ಒಂದು ದನದ ದೊಡ್ಡಿ ನಿರ್ಮಾಣ ಮಾಡಿ ಎರಡು ಬಿಲ್ ಮಾಡಿ ಕೊಡುವಂತೆ ಒತ್ತಾಯಿಸಿ ಪದೇ ಪದೇ ಗ್ರಾಮ ಪಂಚಾಯತಿ ನೌಕರರಿಗೆ, ಸಿಬ್ಬಂದಿಯ ನೌಕರಿಗೆ ಅಡ್ಡಿಪಡಿಸುತ್ತಾ, ಇಲ್ಲಸಲ್ಲದ ಮಾಹಿತಿ ಕೇಳಿದ್ದ ಮಹಿಳೆಯೊಬ್ಬರು ಆಕ್ರೋಶಗೊಂಡು ಗ್ರಾ.ಪಂ. ಅಧ್ಯಕ್ಷೆ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಕಲಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಯಮನವ್ವ ದುರಗಪ್ಪ ಬಂಡಿವಡ್ಡರ್ ಹಲ್ಲೆಗೊಳಗಾದ ಮಹಿಳೆ. ಕಲಕೇರಿ ಗ್ರಾಮದ ಶಾಂತವ್ವ ಎಂಬುವವರು ಒಂದು ದನದ ದೊಡ್ಡಿ ನಿರ್ಮಿಸಿಕೊಂಡಿದ್ದರು. ಆ ಬಿಲ್ಗಾಗಿ ಗ್ರಾ.ಪಂ. ಕಾರ್ಯಾಲಯಕ್ಕೆ ಅಲೆದಾಡಿ ಸುಸ್ತಾಗಿದ್ದಾರೆ. ಆದರೆ ಅದಕ್ಕೊಂದು ಕಾರಣವಿದೆ. ನಿರ್ಮಾಣ ಮಾಡಿದ್ದು ಒಂದು ದನದ ದೊಡ್ಡಿ. ಆದರೆ ಎರಡು ಬಿಲ್ ಮಾಡಿ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ. ಬಿಲ್ ಮಾಡಿ ಕೊಡದ ನೌಕರರಿಗೆ ಇಲ್ಲಸಲ್ಲದ ಮಾಹಿತಿ ಕೇಳಿದ್ದಾರೆ ಅನ್ನುವ ಮಾಹಿತಿ ಅಧ್ಯಕ್ಷೆ ಯಮನವ್ವ ಬಂಡಿವಡ್ಡರ್ ಅವರು ಕೊಟ್ಟಿರುವ ದೂರಿನಲ್ಲಿದೆ.
ಇಷ್ಟಕ್ಕೆ ಸುಮ್ಮನಾಗದ ಶಾಂತವ್ವ, ತಮ್ಮ ಮನೆ ಮುಂದೆ ಹಾದು ಹೋಗುತ್ತಿದ್ದ ಅಧ್ಯಕ್ಷೆ ಯಮನವ್ವ ಬಂಡಿವಡ್ಡರ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜಿಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ ಸರಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಸುತ್ತಿರುವುದು ಸ್ವಾಗತಾರ್ಹ ಸಂಗತಿ.
ಆದರೆ ವಯೋಮಿತಿ ಮೀರಿರುವ ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ವಂಚಿತರಾಗುವ ಭೀತಿ ಎದುರಾಗಿದೆ.
ಕರ್ನಾಟಕ ಸರಕಾರ ಹೋರಾಡಿಸಿರುವ ಅಧಿಸೂಚನೆ ಪ್ರಕಾರ SC=45, ST=45, OBC=43, GM=40 ವಯೋಮಿತಿ ಇದೆ. ಒಂದೂವರೆ ವರ್ಷದ ಹಿಂದೆಯೇ ಸರಕಾರ ನೇಮಕಾತಿ ಪ್ರಕ್ರಿಯೆ ನಡೆಸಿದ್ದರೆ ಈಗ ವಯಸು ಮೀರಿದವರು ಸಹ ಸಹಾಯಕ ಪ್ರಾಧ್ಯಪಕ ಹುದ್ದೆಗೆ ಅರ್ಹರಾಗುತ್ತಿದ್ದರು.
