Home Blog Page 76

ಸಿಎಂ ಸಿದ್ದರಾಮಯ್ಯರ ದಾಖಲೆ ಬಜೆಟ್ ಮಂಡನೆಗೆ ಕ್ಷಣಗಣನೆ: ಜನಪರ ಯೋಜನೆಗಳತ್ತ ಗಮನ!

ಬೆಂಗಳೂರು: 2026–27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ 2026–27ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಆಯವ್ಯಯದ ಮೇಲೆ ರಾಜ್ಯದ ಜನತೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದು, ಗ್ಯಾರಂಟಿ ಯೋಜನೆಗಳಷ್ಟೇ ಅಲ್ಲದೆ ಶಿಕ್ಷಣ, ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ಆರೋಗ್ಯ ಸೇರಿದಂತೆ ಪ್ರಮುಖ ವಲಯಗಳಿಗೆ ಬಂಪರ್ ಘೋಷಣೆಗಳ ನಿರೀಕ್ಷೆಯಿದೆ.

ಹಣಕಾಸು ಇಲಾಖೆ ಸಿದ್ಧಪಡಿಸಿರುವ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ಜನಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಈ ಬಾರಿ ರಾಜ್ಯದ ಒಟ್ಟು ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ರೂಪಾಯಿಗಳ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಸಾಲದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳ ನಿರ್ವಹಣೆ, ವಿವಿಧ ಇಲಾಖೆಗಳ ಅಭಿವೃದ್ಧಿ, ರೈತರ ಸಮಸ್ಯೆಗೆ ಪರಿಹಾರ, ಮಹಿಳೆಯರಿಗೆ ವಿಶೇಷ ಯೋಜನೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಸೇರಿದಂತೆ ಹಲವು ಸವಾಲುಗಳ ನಡುವೆ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 17ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಯಾವ ರೀತಿಯ ಆದ್ಯತೆ ಸಿಗಲಿದೆ ಎಂಬುದನ್ನು ಕಾದುನೋಡುವಂತಾಗಿದೆ.

ಬೃಹತ್ ‘ರಾಮಾಯಣ’ ಸಿನಿಮಾದ ಎರಡನೇ ಭಾಗ ಚಿತ್ರೀಕರಣ ಶುರು: ರಣಬೀರ್–ಸನ್ನಿ ಡಿಯೋಲ್ ಕಾಂಬಿನೇಶನ್ ದೃಶ್ಯಗಳಿಗೆ ಭಾರೀ ಸಿದ್ಧತೆ

ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಯೋಜನೆಗಳಲ್ಲಿ ಒಂದಾದ ‘ರಾಮಾಯಣ’ ಸಿನಿಮಾ ಈಗ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿರುವ ರಣಬೀರ್ ಕಪೂರ್ ಈಗಾಗಲೇ ಚಿತ್ರದ ಎರಡನೇ ಭಾಗದ ಚಿತ್ರೀಕರಣಕ್ಕೆ ಸೆಟ್ ಸೇರಿಕೊಂಡಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ರೂಪಿಸುತ್ತಿರುವ ಈ ಮಹತ್ವಾಕಾಂಕ್ಷಿ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಈಗ ‘ರಾಮಾಯಣ 2’ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ.

ಈ ಭಾಗದಲ್ಲಿ ಶ್ರೀರಾಮ ಮತ್ತು ಹನುಮಂತನ ಭೇಟಿಯ ದೃಶ್ಯಗಳು ವಿಶೇಷ ಆಕರ್ಷಣೆಯಾಗಲಿವೆ. ಹನುಮಂತನ ಪಾತ್ರವನ್ನು ಬಾಲಿವುಡ್‌ನ ಹಿರಿಯ ನಟ ಸನ್ನಿ ಡಿಯೋಲ್ ನಿರ್ವಹಿಸುತ್ತಿದ್ದು, ಅವರು ಮಾರ್ಚ್ 20ರ ನಂತರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

