Home Blog

ಲವರ್ಸ್ ಡೇ ದಿನದಂದೇ ದುರಂತ; ಶೂಟ್ ಮಾಡಿಕೊಂಡು ಕಾರಿನಲ್ಲೇ ಯುವ ಪ್ರೇಮಿಗಳು ಸೂಸೈಡ್

0

ಲಕ್ನೋ:- ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರೇಮಿಗಳ ದಿನದಂದೇ ದುರಂತವೊಂದು ನಡೆದಿದ್ದು, ಶೂಟ್ ಮಾಡಿಕೊಂಡು ಪ್ರೇಮಿಗಳು ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ನಿಲ್ಲಿಸಿದ್ದ ಕಾರಿನಲ್ಲಿ ಮೃತದೇಹಗಳನ್ನು ಕಂಡು ತಕ್ಷಣ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಪರಿಶೀಲನೆ ವೇಳೆ, ಇಬ್ಬರೂ ಗುಂಡೇಟಿಗೆ ಬಲಿಯಾದರೆಂದು ದೃಢಪಟ್ಟಿದ್ದು, ಯುವಕ ಮೊದಲು ಯುವತಿಗೆ ಗುಂಡು ಹಾರಿಸಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತ ಯುವಕನ ಕೈಯಿಂದ ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೀದರ್| ಸ್ಪಾ ಅಡ್ಡೆ ಮೇಲೆ ಖಾಕಿ ದಾಳಿ; ಐವರು ಯುವತಿಯರ ರಕ್ಷಣೆ, ಇಬ್ಬರು ಅರೆಸ್ಟ್!

0

ಬೀದರ್: ಬೀದರ್ ನಗರದ ಶಿವನಗರದಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಬೀದರ್ ಪೊಲೀಸರು ಭರ್ಜರಿ ದಾಳಿ ನಡೆಸಿ, ಹೊರರಾಜ್ಯದ ಐವರು ಯುವತಿಯರನ್ನು ರಕ್ಷಿಸಿದ್ದಾರೆ.

ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಮಹಾರಾಷ್ಟ್ರ, ಅಸ್ಸಾಂ, ಹರಿಯಾಣ ಮತ್ತು ಮಧ್ಯಪ್ರದೇಶದಿಂದ ಬಂದ ಯುವತಿಯರನ್ನು ರಕ್ಷಣೆ ಮಾಡಲಾಗಿದೆ .ಸ್ಪಾ ಅಡ್ಡೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗದ ಹಸ್ತಾಂತರಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಬೀದರ್ ಎಸ್ಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ನೂತನ ಠಾಣೆಯ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಯಶಸ್ವಿಯಾಗಿ ನಡೆಸಿದರು.

ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಪ್ರೋತ್ಸಾಹಿಸಿ: ಡಾ. ವೇದಾ ವಿಕ್ರಮ ಬಿದರೂರ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಅನುಕಂಪ ಬೇಡ. ಅವರಿಗೂ ಎಲ್ಲ ರೀತಿಯ ಅವಕಾಶ ನೀಡಿದರೆ ಅವರೂ ಸಹ ಸಾಮಾನ್ಯ ಮಕ್ಕಳಂತೆ ಪ್ರತಿಭಾನ್ವಿತರಾಗಿ ಹೊರಹೊಮ್ಮುವರು ಎಂದು ಜನಚೇತನ ಶಿಕ್ಷಣ ಸಮಿತಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ವೇದಾ ವಿಕ್ರಮ ಬಿದರೂರ ಹೇಳಿದರು.

ಅವರು ಶನಿವಾರ ನಗರದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಪಾಲಕರು ಹೆಚ್ಚಿನ ಹಾಗೂ ವಿಶೇಷ ಕಾಳಜಿ ವಹಿಸುವುದು ಅವಶ್ಯ. ಇಂತಹ ಮಕ್ಕಳನ್ನು ಪಾಲಕರಿಗಿಂತ ಅರುಣೋದಯ ಶಾಲೆಯಲ್ಲಿ ಶಿಕ್ಷಕ-ಶಿಕ್ಷಕಿಯರು ಬಹಳಷ್ಟು ಪ್ರೀತಿಯಿಂದ ಸಂಬಾಳಿಸುವ ಮೂಲಕ ಅವರನ್ನು ಶಿಸ್ತಿಗೆ ಒಳಪಡಿಸುವಲ್ಲಿ, ನಿಯಂತ್ರಿಸುವಲ್ಲಿ ನಿಪುಣರಾಗಿದ್ದಾರೆ. ಒಂದರ್ಥದಲ್ಲಿ ಇವರುಗಳೇ ‘ರಿಯಲ್ ಹೀರೋ’ ಎಂದು ಬಣ್ಣಿಸಿದರು.

