Home Blog Page 483

ಬಿಗ್ ಬಾಸ್ ಫಿನಾಲೆಗೂ ಮುನ್ನ ವೈರಲ್ ಆದ ಸುದೀಪ್–ನಾರಾಯಣ ಗೌಡ ಭೇಟಿ: ಕರವೇ ಸ್ಪಷ್ಟನೆ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಕುತೂಹಲ ತೀವ್ರವಾಗಿದೆ. ಗಿಲ್ಲಿ ನಟ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಧ್ರುವಂತ್ ಮತ್ತು ಮ್ಯೂಟೆಂಟ್ ರಘು ಅವರು ಫಿನಾಲೆ ವಾರದವರೆಗೆ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿರುವ ಫೋಟೋ ವೈರಲ್ ಆಗಿದ್ದು, ಬಿಗ್ ಬಾಸ್ ಸಂಬಂಧಿತ ಊಹಾಪೋಹಗಳಿಗೆ ಕಾರಣವಾಗಿದೆ. ಕೆಲವರು ಈ ಭೇಟಿಯನ್ನು ಅಶ್ವಿನಿ ಗೌಡ ಪರವಾಗಿ ಲಾಬಿ ನಡೆಸಲು ನಡೆದ ಭೇಟಿ ಎಂದು ಪ್ರಚಾರ ಮಾಡಿದ್ದಾರೆ.

ಈ ಕುರಿತು ಕರವೇ ಮುಖಂಡ ಧರ್ಮಣ್ಣ ಅವರು ಸ್ಪಷ್ಟನೆ ನೀಡಿದ್ದು, ಈ ಭೇಟಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.   “ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಹ್ವಾನ ನೀಡಲು ಸುದೀಪ್ ಮನೆಗೆ ಹೋಗಿದ್ದರು. ಈ ಹಿಂದೆಯೇ ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮದುವೆ ಪತ್ರಿಕೆ ನೀಡಲಾಗಿದೆ. ಸುದೀಪ್ ಅವರಿಗೂ ಆಹ್ವಾನ ನೀಡಲು ಭೇಟಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನು, “ಈ ಫೋಟೋವನ್ನು ಆಧರಿಸಿ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದರಲ್ಲಿ ನಾರಾಯಣ ಗೌಡ ಮತ್ತು ಸುದೀಪ್ ಅವರ ವಿರೋಧಿಗಳ ಪಾತ್ರ ಇದೆ. ಇದು ಖಂಡನೀಯ” ಎಂದು ಧರ್ಮಣ್ಣ ಹೇಳಿದ್ದಾರೆ.

ಬಿಗ್ ಬಾಸ್ ಮನೆಯ ಆಟದ ವಿಚಾರಕ್ಕೆ ಬಂದ್ರೆ, ಈ ಬಾರಿ ಗಿಲ್ಲಿ ನಟ ಅವರ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಹಲವರು ಗಿಲ್ಲಿಯೇ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನವರಿ 17 ಮತ್ತು 18ರಂದು ನಡೆಯುವ ಗ್ರ್ಯಾಂಡ್ ಫಿನಾಲೆಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಸ್ಪರ್ಧಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಗಿಲ್ಲಿಗೆ ಹೆಚ್ಚಿನ ಬೆಂಬಲ ಕಂಡುಬರುತ್ತಿದೆ.

ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಸಾಲಗಾರರ ಕಾಟ; ತಂಗಿ ವಿರುದ್ಧವೇ ದೂರು ಕೊಟ್ಟ ಖ್ಯಾತ ನಟಿ!

0

ಕನ್ನಡ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಕಾರುಣ್ಯಾ ರಾಮ್ ಅವರು ತಮ್ಮ ಸ್ವಂತ ತಂಗಿ ಸಮೃದ್ಧಿ ರಾಮ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಕಾರುಣ್ಯಾ ಅವರು ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಂಗಿ ಸಮೃದ್ಧಿ, ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಮತ್ತು ಸಾಗರ್ ಎಂಬವರ ವಿರುದ್ಧ ಆರೋಪ ಮಾಡಿದ್ದಾರೆ. ದೂರು ಪ್ರಕಾರ, ಸಮೃದ್ಧಿ ರಾಮ್ ಮೇಕಪ್ ಆರ್ಟಿಸ್ಟ್ ಆಗಿದ್ದು, ಬೆಟ್ಟಿಂಗ್ ಮೂಲಕ ಸುಮಾರು ₹25 ಲಕ್ಷ ಸಾಲ ಮಾಡಿಕೊಂಡಿದ್ದು, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದು, ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನು ತೀರಿಸಲು ಮನೆಯ ಚಿನ್ನ ಮತ್ತು ಹಣವನ್ನು ವಂಚನೆ ಮಾಡಿದ್ದಾರೆ.

ಪರಿಣಾಮ, ಸಾಲಗಾರರು ಮನೆಗೆ ಬಂದು ಪೀಡಿಸುತ್ತಿದ್ದಾರೆ ಮತ್ತು ಹಣವನ್ನು ಬಳಸಿಕೊಂಡಿದ್ದ ವಿಚಾರವನ್ನು ಪ್ರಶ್ನಿಸಿದ್ದಕ್ಕಾಗಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೇ ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶ, ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ NCR ದಾಖಲಾಗಿತ್ತು. ಈಗ ಕಾರುಣ್ಯ ರಾಮ್‌ ಸಹೋದರಿ ವಿರುದ್ಧ ಸಿಸಿಬಿಯಲ್ಲಿ ದೂರು ನೀಡಿದ್ದಾರೆ.

ಕುಂದಗೋಳದಲ್ಲಿ ಆಘಾತಕಾರಿ ಘಟನೆ; ಶಾಲಾ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ!

0

ಹುಬ್ಬಳ್ಳಿ:- ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಹುಡುಗಾಟ ಆಡುವ ವಯಸ್ಸಿನ ಮಕ್ಕಳೇ ಸಹಪಾಠಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕುಂದಗೋಳ ಪಟ್ಟಣದ ನಿಂಗರಾಜ್ ಅವಾರಿ (16) ಕೊಲೆಯಾದ ಬಾಲಕ. ಕುಂದಗೋಳ ಪಟ್ಟಣದ ಅನುದಾನಿತ ಶಾಲೆಯಲ್ಲಿ ಎಸ್​​ಎಸ್​ಎಲ್​ಸಿ ಓದುತ್ತಿದ್ದ ಆತನನ್ನು ಅದೇ ಶಾಲೆಯ ಓರ್ವ ಬಾಲಕ ಸೇರಿದಂತೆ ಮೂವರು ಬಾಲಕರು ಸೇರಿ ಕೊಲೆ ಮಾಡಿದ್ದಾರೆ.

ಬಾಲಕನ ಕೊಲೆಗೆ ಕಾರಣವಾಗಿದ್ದು ಶಾಲೆಯಲ್ಲಿ ನಡೆದ ಕ್ಷುಲಕ ವಿಚಾರ ಎನ್ನಲಾಗಿದೆ. ನಿಂಗರಾಜ್ ಮತ್ತು ಆತನ ಕೆಲ‌ ಸ್ನೇಹಿತರಿಗೆ ಎರಡು ದಿನದ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಇದನ್ನೇ ದೊಡ್ಡದಾಗಿ ಮಾಡಿದ ಆತನ ಸಹಪಾಠಿಯೋರ್ವ ಎಸ್​​ಎಸ್​ಎಲ್​ಸಿ ಡ್ರಾಪ್ ಔಟ್ ಆಗಿದ್ದ ಇನ್ನಿಬ್ಬರು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ.

ಕೊಲೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಂದಗೋಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಬಾಲಕರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ: ಫೋನ್ ಸ್ವಿಚ್ ಆಫ್ ಮಾಡಿ ‘ಕೈ’ ನಾಯಕ ರಾಜೀವ್ ಗೌಡ ಪರಾರಿ!

0

ಚಿಕ್ಕಬಳ್ಳಾಪುರ:- ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮೃತ ಗೌಡ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಗೌಡ ಅವರ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್‌ಗಳು 132, 351(3), 56, 224, 352 ಮತ್ತು 353(2) ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ರಾಜೀವ್ ಗೌಡ ಎರಡು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ.