ಚಿತ್ರದಲ್ಲಿ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ಮಾಡುತ್ತಿದ್ದು, ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಭಾರೀ ಗ್ರಾಫಿಕ್ಸ್ ಮತ್ತು ದೃಶ್ಯ ವೈಭವದೊಂದಿಗೆ ಸಿನಿಮಾ ಮೂಡಿ ಬರುತ್ತಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಹಾಲಿವುಡ್ ಮಟ್ಟದ ತಂತ್ರಜ್ಞಾನ ಬಳಸಲಾಗುತ್ತಿದೆ. ಅಲ್ಲದೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಚಿತ್ರದ ಫೈನಲ್ ಕಟ್ ವೀಕ್ಷಿಸಿ ಸಲಹೆ ನೀಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಈ ನಡುವೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿರುವುದರಿಂದ, ರಣಬೀರ್ ಕಪೂರ್ ತಮ್ಮ ಸಂಪೂರ್ಣ ಗಮನವನ್ನು ಈಗ ‘ರಾಮಾಯಣ 2’ ಕಡೆಗೆ ಹರಿಸಿದ್ದಾರೆ.

ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ಮಧ್ಯೆ ತ್ರಿಷಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್!

ತಮಿಳು ಸಿನಿರಂಗದ ಜನಪ್ರಿಯ ನಟ ದಳಪತಿ ವಿಜಯ್ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. 27 ವರ್ಷಗಳ ದಾಂಪತ್ಯ ಜೀವನದ ಬಳಿಕ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ನಡುವೆ, ವಿಜಯ್ ಅವರು ನಟಿ ತ್ರಿಷಾ ಕೃಷ್ಣನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಚೆನ್ನೈನಲ್ಲಿ ನಡೆದ ಎಸ್‌. ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ವಿಜಯ್ ಹಾಗೂ ತ್ರಿಷಾ ಒಟ್ಟಿಗೆ ಹಾಜರಾಗಿದ್ದರು. ಈ ಕಾರ್ಯಕ್ರಮದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ವಿಜಯ್ ಅವರ ವಿಚ್ಛೇದನ ವಿಚಾರದಲ್ಲಿ ತ್ರಿಷಾ ಹೆಸರು ಕೇಳಿಬರುತ್ತಿರುವುದು ಈ ಹಿಂದೆ ಹರಿದಾಡಿದ ಗಾಸಿಪ್‌ಗಳಿಗೆ ಮತ್ತೆ ಜೀವ ತುಂಬಿದೆ. ಇಬ್ಬರೂ ದೀರ್ಘಕಾಲದಿಂದ ಸ್ನೇಹಿತರಾಗಿದ್ದು, ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.

ಈ ವಿವಾದದ ಬಗ್ಗೆ ತಮಿಳುನಾಡಿನಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವರು ವಿಜಯ್ ಅವರ ನೈತಿಕತೆ ಬಗ್ಗೆ ಪ್ರಶ್ನೆ ಎತ್ತುತ್ತಿದ್ದರೆ, ಅಭಿಮಾನಿಗಳು ಇದು ಮುಂಬರುವ ರಾಜಕೀಯ ಬೆಳವಣಿಗೆಗಳ ನಡುವೆ ಸೃಷ್ಟಿಸಲಾದ ವಿವಾದ ಎಂದು ಹೇಳುತ್ತಿದ್ದಾರೆ.

ವಿಜಯ್ ಅವರ ರಾಜಕೀಯ ಪ್ರವೇಶದ ಹಿನ್ನೆಲೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಗಳ ಸನ್ನಿವೇಶದಲ್ಲಿ ಈ ವಿಷಯ ಯಾವ ರೀತಿಯ ತಿರುವು ಪಡೆಯುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಇಂಗ್ಲೆಂಡ್‌ ವಿರುದ್ಧ 7 ರನ್‌ ರೋಚಕ ಜಯ: ಫೈನಲ್​ಗೇರಿದ ಟೀಂ ಇಂಡಿಯಾ!

0

ರೋಚಕ ಹೋರಾಟಕ್ಕೆ ಸಾಕ್ಷಿಯಾದ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ತ್ರಿಲ್ಲಿಂಗ್ ಜಯ ಸಾಧಿಸಿ ಟಿ20 ವಿಶ್ವಕಪ್ ಫೈನಲ್‌ಗೆ ಭರ್ಜರಿ ಪ್ರವೇಶ ಮಾಡಿದೆ.

