Home Blog Page 4

ಭಾರತೀಯ ಸೇನೆಗೆ ಆಯ್ಕೆ: ಸನ್ಮಾನ

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಭಾರತಾಂಬೆಯ ಸೇವೆ ಮಾಡಲು ನಮ್ಮ ತನು, ಮನ, ಧನ ಅರ್ಪಿಸಿಕೊಳ್ಳುವುದು ಅವಶ್ಯಕವೆಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ಮಾಸುಮಲಿ ಮದಗಾರ ಹೇಳಿದರು.

ಸ್ಥಳೀಯ ಕಟ್ಟಿಬಸವೇಶ್ವರ ರಂಗಮಂದಿರ ನಿವಾಸಿ ಸಂಗಪ್ಪ ವಡಗೇರಿ ಇವರ ಮೊಮ್ಮಗ ಆಕಾಶ ಕವಡಿಮಟ್ಟಿ ಭಾರತೀಯ ಸೇನೆಗೆ ನೇಮಕಗೊಂಡಿರುವ ನಿಮಿತ್ತ ಅವರನ್ನು ಕುಟುಂಬ ಸಹಿತವಾಗಿ ಸನ್ಮಾನಿಸಿ ಮಾತನಾಡಿದರು.

ಭಾರತೀಯ ಸೇನೆಗೆ ಸೇರಲು ಅನೇಕ ಯುವಕರು ವರ್ಷಾನುಗಟ್ಟಲೆ ಸಾಕಷ್ಟು ಕಷ್ಟಪಡುತ್ತಾರೆ. ಭಾರತಾಂಬೆಯ ಸೇವೆ ಮಾಡಲು ಪೂರ್ವಜರ ಆಶಿರ್ವಾದ ಹಾಗೂ ಸ್ವಂತ ಶ್ರಮ ಅಗತ್ಯ. ಯುವಕರು ದೈಹಿಕವಾಗಿ, ಮಾನಸಿಕವಾಗಿ ಸದಾ ತಾಯ್ನಾಡಿನ ಸೇವೆ ಮಾಡಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಕಮಿಟಿಯ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಸೇರಿದಂತೆ ಮದಗಾರ ಕುಟುಂಬದ ಸದಸ್ಯರು ಇದ್ದರು.

ನಗರೇಶ್ವರ ದೇವಸ್ಥಾನದ ವಾರ್ಷಿಕೋತ್ಸವ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದ ವಾರ್ಷಿಕೋತ್ಸವವನ್ನು ಇಲ್ಲಿನ ಆರ್ಯವೈಶ್ಯ ಸಮಾಜದವರು ಶೃದ್ಧಾಭಕ್ತಿಯಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ರಾಮಣ್ಣ ನವಲಿ, ಸಮಾಜದ ಎಲ್ಲ ಬಂಧುಗಳ ಸಹಕಾರದಿಂದ ನರೇಗಲ್ಲ ಪಟ್ಟಣದಲ್ಲಿ ಒಂದು ವರ್ಷದ ಕೆಳಗೆ ನಾವು ಈ ಭವ್ಯ ದೇವಸ್ಥಾನವನ್ನು ನಿರ್ಮಿಸಿದೆವು. ಈ ಕಾರ್ಯದಲ್ಲಿ ಕೇವಲ ನಮ್ಮೂರಿನ ಸಮಾಜ ಬಾಂಧವರಲ್ಲದೆ, ಪರ ಊರಿನ ಎಲ್ಲ ಬಾಂಧವರು ಮತ್ತು ನಮ್ಮೂರಿನ ಇತರೆ ಸಮಾಜದ ಎಲ್ಲ ಬಂಧುಗಳು ಸಾಕಷ್ಟು ಸಹಕಾರ ನೀಡಿದರು ಎಂದರು.

