Home Blog Page 79

ರಾಶಿ ರಾಶಿ ಆಧಾರ್ ಕಾರ್ಡ್​​ಗಳು ನೇತ್ರಾವತಿ ನದಿ ತೀರದಲ್ಲಿ ಪತ್ತೆ: ಸಾರ್ವಜನಿಕರಿಗೆ ಆಘಾತ!

ಮಂಗಳೂರು:- ರಾಶಿ ರಾಶಿ ಆಧಾರ್ ಕಾರ್ಡ್​​ಗಳು ನೀರಲ್ಲಿ ತೇಲಿಬಂದ ಆಘಾತಕಾರಿ ಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆಯ ನೇತ್ರಾವತಿ ನದಿ ತೀರದಲ್ಲಿ ಜರುಗಿದೆ.

ನದಿ ತೀರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಧಾರ್​​ ಕಾರ್ಡ್​ಗಳನ್ನು ಕಂಡು ಸಾರ್ವಜನಿಕರು ಶಾಕ್​​ ಆಗಿದ್ದು, ಈ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧ್ಯಕ್ಷರು ಸಾರ್ವಜನಿಕರ ಜೊತೆಗೂಡಿ ನೂರಾರು ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಿದ್ದಾರೆ.

ಘಟನೆಯಿಂದ ಸಾರ್ವಜನಿಕರು ಆಘಾತಕ್ಕೊಳಗಾಗಿದ್ದು, ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಆಧಾರ್ ಕಾರ್ಡ್‌ಗಳು ತಮಗೆ ತಲುಪದ ಕಾರಣ ಅನೇಕರು ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯು.ಟಿ. ಖಾದರ್ ಅವರು ಈ ಘಟನೆಯ ಸಮಗ್ರ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಘಟನೆ ಬೆನ್ನಲ್ಲೇ ಸ್ಥಳೀಯ ಶಾಸಕ ಯು.ಟಿ. ಖಾದರ್ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಆಧಾರ್ ಕಾರ್ಡ್‌ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು? ಮತ್ತು ಇದಕ್ಕೆ ಕಾರಣರಾದವರು ಯಾರೆಂಬುದನ್ನು ತನಿಖೆ ನಡೆಸಿ ಪತ್ತೆ ಹಚ್ಚಿ ತಮ್ಮ ಇಲಾಖೆಯ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಯು.ಐ.ಡಿ.ಎ.ಐ ಯೋಜನಾ ವ್ಯವಸ್ಥಾಪಕರಿಗೆ ಸೂಚನೆ ಕೊಡಲಾಗಿದೆ ಎಂದಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧ ನೌಕೆ ಮುಳುಗಿ 87 ಮಂದಿ ಸಾವು: ಮೋದಿ ಮೌನ ಪ್ರಶ್ನಿಸಿದ ‘ರಾಗಾ’!

0

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷವು ಭಾರತ ದೇಶದ ಹಿತ್ತಲಿಗೆ ತಲುಪಿದ್ದು, ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧ ನೌಕೆ ಮುಳುಗಿ 87 ಮಂದಿ ಸಾವನ್ನಪ್ಪಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಘಟನೆಯ ಬಗ್ಗೆ ಏನೂ ಹೇಳದೆ ಮೌನವಾಗಿರುವುದನ್ನು ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಜಗತ್ತು ಅಸ್ಥಿರ ಹಂತ ತಲುಪಿದ್ದು, ಸಮುದ್ರದ ಬಿರುಗಾಳಿ ಭಾರತವನ್ನು ಎದುರಿಸುತ್ತಿದೆ. ದೇಶದ ತೈಲ ಸರಬರಾಜಿನ 40% ಗಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವುದರಿಂದ ಭದ್ರತೆಗೆ ಅಪಾಯವಾಗಿದೆ.

ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆ ಪರಿಸ್ಥಿತಿಯು ಗಂಭೀರವಾಗಿದೆ. ಸರ್ಕಾರವು ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಳೆದುಕೊಂಡಿದ್ದು, ಪ್ರಧಾನಿ ಮೌನ ತಾಳಿದ್ದಾರೆ. ಇಂತಹ ಕ್ಷಣದಲ್ಲಿ ನಮಗೆ ಚಕ್ರದಲ್ಲಿ ಬಲವಾದ ಕೈ ಬೇಕು. ಆದ್ರೆ ಭಾರತವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನ ಬಿಟ್ಟುಕೊಟ್ಟ ಹಾಗೂ ರಾಜಿ ಮಾಡಿಕೊಂಡ ಪ್ರಧಾನಿಯನ್ನ ಹೊಂದಿದೆ ಎಂದು ಮೋದಿ ವಿರುದ್ಧ ಆಕ್ಷೇಪ ಹೊರಹಾಕಿದ್ದಾರೆ.

ಅಮೆರಿಕವು ಇರಾನ್‌ ಮೇಲಿನ ದಾಳಿಗೆ ಭಾರತೀಯ ನೌಕಾನೆಲೆ ಬಳಸುತ್ತಿದೆ ಅನ್ನೋದು ಸುಳ್ಳು: ಎಂಇಎ

0

ನವದೆಹಲಿ: ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯಲ್ಲಿ, ಇರಾನ್ ಮೇಲೆ ಅಮೆರಿಕಾ ದಾಳಿ ಮಾಡಲು ಭಾರತೀಯ ನೌಕಾನೆಲೆಗಳನ್ನು ಬಳಸುತ್ತಿದೆ ಎಂಬ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಅಮೆರಿಕಾ ಮಾಜಿ ಸೇನಾ ಕರ್ನಲ್ ಡಗ್ಲಾಸ್ ಮ್ಯಾಕ್ಗ್ರೆಗೊರ್ ಒಎನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ಭಾರತದ ನೌಕಾನೆಲೆಗಳ ಬಳಕೆಯ ಮೂಲಕ ದಾಳಿ ನಡೆಯುತ್ತಿದೆ” ಎಂದು ಹೇಳಿದ್ದಾಗಿ ವೈರಲ್ ವಿಡಿಯೋಗಳು ತೋರಿಸುತ್ತಿವೆ.

ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದ್ದು, ʻನಕಲಿ ಸುದ್ದಿ ಎಚ್ಚರಿಕೆʼ ಎಂಬ ಶೀರ್ಷಿಕೆಯಡಿ ಪೋಸ್ಟ್‌ ಮಾಡಿ ವರದಿಗಳನ್ನ ತಳ್ಳಿಹಾಕಿದೆ.“ಭಾರತದ ನೌಕಾನೆಲೆಗಳು ಅಥವಾ ಬಂದರುಗಳನ್ನು ಅಮೆರಿಕಾ ಬಳಸಿ ದಾಳಿ ಮಾಡುವ ಪರಿಸ್ಥಿತಿ ಇರುವುದಿಲ್ಲ. ಇಂತಹ ಆಧಾರರಹಿತ ಮತ್ತು ತಪ್ಪು ಮಾಹಿತಿ ವಿರುದ್ಧ ಎಚ್ಚರಿಕೆಯಾಗಿರಿ” ಎಂದು ಸಾರ್ವಜನಿಕರಿಗೆ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ನಕಲಿ ವಿಡಿಯೋಗಳು ತಪ್ಪಾದ ಭಾವನೆ ಉಂಟುಮಾಡಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅನರ್ಹ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಆಘಾತ: 15 ಲಕ್ಷ ಮಂದಿಗೆ ಶಾಕ್​ ಕೊಟ್ಟ ಸರ್ಕಾರ!

ಬೆಂಗಳೂರು: ಅನರ್ಹವಾಗಿ ಬಿಪಿಎಲ್ (BPL) ಕಾರ್ಡ್ ಹೊಂದಿರುವವರ ವಿರುದ್ಧ ರಾಜ್ಯ ಸರ್ಕಾರದ ಕಾರ್ಯಾಚರಣೆ ಮುಂದುವರಿದಿದ್ದು, ಕಳೆದ 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಭಾರೀ ಆಘಾತ ನೀಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನರ್ಹರನ್ನು ಗುರುತಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಈ ಅವಧಿಯಲ್ಲಿ ಸಾವಿರಾರು ಪಡಿತರ ಚೀಟಿಗಳ ವಿರುದ್ಧ ಕ್ರಮ ಕೈಗೊಂಡಿದೆ.

