ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿವಿಧ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಪಟ್ಟಣದ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಸ್ಪಿ, ಸಿಪಿಐ ಇವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಳ್ಳರನ್ನು ಬಲೆಗೆ ಬೀಳಿಸಿದ್ದಾರೆ.
ತಾಲೂಕಿನ ಶಿಗ್ಲಿ ಗ್ರಾಮದ ಮನೆಯ ಬಾಗಿಲು ಮುರಿದು ಅಂದಾಜು 1.80 ಲಕ್ಷ ರೂ ಬೆಲೆಯ ಬಂಗಾರದ ಆಭರಣ ಹಾಗೂ ಒಂದು ಲಕ್ಷ ರೂ ನಗದು ಹಣವನ್ನು ಕಳ್ಳರು ದೋಚಿದ್ದರು. ಹಾವೇರಿ ಜಿಲ್ಲೆಯ ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ಬೈಕ್ ಕಳ್ಳತನ, ಶಿಗ್ಗಾಂವ ತಾಲೂಕಿನ ಮಂಡಿಗನಾಳ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದು, ವಿಶೇಷ ತಂಡ ರಚಿಸಿ ಬಸವರಾಜ ಮೋಡಿಕೇರ, ಶೇಖಪ್ಪ ಮೋಡಿಕೇರ, ಮಂಜುನಾಥ ಮೋಡಿಕೇರ, ನಾಗರಾಜ ಮೋಡಿಕೇರ ಎಂಬ ನಾಲ್ವರು ಕಳ್ಳರನ್ನು ಪತ್ತೆ ಮಾಡಿ ಬಂಧಿಸಿ ಅವರಿಂದ ಕಳುವು ಮಾಡಿದ ಹಣ, ಒಡವೆ, ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ, ಲಕ್ಷ್ಮೇಶ್ವರ ಪಿಎಸ್ಐ ಈರಪ್ಪ ರಿತ್ತಿ, ಅಪರಾಧ ವಿಭಾಗದ ಪಿಎಸ್ಐ ಚನ್ನಬಸವ ಬಬಲಿ, ಎಎಸ್ಐ ಎಮ್.ಎ. ಮೌಲ್ವಿ, ಗುರು ಬೂದಿಹಾಳ, ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ, ಎಮ್.ಎಸ್. ಬಳ್ಳಾರಿ, ಗಣೇಶ ಗ್ರಾಮಪುರೋಹಿತ, ಎಚ್.ಐ. ಕಲ್ಲಣ್ಣನವರ, ಪಾಂಡುರಂಗರಾವ್, ಮಧುಚಂದ್ರ ಧಾರವಾಡ, ಸಂಜು ಕೊರಡೂರ, ಅಪ್ಪಣ್ಣ ರಾಠೋಡ, ಹನುಮರೆಡ್ಡಿ ತಾರಿಕೊಪ್ಪ ಮುಂತಾದವರಿದ್ದರು. ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಬಿ.ಎಸ್. ನೇಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.