ಉಪಾಧ್ಯಕ್ಷ ಚಂದ್ರಹಾಸ ಇಲ್ಲೂರ ಮಾತನಾಡಿ, ಈ ಒಂದು ವರ್ಷದ ಅವಧಿಯಲ್ಲಿ ಈ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ನಡೆದಿವೆ. ನಮ್ಮ ಸಮಾಜದ ಸುಮಂಗಲೆಯರು ಎಲ್ಲ ಹಬ್ಬ ಹರಿದಿನಗಳಲ್ಲಿ ಇಲ್ಲಿ ಸೇರಿ ಉಡಿ ತುಂಬುವ, ಲಕ್ಷ್ಮೀ ಸೋಬಾನೆ, ಕುಂಕುಮಾರ್ಚನೆ ಇತ್ಯಾದಿ ಕಾರ್ಯಕ್ರಮಗಳನ್ನು ಅತ್ಯಂತ ಶೃದ್ಧಾಭಕ್ತಿಗಳಿಂದ ಮಾಡುತ್ತ ಬಂದಿದ್ದಾರೆ. ಈ ಕಾರ್ಯಗಳು ಹೀಗೆಯೇ ಮುನ್ನಡೆಯಲಿ ಎಂದು ಆಶಿಸಿದರು.

ವೇ. ಮೂ. ವಿಶ್ವನಾಥಭಟ್ಟ ಗ್ರಾಮಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಶ್ರೀ ಕನ್ನಿಕಾ ಪರಮೇಶ್ವರಿಗೆ ಪಾಲಕೀ ಸೇವೆ ಜರುಗಿತು. ಅಶೋಕ ನವಲಿ, ರಾಜೇಂದ್ರ ದೇವರಂಗಡಿ, ಚಂದ್ರಹಾಸ ಇಂಗಳಳ್ಳಿ, ವೆಂಕಟೇಶ ಕಣವಿಹಳ್ಳಿ, ಈರಣ್ಣ ಇಲ್ಲೂರ, ಮುತ್ತಣ್ಣ ದೇವರಂಗಡಿ, ಶರಣಪ್ಪ ಬಿಜಾಪೂರ, ಬೆಟದೂರ ಸಹೋದರರು, ಮನೋಹರ ಗುಡಿಸಾಗರ, ನಾಗೇಶ ಗುಡಿಸಾಗರ, ಮಂಜುನಾಥ ನವಲಿ, ಮಹೇಶ ನವಲಿ ಹಾಗೂ ಸಮಾಜದ ಎಲ್ಲ ಸುಮಂಗಲೆಯರು ಪಾಲ್ಗೊಂಡಿದ್ದರು.

ಬಸವರಾಜ ಸರಕಾರಿ ನೌಕರರ `ರಾಜ’

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಗದಗ ಜಿಲ್ಲಾ ಘಟಕದಲ್ಲಿ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಡಾ. ಬಸವರಾಜ ಬಳ್ಳಾರಿ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಡಾ. ಬಸವರಾಜ ಬಳ್ಳಾರಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪೂರ್ಣಾವಧಿಗೂ ಬಸವರಾಜ ಬಳ್ಳಾರಿ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಗುರುವಾರ ಚುನಾವಣೆ ನಿಗದಿಯಾಗಿತ್ತು. ಅಧಿಸೂಚನೆಯಂತೆ ನೌಕರರ ಭವನದಲ್ಲಿ ಗುರುವಾರ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾದವು. ಡಾ. ಬಸವರಾಜ ಬಳ್ಳಾರಿ ಹಾಗೂ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ನಾಮಪತ್ರ ಸಲ್ಲಿಸಿದರು. ಮತದಾನ ಹಕ್ಕು ಹೊಂದಿದ್ದ 69 ಜನ ಸದಸ್ಯರ ಪೈಕಿ 68 ಜನ ಮತ ಚಲಾಯಿಸಿದರು. ಆ ಪೈಕಿ 55 ಮತಗಳನ್ನು ಪಡೆದು ಬಸವರಾಜ ಬಳ್ಳಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ, 13 ಮತಗಳನ್ನು ಪಡೆದ ನಾಗರಾಜ ಹಳ್ಳಿಕೇರಿ ಪರಾಭವಗೊಂಡರು. ಈ ಕುರಿತು ಚುನಾವಣಾಧಿಕಾರಿ ಸಿ. ಬಸವರಾಜ ಅಧಿಕೃತವಾಗಿ ಘೋಷಣೆ ಮಾಡಿ, ಬಸವರಾಜ ಬಳ್ಳಾರಿ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.

