Home Blog Page 3443

ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ ವಹಿಸಿದ ಸಿಎಂ

  • ನಾಳೆಯಿಂದಲೇ ಜಿಲ್ಲೆಗಳಿಗೆ ತೆರಳಿ ಕಾರ್ಯನಿರ್ವಹಿಸಲು ಸೂಚನೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಚಿವ ಸಂಪುಟ ರಚನೆ ಬೆನ್ನಲ್ಲೇ ಕೋವಿಡ್ ಹಾಗೂ ನೆರೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ನೂತನ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ಹೊರಿಸಿ ಆದೇಶ ಹೊರಡಿಸಿಲಾಗಿದೆ.

ಕೋವಿಡ್ 3ನೇ ಅಲೆ ತಡೆಯಲು ಹಾಗೂ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿರುವಾಗ ಸರ್ಕಾರ ಮಾತ್ರ ಸಿಎಂ ಬದಲಾವಣೆ, ಸಚಿವ ಸಂಪುಟ ರಚನೆಯಲ್ಲಿ ಮುಳುಗಿದೆ ಎಂಬ ವಿಪಕ್ಷಗಳ ಆರೋಪಿಸಿದ್ದವು.
ಹೀಗಾಗಿ ಈ ಆರೋಪ ಹೋಗಲಾಡಿಸಲು ಸಿಎಂ ನೂತನ ಸಚಿವರಿಗೆ ಜವಾಬ್ದಾರಿ ವಹಿಸಿ ನಾಳೆಯಿಂದಲೇ ಆಯಾ ಜಿಲ್ಲೆಗಳಿಗೆ ತೆರಳಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದಾರೆ.

ಆದರೆ ಇದು ತಾತ್ಕಾಲಿಕ ಜವಾಬ್ದಾರಿ ಉಸ್ತುವಾರಿ ಹಂಚಿಕೆಯಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.

ನೂತನ ಸಚಿವರಿಗೆ ಯಾವ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
 
ಗೋವಿಂದ ಕಾರಜೋಳ- ಬೆಳಗಾವಿ
ಕೆ.ಎಸ್. ಈಶ್ವರಪ್ಪ -ಶಿವಮೊಗ್ಗ
ಆರ್.ಅಶೋಕ್ – ಬೆಂಗಳೂರು ನಗರ
ಡಾ. ಅಶ್ವಥ್ ನಾರಾಯಣ – ರಾಮನಗರ
ಬಿ.ಶ್ರೀರಾಮುಲು – ಚಿತ್ರದುರ್ಗ
ವಿ. ಸೋಮಣ್ಣ – ರಾಯಚೂರು
ಜೆ. ಸಿ. ಮಾಧುಸ್ವಾಮಿ -ತುಮಕೂರು
ಸಿ.ಸಿ. ಪಾಟೀಲ್ -ಗದಗ
ಪ್ರಭು ಚವಾಣ – ಬೀದರ್
ಆನಂದ್ ಸಿಂಗ್ – ಬಳ್ಳಾರಿ, ವಿಜಯನಗರ
ಕೆ. ಗೋಪಾಲಯ್ಯ – ಹಾಸನ
ಬೈರತಿ ಬಸವರಾಜ -ದಾವಣಗೆರೆ
ಎಸ್.ಟಿ. ಸೋಮಶೇಖರ – ಮೈಸೂರು-ಚಾಮರಾಜನಗರ

ಬಿ.ಸಿ. ಪಾಟೀಲ್ -ಹಾವೇರಿ
ಕೆ.ಸುಧಾಕರ್- ಚಿಕ್ಕಬಳ್ಳಾಪುರ
ಕೆ.ಸಿ. ನಾರಾಯಣಗೌಡ- ಮಂಡ್ಯ
ಶಿವರಾಮ ಹೆಬ್ಬಾರ್-ಉತ್ತರ ಕನ್ನಡ
ಉಮೇಶ್ ಕತ್ತಿ -ಬಾಗಲಕೋಟೆ
ಎಸ್.ಅಂಗಾರ-ದಕ್ಷಿಣ ಕನ್ನಡ
ಮುರುಗೇಶ್ ನಿರಾಣಿ- ಕಲಬುರ್ಗಿ
ಎಂಟಿಬಿ ನಾಗರಾಜ- ಬೆಂಗಳೂರು ಗ್ರಾಮಾಂತರ

ಕೋಟ ಶ್ರೀನಿವಾಸ ಪೂಜಾರಿ- ಕೊಡಗು
ಶಶಿಕಲಾ ಜೊಲ್ಲೆ-ವಿಜಯಪುರ
ವಿ.ಸುನಿಲ್ ಕುಮಾರ್-ಉಡುಪಿ
ಹಾಲಪ್ಪ ಆಚಾರ್-ಕೊಪ್ಪಳ
ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
ಶಂಕರ್ ಪಾಟೀಲ್ ಮುನೇನಕೊಪ್ಪ-ಧಾರವಾಡ
ಬಿ.ಸಿ. ನಾಗೇಶ್ -ಯಾದಗಿರಿ
ಮುನಿರತ್ನ-ಕೋಲಾರ

29 ಸಚಿವರ ಪ್ರಮಾಣ ವಚನ

  • ಈ ಬಾರಿ ಡಿಸಿಎಂ ಹುದ್ದೆ ಇಲ್ಲ
  • ವಿಜಯೇಂದ್ರಗಿಲ್ಲ ಅವಕಾಶ, ಸುರೇಶಕುಮಾರ, ಅರವಿಂದ ಲಿಂಬಾವಳಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಕೋಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಹುನಿರೀಕ್ಷೆಯಲ್ಲಿದ್ದ ನೂತನ ಸಚಿವ ಸಂಪುಟ ಘೋಷಣೆಯಾಗಿದ್ದು, ಒಟ್ಟು 29 ಜನರು ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 8 ಜನ ಲಿಂಗಾಯತರು, 3 ಜನ ದಲಿತರು, 7 ಜನ ಒಬಿಸಿ, ಒಬ್ಬರು ಎಸ್ಟಿ, ಒಬ್ಬರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.

ಯಡಿಯೂರಪ್ಪ ಸಂಪುಟದಲ್ಲಿದ್ದ 23 ಸಚಿವರು ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹಿರಿಯ ಮುಖಂಡರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸುರೇಶಕುಮಾರ್, ಅರವಿಂದ ಲಿಂಬಾವಳಿಗೆ ಕೋಕ್ ನೀಡಲಾಗಿದ್ದು,
ಹೊಸ ಮುಖಗಳಾದ ನವಲಗುಂದ ಶಾಸಕ ಶಂಕರಗೌಡ ಮುನೇನಕೊಪ್ಪ, ಎಸ್‌. ಅಂಗಾರ, ಅರಗ ಜ್ಞಾನೇಂದ್ರ, ಆಚಾರ, ಸೇರಿ ಆರು ಜನ ಹೊಸಬರಿಗೆ ಅವಕಾಶ ನೀಡಲಾಗಿದೆ.

ಮೂವರು ದಲಿತ, ಒಂದು ಎಸ್ಟಿ, ಎಂಟು ಜನ ಲಿಂಗಾಯತ, ಏಳು ಓಬಿಸಿ ಒಬ್ಬರು ಮಹಿಳೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಟೆನ್ಶನ್…ಟೆನ್ಶನ್…ಟೆನ್ಶನ್; ದೂರವಾಣಿ ಕರೆಗಾಗಿ ಕಾದು ಕುಳಿತ ಶಾಸಕರು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸುದ್ದಿ ಬಿಜೆಪಿ ವರಿಷ್ಠರಿಂದ ಬರಲಿದ್ದು, ದೂರವಾಣಿ ಕರೆಗಾಗಿ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ.
ಸಚಿವ ಸ್ಥಾನ ನಿರೀಕ್ಷೆ ಹೆಚ್ಚಾಗಿರುವ ಬಹುತೇಕ ಶಾಸಕರು ಎರಡು ದಿನಗಳಿಂದ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು, ಫೋನ್ ಕಾಲ್ ಗಾಗಿ ಕಾತರರಾಗಿದ್ದಾರೆ.

ಕೆ.ಎಸ್. ಈಶ್ವರಪ್ಪ, ನಿರಾಣಿ, ಅರವಿಂದ ಲಿಂಬಾವಳಿ, ಪೂರ್ಣಿಮಾ ಶ್ರೀನಿವಾಸ, ಹಾಲಪ್ಪ ಆಚಾರ, ಸುನಿಲಕುಮಾರ್, ಶ್ರೀರಾಮುಲು, ಮುನಿರತ್ನ, ಆನಂದ ಸಿಂಗ, ಎಸ್. ಅಂಗಾರ, ಗೋಪಾಲಯ್ಯ, ಗೋವಿಂದ ಕಾರಜೋಳ, ಉಮೇಶ ಕತ್ತಿ, ಆರ್.ಅಶೋಕ, ಡಾ.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಸೇರಿ 28 ಶಾಸಕರಿಗೆ ಸಿಎಂ ಕಚೇರಿಯಿಂದ ಕರೆ ಬಂದಿದೆ ಎಂದು ಹೇಳಲಾಗುತ್ತದೆ.

ನಿನ್ನೆ ರಾತ್ರಿಯಿಂದಲೇ ಆಕಾಂಕ್ಷಿಗಳು ಪಟ್ಟಿಯಲ್ಲಿ ತಮ್ಮ ಹೆಸರಿದೆಯಾ ? ಎಂದು ತಿಳಿದುಕೊಳ್ಳಲು‌ ಎಲ್ಲ ಮೂಲಗಳಿಂದ ಕೆಲ ಶಾಸಕರು ತಡಕಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಕರೆ ಮಾಡಿ ನಿಮಗೇನಾದರೂ ಶುಭ ಸಮಾಚಾರ ಬಂತಾ ಎಂದು ಪರಸ್ಪರ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ‌. ಒಟ್ಟಾರೆ ಸಂಪುಟ ವಿಸ್ತರಣೆ, ಕ್ರಿಕೆಟ್ ನ ಕೊನೆಯ ಓವರ್ ಕ್ಲೈಮಾಕ್ಸ್ ರೀತಿಯಲ್ಲಿ ತುದಿಗಾಲ ಮೇಲೆ ನಿಂತಿದ್ದಾರೆ.

ಸಚಿವ ಸ್ಥಾನ ಸಿಗದಿದ್ದರೆ ಡೆಪ್ಯೂಟಿ‌ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ; ಶಾಸಕ ಆನಂದ ಮಾಮನಿ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದ್ದು, ಈ ಮಧ್ಯೆ ಬೆಳಗಾವಿಯಿಂದ ಬಂಡಾಯದ ಧ್ವನಿ ಕೇಳಿಬಂದಿದೆ.

ಮೂರು ಬಾರಿ ಶಾಸಕರಾಗಿರುವ ಸವದತ್ತಿ- ಯಲ್ಲಮ್ಮ ಕ್ಷೇತ್ರದ ಶಾಸಕ, ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ, ಈವರೆಗೆ ಫೋನ್ ಕರೆ ಬಾರದ ಕಾರಣ ಸ್ಥಾನ ಸಿಗೋದಿಲ್ಲ ಎಂಬುದು ಖಾತ್ರಿಯಾಗಿದ್ದು, ತೀವ್ರ ಅಸಮಾಧಾನಗೊಂಡಿದ್ದಾರೆ.

ಈವರೆಗೂ ನನಗೆ ಕಾಲ್ ಬಂದಿಲ್ಲ‌. ಈ ಕುರಿತು ಬಿ.ಎಸ್. ವೈ ಜೊತೆ ಮಾತನಾಡುವೆ, ಸಚಿವ ಸ್ಥಾನ ಸಿಗದಿದ್ದರೆ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಹೇಳಿದ್ದಾರೆ.

ಮಗುವಾದ ಮೇಲೆ ಪತಿ ನಾಪತ್ತೆ; ಗರ್ಭಿಣಿಯಾದ ಮೇಲೆ ಕೈಕೊಟ್ಟ ಪ್ರೇಮಿ! 3 ಲಕ್ಷ ರೂ. ಹಣ ಪಡೆದು ಯುವಕ ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ

ತಾಳಿ ಕಟ್ಟಿದ ಗಂಡ ಒಂದು ಮಗುವಾದ ಮೇಲೆ ನಾಪತ್ತೆಯಾಗಿದ್ದ. ಮಗುವಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬದುಕು ಸಾಗಿಸುತ್ತಿದ್ದ ಈ ಮಹಿಳೆಯ ಬದುಕಿನಲ್ಲಿ ಕಿಲಾಡಿ ಯುವಕನೊಬ್ಬ ಆಶಾಕಿರಣದಂತೆ ಎಂಟ್ರಿ ಕೊಟ್ಟಿದ್ದ. ನೀನೇ ಚಿನ್ನ, ರನ್ನ ಅಂತ ಬಲೆಗೆ ಹಾಕಿಕೊಂಡು, ಆಕೆ ಗರ್ಭಿಣಿ ಆಗುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ!

