Home Blog Page 595

ಸ್ಟ್ರೆಕ್ಚರ್ ನಲ್ಲಿ ಬಂದು ಮತಚಲಾವಣೆ ಮಾಡಿದ ಪದವೀಧರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಪದವೀಧರನೊಬ್ಬ ಮತಗಟ್ಟೆಗೆ ಸ್ಟ್ರೆಕ್ಚರ್ ನಲ್ಲಿ ಬಂದು ಮತ ಚಲಾವಣೆ ಮಾಡಿದ್ದಾನೆ.

ಇಲ್ಲಿನ ಪುಟ್ಟರಾಜ ನಗರ ನಿವಾಸಿ ಮರ್ದಾನ್ ಅಲಿ ದೊಡ್ಡಮನಿ ಅಂಬುಲೆನ್ಸ್ ನಲ್ಲಿ ಮತಗಟ್ಟೆ ಸಂಖ್ಯೆ
೫೯ ಕ್ಕೆ ಆಗಮಿಸಿ, ಮತ ಚಲಾಯಿಸಿದರು.

ನಾಲ್ಕು ದಿನಗಳ ಹಿಂದೆ ಅಪಘಾತಕ್ಕೀಡಾಗಿದ್ದ ಮರ್ದಾನ್ ಅಲಿ ಕಾಲು‌ ಮುರಿದಿದ್ದರಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ಮಾಡಬೇಕು ಎಂದು ವೈದ್ಯರ ಬಳಿ ಮನವಿ ಮಾಡಿದ್ದರು. ಹೀಗಾಗಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಅವರನ್ನು ಮತಗಟ್ಟೆಗೆ ಕರೆದುಕೊಂಡು ಬರಲಾಗಿತ್ತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಅನಿಲ್ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ ಮತ್ತಿತರರು ಇದ್ದರು.

ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ ಸಂಕನೂರ -ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದೆಲ್ಲೆಡೆ ಬಿಜೆಪಿ ಅಲೆ -ಸಚಿವರು, ಸಂಸದರು, ಶಾಸಕರು, ಕಾರ್ಯಕರ್ತರಿಂದ ಭರ್ಜರಿ ಪ್ರಚಾರ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ವಿಧಾನ ಪರಿಷತ್ತಿನಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಪ್ರತಿನಿಧಿಯಾಗಿ ಆರು ವರ್ಷಗಳಲ್ಲಿ ಅಗಾಧವಾದ ಸಾಧನೆ ಮಾಡಿರುವ ಪ್ರೊ| ಎಸ್.ವಿ. ಸಂಕನೂರ, ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಸದನದ ಒಳಗೆ ಹಾಗೂ ಹೊರಗೆ ಅವಿರತವಾಗಿ ಶ್ರಮಿಸಿದ್ದಾರೆ. ಅವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದಾರೆ. ಕ್ಷೇತ್ರದ ಮತದಾರರ ಜತೆಗೆ ನಿರಂತರ ಸಂಪರ್ಕದಲ್ಲಿರುವ ಅವರು ಎರಡನೇ ಅವಧಿಗೆ ಪುನರಾಯ್ಕೆಗೊಳ್ಳುವ ವಿಶ್ವಾಸದಲ್ಲಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಬಿ.ಸಿ. ಪಾಟೀಲ, ಸಿ.ಸಿ. ಪಾಟೀಲ, ಬಿ. ಶ್ರೀರಾಮುಲು ಹಾಗೂ ಶಿವರಾಮ ಹೆಬ್ಬಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಯುವ ಮುಖಂಡ ಅನಿಲ ಮೆಣಸಿನಕಾಯಿ ಮುಂತಾದ ದಿಗ್ಗಜರು ಸಂಕನೂರು ಪರ ಪ್ರಚಾರ ಕೈಗೊಂಡಿದ್ದಾರೆ.

ಮೂವರು ಸಂಸದರು, 19 ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಹಾಗೂ ತಾ.ಪಂ.ಗಳ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೂ ಹಗಲಿರುಳೂ ಕ್ಷೇತ್ರದಾದ್ಯಂತ ಸಂಚರಿಸಿ ಸಂಕನೂರ ಅವರ ಗೆಲುವಿಗಾಗಿ ದುಡಿಯುತ್ತಿದ್ದಾರೆ. ಬೇರುಮಟ್ಟದಲ್ಲಿ ಪಕ್ಷ ಸಂಘಟನೆ ಬಲವಾಗಿರುವ ಕಾರಣ ತಮ್ಮ ಗೆಲುವೇನೂ ಕಷ್ಟವಾಗಲಾರದು. ಅಲ್ಲದೆ, ಧಾರವಾಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಕಾಲ್ ಸೆಂಟರ್ ಆರಂಭಿಸಿದ್ದು, ಕಾರ್ಯಕರ್ತರು ಸುಮಾರು 13 ಸಾವಿರಕ್ಕೂ ಅಧಿಕ ಮತದಾರರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗೆ ಕರೆ ಮಾಡಿ ಹಾಗೂ ಸಂದೇಶಗಳನ್ನು ಕಳುಹಿಸಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಸಂಕನೂರ ಹೇಳಿದ್ದಾರೆ.