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅವಶ್ಯಕವಿರುವ ಎಲ್ಲ ರೀತಿಯ ಸಹಾಯಕ ಸೌಲಭ್ಯಗಳು, ಸಲಕರಣೆಗಳು, ಆರೋಗ್ಯ ತಪಾಸಣೆ, ಫಿಜಿಯೋಥೆರಪಿ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಕ್ರಮಗಳನ್ನು ಈ ಶಾಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದು ಅಭಿನಂದನೀಯ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಕಂಚನ್‌ದೇವಿ ಓಸ್ವಾಲ್ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆ ಎಂದರೆ ಅದು ದೇವರ ಸೇವೆಯೇ ಸರಿ. ಇಂತಹ ಮಕ್ಕಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವ ಹೊಂದುವವರಾಗುತ್ತಾರೆ ಎಂದರು.

ವೇದಿಕೆ ಮೇಲೆ ಉಪಸ್ಥಿತರಿದ್ದ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್‌ನ ವಿಶ್ವಸ್ಥರಾದ ಶ್ರೀಕೃಷ್ಣ ಕುಲಕರ್ಣಿ ಅವರು ಮಾತನಾಡಿ, ಸಮಾಜಮುಖಿ ಹಾಗೂ ಜನಮುಖಿ ಕಾರ್ಯಗಳನ್ನು ಮಾಡಲು ಸ್ಥಾಪನೆಗೊಂಡಿರುವ ಸೇವಾ ಭಾರತಿ ಸಂಸ್ಥೆ ಬೇರೆ ಬೇರೆ ರೀತಿಯಲ್ಲಿ ಮಾನವೀಯ ಕಾರ್ಯಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡಿದೆ. ಹಿರಿಯ ಸಾಧಕರು ಹಾಗೂ ಅನುಭಾವಿಗಳು ಈ ಸಂಸ್ಥೆಯ ಮೂಲಕ ವಿಧಾಯಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಈ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರನ್ನು ಸೇರಿಸಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ವಿಶೇಷ ಅಗತ್ಯವುಳ್ಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಉಮೇಶ್ ಹಾದಿ ಸ್ವಾಗತಿಸಿದರು. ಕಾರ್ಯದರ್ಶಿ ಜಯರಾಜ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಜಿತೇಂದ್ರ ಶಹಾ, ಬಸವರಾಜ ನಾಗಲಾಪೂರ, ಬಸವರಾಜ ಪಟ್ಟಣಶೆಟ್ಟಿ, ಮಂಜುನಾಥ ಚನ್ನಪ್ಪನವರ, ಮಲ್ಲಿಕಾರ್ಜುನ ಬೆಲ್ಲದ, ಮಲ್ಲಿಕಾರ್ಜುನ ನಾಗಲಾಪೂರ ಸೇರಿದಂತೆ ಪಾಲಕರು, ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ ಮಾತನಾಡಿ, ಗದಗ ಪರಿಸರದಲ್ಲಿ ಪ್ರತಿಷ್ಠಿತ ಶಾಲೆಯಾಗಿ ಹೊರಹೊಮ್ಮಿದ್ದು, ವಿಶೇಷ ಮತ್ತು ವಿಶಿಷ್ಟ ರೀತಿಯ ಕಾರ್ಯ ಮಾಡುತ್ತಿದೆ. ಈ ಶಾಲೆಗೆ ಹಲವಾರು ಸಂಘ-ಸಂಸ್ಥೆಗಳು ಹಾಗೂ ಗಣ್ಯರು ಸಹಾಯ-ಸಹಕಾರ ನೀಡುತ್ತಿರುವುದು ಅಭಿನಂದನೀಯ. ಈ ಸಹಕಾರ ಮುಂದುವರಿಯಲಿ ಎಂದು ಹೇಳಿದರು.

ಲಕ್ಷ್ಮೇಶ್ವರ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿಯಲ್ಲಿ ಶನಿವಾರ ಲಕ್ಷ್ಮೇಶ್ವರ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಿಗ್ಗೆ ತಾಯಿ ಭುವನೇಶ್ವರಿ ಅವರ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.

ಗ್ರಾಮದ ಹಿರಿಯರಾದ ಮೃತ್ಯುಂಜಯ ಶಿದ್ರಾಮಯ್ಯ ಹಿರೇಮಠ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಮೆರವಣಿಗೆಗೆ ಚಾಲನೆ ನೀಡಿದರು.

