ರಾಜ್ಯದ ಯುವ ಸಮುದಾಯದ ಆರ್ಥಿಕ ಭದ್ರತೆ ಹಾಗೂ ಉದ್ಯೋಗ ಅನ್ವೇಷಣೆಯ ಅವಧಿಯಲ್ಲಿ ಸಹಾಯ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಪ್ರಮುಖ ಯೋಜನೆಯಾಗಿದೆ. ಪದವಿ ಹಾಗೂ ಡಿಪ್ಲೋಮಾ ಪೂರೈಸಿದ ಯುವಕರಿಗೆ ಉದ್ಯೋಗ ದೊರಕುವವರೆಗೂ ಆರ್ಥಿಕ ನೆರವು ನೀಡುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಹಾಗೂ ಸ್ವಾವಲಂಬಿ ಜೀವನಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಯೋಜನೆಯ ಮೂಲ ಆಶಯವಾಗಿದೆ.
ಶಿಕ್ಷಣ ಪೂರ್ಣಗೊಳಿಸಿದ ಅನೇಕ ಯುವಕರು ಉದ್ಯೋಗ ಹುಡುಕುವ ಅವಧಿಯಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾರೆ. ಈ ಸಮಸ್ಯೆಯನ್ನು ಮನಗಂಡ ಸರ್ಕಾರ, ಯುವಕರಿಗೆ ಮಧ್ಯಂತರ ಆರ್ಥಿಕ ನೆರವು ಒದಗಿಸಿ, ಉದ್ಯೋಗ ಹುಡುಕುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಯುವನಿಧಿ ಯೋಜನೆಯನ್ನು ರೂಪಿಸಿದೆ. ಉದ್ಯೋಗ ಸಿಗುವವರೆಗೂ ಯುವಕರಿಗೆ ಕನಿಷ್ಠ ಆರ್ಥಿಕ ಭದ್ರತೆ ಒದಗಿಸುವ ಮೂಲಕ ಅವರು ಕೌಶಲ್ಯಾಭಿವೃದ್ಧಿ, ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯತ್ತ ಗಮನ ಹರಿಸಲು ನೆರವಾಗುವುದು ಯೋಜನೆಯ ಉದ್ದೇಶ.
ಯುವನಿಧಿ ಯೋಜನೆಯಡಿ ಅರ್ಹ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಶಿಕ್ಷಣ ಪೂರ್ಣಗೊಂಡು 6 ತಿಂಗಳಾದರೂ ಉದ್ಯೋಗ ದೊರಕದ ಯುವಕರಿಗೆ ಈ ನೆರವು ಲಭ್ಯವಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಇರುವುದರಿಂದ ಪಾರದರ್ಶಕತೆ ಕಾಪಾಡಲಾಗಿದೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ರಾಜ್ಯದ ನಿವಾಸಿಯಾಗಿರಬೇಕು. ಪದವಿ ಅಥವಾ ಡಿಪ್ಲೋಮಾ ಶಿಕ್ಷಣವನ್ನು ರಾಜ್ಯದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು. ನಿರುದ್ಯೋಗಿಯಾಗಿ ನೋಂದಾಯಿಸಿಕೊಂಡಿರುವ ಯುವಕರು ಆನ್ಲೈನ್ ಮೂಲಕ ಸೇವಾ ಕೇಂದ್ರಗಳು ಅಥವಾ ಸರ್ಕಾರದ ಪೋರ್ಟಲ್ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು.
ಯುವನಿಧಿ ಕೇವಲ ಆರ್ಥಿಕ ನೆರವಲ್ಲ; ಇದು ಯುವಕರಿಗೆ ಮಾನಸಿಕ ಧೈರ್ಯ ನೀಡುವ ಯೋಜನೆಯಾಗಿದೆ. ಕುಟುಂಬದ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡುವುದರ ಜೊತೆಗೆ, ಯುವಕರು ತಮ್ಮ ವೃತ್ತಿಜೀವನದ ಗುರಿ ಸಾಧನೆಗೆ ಹೆಚ್ಚಿನ ಗಮನ ಹರಿಸಲು ಸಹಕಾರಿ ಆಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಇದು ಪ್ರೇರಣೆ ನೀಡುತ್ತಿದೆ.
