Home Blog

ಮೈಸೂರು | ಪೆಟ್ರೋಲ್ ಬಂಕ್‌ಗೆ ನುಗ್ಗಿ ಐವರಿಂದ ದರೋಡೆ: ₹15,300 ಲೂಟಿ- ವಿಡಿಯೋ ವೈರಲ್

0

ಮೈಸೂರು: ಹುಣಸೂರು ತಾಲ್ಲೂಕಿನ ಬಿಳಿಕೆರೆ ಬಳಿಯ ಸ್ವಾಮಿ ಸರ್ವಿಸ್ ಸ್ಟೇಷನ್ದಲ್ಲಿ ಭೀಕರ ದರೋಡೆ ನಡೆದಿದೆ. ಫೆಬ್ರವರಿ 12ರ ರಾತ್ರಿ 10:30 ಗಂಟೆ ಸುಮಾರಿಗೆ ಐವರಿಂದ ಕೂಡಿದ ಗ್ಯಾಂಗ್ ಸಿಬ್ಬಂದಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ₹15,300 ರೂಪಾಯಿ ಲೂಟಿ ಮಾಡಿದ್ದಾರೆ.

ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದ್ದು, ಗ್ಯಾಂಗ್ ಸದಸ್ಯರು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದು ಮೊದಲಿಗೆ ಪೆಟ್ರೋಲ್ ಹಾಕಿಸಿಕೊಂಡು ತೋರಣ ಮಾಡಿದ ಬಳಿಕ ಕಚೇರಿಯೊಳಗೆ ಪ್ರವೇಶಿಸಿ ಹಣ ಕಸಿದುಕೊಂಡು ತಲೆಗೆ ಹೊಗಿದ್ದಾರೆ.

ಬಿಳಿಕೆರೆ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು, ಗ್ಯಾಂಗ್ ಸದಸ್ಯರನ್ನು ಹಿಡಿಯಲು ತಕ್ಷಣದ ತನಿಖೆ ನಡೆಸುತ್ತಿದೆ. ಪೊಲೀಸರು ಸಾರ್ವಜನಿಕರಿಂದ ಮಾಹಿತಿಯನ್ನು ವಿನಂತಿಸುತ್ತಿದ್ದಾರೆ.

ಸ್ವಾಮೀಜಿಗೂ ಸಿಕ್ತು ಸರ್ಕಾರದಲ್ಲಿ ಪ್ರಮೋಷನ್..! ಸರ್ಕಾರಿ ಅಧಿಕಾರಿಗಳ ಮಹಾ ಎಡವಟ್ಟು

0

ಮಂಡ್ಯ: ಸ್ವಯಂ ನಿವೃತ್ತಿ ಪಡೆದು ಆಧ್ಯಾತ್ಮದ ಹಾದಿ ಹಿಡಿದು ಪೀಠಾಧಿಪತಿಯಾಗಿರುವ ಸ್ವಾಮೀಜಿಯೊಬ್ಬರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿರುವ ಕುರಿತು ವಿವಾದ ವ್ಯಕ್ತವಾಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಬಡ್ತಿ ನೀಡಿರುವ ಈ ಪಟ್ಟಿಯಲ್ಲಿ ಅಚ್ಚರಿಯ ಸಂಗತಿಯಾಗಿ, ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್. ನಾಗರಾಜ ಅವರ ಹೆಸರೂ ಸೇರಿದೆ ಎಂಬ ಆರೋಪ ಕೇಳಿಬಂದಿದೆ.

ಹೆಚ್.ಎಲ್. ನಾಗರಾಜ ಅವರು ಈ ಹಿಂದೆ ಕೆಎಎಸ್ ಅಧಿಕಾರಿಯಾಗಿ ಮಂಡ್ಯ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಗೂ ಮುನ್ನವೇ ಅವರು ಸರ್ಕಾರಿ ಸೇವೆಯನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಸದ್ಯ ಅವರು ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿನಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.

ಆದರೆ ಸರ್ಕಾರದ ಆದೇಶದಲ್ಲಿ ಅವರನ್ನು ‘ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿ’ ಎಂದು ಉಲ್ಲೇಖಿಸಿರುವುದು ಆಡಳಿತಾತ್ಮಕ ಗೊಂದಲಕ್ಕೆ ಕಾರಣವಾಗಿದೆ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.