ಸೇವಾ ನಿವೃತ್ತಿ ಹೊಂದಿರುವ ಡಾ. ರವಿ ಗುಂಜೀಕರ್ ಮೂರು ಅವಧಿಗೂ ಅವಿರೋಧವಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಿಗದಿಯಾಗಿದ್ದರಿಂದ ಭಾರೀ ಕುತೂಹಲ ಮೂಡಿಸಿತ್ತು. ಬಸವರಾಜ ಬಳ್ಳಾರಿ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಡಾ. ರವಿ ಗುಂಜೀಕರ್ ಹಾಗೂ ಅವರ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನೌಕರರ ಭವನದ ಮುಂದಿನ ಪಂ. ಪುಟ್ಟರಾಜರ ದೇವಸ್ಥಾನದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.

ಈ ಅಭೂತಪೂರ್ವ ಗೆಲುವಿಗೆ ಜಿಲ್ಲೆಯ ಎಲ್ಲ ಸರಕಾರಿ ನೌಕರರು ಮತ್ತು ನೌಕರರ ಸಂಘದ ಪದಾಧಿಕಾರಿಗಳು ಕಾರಣರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನದ ಈ ಜವಾಬ್ದಾರಿಯನ್ನು ಸಮರ್ಥವಾಗಿ ಬಳಸಿಕೊಂಡು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಸರಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ.

– ಡಾ. ಬಸವರಾಜ ಬಳ್ಳಾರಿ.

ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರು.

ವಚನ ಸಾಹಿತ್ಯಕ್ಕೆ ಮರುಜೀವ ಕೊಟ್ಟವರು ಫ.ಗು. ಹಳಕಟ್ಟಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಣ್ಮರೆಯಾಗಿ ಹೋಗುವ ವಚನ ಸಾಹಿತ್ಯಕ್ಕೆ ಮರುಜೀವನ ಕೊಟ್ಟು ಕನ್ನಡ ಸಾಹಿತ್ಯದ ಅಮೂಲ್ಯ ಆಸ್ತಿಯನ್ನು ಉಳಿಸಿದ ಮಹಾನ್ ಪುರುಷ ಫ.ಗು. ಹಳಕಟ್ಟಿ ಎಂದರೆ ತಪ್ಪಾಗಲಾರದು ಎಂದು ಶಿಕ್ಷಕ ಜೆ.ಎಸ್. ರಾಮಶೆಟ್ಟರ ಹೇಳಿದರು.

ಬುಧವಾರ ಸಮೀಪದ ಶಿಗ್ಲಿ ಗ್ರಾಮದ ಗ್ರಾಮಾಂತರ ಶಿಕ್ಷಣ ಸಂಸ್ಥೆಯಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಲಾ ವೇದಿಕೆ ಇವುಗಳ ಆಶ್ರಯದಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಸಾವಿರಾರು ವಚನಗಳನ್ನು ರಚನೆ ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು. ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳಂತಿದ್ದ ವಚನ ಸಾಹಿತ್ಯವು ಶರಣರ ಕಾಲಾನಂತರದಲ್ಲಿ ಅಲ್ಲಲ್ಲಿ ಕಣ್ಮರೆಯಾಗಿ ಹೋಗುತ್ತಿದ್ದವು. ಓಲೆ ಗರಿಯಲ್ಲಿದ್ದ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿ ಅವುಗಳಿಗೆ ಜೀವ ತುಂಬಿ ಕನ್ನಡ ಸಾಹಿತ್ಯಕ್ಕೆ ಅಮೋಘ ಕಾಣಿಕೆ ನೀಡಿದ್ದು ಫ.ಗು. ಹಳಕಟ್ಟಿಯವರು. ಹಳಕಟ್ಟಿಯವರು ವಚನ ಸಾಹಿತ್ಯದ ರಕ್ಷಣೆ ಹಾಗೂ ಅವುಗಳ ಪ್ರಸಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಎಂದರು.

