂಟೆ 15 ನಿಮಿಷಗಳ ಇಡೀ ನಾಟಕದಲ್ಲಿ ಸುಮಾರು 16 ದೃಶ್ಯಗಳಿವೆ. ಕನಸಿನ ಮೂಲಕ ಆರಂಭಗೊಳ್ಳುವ ಮೊದಲ ದೃಶ್ಯವೇ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಜೊತೆಗೆ ಹೊಸ ಅನುಭವ ನೀಡುತ್ತದೆ.
ದುನಿಯಾದಲ್ಲಿ ದುಡ್ಡೇ ಮುಖ್ಯ ಎನ್ನುವ ಹೀರೋ ಕಮ್ ವಿಲನ್ ಅಮೃತ್ ಪರಿವರ್ತನೆಗೊಳ್ಳುವ ಚಿಂದೋಡಿ ವಿಜಯ್ ಅವರ ಕಥೆಗೆ ಪೂರಕವಾಗಿ ಶಿವಶಂಕರ್ ಬ್ಯಾಳಿ ಸಂಭಾಷಣೆ ಜೋಡಿಸಿದ್ದಾರೆ. ವರದಕ್ಷಿಣೆ ಹೆಚ್ಚು ಸಿಗುವ ಹುಡುಗಿಯನ್ನೇ ಮದುವೆ ಆಗಬೇಕೆನ್ನುವ ಹಂಬಲದ ಯುವಕನಿಗೆ ಲಕ್ಷಾಧಿಪತಿಯ ಮಗಳು ಐಸಿರಿ ಜೊತೆಗೆ ಮದುವೆಯಾಗುತ್ತೆ. ಎಲ್ಲವೂ ಸರಿ ಇರುವಾಗ ಕೋಟ್ಯಧೀಶ್ವರಿ ಯುವತಿಗೆ ವರ ಬೇಕೆನ್ನುವ ವಿಚಾರ ತಿಳಿದ ಧನದಾಹಿ ಯುವಕ ಹೆಂಡತಿಗೆ ವಿಚ್ಛೇಧನ ಕೊಡಲು ಸಿದ್ಧನಾಗ್ತಾನೆ. ಕೋರ್ಟ್ನಲ್ಲೂ ಈ ಬಗ್ಗೆ ವಿಚಾರಣೆ ನಡೆಯುತ್ತೆ. ಕೊನೆಗೆ ಅಮೃತ್-ಐಸಿರಿ ಮದುವೆಗೆ ವಿಚ್ಛೇದನ ಸಿಗುತ್ತಾ? ವಿಚ್ಛೇದನಕ್ಕೆ ಒಪ್ಪುವ ಐಸಿರಿಯ ಕರಾರುಗಳೇನು? ಎಂಬುದನ್ನು ನಾಟಕ ನೋಡಿಯೇ ಅನುಭವಿಸಬೇಕು.
ಅಬ್ದುಲ್-ಸುಂದ್ರಿ-ಗಡಿಗೆಪ್ಪ ಪಾತ್ರಧಾರಿಗಳ ಕಾಮಿಡಿ ಟ್ರ್ಯಾಕ್ ಪ್ರೇಕ್ಷಕರನ್ನು ಮತ್ತೊಂದು ಮಗ್ಗುಲಿಗೆ ಒಯ್ಯುತ್ತದೆ.
ಇಂಗ್ಲಿಷ್ ಸಂಭಾಷಣೆ ಹೇಳುವಾಗ ದೃಶ್ಯವೊಂದರಲ್ಲಿ ಅವಳನ್ನು ಮುಟ್ಟಬೇಡ ಎನ್ನಲು don’t touch me ಎಂದು ನಾಯಕಿ ಹೇಳ್ತಾಳೆ. ಅದು don’t touch her ಎಂದಾಗಬೇಕಿತ್ತು. ಜೊತೆಗೆ ಕಾಮಿಡಿ ಸೀನ್ಗಳಲ್ಲಿ ಒಂದೆರಡು ಕಡೆ ತಂಬಿಗೆ ಜೋಕ್ಸ್ ಒಂಚೂರು ಮುಜುಗರ ಅನ್ಸುತ್ತೆ. ಆದರೆ ತೀರಾ ಅಸಹ್ಯ ಏನಿಲ್ಲ.
ಇದು ರಾದ್ಧಾಂತ ಅಲ್ಲ, ಸಿದ್ಧಾಂತ, ಗಂಡ ಅಲ್ಲ, ಮಗು ಅಂತ ಭಾವಸ್ತಿನಿ, ಸಾವಿಗೂ ಮಂತ್ರ ಇದೆ, ವಿಚ್ಛೇದನಕ್ಕಿಲ್ಲ, ಜಗತ್ತು ಜಾಗೃತವಾಗಲಿ ಅಂತಾನೇ ಈ ಜಾಹೀರಾತು ಎಂಬಂಥ ಗಟ್ಟಿ ಮಾತುಗಳು ನಾಟಕದ ತೂಕ ಹೆಚ್ಚಿಸಿವೆ. ಒಟ್ಟಾರೆ ಇಡೀ ಫ್ಯಾಮಿಲಿ ಮುಜುಗರವಿಲ್ಲದೇ ನಾಟಕವನ್ನು ಸವಿಯಬಹುದು.
ಟಾಯರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಡಂಬಳ ಬಳಿ ನಡೆದಿದೆ.
ಗದಗ-ಮುಂಡರಗಿ ರಸ್ತೆಯ ಡಂಬಳ ಕ್ರಾಸ್ ನಲ್ಲಿ ಈ ದುರ್ಘಟನೆ ನಡೆದಿದೆ.
ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ಗಂಗಾಧರಯ್ಯ ರುದ್ರಯ್ಯ ಗದಗಿನಮಠ (30) ಮೃತಪಟ್ಟ ದುರ್ದೈವಿ.
ಮುಂಡರಗಿಯಿಂದ ಗದಗ ಕಡೆ ಹೊರಟಿದ್ದ ಬೈಕ್ ಗೆ ಗದಗನಿಂದ ಮುಂಡರಗಿ ಕಡೆ ಹೊರಟಿದ್ದ ಕಾರ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್ ಗೆ ಡಿಕ್ಕಿ ಹೊಡೆದ ಕಾರು ಎರಡು ಬಾರಿ ಪಲ್ಟಿಯಾಗಿದೆ ಎನ್ನಲಾಗಿದೆ.
ಘಟನೆಯ ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಹೊರವಲಯದ ಮಾಹಾಕಾಳಿ ಪಡ್ಪು ಎಂಬಲ್ಲಿ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಮಹಿಳೆಯರಿಬ್ಬರು ಮೃತಪಟ್ಟಿದ್ದಾರೆ.
ಮೃತ ಮಹಿಳೆಯರು ಬೀಡಿ ಬ್ರಾಂಚ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಮುಂಜಾನೆ ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಾಗ ರೈಲು ಬರುತ್ತಿರುವುದು ಗೊತ್ತಾಗದೆ ಹಳಿ ದಾಟುವಾಗ, ಏಕಾಏಕಿ ರೈಲು ಬಂದು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಳ್ಳುವ ಸುಳಿವು ನೀಡಿದ ಶಾಸಕ ಸಾ.ರಾ. ಮಹೇಶ್
ವಿಜಯಸಾಕ್ಷಿ ಸುದ್ದಿ, ಮೈಸೂರು
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್- ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಭೇಟಿ ಬಳಿಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುರಿದುದ್ದು, ಬಿಜೆಪಿಗೆ ಮೇಯರ್ ಸ್ಥಾನ ಒಲಿಯುವ ಸಾಧ್ಯತೆಗಳು ಇದೆ.
