Home Blog Page 8

ಮೌಲಿಕ ಕೃತಿಗಳಿಂದ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿ: ಕೆ.ಎಚ್. ಬೇಲೂರ

0

ವಿಜಯಸಾಕ್ಷಿ ಸುದ್ದಿ, ಗದಗ: ಸಾಹಿತ್ಯ ವಲಯಕ್ಕೆ ಅತ್ಯುತ್ತಮ ಕೃತಿಗಳನ್ನು ನೀಡುವ ಮೂಲಕ ಕನ್ನಡದ ಹಿರಿಮೆಯನ್ನು ಗಡಿಯಾಚೆಗೂ ವಿಸ್ತರಿಸುವ ಕಾರ್ಯವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳು ಮಾಡಿದ್ದಾರೆ. ಅವರ ಕೃತಿಗಳನ್ನು ಓದುವ ಮೂಲಕ ನಮ್ಮ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕೆಂದು ಸಂಸ್ಕೃತಿ ಚಿಂತಕರಾದ ಪ್ರೊ. ಕೆ.ಎಚ್. ಬೇಲೂರ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.

ಸಾಹಿತಿ ತಯಬಅಲಿ ಹೊಂಬಳ ಅವರ ಕಾದಂಬರಿ ‘ಮೊದಲ ಸಹಗಮನ’ ಹಾಗೂ ಮಕ್ಕಳ ಕಥಾ ಸಂಕಲನ ‘ಬಾರೋ ಬಾರೋ ಚಂದ್ರಮ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ. ಶಿವಪ್ಪ ಕುರಿ, ಬರಹಗಾರನಿಗೆ ಬದ್ಧತೆ ಇರಬೇಕು. ಅಸಹಾಯಕರಿಗೆ, ಅಶಕ್ತರಿಗೆ ದನಿಯಾಗಬೇಕು. ಈ ದಿಸೆಯಲ್ಲಿ ತಯಬಅಲಿ ಅವರು ಪ್ರಚಲಿತ ಸಂದರ್ಭದ ಸಮಸ್ಯೆಗಳಿಗೆ ಅಕ್ಷರರೂಪವನ್ನು ನೀಡಿ ಓದುಗರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ದಣಿವರಿಯದ ಕಾಯಕ ನಿಷ್ಠೆ ನಮಗೆಲ್ಲಾ ಮಾದರಿಯಾದುದು ಎಂದು ತಿಳಿಸಿದರು.

ಮೊದಲ ಸಹಗಮನ ಕೃತಿಯನ್ನು ಪರಿಚಯಿಸಿದ ನೀಲಮ್ಮ ಅಂಗಡಿ, ಇಲ್ಲಿ ವೃದ್ಧಾಪ್ಯದ ಸಂಕಟಗಳನ್ನು ವಿವರಿಸಿದ್ದಾರೆ. ಬದುಕಿನ ಅಂತಿಮ ಸಮಯದಲ್ಲಿ ಹಿರಿಯರಿಗೆ ಬೇಕಾಗಿರುವುದು ಹಿಡಿಯಷ್ಟು ಪ್ರೀತಿ. ಅದರಿಂದ ವಂಚಿತರಾಗಿ ತೊಳಲಾಡುವ ಕುಟುಂಬವೊಂದರ ಸಂದರ್ಭವನ್ನು ಮನಮಿಡಿಯುವಂತೆ ಚಿತ್ರಿಸಿದ್ದಾರೆ ಎಂದು ತಿಳಿಸಿದರು.