ಸಂಜು ಸ್ಯಾಮ್ಸನ್‌ ಅವರ ಸ್ಫೋಟಕ ಬ್ಯಾಟಿಂಗ್‌, ಅಕ್ಷರ್ ಪಟೇಲ್ ಅವರ ಅದ್ಭುತ ಕ್ಯಾಚ್‌ಗಳು ಹಾಗೂ ಜಸ್ಪ್ರೀತ್ ಬುಮ್ರಾ ಅವರ ಕೊನೆಯ ಓವರ್‌ಗಳ ನಿಯಂತ್ರಿತ ಬೌಲಿಂಗ್ ಭಾರತಕ್ಕೆ ಜಯ ತಂದುಕೊಟ್ಟವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಈ ಭಾರೀ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಬೆಥೆಲ್ ಅವರ ಸ್ಫೋಟಕ ಶತಕದ ಹೊರತಾಗಿಯೂ 7 ವಿಕೆಟ್‌ಗೆ 246 ರನ್ ಗಳಿಸಿ ಸೋಲಿಗೆ ತುತ್ತಾಯಿತು.

ಕೊನೆಯ ಮೂರು ಓವರ್‌ಗಳಲ್ಲಿ 45 ರನ್ ಅಗತ್ಯವಿದ್ದಾಗ ಬುಮ್ರಾ 18ನೇ ಓವರ್‌ನಲ್ಲಿ ಕೇವಲ 6 ರನ್ ನೀಡಿ ಪಂದ್ಯವನ್ನು ಭಾರತ ಪರ ತಿರುಗಿಸಿದರು. ನಂತರ ಹಾರ್ದಿಕ್ ಪಾಂಡ್ಯ 19ನೇ ಓವರ್‌ನಲ್ಲಿ 9 ರನ್ ನೀಡಿ ಸ್ಯಾಮ್ ಕರ್ರನ್ ವಿಕೆಟ್ ಪಡೆದರು. ಬೌಂಡರಿ ಗೆರೆಯಲ್ಲಿ ತಿಲಕ್ ವರ್ಮಾ ಹಿಡಿದ ಅದ್ಭುತ ಕ್ಯಾಚ್ ಪಂದ್ಯಕ್ಕೆ ಮತ್ತಷ್ಟು ರೋಚಕತೆ ತಂದಿತು. ಅಂತಿಮ ಓವರ್‌ನಲ್ಲಿ ಶಿವಂ ದುಬೆ ಬೌಲಿಂಗ್ ಮಾಡುತ್ತಿದ್ದಾಗ ಬೆಥೆಲ್ 105 ರನ್ (48 ಎಸೆತ, 8 ಬೌಂಡರಿ, 7 ಸಿಕ್ಸ್) ಹೊಡೆದು ರನ್ ಔಟ್ ಆಗಿದ್ದು ಇಂಗ್ಲೆಂಡ್ ಗೆ ದೊಡ್ಡ ಹೊಡೆತವಾಯಿತು.

ಕೊನೆಯಲ್ಲಿ ಜೋಫ್ರಾ ಅರ್ಚರ್ ಮೂರು ಸಿಕ್ಸ್ ಹೊಡೆದರೂ ಭಾರತ 7 ರನ್‌ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಅಕ್ಷರ್ ಪಟೇಲ್ ಫಿಲ್ ಸಾಲ್ಟ್, ಹ್ಯಾರಿ ಬ್ರೂಕ್ ಮತ್ತು ವಿಲ್ ಜಾಕ್ಸ್ ಅವರ ಪ್ರಮುಖ ಕ್ಯಾಚ್‌ಗಳನ್ನು ಹಿಡಿದು ಪಂದ್ಯದಲ್ಲಿ ಮಹತ್ವದ ಪಾತ್ರವಹಿಸಿದರು. ಫೈನಲ್ ಪಂದ್ಯ ಭಾನುವಾರ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.

ಬೈಕ್–ಕಾರು ನಡುವೆ ಭೀಕರ ಅಪಘಾತ: ಮೂವರು ಬೈಕ್ ಸವಾರರ ದುರ್ಮರಣ!

