Home Blog Page 50

ಬೆಂಗಳೂರು ಏರ್‌ಪೋರ್ಟ್ ​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!

0

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಚಿನ್ನ ಮತ್ತು ವಜ್ರಾಭರಣ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಮಾಯವಾಗಿವೆ.

ಬೆಂಗಳೂರಿನಿಂದ ದುಬೈಗೆ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ ಮೂಲದ ಮಹಿಳೆಯೊಬ್ಬರಿಗೆ ಈ ಕಹಿ ಅನುಭವವಾಗಿದೆ. ಅವರ ಬ್ಯಾಗ್‌ ನಲ್ಲಿದ್ದ ಸುಮಾರು 790 ಗ್ರಾಂ ಚಿನ್ನ ಹಾಗೂ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ವಜ್ರಾಭರಣಗಳು ಕಳುವಾಗಿವೆ ಎಂದು ತಿಳಿದುಬಂದಿದೆ.

ಪ್ರಯಾಣಿಕರ ಬ್ಯಾಗ್‌ನಲ್ಲಿ ಚಿನ್ನಾಭರಣಗಳು ಇರುವುದನ್ನು ವಿಮಾನ ನಿಲ್ದಾಣದ ಸಿಬ್ಬಂದಿ ತಪಾಸಣೆ ನಡೆಸಿ ಟ್ಯಾಗ್ ಮಾಡಿದ್ದರು. ಆದರೆ ದುಬೈ ತಲುಪಿದ ನಂತರ ಬ್ಯಾಗ್ ಪರಿಶೀಲಿಸಿದಾಗ ಆಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಕಳ್ಳತನದ ಹಿಂದೆ ವಿಮಾನ ನಿಲ್ದಾಣದ ಸಿಬ್ಬಂದಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸಂತ್ರಸ್ತ ಮಹಿಳೆ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಂದು ಅಂಡರ್-19 ವಿಶ್ವಕಪ್ ಫೈನಲ್: ಭಾರತ–ಇಂಗ್ಲೆಂಡ್ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ!

0

2026ರ ಅಂಡರ್-19 ಕ್ರಿಕೆಟ್ ವಿಶ್ವಕಪ್ ಫೈನಲ್ ಹಂತ ತಲುಪಿದ್ದು, ಇಂದು ಹೊಸ ಚಾಂಪಿಯನ್ ಯಾರು ಎಂಬುದು ನಿರ್ಧಾರವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ಯುವ ತಂಡಗಳು ಹರಾರೆಯ ಐತಿಹಾಸಿಕ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಪ್ರಶಸ್ತಿ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಪಂದ್ಯಾವಳಿಯಿಡೀ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಫೈನಲ್‌ಗೆ ಅರ್ಹತೆ ಪಡೆದಿವೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಅಫ್ಘಾನಿಸ್ತಾನ ವಿರುದ್ಧ 311 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತು. ಇದು ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ವಿ ರನ್ ಚೇಸ್ ಆಗಿದೆ.

ಈ ಪಂದ್ಯದಲ್ಲಿ ಆರನ್ ಜಾರ್ಜ್ ಶತಕದೊಂದಿಗೆ ಮಿಂಚಿದರೆ, ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು. ಟೂರ್ನಿಯುದ್ದಕ್ಕೂ ಭಾರತ ಒಂದೂ ಪಂದ್ಯವನ್ನು ಸೋಲದೇ ಅಜೇಯವಾಗಿ ಸಾಗಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಮತೋಲನ ಹೊಂದಿದೆ. ಈ ಮೂಲಕ ಟೀಮ್ ಇಂಡಿಯಾ ಆರನೇ ಬಾರಿ ಅಂಡರ್-19 ವಿಶ್ವಕಪ್ ಟ್ರೋಫಿ ಗೆಲ್ಲುವ ಗುರಿ ಹೊಂದಿದೆ.

ಇತ್ತ ಇಂಗ್ಲೆಂಡ್ ತಂಡವೂ ಭರ್ಜರಿ ಫಾರ್ಮ್‌ನಲ್ಲಿದೆ. ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ರೋಚಕ ಗೆಲುವು ಸಾಧಿಸಿದೆ. ಸಮತೋಲನಗೊಂಡ ತಂಡ ಸಂಯೋಜನೆ ಹಾಗೂ ಪಂದ್ಯ ತಿರುಗಿಸುವ ಆಟಗಾರರನ್ನು ಹೊಂದಿರುವ ಇಂಗ್ಲೆಂಡ್, ಎರಡನೇ ಬಾರಿ ಅಂಡರ್-19 ವಿಶ್ವಕಪ್ ಗೆಲ್ಲುವ ಕನಸಿನಲ್ಲಿದೆ.

ಅಂಕಿಅಂಶಗಳ ದೃಷ್ಟಿಯಿಂದ ನೋಡಿದರೆ, ಭಾರತ–ಇಂಗ್ಲೆಂಡ್ ನಡುವಿನ ಮುಖಾಮುಖಿ ದಾಖಲೆಯಲ್ಲಿ ಟೀಮ್ ಇಂಡಿಯಾ ಮೇಲುಗೈ ಹೊಂದಿದೆ. ಎರಡೂ ತಂಡಗಳು ಇದುವರೆಗೆ ಒಟ್ಟು 55 ಪಂದ್ಯಗಳಲ್ಲಿ ಎದುರಿಸಿದ್ದು, ಭಾರತ 41 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇಂಗ್ಲೆಂಡ್ 13 ಪಂದ್ಯಗಳನ್ನು ಗೆದ್ದುಕೊಂಡಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.

ಬೈಕ್‌ಗೆ ಕಾರು ಗುದ್ದಿ ಎಸ್ಕೇಪ್: ಹಿರಿಯ ನಟ ಮಣಿಯನ್‌ಪಿಳ್ಳ ರಾಜು ಬಂಧನ

ಹಿರಿಯ ಮಲಯಾಳಂ ನಟ ಹಾಗೂ ನಿರ್ಮಾಪಕ ಮಣಿಯನ್‌ಪಿಳ್ಳ ರಾಜು ಅವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಿರುವನಂತಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣದಲ್ಲಿ, ಗಾಯಾಳುಗಳಿಗೆ ನೆರವು ನೀಡದೇ ಸ್ಥಳದಿಂದ ಪರಾರಿಯಾದ ಆರೋಪದ ಮೇಲೆ ನಟನ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ.

ಫೆಬ್ರವರಿ 5ರಂದು ಗುರುವಾರ ರಾತ್ರಿ ತಿರುವನಂತಪುರದ ವಝುತಕಾಡ್ ಪ್ರದೇಶದ ತ್ರಿವೇಂಡ್ರಮ್ ಕ್ಲಬ್ ಬಳಿ ಈ ಘಟನೆ ನಡೆದಿದೆ. ರಾಜು ಅವರು ಚಲಾಯಿಸುತ್ತಿದ್ದ KL-01-CJ-0004 ಸಂಖ್ಯೆಯ ಕಾರು, ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಸಾಗುತ್ತಿದ್ದ ಸೂರಜ್ ಮತ್ತು ನಿವೇದಿತ್ ಕೃಷ್ಣ ಎಂಬ ಸುಮಾರು 20 ವರ್ಷದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಒಬ್ಬ ಯುವಕನ ಕಾಲಿನ ಮೂಳೆ ಮುರಿದಿದ್ದು, ಮತ್ತೊಬ್ಬನಿಗೆ ತಲೆ ಮತ್ತು ಬೆನ್ನುಮೂಳೆಯ ಗಂಭೀರ ಗಾಯಗಳಾಗಿವೆ.

ಅಪಘಾತದ ನಂತರ ನಟ ಮಣಿಯನ್‌ಪಿಳ್ಳ ರಾಜು ಅವರು ಗಾಯಾಳುಗಳಿಗೆ ಯಾವುದೇ ನೆರವು ನೀಡದೇ ಸ್ಥಳದಿಂದ ಹೊರಟುಹೋಗಿದ್ದಾರೆ ಎನ್ನಲಾಗಿದೆ. ಅಪಘಾತ ಸ್ಥಳದಲ್ಲಿ ಬಿದ್ದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ನಟನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ರಾಜು ಅವರು ಶುಕ್ರವಾರ ಬೆಳಿಗ್ಗೆ ಮ್ಯೂಸಿಯಂ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪಘಾತದ ಸಮಯದಲ್ಲಿ ಕಾರು ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ನಟನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅಪಘಾತದ ವೇಳೆ ಮದ್ಯ ಸೇವಿಸಿರುವುದು ದೃಢಪಟ್ಟಲ್ಲಿ ಹೆಚ್ಚುವರಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ನಟ ರಾಜು, “ಬೈಕ್ ಅತಿ ವೇಗವಾಗಿ ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆಯಿತು. ಅಪಘಾತದ ನಂತರ ನಾನು ಗಾಬರಿಗೊಂಡು ಅಲ್ಲಿಂದ ಹೊರಟೆ,” ಎಂದು ಹೇಳಿದ್ದಾರೆ. ತಾನು ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವುದು, ಚಿಕನ್ ಗುನ್ಯಾದಿಂದ ಬಳಲುತ್ತಿರುವುದು ಹಾಗೂ ಪತ್ನಿ ಮನೆಯಲ್ಲಿ ಒಬ್ಬರೇ ಇದ್ದ ಕಾರಣ ಸ್ಥಳದಲ್ಲೇ ಉಳಿಯಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಬೇರೆವರಿಗೆ ಕರೆ ಮಾಡಿ ಗಾಯಾಳುಗಳಿಗೆ ಸಹಾಯ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸದ್ಯ ಪೊಲೀಸರು BNS ಮತ್ತು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ನಿರ್ಲಕ್ಷ್ಯದ ಚಾಲನೆ ಹಾಗೂ ಅಪಘಾತದ ಮಾಹಿತಿ ನೀಡದೇ ಪರಾರಿಯಾದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ವರದಿ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಲಿದೆ.

WPL 2026: ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ RCB: ಸಿಂಹಿಣಿಯರಿಗೆ ಹಣದ ಸುರಿಮಳೆ! ಡೆಲ್ಲಿಗೂ ಭರ್ಜರಿ ಬಹುಮಾನ

0

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸತತ ನಾಲ್ಕನೇ ಬಾರಿ ಫೈನಲ್ ತಲುಪಿದ್ದ ಡೆಲ್ಲಿ ತಂಡಕ್ಕೆ ಈ ಬಾರಿ ಕೂಡ ಟ್ರೋಫಿ ಕೈ ತಪ್ಪಿದ್ದು, ರನ್ನರ್‌-ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 203 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ RCB ತಂಡ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಸ್ಫೋಟಕ ಇನ್ನಿಂಗ್ಸ್‌ಗಳ ನೆರವಿನಿಂದ ಕೊನೆಯ ಓವರ್‌ನಲ್ಲಿ ಗೆಲುವು ಸಾಧಿಸಿತು.

ಈ ಜಯದೊಂದಿಗೆ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಋತುವಿನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳೊಂದಿಗೆ ಶ್ರೇಷ್ಠ ಸಾಧನೆ ಮಾಡಿದ ತಂಡವಾಗಿ ಹೊರಹೊಮ್ಮಿತು.

ಜೆಮಿಮಾ ರೋಡ್ರಿಗಸ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಎಂಟು ಪಂದ್ಯಗಳಲ್ಲಿ ನಾಲ್ಕು ಜಯ ಹಾಗೂ ನಾಲ್ಕು ಸೋಲುಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಡೆಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರೂ, ಅಂತಿಮ ಪಂದ್ಯದಲ್ಲಿ ಸೋಲು ಕಂಡಿತು.

ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಆವೃತ್ತಿ 2023ರಲ್ಲಿ ನಡೆದಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. ಅಂದು ನೀಡಿದಂತೆ ಈ ಬಾರಿಯೂ ವಿಜೇತ ತಂಡಕ್ಕೆ ₹6 ಕೋಟಿ ಬಹುಮಾನ ನಿಗದಿಪಡಿಸಲಾಗಿತ್ತು. ಚಾಂಪಿಯನ್ RCB ತಂಡವು ₹6 ಕೋಟಿ ಮೊತ್ತವನ್ನು ಪಡೆದುಕೊಂಡಿತು. ರನ್ನರ್‌-ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ₹3 ಕೋಟಿ ಬಹುಮಾನ ಲಭಿಸಿತು.

ಪಂದ್ಯಾವಳಿಯ ಅತ್ಯುತ್ತಮ ಆಟಗಾರಿಗೆ ₹5 ಲಕ್ಷ ಬಹುಮಾನ ನೀಡಲಾಯಿತು. ಆರೆಂಜ್ ಕ್ಯಾಪ್‌, ಪರ್ಪಲ್ ಕ್ಯಾಪ್‌, ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಆಟಗಾರ್ತಿ ಹಾಗೂ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ್ತಿಗೂ ತಲಾ ₹5 ಲಕ್ಷ ಬಹುಮಾನ ನೀಡಲಾಯಿತು. ಫೈನಲ್ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್‌ ಆಡಿದ ಸ್ಮೃತಿ ಮಂಧಾನ ಅವರಿಗೆ ₹2.5 ಲಕ್ಷ ವಿಶೇಷ ಬಹುಮಾನ ಲಭಿಸಿತು.