ಬಾರೋ ಬಾರೋ ಚಂದ್ರಮ ಕೃತಿಯನ್ನು ಪರಿಚಯಿಸಿ ಮಾತನಾಡಿದ ಕ್ಷಮಾ ವಸ್ತ್ರದ, ಮಕ್ಕಳಿಗೆ ಕತೆಗಳೆಂದರೆ ಪಂಚಪ್ರಾಣ. ನೀತಿಯನ್ನು ನೇರವಾಗಿ ಹೇಳದೇ ಕತೆಗಳ ರೂಪದಲ್ಲಿ ತಿಳಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಅವಶ್ಯವಿರುವ ಕತೆಗಳು ಈ ಸಂಕಲನದಲ್ಲಿವೆ. ಮಕ್ಕಳ ಸಾಹಿತ್ಯ ನಿರ್ಲಕ್ಷಕ್ಕೆ ಒಳಗಾಗಿದ್ದು, ಅದರ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾರ್ಯವನ್ನು ಲೇಖಕರು ಮಾಡುತ್ತಿದ್ದಾರೆ ಎಂದರು.

ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಡಾ. ಜಿ.ಬಿ. ಪಾಟೀಲ, ಬಸವರಾಜ ಗಿರಿತಿಮ್ಮಣ್ಣವರ, ಎಂ.ಸಿ. ವಗ್ಗಿ, ವಿದ್ಯಾಧರ ದೊಡ್ಡಮನಿ, ಶಶಿಕಾಂತ ಕೊರ್ಲಹಳ್ಳಿ, ಶಿವಾನಂದ ಭಜಂತ್ರಿ, ಕು.ಶಿ. ಜಯದೇವಭಟ್, ವಿ.ಎಸ್. ದಲಾಲಿ, ಕೆ.ಎಸ್. ದಂಡಗಿ, ಶೈಲಶ್ರೀ ಕಪ್ಪರದ, ಕೆ.ಎಸ್. ಬಾಳಿಕಾಯಿ, ಸಿ.ಎಂ. ಮಾರನಬಸರಿ, ರತ್ನಾ ಪುರಂತರ, ಶೈಲಜಾ ಗಿಡ್ನಂದಿ, ರಾಜಶೇಖರ ಕರಡಿ, ಬಿ.ಬಿ. ಹೊಳಗುಂದಿ, ಮಲ್ಲಿಕಾರ್ಜುನ ನಿಂಗೋಜಿ, ಪ್ರಲ್ಹಾದ ನಾರಪ್ಪನವರ, ಕಸ್ತೂರಿ ಕಡಗದ, ಮಂಜುಳಾ ವೆಂಕಟೇಶಯ್ಯ, ರಾಹುಲ ಗಿಡ್ನಂದಿ, ಎಸ್.ಯು. ಸಜ್ಜನಶೆಟ್ಟರ, ಅಶೋಕ ಸತ್ಯರಡ್ಡಿ, ಎಸ್.ಎ. ಬಾಣದ, ಅಶೋಕ ಅಂಗಡಿ, ವಾಯ್.ಕೆ. ಹಂದ್ರಾಳ, ಎಂ.ಸಿ. ಹುಚ್ಚಮ್ಮನವರ, ಎಂ.ಸಿ. ದೊಡ್ಡಮನಿ, ಅಕ್ಕಮ್ಮ ಪಾರ್ವತಿಮಠ, ಸತೀಶ ಕುಲಕರ್ಣಿ, ಮಲ್ಲಪ್ಪ ಡೋಣಿ, ಕೆ.ಜಿ. ವ್ಯಾಪಾರಿ, ಬಸವರಾಜ ನೆಲಜೇರಿ, ಕಿರಣ ಗುಗ್ಗರಿ, ದಾಕ್ಷಾಯಿಣಿ ಗುಗ್ಗರಿ, ದೀಲಿಪಕುಮಾರ ಮುಗಳಿ, ಪಾರ್ವತಿ ಮುಗಳಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಕ್ಕಳು ಮತ್ತು ಹಿರಿಯರು ಇಂದು ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳು ಬಾಲ್ಯವನ್ನು, ಹಿರಿಯರು ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಬಾಲ್ಯವನ್ನು ಸುಂದರಗೊಳಿಸುವ ಮತ್ತು ಹಿರಿಯರ ಸಂಕಟಗಳನ್ನು ಸಮಾಜದ ಮುಂದಿಡುವ ಪ್ರಯತ್ನವನ್ನು ಈ ಕೃತಿಗಳ ಮೂಲಕ ಮಾಡಿರುವ ತಯಬಅಲಿ ಅವರ ಸಾಹಿತ್ಯ ಸೇವೆ ಮಾದರಿಯಾದುದು ಎಂದು ತಿಳಿಸಿದರು.