ಗದಗ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸಾವನ್ನಪ್ಪಿರುವ ದುರ್ಘಟನೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾವನ್ನಪ್ಪಿದವರನ್ನು ಆನಂದ ಲಕ್ಷ್ಮೇಶ್ವರಮಠ (50), ಶಿವಪ್ಪ ಪಾಟ್ಲಿ (36) ಹಾಗೂ ಮುತ್ತಪ್ಪ ಮುದಗಣ್ಣವರ (28) ಎಂದು ಗುರುತಿಸಲಾಗಿದೆ.

ಮುಂಡರಗಿ ಪಟ್ಟಣದಿಂದ ಜಂತ್ಲಿ ಶಿರೂರ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಸವಾರರು ಮತ್ತು ಡೋಣಿ ಗ್ರಾಮದಿಂದ ಹಿರೇಹಡಗಲಿ ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಬರದೂರು ಹಾಗೂ ಮೇವುಂಡಿ ಗ್ರಾಮಗಳ ಮಧ್ಯೆ ಈ ಅಪಘಾತ ಸಂಭವಿಸಿದೆ.

ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಒಂದೇ ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೂವರು ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಸ್ಥಳದಲ್ಲೇ ಆನಂದ ಲಕ್ಷ್ಮೇಶ್ವರಮಠ ಮತ್ತು ಶಿವಪ್ಪ ಪಾಟ್ಲಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುತ್ತಪ್ಪ ಮುದಗಣ್ಣವರ ಅವರನ್ನು ಸ್ಥಳೀಯರು ಮತ್ತು ಪೊಲೀಸರು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಪಘಾತದ ಸುದ್ದಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ದುರ್ಘಟನೆಯಿಂದ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ದುಃಖ ಮೂಡಿಸಿದೆ.

ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಸಿದ್ದರಾಮಯ್ಯ ಈ ಬಾರಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡಿಸಲಿದ್ದಾರೆ: ಆರ್. ಅಶೋಕ್ ಟೀಕೆ

ಬೆಂಗಳೂರು: ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹1.15 ಲಕ್ಷ ಕೋಟಿ ಸಾಲ ಪಡೆದು ಬಜೆಟ್ ಮಂಡಿಸಲಿದ್ದಾರೆ. ಜನರ ಮೇಲೆ ಮತ್ತೊಮ್ಮೆ ತೆರಿಗೆಗಳ ಹೊರೆ ಹಾಕುವುದು ಖಚಿತ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಗೆ ಮುನ್ನ ಗ್ಯಾರಂಟಿ ಯೋಜನೆಗಳನ್ನು ಜನರ ಮೇಲೆ ಹೊರೆ ಹಾಕದೇ ಜಾರಿಗೊಳಿಸುವುದಾಗಿ ಭರವಸೆ ನೀಡಿದರೂ, ಈಗ ತೆರಿಗೆಗಳ ಮೂಲಕ ಜನರ ಮೇಲೆ ಭಾರ ಹಾಕಲಾಗಿದೆ ಎಂದು ಅವರು ದೂರಿದರು. ಸಿದ್ದರಾಮಯ್ಯ ಅವರ ಅವಧಿ ಮುಗಿಯುವ ವೇಳೆಗೆ ರಾಜ್ಯದ ಒಟ್ಟು ಸಾಲ ₹8 ಲಕ್ಷ ಕೋಟಿ ಮೀರಲಿದೆ. ಇದರಿಂದ ಆರ್ಥಿಕ ಶಿಸ್ತು ಹಾಳಾಗಲಿದೆ ಎಂದು ಅಶೋಕ್ ಹೇಳಿದರು.