ಮೇಯರ್ ಸ್ಥಾನದ ವಿಚಾರವಾಗಿ ಕೋರ್ಟ್ ಗೆ ಹೋಗುವ ತನಕ ಮಾತ್ರ ಕಾಂಗ್ರೆಸ್ ಜೊತೆಗೆ ಮೈತ್ರಿ ಇತ್ತು. ಆನಂತರ ನಾವು ಅವರ ಜೊತೆಗಿಲ್ಲ. ಅವರೊಂದಿಗೆ ಮೈತ್ರಿ ಆಗ್ತೇವೆ ಎಂದು ಎಲ್ಲೂ ಹೇಳಿಲ್ಲ.
ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿದರೂ ಆಶ್ಚರ್ಯವಿಲ್ಲ. ಹತ್ತು ವರ್ಷ ಮೇಯರ್ ಸ್ಥಾನದಲ್ಲಿ ನಾವೇ ಇದ್ದೆವು ಎಂದು ಸಚಿವ ಸೋಮಶೇಖರ ಭೇಟಿಯ ಬಳಿಕ ಮೈಸೂರಿನಲ್ಲಿ ಶಾಸಕ ಸಾ.ರಾ.ಮಹೇಶ ಹೇಳಿದ್ದಾರೆ.
ಜೆಡಿಎಸ್ ಸಹಕಾರ ಕೋರಿದ ಸಹಕಾರ ಸಚಿವ..!
ನಿನ್ನೆ ತಡರಾತ್ರಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಕಚೇರಿಗೆ ಬಿಜೆಪಿ ಸಚಿವರ ನಿಯೋಗ ಭೇಟಿ ನೀಡಿ ಮಾತುಕತೆ ನಡೆಸಿತು. ಮೇಯರ್ ಸ್ಥಾನಕ್ಕೆ ಸಹಕಾರ ನೀಡುವಂತೆ ಸಚಿವರ ನಿಯೋಗ ಮನವಿ ಮಾಡಿತು.
ಸಚಿವರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ನಗರಾಧ್ಯಕ್ಷ ಶ್ರೀವತ್ಸ ಸಾಥ್ ನೀಡಿದರು.
ಸಾ.ರಾ. ಮಹೇಶ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಚ್.ಟಿ.ಸೋಮಶೇಖರ, ಸದ್ಯ ಸೌಹಾರ್ದಯುತವಾಗಿ ಶಾಸಕ ಸಾ.ರಾ ಮಹೇಶ್ ಅವರನ್ನ ಭೇಟಿ ಮಾಡಿದ್ದೇವೆ.
ಪಾಲಿಕೆಯಲ್ಲಿ ಬಿಜೆಪಿ ಬೆಂಬಲಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ಅಭಿಪ್ರಾಯ ತಿಳಿಸಲಿದ್ದಾರೆ. ಅವರು ಸಹ ನಮ್ಮಂತೆಯೇ ಸದಸ್ಯರ ಅಭಿಪ್ರಾಯ ಸಂಗ್ರಹಿಸಬೇಕು. ಬಳಿಕ ಅವರ ಪಕ್ಷದ ಹೈಕಮಾಂಡ್ ಬಳಿ ಚರ್ಚಿಸಬೇಕು.
ಅವರೊಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲ ಪ್ರಕ್ರಿಯೆಗಳು ನಡೆಯಬೇಕು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು-ಜೆಡಿಎಸ್ ರಾಜ್ಯಾಧ್ಯಕ್ಷರು ಮಾತುಕತೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಿನೆಮಾ ಶೂಟಿಂಗ್ಗೆ ಬಳಸುತ್ತಿದ್ದ ವಾಹನದ ಚಾಲಕನಿಗೆ ಪೊಲೀಸರ ಎಚ್ಚರಿಕೆ
ವಿಜಯಸಾಕ್ಷಿ ಸುದ್ದಿ, ಗದಗ
ನಗರದಲ್ಲಿ ನಕಲಿ ಪೊಲೀಸ್ ವಾಹನ ಓಡಾಟದಿಂದ ನಗರದ ಜನರು ಗೊಂದಲಕ್ಕೀಡಾಗಿದ ಘಟನೆ ನಡೆಯಿತು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಯೂಸುಫ್ ಡಂಬಳ, ಪೊಲೀಸ್ ನಾಮಫಲಕ, ಎರಡೆರಡು ನಂಬರ್ ಇರುವುದನ್ನು ಗಮನಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಇವರಿಗೆ ಕ್ರಾಂತಿ ಸೇನಾ ಸಂಘಟನೆಯ ಸದಸ್ಯರು ಸಾಥ್ ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು.