ಅಲಂಕೃತ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷರಾದ ಲಲಿತ ಸಿ. ಕೆರಿಮನಿ ಅವರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ವಾದ್ಯಮೇಳದೊಂದಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪ್ರಾರಂಭಗೊಂಡ ಮೆರವಣಿಗೆ ಬಸ್ ನಿಲ್ದಾಣ, ಪೇಟೆ ಆವರಣ, ಗುಡ್ಡಳ್ಳಿ ಓಣಿ, ಗೋಣಿಸ್ವಾಮಿ ಓಣಿ, ವಾಲ್ಮೀಕಿ ಓಣಿ, ಅಂಬೇಡ್ಕರ್ ನಗರ, ಉಡಚಮ್ಮ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ, ಕನ್ನಡ ಗಂಡು ಮಕ್ಕಳ ಶಾಲೆ ಮೂಲಕ ಕೋಟೆ ಆವರಣದಲ್ಲಿನ ಗುಂಡೇಶ್ವರ ಮಹಾವೇದಿಕೆ ತಲುಪಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಮೆಡ್ಲೇರಿ, ತಾ.ಪಂ. ಇಒ ಧರ್ಮರಾಜ ಕೃಷ್ಣಪ್ಪ, ಬಿಇಒ ನಾಣಕಿ ನಾಯ್ಕ, ವಿರೂಪಾಕ್ಷಪ್ಪ ಮೇಟಿ, ಡಾ. ಎಸ್.ಕೆ. ಪಾಟೀಲ, ಅಶೋಕಗೌಡ ಪಾಟೀಲ, ಶಿವಣ್ಣ ಗಾಣಗೇರ, ಬಾಪುಗೌಡ ಭರಮಗೌಡ್ರ, ಫಕ್ಕೀರಗೌಡ ಪಾಟೀಲ, ವಸಂತ ಬಾಗೇವಾಡಿ, ಮುತ್ತಣ್ಣ ನವಲಗುಂದ, ಶಿವಯೋಗಿ ಹೊಸಕೇರಿ, ಗೀತಾ ಸುರೇಶ್ ಬೀರಣ್ಣವರ, ಮೈನು ಗಮ್ಮಣ್ಣವರ, ಗಿರೀಶ ಸಜ್ಜನ, ಬಿ.ಕೆ. ಗಡೆಪ್ಪನವರ, ಅಶೋಕ ಬಿಸೆರೊಟ್ಟಿ, ಹೆಚ್.ಎಸ್. ರಾಮನಗೌಡ್ರ, ಮಂಜುನಾಥ ಕರೆಗೌಡ್ರ, ಸತೀಶ ಪತ್ತಾರ, ಜಿ.ಎಫ್. ಡೊಂಬರ, ಶಂಕರ ಮಿಸ್ಕಿನ್, ಡಿ.ಎನ್. ಶಿರುಂಜ, ಯಳವತ್ತಿಯ ಅರವಿಂದೋ ವಿದ್ಯಾಮಂದಿರ ಶಾಲೆ, ಜನನಿ ಶಾಲೆ, ಸರ್ಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆ, ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ಜಗದ್ಗುರು ಪಕ್ಕೀರ ಚನ್ನವೀರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಕದಳಿ ವೇದಿಕೆ, ಅಕ್ಕನ ಬಳಗದ ಸದಸ್ಯರು, ಗ್ರಾಮದ ಹಿರಿಯರು ಮತ್ತು ಯುವಕರು ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಗ್ರಾಮದ ಎಲ್ಲ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಕನ್ನಡದ ಸಾಹಿತಿಗಳು, ಕವಿಗಳು, ವಚನಕಾರರು, ದಾಸಶ್ರೇಷ್ಠರು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಮೆರವಣಿಗೆಯ ರಂಗು ಹೆಚ್ಚಿಸಿದರು. ಪೂರ್ಣಕುಂಭ, ಡೊಳ್ಳು, ಜಾಂಜ್ ಹಾಗೂ ವಾದ್ಯಮೇಳದೊಂದಿಗೆ ಕನ್ನಡ ಸಾಹಿತ್ಯಾಭಿಮಾನಿಗಳು ಹೆಜ್ಜೆ ಹಾಕಿದರು.