ಸಿಎಂ ಇಲ್ಲದ ಆದಾಯವನ್ನು ಸೃಷ್ಟಿಸಿದಂತೆ ತೋರಿಸಿ ಜಿಎಸ್ಡಿಪಿಗೆ ಹೋಲಿಕೆಯ ಶೇಕಡಾವಾರು ಕಡಿಮೆ ಇದೆ ಎಂದು ಪ್ರದರ್ಶಿಸುತ್ತಿದ್ದಾರೆ. ಇದನ್ನು ಆರ್ಥಿಕ ಶಿಸ್ತು ಎಂದು ತೋರಿಸುವುದು ತಪ್ಪು ಎಂದು ಅವರು ಟೀಕಿಸಿದರು. “ಸಾಲ ಮಾಡಿ ಸರ್ಕಾರ ನಡೆಸಲು ಯಾರೂ ಬೇಕಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಜನರ ನಿರೀಕ್ಷೆ ಸುಳ್ಳಾಗಿದೆ” ಎಂದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲವಿಲ್ಲದ ಬಜೆಟ್ ಮಂಡಿಸಿದ್ದರು. ಇನ್ನೂ ₹24,400 ಕೋಟಿ ಸಾಲ ಪಡೆಯುವ ಅವಕಾಶವಿದ್ದರೂ ಅವರು ಸಾಲ ಪಡೆದಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಸಾಲ ಪಡೆಯುತ್ತಿದೆ. ಈ ಬಾರಿ ₹1.15 ಲಕ್ಷ ಕೋಟಿ ಸಾಲ ಪಡೆಯುವ ಸಾಧ್ಯತೆ ಇದೆ ಎಂದು ಅಶೋಕ್ ಆರೋಪಿಸಿದರು.

ಮೂತ್ರದಲ್ಲಿ ರಕ್ತ ಕಾಣುವುದು ಕ್ಯಾನ್ಸರ್ ಲಕ್ಷಣವೇ? ತಡೆಯುವುದು ಹೇಗೆ?

0

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಇದಕ್ಕೆ ಯೂರಿನರಿ ಇನ್ಫೆಕ್ಷನ್, ಕಿಡ್ನಿ ಸ್ಟೋನ್ ಅಥವಾ ಕೆಲವು ಔಷಧಿಗಳ ಸೇವನೆಯಿಂದ ಉಂಟಾಗುವ ಅಡ್ಡಪರಿಣಾಮಗಳು ಕಾರಣವಾಗಿರಬಹುದು.

ಕೆಲವೊಮ್ಮೆ ಪ್ರೋಸ್ಟೇಟ್ ಸಮಸ್ಯೆಯೂ ಈ ಸಮಸ್ಯೆಗೆ ಕಾರಣವಾಗಬಹುದು. ಪ್ರತಿಯೊಂದು ಸಂದರ್ಭದಲ್ಲೂ ಇದು ಕ್ಯಾನ್ಸರ್ ಲಕ್ಷಣವೆಂದು ಅರ್ಥಮಾಡಿಕೊಳ್ಳುವುದು ತಪ್ಪು. ಹಾಗಾಗಿ ಈ ರೀತಿಯ ಲಕ್ಷಣವನ್ನು ನಿರ್ಲಕ್ಷ್ಯ ಮಾಡುವುದು ಅಪಾಯಕರವಾಗಿದೆ.

ಒಂದು ಅಥವಾ ಎರಡು ಬಾರಿ ಈ ಸಮಸ್ಯೆ ಕಾಣಿಸಿಕೊಂಡರೆ ಹೆಚ್ಚಿನ ಆತಂಕ ಬೇಡ, ಆದರೆ ಇದು ಪದೇ ಪದೇ ಆಗುತ್ತಿದೆಯೆಂದು ಕಂಡರೆ ತಕ್ಷಣ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಜನರು ಮೂತ್ರ ಸಂಬಂಧಿತ ಸಮಸ್ಯೆಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ; ಮೂತ್ರ ಮಾಡುವಾಗ ದುರ್ವಾಸನೆ ಬರುವುದು, ಉರಿ ಉಂಟಾಗುವುದು ಮುಂತಾದ ಲಕ್ಷಣಗಳನ್ನು ಸಾಮಾನ್ಯವೆಂದು ಕಡೆಗಣಿಸುತ್ತಾರೆ.

ಮೂತ್ರದಲ್ಲಿ ರಕ್ತ ಕಾಣುವುದು ಕ್ಯಾನ್ಸರ್ ಲಕ್ಷಣವೇ?