Power Cut Bengaluru; ಬೆಂಗಳೂರಿನ ಹಲವೆಡೆ ಶನಿವಾರ ಪವರ್ ಕಟ್; ಇಲ್ಲಿದೆ ಕರೆಂಟ್ ಇಲ್ಲದ ಏರಿಯಾಗಳ ಪಟ್ಟಿ!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಫೆಬ್ರವರಿ 7ರ ಶನಿವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ರಾಜಾಜಿನಗರ ವಿಭಾಗದ ವಿಜಯನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಅದರಂತೆ ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಾಕ್ಷಿಪಾಳ್ಯ, ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ, ತಿಮ್ಮೇನಹಳ್ಳಿ, ಎಂ.ಸಿ. ಲೇಔಟ್, ಮಾರೇನಹಳ್ಳಿ ಲೇಔಟ್, ವಿನಾಯಕ ಲೇಔಟ್, ಕಾವೇರಿಪುರ, ರಂಗನಾಥಪುರ, ಕೆಸಿಜಿ ಕೈಗಾರಿಕಾ ಪ್ರದೇಶ, ನಂಜಪ್ಪ ಕೈಗಾರಿಕಾ ಎಸ್ಟೇಟ್ ಸುತ್ತಮುತ್ತ ವಿದ್ಯುತ್‌ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಮಾದಪ್ಪನ ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗುವಂತಿಲ್ಲ: ಅರಣ್ಯ ಸಿಬ್ಬಂದಿ ಆದೇಶ

0

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಹೈಅಲರ್ಟ್ ಘೋಷಿಸಿ ಭದ್ರತಾ ವಲಯವನ್ನು ಸಕ್ರಿಯಗೊಳಿಸಿದೆ. ಶಿವರಾತ್ರಿ ಜಾತ್ರೆಗೆ ಕೆಲವೇ ದಿನಗಳು ಉಳಿದಿರುವುದರಿಂದ ಭಕ್ತರ ಜೀವ ರಕ್ಷಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರವೀಣ್ ಎಂಬ ಭಕ್ತ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆ ಮಾರ್ಗದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆಗೆ ಆದೇಶ ನೀಡಿದೆ.

ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಪ್ರತಿ ಕಿಲೋಮೀಟರ್‌ಗೆ ಒಂದೊಂದು ಭದ್ರತಾ ತಂಡವನ್ನು ನಿಯೋಜಿಸಲಾಗಿದ್ದು, ಒಟ್ಟು 8 ತಂಡಗಳು ಹೈಅಲರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ತಂಡಗಳಿಗೆ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ನೀಡಲಾಗಿದ್ದು, ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ಅರಣ್ಯ ವಾಚರ್‌ಗಳು ಮತ್ತು ಎಪಿಸಿ ಕ್ಯಾಂಪ್ ಸಿಬ್ಬಂದಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದಾರೆ.

ಭಕ್ತರು ಒಬ್ಬೊಬ್ಬರಾಗಿ ಅಥವಾ ಒಂಟಿಯಾಗಿ ಕಾಡಿನೊಳಗೆ ತೆರಳಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಪಾದಯಾತ್ರೆ ಗುಂಪು ಗುಂಪಾಗಿ ಮಾತ್ರ ನಡೆಯಬೇಕು. ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಡ್ರೋನ್ ಕ್ಯಾಮರಾಗಳ ಮೂಲಕವೂ ನಿರಂತರ ನಿಗಾವಹಿಸಲಾಗುತ್ತಿದೆ.

ಫೆಬ್ರವರಿ 14ರಿಂದ 18ರವರೆಗೆ ನಡೆಯುವ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಯಾವುದೇ ಅನಾಹುತ ಮರುಕಳಿಸದಂತೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಮನ್ವಯದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ.