ಯೋಜನೆ ಜಾರಿಗೆ ಬಂದ ಬಳಿಕ ಯುವ ಸಮುದಾಯದಲ್ಲಿ ಆಶಾವಾದ ಮೂಡಿದೆ. ನಿರುದ್ಯೋಗದಿಂದ ಉಂಟಾಗುವ ನಿರಾಶೆ ಮತ್ತು ಆತಂಕವನ್ನು ಕಡಿಮೆ ಮಾಡುವಲ್ಲಿ ಯುವನಿಧಿ ಮಹತ್ವದ ಪಾತ್ರ ವಹಿಸುತ್ತಿದೆ. ಶಿಕ್ಷಣ ಪಡೆದ ಯುವಕರು ಉದ್ಯೋಗದತ್ತ ಕೇಂದ್ರೀಕರಿಸುವ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಇದು ಪೂರಕವಾಗಿದೆ.
ಸರಿಯಾದ ರೀತಿಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಂಡರೆ ಯುವಕರು ತಮ್ಮ ಭವಿಷ್ಯವನ್ನು ಭದ್ರಗೊಳಿಸಿಕೊಳ್ಳಲು ಇದು ಪರಿಣಾಮಕಾರಿ ಸಾಧನವಾಗಬಹುದು. ಯೋಜನೆಯ ಬಗ್ಗೆ ಜಾಗೃತಿ ಹೆಚ್ಚಿಸಿ, ಅರ್ಹ ಯುವಕರಿಗೆ ತಲುಪುವಂತೆ ಮಾಡುವಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ.
ಯುವಕರಿಗೆ ಶಿಕ್ಷಣದ ಬಳಿಕದ ನಿರುದ್ಯೋಗ ಅವಧಿ ಅತ್ಯಂತ ಸೂಕ್ಷ್ಮ ಹಂತ. ಈ ಸಮಯದಲ್ಲಿ ಆರ್ಥಿಕ ಬೆಂಬಲ ನೀಡುವ ಮೂಲಕ ಅವರ ಆತ್ಮವಿಶ್ವಾಸ ಉಳಿಸುವುದು ಸರ್ಕಾರದ ಜವಾಬ್ದಾರಿ. ಯುವನಿಧಿ ಯೋಜನೆ ಯುವಕರಿಗೆ ಕೇವಲ ಹಣಕಾಸು ನೆರವಲ್ಲ, ಅವರ ಕನಸುಗಳನ್ನು ಸಾಕಾರಗೊಳಿಸುವ ಭರವಸೆಯಾಗಿದೆ.
-ಎಚ್.ಕೆ. ಪಾಟೀಲ.
ಗದಗ ಜಿಲ್ಲಾ ಉಸ್ತುವಾರಿ ಸಚಿವರು.
ಬಾಕ್ಸ್:
ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅಡಿಯಲ್ಲಿ ಜನವರಿ-2024ರಿಂದ ಸೆಪ್ಟೆಂಬರ್ 2025ರವರೆಗೆ 6356 ಅರ್ಜಿ ಸ್ವೀಕೃತವಾಗಿದೆ. ಅದರಲ್ಲಿ 4048 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ 15.30 ಕೋಟಿ ರೂ. ವರ್ಗಾವಣೆಯಾಗಿದೆ. ಆ ಪೈಕಿ ತಾಲೂಕುವಾರು ಡಿಬಿಟಿ ಮೂಲಕ ವರ್ಗಾವಣೆಗೊಂಡ ಫಲಾನುಭವಿಗಳ ವಿವರ: ಗದಗ-1432, ಗಜೇಂದ್ರಗಡ-432, ಲಕ್ಷೆ್ಮೀಶ್ವರ-373, ಮುಂಡರಗಿ-485, ನರಗುಂದ-372, ರೋಣ-612, ಶಿರಹಟ್ಟಿ-342. ಡಿಬಿಟಿ ಮೂಲಕ ಬಾಕಿ ಉಳಿದಿರುವ 2308 ಅಭ್ಯರ್ಥಿಗಳು ಯುವನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ.