Home Blog

ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್: ಕಾನ್ಫಿಡೆಂಟ್ ಗ್ರೂಪ್‌ ಒಡೆಯನಿಗೆ ಮುಳುವಾಯ್ತಾ 500 ಕೋಟಿ ಮಿಸ್‌ಮ್ಯಾಚ್ ಹಣ

0

ಬೆಂಗಳೂರು: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಂದಿದೆ. ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥರಾಗಿದ್ದ ರಾಯ್ ಅವರ ಸಾವಿಗೆ ಬರೋಬ್ಬರಿ 500 ಕೋಟಿ ರೂಪಾಯಿ ಹವಾಲಾ ವ್ಯವಹಾರ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.

ಹವಾಲಾ ಹಣದ ಲೆಕ್ಕ ನೀಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರಾಯ್, ಐಟಿ ಇಲಾಖೆಯ ತನಿಖೆಯ ಒತ್ತಡಕ್ಕೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ. ಕೇರಳದ ಕೊಚ್ಚಿ ಪ್ರಾಜೆಕ್ಟ್ ಹಿನ್ನೆಲೆ ಡಿಸೆಂಬರ್‌ನಲ್ಲೇ ಐಟಿ ಇಲಾಖೆ 500 ಕೋಟಿ ರೂಪಾಯಿ ವ್ಯವಹಾರದ ಬಗ್ಗೆ ವಿವರ ಕೇಳಿತ್ತು ಎನ್ನಲಾಗಿದೆ.

ಈ ಹಿನ್ನೆಲೆ ರಾಯ್ ದುಬೈಯಿಂದ ಭಾರತಕ್ಕೆ ಮರಳುವುದನ್ನು ವಿಳಂಬಗೊಳಿಸಿದ್ದರೆಂದು ತಿಳಿದುಬಂದಿದೆ. ಐಟಿ ದಾಳಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರೂ, ನಂತರ ತಮ್ಮ ಪಾರ್ಟ್ನರ್ ಮತ್ತು ಸಿಎ ಸಲಹೆ ಮೇರೆಗೆ ಅರ್ಜಿಯನ್ನು ವಾಪಸ್ ಪಡೆದಿದ್ದರು. ಭಾರತಕ್ಕೆ ವಾಪಸ್ ಬಂದ ಬಳಿಕ 500 ಕೋಟಿ ರೂ. ಮೂಲ ಮತ್ತು ಲೆಕ್ಕದ ಕುರಿತು ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದರು.

ಈ ಒತ್ತಡದಿಂದ ರಾಯ್ ಮಾನಸಿಕವಾಗಿ ಕುಗ್ಗಿಹೋಗಿದ್ದರು ಎನ್ನಲಾಗುತ್ತಿದೆ. ಆತ್ಮಹತ್ಯೆ ದಿನ ಐಟಿ ಅಧಿಕಾರಿಗಳಿಗೆ ಉತ್ತರಿಸುವುದಾಗಿ ಹೇಳಿದ್ದರೂ, ಮಾನಸಿಕ ಖಿನ್ನತೆಗಾಗಿ ಬಳಸುತ್ತಿದ್ದ ಔಷಧಿಯನ್ನು ಸೇವಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ 500 ಕೋಟಿ ಹವಾಲಾ ಹಣದ ಮೂಲ, ಅದರ ಹಾದಿ ಹಾಗೂ ಯಾರಿಗೆ ಸಂಬಂಧಪಟ್ಟದ್ದು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ನೇಣಿಗೆ ಕೊರಳೊಡ್ಡಿದ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ!

0

ಕೋಲಾರ:- ಕೋಲಾರ ತಾಲ್ಲೂಕು ಖಾದ್ರಿಪುರ ಗ್ರಾಮದಲ್ಲಿ ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

36 ವರ್ಷದ ಮೊನೀಶ್ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ. ಇವರು ಕೋಲಾರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು ಎಂದು ತಿಳಿದುಬಂದಿದೆ.

ಪತ್ನಿ ವೇದವತಿ ಕೆಲಸಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಐಟಿ ದಾಳಿ ಶಾಕ್: ಕೋರಮಂಗಲದಲ್ಲಿ ಬಿಬಿಎಂಪಿ ನಿವೃತ್ತ ಮುಖ್ಯ ಇಂಜಿನಿಯರ್ ಆತ್ಮಹತ್ಯೆ

0

ಬೆಂಗಳೂರು: ರಾಜಧಾನಿ ಬೆಂಗಳೂರುದಲ್ಲಿ ಐಟಿ ದಾಳಿಗಳ ಬೆನ್ನಲ್ಲೇ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಬಿಬಿಎಂಪಿಯ ನಿವೃತ್ತ ಮುಖ್ಯ ಇಂಜಿನಿಯರ್ ಪರಮೇಶ್ವರಯ್ಯ ಅವರು ಕೋರಮಂಗಲದ ತಮ್ಮ ನಿವಾಸದಲ್ಲಿ ಇಂದು ಬೆಳ್ಳಂಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಕ್ರಮ ಆಸ್ತಿ ಸಂಬಂಧ ಸಿಸಿಬಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಿನ್ನೆಲೆ ತನಿಖೆಗೆ ಹೆದರಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪರಮೇಶ್ವರಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾದೇವಪುರ ವಲಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಸುಮಾರು 20 ದಿನಗಳ ಹಿಂದೆ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದಾದ ಬಳಿಕ ಅವರು ಖಿನ್ನತೆಯಲ್ಲಿ ಇದ್ದರು ಎನ್ನಲಾಗಿದೆ.

