Home Blog Page 54

ಮದ್ಯಪ್ರಿಯರ ಗಮನಕ್ಕೆ: ಬಿಯರ್‌ ಕೂಡ ಸುರಕ್ಷಿತವಲ್ಲ – ತಜ್ಞರ ಎಚ್ಚರಿಕೆ

0

ಕೆಲವರು ಬಿಯರ್ ಅನ್ನು ಇತರ ಮದ್ಯಪಾನಗಳಿಗಿಂತ ಕಡಿಮೆ ಹಾನಿಕಾರಕ ಎಂದು ನಂಬುತ್ತಾರೆ, ಪ್ರತಿದಿನ ಒಂದು ಅಥವಾ ಎರಡು ಕ್ಯಾನ್ ಬಿಯರ್ ಕುಡಿಯುವುದರಿಂದ ದೇಹಕ್ಕೆ ದೊಡ್ಡ ಹಾನಿ ಆಗುವುದಿಲ್ಲ ಎಂದು ಭಾವಿಸುತ್ತಾರೆ.

ಬಿಯರ್‌ನಲ್ಲಿ ಅಲ್ಕೋಹಾಲ್ ಇದ್ದು, ಲಿವರ್ ಮೂಲಕ ಶೋಧನೆಯಾಗುವ ಪ್ರಕ್ರಿಯೆಯಲ್ಲಿ ಲಿವರ್ ಕೋಶಗಳಿಗೆ ಹಾನಿ ಉಂಟಾಗಬಹುದು. ನಿರಂತರವಾಗಿ ಹೆಚ್ಚು ಅಲ್ಕೋಹಾಲ್ ಸೇವನೆ ಲಿವರ್‌ನ ಶೋಧನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಲಿವರ್ ಸಂಬಂಧಿತ ರೋಗಗಳ ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

ಅಲ್ಕೋಹಾಲ್ ಸೇವನೆಯು ಮಧುಮೇಹ, ಹೊಟ್ಟೆ ಸಮಸ್ಯೆ, ದೀರ್ಘಕಾಲದ ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಯಾವುದೇ ಪ್ರಮಾಣದ ಅಲ್ಕೋಹಾಲ್ ಕೂಡ ಸಂಪೂರ್ಣ ಸುರಕ್ಷಿತವಲ್ಲ. ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಲ್ಕೋಹಾಲ್ ಅನ್ನು ಗ್ರೂಪ್ 1 ಕಾರ್ಸಿನೋಜನ್ ಎಂದು ವರ್ಗೀಕರಿಸಿದೆ, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದನ್ನು ಸೂಚಿಸುತ್ತದೆ.

ತಜ್ಞರ ಸಲಹೆ: ಲಿವರ್ ಸಮಸ್ಯೆ ಇರುವವರು ಅಥವಾ ಆರೋಗ್ಯದ ಬಗ್ಗೆ ಚಿಂತಿಸುವವರು ಬಿಯರ್ ಮತ್ತು ಇತರ ಮದ್ಯಪಾನಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು.

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ: ದಿಢೀರ್ ನಿರ್ಧಾರಕ್ಕೆ ಕಾರಣ ಏನು?

0

ದೆಹಲಿ: ಡಿಸೆಂಬರ್‌ನಲ್ಲಿ ಸಂಭವಿಸಿದ ವಿಮಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಈ ಮಧ್ಯಂತರ ಸಂದರ್ಭದಲ್ಲಿಯೇ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡಿದ್ದಾರೆ.

ಎಲ್ಬರ್ಸ್ ಅವರ ರಾಜೀನಾಮೆ ಪತ್ರದಲ್ಲಿ, “ವೈಯಕ್ತಿಕ ಕಾರಣಗಳಿಂದ ಇಂದು ಜಾರಿಗೆ ಬರುವಂತೆ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ನೋಟಿಸ್ ಅವಧಿಯನ್ನು ಮನ್ನಾ ಮಾಡಬೇಕು ಎಂದು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ. 2022 ರ ಸೆಪ್ಟೆಂಬರ್‌ನಿಂದ 2025 ರವರೆಗೆ ಅವರು ಇಂಡಿಗೋ ಸಿಇಒ ಆಗಿ ಸೇವೆ ಸಲ್ಲಿಸಿದ್ದು, ಸಂಸ್ಥೆಯ 10 ಬಿಲಿಯನ್ ಡಾಲರ್ ಆದಾಯವನ್ನು ಮೀರಿಸಿದ ಪ್ರಮುಖ ಸಾಧನೆಗಳಲ್ಲೊಂದು ಫ್ಲೀಟ್ 440 ಕ್ಕೂ ಹೆಚ್ಚು ವಿಮಾನಗಳಿಗೆ ವಿಸ್ತರಿಸುವುದು.