ಮೆರವಣಿಗೆ ಮಾರ್ಗದಲ್ಲಿ ರಂಗೋಲಿ ಹಾಕಿ ಬ್ಯಾನರ್‌ಗಳು ಹಾಗೂ ತಳಿರು-ತೋರಣಗಳನ್ನು ಕಟ್ಟಿ ಸ್ವಾಗತಿಸಲಾಗಿತ್ತು. ಲಕ್ಷ್ಮೇಶ್ವರ ಸ್ಕೂಲ್ ಚಂದನ ಬ್ಯಾಂಡ್ ವಿದ್ಯಾರ್ಥಿಗಳು ಮೆರವಣಿಗೆಗೆ ಕಳೆ ತಂದಿದ್ದರು. ಮೆರವಣಿಗೆಯುದ್ದಕ್ಕೂ ಕನ್ನಡದ ಘೋಷಣೆಗಳು ಮೊಳಗಿದವು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಲಿ: ಸರ್ವಾಧ್ಯಕ್ಷೆ ಲಲಿತಕ್ಕ ಅಭಿಮತ

0

ಲಕ್ಷ್ಮೇಶ್ವರ: ಕರ್ನಾಟಕ ನೆಲದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿರಬೇಕು ಎಂಬುದು ಕೇವಲ ಘೋಷವಾಕ್ಯವಲ್ಲ, ನಾಡಿನ ನಿಜಸ್ವರೂಪವಾಗಬೇಕು ಎಂದು ಲಕ್ಷ್ಮೇಶ್ವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಲಲಿತಕ್ಕ ಕೆರಿಮನಿ ಅಭಿಪ್ರಾಯಪಟ್ಟರು.

ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಕನ್ನಡವು ಕೇವಲ ಒಂದು ಭಾಷೆಯಲ್ಲ; ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಶಕ್ತಿ ಎಂದು ಹೇಳಿದರು.

ಪ್ರತಿಯೊಬ್ಬ ಕನ್ನಡಿಗನಲ್ಲೂ ಭಾಷೆಯ ಬಗ್ಗೆ ಅಭಿಮಾನ ಮತ್ತು ಸ್ವಾಭಿಮಾನ ಅಂತರ್ಗತವಾಗಿರಬೇಕು ಎಂದರು. ಪ್ರಾಂತೀಯ ಹೆಸರಿನಲ್ಲಿ ವಿಭಜನೆಯಾಗಿದ್ದ ನಾಡು ಹಾಗೂ ಕನ್ನಡಿಗರನ್ನು ಒಂದೇ ಸೂರಿನಡಿ ಸೇರಿಸಲು ಹೋರಾಡಿದ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ನಾಡು-ನುಡಿಯ ರಕ್ಷಣೆಗೆ ಎಲ್ಲರೂ ಬದ್ಧರಾಗಬೇಕು ಎಂದು ಕರೆ ನೀಡಿದರು.

ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು-ನುಡಿಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಗೌರವಾಭಿಮಾನ ಬೆಳೆಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಾಲಕರು, ಶಿಕ್ಷಕರು, ಕಸಾಪ ಹಾಗೂ ಕನ್ನಡ ಸಂಘಟನೆಗಳ ಜವಾಬ್ದಾರಿ ಹೆಚ್ಚಾಗಿದೆ ಎಂದರು.

“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಿಗವಾಗಿರು” ಎಂಬ ಕುವೆಂಪು ಅವರ ಕವಿವಾಣಿಯಂತೆ ಪ್ರತಿಯೊಬ್ಬ ಕನ್ನಡಿಗನ ಮನದಾಳದಲ್ಲಿ ಕನ್ನಡ ಮಿಡಿಯಬೇಕು. ಕನ್ನಡ ಪ್ರೀತಿಸುವುದು, ಬೆಳೆಸುವುದು ಮತ್ತು ಗೌರವಿಸುವುದೇ ನಿಜವಾದ ನಾಡಭಕ್ತಿ ಎಂದು ಅಭಿಪ್ರಾಯಪಟ್ಟರು.

ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳೆಸಲು ಶಾಲೆಗಳಲ್ಲಿ ಕಡ್ಡಾಯವಾಗಿ ಗ್ರಂಥಾಲಯಗಳನ್ನು ತೆರೆಯಬೇಕು. ಉತ್ತಮ ಪುಸ್ತಕಗಳ ಓದು ಮಕ್ಕಳ ಜ್ಞಾನವಿಕಾಸಕ್ಕೆ ಕಾರಣವಾಗುತ್ತದೆ. ಆಡಳಿತ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು. ಭಾಷೆಯನ್ನು ಉಳಿಸುವುದು ಎಂದರೆ ನಮ್ಮ ಗುರುತು, ಆತ್ಮಗೌರವ ಮತ್ತು ಭವಿಷ್ಯವನ್ನು ಉಳಿಸುವುದಾಗಿದೆ ಎಂದರು.