ಮದುವೆ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮದುವೆಯು ಮನುಷ್ಯನ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಜೀವಿತಾವಧಿಯಲ್ಲಿ ಮನುಷ್ಯನಿಗೆ ಸಿಗುವ ಅನೇಕ ಸಂಸ್ಕಾರಗಳಲ್ಲಿ ಮದುವೆಯೂ ಒಂದು ಮತ್ತು ಇದು ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಕೋಡಿಕೊಪ್ಪದ ಶ್ರೀ ವೀರಪ್ಪಜ್ಜನವರ ಜಾತ್ರಾಮಹೋತ್ಸವದ ಮುನ್ನಾ ದಿನ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮದುವೆಯಾಗುವುದು ಮುಖ್ಯವಲ್ಲ. ಆದರೆ ನಂತರ ಇಬ್ಬರೂ ಹೊಂದಿಕೊಂಡು ಬಾಳುವೆಯನ್ನು ಸಾಗಿಸುವುದು ಮುಖ್ಯ. ಇಬ್ಬರ ನಡುವಿನ ಹೊಂದಾಣಿಕೆ ಕೆಟ್ಟರೆ ಬದುಕು ಘೋರವಾಗುತ್ತದೆ. ಆದ್ದರಿಂದ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀವು ಎಂದಿಗೂ ಹೊಂದಾಣಿಕೆಯ ಜೀವನ ನಡೆಸಿ ಸುಖ-ಸಂತೋಷದಿಂದ ಬಾಳಿರಿ ಎಂದರು.

ಜೀವನ ಹೂವಿನ ಹಾಸಿಗೆಯಲ್ಲ. ಕಷ್ಟ-ನಷ್ಟಗಳು ಎದುರಾಗುತ್ತವೆ. ಮನೆಯಲ್ಲಿನ ಹಿರಿಯ ಮಾರ್ಗದರ್ಶನವನ್ನು ಪಡೆದುಕೊಂಡು ಜೀವನದಲ್ಲಿ ಯಾವ ಎಡರು-ತೊಡರುಗಳ ಬಾರದಂತೆ ನಿಮ್ಮ ಜೀವನ ಸಾಗಿಸಿ. ಶ್ರೀ ವೀರಪ್ಪಜ್ಜನವರ ಕೃಪಾಶೀರ್ವಾದದಡಿಯಲ್ಲಿ ನೀವು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀರಿ. ಶ್ರೀ ವೀರಪ್ಪಜ್ಜನವರು ನಿಮಗೆ ಸಕಲ ಸನ್ಮಂಗಲಗಳನ್ನುಂಟುಮಾಡುತ್ತಾರೆ ಎಂದರು.

ಶ್ರೀ ವೀರಪ್ಪಜ್ಜನವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಮಲ್ಲಯ್ಯ ಚಪ್ಪನ್ನಮಠ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ದಿಂಡೂರ, ಎಂ.ಎ. ಹಿರೇವಡೆಯರ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇ.ಮೂ ರುದ್ರಮನಿ ಶಾಸ್ತ್ರಿ ಹಿರೇಮಠರು ವಿವಾಹ ಕಾರ್ಯಗಳನ್ನು ನೆರವೇರಿಸಿದರು. ನೂರಾರು ಭಕ್ತರು ನೂತನ ದಂಪತಿಗಳನ್ನು ಆಶೀರ್ವದಿಸಿದರು. ಸಾಮೂಹಿಕ ವಿವಾಹದಲ್ಲಿ ಐದು ಜೊತೆ ಜೋಡಿಗಳು ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಸಮಾರಂಭದಲ್ಲಿ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಅಜಿತ್ ಪವಾರ್ ಸಾವಿನಲ್ಲಿ ರಾಜಕೀಯ ತರಬೇಡಿ; ಚಿಕ್ಕಪ್ಪ ಶರದ್ ಪವಾರ್ ಮನವಿ!