ಅಪಾರ ಅನುಭವಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಪ್ರೊ| ಸಂಕನೂರು ಅವರು ಮತದಾರರ ಮೊದಲ ಪ್ರಾಶಸ್ತ್ಯದ ಆಯ್ಕೆಯೂ ಆಗಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ, ರಾಜ್ಯದ 36 ಇಲಾಖೆಗಳಲ್ಲಿ ಖಾಲಿಯಾಗಿರುವ ಸುಮಾರು ಎರಡು ಲಕ್ಷ ಹುದ್ದೆಗಳ ಭರ್ತಿಗೆ ಸದನದಲ್ಲಿ ಒತ್ತಾಯಿಸಿರುವ ಸಂಕನೂರ, ಸುಮಾರು 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಭಡ್ತಿ, ವಿಶೇಷ ಭತ್ಯೆ, ವೇತನ ತಾರತಮ್ಯ ನಿವಾರಣೆ, ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮುಂತಾದ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಿದ್ದಾರೆ.

ಮತಕ್ಷೇತ್ರದ ವ್ಯಾಪ್ತಿಯ ಗದಗ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡದಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿರುವ ಸಂಕನೂರ ಅವರು, 1,955 ಪದವೀಧರರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಪದವಿ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ 7ನೇ ಯುಜಿಸಿ ವೇತನ ಜಾರಿ ಮಾಡುವಲ್ಲಿ ಹಾಗೂ ತಾಂತ್ರಿಕ, ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿಗೆ 7ನೇ ಎಐಸಿಟಿಇ ವೇತನ ಶ್ರೇಣಿ ಜಾರಿಗೆ ಮತಿತು ವೈದ್ಯಕೀಯ ಸಿಬ್ದಂದಿಗೆ ಎನ್.ಪಿ.ಎಸ್. ಯೋಜನೆ ಜಾರಿ ಮಾಡಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಭವಿಷ್ಯದ ಯೋಜನೆಗಳು
ಎನ್.ಪಿ.ಎಸ್. ಬದಲು ಓ.ಪಿ.ಎಸ್. ಜಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗೆ ಪಿಂಚಣಿ ಯೋಜನೆ ಜಾರಿ, ಅತಿಥಿ ಉಪನ್ಯಾಸಕರಿಗೆ ಗೌರವ ಧನ ಹೆಚ್ಚಳ, ಪಶ್ಚಿಮ ಬಂಗಾಳ ರಾಜ್ಯ ಮಾದರಿಯಲ್ಲಿ ಸೇವಾ ಭದ್ರತೆ ಒದಗಿಸುವುದು, 1995ರ ಬಳಿಕ ಆರಂಭವಾಗಿರುವ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಮೇಳಗಳನ್ನು ಸಂಘಟಿಸಿ, ಯುವಸಮುದಾಯಕ್ಕೆ ಉದ್ಯೋಗ ಒದಗಿಸಿಕೊಡುವುದು ತಮ್ಮ ಭವಿಷ್ಯದ ಯೋಜನೆಗಳೆಂದು ಹೇಳಿರುವ ಪ್ರೊ| ಸಂಕನೂರ, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗಳಲ್ಲಿ ಬಿಜೆಪಿ ಸರಕಾರವೇ ಇರುವುದರಿಂದ ತಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅನುಕೂಲವಾಗುತ್ತದೆ.

ಹಲವು ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಶೀಘ್ರ ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಂಕನೂರ ತಿಳಿಸಿದ್ದಾರೆ.

ಸಂಕನೂರ ಪರ ಅಲೆ
ಸರಳ, ಸಜ್ಜನಿಕೆಯ ವ್ಯಕ್ತಿಯಾಗಿರುವ ಸಂಕನೂರ ಅವರು ಸದಾ ಜನರೊಂದಿಗೇ ಇದ್ದು, ಅವರ ಎಲ್ಲ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಜನಪ್ರತಿನಿಧಿ. ಯಾರ ಜೊತೆಗೂ ವಿರೋಧ ಕಟ್ಟಿಕೊಳ್ಳದೆ ಸದಾ ನಗುಮೊಗದಿಂದಲೇ ಎಲ್ಲರೊಂದಿಗೂ ವ್ಯವಹರಿಸುತ್ತಾರೆ.

ಕಳೆದ ಬಾರಿ 14,000 ಮತಗಳ ಅಂತರದಿಂದ ಸಂಕನೂರ ಗೆದ್ದಿದ್ದರು. ಈ ಬಾರಿ ಅವರ ಪ್ರತಿಯೊಂದು ಪ್ರಚಾರ ಸಭೆಯಲ್ಲೂ ಸುಮಾರು 500ಕ್ಕಿಂತ ಹೆಚ್ಚು ಜನರು ಭಾಗವಹಿಸಿರುವ ಕಾರಣ, ಅವರ ಗೆಲುವಿನ ಅಂತರ 25 ಸಾವಿರವನ್ನು ದಾಟುವ ನಿರೀಕ್ಷೆ ಕ್ಷೇತ್ರದಲ್ಲಿ ವ್ಯಕ್ತವಾಗಿದೆ.