ಐತಿಹಾಸಿಕ ಹಿನ್ನೆಲೆಯ ಯಳವತ್ತಿ ಗ್ರಾಮದಲ್ಲಿ ನಡೆದ ಸಮ್ಮೇಳನಕ್ಕೆ ಮಹಿಳೆಗೆ ಸರ್ವಾಧ್ಯಕ್ಷ ಸ್ಥಾನ ನೀಡಿರುವುದು ಶ್ಲಾಘನೀಯ ಕಾರ್ಯ. ಈ ಗೌರವ ನೀಡಿದ ಯಳವತ್ತಿ ಮಹಾಜನತೆ ಹಾಗೂ ಕಸಾಪ ಘಟಕಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ಕನ್ನಡ ಸಾರಸ್ವತ ಲೋಕಕ್ಕೆ ಪುಲಿಗೆರೆ ಪ್ರದೇಶದ ಕೊಡುಗೆ ಅಪಾರವಾಗಿದೆ. ಸಾಹಿತ್ಯ ಚಟುವಟಿಕೆಗಳಿಗೆ ಪೂರಕ ವಾತಾವರಣವಿರುವ ತಾಲೂಕಿನಲ್ಲಿ ಕನ್ನಡ ಮನಸ್ಸುಗಳು ಒಂದಾಗಿ ತಾಯಿ ಭಾಷೆ, ನೆಲ-ಜಲ ಸಂರಕ್ಷಣೆ ಮತ್ತು ಬೆಳವಣಿಗೆಗಾಗಿ ಸಜ್ಜಾಗಬೇಕು. ಕನ್ನಡಿಗರ ಪ್ರತಿನಿಧಿಕ ಸಂಸ್ಥೆಯಾದ ಕಸಾಪ ಈ ದಿಸೆಯಲ್ಲಿ ಅವಿರತ ಶ್ರಮಿಸುತ್ತಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಮೆರೆಯಬೇಕು. ಕನ್ನಡಕ್ಕೆ ಆ ತಾಕತ್ತು ಮತ್ತು ಸಾಮರ್ಥ್ಯವಿದೆ.

ಲಲಿತಕ್ಕ ಕೆರಿಮನಿ, ಸರ್ವಾಧ್ಯಕ್ಷೆ,
ಕನ್ನಡ ಸಾಹಿತ್ಯ ಸಮ್ಮೇಳನ, ಯಳವತ್ತಿ.

ಕನ್ನಡ ಮಾಧ್ಯಮ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿ
ಅರ್ಹ ಶಿಕ್ಷಕರನ್ನು ನೇಮಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕು. ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಇರಬೇಕು. ಸಾಹಿತ್ಯ ಭವನ, ರಂಗಮಂದಿರ, ಕ್ರೀಡಾಂಗಣ, ಪ್ರವಾಸಿ ತಾಣಗಳ ಅಭಿವೃದ್ಧಿ, ನೀರಾವರಿ ಯೋಜನೆಗಳ ಜೊತೆಗೆ ಹಳ್ಳಿಯ ಸಂಸ್ಕೃತಿ ಉಳಿವಿಗಾಗಿ ಭಜನಾ ಮಂಡಳಿ ಹಾಗೂ ಕಲಾತಂಡಗಳಿಗೆ ಸರ್ಕಾರ ಧನಸಹಾಯ ನೀಡಿ ಪ್ರೋತ್ಸಾಹಿಸಬೇಕು ಎಂದು ಲಲಿತಕ್ಕ ಕೆರಿಮನಿ ಒತ್ತಾಯಿಸಿದರು.

ಲಕ್ಷ್ಮೇಶ್ವರದ ವಿದ್ಯಾರ್ಥಿನಿ ಚಂದನಾ ಕಳಸಾಪುರ ಭರತನಾಟ್ಯ ಪ್ರದರ್ಶನಕ್ಕೆ ಪ್ರಶಂಸೆ

0

ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ದಿ. ಯೂನಿಕ್ ಶಾಲೆಯ ವಿದ್ಯಾರ್ಥಿನಿ ಚಂದನಾ ಕಳಸಾಪುರ ಅವರು ಭರತನಾಟ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನಗೆದ್ದರು.

ಲಕ್ಕುಂಡಿಯಲ್ಲಿ ವಿಬಿಜಿ ರಾಮಜೀ ಜನಜಾಗೃತಿ ಪಾದಯಾತ್ರೆ

0

ಲಕ್ಕುಂಡಿ: ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮಜೀ ಕಾಯ್ದೆಯ ನಿಯಮದಂತೆ ರಾಜ್ಯ ಸರ್ಕಾರವು ಶೇ. 40ರಷ್ಟು ಪಾಲನ್ನು ಭರಿಸಬೇಕಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಯೋಜನೆ ಕುರಿತು ತಪ್ಪು ಭಾವನೆಗಳನ್ನು ಮೂಡಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಸಿ.ಸಿ. ಪಾಟೀಲ್ ಆರೋಪಿಸಿದರು.

ಇಲ್ಲಿನ ವಿರುಪಾಕ್ಷೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಲಕ್ಕುಂಡಿ ಬಿ.ಜೆ.ಪಿ. ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ವಿಬಿಜಿ ರಾಮಜೀ ಯೋಜನೆ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕಾಯ್ದೆಯನ್ನು ವಿರೋಧಿಸುವ ಉದ್ದೇಶದಿಂದಲೇ 11 ದಿನಗಳ ಅಧಿವೇಶನ ನಡೆಸಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರದ ಕಾಯ್ದೆಯನ್ನು ಬದಲಾಯಿಸಲು ಸಾಧ್ಯವಿಲ್ಲವೆಂಬುದು ಗೊತ್ತಿದ್ದರೂ ಅನಗತ್ಯವಾಗಿ ವಿರೋಧಿಸುವುದು ಹತಾಶೆ ಮನೋಭಾವನೆಯಾಗಿದೆ ಎಂದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರವು ಇದೇ ಯೋಜನೆಗೆ ಸುಮಾರು 20 ಬಾರಿ ಹೆಸರು ಬದಲಾಯಿಸಿದ್ದು ಜನರಿಗೆ ಇನ್ನೂ ನೆನಪಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಯೋಜನೆಗೆ ಅನುದಾನವನ್ನು ₹30 ಸಾವಿರ ಕೋಟಿಯಿಂದ ₹90 ಸಾವಿರ ಕೋಟಿಗೆ ಹೆಚ್ಚಿಸಿದೆ. ಭ್ರಷ್ಟಾಚಾರ ತಡೆಗಟ್ಟಲು ಕಾರ್ಮಿಕರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೆ, ಕೇಂದ್ರದ ಜನಪರ ಯೋಜನೆಗಳನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯ ಸರ್ಕಾರವು ₹8 ಲಕ್ಷ ಕೋಟಿ ಸಾಲದಲ್ಲಿದೆ ಎಂದರು.

ಬಿ.ಜೆ.ಪಿ. ಧುರೀಣ ವಸಂತ ಮೇಟಿ, ಮಾಜಿ ಯೋಧ ದತ್ತಣ್ಣ ಜೋಶಿ, ಅಧ್ಯಕ್ಷತೆ ವಹಿಸಿದ್ದ ಲಕ್ಕುಂಡಿ ಬಿ.ಜೆ.ಪಿ. ಮಂಡಲದ ಅಧ್ಯಕ್ಷ ಪ್ರಕಾಶ ಅರಹುಣಶಿ ಹಾಗೂ ಪ್ರಧಾನ ಕಾರ್ಯದರ್ಶಿ ಶರಣಪ್ಪ ಕುದರಿ ಮಾತನಾಡಿದರು.

ಅತ್ತಿಮಬ್ಬೆ ಮಹಾದ್ವಾರದಿಂದ ವಿರುಪಾಕ್ಷೇಶ್ವರ ದೇವಸ್ಥಾನವರೆಗೆ ಪಾದಯಾತ್ರೆ ನಡೆಸಲಾಯಿತು.

ಜಿ.ಪಂ. ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ಬಿ.ಜೆ.ಪಿ. ಯುವ ಧುರೀಣ ಉಮೇಶಗೌಡ ಪಾಟೀಲ, ಪ್ರದೀಪ ನವಲಗುಂದ, ಅಶೋಕ ಬೂದಿಹಾಳ, ತಾ.ಪಂ. ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಫಕ್ಕೀರಮ್ಮ ಬೇಲೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ. ಮಾಜಿ ಸದಸ್ಯ ಪ್ರಲ್ಹಾದ ಹೊಸಳ್ಳಿ ನಿರೂಪಿಸಿದರು. ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಮರಿಯಪ್ಪ ವಡ್ಡರ ವಂದಿಸಿದರು.

ಭಾರತ ಸೇನೆಯಲ್ಲಿ 2026 ಅಗ್ನಿವೀರ್ ನೇಮಕಾತಿ; ಆಸಕ್ತರು ಅರ್ಜಿ ಸಲ್ಲಿಸುವ ವಿಧಾನ ತಿಳಿಯಿರಿ!