ರೋಣ ನಿವಾಸಿಯಾಗಿರುವ ಈ ಮಹಿಳೆ ನಂಬಿಕೆ ದ್ರೋಹಕ್ಕೆ ಒಳಗಾಗಿದ್ದು, ಈಗ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದಾಳೆ. ರೋಣ ತಾಲೂಕಿನ ಮೇಲ್ಮಠ ಗ್ರಾಮದ ನಿವಾಸಿ ಮಹಾಂತೇಶ ರಟ್ಟಿಹಳ್ಳಿ ಎಂಬಾತ ಮೋಸ ಮಾಡಿದ್ದಾನೆ ಎಂದು ಈಕೆ ಆರೋಪಿಸುತ್ತಿದ್ದಾಳೆ.

ಗದಗ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಯುವತಿ, ಆತ ನನ್ನನ್ನು ಪತ್ನಿಯೆಂದು ಸ್ವೀಕಾರ ಮಾಡಲಿ ಎಂದು ಒತ್ತಾಯ ಮಾಡಿದ್ದಾಳೆ. ಮೊದಲನೇ ಗಂಡ ಒಂದು ಮಗುವನ್ನು ಕೈಗೆ ಕೊಟ್ಟು, ಬಿಟ್ಟು ಹೋಗಿದ್ದಾನೆ. ಮಗುವಿನ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿನ ಗಾರ್ಮೆಂಟ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ ಈಕೆಗೆ ಅಲ್ಲಿ ಮಹಾಂತೇಶ ರಟ್ಟಿಹಳ್ಳಿ ಪರಿಚಯವಾಗಿದ್ದಾನೆ. ಈಕೆಯ ಪರಿಸ್ಥಿತಿ ಅರಿತ ಆತ, ಮಗುವಿಗೆ ತಂದೆಯಾಗುತ್ತೇನೆ ಎಂದು ಹೇಳಿ, ಆಕೆಯನ್ನು ಪ್ರೀತಿಸಿದ. ಮದುವೆಯ ಆಮಂತ್ರಣ ಪತ್ರವನ್ನೂ ಸಿದ್ಧಪಡಿಸಿದ್ದ. ಇನ್ನೇನು ಮದುವೆಯಾಗುತ್ತದೆ, ನನ್ನ ಬದುಕೊಂದು ನೆಲೆ ಕಂಡುಕೊಳ್ಳುತ್ತದೆ ಎನ್ನುವಷ್ಟರಲ್ಲಿ ಆತ ಕೈಕೊಟ್ಟಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ರೋಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಪ್ರೀತಿಸುತ್ತಿದ್ದ ಮಹಾಂತೇಶ ತನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ ತನ್ನ ಬಳಿಯಿದ್ದ 3 ಲಕ್ಷ ರೂ.ಗಳನ್ನೂ ಆತನ ಕೈಗಿತ್ತಿದ್ದಳು. ಮಹಾಂತೇಶ ಮನೆಯಲ್ಲಿ ಒಪ್ಪಿಸಿ ಮದುವೆ ಕಾರ್ಡ್ ಪ್ರಿಂಟ್ ಹಾಕಿಸಿದ್ದ. ಆದರೆ. ಮದುವೆಯ ಮುಂಚೆ ಈ ಮಹಿಳೆ ಗರ್ಭಿಣಿಯಾಗಿದ್ದಾಳೆ ಎಂದು ಮಹಾಂತೇಶನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಂತೆ. ಮೇ‌ 31ರಂದು ಫಿಕ್ಸ್ ಮಾಡಿದ್ರು. ಅಷ್ಟರೊಳಗೇ ಮಹಾಂತೇಶ ಎಸ್ಕೇಪ್ ಆಗಿದ್ದಾನೆ.

ಬೆಂಗಳೂರು ಹಾಗೂ ರೋಣದಲ್ಲಿ ಪೊಲೀಸರ ಮೊರೆ ಹೋಗಿದ್ದು, ರೋಣ ಪೊಲೀಸರು ಮಹಾಂತೇಶನನ್ನು ಪತ್ತೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾಳೆ.
ಈಗ ಸಂಘಟನೆಗಳು ಈ ಮಹಿಳೆಯ ಬೆನ್ನಿಗೆ ನಿಂತಿದ್ದು, ಯುವಕನನ್ನು ಪತ್ತೆ ಹಚ್ಚಿ, ಮದುವೆ ಮಾಡಿಸಲು ಮುಂದಾಗಿವೆ.