ಇದರ ಭಾಗವಾಗಿ ಸುಮಾರು 5,632 ಬಿಪಿಎಲ್ ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಪಡಿಸಲಾಗಿದೆ. ಜೊತೆಗೆ 4.09 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ. ಇನ್ನೂ 23,068 ಬಿಪಿಎಲ್ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಕಳೆದ 5 ತಿಂಗಳ ಕಾರ್ಯಾಚರಣೆ ವಿವರ

ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಗೊಂಡ ಕಾರ್ಡ್‌ಗಳು: 4.09 ಲಕ್ಷ (14,68,540 ಮಂದಿ ಪ್ರಭಾವಿತ)

ಶಾಶ್ವತವಾಗಿ ರದ್ದಾದ ಬಿಪಿಎಲ್ ಕಾರ್ಡ್‌ಗಳು: 5,632 (9,826 ಮಂದಿ ಪ್ರಭಾವಿತ)

ತಾತ್ಕಾಲಿಕವಾಗಿ ಅಮಾನತ್ತಾದ ಬಿಪಿಎಲ್ ಕಾರ್ಡ್‌ಗಳು: 23,068 (34,617 ಮಂದಿ ಪ್ರಭಾವಿತ)

ಇದಕ್ಕೆ ಮತ್ತೊಂದೆಡೆ, ಅರ್ಹರಾದ ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಕಾರು, ಬಂಗಲೆ ಹಾಗೂ ಜಮೀನು ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂಬುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನರ್ಹರನ್ನು ಗುರುತಿಸಿ ಅವರ ಕಾರ್ಡ್ ರದ್ದು ಮಾಡುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕಡು ಬಡವರು ಹಾಗೂ ದುಡಿದು ತಿನ್ನುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಜನರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೂ ಮೊದಲು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದರು. ಕೇಂದ್ರ ಸರ್ಕಾರ ಪ್ರಸ್ತುತ ಬಿಪಿಎಲ್ ಕಾರ್ಡ್‌ದಾರರ ವಾರ್ಷಿಕ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ನಿಗದಿಪಡಿಸಿದೆ.

ಆದರೆ ದಿನಗೂಲಿ ಕಾರ್ಮಿಕರಿಗೂ ದಿನಕ್ಕೆ ಸುಮಾರು ₹500 ಸಂಬಳ ದೊರೆಯುತ್ತಿರುವುದರಿಂದ ಅವರ ವಾರ್ಷಿಕ ಆದಾಯವೂ ₹1.80 ಲಕ್ಷಕ್ಕಿಂತ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದ್ದರು. ಹೀಗಾಗಿ ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ ಈಗ ಸರ್ಕಾರ ಕೈಗೊಂಡಿರುವ ಕ್ರಮದಿಂದ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಳಿಗಾಲವಿಲ್ಲ ಎಂಬುದು ಸ್ಪಷ್ಟವಾಗಿದೆ.

ಧಾರ್ಮಿಕ ಭಾವನೆಗೆ ದಕ್ಕೆ: ಹಿಜಾಬ್ ಧರಿಸಿ ಹೋಳಿ ಆಡಿದವರ ವಿರುದ್ಧ FIR ದಾಖಲು!

ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಹಿಜಾಬ್ ಧರಿಸಿ ಬಣ್ಣ ಆಡಿ, ಅನುಚಿತವಾಗಿ ವರ್ತನೆ ತೋರಿದ ಕೆಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್ ಕುರಿತು ವ್ಯಂಗ್ಯ ಮಾಡಲಾಗಿದೆ ಎಂದು ಆರೋಪಿಸಿ, ಸಮೀರ್ ಎಂಬುವವರು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು, ಪ್ರಜ್ವಲ್, ಶಾಂತಪ್ಪ, ನಾಗರಾಜ್, ಅನಿಲ್, ಚೆನ್ನು ಸೇರಿ ಕೆಲವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಎಫ್ ಐ ಆರ್‌ನಲ್ಲಿ ಆರೋಪಿಗಳು ನಮ್ಮ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದು, ಹಿಜಾಬ್ ಧರಿಸಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ, ಘಟನೆಗೆ ಸಂಬಂಧಿಸಿದಂತೆ ತಪಾಸಣೆ ಮತ್ತು ಪರಿಶೀಲನೆ ನಡೆಯುತ್ತಿದೆ.