0

ಭಾರತೀಯ ಸೇನೆಯು 2026ರ ಅಗ್ನಿವೀರ್ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ದೇಶಸೇವೆಗೆ ತೊಡಗಿಸಿಕೊಳ್ಳಲು ಆಸಕ್ತ ಯುವಕರು ಫೆಬ್ರವರಿ 13ರಿಂದ ಏಪ್ರಿಲ್ 1ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗಾಗಿ ಅಧಿಕೃತ ವೆಬ್‌ಸೈಟ್: joinindianarmy.nic.in

ಅರ್ಹತೆ:
ಅಗ್ನಿವೀರ್ ಜಿಡಿ (General Duty): 10ನೇ ತರಗತಿ, ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 33%, ಒಟ್ಟು 45%

ಅಗ್ನಿವೀರ್ ತಾಂತ್ರಿಕ: 12ನೇ ತರಗತಿ (ಭೌತಶಾಸ್ತ್ರ, ಗಣಿತ, ಇಂಗ್ಲಿಷ್) ಕನಿಷ್ಠ 50%

ಕ್ಲರ್ಕ್/ಸ್ಟೋರ್ ಕೀಪರ್: 12ನೇ ತರಗತಿ, ಇಂಗ್ಲಿಷ್ ಮತ್ತು ಗಣಿತ/ಅಕೌಂಟ್ಸ್ 50%, ಒಟ್ಟು 60%

ಟ್ರೆಡ್ಸ್‌ಮನ್: 8ನೇ ಅಥವಾ 10ನೇ ತರಗತಿ, ಪ್ರತಿಯೊಂದು ವಿಷಯದಲ್ಲಿ 33%

ಮಹಿಳಾ ಮಿಲಿಟರಿ ಪೊಲೀಸ್ (GD): 10ನೇ ತರಗತಿ, 45%

ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಸಹಾಯಕ: 12ನೇ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್) ಕನಿಷ್ಠ 50%

ಸಿಪಾಯಿ ಫಾರ್ಮಾ: ಡಿ ಫಾರ್ಮಾ (55%) ಅಥವಾ ಬಿ ಫಾರ್ಮಾ (50%), ಫಾರ್ಮಸಿ ಕೌನ್ಸಿಲ್ ನೋಂದಣಿ

ಜೆಸಿಒ ಧಾರ್ಮಿಕ ಶಿಕ್ಷಕ: ಸಂಬಂಧಿತ ಧರ್ಮದಲ್ಲಿ ಪದವಿ/ಡಿಪ್ಲೊಮಾ.

ವಯೋಮಿತಿ:
ಅಗ್ನಿವೀರ್ ಜಿಡಿ, ತಾಂತ್ರಿಕ,

ಟ್ರೆಡ್ಸ್‌ಮನ್: 17.5 – 22 ವರ್ಷ

ಸೋಲ್ಜರ್ ಟೆಕ್ನಿಕಲ್: ಗರಿಷ್ಠ 23 ವರ್ಷ

ಸಿಪಾಯಿ ಫಾರ್ಮಾ: 19 – 25 ವರ್ಷ

ಜೆಸಿಒ ಧಾರ್ಮಿಕ ಶಿಕ್ಷಕ: 25 – 34 ವರ್ಷ
(ವಯಸ್ಸು ಜುಲೈ 1, 2027ಕ್ಕೆ ಲೆಕ್ಕಿಸಲಾಗುವುದು)

ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) – ಜೂನ್ 1 ರಿಂದ 15

ದೈಹಿಕ ಸದೃಢತಾ ಪರೀಕ್ಷೆ
ದೈಹಿಕ ಅಳತೆ ಪರೀಕ್ಷೆ (ಕನಿಷ್ಠ ಎತ್ತರ: ಸಾಮಾನ್ಯ – 170 ಸೆಂ.ಮೀ, ಕ್ಲರ್ಕ್ – 162 ಸೆಂ.ಮೀ; ಎದೆ: 77 ಸೆಂ.ಮೀ + 5 ಸೆಂ.ಮೀ ವಿಸ್ತರಣೆ)

ವೈದ್ಯಕೀಯ ಪರೀಕ್ಷೆ:-

ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆ:
ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಿ.

ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣ: ತೆರೆವಿಗೆ ಯತ್ನಿಸಿದ ತಹಸೀಲ್ದಾರ್ ಮುಂದೆಯೇ ಹೈಡ್ರಾಮಾ; ಆತ್ಮಹತ್ಯೆ ಯತ್ನ?