2021ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ನಡೆದ ಐಟಿ ದಾಳಿಯಲ್ಲಿ 1.35 ಲಕ್ಷ ರೂ. ನಗದು, 275.98 ಗ್ರಾಂ ಚಿನ್ನಾಭರಣ ಹಾಗೂ ಜಮೀನು ದಾಖಲೆಗಳು ಪತ್ತೆಯಾಗಿದ್ದವು. ವಿಚಾರಣೆಯಲ್ಲಿ ಅನಿಲ್ ಕುಮಾರ್, ಈ ಹಣ ಹಾಗೂ ದಾಖಲೆಗಳು ಪರಮೇಶ್ವರಯ್ಯ ಅವರಿಗೆ ಸೇರಿವೆ ಎಂದು ಹೇಳಿದ್ದನು.

ಅನಂತರ 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಡಿಸೆಂಬರ್ 6ರಂದು ಬ್ಯಾಂಕ್ ಲಾಕರ್‌ಗಳ ಪರಿಶೀಲನೆಯಲ್ಲಿ 86.35 ಲಕ್ಷ ರೂ. ನಗದು ಪತ್ತೆಯಾಗಿತ್ತು. ಲಾಕರ್ ಜಿ. ಕಿಶೋರ್ ನಾಯ್ಡು ಹೆಸರಲ್ಲಿ ಇದ್ದರೂ, ಅದರ ಕೀ ಪರಮೇಶ್ವರಯ್ಯ ಪತ್ನಿ ಮಹಾಲಕ್ಷ್ಮೀ ಅವರ ಹೆಸರಿನಲ್ಲಿ ಇತ್ತು ಎಂದು ತಿಳಿದುಬಂದಿತ್ತು.

2012ರಲ್ಲಿ 29.64 ಲಕ್ಷ ರೂ. ಇದ್ದ ಆಸ್ತಿ ಮೌಲ್ಯ 2021ರ ವೇಳೆಗೆ 5.85 ಕೋಟಿಗೆ ಏರಿಕೆಯಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ 2026ರ ಜನವರಿ 30ರಂದು ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಇತ್ತೀಚೆಗಷ್ಟೇ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಳಿಕ ಇದೀಗ ಪರಮೇಶ್ವರಯ್ಯ ಅವರ ಸಾವು ಮತ್ತೊಂದು ಸಂಚಲನ ಸೃಷ್ಟಿಸಿದೆ.

ಚಿಕ್ಕಮಗಳೂರು–ಬೇಲೂರು ಗಡಿ ಭಾಗದಲ್ಲಿ ಕಾಡಾನೆಗಳ ಆತಂಕ: ಹಿಂಡು ಹಿಂಡಾಗಿ ಲಗ್ಗೆ ಇಟ್ಟ ‘ಬೀಟಮ್ಮ’ ಗ್ಯಾಂಗ್!

0

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಕಾಡಾನೆಗಳ ದೊಡ್ಡ ಗುಂಪು ಪ್ರವೇಶಿಸಿದ್ದು, ಜನರಲ್ಲಿ ಭೀತಿ ಮೂಡಿಸಿದೆ.