0

ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಆಕಸ್ಮಿಕ ನಿಧನದ ನಂತರ, ಅವರ ಚಿಕ್ಕಪ್ಪ ಹಾಗೂ ಸಂಸದ ಶರದ್ ಪವಾರ್ ಅವರು ಬಾರಾಮತಿಗೆ ಆಗಮಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಅಜಿತ್ ಪವಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಅವರು ಈ ದುರ್ಘಟನೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು. ಅಜಿತ್ ಪವಾರ್ ಅವರ ಸಾವು ಕೇವಲ ಒಂದು ಆಕಸ್ಮಿಕ ಅಪಘಾತವಾಗಿದ್ದು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಾಗಲಿ, ಷಡ್ಯಂತ್ರವಾಗಲಿ ಇಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು. “ಇದು ಮಹಾರಾಷ್ಟ್ರಕ್ಕೆ ತುಂಬಾ ದೊಡ್ಡ ನಷ್ಟ. ಕಠಿಣ ಪರಿಶ್ರಮಿ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಈ ನಷ್ಟವನ್ನು ಭರಿಸುವುದು ಅಸಾಧ್ಯ,” ಎಂದು ಅವರು ದುಃಖ ವ್ಯಕ್ತಪಡಿಸಿದರು.

ಅಜಿತ್ ಪವಾರ್ ಅವರ ಸಾವಿನ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, “ಇಂದಿಗೂ ಕೆಲ ವಿಷಯಗಳು ನಮ್ಮ ಕೈಯಲ್ಲಿಲ್ಲ. ದಯವಿಟ್ಟು ಈ ದುಃಖದ ಸಂದರ್ಭದಲ್ಲೂ ರಾಜಕೀಯ ತರಬೇಡಿ. ಇದು ಕೇವಲ ಅಪಘಾತ,” ಎಂದು ಮನವಿ ಮಾಡಿದರು.
ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್ ಸೇರಿದಂತೆ ಹಲವು ರಾಜಕೀಯ ನಾಯಕರು ಈ ಘಟನೆಗೆ ಸಂಬಂಧಿಸಿ ತನಿಖೆಗೆ ಆಗ್ರಹಿಸಿದ ಹಿನ್ನೆಲೆಯಲ್ಲೇ ಶರದ್ ಪವಾರ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ವಿಧಿವಶ; ನಾಳಿನ ಬೆಂಗಳೂರು ಚಲೋ ಮುಂದೂಡಿಕೆ

0

ಬೆಂಗಳೂರು: 85 ವರ್ಷದ ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್‌.ವಿ. ಅನಂತ್ ಸುಬ್ಬರಾವ್ ಇಂದು ಸಂಜೆ ಹೃದಯಾಘಾತದಿಂದ ನಿಧನರಾದರು.

ಅವರು ವಿಜಯನಗರದಲ್ಲಿರುವ ತಮ್ಮ ಮನೆಯಲ್ಲಿ ಸ್ನಾನ ಮಾಡಿದ ಬಳಿಕ ಉಸಿರಾಟದ ತೊಂದರೆ ಕಾಣಿಸಿಕೊಂಡು, ಆಸ್ಪತ್ರೆಗೆ ತಲುಪುವ ಮಾರ್ಗದಲ್ಲಿಯೇ ಕೊನೆಯುಸಿರೆಳೆದರು. ಅನಂತ್ ಸುಬ್ಬರಾವ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರಾಗಿದ್ದರು. ಅನಂತ್ ಸುಬ್ಬರಾವ್, ನಾಲ್ಕು ದಶಕಗಳ ಕಾಲ ಕಾರ್ಮಿಕ ಹೋರಾಟ, ಚಳವಳಿಗಳನ್ನು ಸಂಘಟಿಸಿ ನಡೆಸಿದವರಾಗಿದ್ದು, ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದರು. ಇದೀಗ ಅವರ ನಿಧನದಿಂದ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.

ಇನ್ನೂ ವಿವಿಧ ಬೇಡಿಕೆ ಈಡೇರಿಸುವಂತೆ ನಾಲ್ಕು ನಿಗಮದ ಸಾರಿಗೆ ನೌಕರರು ಬೆಂಗಳೂರು ಚಲೋ ಪ್ರತಿಭಟನೆಗೆ ಕರೆ ನೀಡಿದ್ದರು. ಇದರಿಂದ ನಾಳೆ ಬಸ್ ಸಂಚಾರ ಇರುತ್ತಾ ಇಲ್ವಾ ಎಂಬ ಗೊಂದಲ ಪ್ರಯಾಣಿಕರಲ್ಲಿ  ಮೂಡಿಸಿತ್ತು. ಆದ್ರೆ, ಸಾರಿಗೆ ನೌಕರರ ಸಂಘದ ಮುಖಂಡ ಸಾವನ್ನಪ್ಪಿರುವುದರಿಂದ ಬೆಂಗಳೂರು ಚಲೋ ಮುಷ್ಕರವನ್ನು ಮುಂದೂಡಿದ್ದಾರೆ. ಹೀಗಾಗಿ ನಾಳೆ ಎಂದಿನಂತೆ ಬಸ್ ಸಂಚಾರ ಇರಲಿದೆ.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!

0

ಬೆಂಗಳೂರು:- ಕರ್ನಾಟಕದ 25 ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ಪೂರ್ಣಗೊಂಡಿದ್ದು, ಈಗ ಸರ್ಕಾರ ಹಿಂದಿನ ನೇಮಕದವರನ್ನೇ ಮುಂದುವರಿಸಲು ಆದೇಶ ಹೊರಡಿಸಿದೆ.

2024 ರ ಜನವರಿ 26ರಿಂದ ಎರಡು ವರ್ಷಾವಧಿಗೆ ನೇಮಕಗೊಂಡಿದ್ದ ಅಧ್ಯಕ್ಷರು ಇನ್ನು ಮುಂದಿನ ಆದೇಶವರೆಗೆ ತಮ್ಮ ಸ್ಥಾನವನ್ನು ಕಾಯ್ದುಕೊಳ್ಳಲಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದ್ದು, ಇದರ ಅರ್ಥ ಯಾವಾಗ ಬೇಕಾದರೂ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಕುತ್ತು ಬರಬಹುದು.

ಸದ್ಯ ಪಕ್ಷದೊಳಗೆ ಒಂದೆಡೆ ಸಚಿವ ಸಂಪುಟ ಪುನಾರಚನೆ, ಇನ್ನೊಂದೆಡೆ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿವೆ. ಇದರಿಂದ ಈಗಾಗಲೇ ಎರಡು ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರು ಸರ್ಕಾರ ಇರುವವರೆಗೆ ಮುಂದುವರೆಯುತ್ತಾರೋ ಅಥವಾ ಮಧ್ಯದಲ್ಲೇ ಸರ್ಕಾರ ಕೈಬಿಡುತ್ತದೆಯೋ ಎಂಬ ಕುತೂಹಲ ಮೂಡಿಸಿದೆ.

WPL 2026; ಕೊನೆಯ 3 ಪಂದ್ಯಗಳು ನಿರ್ಧರಿಸಲಿದೆ ಪ್ಲೇಆಫ್ ಭವಿಷ್ಯ! ಹೀಗಾದ್ರೆ ಮಾತ್ರ ಈ ತಂಡಗಳಿಗೆ ಅವಕಾಶ!