ನಾನು ಬೆಂಗಳೂರಿನ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿರೋವಾಗ ಮಹಾಂತೇಶ್ ಪರಿಚಯ ಆದ. ಆತನೇ ಬಲವಂತವಾಗಿ ಕೆಟ್ಟದಾಗಿ ನಡೆದುಕೊಂಡ. ಬಳಿಕ ಮದುವೆಯಾಗೋದಾಗಿ ಮಾತು ಕೊಟ್ಟಿದ್ದ. ನಾನೀಗ 6 ತಿಂಗಳು ಗರ್ಭಿಣಿ. ಆದ್ರೆ ಈಗ ನನ್ನ ಮದುವೆ ಆಗೋದಿಲ್ಲ ಅಂತಿದ್ದಾನೆ. ಅವನ ಮನೆಯವರು ಅವನನ್ನ ಬಚ್ಚಿಟ್ಟಿದ್ದಾರೆ. ಆತ ನನಗೆ ಬೇಕು.

ನೊಂದ ಮಹಿಳೆ

ಮಹಾಂತೇಶ್ ತಲೆ ಮರೆಸಿಕೊಂಡಿದ್ದಾನೆ. ಆತನಿಗೆ ರಾಜಕಾರಣಿಗಳ ಕುಮ್ಮಕ್ಕು ಇದೆ. ಮೂರು ಠಾಣೆಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ. ಏನೇ ಆಗಲಿ ಆ ಮಹಿಳೆಗೆ ನ್ಯಾಯ ಸಿಗೋವರೆಗೂ ನಾವು ಹಿಂದೆ ಸರಿಯೋದಿಲ್ಲ. ಮಹಾಂತೇಶ್ ಈಕೆಯನ್ನು ಮದುವೆಯಾಗೋವರೆಗೂ ಬಿಡೋದಿಲ್ಲ.

ರೇಖಾ ಮೋರೆ, ಕರವೇ ಕಾರ್ಯಕರ್ತೆ

ಗುಜರಾತ್‌ಗೆ ನೀಡುವ ಆದ್ಯತೆ ರಾಜ್ಯಕ್ಕಿಲ್ಲ: ಉಗ್ರಪ್ಪ ಆರೋಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಗುಜರಾತ್‌ಗೆ ಕೊಡುವ ಆದ್ಯತೆ ರಾಜ್ಯಕ್ಕೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಜೀವಂತವಾಗಿದೆ ಎಂದು ಕಾಣಿಸುತ್ತಿಲ್ಲ. ಉತ್ತರ ಕನ್ನಡ ಜಿಲ್ಲೆ ನೆರೆ ಸಂತ್ರಸ್ತರಿಗೆ ಸೂರು ವ್ಯವಸ್ಥೆ ಕಲ್ಪಿಸಿಲ್ಲ. ಗುಜರಾತ್‌ ನೆರೆ ಪೀಡಿತರಿಗೆ ಒಂದು ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ. ರಾಜ್ಯಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ‌ ಎಂದು ಆರೋಪಿಸಿದರು.

2019 ರಲ್ಲಿ ಪ್ರವಾಹದಿಂದ 38 ಸಾವಿರ ಕೋಟಿ, 2020 ರಲ್ಲಿ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಆದರೆ, ಕೇಂದ್ರ 1280 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ಸಂಸತ್ ಅಧಿವೇಶನದಲ್ಲಿ‌ ಈ ಬಗ್ಗೆ ಮಾಹಿತಿ ಪಡೆಯುವ ಅವಕಾಶ ಇತ್ತು. ಆದರೆ, ರಾಜ್ಯದ ಸಂಸದರು ಚಕಾರ ಎತ್ತಲಿಲ್ಲ ಎಂದು ಟೀಕಿಸಿದರು.