ತಡೆಗೋಡೆಗೆ ಕ್ರೂಸರ್ ವಾಹನ ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು! ಐವರು ಗಂಭೀರ

0

ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಜಡಚರ್ಲಾ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ರಾಮರೆಡ್ಡಿ (52), ಅವರ ಪತ್ನಿ ಮೇಘಾ (50) ಮತ್ತು ವಿಜಯಪುರ ಮೂಲದ ಮಹದೇವಪ್ಪ (65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಯಾದಗಿರಿ ಜಿಲ್ಲೆಯ ಶಾಹಪುರ ತಾಲೂಕಿನ ಗೋಗಿ ಗ್ರಾಮ ನಿವಾಸಿಗಳಾಗಿದ್ದಾರೆ.

ಕುಟುಂಬವು ನಿನ್ನೆ (ಶುಕ್ರವಾರ) ಯಾದಗಿರಿ ನಗರದಲ್ಲಿ ಮೊಮ್ಮಗನ ಜವಳ ಮುಗಿಸಿಕೊಂಡು ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಕ್ರೂಸರ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ತಡೆಗೋಡೆಗೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ತಿಳಿದು ಬಂದಿದೆ. ಕಾರು ಚಲಿಸುತ್ತಿದ್ದ ವೇಳೆ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕೊರಿಯನ್ ಆನ್ ಲೈನ್ ಗೇಮ್ʼಗೆ ಅಡಿಕ್ಟ್: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!

0

ಧಾರವಾಡ: ಕೊರಿಯನ್ ಆನ್ಲೈನ್ ಗೇಮ್ಗೆ ಅಡಿಕ್ಟ್ ಆಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್ ಪ್ರದೇಶದಲ್ಲಿ ನಡೆದಿದೆ.

ಮೃತ ಯುವಕನನ್ನು ವಿಕಾಸ್ (20) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಪೊಲೀಸರು ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಅವನು ಕೊರಿಯನ್ ಗೇಮ್ಗಳಿಗೆ ಹೆಚ್ಚು ಸಮಯ ಮೀಸಲಿಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.

ಪಿಯುಸಿ ಸೈನ್ಸ್ ಮುಗಿಸಿ ಮನೆಯಲ್ಲೇ ಇದ್ದ ವಿಕಾಸ್, ಯಾರಿಗೂ ತಿಳಿಯದಂತೆ ನಿರಂತರವಾಗಿ ಗೇಮ್ ಆಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆತ್ಮಹತ್ಯೆಗೆ ಮುನ್ನನನ್ನ ಸಾವಿಗೆ ನಾನೇ ಕಾರಣಎಂದು ಸ್ವತಃ ಮೆಸೇಜ್ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕುರಿತು ಧಾರವಾಡ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನಾಪತ್ತೆ!

0

ನವದೆಹಲಿ: ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬರು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಕಾಣೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಈ ಕುರಿತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸ ಕಚೇರಿ ಕಳವಳ ವ್ಯಕ್ತಪಡಿಸಿದೆ.

22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಫೆಬ್ರವರಿ 10ರಂದು ಕ್ಯಾಲಿಫೋರ್ನಿಯಾದ ಬರ್ಕ್ಲೇ ನಗರದ ಡ್ವೈಟ್ ವೇ ಪ್ರದೇಶದಲ್ಲಿ ಕೊನೆಯಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಅವರನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ.

ಸಾಕೇತ್ ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾನಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದರು. ಅವರು ರಾಸಾಯನಿಕ ಅಭಿಯಾಂತ್ರಿಕೆಯಲ್ಲಿ ಪದವಿ ಪಡೆದಿದ್ದು, ಚೆನ್ನೈನ ಮದ್ರಾಸ್ ಐಐಟಿಯಲ್ಲಿ ಬಿ.ಟೆಕ್ ಮಾಡಿದ್ದರು.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ರಾಯಭಾರಿ ಕಚೇರಿ ಸಾಕೇತ್ ಅವರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಅವರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ಸಾಕೇತ್ ಸುಮಾರು 6 ಅಡಿ 1 ಇಂಚು ಎತ್ತರ ಹೊಂದಿದ್ದು, ಕಪ್ಪು ಕೂದಲು ಹಾಗೂ ಕಂದು ಬಣ್ಣದ ಕಣ್ಣುಗಳನ್ನು ಹೊಂದಿದ್ದಾರೆ. ಅವರು ಅಪಾಯದ ಸ್ಥಿತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಅವರ ಬಗ್ಗೆ ಯಾವುದೇ ಮಾಹಿತಿ ದೊರೆತರೆ ತಕ್ಷಣ ಸ್ಥಳೀಯ ಪೊಲೀಸರನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಕರ್ನಾಟಕ ಮೂಲದವರಾದ ಸಾಕೇತ್ ಅವರ ಕುಟುಂಬದವರು ಮಗನ ನಾಪತ್ತೆ ಸುದ್ದಿಯಿಂದ ಕಂಗಾಲಾಗಿದ್ದಾರೆ. ಭಾರತ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಗನನ್ನು ಹುಡುಕಿಕೊಡಲು ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗದಗ: ಸಮರ್ಪಕ ಬಸ್ʼಗಳಿಲ್ಲದೆ ಪ್ರಯಾಣಿಕರ ಪರದಾಟ!