ಎಸ್.ವಿ. ಸಂಕನೂರ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರಡ. ವಿಧಾನ ಪರಿಷತ್ ಸದಸ್ಯರಾಗಿ ಆರು ವರ್ಷಗಳ ಕಾಲ ಪರಿಷತ್ ಒಳಗೆ ಮತ್ತು ಹೊರಗೆ ಪದವೀಧರರ ಜೊತೆಗೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ. ಸಂಕನೂರ ಅವರ ವೈಯಕ್ತಿಕ ಸೇವೆ, ಸರಕಾರದ ಸಾಧನೆ ಸಂಕನೂರು ಅವರ ಗೆಲುವಿಗೆ ಕಾರಣವಾಗಲಿವೆ.
ಅನಿಲ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ

ಎಚ್ಕೆ ಪಾಟೀಲರಿಗೆ ಮೋದಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ; ಅನಿಲ್ ಮೆಣಸಿನಕಾಯಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಪ್ರಧಾನಿ ನರೇಂದ್ರ ಮೋದಿ ಅವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡಿಲ್ಲ. ದೇಶದ ಜನರಿಗೆ ಮೋದಿ ಸುಳ್ಳು ಹೇಳುತ್ತಿರುವ ಬಗ್ಗೆ ಶಾಸಕ ಎಚ್.ಕೆ. ಪಾಟೀಲ ಅವರು, ಗದಗ ಮತಕ್ಷೇತ್ರದ ಜನರಿಗೆ ಹೇಳಿರುವ ಸುಳ್ಳುಗಳ ಬಗ್ಗೆಯೂ ಮಾತನಾಡಲಿ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ವಾಗ್ದಾಳಿ ನಡೆಸಿದರು.

ಉದ್ಯೋಗ ಸೃಷ್ಟಿ ವಿಷಯದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಎಚ್.ಕೆ. ಪಾಟೀಲ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ನಾಯಕರಾಗಿ ಬಿಂಬಿಸಿಕೊಳ್ಳುತ್ತಿರುವ ಎಚ್.ಕೆ. ಪಾಟೀಲ ಮೊದಲು ಗದಗ ಕ್ಷೇತ್ರದ‌ ಜನರಿಗೆ ಎಷ್ಟು ಸುಳ್ಳು ಹೇಳಿದ್ದಾರೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ತಮ್ಮ ಅಧಿಕಾರಾವಧಿಯಲ್ಲಿ ಕೇವಲ ಸುಳ್ಳು ಹೇಳುತ್ತಲೆ ಬಂದಿರುವ ಪಾಟೀಲರಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಸಾರ್ವಜನಿಕ ಲೆಕ್ಕ ಪರಿಶೋಧನೆ ಸಮಿತಿ ಅಧ್ಯಕ್ಷರಾಗಿ ರಾಜ್ಯ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡುವ ಎಚ್.ಕೆ. ಪಾಟೀಲ, ತಾವು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಲ್ಲಿ ಭ್ರಷ್ಟಾಚಾರದ ಆಗಿದೆ ಎನ್ನುವ ಆರೋಪದ ಬಗ್ಗೆ ಯಾವುದೇ ತನಿಖೆಗೆ ಒತ್ತಾಯಿಸುವುದಿಲ್ಲ ಎಂದು ಆರೋಪಿಸಿದರು.

ಶಾಸಕ ಎಚ್ ಕೆ ಪಾಟೀಲ್

ಬಿಜೆಪಿ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಆರೋಪಿಸುವ ಶಾಸಕರು, ಬಿಜೆಪಿ ಫೋಸ್ಕೋ ನಿರ್ಮಾಣಕ್ಕೆ ಮುಂದಾದಾಗ ಅದನ್ನು ಓಡಿಸುವ ಕೆಲಸವನ್ನು ಎಚ್.ಕೆ. ಪಾಟೀಲ ಮಾಡಿದ್ದಾರೆ. ಆ ಮೂಲಕ ಸ್ಥಳೀಯ ತಾಂತ್ರಿಕ ಪದವೀಧರರಿಗೆ ಉದ್ಯೋಗ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ದೇಶದ ಬೆಳವಣಿಗೆ ಬಗ್ಗೆ ದೂರದೃಷ್ಟಿ ಹೊಂದಿರಬೇಕು. ಅಂಥ ದೃಷ್ಟಿಕೋನ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿಶ್ವವೇ ಮೆಚ್ಚುಗೆ ಸೂಚಿಸುತ್ತದೆ. ಅಂಥ ಪ್ರಧಾನಿ ಬಗ್ಗೆ ಮಾತಾಡುವ ನೈತಿಕತೆ ಎಚ್. ಕೆ. ಪಾಟೀಲ ಅವರಿಗಿಲ್ಲ ಎಂದು ತಿಳಿಸಿದರು.

ಮನೆ ಮಾಡಿದ ದಸರಾ ಸಂಭ್ರಮ, ಗದಗ ಮಾರ್ಕೆಟ್ ಫುಲ್ ರಶ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣು ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನಜಾತ್ರೆಯೇ ನೆರೆದಿತ್ತು.

ಗದಗ ನಗರದ ತರಕಾರಿ ಮಾರ್ಕೆಟ್, ಗ್ರೇನ್ ಮಾರ್ಕೆಟ್, ಬಟ್ಟೆ ಹಾಗೂ ಹೂವಿನ ಮಾರ್ಕೆಟ್ ಜನಜಂಗುಳಿಯಿಂದ ಕೂಡಿತ್ತು. ಪೂಜಾ ಸಾಮಗ್ರಿ, ಹೂವು, ಹಣ್ಣು, ಕಿರಾಣಿ ಸಾಮಗ್ರಿಗಳ ಖರೀದಿಗೆ ಜನರು ಮನೆಯಿಂದ ಮಾರ್ಕೆಟ್ ಗೆ ಮುಗಿಬಿದ್ದಿದ್ದಾರೆ.