ಜನವರಿ 21ರಂದು ಮುಂಜಾನೆ ಮಂಡ್ಯದ ಚೀರನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 150ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆ ವೇಳೆ ತೆರಳುತ್ತಿದ್ದಾಗ ಚಿರತೆ ಪ್ರವೀಣ್ ಕುಮಾರ್ ಮೇಲೆ ದಾಳಿ ನಡೆಸಿ ಕತ್ತು ಸೀಳಿ ಕಾಡಿನೊಳಕ್ಕೆ ಎಳೆದೊಯ್ದಿತ್ತು. ನಂತರ ನಡೆದ ಕಾರ್ಯಾಚರಣೆಯಲ್ಲಿ ಚಿರತೆಯನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ.

ಡ್ರಗ್ಸ್ ಜಾಲದೊಳಗೆ ತಮಿಳು ಸಿನಿಮಾ ಲೋಕ: ನಟಿ, ಸಹಾಯಕ ನಿರ್ದೇಶಕಿ ಸೇರಿ ಎಂಟು ಮಂದಿ ಅರೆಸ್ಟ್

ಚಿತ್ರರಂಗ ಮತ್ತು ಮಾದಕ ವಸ್ತುಗಳ ನಡುವಿನ ಕಪ್ಪು ನಂಟು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್‌ನಲ್ಲಿ ಆಗಾಗ ಕೇಳಿಬರುವ ಡ್ರಗ್ಸ್ ಪ್ರಕರಣಗಳು ಇದೀಗ ತಮಿಳು ಚಿತ್ರರಂಗಕ್ಕೂ ತಲುಪಿದ್ದು, ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ನಟಿ ಅಂಜು ಕೃಷ್ಣ ಹಾಗೂ ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಬಂಧನಕ್ಕೊಳಗಾಗಿದ್ದಾರೆ. ಜಾನಿ ಚೆಲ್ಲಪ್ಪ ನೇತೃತ್ವದ ತಂಡ ಈ ಡ್ರಗ್ಸ್ ಜಾಲವನ್ನು ಭೇದಿಸಿದೆ.

ವಲಸರವಕ್ಕಂ ಪ್ರದೇಶದಲ್ಲಿ 33 ವರ್ಷದ ವಿಘ್ನೇಶ್ವರನ್ ಎಂಬಾತನನ್ನು ಬಂಧಿಸಿದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿತು. ವಿಚಾರಣೆ ವೇಳೆ ಆತ ವೆಂಕಟೇಶ್ ಎಂಬ ವ್ಯಕ್ತಿಯಿಂದ ಡ್ರಗ್ಸ್ ಖರೀದಿಸುತ್ತಿದ್ದುದನ್ನು ಬಾಯ್ಬಿಟ್ಟಿದ್ದಾನೆ.

ಈ ಸುಳಿವು ಆಧರಿಸಿ ಪೊಲೀಸರು ಗ್ರಾಹಕರಂತೆ ವರ್ತಿಸಿ ವೆಂಕಟೇಶ್ ಅನ್ನು ಸಂಪರ್ಕಿಸಿದರು. ಡ್ರಗ್ಸ್ ಪೂರೈಕೆಗೆ ನಿಗದಿತ ಸ್ಥಳಕ್ಕೆ ಬಂದಾಗ ಆತನನ್ನು ಬಂಧಿಸಲಾಯಿತು. ಆತನಿಂದ ಮೆಥಾಫೆಟಮೈನ್, ಓಜಿ ಗಾಂಜಾ, ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಹಾಗೂ ಒಂಬತ್ತು ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆತನ ಸಂಪರ್ಕಗಳ ಪರಿಶೀಲನೆ ವೇಳೆ ಇನ್ನಷ್ಟು ಹೆಸರುಗಳು ಹೊರಬಂದಿದ್ದು, ಇದರೊಂದಿಗೆ ನಟಿ ಅಂಜು ಕೃಷ್ಣ ಮತ್ತು ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಬಂಧನಕ್ಕೆ ಒಳಗಾದರು. ಅಂಜು ಕೃಷ್ಣ ತಮಿಳಿನ ‘ವೆಲ್ಲಿಮಲೈ’ ಹಾಗೂ ಮಲಯಾಳಂನ ‘ಆರೊ’, ‘ಆಕಾಶಂ ಕದನ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿತ್ರರಂಗದಲ್ಲಿ ಮಾದಕ ವಸ್ತು ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.