0

ಗದಗ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ತೀವ್ರ ಪರದಾಟ ಅನುಭವಿಸಿದರು. ಭಾನುವಾರ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ತೆರಳಲು ಭಕ್ತರು ಬೆಳಗ್ಗಿನಿಂದಲೇ ಬಸ್ ನಿಲ್ದಾಣಕ್ಕೆ ಆಗಮಿಸಿದರೂ, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶೇಷವಾಗಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಇಟಗಿ ಭೀಮಾಂಬಿಕೆ ದೇವಸ್ಥಾನಗಳಿಗೆ ತೆರಳುವ ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದು, ಬಸ್ ಸಿಗದೆ ಆತಂಕ ವ್ಯಕ್ತಪಡಿಸಿದರು.

ದೂರದ ಊರುಗಳಿಗೆ ತೆರಳಲು ಬೆಳಗ್ಗೆ 7 ಗಂಟೆಗೆ ಬಂದ ಪ್ರಯಾಣಿಕರು, ಬೆಳಗ್ಗೆ 9.30 ಆದರೂ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಬೇಕಾಗಿದ್ದರೆ, ಬಸ್‌ಗಳ ಕೊರತೆ ಜನರಿಗೆ ತೊಂದರೆ ತಂದಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಹಾವೇರಿ ಜಿಲ್ಲೆಯಲ್ಲಿ ಇಂದು ನಡೆಯಲಿರುವ ಸರ್ಕಾರಿ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ ಸುಮಾರು 250 ಬಸ್‌ಗಳನ್ನು ಕಳುಹಿಸಿರುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಬಸ್‌ಗಳ ಕೊರತೆ ಉಂಟಾಗಿದೆ. ಇದರ ಪರಿಣಾಮವಾಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿ, ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಸರ್ಕಾರ ಯಾವುದೇ ಕಾರ್ಯಕ್ರಮ ನಡೆಸಿದರೂ ಜನರಿಗೆ ತೊಂದರೆ ಆಗಬಾರದು. ಆದರೆ ಸರ್ಕಾರದ ನಿರ್ಧಾರಗಳಿಂದಲೇ ಸಾರ್ವಜನಿಕರಿಗೆ ತೊಂದರೆ ಉಂಟಾದರೆ ಹೇಗೆ ಎಂಬ ಪ್ರಶ್ನೆ ಜನರಿಂದ ಕೇಳಿ ಬರುತ್ತಿದೆ.

ಭಾರತ–ಪಾಕಿಸ್ತಾನ ಟಿ20 ವಿಶ್ವಕಪ್ 2026 ಪಂದ್ಯಕ್ಕೆ ಮಳೆ ಅಡ್ಡಿ? ಮ್ಯಾಚ್ ನಡೆಯುವುದು ಅನುಮಾನ

0

ಕೊಲಂಬೊ: ICC Men’s T20 World Cup ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಫೆಬ್ರವರಿ 15ರಂದು ಭಾನುವಾರ ಕೊಲಂಬೊದಲ್ಲಿ ನಡೆಯಲಿದೆ. ಇದು ಉಭಯ ತಂಡಗಳ ಮೂರನೇ ಪಂದ್ಯವಾಗಿದ್ದು, ಎರಡೂ ತಂಡಗಳು ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದಿವೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಕ್ರಿಕೆಟ್ ಲೋಕದಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿ ಎಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೆ ಶ್ರೀಲಂಕಾ ಹವಾಮಾನ ಇಲಾಖೆಯ ವರದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಮಳೆಯ ಎಚ್ಚರಿಕೆ

ಫೆಬ್ರವರಿ 15 ಮತ್ತು 16ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆ ಎಚ್ಚರಿಸಿದೆ. ಪಂದ್ಯದ ದಿನದಂದು ಸುಮಾರು ನಾಲ್ಕು ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಶೇಕಡಾ 26ರಷ್ಟು ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ. ಹೀಗಾಗಿ ಪಂದ್ಯ ವಿಳಂಬವಾಗುವ ಅಥವಾ ರದ್ದಾಗುವ ಸಾಧ್ಯತೆ ನಿರಾಕರಿಸಲಾಗುವುದಿಲ್ಲ.

ಪಿಚ್ ವರದಿ: 

ಕೊಲಂಬೊ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ನೆರವಾಗುತ್ತದೆ. ಭಾರತ ತಂಡ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿದ್ದರೂ, ಈ ಪಿಚ್ ಸ್ಪಿನ್ ದಾಳಿಗೆ ಅನುಕೂಲಕರವಾಗಿರುವುದರಿಂದ ಪಾಕಿಸ್ತಾನದ ಸ್ಪಿನ್ ದಾಳಿ ಸವಾಲಾಗಬಹುದು. ಹೀಗಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಇದು ಪರೀಕ್ಷೆಯಾಗಿ ಪರಿಣಮಿಸಲಿದೆ.

ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವುದರಿಂದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಪರಿಣಾಮವೂ ಕಾಣಿಸಿಕೊಳ್ಳಬಹುದು.

ಭಾರತ ಮತ್ತು ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಎಂಟು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ ಒಂದು ಪಂದ್ಯದಲ್ಲಿ ಗೆದ್ದಿದೆ. ಮುಖಾಮುಖಿ ದಾಖಲೆಯು ಭಾರತದ ಪರವಾಗಿದ್ದರೂ, ಪಾಕಿಸ್ತಾನವನ್ನು ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ.

ಶ್ರೀಲಂಕಾದಲ್ಲಿ ಹಿಂದೆಯೂ ಭಾರತ ಕೆಲವು ಸವಾಲುಗಳನ್ನು ಎದುರಿಸಿದ್ದ ಹಿನ್ನೆಲೆ, ಈ ಪಂದ್ಯದಲ್ಲಿ ತಂತ್ರಬದ್ಧ ಆಟ ಅಗತ್ಯವಾಗಿದೆ. ಮಳೆ ಅಡ್ಡಿಯಾಗದೆ ಪಂದ್ಯ ನಡೆಯುವುದೇ ಎಂಬುದನ್ನು ಕಾದು ನೋಡಬೇಕಿದೆ.

ಇಂಡಿಯನ್ ಬ್ಯಾಂಕ್‌ನಲ್ಲಿಟ್ಟಿದ್ದ 4 ಕೋಟಿ ಮೌಲ್ಯದ 2,783 ಗ್ರಾಂ ಚಿನ್ನ ನಾಪತ್ತೆ: ಅಸಿಸ್ಟೆಂಟ್ ಮ್ಯಾನೇಜರ್ ಕಳ್ಳತನ ಬಯಲು!

0

ಬೆಂಗಳೂರು: ಗಿರಿನಗರದ ಇಂಡಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಭಾರೀ ಚಿನ್ನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್ ಮೇಲೆಯೇ ಕಳ್ಳತನದ ಆರೋಪ ಕೇಳಿ ಬಂದಿದ್ದು, ಸುಮಾರು 4 ಕೋಟಿ ರೂ. ಮೌಲ್ಯದ 2,783 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಬ್ಯಾಂಕ್ ಲಾಕರ್ ಕೀ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಬಳಿ ಇದ್ದ ಕಾರಣ, ಮ್ಯಾನೇಜರ್ ಅನುಪಸ್ಥಿತಿಯಲ್ಲಿ ಸ್ವಲ್ಪಸ್ವಲ್ಪವಾಗಿ ಚಿನ್ನ ಕದಿಯಲಾಗಿತ್ತು ಎಂದು ಹೇಳಲಾಗಿದೆ. ಜನವರಿ 2ರಂದು ಗ್ರಾಹಕರು ತಮ್ಮ ಅಡವಿಟ್ಟ ಚಿನ್ನ ಪಡೆಯಲು ಬಂದಾಗ ಲಾಕರ್ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಒಟ್ಟು 21 ಪ್ಯಾಕೇಟ್‌ಗಳಲ್ಲಿ ಕೆಲವು ಚಿನ್ನಾಭರಣ ಹಾಗೂ 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನ ಕಾಣೆಯಾಗಿರುವುದು ಪತ್ತೆಯಾಗಿದೆ. ಆಂತರಿಕ ವಿಚಾರಣೆಯಲ್ಲಿ ಕಿರಣ್ ಕುಮಾರ್ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕದ್ದ ಚಿನ್ನವನ್ನು ಬೇರೆ ಬೇರೆ ಅಂಗಡಿಗಳಲ್ಲಿ ಗಿರವಿ ಇಟ್ಟು ಪಡೆದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದಲ್ಲಿ ಬಳಸಿದ್ದಾನೆ ಎನ್ನಲಾಗಿದೆ. ಪ್ರಕರಣ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈಗಾಗಲೇ 700 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಉಳಿದ ಚಿನ್ನ ಪತ್ತೆ ಮತ್ತು ಹೆಚ್ಚಿನ ತನಿಖೆ ಮುಂದುವರಿದಿದೆ.