ಆದರೆ, ಡಿಸೆಂಬರ್ 2025 ರ ಭಾರಿ ಕಾರ್ಯಾಚರಣಾ ಕುಸಿತವು ಅವರ ಅಧಿಕಾರಾವಧಿಯನ್ನು ಬಿಕ್ಕಟ್ಟು ಎದುರಿಸಬೇಕಾದ ಪರಿಸ್ಥಿತಿಗೆ ತಂದಿತು. ಪೈಲಟ್ ಆಯಾಸವನ್ನು ತಪ್ಪಿಸಲು ಜಾರಿಗೆ ತರಲಾದ ಹೊಸ ನಿಯಮಗಳ ಪಾಲನೆ ಸಂಬಂಧಿ ಹೋರಾಟದ ಪರಿಣಾಮವೂ ಈ ವಿಮಾನ ಬಿಕ್ಕಟ್ಟಿಗೆ ಕಾರಣವಾಗಿರುವುದಾಗಿ ವರದಿ ಮಾಡಲಾಗಿದೆ.

 

PG ವೈದ್ಯಕೀಯ ಸೀಟು ಹಂಚಿಕೆ: ಉಳಿಕೆ ಸೀಟಿಗೆ ಮಾ.11ರಂದು ಮತ್ತೊಂದು ಸುತ್ತಿನ ಕೌನ್ಸೆಲಿಂಗ್!

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಇನ್ನೂ 783 ಸೀಟು ಉಳಿದಿದ್ದು, ಅವುಗಳ ಹಂಚಿಕೆ ಮಾ.11ರಂದು ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

ಈ ಸೀಟು ಹಂಚಿಕೆಯನ್ನು ಯಾವುದೇ ಸುತ್ತಿನಲ್ಲಿ ಸೀಟು ಪಡೆಯದ ಅಭ್ಯರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಯಾವ ಕಾಲೇಜಿನಲ್ಲಿ, ಯಾವ ಕೋರ್ಸ್‌ನಲ್ಲಿ ಎಷ್ಟು ಸೀಟು ಉಳಿದಿವೆ ಮತ್ತು ಅದರ ಶುಲ್ಕವನ್ನು KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ತಮ್ಮ ಆಯ್ಕೆಯ ಕೋರ್ಸ್‌ನ ಪೂರ್ಣ ಶುಲ್ಕದ ಡಿ.ಡಿ ಅಥವಾ ಚೆಕ್ ಜೊತೆಗೆ ಮಾರ್ಚ್ 11ರಂದು ಮಧ್ಯಾಹ್ನ 3 ಗಂಟೆಯೊಳಗೆ ಮಲ್ಲೇಶ್ವರದ KEA ಕಚೇರಿಗೆ ಸಲ್ಲಿಸಬೇಕು. ಡಿ.ಡಿ/ಚೆಕ್ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮಲ್ಲೇಶ್ವರ, ಬೆಂಗಳೂರು- ಇವರ ಹೆಸರಿನಲ್ಲಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ಡಿ.ಡಿ/ಚೆಕ್ ಮತ್ತು ಎಲ್ಲಾ ಮೂಲ ದಾಖಲೆಗಳನ್ನು ಸಲ್ಲಿಸಿದವರಿಗೆ ಮಾ.11 ರಂದು ಮಧ್ಯಾಹ್ನ 12:30ರಿಂದ ಸಂಜೆ 4 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು. ಅದೇ ದಿನ ಸಂಜೆ 7 ಗಂಟೆಗೆ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಪಡೆದವರು ಮಾ.12ರಂದು ಸಂಜೆ 5:30ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.

 

ಟಿ20 ವಿಶ್ವಕಪ್ ಸಂಭ್ರಮದ ನಡುವೆ ಕುಲ್ದೀಪ್ ಯಾದವ್‌ಗೆ ಕಂಕಣ ಭಾಗ್ಯ

0

ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿರುವ ಟೀಂ ಇಂಡಿಯಾದ ಆಟಗಾರರು ಇದೀಗ ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ.