Israel Iran War: ದುಬೈನಲ್ಲಿ ಸಿಲುಕಿದ್ದ ಬಳ್ಳಾರಿ, ಚಿತ್ರದುರ್ಗದ 50 ಪ್ರವಾಸಿಗರು ಬೆಂಗಳೂರಿಗೆ ವಾಪಸ್!

ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆ ದುಬೈನಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಬಳ್ಳಾರಿಯ 35 ಮಂದಿ ಹಾಗೂ ಚಿತ್ರದುರ್ಗದ 15 ಮಂದಿ ಸೇರಿದಂತೆ ಒಟ್ಟು 246 ಮಂದಿ ಕನ್ನಡಿಗರು ಮಾ.4ರಂದು ಶಾರ್ಜಾ ದಿಂದ ಕೊಚ್ಚಿನ್ಗೆ ಬಂದಿಳಿದಿದ್ದರು. ಅಲ್ಲಿಂದ 50 ಮಂದಿಗೆ ಬೆಂಗಳೂರಿಗೆ ವಿಶೇಷ ವಿಮಾನ ವ್ಯವಸ್ಥೆಯನ್ನು ಶಾಸಕ ಬಿ. ನಾಗೇಂದ್ರ ಮಾಡಿದ್ದಾರೆ.

ಇಂದು ಬೆಳಗ್ಗೆ (ಮಾ.5) ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕೊಚ್ಚಿಯಿಂದ ಬೆಂಗಳೂರಿಗೆ ಆಗಮಿಸಿದ ಕನ್ನಡಿಗರನ್ನು ನಾಗೇಂದ್ರ ಸ್ವಾಗತಿಸಿದರು.

ಸಂಕಷ್ಟದ ಸಂದರ್ಭದಲ್ಲಿಯೇ ನೆರವು ನೀಡಿದ ಶಾಸಕರಿಗೆ ಕನ್ನಡಿಗರು ಕೃತಜ್ಞತೆ ವ್ಯಕ್ತಪಡಿಸಿದ್ದು, ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಸಂತಸ ಹಂಚಿಕೊಂಡಿದ್ದಾರೆ.

ಇಸ್ರೇಲ್-ಇರಾನ್ ಯುದ್ಧ ನಿಲ್ಲಿಸಲು ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು: ಶ್ರೀಶೈಲ ಶ್ರೀ

ಚಿಕ್ಕೋಡಿ: ಇಸ್ರೇಲ್ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮನವಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರದ ವೀರಭದ್ರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಕಾರ್ಯಕ್ರಮದಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಖರ್ ಉಪಸ್ಥಿತರಿದ್ದರು.

ಪ್ರಸ್ತುತ ಗಲ್ಫ್ ದೇಶಗಳಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆ. ಭಾರತವು ಪ್ರಾಚೀನ ಕಾಲದಿಂದಲೂ ವಿಶ್ವಶಾಂತಿಯನ್ನು ಪ್ರತಿಪಾದಿಸುತ್ತ ಬಂದಿರುವ ನಾಡಾಗಿದ್ದು, ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಕೈಗೊಳ್ಳಬೇಕು. ಯುದ್ಧ ನಿಲ್ಲಿಸುವ ದಿಕ್ಕಿನಲ್ಲಿ ಭಾರತ ಮಧ್ಯಸ್ಥಿಕೆ ವಹಿಸಿದರೆ ದೇಶದ ಗೌರವ ಮತ್ತು ಘನತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ದೇಶದ ಆಂತರಿಕ ವಿಚಾರಗಳ ಕುರಿತು ಮಾತನಾಡಿದ ಶ್ರೀಗಳು, ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಅತ್ಯಗತ್ಯವಾಗಿದೆ. ಕಾನೂನು ಜಾರಿಗೆ ಉಪರಾಷ್ಟ್ರಪತಿಗಳು ಮುತುವರ್ಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಡ್ರಗ್ಸ್ ಪ್ರಕರಣ: ನೈಜೀರಿಯಾ ಪ್ರಜೆಗಳ ಬಿಡುಗಡೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಮಾದಕವಸ್ತು ಸಂಗ್ರಹ ಮತ್ತು ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದ್ದು, ಅನಧಿಕೃತವಾಗಿ ಕಳೆದ ಒಂದು ದಶಕದಿಂದ ಭಾರತದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಅವರನ್ನು ದೇಶದಿಂದ ಗಡಿಪಾರು ಮಾಡುವ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಹಸ್ತಾಂತರಿಸಲು ನಿರ್ದೇಶಿಸಿದೆ.