ಸಮಾರಂಭ ಉದ್ಘಾಟಿಸಿದ ಬಸಣ್ಣ ಬೆಂಡಿಗೇರಿ ಮಾತನಾಡಿ, ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 12ನೇ ಶತಮಾನದಲ್ಲಿ ರಚಿಸಿದ ವಚನಗಳು ಸಮಾಜದ ಅಂಕು-ಡೊಂಕು ತಿದ್ದುವ ಸಾಹಿತ್ಯವಾಗಿದೆ. ಇಂತಹ ಶರಣರ ವಚನಗಳನ್ನು ಸಂರಕ್ಷಣೆ ಮಾಡಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ವೇಳೆ ರಂಜನ ಪಾಟೀಲ, ಸೋಮಣ್ಣ ಡಾಣಗಲ್ಲ, ರಾಜರತ್ನ ಹುಲಗೂರ, ನಿರ್ಮಲಾ ಅರಳಿ, ಎಲ್.ಎಸ್. ಅರಳಹಳ್ಳಿ ಇದ್ದರು. ಮಾಲಾದೇವಿ ದಂದರಗಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಎಂ.ಕೆ. ಕಳ್ಳಿಮಠ ವಂದಿಸಿದರು.

ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡಿ

ವಿಜಯಸಾಕ್ಷಿ ಸುದ್ದಿ, ಗದಗ: ಹೊಸ ಬಸ್ ನಿಲ್ದಾಣದ ಸ್ವಚ್ಛತೆಗೆ ಅಧಿಕಾರಿಗಳು ಆದ್ಯತೆ ನೀಡಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಉತ್ತಮ ವಾತವರಣ ಕಲ್ಪಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ನಗರದ ಹೊಸ ಬಸ್ ನಿಲ್ದಾಣದಲ್ಲಿ ಜುಲೈ 2ರಿಂದ 4ರವರೆಗೆ ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರದ 2 ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಬಸ್ ನಿಲ್ದಾಣವನ್ನು ವೀಕ್ಷಿಸಿ ಅವರು ಮಾತನಾಡಿದರು.

ಶಕ್ತಿ ಯೋಜನೆಯಿಂದ ದಿನಕ್ಕೆ ಸಾವಿರಾರು ಮಹಿಳೆಯರು ಉಚಿತ ಪ್ರಯಾಣ ಮಾಡುವಂತಾಗಿದೆ. ಹಾಗಾಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳು, ಅದಕ್ಕೆ ಅಳವಡಿಸಿರುವ ನಳಗಳು ಸುಸಿತ್ಥಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರು ಕೂರುವ ಆಸನಗಳು ಹಾಳಾಗಿದ್ದು, ಸಾರ್ವಜನಿಕರಿಗೆ ಸೂಕ್ತ ಆಸನ ವ್ಯವಸ್ಥೆಯನ್ನು ಕಲ್ಪಿಸಬೇಕು. ಬಸ್ ನಿಲ್ದಾಣದ ಒಳಗಡೆ ಇರುವ ಅಂಗಡಿಗಳ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಅಂಗಡಿಯವರಿಗೆ ನೋಟಿಸ್ ನೀಡಬೇಕು. ಅಂದಾಗ ಮಾತ್ರ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಆಗುತ್ತದೆ ಎಂದು ಹೇಳಿದರು.