ಕೋವಿಡ್-19 ಕಾರಣದಿಂದ ಮತ್ತು ಸರಕಾರದ ವಿಳಂಬ ಧೋರಣೆಯಿಂದಾಗಿ ಸಹಾಯಕ ಪ್ರಾಧ್ಯಪಕ ಹುದ್ದೆಯ ಆಕಾಂಕ್ಷಿಗಳಾಗಿರುವವರು ಅರ್ಹತೆಯನ್ನು ಕಳೆದುಕೊಳ್ಳುವಂತಾಗಿದೆ. ವಯಸ್ಸು ಮೀರಿದವರು ಸಹಾಯಕ ಪ್ರಾಧ್ಯಪಕರ ಹುದ್ದೆಯ ಕನಸಿಗೆ ಸರಕಾರವೇ ತಣ್ಣೀರು ಎರಚಿದೆ ಎಂದು ಹುದ್ದೆ ಆಕಾಂಕ್ಷಿಯೊಬ್ಬರು ಆಳಲು ತೋಡಿಕೊಂಡಿದ್ದಾರೆ.
ವಯಸ್ಸು ಮೀರಿದ NET, SET ಪಾಸಾಗಿರುವ ಮತ್ತು PhD ಹೊಂದಿದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಾವಿರಾರು ಅಭ್ಯರ್ಥಿಗಳು ಅರ್ಹತೆ ಹೊಂದಿದ್ದರೂ ವಂಚಿತರಾಗುತ್ತಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಒಂದೂವರೆ ವರ್ಷದ ಹಿಂದೆಯೇ ನೇಮಕಾತಿ ಪ್ರಕ್ರಿಯೆ ಹೊರಡಿಸದೇ ಇದ್ದಿದ್ದರಿಂದ ವಯಸ್ಸು ಮೀರಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತಿಲ್ಲ.
ಆದ್ದರಿಂದ SC=45, ST=45, OBC=43, GM=40 ಯವರಿಗೆ ವಯಸ್ಸು ನಿಗದಿಪಡಿಸಿರುವ ಮಿತಿಯನ್ನು ಬದಲಾಯಿಸಿ ಅದನ್ನು 50 ವರ್ಷಕ್ಕೆ ಹೆಚ್ಚಿಸುವಂತೆ ಅಭ್ಯರ್ಥಿಗಳ ಒತ್ತಾಯವಾಗಿದೆ.
45 ವರ್ಷ ವಯಸ್ಸು ಮೀರಿದ NET, SET ಪಾಸಾಗಿರುವ ಮತ್ತು PhD ಹೊಂದಿರುವ ಎಲ್ಲ ಅಭ್ಯರ್ಥಿಗಳಿಗೆ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕಾಗಿದೆ. ಆ ಮೂಲಕ ಈ ಅಭ್ಯರ್ಥಿಗಳ ಹಿತ ಕಾಪಾಡಲು ವಯಸ್ಸು ಮಿತಿಯನ್ನು ಸಡಿಲುಗೊಳಿಸಲು ಆಕಾಂಕ್ಷಿಗಳು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸುತ್ತಿರುವುದು ಸರಿಯಲ್ಲ. ರೈತರು ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮಾಡಬೇಕೆಂದು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ನಿರ್ಧಾರದ ಪ್ರಕಾರ ರೈತರು ಬೆಳೆ ಸಮೀಕ್ಷೆ ಮಾಡುವುದು ಸರಿ ಇರಬಹುದು. ಆದರೆ ಜಿಪಿಎಸ್ ಮಾಡುವಾಗ ಸರ್ವೆ ನಂಬರಿನ ಉತಾರ ಅಲ್ಲಾ ಎಂದು ಜಿಪಿಎಸ್ ಹೇಳುತ್ತದೆ.