ಈ ನಡುವೆ ತಂಡದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಅವರು ಮಾರ್ಚ್ 14, 2026ರಂದು ವಂಶಿಕಾ ಅವರೊಂದಿಗೆ ವಿವಾಹವಾಗಲಿದ್ದಾರೆ.

ಉತ್ತರಾಖಂಡದ ಮುಸ್ಸೂರಿಯಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಈ ವಿವಾಹ ಸಮಾರಂಭ ನಡೆಯಲಿದ್ದು, ಕುಟುಂಬದ ಸದಸ್ಯರು ಹಾಗೂ ಆಪ್ತ ಸಂಬಂಧಿಗಳು ಮಾತ್ರ ಭಾಗವಹಿಸಲಿದ್ದಾರೆ. ಮದುವೆಗೆ ಒಂದು ದಿನ ಮೊದಲು, ಅಂದರೆ ಮಾರ್ಚ್ 13ರಂದು ಅರಿಶಿನ ಮತ್ತು ಮೆಹೆಂದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈಗಾಗಲೇ ಜೂನ್ 4, 2025ರಂದು ಲಕ್ನೋದ ಹೋಟೆಲ್‌ನಲ್ಲಿ ಕುಲ್ದೀಪ್ ಯಾದವ್ ಮತ್ತು ವಂಶಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆರಂಭದಲ್ಲಿ ನವೆಂಬರ್ 2025ರಲ್ಲಿ ವಿವಾಹ ನಿಗದಿಯಾಗಿದ್ದರೂ, ಭಾರತೀಯ ಕ್ರಿಕೆಟ್ ತಂಡದ ಬ್ಯುಸಿ ವೇಳಾಪಟ್ಟಿ ಹಾಗೂ ಟಿ20 ವಿಶ್ವಕಪ್ ತಂಡದಲ್ಲಿ ಕುಲ್ದೀಪ್ ಆಯ್ಕೆಯಾದ ಹಿನ್ನೆಲೆಯಲ್ಲಿ ಮದುವೆ ದಿನಾಂಕವನ್ನು ಮುಂದೂಡಲಾಗಿತ್ತು.

ಕುಲ್ದೀಪ್ ಯಾದವ್ ಅವರ ತಂದೆ ರಾಮ್‌ಸಿಂಹ್ ಯಾದವ್ ಅವರು ಮಾರ್ಚ್ 8ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿವಾಹ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಮದುವೆಯ ನಂತರ ಮಾರ್ಚ್ 17ರಂದು ಲಕ್ನೋದ ಹೋಟೆಲ್ ಸೆಂಟ್ರಮ್‌ನಲ್ಲಿ ಭವ್ಯ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಬಿಸಿಸಿಐ ಹಾಗೂ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಗಳು, ಭಾರತೀಯ ಕ್ರಿಕೆಟ್ ತಂಡದ ಹಾಲಿ ಹಾಗೂ ಮಾಜಿ ಆಟಗಾರರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.

31 ವರ್ಷದ ಕುಲ್ದೀಪ್ ಯಾದವ್ ಇದುವರೆಗೆ ಮೂರು ಸ್ವರೂಪಗಳಲ್ಲಿ ಒಟ್ಟು 191 ಪಂದ್ಯಗಳನ್ನು ಆಡಿದ್ದು, 22.50 ಸರಾಸರಿಯಲ್ಲಿ 365 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 9 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 14 ರನ್ ನೀಡಿ ಒಂದು ವಿಕೆಟ್ ಪಡೆದಿದ್ದ ಕುಲ್ದೀಪ್ ಬಳಿಕ ಉಳಿದ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯಲಿಲ್ಲ.

ದೇಹದ ಸೂಚನೆ ನಿರ್ಲಕ್ಷಿಸಬೇಡಿ: ಮೂತ್ರ ಹಿಡಿದರೆ ಆರೋಗ್ಯ ಸಮಸ್ಯೆ!