0

ಮಹಿಳಾ ಪ್ರೀಮಿಯರ್ ಲೀಗ್ 2026 ಟೂರ್ನಿಯಲ್ಲಿ ಇದುವರೆಗೆ 17 ಪಂದ್ಯಗಳು ಮುಗಿದಿದ್ದು, ಲೀಗ್ ಹಂತದಲ್ಲಿ ಇನ್ನೂ ಕೇವಲ 3 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದರೂ, ನೇರ ಫೈನಲ್ ಪ್ರವೇಶಕ್ಕಾಗಿ ಯುಪಿ ವಾರಿಯರ್ಸ್ ವಿರುದ್ಧದ ಕೊನೆಯ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇತ್ತ ಗುಜರಾತ್ ಜೈಂಟ್ಸ್ 8 ಅಂಕಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದರೆ ನಾಕೌಟ್ ಹಂತ ಖಚಿತವಾಗಲಿದೆ.

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 6 ಅಂಕಗಳನ್ನು ಹೊಂದಿದ್ದು, ಎರಡೂ ತಂಡಗಳಿಗೆ ಉಳಿದ ಪಂದ್ಯಗಳು ಮಾಡು–ಮಡಿ ಹೋರಾಟವಾಗಿವೆ. ವಿಶೇಷವಾಗಿ ಡೆಲ್ಲಿ ತಂಡವು ಗೆಲುವಿನ ಜೊತೆಗೆ ತನ್ನ ನೆಟ್ ರನ್ ರೇಟ್‌ನ್ನೂ ಸುಧಾರಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಇನ್ನು 4 ಅಂಕಗಳೊಂದಿಗೆ ಇರುವ ಯುಪಿ ವಾರಿಯರ್ಸ್ ತಂಡಕ್ಕೆ ಆರ್‌ಸಿಬಿ ಹಾಗೂ ಡೆಲ್ಲಿ ವಿರುದ್ಧದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್ ಕನಸು ಜೀವಂತವಾಗಲಿದೆ.

ಹೀಗಾಗಿ ಉಳಿದ ಮೂರು ಪಂದ್ಯಗಳ ಫಲಿತಾಂಶಗಳು WPL 2026 ಪ್ಲೇಆಫ್ ಚಿತ್ರಣವನ್ನು ಸಂಪೂರ್ಣವಾಗಿ ನಿರ್ಧರಿಸಲಿವೆ.

ಇಶಾ ಫೌಂಡೇಶನ್ ಸ್ಮಶಾನ ನಿರ್ಮಾಣ ವಿರೋಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