ನೂರಾರು ಮೀಟರ್ ದೂರದಲ್ಲಿ ಜಿಪಿಎಸ್ ತೊರಿಸಿದರೆ ರೈತರು ತಮ್ಮ ಜಮೀನು ಬಿಟ್ಟು ಮತ್ತೆ ಎಲ್ಲಿಗೆ ಹೋಗಿ ಜಿಪಿಎಸ್ ಮಾಡಬೇಕು? ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್. ನಾರಾಯಣರೆಡ್ಡಿಯವರ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಕೆಲವು ತಾಲೂಕಿನ ಹಳ್ಳಿಗಳ ರೈತರು ಈ ಬೆಳೆ ಸಮೀಕ್ಷೆ ಮಾಡುವಲ್ಲಿ ಸರ್ಕಾರದ ಸೌಲಭ್ಯ ದೊರಕದೆ ರೈತರು ನೊಂದು ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳೇ ಸಮೀಕ್ಷಾ ಕಾರ್ಯ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮನೆ ದೇವ್ರು, ಮಠಾಧೀಶರ, ವಧು-ವರರ ಹಾಗೂ ಕೆಲವೊಮ್ಮೆ ಕುಟುಂಬದವರ ಭಾವಚಿತ್ರ ಮುದ್ರಿಸುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಕುಟುಂಬ, ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಮುದ್ರಿಸಿ, ಅವರು ಅಭಿನಯಿಸಿದ ಚಿತ್ರಗಳ ಹೆಸರುಗಳ ಮೂಲಕವೇ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿದೆ.
ಜಿಲ್ಲೆಯ ಇರಕಲ್ಗಡಾದ ರಾಮಣ್ಣ ಕಾಟ್ರಳ್ಳಿ ಕುಟುಂಬ ಡಾ.ವಿಷ್ಣುವರ್ಧನ್ ಅವರ ಮೇಲೆ ಅಪಾರ ಅಭಿಮಾನ ಹೊಂದಿದೆ. ರಾಮಣ್ಣ ಕಾಟ್ರಳ್ಳಿಯವರ ಶ್ರೀಮತಿ ಹುಲಿಗೆಮ್ಮ ಅವರು ವಿಷ್ಣುದಾದಾಗೆ ದೊಡ್ಡ ಫ್ಯಾನ್. ಮದುವೆ ಗಂಡು ಶರಣಪ್ಪ ಚಿಕ್ಕಂದಿನ ದಿನಗಳಲ್ಲಿ ವಿಷ್ಣು ಅಭಿನಯದ ಯಜಮಾನ ಸಿನಿಮಾ ನೋಡಿ ಆವತ್ತಿನಿಂದ ಇವತ್ತಿನವರೆಗೂ ವಿಷ್ಣು ಅವರ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ.
ಜುಲೈ 4ರಂದು ಇರಕಲ್ಗಡಾದಲ್ಲಿ ಮನೆ ಮುಂದೆಯೇ ರಾಮಣ್ಣ ಕಾಟ್ರಳ್ಳಿಯವರು ತಮ್ಮ ಪುತ್ರರಾದ ಶರಣಪ್ಪ ಮತ್ತು ಮಂಜುನಾಥ ಅವರ ಮದುವೆ ಹಮ್ಮಿಕೊಂಡಿದ್ದು ಬಂಧುಮಿತ್ರರನ್ನು ಆಹ್ವಾನಿಸಲು ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಶ್ರೀಗಳ, ದೇವರ ಮೂರ್ತಿಗಳ ಚಿತ್ರದ ಜೊತೆ ಡಾ.ವಿಷ್ಣುವರ್ಧನ್ ಫೋಟೋ ಮುದ್ರಿಸಿ, ಅವರ ಸಿನಿಮಾ ಹೆಸರುಗಳ ಮೂಲಕವೇ ಮದುವೆಗೆ ಆಹ್ವಾನ ನೀಡಿದ್ದು ವಿಭಿನ್ನವಾಗಿದೆ.
ಈ ಮೂಲಕ ವಿಷ್ಣುದಾದಾ ದೈಹಿಕವಾಗಿ ಜೊತೆಗಿರದಿದ್ದರೂ ಅಭಿಮಾನದ ರೂಪದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಆಹ್ವಾನ ಪತ್ರಿಕೆ ಸಾಕ್ಷಿಯಾಗಿದೆ.