ಕನಿಷ್ಟ ಕ್ಷೇತ್ರದಲ್ಲೂ ಇಲ್ಲದೆ ಬೆಂಗಳೂರು, ದೆಹಲಿಯಲ್ಲಿ ಕುಳಿತಿದ್ದಾರೆ. ನೆರೆ ನಿರ್ವಹಣೆ ಮಾಡದೆ‌ ಅಧಿಕಾರಕ್ಕಾಗಿ ಸರ್ಕಸ್ ಮಾಡುತ್ತಿದ್ದಾರೆ.
ಕೊರೊನಾ ಮೂರನೇ‌ ಅಲೆ ಪರಿಣಾಮಕಾರಿಯಾಗಿ ಎದುರಿಸಲು ಪೂರ್ವ ಸಿದ್ದತೆ ಮಾಡಿಕೊಂಡಂತೆ ಕಾಣಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸಿಎಂ, ಸಚಿವ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ

ಮುಖ್ಯಮಂತ್ರಿ, ಮಂತ್ರಿ ಸ್ಥಾನ ಸುಖದ ಸುಪ್ಪತ್ತಿಗೆಯಲ್ಲ. ಗುರುತರವಾದ ಮಹತ್ವದ ಜವಾಬ್ದಾರಿ. ಎಸ್.ಆರ್. ಬೊಮ್ಮಾಯಿ ರಾಯಿಸ್ಟ್ ಐಡಿಯಾಲಜಿವುಳ್ಳವರು. ಜನರ ಬದುಕಿಗೆ ಆದ್ಯತೆ ಕೊಡಬೇಕು ಎಂದು ಸಲಹೆ ನೀಡಿದರು.

ಎಸ್.ಆರ್. ಬೊಮ್ಮಾಯಿ ಸರ್ಕಾರ ಬೀಳಿಸಿದ್ಯಾರು?

ಬೊಮ್ಮಾಯಿ ಸರ್ಕಾರ ಬೀಳಲು ಬಿಡಲ್ಲ ಎಂಬ ಹೆಚ್.ಡಿ. ದೇವೆಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ಎಸ್.ಆರ್. ಬೊಮ್ಮಾಯಿ ಸರ್ಕಾರ ಬೀಳೋಕೆ ಕಾರಣ ಯಾರು ಅನ್ನೋದನ್ನ ಮೊದಲು ಹೇಳಲಿ‌ ಎಂದು ವ್ಯಂಗ್ಯವಾಡಿದರು.
ಜೆಡಿಎಸ್‌ಗೆ ಅಸ್ಥಿರತೆಯಿಂದ ಬಿಜೆಪಿ ಪರ ಹೇಳಿಕೆ ಕೊಡುತ್ತಿದೆಯೋ. ಇಲ್ಲವೆ, ಅನಿವಾರ್ಯವಾಗಿ ಬಿಜೆಪಿ ಪರ‌ ಹೇಳಿಕೆ ಕೊಡುತ್ತಿದೆಯೋ ಗೊತ್ತಿಲ್ಲ. ಜಾತ್ಯಾತೀತ ಸಿದ್ದಾಂತವುಳ್ಳವರು ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.

ಶಾಸಕ ಕುಮಟಳ್ಳಿಯನ್ನು ತರಾಟೆಗೆ ತೆಗೆದುಕೊಂಡ ನಿರಾಶ್ರಿತರು!

  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮಕ್ಕೆ ಭೇಡಿ ನೀಡಿದ್ದ ಶಾಸಕ ಕುಮಟಳ್ಳಿ

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಪ್ರವಾಹ ಪೀಡಿತ ಪ್ರದೇಶದ ವೀಕ್ಷಣೆಗೆ ತೆರಳಿದ್ದ ಶಾಸಕ ಮಹೇಶ ಕುಮಟಳ್ಳಿ ಅವರನ್ನು ನಿರಾಶ್ರಿತರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಇಂದು ನಡೆದಿದೆ.

ನದಿ ಇಂಗಳಗಾವ ಗ್ರಾಮ ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿದ್ದರಿಂದ ಶಾಸಕ ಮಹೇಶ ಕುಮಟಳ್ಳಿ ಇಂದು ವೀಕ್ಷಣೆಗೆ ತೆರಳಿದ್ದರು.
ಈ ವೇಳೆ ಗ್ರಾಮಸ್ಥರು ಶಾಸಕರಿಗೆ ಮುತ್ತಿಗೆ ಹಾಕಿ, ಮೊದಲು 2019ರ ಪೂರ್ಣ ಪರಿಹಾರ ನೀಡಿ. ಪ್ರವಾಹ ತಗ್ಗಿದ ಬಳಿಕ ಬಂದು ಮೊಸಳೆ ಕಣ್ಣೀರು ಒರೆಸುವುದನ್ನು ನಿಲ್ಲಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊದಲು 2019ರ ಪರಿಹಾರ ನೀಡಿ ಮುಂದೆ ಹೋಗಿ ಎಂದು ಪಟ್ಟು ಹಿಡಿದಿದ್ದರಿಂದ ಶಾಸಕರು ತೀವ್ರ ಮುಜುಗರಕ್ಕೆ ಒಳಗಾದರು. ಕೃಷ್ಣಾ ತೀರದ ನದಿ ಇಂಗಳಗಾವ ಗ್ರಾಮ 2019 ರಲ್ಲಿ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿ ಹಲವಾರು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು.