0

ಚೆನ್ನೈ: ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ ನಿರ್ಮಿಸುತ್ತಿರುವ ಗ್ಯಾಸ್ ಆಧಾರಿತ ಸ್ಮಶಾನದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಈ ಸ್ಮಶಾನವು ಸಾಮಾಜಿಕ ಕಲ್ಯಾಣಕ್ಕೆ ಸೇವೆ ಸಲ್ಲಿಸುವುದಲ್ಲದೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇಶಾ ಫೌಂಡೇಶನ್‌ನಿಂದ ಕಾಲಭೈರವ ಧಗನ ಮಂಟಪ (ಗ್ಯಾಸ್ ಆಧಾರಿತ ಸ್ಮಶಾನ) ನಿರ್ಮಾಣವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ತಮಿಳುನಾಡು ಗ್ರಾಮ ಪಂಚಾಯತ್ ನಿಯಮಗಳ ಪ್ರಕಾರ, ವಸತಿ ಪ್ರದೇಶ ಅಥವಾ ಕುಡಿಯುವ ನೀರು ಸರಬರಾಜು ಇರುವ ಸ್ಥಳದಿಂದ 90 ಮೀಟರ್ ಒಳಗೆ ಸ್ಮಶಾನ ಸ್ಥಾಪನೆಗೆ ಯಾವುದೇ ನಿಷೇಧವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಗ್ರಾಮ ಪಂಚಾಯತ್‌ನಿಂದ ಅಗತ್ಯ ಪರವಾನಗಿ ಪಡೆದಿದ್ದರೆ, ಸ್ಮಶಾನ ನಿರ್ಮಾಣವನ್ನು ಕಾನೂನುಬಾಹಿರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಗ್ಯಾಸ್ ಆಧಾರಿತ ಸ್ಮಶಾನವು ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುವ ಆಧುನಿಕ ಸೌಲಭ್ಯವಾಗಿದ್ದು, ಸಮಾಜಕ್ಕೆ ಉಪಯುಕ್ತವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಪ್ರಕರಣವು ಇಕಾರೈ ಪೊಲುವಂಪಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮೀಣ ಪಂಚಾಯತ್‌ಗಳ ಸಹಾಯಕ ನಿರ್ದೇಶಕರು ಹಾಗೂ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಯಮತ್ತೂರು ದಕ್ಷಿಣ ಜಿಲ್ಲಾ ಪರಿಸರ ಎಂಜಿನಿಯರ್ ನೀಡಿದ ಅನುಮತಿಗಳ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದೆ. ಈ ಎಲ್ಲಾ ಅನುಮತಿಗಳು ಕಾನೂನುಬದ್ಧವಾಗಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ವರದಕ್ಷಣೆ ದಾಹಕ್ಕೆ ಹೆಂಡತಿ ಮೇಲೆ ಅಮಾನುಷ ಕಿರುಕುಳ: ತವರು ಮನೆಗೆ ನುಗ್ಗಿ ಹಲ್ಲೆ, ಅಕ್ಕನ ಕೈ ಮುರಿದು ಜೀವ ಬೆದರಿಕೆ!

0

ಹಾವೇರಿ: ಮಗು ಹುಟ್ಟಿದ ಬಳಿಕವೂ ವರದಕ್ಷಿಣೆಯಾಗಿ ಪತ್ನಿಯನ್ನು ಹಿಂಸಿಸಿರುವ ಹೃದಯ ವಿದ್ರಾವಕ ಘಟನೆ ಹಾನಗಲ್ ತಾಲ್ಲೂಕಿನ ಮಂತಗಿ ಗ್ರಾಮದಲ್ಲಿ ನಡೆದಿದೆ. ವರದಕ್ಷಣೆಗಾಗಿ ಹೆಂಡತಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಗಂಡ, ಹೆಂಡತಿ ತವರು ಮನೆಗೆ ತೆರಳಿದ್ದಾಗ ಅಲ್ಲಿಗೂ ಹೋಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಶಹನಾಜಬಾನು ಅವರನ್ನು ಅದೇ ಗ್ರಾಮದ ಅಬೂಬಕ್ಕರ್ ಎಂಬಾತನೊಂದಿಗೆ ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಕೆಲ ತಿಂಗಳು ಸುಖವಾಗಿ ಜೀವನ ಸಾಗಿಸಿದ್ದ ದಂಪತಿ ನಡುವೆ ಆ ಬಳಿಕ ಜಗಳ ಶುರುವಾಗಿದೆ. ಮಹಿಳೆಗೆ ವರದಕ್ಷಣೆಗಾಗಿ ಗಂಡ ಮತ್ತು ಆತನ ಮನೆಯವರಿಂದ ಕಿರುಕುಳ ನೀಡಲು ಆರಂಭಿಸಿದ್ದಾರೆ.