‘ಬೀಟಮ್ಮ’ ಮತ್ತು ‘ಭುವನೇಶ್ವರಿ’ ಗ್ಯಾಂಗ್‌ಗಳಾಗಿ ಗುರುತಿಸಲ್ಪಟ್ಟಿರುವ ಈ ಕಾಡಾನೆಗಳು ಬೇಲೂರು ಮಾರ್ಗದಿಂದ ಜಿಲ್ಲೆಗೆ ಪ್ರವೇಶಿಸಿ, ಭೀಮಾ ನೇತೃತ್ವದಲ್ಲಿ ಸುಮಾರು 25 ಕಾಡಾನೆಗಳು ಚಿಕ್ಕಮಗಳೂರು ಕಡೆಗೆ ಬಂದಿವೆ. ಒಟ್ಟಾರೆ 45 ಕಾಡಾನೆಗಳಿದ್ದ ಬೀಟಮ್ಮ ಗ್ಯಾಂಗ್ ನಂತರ 20 ಕಾಡಾನೆಗಳೊಂದಿಗೆ ಬೇಲೂರು ಕಡೆಗೆ ಹಿಂತಿರುಗಿದ್ದರೂ, ಮೂಡಿಗೆರೆ–ಬೇಲೂರು ಗಡಿಯ ತೋಟ ಪ್ರದೇಶಗಳಲ್ಲಿ ಇನ್ನೂ 20 ಕಾಡಾನೆಗಳು ಬೀಡುಬಿಟ್ಟಿರುವುದರಿಂದ ಆತಂಕ ಮುಂದುವರಿದಿದೆ.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 22 ಕಾಡಾನೆಗಳು ಸಂಚರಿಸುತ್ತಿದ್ದು, ಕಸ್ಕೆಬೈಲು ಗುಡ್ಡದಲ್ಲಿ ತಂಗಿರುವುದು ಕಂಡುಬಂದಿದೆ. ಬಾರದಹಳ್ಳಿ, ಚಟ್ಟನಹಳ್ಳಿ, ಕಲ್ಲು ಗುಡ್ಡ, ವಾಟೆಗಂಡಿ, ಹುಲಿಹಂಡ್ಲು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದೆ. ಚಿಕ್ಕಮಗಳೂರು ನಗರ ಸುತ್ತಮುತ್ತಲೂ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ರಾತ್ರಿ ವೇಳೆ ಹೊರಗೆ ಹೋಗಲು ಹೆದರುತ್ತಿದ್ದಾರೆ. ಈ ನಡುವೆ, ಕಾಡಾನೆ ದಾಳಿಗಳಿಂದ ಒಂದೇ ವಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿ, ಕಾರ್ಮಿಕರಿಗೆ ತೋಟಗಳಿಗೆ ತೆರಳದಂತೆ ತಾತ್ಕಾಲಿಕ ಸೂಚನೆ ನೀಡಿದೆ. ಜನರಿಗೆ ಎಚ್ಚರಿಕೆಯಿಂದ ಗುಂಪುಗಳಲ್ಲಿ ಸಂಚರಿಸಲು, ಕಾಡಾನೆ ಕಂಡುಬಂದರೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಕಾಫಿನಾಡಿನಲ್ಲಿ ಮರುಕಳಿಸುತ್ತಿರುವ ಕಾಡಾನೆಗಳ ಹಾವಳಿ ರೈತರು ಹಾಗೂ ತೋಟಗಾರರಿಗೆ ತಲೆನೋವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಒಟ್ಟು 12 ಗ್ರಾಮಗಳಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕಲ್ಲಿನಿಂದ ಕಾಲು ಜಜ್ಜಿ ಭೀಕರ ಹಲ್ಲೆ; ಘಟನೆಗೆ ಹಳೆ ವೈಷಮ್ಯ ಕಾರಣವಾ? – 11 ಆರೋಪಿಗಳು ಅರೆಸ್ಟ್!

0

ಮಂಡ್ಯ: ಪಾಂಡವಪುರದ ಕನಗನಹಳ್ಳಿಯಲ್ಲಿ ಹಳೆಯ ವೈಷಮ್ಯದಿಂದ ಹುಟ್ಟಿದ ಕ್ರೂರ ಹಲ್ಲೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯೋರ್ವಳ ಪ್ರೀತಿಗೆ ಸಂಬಂಧಪಟ್ಟ ದ್ವೇಷದಿಂದ, ಪ್ರಕಾಶ್ ಮತ್ತು ನವೀನ್ ಅವರನ್ನು ಗಿರೀಶ್, ಮದ್ದಪ್ಪ, ಪ್ಲಗ್ ಮಂಜ, ಗಣೇಶ, ಶಿವಣ್ಣ, ನಿಂಗಣ್ಣ ಸೇರಿ ಒಟ್ಟು 14 ಮಂದಿ ಕಿಡಿಗೇಡಿಗಳು ಕಲ್ಲಿನಿಂದ ಹಲ್ಲೆ ನಡೆಸಿ ನವೀನ್ ಕಾಲನ್ನು ಜಜ್ಜಿ ಹಾಕಿದ್ದರು. ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಟ್ಟಿದ್ದರು.

ಘಟನೆ ಬಗ್ಗೆ ದೂರು ದಾಖಲಾಗುತ್ತಲೇ, ಪಾಂಡವಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶರತ್ ಕುಮಾರ್ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡವು ಮೊದಲ ದಿನದಲ್ಲೇ ಇಬ್ಬರನ್ನು ಬಂಧಿಸಿತು, ಬಳಿಕ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಸಂಬಂಧಿಕರ ಮನೆಗಳಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ 14 ಆರೋಪಿಗಳ ಪೈಕಿ 11 ಮಂದಿ ಬಂಧನವಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ವಿಕ್ಟೋರಿಯಾ ಆಸ್ಪತ್ರೆ ಐಸಿಯು ಬೆಡ್ ಕೊರತೆ; ರೋಗಿಗಳ ಆತಂಕ

0

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ರೋಗಿಗಳಿಗೆ ಜೀವ ಭದ್ರತೆ ಇಲ್ಲ ಎಂಬ ಆತಂಕದ ಪರಿಸ್ಥಿತಿ ಎದುರಾಗಿದೆ.

ಆಸ್ಪತ್ರೆಯ ಒಟ್ಟು ಐಸಿಯು ಬೆಡ್‌ಗಳು ಕೇವಲ 60–70 ಮಾತ್ರ ಇರುವುದರಿಂದ ತುರ್ತು ಪ್ರಕರಣಗಳಲ್ಲಿ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ನೂರಾರು ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ, ಆದರೆ ಬೆಡ್ ಸೀಮಿತತೆಯಿಂದ ಕೆಲವರನ್ನು ಕಾಯುವಂತೆ ಮಾಡಬೇಕಾಗುತ್ತದೆ. ರೋಗಿಗಳ ಸಂಬಂಧಿಕರು ಸಮಸ್ಯೆ ತಿಳಿಸಲು ಪ್ರಯತ್ನಿಸಿದಾಗ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಹಾಗೂ ಕೆಲವು ಕುಟುಂಬಗಳು ಖಾಸಗಿ ಆಸ್ಪತ್ರೆಗಳತ್ತ ತೆರಳಬೇಕಾಗುತ್ತಿದೆ.