ಅರ್ಭಿ ಫಾಲ್ಸ್ ನಲ್ಲಿ ಈಜಲು ಹೋದ ವಿದ್ಯಾರ್ಥಿನಿ ನೀರು ಪಾಲು


ವಿಜಯಸಾಕ್ಷಿ ಸುದ್ದಿ, ಉಡುಪಿ

ಪಾಲ್ಸ್ ನಲ್ಲಿ ಈಜಲು ಹೋಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನೀರುಪಾಲಾದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಭಿ ಫಾಲ್ಸ್ ನಲ್ಲಿ ಇಂದು ನಡೆದಿದೆ.

ಮಂಗಳೂರು ಮೂಲದ ವರ್ಷಿತಾ ಮೃತ ಬಾಲಕಿ. ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವ್ಯಾಸಂಗ ಮಾಡುತ್ತಿದ್ದ ವರ್ಷಿತಾ ವಿದ್ಯಾರ್ಥಿಗಳಿಬ್ಬರ ಜೊತೆ ಪಾಲ್ಸ್ ಗೆ ತೆರಳಿದ್ದಳು. ಈ ವೇಳೆ ಈಜಲೆಂದು ನೀರಿಗೆ ಇಳಿದಿದ್ದಾಗ ಸೆಳೆತಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾಳೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾಯಕಾರಿ ಅರ್ಭಿ ಫಾಲ್ಸ್ ನಿಷೇಧಿತ ಪ್ರದೇಶವಾಗಿದೆ.

ಗಡಿ ಕಾಯೋ ಸೈನಿಕನಿಗೂ ಬಿಡದ ಸೈಬರ್ ಖದೀಮರು; ಲಕ್ಷಾಂತರ ರೂ. ವಂಚಿಸಿ ಮೋಸ

ವಿಜಯಸಾಕ್ಷಿ ಸುದ್ದಿ, ಗದಗ

ವಂಚಕರು ಯಾರನ್ನು ಬೇಕಾದರೂ ಯಾಮಾರಿಸಬಹುದು. ದೇಶದ ಗಡಿ ಕಾಯೋ ಸೈನಿಕನಾದರೂ ಅಷ್ಟೇ, ಜನ ಸಾಮಾನ್ಯರು ಆದರೂ ಅಷ್ಟೇ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಕಣ್ಣಮುಂದಿದೆ.

ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಎಂಬುವವರೇ ಮೋಸಕ್ಕೆ ಒಳಗಾದವರು. ಅದು ಬರೋಬ್ಬರಿ 1ಲಕ್ಷ 70 ಸಾವಿರ ಕಳೆದುಕೊಂಡಿದ್ದಾರೆ.

ಆಗಿದ್ದೆನು?

ಕೆಲಸದ ನಿಮಿತ್ತ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್‌ ಬುಕ್ ಮಾಡಿಸಿದ್ದಾರೆ.

ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ.

ಆಗ ಸಿಕ್ಕ ನಂಬರವೊಂದಕ್ಕೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟವೇರ್ (ಇನ್ನೊಬ್ಬರ ಕಂಪ್ಯೂಟರ್ ನೋಡಲು ಬಳಸುವ ತಂತ್ರಾಂಶ)
ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.

ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ.

ಯೂಸರ್ ನೇಮ್, ಪಾಸ್ ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.

ಹೀಗೆ ಎಸ್ ಬಿ ಆಯ್ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1ಲಕ್ಷ 70 ಸಾವಿರ ಹಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಡ್ರಾ ಆಗಿದೆ. ಇದರಿಂದ ಕಂಗಾಲಾದ ಸೈನಿಕ ಸೀದಾ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.