ಅವರ ಬಂಧನಕ್ಕಾಗಿ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಅವರ ನಿರ್ದೇಶನದಂತೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿಎನ್ ಪೊಲೀಸ್‌ಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹೃದಯಾಘಾತದಿಂದ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮನಂದ ಸ್ವಾಮೀಜಿ ವಿಧಿವಶ!

0

ರಾಯಚೂರು: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಸಮೀಪದ ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿ ಸಿದ್ದರಾಮನಂದ ಸ್ವಾಮೀಜಿ (50) ಅವರು ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಹೃದಯ ಸ್ತಂಭನದಿಂದ ಅಸ್ತಂಗತರಾಗಿದ್ದಾರೆ.

ಇತ್ತೀಚೆಗಷ್ಟೇ ಜ.12, 13 ಹಾಗೂ 14ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಸ್ವಾಮೀಜಿ ಯಶಸ್ವಿಯಾಗಿ ಆಯೋಜಿಸಿದ್ದರು. ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರ ಭಾರೀ ಜನಮನ್ನಣೆ ಪಡೆದಿತ್ತು. ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪವಿಲ್ಲದೆ ನಡೆದ ಈ ಕಾರ್ಯಕ್ರಮಕ್ಕೆ ವಿವಿಧ ವಲಯಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು.

ಕಳೆದ ಒಂದು ವಾರದಿಂದ ನಿರಂತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಸ್ವಾಮೀಜಿ ಸರಿಯಾಗಿ ಊಟ ಹಾಗೂ ನಿದ್ರೆ ಮಾಡಲಾಗದೆ ದೌರ್ಬಲ್ಯಕ್ಕೆ ಒಳಗಾಗಿದ್ದರು. ಬುಧವಾರ ರಾತ್ರಿ ಲೋ ಬಿಪಿಯಿಂದ ಬಳಲಿದ ಅವರನ್ನು ತಕ್ಷಣ ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ. ಸಿದ್ದರಾಮನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ–ಜಯಮ್ಮ ದಂಪತಿಯ ಎರಡನೇ ಪುತ್ರರಾಗಿದ್ದ ಅವರ ಮೂಲ ಹೆಸರು ಮೋಹನ್ ಪ್ರದಾನ. 18ನೇ ವಯಸ್ಸಿನಲ್ಲಿ ಮನೆ ತೊರೆದ ಅವರು ಜೈನ, ಕ್ರೈಸ್ತ ಹಾಗೂ ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೂ ಒಳಗಾಗಿದ್ದರು.

ಶರಣ ಸಾಹಿತ್ಯದ ಜೊತೆಗೆ ವಿವಿಧ ಧರ್ಮಗಳ ಅಧ್ಯಯನ ನಡೆಸಿದ ಸ್ವಾಮೀಜಿ ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲಕಾಲ ವಿದ್ಯಾಭ್ಯಾಸ ಮಾಡಿದ ಬಳಿಕ ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ಸ್ವಾಮೀಜಿಯಾಗಿ ವಾಸ್ತವ್ಯ ಮಾಡಿದರು. ನಂತರ 2011ರಲ್ಲಿ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಬಳಿ ಕಾಗಿನೆಲೆ ಕನಕಗುರುಪೀಠವನ್ನು ಸ್ಥಾಪಿಸಿದರು.

ಕಲಬುರಗಿ ವಿಭಾಗದಾದ್ಯಂತ ಕನಕಗುರುಪೀಠಗಳ ಸ್ಥಾಪನೆಗೆ ಕಾರಣರಾಗಿದ್ದ ಅವರು ಪ್ರತಿ ವರ್ಷ ಜನವರಿ 12, 13, 14ರಂದು ಹಾಲುಮತ ಸಂಸ್ಕೃತಿ ವೈಭವವನ್ನು ಆಯೋಜಿಸುತ್ತಿದ್ದರು. ಶಾಲಾ ಮಕ್ಕಳಿಗೆ ಉಚಿತ ದಾಸೋಹ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳ ಮೂಲಕ ಸಮಾಜಸೇವೆಗೆ ಮಹತ್ವದ ಕೊಡುಗೆ ನೀಡಿದ್ದರು. ಜೊತೆಗೆ ಸಾಹಿತ್ಯ ಹಾಗೂ ಸಮಾಜಸೇವೆಯಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ ಹಾಗೂ ಸಿದ್ಧಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದರು. ಸ್ವಾಮೀಜಿಗಳ ನಿಧನದಿಂದ ಹಾಲುಮತ ಸಮುದಾಯ ಹಾಗೂ ಅಪಾರ ಶಿಷ್ಯವೃಂದದಲ್ಲಿ ತೀವ್ರ ಶೋಕದ ಛಾಯೆ ಆವರಿಸಿದೆ.