ವಿಷ್ಣುವರ್ಧನ್‌ಗೆ ಪುಂಡರಿಂದ ಅಪಮಾನ: ವಿದ್ಯಾರ್ಥಿಗಳ ತಪ್ಪಿಗೆ ಕ್ಷಮೆ ಕೇಳಿದ ಪೋಷಕರು

ರಾಜಧಾನಿ ಬೆಂಗಳೂರಿನಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಗೌರವಕ್ಕೆ ಧಕ್ಕೆಯಾದ ಘಟನೆ ನಡೆದಿದೆ. ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ವಿಷ್ಣು ದಾದ ಬ್ಯಾನರ್ ಮುಂದೆ ಅವಹೇಳನಕಾರಿ ಸನ್ನೆಗಳು ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.

ಘಟನೆ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಕೋಪ ಉಕ್ಕಿ ಬಂದಿದೆ. ಕನ್ನಡಿಗರ ಹೆಮ್ಮೆಯ ನಟರ ಘನತೆಯನ್ನು ಅರಿಯದೇ ಇಂತಹ ಕೃತ್ಯ ಎಸಗಿರುವುದು ದುಃಖಕರ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಬೆಂಗಳೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ವಿದ್ಯಾರ್ಥಿಗಳನ್ನು ಗುರುತಿಸಿ ಠಾಣೆಗೆ ಕರೆತಂದಿದ್ದಾರೆ. ಅಪ್ರಾಪ್ತರಾಗಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಬದಲು ಎಚ್ಚರಿಕೆ ನೀಡಲಾಗಿದ್ದು, ತಪ್ಪೊಪ್ಪಿಗೆ ಪತ್ರ ಬರೆಯಿಸಿಕೊಂಡು ಬಿಡಲಾಗಿದೆ.

ಈ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಕಲಾವಿದರ ಗೌರವ ಮತ್ತು ಯುವಕರ ಜವಾಬ್ದಾರಿತನದ ಕುರಿತು ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.

ನೆದರ್ಲೆಂಡ್ಸ್ ವಿರುದ್ಧ 93 ರನ್‌ಗಳ ಭರ್ಜರಿ ಗೆಲುವು; ಹೊಸ ವಿಶ್ವ ದಾಖಲೆ ಬರೆದ ಅಮೆರಿಕ!

0

ಟಿ20 ವಿಶ್ವಕಪ್ 2026ರಲ್ಲಿ ಅಮೆರಿಕ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್‌ ತಂಡವು ಅಮೆರಿಕವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ ಪರ ಸಾಯಿ ತೇಜ 79 ರನ್‌ಗಳ ಭರ್ಜರಿ ಇನಿಂಗ್ಸ್‌ ಆಡಿದ್ದು, ತಂಡವು 20 ಓವರ್‌ಗಳಲ್ಲಿ 196 ರನ್‌ಗಳ ಬಲಿಷ್ಠ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್‌ 15.5 ಓವರ್‌ಗಳಲ್ಲಿ ಕೇವಲ 103 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಅಮೆರಿಕ 93 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಈ ಜಯದೊಂದಿಗೆ ಅಮೆರಿಕ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ರನ್‌ಗಳ ಅಂತರದಿಂದ ಗೆದ್ದ ಅಸೋಸಿಯೇಟ್ ರಾಷ್ಟ್ರ ಎಂಬ ವಿಶ್ವ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಈ ದಾಖಲೆ ನೇಪಾಳ ತಂಡದ ಹೆಸರಿನಲ್ಲಿ ಇತ್ತು. 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೇಪಾಳವು ಹಾಂಗ್ ಕಾಂಗ್ ವಿರುದ್ಧ 80 ರನ್‌ಗಳ ಜಯ ಸಾಧಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು. ಇದೀಗ ನೆದರ್ಲೆಂಡ್ಸ್ ವಿರುದ್ಧ 93 ರನ್‌ಗಳ ಅಂತರದಿಂದ ಗೆದ್ದು ಅಮೆರಿಕ ತಂಡ ಹೊಸ ಇತಿಹಾಸ ರಚಿಸಿದೆ.

error: Content is protected !!