ಮೂತ್ರದಲ್ಲಿ ರಕ್ತ ಕಾಣಿಸುವುದು ಕಿಡ್ನಿ ಕ್ಯಾನ್ಸರ್‌ನ ಏಕೈಕ ಲಕ್ಷಣವಲ್ಲ. ಆದರೆ ಪದೇ ಪದೇ, ತೀವ್ರ ನೋವು, ದೇಹ ತೂಕ ಕಡಿಮೆಯಾಗುವುದು, ಬೆನ್ನು ಭಾಗದ ನಿರಂತರ ನೋವು ಇತ್ಯಾದಿ ಲಕ್ಷಣಗಳೊಂದಿಗೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಪ್ರಾಥಮಿಕವಾಗಿ ಯೂರಿನ್ ಟೆಸ್ಟ್ ಮತ್ತು ಅಲ್ಟ್ರಾಸೌಂಡ್ ಮಾಡಲಾಗುತ್ತದೆ. ಕೆಲವೊಮ್ಮೆ ಗಂಭೀರ ಸಂದರ್ಭಗಳಲ್ಲಿ ಸಿಸ್ಟೋಸ್ಕೋಪಿ ಪರೀಕ್ಷೆ ನಡೆಯಬಹುದು.

ತಡೆಯುವುದು ಹೇಗೆ?

  • ಪ್ರತಿದಿನ ಕನಿಷ್ಠ 7 ಗ್ಲಾಸ್ ನೀರು ಕುಡಿಯಿರಿ
  • ಮೂತ್ರವನ್ನು ಹಿಡಿದಿಟ್ಟುಕೊಳ್ಳಬೇಡಿ
  • ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆಯಿರಿ
  • ಮೂತ್ರದಲ್ಲಿ ರಕ್ತ ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆಯ ಸೂಚಕವಾಗಿರಬಹುದು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಪಡೆದು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: 6 ದಿನಗಳಲ್ಲಿ 23 ಸಾವಿರಕ್ಕೂ ಹೆಚ್ಚು ವಿಮಾನ ರದ್ದು

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಕಳೆದ ಆರು ದಿನಗಳಲ್ಲಿ 23,000ಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದು, ಜಾಗತಿಕ ವಿಮಾನಯಾನ ಉದ್ಯಮದ ಮೇಲೆ ದೊಡ್ಡ ಆರ್ಥಿಕ ಪರಿಣಾಮ ಉಂಟಾಗಿದೆ.

ಇರಾನ್ಇಸ್ರೇಲ್ ಸಂಘರ್ಷದ ಹಿನ್ನೆಲೆ ಫೆಬ್ರವರಿ 28ರಿಂದ ಗಲ್ಫ್ ಪ್ರದೇಶಕ್ಕೆ ಹಾಗೂ ಅಲ್ಲಿಂದ ಇತರ ದೇಶಗಳಿಗೆ ನಿಗದಿಯಾಗಿದ್ದ 23,000ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರ ಪರಿಣಾಮವಾಗಿ ಸುಮಾರು 4.4 ಮಿಲಿಯನ್ (44 ಲಕ್ಷ) ಪ್ರಯಾಣಿಕರ ಸೀಟುಗಳು ಪ್ರಭಾವಿತರಾಗಿವೆ.

ವಿಮಾನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ Air India ಹೆಚ್ಚುವರಿ ಸೇವೆಗಳನ್ನು ಆರಂಭಿಸಲು ಮುಂದಾಗಿದೆ. ಮಾರ್ಚ್ 5ರಿಂದ 11ರವರೆಗೆ ದೆಹಲಿ–ಟೊರೊಂಟೊ ಮಾರ್ಗದಲ್ಲಿ ಹಾಗೂ ಮಾರ್ಚ್ 7ರಿಂದ 10ರವರೆಗೆ ದೆಹಲಿ–ಫ್ರಾಂಕ್ಫರ್ಟ್ ಮಾರ್ಗದಲ್ಲಿ ಮೂರು ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸಲಿವೆ.