ಇಬ್ಬರಿಗೆ ಒಂದೂವರೆ ವರ್ಷದ ಮಗು ಇದ್ದರೂ ಕೂಡ ವರದಕ್ಷಣೆ ಬೇಡಿಕೆಯ ಕಿರುಕುಳ ಕಡಿಮೆಯಾಗಿಲ್ಲ. ಅನಾರೋಗ್ಯದ ಕಾರಣ ಶಹನಾಜಬಾನು ತವರು ಮನೆಗೆ ತೆರಳಿದ್ದ ವೇಳೆ, ಗಂಡ ಅಬೂಬಕ್ಕರ್ ಹಾಗೂ ಆತನ ಮನೆಯವರು ತವರು ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಶಹನಾಜಬಾನು ಅವರ ಅಕ್ಕನ ಕೈ ಮುರಿದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಪ್ರಕರಣ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಮಹಿಳೆ–ಮಕ್ಕಳ ರಕ್ಷಣೆಗೆ ‘ಅಕ್ಕಪಡೆ’: ದಿನಕ್ಕೆ 12 ಗಂಟೆ ಗಸ್ತು, ದೂರುದಾರರ ಹೆಸರು ಗೌಪ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0

ಬೆಂಗಳೂರು: ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿಯೇ ಅಕ್ಕಪಡೆ ರಚಿಸಲಾಗಿದ್ದು, ದಿನದಲ್ಲಿ 12 ಗಂಟೆ ಗಸ್ತು ತಿರುಗಲಿದೆ. ದೌರ್ಜನ್ಯಕ್ಕೊಳಗಾಗಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ವಿಶೇಷ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್‌ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದರು.

ಕಳೆದ ವರ್ಷ ನವೆಂಬರ್‌ 28 ರಂದು ಅಕ್ಕ ಪಡೆಗೆ ಚಾಲನೆ ನೀಡಲಾಗಿದ್ದು, ಈ ಅಕ್ಕಪಡೆ ಎಲ್ಲೆಡೆ ಗಸ್ತು ತಿರುಗುತ್ತದೆ. ನಮ್ಮ ಇಲಾಖೆಯಿಂದ ಸಹಾಯವಾಣಿ ತೆರೆಯಲಾಗಿದ್ದು, 1098 ಸಂಖ್ಯೆಗೆ ಕರೆ ಮಾಡಬಹುದು. ಅಕ್ಕ ಪಡೆಗೆ ಮಹಿಳಾ ಸಹಾಯವಾಣಿ 181, ಜೊತೆಗೆ ಪೊಲೀಸ್‌ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಬಹುದು. ದೌರ್ಜನ್ಯ ತಡೆಗಟ್ಟಲು ಗ್ರಾಮ ಪಂಚಾಯಿತಿಯಿಂದ ಹಿಡಿದು ಮೇಲ್ಮಟ್ಟದವರೆಗೂ ಸಮಿತಿ ರಚಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಉತ್ತರಿಸಿದರು.

ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿರುತ್ತದೆ. ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ಬೀದಿ ನಾಟಕಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ, ಆಕಾಶವಾಣಿಯಲ್ಲಿ ಒಂದೂವರೆ ತಿಂಗಳ ಪ್ರಚಾರ ನೀಡಲಾಗಿದೆ ಎಂದು ಹೇಳಿದರು.

ಗದಗ ಬಸ್ ನಿಲ್ದಾಣದ ಬಯಲು ಪ್ರದೇಶದಲ್ಲಿ ಬೆಂಕಿ: ಅಗ್ನಿಶಾಮಕ ದಳದಿಂದ ತಪ್ಪಿದ ಭಾರೀ ಅನಾಹುತ:

0

ಗದಗ: ಗದಗ ಕೇಂದ್ರ ಬಸ್ ನಿಲ್ದಾಣದ ಬಯಲು ಜಾಗೆಯಲ್ಲಿ ಕಸ ಹಾಗೂ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ಇಂದು ನಡೆದಿದೆ. ಘಟನೆ ಕೆಲಕಾಲ ಪ್ರಯಾಣಿಕರು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿತು.

ಯಾರೋ ಕಿಡಿಗೇಡಿಗಳು ಬಿಸಾಡಿದ ಬೀಡಿ ಅಥವಾ ಸಿಗರೇಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ. ಪರಿಸ್ಥಿತಿ ಗಮನಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಹೆಚ್ಚಿನ ಹಾನಿ ಸಂಭವಿಸದಂತೆ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದೆ.

error: Content is protected !!