ಇನ್ನು ಹಬ್ಬದ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ದುಬಾರಿಯಾಗಿತ್ತು. ಸೇಬು 100 ರೂ. ಇದ್ದಿದ್ದು ಇಂದು 200 ರೂ.ಗೆ ತಲುಪಿತ್ತು. ಹೂವು ಮತ್ತು ಪೂಜಾ ಸಾಮಗ್ರಿಗಳೂ ಇಂದು ದುಬಾರಿಯಾಗಿದ್ವು.

ದುಬಾರಿಯಾದರೂ ಹಬ್ಬ ಆಚರಿಸುವ ತವಕದಲ್ಲಿ ಜನ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ಆದರೆ ಕೊರೊನಾ ಮುಂಜಾಗ್ರತಾ ಕ್ರಮಗಳ ನಿಯಮಗಳನ್ನು ಯಾರು ಅನುಸರಿಸಲಿಲ್ಲಾ ಅನ್ನೋದು ವಿಪರ್ಯಾಸ.

ಹುಲಕೋಟಿಯಲ್ಲಿ ಅಬಕಾರಿ ಪೊಲೀಸರ ದಾಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಪರಾರಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಕಳೆದ ಹಲವು ದಿನಗಳಿಂದ ಹುಲಕೋಟಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯೊಂದರ ಮೇಲೆ ದಾಳಿ ಮಾಡಿರುವ ಅಬಕಾರಿ ಪೊಲೀಸರು, 80 ಸಾವಿರ ರೂ, ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದು, ಮಹಿಳೆ ಪರಾರಿಯಾಗಿದ್ದಾರೆ.

ಪರಾರಿಯಾಗಿರುವ ಮಹಿಳೆಯನ್ನು ದೇವಕ್ಕ ನಾರಾಯಣ ಬೆಳ್ಳಿಕೊಪ್ಪ ಎಂದು ಗುರುತಿಸಲಾಗಿದ್ದು, 80 ಸಾವಿರ ರೂ, ಮೌಲ್ಯದ ನಾಲ್ಕು ಕೆ.ಜಿ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಸಿಬ್ಬಂದಿಗಳಾದ ಗುರುರಾಜ್ ವಸ್ತ್ರದ, ಚಂದ್ರು ರಾಠೋಡ್, ನಜೀರ ಖುದಾವಂದ, ಸುರೇಶ್ ಮಳೇಕರ್, ಸವಿತಾ ಕೋಳಿವಾಡ ಪಾಲ್ಗೊಂಡಿದ್ದರು.

ಚುನಾವಣಾ ಪ್ರಚಾರಕ್ಕೆ ವರ್ಚುವಲ್ ರ‍್ಯಾಲಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೀಗ ವರ್ಚುವಲ್ ರ‍್ಯಾಲಿ ಬಳಕೆಯಾಗುವ ಮೂಲಕ ಡಿಜಿಟಲ್ ಟಚ್ ಬಂದಿದೆ. ಹೌದು ಶನಿವಾರ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ವರ್ಚುವಲ್ ರ‍್ಯಾಲಿ ಮೂಲಕ ಪ್ರಜ್ಞಾವಂತ ಮತದಾರರನ್ನು ಸಂಪರ್ಕಿಸಿದರು.
ವರ್ಚುವಲ್ ರ‍್ಯಾಲಿಗೆ ಮತದಾರರು ಸ್ವಯಂ ಪ್ರೇರಿತರಾಗಿ ಸಂಪರ್ಕವಾಗುವ ಮೂಲಕ ರ‍್ಯಾಲಿ ಯಶಸ್ವಿಗೊಳಿಸಿದರು. ಈ ವೇಳೆ ಮತದಾರರ ಬಳಿ ಮಾತನಾಡಿದ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಕೊವಿಡ್ ಪರಿಸ್ಥಿತಿಯಿದ್ದರೂ ಸಹ ನಾವು ಸರ್ಕಾರದ ನಿಯಮಗಳ ಪಾಲನೆಯೊಂದಿಗೆ ಮತದಾರರನ್ನು ಸಂಪರ್ಕ ಮಾಡಿದ್ದೇವೆ. ಆದರೂ ಸಹ ವರ್ಚುವಲ್ ರ‍್ಯಾಲಿ ಮೂಲಕವೂ ಪ್ರಜ್ಞಾವಂತರ ಸಂಪರ್ಕದ ಪ್ರಯತ್ನವಾಗಿ ಇಂದು ಈ ರ‍್ಯಾಲಿ ನಡೆಯುತ್ತಿದೆ ಎಂದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಹಾಗೂ ಮಾಡುತ್ತಿರುವ ಬದಲಾವಣೆಗಳನ್ನು ನಿಮ್ಮ ಗಮನಕ್ಕೆ ತರುವ ಉದ್ದೇಶದಿಂದ ವರ್ಚುವಲ್ ರ‍್ಯಾಲಿ ಮಾಡಲಾಗುತ್ತಿದೆ.
ರಾಜ್ಯದಲ್ಲಿಯೂ ಬದಲಾವಣೆ ನಡೆಯುತ್ತಿದ್ದು, ಸಿಎಂ ಬಿಎಸ್ವೈ ಅವರೂ ಸಹ ಮೋದಿಯವರಂತೆ ಹಗಲಿರುಳು ಶ್ರಮ ವಹಿಸಿ ದುಡಿಯುತ್ತಿದ್ದಾರೆ. ಕೊವಿಡ್-19 ಹಾಗೂ ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಜನರಿಗೆ ಸಹಾಯಹಸ್ತ ಚಾಚಿದ್ದಾರೆ ಎಂದರು.