ಕೋಗಿಲು ಲೇಔಟ್ ವಿಳಾಸ ಹೊಂದಿರುವ ನೈಜೀರಿಯಾ ಪ್ರಜೆಗಳಾದ ಇಮೆಕಾ ಜೇಮ್ಸ್ ಐವೊಬಾ ಹಾಗೂ ವುಡೆರಿಕ್ ಫಿಡೆಲಿಸ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ನಡೆಸಿ ಈ ಆದೇಶ ಹೊರಡಿಸಿದೆ.

ಅರ್ಜಿದಾರರಿಗೆ ನೀಡಲಾದ ಬಂಧನದ ಕಾರಣಗಳು ದೋಷಪೂರಿತವಾಗಿದ್ದು, ಬಂಧನದ ಕಾರಣಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಉಲ್ಲಂಘನೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಬಿಡುಗಡೆಯಾಗಲು ಅರ್ಹರಾಗಿದ್ದಾರೆ ಎಂದು ಹೇಳಿದೆ.

ಬಿಡುಗಡೆಯಾದ ತಕ್ಷಣವೇ ಅವರ ವಿರುದ್ಧದ ಮುಂದಿನ ಕಾನೂನು ಪ್ರಕ್ರಿಯೆ ಹಿಂಪಡೆಯುವುದು ಹಾಗೂ ಗಡಿಪಾರು ಮಾಡುವ ಸಂಬಂಧ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಪ್ರಕಾರ ಕ್ರಮ ಕೈಗೊಳ್ಳಲು FRROಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇದಲ್ಲದೆ, ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ SOP ಪ್ರಕಾರ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಬೇಕು. ಈ ಸಂಬಂಧ ನಾಲ್ಕು ತಿಂಗಳೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಭಾರತದ ಸಂವಿಧಾನದ ವಿಧಿ 22(1) ಪ್ರಕಾರ ಬಂಧಿತ ವ್ಯಕ್ತಿಗೆ ಬಂಧನದ ಕಾರಣಗಳನ್ನು ತಿಳಿಸುವುದು ಕಡ್ಡಾಯ ಸಾಂವಿಧಾನಿಕ ಹಕ್ಕು. ಇದು ಕೇವಲ ಔಪಚಾರಿಕ ಕ್ರಮವಲ್ಲ, ಮೂಲಭೂತ ರಕ್ಷಣೆಯಾಗಿದೆ. ವಿಧಿ 22 ವ್ಯಕ್ತಿ ಕೇಂದ್ರಿತವಾಗಿದ್ದು, ಅದು ಭಾರತದಲ್ಲಿ ಇರುವ ವಿದೇಶಿಗರಿಗೂ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಕಡಿಮೆ ಬೆಲೆಗೆ ಚಿನ್ನದ ಆಮಿಷ: ಹೈದರಾಬಾದ್ ಉದ್ಯಮಿಯಿಂದ ₹20 ಲಕ್ಷ ದೋಚಿದ ಖತರ್ನಾಕ್ ಗ್ಯಾಂಗ್