ನೂತನ ವಧು-ವರರಿಗೆ ಶುಭವಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೃಷಿ ಹೊಂಡದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಶುಕ್ರವಾರ ಅಪರಾಹ್ನ ಸಂಭವಿಸಿದೆ.
ಮೃತ ಬಾಲಕಿಯರನ್ನು
ಕವಿತಾ(10), ಸಂಜನಾ(9) ಎಂದು ಗುರುತಿಸಲಾಗಿದೆ.
ಹುಲಿಹೈದರ ಗ್ರಾಮ ವ್ಯಾಪ್ತಿಯ ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಘಟನೆ ನಡೆದಿದ್ದು,
ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಮೃತ ಬಾಲಕಿಯರ ಪಾಲಕರು ಬಂದಿದ್ದರು ಎನ್ನಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ
ಮುಗಿಲು ಮುಟ್ಟಿತ್ತು.
ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕೃಷಿ ಹೊಂಡದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಶುಕ್ರವಾರ ಅಪರಾಹ್ನ ಸಂಭವಿಸಿದೆ.
ಮೃತ ಬಾಲಕಿಯರನ್ನು ಕವಿತಾ(10), ಸಂಜನಾ(9) ಎಂದು ಗುರುತಿಸಲಾಗಿದೆ. ಹುಲಿಹೈದರ ಗ್ರಾಮ ವ್ಯಾಪ್ತಿಯ ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಘಟನೆ ನಡೆದಿದ್ದು, ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಮೃತ ಬಾಲಕಿಯರ ಪಾಲಕರು ಬಂದಿದ್ದರು ಎನ್ನಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ರೈತ ನಿಂಗಪ್ಪ ಗಾಣದಾಳ ಅವರ ಎಂಟು ತಿಂಗಳ ಕೂಸು ಮಹಾಂತೇಶ ಮನೆಯಲ್ಲಿ ಆಟವಾಡುವಾಗ ನೆಲದಲ್ಲಿ ಬಿದ್ದಿದ್ದ ಮೆಂತಾಲ್ ಬಾಕ್ಸ್ ಬಾಯಲ್ಲಿ ಇಟ್ಟುಕೊಂಡು ನುಂಗಲು ಯತ್ನಿಸಿದೆ. ಮೆಂತಾಲ್ ಡಬ್ಬಿ ಪುಣ್ಯಕ್ಕೆ ಹೊಟ್ಟೆ ಸೇರದೆ ಗಂಟಲಲ್ಲಿ ಸಿಲುಕಿದೆ.
ಮಗು ಡಬ್ಬಿ ಬಾಯಲ್ಲಿಟ್ಟುಕೊಳ್ಳುವುದನ್ನು ನೋಡಿದ ಮಗುವಿನ ಅಣ್ಣ, ತನ್ನ ತಾಯಿಗೆ ವಿಷಯ ತಿಳಿಸಿದ್ದಾನೆ. ಮನೆಗೆಲಸ ಬಿಟ್ಟು ಬಂದ ತಾಯಿ ಗಂಟಲಿನಿಂದ ಡಬ್ಬಿ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಆಗಲಿಲ್ಲ. ಕೊನೆಗೆ ಮಗುವಿನ ರೋಧನ ಕಂಡು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಜಿಲ್ಲಾಸ್ಪತ್ರೆಯ ಗಂಟಲು ತಜ್ಞ ಡಾ.ಮಲ್ಲಿಕಾರ್ಜುನ ಸ್ಕ್ಯಾನ್ ಮಾಡಿ ಗಂಟಲಲ್ಲಿ ಪುಟ್ಟ ಡಬ್ಬಿ ಇರುವುದನ್ನು ಖಚಿತ ಪಡಿಸಿಕೊಂಡು ಲಘು ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಮೆಂತಾಲ್ ಡಬ್ಬಿಯನ್ನು ಮಗುವಿನ ಗಂಟಲಿನಿಂದ ಹೊರ ತೆಗೆದಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿದ್ದು ಜುಲೈ 1ರಂದು.