ದೇಶದಲ್ಲಿ ಜಾರಿಯಾಗಿರುವ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಜಾರಿ ಮಾಡುವ ಉದ್ದೇಶ ಸಿಎಂ ಬಿಎಸ್‌ವೈ ಅವರಿಗಿದೆ. ಅವರ ಕೈ ಬಲಪಡಿಸಬೇಕಿದ್ದರೆ, ವಿಧಾನಪರಿಷತ್‌ನಲ್ಲಿಯೂ ಸಹ ಬಿಜೆಪಿಗೆ ಹೆಚ್ಚಿನ ಸ್ಥಾನಗಳ ಅವಶ್ಯಕತೆಯಿದೆ. ಹೀಗಾಗಿ ಎಸ್ ವಿ ಸಂಕನೂರ ಅವರ ಗೆಲುವಿಗೆ ಎಲ್ಲರೂ ಸಹಕರಿಸಬೇಕೆಂದು ವರ್ಚುವಲ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಮತದಾರರಲ್ಲಿ ವಿನಂತಿಸಿಕೊಂಡರು.
ಇದೇ ವೇಳೆ ಮತದಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲಾಗಿದೆ. ಇದರಿಂದುಂಟಾಗುವು ಅನುಕೂಲತೆಗಳನ್ನು ತಿಳಿಸುವುದು ಬಿಟ್ಟು ಬಿಜೆಪಿ ವಿರುದ್ಧ ಕಾಂಗ್ರೆಸ್‌ನವರು ಆರೋಪ ಮಾಡುವುದರಲ್ಲಿಯೇ ನಿರತರಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಸಹ ಕೈಗಾರಿಕಾ ಕ್ಲಸ್ಟರ್ ನಿರ್ಮಾಣಕ್ಕಾಗಿ ಈಗಾಗಲೇ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬ್ಲೂ ಪ್ರಿಂಟ್ ತಯಾರು ಮಾಡಿದ್ದಾರೆ. ಕೈಗಾರಿಕಾ ಕ್ಲಸ್ಟರ್‌ಗಳ ನಿರ್ಮಾಣದಿಂದ ಆಯಾ ಜಿಲ್ಲೆಗಳಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆಂದು ವಿವರಿಸಿದರು.

ಯಾವುದೇ ಬಗೆಯ ಕಾನೂನು ಹಾಗೂ ನೂತನ ನೀತಿಗಳಿಗೆ ವಿಧಾನ ಪರಿಷತ್‌ನಲ್ಲಿನ ಅನುಮೋದನೆಯೂ ಪ್ರಮುಖವಾಗಿದ್ದು, ನಮ್ಮ ಸಂಖ್ಯೆಯನ್ನು ಹೆಚ್ಚಿಸಲು ಪಕ್ಷದ ಅಭ್ಯರ್ಥಿ ಎಸ್ ವಿ ಸಂಕನೂರ ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ವರ್ಚುವಲ್ ರ‍್ಯಾಲಿಯಲ್ಲಿ ಹಲವು ಯುವ ಪದವೀಧರರು ಭಾಗವಹಿಸಿದ್ದರು.
 