0

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲ್ಲೂಕಿನ ಗಿಡಗಾನಹಳ್ಳಿ ನಿವಾಸಿ ರಾಧಾಕೃಷ್ಣ ಸ್ವಂತ ಜಮೀನಿನ ಪಕ್ಕದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಲು ಯತ್ನಿಸುತ್ತಿದ್ದಾಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ರಾಧಾಕೃಷ್ಣ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಗ್ರಾಮಪಂಚಾಯ್ತಿಯಲ್ಲಿ ನೌಕರಿ ಮಾಡುತ್ತಾರೆ. ಸ್ಥಳೀಯ ತಹಶೀಲ್ದಾರ್ ಪೂರ್ಣಿಮಾ ಮನೆ ನಿರ್ಮಾಣ ಹಂತವನ್ನು ತಡೆಯಲು ಮುಂದಾದಾಗ, ರಾಧಾಕೃಷ್ಣ ತಹಶೀಲ್ದಾರ್ ವಿರುದ್ಧ ಡೆತ್‍ನೋಟ್ ಬರೆದಿದ್ದು, ಔಷಧಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸ್ಥಳೀಯ ಗೌಡಗೆರೆ ಗ್ರಾಮಪಂಚಾಯ್ತಿ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ, ಕಂದಾಯ ಜಮೀನಿಗೆ ಕಟ್ಟಡ ಪರವಾನಿಗೆ ನೀಡಿದ ವಿಷಯ ಚರ್ಚೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತನಿಖೆಗೆ ಸೂಚಿಸಿದ್ದಾರೆ.

ಗ್ರಾಮಸ್ಥರು, “ತಮ್ಮ ಸ್ವಂತ ಜಮೀನು ಹೊರತುಪಡಿಸಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಲು ಯತ್ನಿಸಿದ್ದೇ ತಪ್ಪು, ಆದರೆ ಆತ್ಮಹತ್ಯೆ ಪ್ರಯತ್ನ ಮಾಡುವುದು ಸರಿಯಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನ್ನದಾತರ ಗಮನಕ್ಕೆ; ಕರ್ನಾಟಕದ 22,000ಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ!

0

ಬೆಂಗಳೂರು: ಕರ್ನಾಟಕದ ರೈತರಿಗೆ ಪಿಎಂ-ಕಿಸಾನ್ ಯೋಜನೆಯ ಬಾಕಿ ಹಣ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಂಡಿದೆ.

ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ 2025ರ ಡಿಸೆಂಬರ್ 17 ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ತಾಂತ್ರಿಕ ಕಾರಣಗಳಿಂದ ಸುಮಾರು 30,000 ರೈತರು ಯೋಜನೆಯ ಲಾಭದಿಂದ ವಂಚಿತರಾಗಿರುವುದನ್ನು ಗಮನಕ್ಕೆ ತಂದಿದ್ದರು. ಕಳೆದ ವಾರ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಸಹ ಅವರು ಈ ವಿಷಯವನ್ನು ಉಲ್ಲೇಖಿಸಿ ಮನವಿ ಮಾಡಿದ್ದರು.

ಕೇಂದ್ರ ಸಚಿವ ಚೌಹಾಣ್, ರಾಜ್ಯ ಸರ್ಕಾರ ನೀಡಿದ ದೃಢೀಕರಣದ ಆಧಾರದ ಮೇಲೆ ಈಗಾಗಲೇ 22,000ಕ್ಕೂ ಹೆಚ್ಚು ಫಲಾನುಭವಿಗಳನ್ನು 22ನೇ ಕಂತಿನ ಪಾವತಿ ಪಟ್ಟಿಯಲ್ಲಿ ಸೇರಿಸಿದ್ದಾಗಿ ತಿಳಿಸಿದ್ದಾರೆ ಮತ್ತು ಶೀಘ್ರದಲ್ಲೇ ಅವರಿಗೆ ಹಣ ಬಿಡುಗಡೆ ಆಗಲಿದೆ ಎಂದು ಖಚಿತಪಡಿಸಿದ್ದಾರೆ. ಉಳಿದ ಪ್ರಕರಣಗಳನ್ನು ರಾಜ್ಯ ಅಧಿಕಾರಿಗಳು ಪರಿಶೀಲಿಸಿ ದೃಢೀಕರಿಸಿದ ತಕ್ಷಣ ಉಳಿದ ರೈತರನ್ನೂ ಯೋಜನೆಯಲ್ಲಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಎನ್. ಚಲುವರಾಯಸ್ವಾಮಿ, ರೈತರಿಗೆ ನ್ಯಾಯ ಒದಗಿಸಿದ ಕೇಂದ್ರ ಕೃಷಿ ಸಚಿವರಿಗೆ ರಾಜ್ಯ ಸರ್ಕಾರದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಕೇಂದ್ರದ ಈ ಕ್ರಮದಿಂದ ಅರ್ಹ ರೈತರಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ಸಿಗಲಿದೆ, ಮತ್ತು ಉಳಿದ ದಾಖಲೆಗಳ ಪರಿಶೀಲನೆ ಶೀಘ್ರವಾಗಿ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

error: Content is protected !!