“ಸ್ವಲ್ಪ ತಡವಾಗಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಇತ್ತು. ಮಗುವಿಗೆ ಜೊಲ್ಲು ನುಂಗಲು ಆಗದ ಸ್ಥಿತಿ ಎದುರಿಸುತ್ತಿತ್ತು. ಧ್ವನಿಯೂ ಬರುತ್ತಿರಲಿಲ್ಲ. ಒಟ್ಟಾರೆ ತನ್ನ ನೋವನ್ನ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಮಗು ಇತ್ತು. ಆಸ್ಪತ್ರೆಗೆ ಬಂದು ವಿಷಯ ತಿಳಿಸಿದ ಹದಿನೈದು ನಿಮಿಷದಲ್ಲಿ ಮಗುವಿನ ಗಂಟಲಲ್ಲಿದ್ದ ಪ್ಲಾಸ್ಟಿಕ್ ಡಬ್ಬಿಯನ್ನು ಹೊರತೆಗೆದಿದ್ದೇವೆ. ಪೋಷಕರು ಗಾಬರಿಯಲ್ಲಿ ಗದಗ, ಹುಬ್ಬಳ್ಳಿಗೆ ಹೋಗಲು ಯತ್ನಿಸಿದ್ದರೆ ಸಮಯ ಮೀರಿ ಹೋಗುತ್ತಿತ್ತು. ಜೊತೆಗೂ ಕೊಪ್ಪಳ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜಿನಲ್ಲೂ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಯಿತು.” -ಡಾ.ಮಲ್ಲಿಕಾರ್ಜುನ, ಕಿವಿ, ಮೂಗು ಹಾಗೂ ಗಂಟಲು ತಜ್ಞ, ಜಿಲ್ಲಾಸ್ಪತ್ರೆ, ಕೊಪ್ಪಳ.
ಹೊಲದಾಗ ಕೆಲಸ ಮಾಡಾಕತ್ತಿದ್ದೆ. ನಮ್ಮ ಹುಡುಗ ಬಂದು ವಿಷಯ ತಿಳಿದ ಕೂಡಲೇ ಗಾಬರಿಯಾಗಿ ಓಡಿ ಬಂದೆ. ತಡ ಮಾಡದನ ಜಿಲ್ಲಾಸ್ಪತ್ರೆಗೆ ಕರಕೊಂಡು ಬಂದೆ. ಇಲ್ಲಿನ ಡಾಕ್ಟರು ನಮ್ಮ ಮಗುವಿನ ಜೀವ ಉಳಿಸಿದ್ರು. ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರು ಕಡಮಿನ. -ನಿಂಗಪ್ಪ ಗಾಣದಾಳ, ರೈತ, ಹುಣಸಿಹಾಳ.
ಗದಗ ಜಿಲ್ಲೆಯ ಜನರಿಗೆ ಶುಕ್ರವಾರ ಶುಭ ಸುದ್ದಿ ನೀಡಿದೆ. ಇದುವರೆಗೂ ಎರಡಂಕಿಗೆ ಸೀಮಿತವಾಗಿದ್ದ ಸೋಂಕು ಇಂದು ಒಂದಂಕಿಗೆ ಬಂತು ನಿಂತಿದೆ. ಇಂದು 09 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಶುಕ್ರವಾರವೂ ಸಾವಿನ ಸಂಖ್ಯೆ ಒಂದಕ್ಕೆ ಸೀಮಿತವಾಗಿದೆ.
ಇಂದು 09 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25838 ಏರಿಕೆ ಕಂಡಿದೆ.
ಗದಗ ನಗರ ಹಾಗೂ ತಾಲೂಕಿನಲ್ಲಿ -04, ಮುಂಡರಗಿ-02, ನರಗುಂದ-00, ರೋಣ-03, ಶಿರಹಟ್ಟಿ-00, ಹೊರಜಿಲ್ಲೆಯ-00, ಸೇರಿದಂತೆ 09 ಪ್ರಕರಣಗಳು ದೃಢಪಟ್ಟಿವೆ.