ಈ ವೇಳೆ ಬಸ್ ನಿಲ್ದಾಣದಲ್ಲಿ ಕುಳಿತ ಮಹಿಳೆಯರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಕುರಿತು ಅಭಿಪ್ರಾಯ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, ಶಕ್ತಿ ಯೋಜನೆಯಿಂದ ಉಚಿತವಾಗಿ ಸ್ವಾವಲಂಬನೆಯೊಂದಿಗೆ ಬಸ್‌ನಲ್ಲಿ ಓಡಾಡಲು ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್‌ಸಾಬ್ ಬಬರ್ಚಿ, ಗದಗ ತಾಲೂಕು ಪಂಚ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ನೀಲಮ್ಮ ಬೋಳಣ್ಣನವರ, ಬಸವರಾಜ ಕಡೇಮನಿ, ಶಂಭು ಕಾಳೆ, ಸಂಗಮೇಶ ಕೆರಕಲಮಟ್ಟಿ, ಸಾವಿತ್ರಿ ಹೂಗಾರ, ದೇವರಡ್ಡಿ ತಿರ್ಲಾಪುರ, ಗಣೇಶ ಮಟ್ಟಾಲಿ, ಸಂಗಮೇಶ ಹಾದಿಮನಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಮಹಿಳಾ ಮತ್ತು ಮಕ್ಕಳ ನಿರೂಪಣಾಧಿಕಾರಿ ರಾಧಾ ಮಣ್ಣೂರು, ಹುಲಿಗೆಮ್ಮ ಜೋಗೆರ ಹಾಜರಿದ್ದರು.

ಶಕ್ತಿ ಯೋಜನೆಯಿಂದಾಗಿ ಪ್ರತಿದಿನ ಸಾವಿರಾರು ಮಹಿಳೆಯರು ಸ್ವಾವಲಂಬನೆಯಿಂದ ಓಡಾಟ ನಡೆಸುತ್ತಿದ್ದಾರೆ. ಹಾಗಾಗಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯಗಳು ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳು ಗಮನ ಹರಿಸಬೇಕು. ಬಸ್ ನಿಲ್ದಾಣದಲ್ಲಿರುವ ಆಸನ ವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಪ್ಲಾಸ್ಟಿಕ್ ಮುಕ್ತ ಬಸ್ ನಿಲ್ದಾಣ ಮಾಡಬೇಕು.

– ಕೃಷ್ಣಗೌಡ ಎಚ್.ಪಾಟೀಲ.

ಗ್ಯಾರಂಟಿ ಪ್ರಾಧಿಕಾರದ ಸದಸ್ಯರು.

ಧಾರ್ಮಿಕ ಗ್ರಂಥಗಳು ಮನುಕುಲದ ಒಳಿತು ಬಯಸಿವೆ

ವಿಜಯಸಾಕ್ಷಿ ಸುದ್ದಿ, ಗದಗ: ವೇದಗಳ ತತ್ವ-ಸಂದೇಶಗಳ ತಳಹದಿಯ ಮೇಲೆ ರಚನೆಗೊಂಡ ಎಲ್ಲ ಧಾರ್ಮಿಕ ಗ್ರಂಥಗಳು ಮನುಕುಲದ ಒಳಿತನ್ನು ಬಯಸಿವೆ ಎಂದು ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಶ್ರೀಮತ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.

ಅವರು ಬುಧವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಹಮ್ಮಿಕೊಂಡಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಕುಲಕ್ಕೆ ಉಪದೇಶ ಮಾಡುವ ಸಿದ್ಧಾಂತ ಶಿಖಾಮಣಿ ಪವಿತ್ರ ಗ್ರಂಥವನ್ನು ವೀರಶೈವ ಧರ್ಮಗ್ರಂಥ ಎಂದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗೆ ಅಷ್ಟೇ ಸೀಮಿತವಾಗಿಲ್ಲ. ಎಲ್ಲ ಧರ್ಮದವರಿಗೂ ಒಳ್ಳೆಯ ಸಂದೇಶ ನೀಡಿ ಮಾರ್ಗದರ್ಶಿ ಆಗಬಲ್ಲ ಗ್ರಂಥವಾಗಿದೆ ಎಂದು ಬಣ್ಣಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು, ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ, ಮನುಷ್ಯನ ಮನೋಸ್ಥಿತಿಯನ್ನು ದೈವತ್ವದೆಡೆಗೆ ಸಾಗಿಸುವ ಸನಾತನ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿಯಾಗಿದೆ ಎಂದರು.