ಗಿಲ್ಲಿಗೆ ನನ್ನ ಗಂಡ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಇಲ್ಲ ಎಂದ ರಕ್ಷಿತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ವಾರಕ್ಕೆ ಕಾಲಿಟ್ಟಿದ್ದು, ಈಗಾಗಲೇ ಏಳು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಬುಧವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು, ಮನೆಯೊಳಗಿನ ಪ್ರತಿ ಬೆಳವಣಿಗೆಗೂ ಪ್ರೇಕ್ಷಕರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಗಿಲ್ಲಿಯ ಕಾಮಿಡಿ ಮತ್ತು ವರ್ತನೆ ಪ್ರೇಕ್ಷಕರಿಗೆ ವಿಶೇಷವಾಗಿ ಇಷ್ಟವಾಗಿದ್ದು, ಅವರು ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಈ ಸೀಸನ್‌ನಲ್ಲಿ ಸಹ ಬಿಗ್ ಬಾಸ್ ಮನೆಯಲ್ಲಿ ಹಲವು ಜೋಡಿಗಳು ರೂಪುಗೊಂಡಿವೆ. ಅದರಲ್ಲಿ ಗಿಲ್ಲಿ ಮತ್ತು ಕಾವ್ಯಾ ಜೋಡಿ ಅತ್ಯಂತ ಜನಪ್ರಿಯವಾಗಿದೆ. ಆದರೆ ಇತ್ತೀಚೆಗೆ ರಕ್ಷಿತಾ ಕೂಡ ಗಿಲ್ಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಗಿಲ್ಲಿ, ಕಾವ್ಯಾ ಅಥವಾ ಮುಂಚೆ ಸ್ಪಂದನಾ ಜೊತೆ ಮಾತನಾಡಿದಾಗ ರಕ್ಷಿತಾ ಬೇಜಾರು ಮಾಡಿಕೊಳ್ಳುತ್ತಿದ್ದ ಘಟನೆಗಳು ಕಂಡುಬಂದಿವೆ. ಕೆಲ ಸಂದರ್ಭಗಳಲ್ಲಿ ಗಿಲ್ಲಿ ಜೊತೆ ತಾವೊಬ್ಬರೇ ಕುಳಿತುಕೊಳ್ಳಲು ಇತರ ಬೀನ್ ಬ್ಯಾಗ್‌ಗಳನ್ನು ತೆಗೆದು ಹಾಕಿದ ಘಟನೆಯೂ ನಡೆದಿದೆ.

ಒಮ್ಮೆ ರಕ್ಷಿತಾ “ಗಿಲ್ಲಿಯಂಥ ಬಾಯ್‌ಫ್ರೆಂಡ್ ಬೇಕು” ಎಂದು ಹೇಳಿದ್ದರು. ಈ ವಿಚಾರ ವೀಕೆಂಡ್ ಎಪಿಸೋಡ್‌ನಲ್ಲಿ ಚರ್ಚೆಗೆ ಒಳಪಟ್ಟ ಬಳಿಕ, ರಕ್ಷಿತಾರ ನಿಲುವಿನಲ್ಲಿ ಬದಲಾವಣೆ ಕಂಡುಬಂದಿದೆ.