ಜೊತೆಗೆ ದೆಹಲಿ–ಪ್ಯಾರಿಸ್ ನಡುವೆ ಒಂದು ಹೆಚ್ಚುವರಿ ವಿಮಾನವನ್ನು ನಿಯೋಜಿಸಲಾಗಿದೆ. ಮಧ್ಯಪ್ರಾಚ್ಯದಿಂದ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಮಾರ್ಚ್ 11ರ ಬಳಿಕವೂ ಹೆಚ್ಚುವರಿ ಸೇವೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ವೇಳೆ ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಎಮಿರೇಟ್ಸ್ ದುಬೈಗೆ ಮತ್ತು ದುಬೈನಿಂದ ವಿಮಾನಗಳ ಸ್ಥಗಿತವನ್ನು ಮಾರ್ಚ್ 7ರವರೆಗೆ ವಿಸ್ತರಿಸಿದೆ. ಕಳೆದ ಶನಿವಾರದಿಂದ 2,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಒಮಾನ್ ಏರ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್ 6ರವರೆಗೆ ಅಮ್ಮಾನ್, ದುಬೈ, ಬಹ್ರೇನ್, ದೋಹಾ, ದಮ್ಮಾಮ್, ಕುವೈತ್, ಕೋಪನ್‌ಹ್ಯಾಗನ್, ಬಾಗ್ದಾದ್ ಮತ್ತು ಖಾಸಬ್‌ಗೆ ಹಾಗೂ ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ದಟ್ಟಣೆಯಿಂದಾಗಿ ಮಸ್ಕತ್‌ಗೆ ಪ್ರಯಾಣಿಸುವವರು ನಿರ್ಗಮನಕ್ಕೆ ಕನಿಷ್ಠ 12 ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಸಂಸ್ಥೆ ಸೂಚಿಸಿದೆ.

ಮಹಿಳಾ ದಿನಾಚರಣೆ ಎಫೆಕ್ಟ್: ಮೈಸೂರು ಸಿಲ್ಕ್ ಸೀರೆಗೆ ಭಾರೀ ಕ್ರೇಜ್ – ಬೆಳಗ್ಗೆ 4 ಗಂಟೆಗೇ KSIC ಮಳಿಗೆ ಮುಂದೆ ಮಹಿಳೆಯರ ಕ್ಯೂ!

ಬೆಂಗಳೂರು: ಮಹಿಳಾ ದಿನಾಚರಣೆ ಸಮೀಪಿಸುತ್ತಿದ್ದಂತೆ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಮೈಸೂರು ಸಿಲ್ಕ್ ಸೀರೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕಾಣಿಸಿಕೊಂಡಿದೆ. ಬೆಂಗಳೂರಿನ ಜಯನಗರದಲ್ಲಿರುವ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ (KSIC) ಮಳಿಗೆಯ ಮುಂದೆ ಮಹಿಳೆಯರು ಮುಂಜಾನೆ 4 ಗಂಟೆಯಿಂದಲೇ ಸರತಿಯ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.

ಸಾಮಾನ್ಯವಾಗಿ ಈ ಮಳಿಗೆ ಬೆಳಗ್ಗೆ 10:30ಕ್ಕೆ ಮಾತ್ರ ಬಾಗಿಲು ತೆರೆಯುತ್ತದೆ. ಆದರೆ ಸೀರೆಗಳ ಸ್ಟಾಕ್ ಖಾಲಿಯಾಗುವ ಭಯದಿಂದ ಮಹಿಳೆಯರು ಬೆಳಗಿನ ಜಾವವೇ ಬಂದು ಕ್ಯೂನಲ್ಲಿ ನಿಂತಿದ್ದಾರೆ. ಕೇವಲ ಬೆಂಗಳೂರಿನವರಷ್ಟೇ ಅಲ್ಲದೆ ಶಿರಸಿ, ಶಿರಾ, ಚಳ್ಳಕೆರೆ ಸೇರಿದಂತೆ ನೆರೆಯ ಅನಂತಪುರದಿಂದಲೂ ಮಹಿಳೆಯರು ಮೈಸೂರು ಸಿಲ್ಕ್ ಸೀರೆ ಖರೀದಿಸಲು ಆಗಮಿಸಿದ್ದಾರೆ.

ಮಳಿಗೆಯ ಸಿಬ್ಬಂದಿ ಅಪಾರ ಸಂಖ್ಯೆಯಲ್ಲಿ ಸೇರಿರುವ ಮಹಿಳೆಯರನ್ನು ನಿಯಂತ್ರಿಸಲು ಟೋಕನ್ ವ್ಯವಸ್ಥೆ ಮಾಡಿದ್ದು, ಟೋಕನ್ ಪಡೆಯಲು ಮಹಿಳೆಯರ ನಡುವೆ ಭಾರೀ ನೂಕಾಟ ಹಾಗೂ ವಾಗ್ವಾದಗಳೂ ನಡೆಯುತ್ತಿವೆ.