ರಕ್ಷಣಾ ತಂತ್ರಜ್ಞಾನ ಸಹಯೋಗ ಬಲಪಡಿಸಲು ಭಾರತ–ಅಮೆರಿಕ ಮಹತ್ವದ ಮಾತುಕತೆ

0

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ತಂತ್ರಜ್ಞಾನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆಗಳು ನಡೆದಿವೆ. ಈಗಾಗಲೇ ಇರುವ ಮತ್ತು ಮುಂದಿನ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ರಕ್ಷಣಾ ತಂತ್ರಜ್ಞಾನಗಳಲ್ಲಿ ಪರಸ್ಪರ ಸಹಯೋಗವನ್ನು ವಿಸ್ತರಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಫೆಬ್ರವರಿ 3 ಮತ್ತು 4ರಂದು ನವದೆಹಲಿಯಲ್ಲಿ 24ನೇ ಇಂಡೋ–ಯುಎಸ್ ಜಂಟಿ ತಾಂತ್ರಿಕ ಗುಂಪಿನ ಸಮಗ್ರ ಸಭೆಯನ್ನು ಆಯೋಜಿಸಿತ್ತು. ಈ ಸಭೆಗೆ ಡಿಆರ್‌ಡಿಒ ಮಹಾನಿರ್ದೇಶಕಿ ಚಂದ್ರಿಕಾ ಕೌಶಿಕ್ ಹಾಗೂ ಅಮೆರಿಕದ ಸಂಶೋಧನೆ ಮತ್ತು ಎಂಜಿನಿಯರಿಂಗ್ ವಿಭಾಗದ ಅಧೀನ ಕಾರ್ಯದರ್ಶಿ ಮೈಕೆಲ್ ಫ್ರಾನ್ಸಿಸ್ ಡಾಡ್ ಅವರ ಕಚೇರಿಯ ತಂತ್ರಜ್ಞಾನ ಸಹಾಯಕ ಕಾರ್ಯದರ್ಶಿ ಸಹ-ಅಧ್ಯಕ್ಷತೆ ವಹಿಸಿದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಅಕ್ಟೋಬರ್ 2025ರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸಹಿ ಮಾಡಿದ ಭಾರತ–ಅಮೆರಿಕ ಪ್ರಮುಖ ರಕ್ಷಣಾ ಪಾಲುದಾರಿಕೆ ಚೌಕಟ್ಟಿನ ದೃಷ್ಟಿಕೋನ ಮತ್ತು ನೀತಿ ಮಾರ್ಗದರ್ಶನಕ್ಕೆ ಅನುಗುಣವಾಗಿ ಈ ಸಮಗ್ರ ಸಭೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಸಹಕಾರದ ಪ್ರಗತಿಯನ್ನು ನಿಯೋಗಗಳು ಪರಿಶೀಲಿಸಿವೆ. ಈ ಸಂಬಂಧ ಎದುರಾಗುತ್ತಿರುವ ಸವಾಲುಗಳ ಕುರಿತು ಚರ್ಚಿಸಲಾಗಿದೆ. ವಿಕಸನಗೊಳ್ಳುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ನಿರ್ಣಾಯಕ ಹಾಗೂ ಉದಯೋನ್ಮುಖ ರಕ್ಷಣಾ ತಂತ್ರಜ್ಞಾನಗಳಲ್ಲಿ ಸಹಯೋಗವನ್ನು ಇನ್ನಷ್ಟು ಬಲಪಡಿಸುವ ಪ್ರಸ್ತಾಪಗಳ ಮೇಲೂ ಪರಿಶೀಲನೆ ನಡೆಸಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮಗಳಲ್ಲಿ ವಿಶ್ವವಿದ್ಯಾಲಯ–ಸಂಯೋಜಿತ ಸಂಶೋಧನಾ ಕೇಂದ್ರಗಳು, ರಕ್ಷಣಾ ಪ್ರಯೋಗಾಲಯಗಳು ಮತ್ತು ಕೈಗಾರಿಕೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕುರಿತು ವಿಶೇಷ ಗಮನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಊಟ ಮಾಡುವಾಗ ಬೆವರು ಬರುವುದು ಮಧುಮೇಹದ ಲಕ್ಷಣವೇ? ಇಲ್ಲಿದೆ ಉತ್ತರ