ಗಿಲ್ಲಿ ಖಾಲಿ ಸಮಯದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಸಿನಿಮಾ ಕತೆ ಹೇಳುವುದು ಅಭ್ಯಾಸ. ಇತ್ತೀಚೆಗೆ ತಮ್ಮ ಹಾಗೂ ಕಾವ್ಯಾರ ಕಥೆಯನ್ನು ಕತೆಯ ರೂಪದಲ್ಲಿ ಹೇಳುವಾಗ, ರಕ್ಷಿತಾರ ವಿಷಯವನ್ನೂ ಸೇರಿಸಿ, ‘ರಕ್ಷಿತಾ ನನ್ನನ್ನು ಇಷ್ಟಪಡುತ್ತಾರೆ’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ರಕ್ಷಿತಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ನನಗೆ ಗಿಲ್ಲಿ ಇಷ್ಟವಿಲ್ಲ. ನನ್ನ ಗಂಡ ಅಥವಾ ಬಾಯ್‌ಫ್ರೆಂಡ್ ಆಗುವ ಅರ್ಹತೆ ಅವರಿಗೆ ಇಲ್ಲ. ನಾನು ಜೀವನ ಸಂಗಾತಿಯಲ್ಲಿ ಹುಡುಕುವ ಗುಣಗಳು ಗಿಲ್ಲಿಯ ಬಳಿ ಇಲ್ಲ” ಎಂದು ಹೇಳಿದ್ದಾರೆ.

ನಂತರ ಕಾವ್ಯಾ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಕ್ಷಿತಾ, “ಗಿಲ್ಲಿಯ ಕೆಲ ಗುಣಗಳು ಇಷ್ಟವಾದರೂ, ಅವರ ಕೆಲವು ಸ್ವಭಾವ ನನಗೆ ಒಪ್ಪುತ್ತಿಲ್ಲ. ಅವುಗಳನ್ನು ಬದಲಾಯಿಸಿಕೊಳ್ಳಿ ಎಂದು ನಾನು ಹೇಳಿದ್ದೇನೆ. ಗಿಲ್ಲಿ ಬಗ್ಗೆ ಕೆಲ ಕಂಪ್ಲೇಂಟ್‌ಗಳೂ ನನಗೆ ಇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಫಿನಾಲೆ ಹಂತದಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಸಂಬಂಧಗಳ ಈ ಬದಲಾವಣೆ ಇದೀಗ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.


ಬೇಗೂರಿನ ಬಳಿ ಅಗ್ನಿ ದುರಂತ; ತಪ್ಪಿದ ಭಾರೀ ಅನಾಹುತ!

0

ಬೆಂಗಳೂರು :- ರಾಜಧಾನಿ ಬೆಂಗಳೂರಿನ ಬೇಗೂರಿನ ಬಳಿ ಅಗ್ನಿ ಅವಘಡ ಸಂಭವಿಸಿದೆ.

ಪ್ಲಾಸ್ಟಿಕ್ ವೇಸ್ಟೇಜ್ ಗಳನ್ನ ಡಂಪ್ ಮಾಡಿದ್ದ ಬೇಗೂರಿನ ಡಂಪಿಂಗ್ ಯಾರ್ಡ್ ನಲ್ಲಿ ಬೆಳಗಿನ ಜಾವ 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಬೆನ್ನಲ್ಲೇ ಸುಮಾರು ನಾಲ್ಕು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.

ಅದೃಷ್ಟಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಸಿಬ್ಬಂದಿಗಳು ಕೂಡ ಪರಿಶೀಲನೆ ಮಾಡುತ್ತಿದ್ದಾರೆ.

ತಪ್ಪಿದ ಚಾಲಕನ ನಿಯಂತ್ರಣ; ಡಿವೈಡರ್ ಗೆ ಲಾರಿ ಡಿಕ್ಕಿ, ವಾಹನ ಸಂಪೂರ್ಣ ನಜ್ಜುಗುಜ್ಜು!

0

ಬೆಂಗಳೂರು:- ಅತಿವೇಗವಾಗಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ತಡರಾತ್ರಿ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ನಡೆದಿದೆ.

ಕಬ್ಬಿಣದ ಕಂಬಿಗಳ ಲೋಡ್ ತುಂಬಿಕೊಂಡು ಜಾಲಹಳ್ಳಿ ಮಾರ್ಗದಿಂದ ಬರುತ್ತಿದ್ದ ಲಾರಿ, ಗೊರಗುಂಟೆಪಾಳ್ಯ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರಿ ಪೊಲೀಸರು ಲಾರಿಯನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ.

ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಕಣವಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆಂದು ರಾಷ್ಟ್ರಮಟ್ಟದ ತೀರ್ಪುಗಾರ ಜಿತೇಂದ್ರ ಸುಣಗಾರ ತಿಳಿಸಿದ್ದಾರೆ.

ಗುಜರಾತಿನಲ್ಲಿ ಅಮೆಚೂರ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 14 ವರ್ಷದೊಳಗಿನ ರಾಷ್ಟ್ರಮಟ್ಟದ ಖೋಖೋ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ಭಾಗವಹಿಸಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕಣವಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕಾ ಹನಮಂತಪ್ಪ ಸುಳ್ಳದ ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಕ್ಕಾಗಿ ಕಣವಿ ಹೊಸೂರು ಗ್ರಾಮಗಳ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, ಕಣವಿ ಹೊಸೂರು ಗ್ರಾಮಗಳ ಗುರು-ಹಿರಿಯರು, ಸಂಘ, ಸಂಸ್ಥೆಗಳು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.

ಕರ್ನಾಟಕ ರಾಜ್ಯ ಖೋಖೋ ಅಮೆಚೂರ್ ಸಂಸ್ಥೆ ಬೆಂಗಳೂರು, ರಾಜ್ಯ ಕಾರ್ಯದರ್ಶಿಗಳಾದ ಚಿನ್ನಮೂರ್ತಿ, ಸಹ ಕಾರ್ಯದರ್ಶಿ ಜಾಡರ, ಗದಗ ಜಿಲ್ಲಾ ಅಮೆಚೂರ್ ಖೋಖೋ ಸಂಸ್ಥೆಯ ಅಧ್ಯಕ್ಷರಾದ ಅಂದಪ್ಪ ಉಳ್ಳಾಗಡ್ಡಿ ಹಾಗೂ ಕಾರ್ಯದರ್ಶಿ ಮುತ್ತಪ್ಪ ಮಾಳಶೆಟ್ಟಿ, ತರಬೇತಿ ನೀಡಿದ ವೈ.ಬಿ. ಗೋವಣ್ಣವರ ಗುರುಗಳನ್ನು ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಯುವದಿನ ಸಮಾರಂಭ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸನಾತನ ಸಂಸ್ಕೃತಿಯ ಶಬ್ದಗಳಿಗೆ ಭಾವ ತುಂಬಿ ಜಗದಾದ್ಯಂತ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ಪ್ರೇಮವನ್ನು ಬೆಸೆಯುವ, ಆಧ್ಯಾತ್ಮಿಕ ಚಿಂತನಾ ಶಿಖರವನ್ನು ತಲುಪಲು ಬೇಕಾದ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಸನಾತನ ಸಂಸ್ಕೃತಿಯ ಭಾವಗೀತವೇ ಆಗಿದ್ದಾರೆ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರ್‌ಮನ್ ಪ್ರೊ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ‘ರಾಷ್ಟ್ರೀಯ ಯುವದಿನ ಸಮಾರಂಭ’ದಲ್ಲಿ ಮಾತನಾಡಿದರು.

ಪ್ರೊ. ರಾಹುಲ್ ಒಡೆಯರ್ ಮಾತನಾಡುತ್ತಾ, ವಿವೇಕಾನಂದರ ಪಾತ್ರ ನಿರ್ಮಾಣದ ಉಲ್ಲೇಖ ಮಾಡಿ, ಕೇವಲ ಉದ್ಯೋಗ ಪಡೆಯುವ ಉದ್ದೇಶದಿಂದ ಅಲ್ಲದೆ, ಸಮಾಜಕ್ಕೆ ಉಪಯುಕ್ತವಾಗುವ ದೃಷ್ಟಿಯಿಂದ ಯುವಕರು ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಯುವದಿನದ ಆಚರಣೆಯ ಪೂರ್ವದಲ್ಲಿ ಆಡಳಿತಾಧಿಕಾರಿಗಳಾದ ಎಂ.ಸಿ. ಹಿರೇಮಠ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಮ್ಮ ಭಾವನಮನಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ನಿರ್ದೇಶಕರಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ ಉಪಸ್ಥಿತರಿದ್ದರು.

error: Content is protected !!