0

ಇಂದಿನ ವೇಗದ ಜೀವನಶೈಲಿಯಲ್ಲಿ ಕೆಲಸದ ಒತ್ತಡ, ಪ್ರಯಾಣ ಅಥವಾ ಬ್ಯುಸಿ ದಿನಚರಿಯ ಕಾರಣದಿಂದ ಹಲವರು ಮೂತ್ರವನ್ನು ದೀರ್ಘ ಕಾಲ ಹಿಡಿದುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸಿದರೂ, ತಜ್ಞರ ಪ್ರಕಾರ ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಮೂತ್ರದ ಮೂಲಕ ದೇಹದಲ್ಲಿರುವ ಹೆಚ್ಚುವರಿ ನೀರು ಮತ್ತು ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಇದು ದೇಹದ ಸಮತೋಲನ ಕಾಪಾಡುವ ಸಹಜ ಪ್ರಕ್ರಿಯೆಯಾಗಿದೆ. ಆದರೆ ದೀರ್ಘ ಕಾಲ ಮೂತ್ರವನ್ನು ಹಿಡಿದುಕೊಳ್ಳುವುದರಿಂದ ಈ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ದೇಹ ನೀಡುವ ಸೂಚನೆಗಳನ್ನು ನಿರ್ಲಕ್ಷಿಸುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ತಜ್ಞರ ಪ್ರಕಾರ, ಹೆಚ್ಚು ಸಮಯ ಮೂತ್ರವನ್ನು ಹಿಡಿದುಕೊಳ್ಳುವುದರಿಂದ ಮೂತ್ರಾಶಯದ ಮೇಲೆ ಒತ್ತಡ ಹೆಚ್ಚಾಗಬಹುದು. ಇದರಿಂದ ಮೂತ್ರಾಶಯದ ಸ್ನಾಯುಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಜೊತೆಗೆ ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್ (UTI) ಎಂಬ ಸೋಂಕಿನ ಅಪಾಯವೂ ಹೆಚ್ಚಾಗುತ್ತದೆ. ಮೂತ್ರ ದೀರ್ಘ ಕಾಲ ಮೂತ್ರಾಶಯದಲ್ಲೇ ಉಳಿದರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ.

ನಿರಂತರವಾಗಿ ಮೂತ್ರವನ್ನು ಹಿಡಿದುಕೊಳ್ಳುವ ಅಭ್ಯಾಸ ಕೆಲವರಿಗೆ ಹೊಟ್ಟೆಯ ಕೆಳಭಾಗದಲ್ಲಿ ನೋವು ಅಥವಾ ಅಸಹಜತೆಯನ್ನುಂಟುಮಾಡಬಹುದು. ದೀರ್ಘಾವಧಿಯಲ್ಲಿ ಇದರಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು.

ಕೆಲವೊಮ್ಮೆ ತಕ್ಷಣ ವಾಶ್‌ರೂಮ್‌ಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು. ಅಂತಹ ಸಂದರ್ಭಗಳಲ್ಲಿ ಶಾಂತವಾಗಿ ಕುಳಿತುಕೊಳ್ಳುವುದು ಉತ್ತಮ. ಹೆಚ್ಚು ಚಲನವಲನದಿಂದ ಮೂತ್ರಾಶಯದ ಮೇಲೆ ಒತ್ತಡ ಹೆಚ್ಚಾಗಬಹುದು. ಜೊತೆಗೆ ಆ ಸಮಯದಲ್ಲಿ ಹೆಚ್ಚು ನೀರು ಅಥವಾ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು.

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಹಾಗೂ ಎಚ್‌ಒಡಿ ಡಾ. ಎಲ್.ಹೆಚ್. ಘೋಟೇಕರ್ ಅವರ ಪ್ರಕಾರ, ಮೂತ್ರವನ್ನು ದೀರ್ಘ ಕಾಲ ಹಿಡಿದುಕೊಳ್ಳುವುದು ಆರೋಗ್ಯಕರ ಅಭ್ಯಾಸವಲ್ಲ. ದೇಹ ಮೂತ್ರದ ಸೂಚನೆ ನೀಡಿದಾಗ ಅದನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ವಾಶ್‌ರೂಮ್‌ಗೆ ಹೋಗುವುದು ಮೂತ್ರಾಶಯ ಮತ್ತು ಕಿಡ್ನಿಯ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.