ಲ್ಯಾಬ್ ವರದಿಗಳು ತಡವಾಗಿ ದೊರಕುವುದು ಸೇರಿದಂತೆ ಆಡಳಿತಾತ್ಮಕ ಸಮಸ್ಯೆಗಳ ನಡುವೆ, ವೈದ್ಯಕೀಯ ಅಧೀಕ್ಷಕರು ಈ ಸಂದರ್ಭದಲ್ಲಿ ಆಸ್ಪತ್ರೆ ದಿನನಿತ್ಯ ಬಹಳ ಸಂಖ್ಯೆಯಲ್ಲಿ ತುರ್ತು ಪ್ರಕರಣಗಳನ್ನು ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ ಮತ್ತು ಐಸಿಯು ಬೆಡ್‌ಗಳ ಹೆಚ್ಚುವರಿ ವ್ಯವಸ್ಥೆಯನ್ನು ಸರ್ಕಾರ ಗಮನಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಮೂಲಸೌಕರ್ಯ ವೃದ್ಧಿ ಮತ್ತು ಆರೋಗ್ಯ ಸೇವೆ ಸುಧಾರಣೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.

ಬೆಂಗಳೂರು: ಅಕ್ರಮ ವಿದೇಶಿಗರ ವಿರುದ್ಧ ಪೊಲೀಸ್ ಕಾರ್ಯಾಚರಣೆ; ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಂದಿ ವಿಚಾರಣೆಗೆ!

0

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ಬೆಂಗಳೂರು ಪೊಲೀಸರು ಭಾರೀ ಕಾರ್ಯಾಚರಣೆ ಆರಂಭಿಸಿದ್ದಾರೆ.

ಪೊಲೀಸ್ ಆಯುಕ್ತರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ಅನುಮಾನಾಸ್ಪದ ಪ್ರದೇಶಗಳಲ್ಲಿ ತಲಾಶ್ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ಬುಧವಾರದ ದಿನವೇ ಸುಮಾರು 2,000ಕ್ಕೂ ಹೆಚ್ಚು ವಿದೇಶಿಗರನ್ನು ವಿಚಾರಣೆಗೊಳಿಸಲಾಗಿದೆ, ಇದರಲ್ಲಿ ಬಹುತೇಕರು ವೀಸಾ ಅವಧಿ ಮೀರಿಸಿ ಅಥವಾ ದಾಖಲೆಗಳಿಲ್ಲದೆ ನಗರದಲ್ಲಿ ವಾಸಿಸುತ್ತಿದ್ದರು. ವಿಶೇಷವಾಗಿ, ಕೆಲವು ನೈಜೀರಿಯಾ ಮತ್ತು ಬಾಂಗ್ಲಾದೇಶ ಮೂಲದ ವಲಸಿಗರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ‘ಯಾವ ದೇಶದಿಂದ ಬಂದಿದ್ದಾರೆ, ಯಾವಾಗ ಪ್ರವೇಶಿಸಿದ್ದಾರೆ, ಯಾರು ಕರೆತಂದಿದ್ದಾರೆ ಮತ್ತು ವೀಸಾ/ಪಾಸ್‌ಪೋರ್ಟ್ ಮಾನ್ಯತೆಯ ಸ್ಥಿತಿ ಏನು’ ಎಂಬ ಮಾಹಿತಿ ಸಮಗ್ರವಾಗಿ ಪರಿಶೀಲಿಸುತ್ತಿದ್ದಾರೆ.

ನಗರದಲ್ಲಿ ಕಾನೂನು ಸುಸ್ಥಿತಿ ಕಾಪಾಡಲು ಈ ಕಾರ್ಯಾಚರಣೆ ಮುಂದುವರಿಯಲಿದೆ ಮತ್ತು ಅಗತ್ಯವಿದ್ದಲ್ಲಿ ಸಂಬಂಧಿತ ಕೇಂದ್ರ ಸಂಸ್ಥೆಗಳ ಸಹಾಯವನ್ನು ಪಡೆಯಲಾಗುವುದು. 2025–2026ರ ಹಿಂದೆಯೂ  ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಭರ್ಜರಿ ಕಾರ್ಯಾಚರಣೆಗಳು ನಡೆದಿದ್ದು, ಬಾಂಗ್ಲಾದೇಶ ಮತ್ತು ನೈಜೀರಿಯಾ ಮೂಲದ ವಿದೇಶಿಗರು ಬಂಧಿತರಾಗಿದ್ದರು ಮತ್ತು ವೀಸಾ ಅವಧಿ ಮೀರಿದವರು ಅಕ್ರಮವಾಗಿ ಕೆಲಸ ಮಾಡುತ್ತಿದ್ದುದನ್ನು ಪತ್ತೆ ಹಚ್ಚಲಾಗಿತ್ತು.

ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್ ಮಂಡಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಶೋಷಿತ ಸಮುದಾಯಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸುವ ಸಲುವಾಗಿ ಮುಂಬರುವ ಬಜೆಟ್‌ನಲ್ಲಿ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಪದಾಧಿಕಾರಿಗಳು ಆಗ್ರಹಿಸಿದರು.

ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ, ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಈಗಾಗಲೇ ಜನತಾ ಬಜೆಟ್ ಪುಸ್ತಕದಲ್ಲಿ ಮಂಡಿಸಿರುವ ಎಲ್ಲಾ ಜನಪರ ಯೋಜನೆಗಳಿಗೆ ಹಣ ಮೀಸಲಿಡಬೇಕು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಬೇಕು, ವಿಶೇಷವಾಗಿ ಗದಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಹಲವು ಜ್ವಲಂತ ಸಮಸ್ಯೆಗಳು ಇದ್ದು, ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆ ಮತ್ತು ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕುಡಿಯುವ ನೀರಿನ 24*7 ಕುಡಿಯುವ ನೀರಿನ ಯೋಜನೆ ಅಪೂರ್ಣಗೊಂಡಿದ್ದು, ಶೀಘ್ರವೇ ಪೂರ್ಣಗೊಳಿಸಿ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಗದಗ-ಬೆಟಗೇರಿ ನಗರದಲ್ಲಿ ರಸ್ತೆ, ಒಳಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ವಿಶೇಷ ಹಣ ಬಿಡುಗಡೆ ಮಾಡಬೇಕು. ಗದಗ ನಗರ ಕೇಂದ್ರದಲ್ಲಿ ರಕ್ತ ಭಂಡಾರ ನಿರ್ಮಿಸುವುದು, ವಿಶ್ವವಿದ್ಯಾಲಯ ಸ್ಥಾಪನೆ, ಬೆಟಗೇರಿ ಭಾಗದಲ್ಲಿ ಅಲ್ಪಸಂಖ್ಯಾತ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣ, ಅಲ್ಪಸಂಖ್ಯಾತ ಹಾಸ್ಟೆಲ್ ನಿರ್ಮಾಣ, ನರಗುಂದ ಹಾಗೂ ಗದಗ ನಗರದಲ್ಲಿ ಅಲ್ಪಸಂಖ್ಯಾತರ ಶಾದಿಮಹಲ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಫಾನ್ ತರಾಫ್ದರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಜಿಲ್ಲಾ ಖಜಾಂಚಿ ಮದಾರ್‌ಶಾಹ್ ಮಕಾನದಾರ್, ಗದಗ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಮೀರ್ ಕೊಟ್ಟೂರ್, ಶಿರಹಟ್ಟಿ ಕ್ಷೇತ್ರ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ನದಾಫ್ ಹಾಗೂ ಕಾರ್ಯದರ್ಶಿ ಅಬ್ದುಲ್ಖಾದರ್ ಕಾಗದಗಾರ, ಫಯಾಜ್ ಪಟೇಲ್, ಮುಸ್ತಾಕ್ ಹೊಸಮನಿ, ಮುಬಾರಕ್ ಗದಗ, ಮುಸ್ತಾಕ್ ಕಟ್ಟಿಮನಿ, ಅಷ್ಪಾಕ್ ಧಾರವಾಡ, ವಾಸೀಮ್ ರಬಕವಿ, ವಿಮೆನ್ ಇಂಡಿಯಾ ಮೂವ್ಮೆಂಟ್ ಅಧ್ಯಕ್ಷರಾದ ಸುಮಯ್ಯ ಬಳ್ಳಾರಿ, ಕಾರ್ಯದರ್ಶಿ ಕಾಜಲ್ ಬಾಗೇವಾಡಿ ಉಪಸ್ಥಿತರಿದ್ದರು.

ನರಗುಂದದಲ್ಲಿ ನಿರ್ಮಿಸುತ್ತಿರುವ ಆಚಾರ್ಯ ಪ್ಲಾಟ್ ಮನೆಗಳ ಸಂಖ್ಯೆ ಹೆಚ್ಚಿಸಬೇಕು, ಶಿರಹಟ್ಟಿ ಪಟ್ಟಣದಲ್ಲಿ ಅನಾವರಣಗೊಂಡು ದುಃಸ್ಥಿತಿಯಲ್ಲಿರುವ ಎಪಿಎಂಸಿ ಮಾರುಕಟ್ಟೆ ಸಮರ್ಪಕ ಬಳಕೆಗೆ ವಿಶೇಷ ಯೋಜನೆ, ಜಿಲ್ಲೆಯ ಈ ಎಲ್ಲ ಸಮಸ್ಯೆಗಳಿಗೆ ಈ ಬಜೆಟ್ ಮಂಡನೆಯಲ್ಲಿ ವಿಶೇಷ ಹಣಕಾಸು ಪ್ಯಾಕೇಜ್ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಭಾರತ ಜೈವಿಕ ವೈವಿಧ್ಯದಲ್ಲಿ ಪ್ರಮುಖ ರಾಷ್ಟ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಸಾಂಪ್ರದಾಯಿಕವಾಗಿ ಬೆಳೆಯುತ್ತಿರುವ ಬೀಜಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು, ಮೊಳಕೆ ಪರೀಕ್ಷೆ ಮಾಡಿಸುವುದು, ತಳಿಗಳನ್ನು ಸಂರಕ್ಷಿಸಿ ಇತರೆ ಆಸಕ್ತಿಯುತ ರೈತರೊಂದಿಗೆ ಅಭಿವೃದ್ಧಿಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಚೇತನಾ ಪಾಟೀಲ ಹೇಳಿದರು.