ರೈತರಿಗೆ ತಲುಪದ ಸಾಲಮನ್ನಾ ಯೋಜನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ನರಗುಂದ
ರೈತರ ಸಾಲಮನ್ನಾ ಕುರಿತಂತೆ ಸರ್ಕಾರವಿನ್ನೂ ಸರಿಯಾದ ಮಾನದಂಡ ಬಳಸಿಲ್ಲ. ಹೀಗಾಗಿ ಸಾಲಮನ್ನಾ ಯೋಜನೆ ರೈತರಿಗೆ ಇನ್ನೂ ಸರಿಯಾಗಿ ತಲುಪಿಲ್ಲವೆಂದು ರೈತ ಸೇನಾ ಕರ್ನಾಟಕ ರಾಜ್ಯ ವಕ್ತಾರ ಗುರು ರಾಯನಗೌಡ್ರ ಸಿಡಿಮಿಡಿಗೊಂಡರು.
ಪಟ್ಟಣದಲ್ಲಿ ಮಹದಾಯಿ ಮಲಪ್ರಭೆ ಜೋಡಣೆಗಾಗಿ ನಡೆಯುತ್ತಿರುವ ರೈತಸೇನಾ ಕರ್ನಾಟಕ ಹೋರಾಟ ಸಮಿತಿ ಧರಣಿ ಶನಿವಾರಕ್ಕೆ 1926 ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರು ರೈತರ 2 ಲಕ್ಷ ರೂ ವರೆಗಿನ ಸಾಲಮನ್ನಾ ಮಾಡುವುದಾಗಿ 2017 ರಲ್ಲಿ ಘೋಷಿಸಿದ್ದರು. ಸಾಲಮನ್ನಾ ಮಾಡಲು ಕೆಲವೊಂದು ದಾಖಲೆಗಳನ್ನು ರೈತರು 2017 ರ ಡಿ. 30 ರೊಳಗಾಗಿ ನೀಡುವಂತೆ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಿತ್ತು. ಅನೇಕರು ಈ ಅವಧಿಯಲ್ಲಿ ಎಲ್ಲ ದಾಖಲೆಗಳನ್ನು ನೀಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಸಾಲಮನ್ನಾ ಯೋಜನೆ ಸರಿಯಾದ ರೂಪದಲ್ಲಿ ಜಾರಿಯಾಗಲಿಲ್ಲ. ಮುಂದೆ ಬಿಜೆಪಿ ರಾಜ್ಯ ಸರ್ಕಾರ ಇದೇ ಅ. 20 ರೊಳಗಾಗಿ ಎಲ್ಲ ದಾಖಲೆಗಳನ್ನು ನೀಡಲು ರೈತರಿಗೆ ಸೂಚಿಸಿತ್ತು. ಈ ಅವಧಿಯಲ್ಲಿಯೂ ಅನೇಕ ಕಟುಬಾಕಿದಾರರು ಅಗತ್ಯದ ಪಡಿತರ ಚೀಟಿ ಮತ್ತು ಇನ್ನಿತರ ದಾಖಲೆ ನೀಡಿದಾಗಲೂ ಅವರ ಸಾಲಮನ್ನಾ ಮಾಡಲು ಸರ್ಕಾರ ಚಿಂತನೆ ಮಾಢಿಲ್ಲ. ದಾಖಲೆಗಳನ್ನು ನೀಡಲು ಕಡಿಮೆ ಅವಧಿ ಸರ್ಕಾರ ನೀಡಿದ್ದರಿಂದ ತೊಂದರೆಯಾಗಿದೆ. ಹೀಗಾಗಿ ಈ ಅವಧಿ ವಿಸ್ತರಿಸಬೇಕೆಂದು ರಾಯನಗೌಡ್ರ ಸರ್ಕಾರಕ್ಕೆ ಆಗ್ರಹಿಸಿದರು.
ಸಚಿವ ಜಗದೀಶ ಶೆಟ್ಟರ ಅವರನ್ನು ಅ. ೨೩ ರಂದು ರೈತ ಸೇನಾ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಭೇಟಿಯಾಗಿ ಎಲ್ಲ ಮಾಹಿತಿ ನೀಡಿದ್ದೇವೆ. ಅ. 27ರೊಳಗಾಗಿ ಈ ಸಮಸ್ಯೆ ಪರಿಹರಿಸುವುದಾಗಿ ಸಚಿವರು ತಿಳಿಸಿದ್ದಾರೆ. ಇದಾಗದಿದ್ದರೆ ಹೋರಾಟ ದೀರ್ಘವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ರಾಯನಗೌಡ್ರ ಹೇಳಿದರು.
ಎಸ್.ಬಿ. ಜೋಗಣ್ಣವರ, ಶಂಕರಗೌಡ ಪಾಟೀಲ,ಮಲ್ಲಣ್ಣ ಅಲೈಕಾರ ಮಾತನಾಡಿದರು. ಧರಣಿಯಲ್ಲಿ ರಮೇಶ ನಾಯ್ಕರ್, ವಾಸು ಚವ್ಹಾಣ, ಅರ್ಜುನ ಮಾನೆ, ಹುನಮಂತ ಸರನಾಯ್ಕರ್, ಎ.ಪಿ. ಪಾಟೀಲ, ಶಂಕರಗೌಡ ಪಾಟೀಲ, ಮಹೇಶ ನಾವಳ್ಳಿ, ಕಲ್ಲಪ್ಪ ಮೊರಬದ ಅನೇಕರು ಉಪಸ್ಥಿತರಿದ್ದರು.