ಚಿಕ್ಕಬಳ್ಳಾಪುರ/ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಆಮಿಷ ಒಡ್ಡಿ ಹೈದರಾಬಾದ್ ಮೂಲದ ಉದ್ಯಮಿಯನ್ನು ದೇವನಹಳ್ಳಿಗೆ ಕರೆಸಿಕೊಂಡು ₹20 ಲಕ್ಷ ಹಣ ದೋಚಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೈದರಾಬಾದ್ ನಿವಾಸಿ ವಿಶ್ವಪ್ರಸಾದ್ ರೆಡ್ಡಿ ಅವರು ಕುಮಾರ್ ಎಂಬ ವ್ಯಕ್ತಿಯೊಂದಿಗೆ ಚಿನ್ನದ ವ್ಯವಹಾರ ಕುರಿತು ಸಂಪರ್ಕ ಹೊಂದಿದ್ದರು. ಕುಮಾರ್ ತನ್ನ ಬಳಿ ನಾಲ್ಕು ಕೆಜಿ ಚಿನ್ನದ ನಾಣ್ಯಗಳಿದ್ದು, ಕೇವಲ ₹20 ಲಕ್ಷಕ್ಕೆ ಒಂದು ಕೆಜಿ ಚಿನ್ನ ನೀಡುವುದಾಗಿ ಹೇಳಿ ಅವರನ್ನು ದೇವನಹಳ್ಳಿಗೆ ಬರಲು ಸೂಚಿಸಿದ್ದಾನೆ.

ಈ ಮಾತನ್ನು ನಂಬಿದ ವಿಶ್ವಪ್ರಸಾದ್ ರೆಡ್ಡಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ಟ್ಯಾಕ್ಸಿ ಮೂಲಕ ವೆಂಕಟಗಿರಿ ಕೋಟೆ ಗ್ರಾಮದ ಸಮೀಪದ ಖಾಸಗಿ ಬಡಾವಣೆಗೆ ತೆರಳಿದ್ದರು.

ಅವರು ಸ್ಥಳಕ್ಕೆ ತಲುಪುತ್ತಿದ್ದಂತೆ ಆರು ಮಂದಿ ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿ ಇದ್ದ ₹20 ಲಕ್ಷ ನಗದು ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ವಿಜಯಪುರ ಪೊಲೀಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತನಿಖೆ ಆರಂಭಿಸಲಾಗಿದೆ.

ಕಾರನ್ನೇ ಬಾರ್ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರ ಶಾಕ್: 1 ವಾರದಲ್ಲಿ 24 ಪ್ರಕರಣ, 36 ಮಂದಿ ವಿರುದ್ಧ ಕೇಸ್

0

ಬೆಳಗಾವಿ: ನಗರದಲ್ಲಿ ರಸ್ತೆ ಪಕ್ಕ ಕಾರು ನಿಲ್ಲಿಸಿ ಮದ್ಯ ಸೇವನೆ ಮಾಡಿ ಪಾರ್ಟಿ ಮಾಡುತ್ತಿದ್ದವರ ವಿರುದ್ಧ ಬೆಳಗಾವಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕಳೆದ ಒಂದು ವಾರದಲ್ಲಿ 24 ಪ್ರಕರಣಗಳನ್ನು ದಾಖಲಿಸಲಾಗಿದೆ.

ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಕಾರುಗಳಲ್ಲಿ, ಜಮೀನು ಹಾಗೂ ಮೈದಾನಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 36 ಜನರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ.

ನಗರದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳು ಇದ್ದರೂ, ಕಾರುಗಳನ್ನು ನಿಲ್ಲಿಸಿ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಎಚ್ಚರಿಕೆ ನೀಡಿದ್ದಾರೆ.

ರಾತ್ರಿ ವೇಳೆ ರಸ್ತೆ ಅಕ್ಕಪಕ್ಕ ನಿಲುಗಡೆ ಆಗುವ ಕಾರುಗಳ ಮೇಲೆ ಪೊಲೀಸರು ತಪಾಸಣೆ ನಡೆಸುತ್ತಿದ್ದು, ಈ ಕ್ರಮದ ಮೂಲಕ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ತಪಾಸಣೆ ವೇಳೆ ಕಾರುಗಳಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರ ವಿರುದ್ಧವೇ ಈ ಪ್ರಕರಣಗಳು ದಾಖಲಾಗಿವೆ.

error: Content is protected !!