0

ಊಟ ಮಾಡುವ ವೇಳೆ ಕೆಲವರಿಗೆ ಹಣೆಯ ಮೇಲೆ ಹೆಚ್ಚು ಬೆವರು ಬರುತ್ತಿರುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದೆ. ಮಸಾಲೆಯುಕ್ತ ಅಥವಾ ಬಿಸಿ ಆಹಾರ ಸೇವಿಸುವಾಗ ಈ ರೀತಿ ಆಗುವುದು ಸಹಜವಾದರೂ, ಪ್ರತೀ ಬಾರಿ ಊಟ ಮಾಡುವಾಗಲೇ ಅಥವಾ ತಣಿದ ಆಹಾರ ಸೇವಿಸುವಾಗಲೂ, ಚಳಿಯ ವಾತಾವರಣದಲ್ಲಿಯೂ ಬೆವರುವುದು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ವೈದ್ಯಕೀಯ ಭಾಷೆಯಲ್ಲಿ ಊಟ ಮಾಡುವಾಗ ಬೆವರು ಬರುವ ಸಮಸ್ಯೆಯನ್ನು ಗಸ್ಟೇಟರಿ ಸ್ವೆಟಿಂಗ್ (Gustatory Sweating) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾಗಿರುವವರು ಅಥವಾ ತುಂಬಾ ಮಸಾಲೆಯುಕ್ತ ಆಹಾರ ಸೇವಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಅಡಗಿರುವ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.

ಮಧುಮೇಹದ ಲಕ್ಷಣವೇ?
ಡಾ. ಹಿಮಾಂಶು ಅವರ ಪ್ರಕಾರ, ಊಟ ಮಾಡುವಾಗ ಹೆಚ್ಚು ಬೆವರುವುದು ಕೆಲವರಲ್ಲಿ ಮಧುಮೇಹದ ಆರಂಭಿಕ ಲಕ್ಷಣವಾಗಿರಬಹುದು. ಮಧುಮೇಹದಿಂದ ನರಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಊಟ ಸಮಯದಲ್ಲಿ ಬೆವರುವುದು ಕಾಣಿಸಿಕೊಳ್ಳಬಹುದು. ಆದರೆ ಇದು ಎಲ್ಲ ಮಧುಮೇಹ ರೋಗಿಗಳಲ್ಲಿಯೂ ಕಂಡುಬರುವುದಿಲ್ಲ. ಜೊತೆಗೆ ಥೈರಾಯ್ಡ್ ಸಮಸ್ಯೆ ಅಥವಾ ಹಾರ್ಮೋನುಗಳ ಅಸಮತೋಲನದಿಂದಲೂ ಈ ರೀತಿ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆಯೇ?
ಹೌದು. ಮಕ್ಕಳು ಮಸಾಲೆಯುಕ್ತ ಆಹಾರ ಸೇವಿಸಿದಾಗ ಜೀರ್ಣಕ್ರಿಯೆ ವೇಳೆ ದೇಹದ ಉಷ್ಣತೆ ಹೆಚ್ಚಾಗಿ ಬೆವರುವುದು ಸಹಜ. ಆದರೆ ಸಾಮಾನ್ಯ ಆಹಾರ ಸೇವಿಸುವಾಗಲೂ ಮಗು ಹೆಚ್ಚು ಬೆವರುತ್ತಿದ್ದರೆ, ತೂಕ ವೇಗವಾಗಿ ಇಳಿಕೆಯಾಗುತ್ತಿದ್ದರೆ ಅಥವಾ ಊಟ ಸಮಯದಲ್ಲಿ ಹೃದಯ ಬಡಿತ ಅಸಹಜವಾಗಿ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.

ಊಟ ಮಾಡುವಾಗ ಬೆವರುವುದನ್ನು ಕಡಿಮೆ ಮಾಡಲು ಸಲಹೆಗಳು:

  • ತುಂಬಾ ಮಸಾಲೆಯುಕ್ತ ಆಹಾರ ಸೇವನೆ ಕಡಿಮೆ ಮಾಡಬೇಕು
  • ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಡಬೇಕು
  • ದಿನಕ್ಕೆ ಕನಿಷ್ಠ 7–8 ಗ್ಲಾಸ್ ನೀರು ಕುಡಿಯಬೇಕು

ಊಟ ಮಾಡುವಾಗ ಸ್ವಲ್ಪ ಪ್ರಮಾಣದಲ್ಲಿ ಬೆವರುವುದು ಸಾಮಾನ್ಯವಾದರೂ, ಅದು ನಿಯಮಿತವಾಗಿ ಹೆಚ್ಚಾಗಿ ಕಾಣಿಸಿದರೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಚೆಕ್ ಬೌನ್ಸ್ ಪ್ರಕರಣ: ತಿಹಾರ್ ಜೈಲ್​​ಗೆ ಸರೆಂಡರ್ ಆದ ಬಾಲಿವುಡ್ ಖ್ಯಾತ ಹಾಸ್ಯ ನಟ

ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ ಕಠಿಣ ಸಂದೇಶ ನೀಡಿದೆ. ಯಾವುದೇ ರಿಲೀಫ್ ನೀಡಲು ನಿರಾಕರಿಸಿರುವ ನ್ಯಾಯಾಲಯದ ಆದೇಶದಂತೆ, ನಟ ಗುರುವಾರ ಸಂಜೆ ತಿಹಾರ್ ಜೈಲಿನ ಮುಂದೆ ಶರಣಾಗಿದ್ದಾರೆ.

ಜನವರಿ 5ರಂದು ಸಂಜೆ ನಾಲ್ಕು ಗಂಟೆಗೆ ರಾಜ್ಪಾಲ್ ಯಾದವ್ ಜೈಲಿಗೆ ಆಗಮಿಸಿದ್ದು, ನಂತರ ಅಗತ್ಯ ಕಾನೂನು ಪ್ರಕ್ರಿಯೆ ನಡೆಸಿದ ಅಧಿಕಾರಿಗಳು ಅವರನ್ನು ಬಂಧನದಲ್ಲಿಟ್ಟಿದ್ದಾರೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ದಾಖಲಿಸಿದ್ದ ಈ ಪ್ರಕರಣದಲ್ಲಿ, ರಾಜ್ಪಾಲ್ ಯಾದವ್ ಹಾಗೂ ಅವರ ಪತ್ನಿ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಪ್ರಕರಣದಲ್ಲಿ ಇಬ್ಬರನ್ನೂ ದೋಷಿಗಳೆಂದು ಘೋಷಿಸಿತ್ತು. 2019ರಲ್ಲಿ ಸೆಷನ್ ಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿತ್ತು.

ನಂತರ, ರಾಜ್ಪಾಲ್ ಯಾದವ್ ಈ ಆದೇಶವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಕರಣವನ್ನು ಸೆಟಲ್ ಮಾಡಲು ಯತ್ನಿಸುತ್ತಿದ್ದೇವೆ ಎಂಬ ವಾದದ ಮೇರೆಗೆ 2024ರಲ್ಲಿ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಹಲವು ಅವಕಾಶಗಳಿದ್ದರೂ ಹಣವನ್ನು ಪಾವತಿಸದ ಹಿನ್ನೆಲೆ ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ಇನ್ನೂ ಕೆಲವು ವಾರಗಳ ಕಾಲಾವಕಾಶ ನೀಡುವಂತೆ ರಾಜ್ಪಾಲ್ ಪರ ವಕೀಲರು ಮನವಿ ಮಾಡಿದ್ದರೂ, ಹೈಕೋರ್ಟ್ ಅದನ್ನು ತಿರಸ್ಕರಿಸಿತು. ಬುಧವಾರ ನಾಲ್ಕು ಗಂಟೆಗಳ ಒಳಗೆ ಶರಣಾಗುವಂತೆ ಕೋರ್ಟ್ ನಿರ್ದೇಶನ ನೀಡಿತ್ತು.

ಈ ವೇಳೆ ನ್ಯಾಯಾಲಯ ನೀಡಿದ ಟಿಪ್ಪಣಿ ಗಮನ ಸೆಳೆದಿದೆ. “ಯಾವುದೇ ವ್ಯಕ್ತಿ ನಟನಾಗಿದ್ದಾನೆ, ಪ್ರಸಿದ್ಧನಾಗಿದ್ದಾನೆ ಅಥವಾ ನಿರ್ದಿಷ್ಟ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ವಿಶೇಷ ಸೌಲಭ್ಯ ನೀಡುವುದಿಲ್ಲ. ಒಂದೇ ತಪ್ಪು ಮರುಮರು ನಡೆದರೆ ಅದನ್ನು ಸಹಿಸಲಾಗದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಪ್ರಕರಣವು ಸೆಲೆಬ್ರಿಟಿಗಳಿಗೂ ಕಾನೂನು ಒಂದೇ ಎಂಬ ಸಂದೇಶವನ್ನು ಮತ್ತೊಮ್ಮೆ ಬಲವಾಗಿ ನೀಡಿದೆ.

error: Content is protected !!