ಡಾ. ಶೇಖರ ಸಜ್ಜನರ ಹಾಗೂ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಪೀರಸಾಬ ಕೌತಾಳ ಅವರು ಧರ್ಮ, ದೇವರು, ಭಕ್ತಿ ಹಾಗೂ ಭಾರತೀಯ ಸಂಸ್ಕೃತಿ, ಪರಂಪರೆ ಕುರಿತು ಮಾತನಾಡಿದರು. ಅತಿಥಿಗಳಾಗಿ ಹಾಲಪ್ಪ ಬಣವಿ, ತೋಟಪ್ಪ ಗಾಣಿಗೇರ, ಅಶೋಕ ಮಂದಾಲಿ, ಗಿರಿಯಪ್ಪ ಅಸೂಟಿ, ಸುರೇಶ ಮರಳಪ್ಪನವರ, ಬಿ.ಎಸ್. ವಡ್ಡಟ್ಟಿ, ಬಸವಂತಪ್ಪ ನ್ಯಾವಳ್ಳಿ, ಈಶಪ್ಪ ಕಿರೇಸೂರ, ಗಂಗಾಧರ ಗಾಣಿಗೇರ, ರಮೇಶ ಮಂದಾಲಿ, ಶಿವಣ್ಣ ಹಿಟ್ನಳ್ಳಿ, ಎಸ್.ವ್ಹಿ. ಪವಾಡಿಗೌಡ್ರ, ಸೋಮನಗೌಡ ಪಾಟೀಲ ಆಗಮಿಸಿದ್ದರು.

ಪ್ರಶಾಂತ ಶಾಬಾದಿಮಠ, ಸಂತೋಷ ಅಬ್ಬಿಗೇರಿ, ಜ್ಯೋತಿ ಚಳಗೇರಿ, ಉಮಾಪತಿ ಭೂಸನೂರಮಠ, ಮಹಾಂತೇಶ ಮುಧೋಳ, ಗಿರಿಜಮ್ಮ ಅಬ್ಬಿಗೇರಿ, ಶಂಕರಗೌಡ ಸಂಕನಗೌಡರ, ಡಾ.ವಾಣಿ ಶಿವಪೂರ, ಶೈಲಾ ಹಿರೇಮಠ, ಗುರುಸ್ವಾಮಿಮಠ, ಶಾರದಾ ತಡಸದ ಸೇರಿದಂತೆ ಅತಿಥಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು.

ದೀಪ್ತಿ ಪಾಠಕ ಅವರಿಂದ ಪ್ರಾರ್ಥನೆ, ಸಂಗೀತ ಜರುಗಿತು. ಎಂ.ಸಿ. ಐಲಿ ಸ್ವಾಗತಿಸಿದರು. ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.

ನೇತೃತ್ವ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು ಮಾತನಾಡಿ, ಗದಗ-ಬೆಟಗೇರಿಯ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಪ್ರತಿ ವರ್ಷ ಕಾಶೀ ಜಗದ್ಗುರುಗಳಿಂದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಿ ಗದಗ ಪರಿಸರದ ಜನರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಜಾಗೃತಗೊಳಿಸಿದ್ದಾರೆ. ಪೂಜ್ಯರ ಪ್ರವಚನದಿಂದಾಗಿ ಧರ್ಮ ಜಾಗೃತಿ, ಜನ ಜಾಗೃತಿಯಾಗಿದೆ ಎಂದರು.