ಕರ್ನಾಟಕದ ಎಲ್ಲೆಡೆ ಕಂಬಳಕ್ಕೆ ಅವಕಾಶ: ಪೆಟಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

0

ನವದೆಹಲಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ಕರ್ನಾಟಕದ ಇತರ ಭಾಗಗಳಲ್ಲಿ ‘ಕಂಬಳ’ ಕ್ರೀಡೆಯನ್ನು ನಡೆಸುವುದನ್ನು ತಡೆಯುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತು. ಈ ಅರ್ಜಿಯಲ್ಲಿ ನವೆಂಬರ್ 14ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಲಾಗಿತ್ತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊರಗಿನ ಯಾವುದೇ ಪ್ರದೇಶಗಳಲ್ಲಿ ಕಂಬಳ ನಡೆಸಲು ರಾಜ್ಯ ಸರ್ಕಾರ ಅವಕಾಶ ನೀಡಬಾರದು ಎಂಬ ಬೇಡಿಕೆಯನ್ನು ಹೈಕೋರ್ಟ್ ಈಗಾಗಲೇ ತಿರಸ್ಕರಿಸಿತ್ತು.

ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, ರಾಜ್ಯದ ವಿವಿಧ ಭಾಗಗಳಲ್ಲಿ ಸಂಸ್ಕೃತಿಯನ್ನು ಪ್ರದರ್ಶಿಸಲು ಜನರು ಬಯಸಿದರೆ ಅದರಲ್ಲಿ ತಪ್ಪೇನು? ಇತರ ಭಾಗದ ಜನರೂ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದು. ಅದನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಏಕೆ ಸೀಮಿತಗೊಳಿಸಬೇಕು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಪೆಟಾ ಪರ ವಕೀಲರು, ಕಂಬಳವು ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾಗಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಉಲ್ಲೇಖಿಸಿದರು.

ಇದಕ್ಕೆ ಪ್ರತಿಯಾಗಿ, ಬೆಂಗಳೂರಿನ ಸಂಪ್ರದಾಯ ಮತ್ತು ಸಂಸ್ಕೃತಿಗೆ ಕಂಬಳಕ್ಕೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದರು. ಈಗ ಈ ಕ್ರೀಡೆಯನ್ನು ರಾಜ್ಯ ರಾಜಧಾನಿಯಲ್ಲೂ ನಡೆಸಲು ಯೋಜನೆ ಮಾಡಲಾಗಿದೆ ಎಂದು ಅವರು ಹೇಳಿದರು.

ವಿಚಾರಣೆ ಅಂತ್ಯದಲ್ಲಿ ಸುಪ್ರೀಂ ಕೋರ್ಟ್ ಪೆಟಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಇದೇ ವೇಳೆ ಇಂತಹ ವಿಷಯಗಳ ಕುರಿತು ಮುಂದಿನ ದಿನಗಳಲ್ಲಿ ಪೆಟಾಗೆ ಕೆಲ ಪ್ರಶ್ನೆಗಳು ಕೇಳಬಹುದು ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಇಂದಿರಾ ಕ್ಯಾಂಟೀನ್ʼಗಳಲ್ಲಿ ಶೀಘ್ರವೇ ಡಿಜಿಟಲ್ ಪೇಮೆಂಟ್ ವ್ಯವಸ್ಥೆ: ಸಚಿವ ಬೈರತಿ ಸುರೇಶ್

ಬೆಂಗಳೂರು: ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ಕ್ರಮವಹಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ್ ಈ ವಿಷಯವನ್ನು ಪ್ರಸ್ತಾಪಿಸಿದರು. ಕಲಬುರಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಮೆನು ಪ್ರಕಾರ ತಿಂಡಿ ನೀಡಲಾಗುತ್ತಿಲ್ಲ.

ಊಟದ ಗುಣಮಟ್ಟವೂ ಸರಿಯಾಗಿಲ್ಲ ಎಂಬ ದೂರುಗಳಿವೆ. ಈ ವ್ಯವಸ್ಥೆಯನ್ನು ಸರಿಪಡಿಸುವ ಜೊತೆಗೆ ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ನಮ್ಮ ಮಾಹಿತಿ ಪ್ರಕಾರ ಮೆನು ಪ್ರಕಾರವೇ ತಿಂಡಿ ಹಾಗೂ ಊಟ ನೀಡಲಾಗುತ್ತಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಆಹಾರ ವ್ಯವಸ್ಥೆ ಮಾಡಲಾಗಿದೆ. ಊಟದ ಗುಣಮಟ್ಟ ಸರಿಯಿಲ್ಲ ಎಂಬ ಕುರಿತು ನನಗೆ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಎಲ್ಲಿಯಾದರೂ ಸಮಸ್ಯೆ ಕಂಡುಬಂದರೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು ಎಂದರು.

ಇದೇ ವೇಳೆ ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು.