ಶುಕ್ರವಾರ ಕೋವಿಡ್ ನಿಂದ ಒಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 307 ಜನರು ಮೃತಪಟ್ಟಂತಾಗಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ನಿವಾಸಿ 60 ವರ್ಷದ ಮಹಿಳೆ ಜೂನ್ 26 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜುಲೈ 1 ರಂದು ಮೃತಪಟ್ಟಿದ್ದಾರೆ.
ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು 24 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25336 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.
ಇಂದು ಜಿಲ್ಲೆಯಲ್ಲಿ 195 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕೋವಿಡ್-19 ಸೋಂಕು ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಜಾರಿ ಮಾಡಿದ ಕಠಿಣ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದ ಆದೇಶ ಜುಲೈ 5 ರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿವೆ.
ವಾರಾಂತ್ಯ ಕರ್ಪ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯರೆಗೆ ಜಾರಿಯಿಲ್ಲಿರಲಿದೆ. ಈ ಅವಧಿಯಲ್ಲಿ ಯಾವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ನಿರ್ಬಂಧಿಸಲಾಗಿದೆ ಎಂಬ ಮಾಹಿತಿಯು ಈ ಕೆಳಕಂಡಂತಿದ್ದು, ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಗದಗ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಗಿನ ಅಗತ್ಯ ಆರ್ಥಿಕ ಚಟುವಟಿಕೆ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.
ಆಹಾರ ಪದಾರ್ಥ, ದಿನಸಿ, ತರಕಾರಿ, ಹಣ್ಣು ಮಾಂಸ ಮೀನು, ಹಾಲು ಡೈರಿ ಉತ್ಪನ್ನ, ಅಗತ್ಯ ವಸ್ತು, ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ನಿಗಧಿಯಾದ ಮದುವೆ ಕಾರ್ಯಕ್ರಮಗಳಿಗೆ 40 ಜನ ಭಾಗವಹಿಸಲು ಸಮ್ಮತಿ ನೀಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ 5 ಜನ ಪಾಲ್ಗೊಳ್ಳಲು ಅವಕಾಶ.
ಹೋಟೆಲ್, ರೆಸ್ಟೋರೆಂಟ್, ಬಾರಗಳಲ್ಲಿ ಪಾರ್ಸಲ್ ನೀಡಲು ಅನುಮತಿಸಿದೆ. ಕೃಷಿ ಚುಟುವಟಿಕೆ ಕೈಗೊಳ್ಳಲು ಬೀಜ ಗೊಬ್ಬರದ ಅಂಗಡಿ, ರಾಸಾಯನಿಕ ಅಂಗಡಿ ತೆರೆಯಬಹುದು. ಇವುಗಳಿಗೂ ಸಹ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶವಿದೆ. ಜೊತೆಗೆ ಸಾರ್ವಜನಿಕ ಸಾರಿಗೆಗೆ ಅವಕಾಶವಿದೆ.
ಇನ್ನುಳಿದಂತೆ ಸರ್ಕಾರಿ ನೌಕರರು ಅಗತ್ಯ ಸೇವೆಗೆ ನಿಯೋಜಿತರಿಗೆ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಿದೆ. ಸಾರ್ವಜನಿಕರು ಅನಾರೋಗ್ಯವಾದಲ್ಲಿ ಆಸ್ಪತ್ರೆಗಳಿಗೆ ತೆರಳಲು, ಹಾಗೂ ಲಸಿಕೆ ಹಾಕಿಸಿಕೊಳ್ಳು ತೆರಳಲು ಅವಕಾಶ ನೀಡಲಾಗಿದೆ.
ಈ ವೇಳೆ ರೋಗಿಗಳು ಅವರ ಸಹಾಯಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ ಕಾರ್ಯಾಚರಣೆ ಅಗತ್ಯವಿರುವ ಕೈಗಾರಿಕೆಗಳಿಗೆ ಅವಕಾಶವಿರುತ್ತದೆ, ನೌಕರರು ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಬೇಕು. ಒಟ್ಟಾರೆ ವೀಕೆಂಡ್ ಕರ್ಪ್ಯೂ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆ ಹೊರತುಪಡಿಸಿ ವಾಹನಗಳ ಅನಗತ್ಯ ಓಡಾಟಕ್ಕೆ ನಿರ್ಭಂಧಿಸಲಾಗಿದೆ.