ವೈದ್ಯ ವೃತ್ತಿ ಅತ್ಯಂತ ಪವಿತ್ರ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ವೈದ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಸೇರಿ ವೈದ್ಯರನ್ನು ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ವೈದ್ಯ ವೃತ್ತಿ ಅತ್ಯಂತ ಪವಿತ್ರವಾಗಿದೆ. ವೈದ್ಯರು ತಮ್ಮ ಬದುಕಿನ ಜಂಜಾಟಗಳು, ಒತ್ತಡ, ಸ್ವಾರ್ಥ, ಕೌಟುಂಬಿಕ ಬದುಕಿನ ಕಷ್ಟ-ಸುಖಗಳನ್ನು ಬದಿಗೊತ್ತಿ ಜೀವ ಉಳಿಸುವ ಕಾರ್ಯ ಮಾಡುತ್ತಾರೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರ ತಾಳ್ಮೆ, ಸಹನೆ, ಕಾರ್ಯಕ್ಷಮತೆ ಪ್ರಶಂಸನೀಯ. ಸಮಾಜ ವೈದ್ಯರನ್ನು ಗೌರವದಿಂದ ಕಾಣಬೇಕು ಎಂದರು.

ವೈದ್ಯರಾದ ಡಾ. ಉಮೇಶ ಕೆಳಮನೆ, ಡಾ. ಪ್ರವೀಣ ಸಜ್ಜನರ, ಡಾ. ಬಿಸ್ಮಿಲ್ಲಾ ಗೌರವ ಸ್ವೀಕರಿಸಿದರು. ತಿಪ್ಪಣ್ಣ ಸಂಶಿ, ಕಲ್ಲಪ್ಪ ಗಂಗಣ್ಣವರ, ಹನಮಂತ ಹರಿಜನ, ಜಗದೀಶ ಹುಲಗೆಮ್ಮನವರ, ಭರಮಗೌಡ ರೊಟ್ಟಿಗವಾಡ, ದಾದಾಪೀರ ಮುಚ್ಚಾಲೆ, ಗಿರೀಶ ಕಲ್ಮಠ, ಕಾರ್ತಿಕ ದೊಡ್ಡಮನಿ, ಮಾಲತೇಶ ಗುಡಸಲಮನಿ, ಫಕ್ಕೀರೇಶ ಭಜಕ್ಕನವರ, ನೀಲಪ್ಪ ಬಸಾಪುರ, ಗುಡ್ಡಪ್ಪ ಮತ್ತೂರ ಇದ್ದರು.

ಜುಲೈ 4ರಂದು ನಾಟಕ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತೋಂಟದಾರ್ಯ ಕಲಾರಂಗದ ಸಹಯೋಗದಲ್ಲಿ ಜುಲೈ 4ರಂದು ಸಂಜೆ 6.30 ಗಂಟೆಗೆ ಗದುಗಿನ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಧಾತ್ರಿ ರಂಗಸಂಸ್ಥೆ ಸಿರಿಗೇರಿ ಇವರು `ಸೋರುತಿಹುದು ಸಂಬಂಧ’ ಎಂಬ ನಾಟಕವನ್ನು ಪ್ರದರ್ಶಿಸಲಿದ್ದಾರೆ.

ಆಧುನಿಕತೆಯ ಭರದಲ್ಲಿ, ಹೆಣ್ಣು, ಹೊನ್ನು, ಮಣ್ಣಿನ ವ್ಯಾಮೋಹಗಳಿಗೆ ಒಳಗಾಗುವ ಮನುಷ್ಯ, ತನ್ನೊಳಗಿನ ಮನುಷ್ಯತ್ವವನ್ನು ಮರೆತು, ಸಂಬಂಧಗಳಿಗೆ ಸ್ಪಂದಿಸದೆ ತನ್ನ ಯಾಂತ್ರಿಕ ಬದುಕನ್ನು ಮುಂದುವರೆಸುತ್ತಿದ್ದಾನೆ. ಅಂತಹ ಮನುಷ್ಯನ ಸಂಬಂಧಗಳ ಕೊರತೆ ಮತ್ತು ನಿರೀಕ್ಷೆಗಳನ್ನು ನಾಟಕ ಎಳೆ ಎಳೆಯಾಗಿ ಬಿಚ್ಚಿಡುತ್ತದೆ.