ಸೋಶಿಯಲ್ ಮೀಡಿಯಾ ಕಿರುಕುಳ ಪ್ರಕರಣ: ಕೋರ್ಟ್ ಮುಂದೆ ಸಾಕ್ಷ್ಯ ನೀಡಿದ ನಟಿ ರಮ್ಯಾ

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳ ಮೂಲಕ ಕಿರುಕುಳ ನೀಡಿದ ಪ್ರಕರಣದಲ್ಲಿ ನಟಿ ರಮ್ಯಾ ದಿವ್ಯ ಸ್ಪಂದನಾ ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಇಂದು ಹಾಜರಾಗಿ ಫಿರ್ಯಾದಿ ಹೇಳಿಕೆ ದಾಖಲಿಸಿದ್ದಾರೆ.

ಸೈಬರ್ ಪೊಲೀಸರು 11 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ನ್ಯಾಯಮೂರ್ತಿ ಈ. ರಾಜೀವ ಗೌಡ ಅವರ ಮುಂದೆ ಮುಚ್ಚಿದ ಕೊಠಡಿಯಲ್ಲಿ ನಡೆಯುತ್ತಿದೆ. ವಿಚಾರಣೆ ವೇಳೆ ರಮ್ಯಾ ತಮ್ಮ ವೃತ್ತಿ ಹಾಗೂ ರಾಜಕೀಯ ಜೀವನದ ಬಗ್ಗೆ ವಿವರಿಸಿ, ಆರೋಪಿಗಳು ಇನ್‌ಸ್ಟಾಗ್ರಾಂ ಮೂಲಕ ಕಳುಹಿಸಿದ್ದ ಅಸಭ್ಯ ಸಂದೇಶಗಳ ಕುರಿತು ಮಾಹಿತಿ ನೀಡಿದ್ದಾರೆ.

ನಟ ದರ್ಶನ್ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡ ಬಳಿಕ ಕೆಲವರು ರಮ್ಯಾಗೆ ಅಸಭ್ಯ ಕಾಮೆಂಟ್ ಮತ್ತು ಸಂದೇಶಗಳನ್ನು ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರು ಆರೋಪಿಗಳನ್ನು ಬಂಧಿಸಿದ್ದರು. ಜೊತೆಗೆ 50ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್ ಮಾಡಲಾಗಿದೆ. ಬಂಧನ ಭಯದಿಂದ ಹಲವು ಆರೋಪಿಗಳು ಪರಾರಿಯಾಗಿದ್ದರು. ನಂತರ ಬಂಧಿತರು ಒಂದು ಲಕ್ಷ ರೂ. ಬಾಂಡ್ ನೀಡುವ ಮೂಲಕ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.

ಪ್ರೀತಿಗೆ ಅಡ್ಡಿಯಾದ ಧರ್ಮ: ತುಂಗಭದ್ರ ಸೇತುವೆಯಿಂದ ಹಾರಿದ ಹಿಂದೂ–ಮುಸ್ಲಿಂ ಜೋಡಿ, ನಡುಗಡ್ಡೆಯಲ್ಲಿ ರಕ್ಷಣೆ

0

ದಾವಣಗೆರೆ: ಪ್ರೀತಿಗೆ ಕುಟುಂಬಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದೂ–ಮುಸ್ಲಿಂ ಜೋಡಿಯೊಂದು ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರ ಸೇತುವೆ ಬಳಿ ನಡೆದಿದೆ. ಅದೃಷ್ಟವಶಾತ್ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದ ಕಾರಣ ಇಬ್ಬರೂ ಜೀವಾಪಾಯದಿಂದ ಪಾರಾಗಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದವರನ್ನು ದಾವಣಗೆರೆ ನಗರದ ಬಾಡಾ ಕ್ರಾಸ್ ಸಮೀಪದ ಆಂಜನೇಯ ಕಾಟನ್ ಮಿಲ್ ಪ್ರದೇಶದ ನಿವಾಸಿಗಳಾದ ಸಿಂಚನ ಮತ್ತು ಸಮೀರ್ ಎಂದು ಗುರುತಿಸಲಾಗಿದೆ. ನದಿಗೆ ಹಾರಿದ ನಂತರ ಈ ಜೋಡಿ ಈಜುತ್ತಾ ನದಿಯ ಮಧ್ಯದ ನಡುಗಡ್ಡೆಯಲ್ಲಿ ಆಶ್ರಯ ಪಡೆದಿದ್ದು ಸ್ಥಳೀಯರ ಗಮನ ಸೆಳೆದಿದೆ.

ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ನಡುಗಡ್ಡೆಯಲ್ಲಿ ಸಿಲುಕಿದ್ದ ಪ್ರೇಮಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ಸಮೀರ್ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಸಿಂಚನ ಹಿಂದೂ ಧರ್ಮಕ್ಕೆ ಸೇರಿದ್ದಾಳೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಬೇರೆ ಬೇರೆ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಜೋಡಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಇಬ್ಬರೂ ಮನೆ ಬಿಟ್ಟು ಮೈಸೂರು ಮತ್ತು ಶಿವಮೊಗ್ಗ ಭಾಗಗಳಲ್ಲಿ ಸುತ್ತಾಡಿ ಬಳಿಕ ಹೊನ್ನಾಳಿಗೆ ಬಂದಿದ್ದರು. ನಂತರ ತುಂಗಭದ್ರ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ. ನದಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಈಜಿ ನಡುಗಡ್ಡೆಯಲ್ಲಿ ಆಶ್ರಯ ಪಡೆದಿದ್ದಾರೆ.

6 ತಿಂಗಳು ಸ್ಕೆಚ್ ಹಾಕಿ 3 ಕೋಟಿ ಚಿನ್ನ ಕಳ್ಳತನ: ಯಲಹಂಕ ಪೊಲೀಸರಿಂದ ಆರೋಪಿ ಅರೆಸ್ಟ್!

0

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ ನಡೆಸಿದ್ದ ಆರೋಪಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ವೇಲಾರಾಮ್ (19) ಬಂಧಿತ ಆರೋಪಿ. ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕಟ್ ಮಾಡುವ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ್ದಾನೆ.

ಬಳಿಕ ಸುಮಾರು ಆರು ತಿಂಗಳು ಸ್ಕೆಚ್ ಹಾಕಿ ಒಂದೇ ಬಾರಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕದ ಜ್ಯುಡಿಷಿಯಲ್ ಲೇಔಟ್‌ನಲ್ಲಿ ಈ ಕಳ್ಳತನ ನಡೆದಿತ್ತು. ಮನೆ ಮಾಲೀಕರು ಅಮೆರಿಕದಲ್ಲಿ ನೆಲೆಸಿದ್ದು, ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿನ ಮನೆಗೆ ಬರುತ್ತಿದ್ದರು.

ಈ ನಡುವೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ವೇಲಾರಾಮ್ ಮೂರು ಬಾರಿ ಮನೆಯ ಮೇಲ್ಚಾವಣಿಗೆ ಹೋಗಿ ಸ್ಲೈಡ್ ಡೋರ್ ತೆರೆಯುವ ಮೂಲಕ ರೆಕ್ಕಿ ನಡೆಸಿದ್ದ. ನಂತರ ಮನೆ ಒಳಗೆ ಪ್ರವೇಶಿಸಿ ಲಾಕರ್ ತೆರೆಯಿಸಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ 1.8 ಕೆಜಿ ಚಿನ್ನಾಭರಣ, ಡೈಮಂಡ್ ಹಾಗೂ ನಗದು ಹಣ ಕಳ್ಳತನ ಮಾಡಿದ್ದಾನೆ.

ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕಿದ್ದರಿಂದ ಯಾರಿಗೂ ತಿಳಿಸದೆ ಚಿನ್ನಾಭರಣವನ್ನು ರಾಜಸ್ಥಾನಕ್ಕೆ ಕೊಂಡೊಯ್ದು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ನಡುವೆ ಮನೆಯ ಸಿಸಿಟಿವಿ ದೃಶ್ಯಗಳನ್ನು ಅಮೆರಿಕದಲ್ಲಿದ್ದ ದಂಪತಿ ಮೊಬೈಲ್‌ನಲ್ಲಿ ಪರಿಶೀಲಿಸಿದ ವೇಳೆ ಕಳ್ಳತನ ಬೆಳಕಿಗೆ ಬಂದಿದೆ. ಬಳಿಕ ಸಂಬಂಧಿಕರ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ದೂರಿನ ಆಧಾರದಲ್ಲಿ ತನಿಖೆ ಆರಂಭಿಸಿದ ಯಲಹಂಕ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆರೋಪಿ ವೇಲಾರಾಮ್ ಅನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

error: Content is protected !!