ಅದರಂತೆ ಟೆಲಿಕಾಂ ಇಂಟರ್ನೆಟ್ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ, ಆದರೆ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬೇಕು, ವೈದ್ಯಕೀಯ ತುರ್ತು ಸೇವೆಗಳು ಅಗತ್ಯ ಸೇವೆಗಳಾದ ಫಾರ್ಮಸಿಗಳ ಕಾರ್ಯಾಚರಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ, ಎಲ್ಲಾ ತರಹದ ಸರಕುಗಳು ಮತ್ತು ಸರಕು ಸಾಗಾಟವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ, ಸರಕುಗಳ ಹೋಂ ಡೆಲಿವರಿ, ಇ-ಕಾಮರ್ಸ್ ಚಟುವಟಿಕೆಗಳಿಗೆ ಸರಕಾರದ ಮಾರ್ಗಸೂಚಿ ಅನ್ವಯ ಅವಕಾಶ ಇರುತ್ತದೆ. ರೈಲು ವಿಮಾನ ಸೇವೆ ಎಂದಿನಂತೆ ಅವಕಾಶವಿದ್ದು ಟಿಕೆಟ್ ಅನ್ನು ಪಾಸ್ ರೀತಿಯಲ್ಲಿ ಬಳಸಲು ಸೂಚಿಸಲಾಗಿದೆ.
ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಬರದೇ ಮನೆಯಲ್ಲೇ ಇರುವ ಮೂಲಕ ಸೋಂಕು ನಿಯಂತ್ರಣದಲ್ಲಿ ಸಹಕರಿಸಬೇಕು. ಅಗತ್ಯ ಸಂದರ್ಭದಲ್ಲಿ ಮನೆಯಿಂದ ಹೊರಬಂದಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆ ವರೆಗೆ ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಶನಿವಾರ ಹಾಗೂ ರವಿವಾರದಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣ, ಕಲಘಟಗಿ,ತಡಸ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಬಸ್ ನಿಲ್ದಾಣಗಳಿಂದ ಬಸ್ಸುಗಳ ಸಂಚಾರ ಎಂದಿನಂತೆ ಇರುತ್ತದೆ.
ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳು ಕಾರ್ಯಾಚರಣೆ ಮಾಡಲಾಗುತ್ತದೆ. ಮುಂಗಡ ಬುಕ್ಕಿಂಗ್ ಪ್ರಯಾಣಿಕರ ಸಂಖ್ಯೆ ಆಧರಿಸಿ ದೂರ ಮಾರ್ಗದ ರಾತ್ರಿ ಸಾರಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಸೋಮವಾರ ಬೆಳಿಗ್ಗೆ 6 ರಿಂದ ಎಂದಿನಂತೆ ಎಲ್ಲಾ ಮಾರ್ಗಗಳಲ್ಲಿ ಬಸ್ಸುಗಳು ಸಂಚರಿಸಲಿವೆ ಎಂದು ಹುಬ್ಬಳ್ಳಿ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಕಳೆದ ವಾರದ ಅವಧಿಯಲ್ಲಿ ದಿನ ನಿತ್ಯ 240ರಿಂದ 250ಬಸ್ ಗಳು ಸಂಚರಿಸಿದ್ದವು. ಆದರೆ ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಜನರ ಓಡಾಟ ಬಹಳಷ್ಟು ಕ್ಷೀಣಿಸಿತ್ತು. ಹೀಗಾಗಿ ಕೇವಲ 55 ಬಸ್ಸುಗಳು ಮಾತ್ರ ಸಂಚರಿಸಿದ್ದವು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಇರುವಂತ ಮಾರ್ಗಗಳಲ್ಲಿ ಬಸ್ ಗಳನ್ನು ಕಾರ್ಯಾಚರಣೆ ಮಾಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.