ಕೊರೋನಾ ನಿಯಂತ್ರಣ ಕ್ರಮಗಳ ಪಾಲಿಸಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಅ. 28 ರಂದು ಜಿಲ್ಲೆಯಲ್ಲಿ ಜರುಗುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಆರೋಗ್ಯ ಇಲಾಖೆ ಹೊರಡಿಸಿರುವ ಕೊವಿಡ್-19 ನಿಯಂತ್ರಣ ಕ್ರಮಗಳ ಪಾಲನೆ ಮಾಡುವುದರೊಂದಿಗೆ ಚುನಾವಣೆಯನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಹೇಳಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ತಹಸೀಲ್ದಾರರಿಗೆ ಹಾಗೂ ಚುನಾವಣಾ ದಿನಗಳಂದು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಪ್ರತಿ ಮತಗಟ್ಟೆಗೆ ಅಗತ್ಯವಿರುವಷ್ಟು ಸ್ಯಾನಿಟೈಸರ್, ಸಿಬ್ಬಂದಿಗಳಿಗೆ ಮಾಸ್ಕ್, ಹ್ಯಾಂಡ್‌ಗ್ಲೌಸ್, ಪಲ್ಸ್ ಆಕ್ಷಿಮಿಟರ್, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಮತ್ತು ಹ್ಯಾಂಡ್ ವಾಶಗಳನ್ನು ನೀಡಲಾಗುತ್ತಿದ್ದು, ಮತದಾನಕ್ಕೆ ಬರುವ ಮತದಾರರಿಗೆ ಪಲ್ಸ್ ಆಕ್ಷಿಮೀಟರ್ ಹಾಗೂ ಐ.ಆರ್.ಥರ್ಮಲ್ ಸ್ಕ್ಯಾನರ್ ಮೂಲಕ ಆರೋಗ್ಯ ತಪಾಸಣೆಯನ್ನು ನಿಯೋಜಿಸಲಾದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾಡಬೇಕು ಎಂದರು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಸುಸಜ್ಜಿತ ಕೋಣೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತಿ ಮತಗಟ್ಟೆ ಹತ್ತಿರ ಕೊವಿಡ್ ಲಕ್ಷಣ ಇರುವವರ ವಿಶ್ರಾಂತಿ, ತಕ್ಷಣ ಆರೈಕೆಗಾಗಿ ಪ್ರತ್ಯೇಕ ಐಸೋಲೇಶನ್ ರೂಮ್ ವ್ಯವಸ್ಥೆ ಮಾಡಬೇಕು.
ಬಿಎಲ್‌ಓಗಳ ಮೂಲಕ ಓಟರ್ ಸ್ಲಿಪ್‌ಗಳನ್ನು ಮತದಾರನ ಮನೆಗೆ ತಲುಪಿಸುವ ಕಾರ್ಯ ನಡೆಯಬೇಕು. ಕೊವಿಡ್-19 ಸೋಂಕಿಗೆ ಒಳಗಾದ ಮತದಾರ ಮತದಾನ ಮಾಡಲು ಬರುವುದನ್ನು ಮುಂಚಿತವಾಗಿ ಖಚಿತಪಡಿಸಿದರೆ, ಅವರಿಗೆ ಅಂಬುಲೆನ್ಸ್ ಮೂಲಕ ಅವರಿದ್ದ ಸ್ಥಳದಿಂದ ನೇರವಾಗಿ ಮತಗಟ್ಟೆಗೆ ಕರೆ ತಂದು, ಮತದಾನದ ನಂತರ ಅವರ ಸ್ಥಳಕ್ಕೆ ಬಿಡಲಾಗುತ್ತದೆ. ಮತದಾನದ ದಿನದಂದು ಸಂಜೆ 4 ಗಂಟೆ ನಂತರದ ಅವಧಿಯನ್ನು ಕೊವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ, ಕೊವಿಡ್ ಲಕ್ಷಣ ಇರುವವರಿಗೆ ಮತದಾನ ಮಾಡಲು ಅವಕಾಶ ಒದಗಿಸಲಾಗಿದ್ದು, ಎಲ್ಲ ರೀತಿಯ ಆರೋಗ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ, ಮಾತನಾಡಿ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಸಿಬ್ಬಂದಿಗಳ ಹಾಗೂ ಮೊಬೈಲ್ ಫೋನ್‌ನಂಬರ್‌ಗಳ ವಿನಿಮಯ ಮಾಡುವುದು ಹಾಗೂ ತಂಡದ ಪ್ರತಿಯೊಬ್ಬರ ಕಾರ್ಯವಿಧಾನದ ಬಗ್ಗೆ ತಿಳುವಳಿಕೆ ನೀಡುವುದು ಪ್ರಿಸೈಡಿಂಗ್ ಅಧಿಕಾರಿಗಳ ಕರ್ತವ್ಯವಾಗಿದ್ದು ಚುನಾವಣಾಧಿಕಾರಿಗೆ ಸಂಬಂಧಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಇವರು ಹೊಂದಿರಬೇಕು. ಪೂರ್ವಭಾವಿ ಅಭ್ಯಾಸ ಮತ್ತು ತರಬೇತಿಗಳಿಗೆ ಕಡ್ಡಾಯವಾಗಿ ಹಾಜರಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಮದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೊವಿಡ್-19 ಮುಂಜಾಗೃತಿ ವಿಷಯ ಕುರಿತ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿ ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ, ಸೇರಿದಂತೆ ಮತ್ತಿತರರು ಬಿಡುಗಡೆಗೊಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ ಎಂ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ ಬಸರೀಗಿಡದ ಅವರು ಕೊವಿಡ್-19 ಮಾರ್ಗಸೂಚಿಗಳ ಪಾಲನೆ ಕುರಿತು ಮಾತನಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಡಿಎಲ್‌ಆರ್ ಅಧಿಕಾರಿ ರವಿಕುಮಾರ ಸೇರಿದಂತೆ ಆಯಾ ತಾಲೂಕುಗಳ ತಹಸೀಲ್ದಾರರು, ಪಿಆರ್‌ಓಗಳು ಹಾಜರಿದ್ದರು.
 

ಹದಗೆಟ್ಟ ರಸ್ತೆ, ಗ್ರಾಮಸ್ಥರಿಂದ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಕಂಪ್ಲಿ
ತಾಲೂಕಿನ ನಂ. 10 ಮುದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಬರುವ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ತುಂಬಾ ಮಳೆ ನೀರು ಸಂಗ್ರಹವಾಗಿ ರಸ್ತೆಯೇ ಮಾಯವಾಗಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಸಂಚರಿಸುವುದು ಹೇಗೆಂದು ಗ್ರಾಮದ ಯುವಕರು ದಿಢೀರ್ ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಉಗ್ರ ಹೋರಾಟದ ಎಚ್ಚರಿಸಿಕೆ ನೀಡಿದ್ದಾರೆ.
ಕಣ್ವಿ ತಿಮ್ಮಲಾಪುರದಿಂದ ಕಂಪ್ಲಿಗೆ ಎರಡು ಮಾರ್ಗಗಳಿದ್ದು, ಒಂದು ಗ್ರಾಮದಿಂದ ರಾಮಸಾಗರ ಮುಖಾಂತರ ಮತ್ತೊಂದು ಗ್ರಾಮದಿಂದ ಸಿದ್ದೇಶ್ವರ ಕ್ರಾಸ್ ಮೂಲಕ ಕಂಪ್ಲಿಗೆ ಸಂಪರ್ಕಿಸುತ್ತದೆ. ಆದರೆ ಗ್ರಾಮದಿಂದ ಈ ಎರಡು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆಯೇ ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರ ಹೇಗೆಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ. ರಸ್ತೆಯನ್ನು ನೋಡಿದರೆ, ರಸ್ತೆಯಲ್ಲಿ ಗುಂಡಿಯೋ, ಗುಂಡಿಯಲ್ಲಿ ರಸ್ತೆಯೋ ಎನ್ನುವಂತಾಗಿದ್ದು, ಇದೀಗ ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ಎರಡು ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ರಸ್ತೆಯೇ ಮಾಯವಾಗಿದೆ.
ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸ ಪಟ್ಟು ಸಂಚರಿಸುತ್ತಿದ್ದು, ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಅಸಮಧಾನ ವ್ಯಕ್ತ ಪಡಿಸಿದ ಗ್ರಾಮಸ್ಥರು ಕೂಡಲೇ ತಾಲ್ಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳು ಹದಗೆಟ್ಟ ರಸ್ತೆಯ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ತಮ್ಮ ಗ್ರಾಮದ ಹದಗೆಟ್ಟ ರಸ್ತೆಯ ಚಿತ್ರಗಳನ್ನು, ರಸ್ತೆಯ ದುಸ್ಥಿತಿಯನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪರಶುರಾಮ, ಜಗದೀಶ್, ಸಂತೋಷ್, ಯು.ನಾಗಪ್ಪ, ಟಿ.ರಮೇಶ್ ಸೇರಿದಂತೆ 30 ರಿಂದ 40 ಜನ ಭಾಗವಹಿಸಿದ್ದರು.

ಸರಳವಾಗಿ ರಾಜ್ಯೋತ್ಸವ ಆಚರಣೆ: ಗೌಸಿಯಾಬೇಗಂ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ಕೊರೊನಾ ವೈರಸ್ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ನ.೧ರಂದು ಆಚರಣೆ ಮಾಡಲಿರುವ ಕರ್ನಾಟಕ ರಾಜ್ಯೋತ್ಸವವನ್ನು ತಾಲೂಕು ಆಡಳಿತದಿಂದ ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯೋತ್ಸವ ಮತ್ತು ಹಬ್ಬಗಳ ಆಚರಣೆಗೆ ಸರ್ಕಾರದಿಂದ ನಿಯಮಗಳನ್ನು ಜಾರಿಗೊಳಿಸಿದ್ದು, ಸರ್ಕಾರದ ಆದೇಶದಂತೆ ಅತ್ಯಂತ ಸರಳವಾಗಿ ಆಚರಿಸಲಾಗುವುದು ತಿಳಿಸಿದರು.
ಕರ್ನಾಟಕ ರಾಜ್ಯೋತ್ಸವವನ್ನು ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಆಚರಣೆ ಮಾಡಲಾಗುವುದು. ಅಂದು ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪ್ರಥಮ ಬಾರಿಗೆ ನೂರಕ್ಕೆ ನೂರು ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಗುರುಗಳನ್ನು ಹಾಗೂ ಅಧಿಕ ಅಂಕ ಪಡೆದ ಶಾಲೆಯ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಅಧಿಕಾರಿಗಳ ಗೈರು: ತಾಲೂಕು ಆಡಳಿತ ಹಬ್ಬಗಳ ಆಚರಣೆ, ಜಯಂತಿಗಳಿಗೆ ಕರೆಯುವ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಿ ಹಾಗೂ ತಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತಿರುವ ಬಗ್ಗೆ ಗರಂ ಆದ ತಹಸೀಲ್ದಾರ್ ಗೌಸಿಯಾಬೇಗಂ, ಕಳೆದ ಹಲವಾರು ಸಭೆಗಳಲ್ಲಿ ಈ ಬಗ್ಗೆ ಚರ್ಚೆ ನಡೆಸಿದರೂ ಸಹಿತ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕನ್ನಡ ಜಾಗೃತಿ ಸಮತಿ ಸದಸ್ಯರಾದ ಜಿ. ಚಂದ್ರಶೇಖರಗೌಡ, ಎಸಿ. ದಾನಪ್ಪ, ಸಿಆರ್. ಹನುಮಂತಪ್ಪ, ಶಿರಸ್ತೇದಾರ ಎಸ್. ರೇಖಾಮಠ, ಮಾಲತೇಶ ದೇಶಪಾಂಡೆ, ಪಟ್ಟಣದ ಮುಖಂಡರು ಭಾಗವಹಿಸಿದ್ದರು.

error: Content is protected !!