ರಂಗಾಸಕ್ತರು, ಪರಿಷತ್ತಿನ ಸದಸ್ಯರು, ಕನ್ನಡಾಭಿಮಾನಿಗಳು ಆಗಮಿಸಬೇಕೆಂದು ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ ಹಾಗೂ ಡಿ.ಎಸ್. ಬಾಪುರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವಿ.ಪ ಸದಸ್ಯ ರವಿಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಶಾಲಿನಿ ರಜನೀಶ್ ಅವರು ಒಬ್ಬ ಐಎಎಸ್ ಅಧಿಕಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಂಬ ಅರಿವಿಲ್ಲದೇ ಎನ್. ರವಿಕುಮಾರ್ ಅವರು ನಾಲಿಗೆ ಹರಿಬಿಟ್ಟು ಅವರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅವರ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ರವಿಕುಮಾರ್ ಅವರ ಹೇಳಿಕೆ ವಿರುದ್ಧ ದೂರು ದಾಖಲಿಸಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಉಪಾಧ್ಯಕ್ಷ ಎಚ್. ಕೊಟ್ರೇಶ್, ಸದಸ್ಯರಾದ ಲಾಟಿ ದಾದಪೀರ, ಜಾಕೀರ್ ಹುಸೇನ್, ಉದ್ದಾರ ಗಣೇಶ, ಮುಖಂಡರಾದ ಬಸವರಾಜ ಸಂಗಪ್ಪನವರ್, ಬಂಡ್ರಿ ಗೋಣಿಬಸಪ್ಪ, ಇಸ್ಮಾಯಿಲ್ ಎಲಿಗಾರ, ಎಚ್.ವಸಂತಪ್ಪ, ಟಿಎಚ್‌ಎಂ ಮಂಜುನಾಥ, ಈಶಪ್ಪ, ಬಿ. ವಾಗೀಶ, ಗುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಮತ್ತೂರು ಬಸವರಾಜ, ಎಚ್.ಟಿ. ಹನುಮಂತ, ಅಲಗಿಲವಾಡದ ವಿಶ್ವನಾಥ, ದೇವೇಂದ್ರಗೌಡ, ಮಾರಪ್ಪ, ಕೊಟೇಪ್ಪ, ಎಲ್. ಮಂಜ್ಯಾನಾಯ್ಕ್, ಜಯಲಕ್ಷ್ಮೀ, ಸುಮಾ ಜಗದೀಶ ಸೇರಿದಂತೆ ಇತರರು ಇದ್ದರು.

ಪ್ರಕೃತಿಯನ್ನು ಉಳಿಸಿ ಭವಿಷ್ಯವನ್ನು ಬೆಳಗಿಸಿ

ವಿಜಯಸಾಕ್ಷಿ ಸುದ್ದಿ, ಗದಗ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಅದನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಕೃತಿಯ ಮಡಿಲು ತಾಯಿಯ ಮಡಿಲಿಗೆ ಸಮಾನ. ಈ ತಾಯಿಯ ಮಡಿಲನ್ನು ತಂಪಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮಲ್ಲಿಕಾರ್ಜುನ್ ಪೂಜಾರ ಹೇಳಿದರು.

ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ಹರ್ತಿಯಲ್ಲಿ ಪರಿಸರ ದಿನಾಚರಣೆ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಬಿ. ಕಣಗಿನಹಾಳ ಮಾತನಾಡಿ, ಪ್ರಕೃತಿ ನಮಗೆ ಏನು ಕೊಟ್ಟಿತು ಎಂಬುದಕ್ಕಿಂತ ಅದಕ್ಕೆ ನಾವು ಏನು ಕೊಟ್ಟೆವು ಎಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅರ್ಥೈಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಬಿಸಿ ಟ್ರಸ್ಟ್ನ ಯೋಜನಾಧಿಕಾರಿ ಉಮಾ ಎನ್.ಜಿ ಪಾಲ್ಗೊಂಡಿದ್ದರು. ಕಿರಣ್ ಮಹೇಂದ್ರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ರಾಜೇಶ್ವರಿ ಜಕ್ಕನಗೌಡ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ಅಶ್ವಿನಿ ದೇಸಾಯಿ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ವಿರೇಶ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

error: Content is protected !!