ಕೃಷಿ ಇಲಾಖೆ ಗದಗ ಹಾಗೂ ಐಸಿಎಆರ್ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಹಯೋಗದೊಂದಿಗೆ `ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ’ ಕಾರ್ಯಕ್ರಮದಡಿ ಒಂದು ದಿನದ ರೈತರ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕರಾದ ಸೀಮಾ ಸವಣೂರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಭಾರತವು ಕೃಷಿ ಪರಂಪರೆ ಮತ್ತು ಜೈವಿಕ ವೈವಿಧ್ಯದಲ್ಲಿ ವಿಶ್ವದ ಪ್ರಮುಖ ರಾಷ್ಟ್ರವಾಗಿದ್ದು, ಈ ಪರಂಪರೆಯ ಹೃದಯವಾಗಿರುವುದು ಶತಮಾನಗಳಿಂದ ರೈತರು ಉಳಿಸಿಕೊಂಡು ಬಂದಿರುವ ಪಾರಂಪರಿಕ ಬೀಜಜಾತಿಗಳು. ಇವು ಸ್ಥಳೀಯ ಹವಾಮಾನ, ಮಣ್ಣಿನ ಸ್ವಭಾವ ಮತ್ತು ಸಾಂಸ್ಕೃತಿಕ ಅಗತ್ಯಗಳಿಗೆ ಹೊಂದಿಕೊಂಡು ಅಭಿವೃದ್ಧಿಯಾಗಿರುವ ಅಮೂಲ್ಯ ಕೃಷಿ ಸಂಪತ್ತುಗಳಾಗಿದ್ದು, ಇವುಗಳನ್ನು ಸಂರಕ್ಷಿಸಿ ಅಭಿವೃದ್ಧಿ ಮಾಡುವುದಕ್ಕಾಗಿ `ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ’ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು 2024-25ನೇ ಸಾಲಿನಿಂದ ಐದು ವರ್ಷದವರೆಗೆ ಕೈಗೊಂಡಿದೆ ಎಂದು ತಿಳಿಸಿದರು.

ತಾಂತ್ರಿಕ ಅಧಿವೇಶನದಲ್ಲಿ ಭಾಗವಹಿಸಿದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ. ಕಲಾವತಿ ಮಾತನಾಡಿ, ಸಾಂಪ್ರದಾಯಿಕ ತಳಿಗಳ ಸಂರಕ್ಷಣೆ ಮಹತ್ವ, ಗುಣಧರ್ಮಗಳು ಹಾಗೂ ಉಪಯೋಗಗಳ ಕುರಿತು ಮಾಹಿತಿ ನೀಡಿದರು.

ಡಾ. ಬಿ.ಎನ್. ಮೊಟಗಿ ದೇಸಿ ತಳಿಗಳ ಸಂರಕ್ಷಣೆ ಹಾಗೂ ಬೀಜೋತ್ಪಾದನೆ ತಾಂತ್ರಿಕತೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಡಾ. ಸಂಗಶೆಟ್ಟಿ ಕುಸುಬೆ ಬೆಳೆಯ ಬಗ್ಗೆ ಹಾಗೂ ಡಾ. ಬಸವರಾಜ ಏಣಗಿ ಜಿಲ್ಲೆಯ ಪ್ರಮುಖ ದೇಸಿ ಬೆಳೆಗಳಾದ ಹೆಸರು, ಗೋಧಿ ಹಾಗೂ ಜೋಳದ ದೇಸಿ ಬೀಜ ಸಂರಕ್ಷಣೆ ಹಾಗೂ ವೈಜ್ಞಾನಿಕ ಬೇಸಾಯ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ, ರೈತರ ಸಮಸ್ಯೆಗಳು-ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಿಂದ ಮುಖ್ಯ ದೇಸಿ ಬೆಳೆಗಳಾದ ಹುರಪಲು, ನವಣೆ, ಹಾಲ ನವಣೆ, ನಂದಿಹಾಳ ಜೋಳ, ಮಾಲದಂಡೆ ಜೋಳ, ದುಂಡು ತೆನೆ ಜೋಳ, ಅಳ್ಳಿನ ಜೋಳ, ಕೆಂಪು ಜೋಳ, ನೆರಳೆ ಬಣ್ಣದ ಗೋಧಿ, ಕೆಂಪು ಗೋಧಿ, ಕಪ್ಪು ಗೋಧಿ, ಜವಾರಿ ತೊಗರಿ, ಜವಾರಿ ಹುರುಳಿ, ಕುಸುಬೆ, ಪುಂಡೆ ಇತ್ಯಾದಿ ದೇಸಿ ಬೀಜಗಳನ್ನು ತೆನೆ, ಹೂ ಇತ್ಯಾದಿಗಳ ಮುಖಾಂತರ ಆಕರ್ಷಕವಾಗಿ ಪ್ರದರ್ಶಿಸಲಾಗಿತ್ತು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಾಗವಹಿಸಿದ ದೇಸಿ ತಳಿಗಳನ್ನು ಬೆಳೆದು ಸಂರಕ್ಷಿಸಿ ಬೆಳೆಯುತ್ತಿರುವ ಪ್ರಗತಿಪರ ರೈತರಾದ ಮೃತ್ಯುಂಜಯ ವಸ್ತ್ರದ, ವೀರೇಶ ನೆಗಲಿ, ಉಮೇಶಗೌಡ ಪಾಟೀಲ, ಅಂದಪ್ಪ ಅಂಗಡಿ ಹಾಗೂ ಮಲ್ಲಯ್ಯ ಗುರುಬಸಪ್ಪನವರಮಠ ಇವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ನೇತ್ರಾವತಿ ಪಟ್ಟೇದ ನಿರೂಪಿಸಿದರು. ತರಬೇತಿಯಲ್ಲಿ ಆತ್ಮ ಹಾಗೂ ಎನ್‌ಎಫ್‌ಎಸ್‌ಎಮ್ ಯೋಜನೆಯ ಸಿಬ್ಬಂದಿಗಳು ಹಾಜರಿದ್ದರು. ಮಂಜುನಾಥ ಭರಮಗೌಡರ ವಂದಿಸಿದರು.