ಸದ್ಯ ಮಳಿಗೆಯಲ್ಲಿ ಕೇವಲ 45 ಮೈಸೂರು ಸಿಲ್ಕ್ ಸೀರೆಗಳು ಮಾತ್ರ ಲಭ್ಯವಿದ್ದು, ಹೊರಗಡೆ 100ಕ್ಕೂ ಹೆಚ್ಚು ಮಹಿಳೆಯರು ಕಾದು ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಒಂದು ಟೋಕನ್‌ಗೆ ಒಂದು ಸೀರೆ’ ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ.

ಇಲ್ಲಿ ಮೈಸೂರು ಸಿಲ್ಕ್ ಸೀರೆಗಳು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಿರುವುದಿಲ್ಲ. ಪ್ರತಿ ಗುರುವಾರ ಹಾಗೂ ಶನಿವಾರ ಮಾತ್ರ ವಿತರಣೆ ಮಾಡಲಾಗುತ್ತದೆ. ಸೀರೆಗಳ ಬೆಲೆ 26 ಸಾವಿರ ರೂಪಾಯಿಯಿಂದ ಆರಂಭವಾಗಿ ಸುಮಾರು 3 ಲಕ್ಷ ರೂಪಾಯಿವರೆಗೂ ಇದೆ.

ಮುಂಬರುವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ತಮಗೆ ತಾವೇ ಉಡುಗೊರೆ ನೀಡಿಕೊಳ್ಳಲು ಹಾಗೂ ತಮ್ಮ ಪ್ರೀತಿಪಾತ್ರರಿಗೆ ಕಾಣಿಕೆ ನೀಡಲು ಮಹಿಳೆಯರು ದುಬಾರಿ ಮೈಸೂರು ಸಿಲ್ಕ್ ಸೀರೆಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ಅದ್ಧೂರಿ ರಿಸೆಪ್ಷನ್: ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ನ್ಯಾಷನಲ್‌ ಕ್ರಶ್‌, ಆರತಕ್ಷತೆಯಲ್ಲಿ ಡಿಸಿಎಂ ಡಿಕೆಶಿ ಭಾಗಿ

ನ್ಯಾಷನಲ್ ಕ್ರಷ್ ಎಂದೇ ಖ್ಯಾತಿಯಾಗಿರುವ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್‌ನ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.

ಫೆಬ್ರವರಿ 26ರಂದು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ನಿನ್ನೆ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನವಜೋಡಿಯ ರಿಸೆಪ್ಷನ್ ಕಾರ್ಯಕ್ರಮವನ್ನು ಭರ್ಜರಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ನವಜೋಡಿಯ ಸಾಂಪ್ರದಾಯಿಕ ಉಡುಗೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಹಾಗೂ ರಿಸೆಪ್ಷನ್‌ಗಳಲ್ಲಿ ದುಬಾರಿ ಡಿಸೈನರ್ ಉಡುಪು ಧರಿಸುವುದು ರೂಢಿ. ಆದರೆ ಈ ಜೋಡಿ ವಿಭಿನ್ನವಾಗಿ ಸಾಂಪ್ರದಾಯಿಕ ವೇಷಭೂಷಣದಲ್ಲಿ ಮಿಂಚಿದರು.

ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಮೈಸೂರು ಸಿಲ್ಕ್ ಸೀರೆ ಧರಿಸಿ ಮಿರಮಿರನೆ ಮಿಂಚಿದರೆ, ವಿಜಯ್ ದೇವರಕೊಂಡ ಪಂಚೆ ಮತ್ತು ಶರ್ಟ್ ಧರಿಸಿ ದೇಸಿ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದರು.

ಈ ಅದ್ಧೂರಿ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದ ಗಣ್ಯರು ಮಾತ್ರವಲ್ಲದೆ ರಾಜಕೀಯ ನಾಯಕರು ಕೂಡ ಭಾಗವಹಿಸಿದ್ದರು. ವಿಶೇಷವಾಗಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮದಲ್ಲಿ ಹಾಜರಾಗಿ ನವಜೋಡಿಗೆ ಶುಭಾಶಯ ಕೋರಿದರು.

error: Content is protected !!