ಗಡಿ ಕಾಯೋ ಸೈನಿಕನಿಗೂ ಬಿಡದ ಸೈಬರ್ ಖದೀಮರು; ಲಕ್ಷಾಂತರ ರೂ. ವಂಚಿಸಿ ಮೋಸ

ವಿಜಯಸಾಕ್ಷಿ ಸುದ್ದಿ, ಗದಗ

ವಂಚಕರು ಯಾರನ್ನು ಬೇಕಾದರೂ ಯಾಮಾರಿಸಬಹುದು. ದೇಶದ ಗಡಿ ಕಾಯೋ ಸೈನಿಕನಾದರೂ ಅಷ್ಟೇ, ಜನ ಸಾಮಾನ್ಯರು ಆದರೂ ಅಷ್ಟೇ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಕಣ್ಣಮುಂದಿದೆ.

ಸಿಕ್ಕಿಂ ರಾಜ್ಯದ ಗಡಿಯಲ್ಲಿ ದೇಶಸೇವೆ ಮಾಡುತ್ತಿರುವ ಜಿಲ್ಲೆಯ ಮುಂಡರಗಿ ತಾಲೂಕಿನ ವೆಂಕಟಾಪೂರ ಗ್ರಾಮದ ಈರಪ್ಪ ಎಂಬುವವರೇ ಮೋಸಕ್ಕೆ ಒಳಗಾದವರು. ಅದು ಬರೋಬ್ಬರಿ 1ಲಕ್ಷ 70 ಸಾವಿರ ಕಳೆದುಕೊಂಡಿದ್ದಾರೆ.

ಆಗಿದ್ದೆನು?

ಕೆಲಸದ ನಿಮಿತ್ತ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಈರಪ್ಪ, ರಜೆ ಮುಗಿಸಿ ಮತ್ತೆ ಕರ್ತವ್ಯಕ್ಕೆ ಹೋಗಲು ವಿಮಾನದ ಟಿಕೆಟ್‌ ಬುಕ್ ಮಾಡಿಸಿದ್ದಾರೆ.

ಆದರೆ ಹಿರಿಯ ಅಧಿಕಾರಿಗಳು ಸದ್ಯಕ್ಕೆ ಬೇಡ ಇನ್ನೊಂದಿಷ್ಟು ದಿನ ಬಿಟ್ಟು ಬರಲು ಹೇಳಿದ್ದಾರೆ. ಇದರಿಂದಾಗಿ ಬುಕ್ ಮಾಡಿಸಿದ್ದ ಟಿಕೆಟ್ ರದ್ದು ಪಡಿಸಲು ಗೂಗಲ್ ತಡಕಾಡಿದ್ದಾರೆ.

ಆಗ ಸಿಕ್ಕ ನಂಬರವೊಂದಕ್ಕೆ ಕರೆ ಮಾಡಿದಾಗ ಎನಿಡೆಸ್ಕ್ ಸಾಫ್ಟವೇರ್ (ಇನ್ನೊಬ್ಬರ ಕಂಪ್ಯೂಟರ್ ನೋಡಲು ಬಳಸುವ ತಂತ್ರಾಂಶ)
ಹಾಕಿಕೊಂಡು ಆಕ್ಸಸ್ ಕೊಡಲು ಸೂಚಿಸಿದ್ದಾರೆ.

ವಂಚಕರು ಹೇಳಿದಂತೆ ಎನಿಡೆಸ್ಕ್ ಆರಂಭವಾಗುತ್ತಿದ್ದಂತೆ ಸೈಬರ್ ಖದೀಮರು ಅಸಲಿ ಆಟ ಶುರುಮಾಡಿಕೊಂಡಿದ್ದಾರೆ.

ಯೂಸರ್ ನೇಮ್, ಪಾಸ್ ವರ್ಡ್ ಹಾಕಲು ಹೇಳಿ, ಅದರಿಂದ ಬಂದ ಓಟಿಪಿ ನಂಬರ್ ಕೇಳಿದ್ದಾರೆ. ಖದೀಮರು ಕೇಳುವ ಪ್ರತಿಯೊಂದು ಪ್ರಶ್ನೆಗೂ ಈರಪ್ಪ ಉತ್ತರ ನೀಡುತ್ತಾ ಹೋಗಿದ್ದಾರೆ.

ಹೀಗೆ ಎಸ್ ಬಿ ಆಯ್ ಬ್ಯಾಂಕಿನ ಅಕೌಂಟ್ ನಂಬರ್ ನಿಂದ 1ಲಕ್ಷ 70 ಸಾವಿರ ಹಣ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಡ್ರಾ ಆಗಿದೆ. ಇದರಿಂದ ಕಂಗಾಲಾದ ಸೈನಿಕ ಸೀದಾ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.