ಉಪ ಕೃಷಿ ನಿರ್ದೇಶಕರಾದ ಸ್ಪೂರ್ತಿ ಜಿಎಸ್ ಮಾತನಾಡುತ್ತಾ, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಿಂದ 38 ಜನ ದೇಸಿ ತಳಿಗಳನ್ನು ಬೆಳೆಯುವ ರೈತರನ್ನು ಗುರುತಿಸಿ ಸದರಿ ರೈತರಿಂದ 52 ದೇಸಿ ತಳಿಗಳನ್ನು ಮೂಲ ಸಮೀಕ್ಷೆಯ ಮೂಲಕ ಸಂಗ್ರಹಿಸಿ, ಜೀನ್ ಬ್ಯಾಂಕ್‌ಗೆ ಸಂರಕ್ಷಿಸಿ ಅಭಿವೃದ್ಧಿಪಡಿಸಲು ಕಳುಹಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಡಾ. ಚಂದ್ರು ಲಮಾಣಿ ಪರ ಲಕ್ಷ್ಮೇಶ್ವರದಲ್ಲಿ ಅಭಿಮಾನಿ ಬಳಗದಿಂದ ಬೃಹತ್ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಕಾಂಗ್ರೆಸ್ ಪಕ್ಷದವರು ಲಂಚ ನೀಡಿದ ಷಡ್ಯಂತ್ರ-ಕುತಂತ್ರದಿಂದ ಲೋಕಾ ಬಲೆಗೆ ಸಿಕ್ಕಿಸಿ ಮೋಸ ಮಾಡಿದ್ದಾರೆ ಎಂದು ಬುಧವಾರ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗ ಹಾಗೂ ಬಂಜಾರ ಸಮಾಜದಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಲಕ್ಷ್ಮೇಶ್ವರ ಸೇರಿ ಶಿರಹಟ್ಟಿ, ಮುಂಡರಗಿ ಭಾಗದಿಂದ ಜಮಾಸಿದ ನೂರಾರು ಅಭಿಮಾನಿಗಳು, ಬಂಜಾರ ಸಮಾಜದವರು ಶಾಸಕ ಚಂದ್ರು ಲಮಾಣಿ ಅವರ ಬಂಧನಕ್ಕೆ ಹೆಣೆದ ಕುತಂತ್ರದ ವಿರುದ್ಧ ಸಿಡಿದೆದ್ದರು.

ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಶಾಸಕರೇ ನಾವು ನಿಮ್ಮೊಂದಿಗಿದ್ದೇವೆ ಯಾವುದೇ ಕಾರಣಕ್ಕೂ ಅಳುಕಬೇಡಿ, ಕುತಂತ್ರದಿಂದ ನಿಮ್ಮ ಏಳಿಗೆ ಸಹಿಸದವರು ಇಂತಹ ಹೇಯ ಕೃತ್ಯಕ್ಕೆ ಇಳಿಯುವ ಕಾರ್ಯ ಮಾಡಿದ್ದಾರೆ ಎಂದು ಘೋಷಣೆ ಕೂಗಿದರು. ನಮ್ಮ ಶಾಸಕ ನಮ್ಮ ಹೆಮ್ಮೆ, ಅನ್ನದಾತ ಶಾಸಕ, ಜನಪರ ಕಾಳಜಿ ಶಾಸಕ, ಪ್ರಾಮಾಣಿಕ ಸೇವಕ ಶಾಸಕ, ನಿಮ್ಮೊಂದಿಗೆ ನಾವಿದ್ದೇವೆ ಎಂಬಿತ್ಯಾದಿ ನೂರಾರು ಬಿತ್ತಿ ಪತ್ರಗಳನ್ನು ಹಿಡಿದ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನಾ ಮೆರವಣಿಗೆಯು ಸೋಮೇಶ್ವರ ತೇರಿನ ಮನೆಯಿಂದ ಸಾಗಿ ಕಾಶೆಟ್ಟಿಯವರ ಓಣಿ, ಪೇಟೆ ರಸ್ತೆ, ಪುರಸಭೆ ಶಿಗ್ಲಿ ನಾಕಾ ಮೂಲಕ ಹಾಯ್ದು ಹೊಸ ಬಸ್‌ನಿಲ್ದಾಣದಲ್ಲಿ ಸುಮಾರು 1 ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಕುಳಿತು ಅಕ್ರೋಶ ವ್ಯಕ್ತಪಡಿಸಿದರು. ನಂತರ ಸಭೆಯಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದ ಹಿರಿಯ ಸದಸ್ಯ ಸುನೀಲ್ ಮಹಾಂತಶೆಟ್ಟರ, ಶಂಕರ ಮರಾಠೆ, ಅಶೋಕ ಶಿರಹಟ್ಟಿ, ತಿಮ್ಮರಡ್ಡಿ ಮರಡ್ಡಿ, ಕುಮಾರಸ್ವಾಮಿ ಹಿರೇಮಠ, ನವೀನ ಹಿರೇಮಠ, ನಾಗರಾಜ ಲಕ್ಕುಂಡಿ, ಲಿಂಗರಾಜ ಪಾಟೀಲ, ಶಿವಣ್ಣ ಲಮಾಣಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಅವರ ಪತ್ನಿ ಮುಡಾ ಹಗರಣದಲ್ಲಿ 14 ಸೈಟ್ ಪಡೆದು ಪ್ರಕರಣ ದಾಖಲಾಗುತ್ತಿದ್ದಂತೆಯೇ 14 ಸೈಟ್ ವಾಪಸು ಕೊಟ್ಟರಲ್ಲ, ಆಗ ಅವರ ರಾಜೀನಾಮೆ ಕೇಳಿದಿರಾ? ಅಬಕಾರಿ ಹಗರಣದಲ್ಲಿ ಆರ್.ಬಿ. ತಿಮ್ಮಾಪೂರವರು ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಡಾ. ಭೀಮಸಿಂಗ ರಾಠೋಡ, ಚವ್ಹಾಣ, ಆನಂದಗೌಡ ಪಾಟೀಲ, ಎಂ.ಎಸ್. ದೊಡ್ಡಗೌಡರ, ಶಿವಪ್ರಕಾಶ ಮಹಾಜನಶೆಟ್ಟರ, ಡಿ.ವೈ. ಹುನಗುಂದ, ಟೋಪಣ್ಣ, ಲಮಾಣಿ, ಥಾವರಪ್ಪ ಲಮಾಣಿ, ಕರಬಸಪ್ಪ ಹಂಚಿನಾಳ, ಶಿವಯೋಗಿ ಅಂಕಲಕೋಟಿ, ಫಕ್ಕಿರೇಶ ರಟ್ಟಿಹಳ್ಳಿ, ಪೂರ್ಣಾಜಿ ಖರಾಟೆ, ವಿಜಯ ಮೆಕ್ಕಿ, ರಮೇಶ್ ಧನದಮನಿ, ದೇವಪ್ಪ ಮತ್ತೂರ, ಬಸವರಾಜ ಗಾಣಗೇರ, ಈರಣ್ಣ ಪೂಜಾರ, ಜಾನು ಲಮಾಣಿ, ಸಂತೋಷ ಲಮಾಣಿ, ಗಿರೀಶ ಚೌರಡ್ಡಿ, ಮಲ್ಲೇಶಪ್ಪ ಲಮಾಣಿ, ಅಶೋಕ ಬಟಕುರ್ಕಿ, ನಿಂಗಪ್ಪ ಪ್ಯಾಟಿ, ಭೀಮಣ್ಣ ಯಂಗಾಡಿ, ಶಿವಾನಂದ ಮೆಕ್ಕಿ, ಕಲ್ಲಪ್ಪ ಹಡಪದ, ನಂದಾ ಪಲ್ಲೇದ, ಜ್ಯೋತಿ ಹಾನಗಲ್, ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ್, ವಾಣಿ ಹತ್ತಿ, ಮಂಜುಳಾ ಗುಂಜಳ, ಮೋಹನ ಗುತ್ತೆಮ್ಮನವರ, ಶಿವಣಗೌಡರ ಕಂಟಿಗೌಡರ, ಶಂಕರ ಬಾವಿ, ಮಹೇಶ್ ಬಡ್ನಿ, ಫಕ್ಕೀರೇಶ ರಟ್ಟೆಹಳ್ಳಿ, ತಿಪ್ಪಣ್ಣ ಕೊಂಚಿಗೇರಿ, ಬಸವರಾಜ ಇಟಗಿ, ರಾಜು ಅಂದಲಗಿ ಸೇರಿದಂತೆ ಸಾವಿರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ದಲಿತ ಮುಖಂಡನಾಗಿ ಈ ಭಾಗದಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದ ಯುವಕ ಬೆಳೆಯುತ್ತಿರುವುದನ್ನು ಕಂಡು ಇಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ. ಬಂಜಾರ ಸಮಾಜವನ್ನು ತುಳಿಯುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು. ಷಡ್ಯಂತ್ರದ ಮೂಲಕ ದಲಿತ ಶಾಸಕರನ್ನು ಬಂಧಿಸಿ ಮಟ್ಟ ಹಾಕುವ ಹುನ್ನಾರವನ್ನು ಕಾರ್ಯಕರ್ತರು ಸಹಿಸುವುದಿಲ್ಲ, ಇಂತಹ ಗೊಡ್ಡು ಬೇದರಿಕೆಗಳಿಗೆ ಹೆದರುವುದಿಲ್ಲ ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

error: Content is protected !!