ಬಳಿಕ ಸಿನಿಮಾ ಶೂಟಿಂಗ್ಗೆ ಬಳಸುತ್ತಿದ್ದ ವಾಹನ ಎಂದು ತಿಳಿದುಬಂದ ಕಾರಣ ಚಾಲಕನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ `ಕ್ಷೇತ್ರಪತಿ’ ಸಿನಿಮಾ ಶೂಟಿಂಗ್ ನಡೆದಿದ್ದು, ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬೊಲೆರೋ ವಾಹನ ಬಳಸಲಾಗಿತ್ತು. ವಾಹನದ ಹಿಂದೆ ಅಸಲಿ ನಂಬರ್ ಪ್ಲೇಟ್, ಮುಂಭಾಗ ನಕಲಿ ನಂಬರ್ ಪ್ಲೇಟ್ ಬಳಸಿ ಪೊಲೀಸ್ ಎಂದು ಬರೆದಿದ್ದು ಕಂಡು ಕೆಲಕಾಲ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದರು.
ಬಳ್ಳಾರಿ ಪ್ರವೇಶಕ್ಕೆ ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಶುಕ್ರವಾರ ಬಳ್ಳಾರಿಗೆ ಧಾವಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ತಮ್ಮ ನಿವಾಸದಲ್ಲಿ ಭರ್ಜರಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.
ಪತ್ನಿ ಅರುಣಾ ಲಕ್ಷ್ಮಿ, ಪುತ್ರ ಕಿರೀಟಿ ಹಾಗೂ ಪುತ್ರಿ ಬ್ರಹ್ಮಿಣಿ ಜೊತೆಗೆ ವರಮಹಾಲಕ್ಷ್ಮಿ ಪೂಜೆಯಲ್ಲಿ ಖುಷಿಯಿಂದ ಭಾಗಿಯಾಗಿದ್ದರು. ಬೆಳಗ್ಗೆ ಬಳ್ಳಾರಿಯ ನಿವಾಸಕ್ಕೆ ಜಿ. ಜನಾರ್ದನ ರೆಡ್ಡಿ ಆಗಮಿಸಿದರು.
ಸಹೋದರನ ಆಗಮನದ ಬಗ್ಗೆ ಸಹೋದರ ಸೋಮಶೇಖರ ರೆಡ್ಡಿ ಅವರೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಬಳ್ಳಾರಿ ಎಸ್ಪಿ ಎಸ್.ಪಿ. ಸೈದುಲ್ಲಾ ಅಡಾವತ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ನಗರದ ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದ ಎದುರಿಗೆ ಇರುವ ಸರ್ವೀಸ್ ಸೆಂಟರ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾದ ಘಟನೆ ಜರುಗಿದ.
ಹಿರೇಮಠ ಸೇಲ್ಸ್ ಆಂಡ್ ಸರ್ವೀಸ್ ಸೆಂಟರ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಗುರು ಹಿರೇಮಠ ಎಂಬುವವರಿಗೆ ಸೇರಿದ ಈ ಸರ್ವೀಸ್ ಸೆಂಟರ್ನಲ್ಲಿ ಫ್ರಿಜ್, ಏರ್ ಕಂಡೀಷನರ್, ವಾಷಿಂಗ್ ಮಷೀನ್ ಸೇರಿ ಹತ್ತು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳಿದ್ದವು.
ಬೆಂಕಿ ಅವಘಡದ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸ ನಡೆಸಿ ಬೆಂಕಿ ನಂದಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.