ಗದಗ: ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ನಡೆದ ಲೋಕಾಯುಕ್ತ ಟ್ರ್ಯಾಪ್ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ತನಿಖಾ ಹಂತದಲ್ಲಿ ಹೊರಬರುತ್ತಿರುವ ಪ್ರತಿಯೊಂದು ಅಂಶವೂ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ.
ಜುಲೈ ತಿಂಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ ಮಂಜೂರಾಗಿದ್ದು, ಗುತ್ತಿಗೆದಾರ ವಿಜಯರಾಜ್ ಅವರಿಗೆ ಕೆಲಸ ಒದಗಿತ್ತು. ನಂತರ ನಡೆದ ಭೂಮಿ ಪೂಜೆ ವೇಳೆ ಹಣದ ಮಾತುಕತೆ ನಡೆದಿರುವ ಶಂಕೆ ತನಿಖೆಯಲ್ಲಿ ಎದುರಾಗಿದೆ. ಪೂಜೆ ನಡೆದ ದಿನವೇ ಹಣ ನೀಡುವ ಕುರಿತು ಮಾತು ನಡೆದಿತ್ತೇ ಎಂಬ ಅನುಮಾನವೂ ಮೂಡಿದೆ.
ಪೂಜೆ ಬಳಿಕ ಗುತ್ತಿಗೆದಾರರಿಂದ ಫೋನ್ ಕರೆಗಳಿಗೆ ಪ್ರತಿಕ್ರಿಯೆ ಸಿಗದೇ, ಪಿಎಗಳ ಮೂಲಕ ಸಂಪರ್ಕ ಸಾಧಿಸಲು ಯತ್ನಿಸಲಾಗಿದೆ ಎನ್ನಲಾಗಿದೆ. ಕೆಲವು ದಿನಗಳ ಮೌನದ ನಂತರ ಒಂದೂವರೆ ತಿಂಗಳ ಬಳಿಕ ನಡೆದ ಮುಖಾಮುಖಿ ಮಾತುಕತೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದೆ.
ಲೋಕಾಯುಕ್ತರ ವಶದಲ್ಲಿರುವ ಆಡಿಯೋದಲ್ಲಿ ಗಂಭೀರ ಶೈಲಿಯ ಮಾತುಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.
“ಬ್ಲ್ಯಾಕ್ ಮಾಡಿ ಫ್ರೀಯಾಗಿ ಮಾಡ್ಕೊಳ್ಳಬೇಕು ಅಂದ್ಕೊಂಡಿಯಾ?”
“ನಿನ್ನ ನಡಾ ಮುರಿಸ್ತೀನಿ”
“ಎಚ್.ಕೆ. ಪಾಟೀಲ್ ಬಳಿ ನಡೆದಂತೆ ನನ್ನ ಬಳಿ ನಡೆಯಲ್ಲ” ಎಂಬ ಉಲ್ಲೇಖಗಳು ಕೇಳಿಬಂದಿರುವುದಾಗಿ ಮೂಲಗಳು ತಿಳಿಸಿವೆ. ಈ ಆಡಿಯೋ ಈಗ ಎಫ್ಎಸ್ಎಲ್ ಪರಿಶೀಲನೆಗೆ ಕಳುಹಿಸಲಾಗಿದೆ. ವಾಯ್ಸ್ ಸ್ಯಾಂಪಲ್ ಮ್ಯಾಚ್ ಆದರೆ ಪ್ರಕರಣ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಲೋಕಾಯುಕ್ತ ಮೂಲಗಳ ಪ್ರಕಾರ, ಹಣ ಹಸ್ತಾಂತರ ಪ್ರಕ್ರಿಯೆ ಲೇಯರ್ ಬೈ ಲೇಯರ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಶಾಸಕರಿಂದ ಸರ್ಕಾರಿ ಪಿಎ ಮಂಜುನಾಥ್ಗೆ ಖರ್ಚು ಭಾಗ ಆದರೆ ವಿಚಾರಣೆ ವೇಳೆ ಶಾಸಕ “ನಾನು ಕಮಿಷನ್ ಕೇಳಿಲ್ಲ” ಮತ್ತು “ಹಣ ಮುಟ್ಟಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ತೆರಳಲು ಸಜ್ಜಾಗಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೈ ತೊಳೆಯುವ ಫಿನಾಲ್ಫ್ತಲೇನ್ ಪರೀಕ್ಷೆಯಲ್ಲಿ ಪಿಂಕ್ ಬಣ್ಣ ಕಂಡುಬಂದಿದೆ ಎಂಬ ಮಾಹಿತಿ ತನಿಖಾ ವಲಯದಲ್ಲಿ ಹರಿದಾಡುತ್ತಿದೆ. ಇದು ಹಣ ಸ್ಪರ್ಶದ ಪ್ರಾಥಮಿಕ ಸೂಚನೆ ಎಂದು ಹೇಳಲಾಗಿದೆ.
ವಿಚಾರಣೆ ವೇಳೆ “ನಾ ಯಾಮಾರಿದ್ದೇನೆ” ಎಂದು ಅಧಿಕಾರಿಯೊಬ್ಬರ ಬಳಿ ಗೋಳು ತೋಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದ್ದರೂ, ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ.
ಎಫ್ಎಸ್ಎಲ್ ವರದಿ ಈ ಪ್ರಕರಣದ ಪ್ರಮುಖ ತಿರುವಾಗಲಿದೆ. ವಾಯ್ಸ್ ಮ್ಯಾಚಿಂಗ್ ದೃಢವಾದರೆ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಗಂಭೀರ ಕ್ರಮಗಳ ಸಾಧ್ಯತೆ ಇದೆ. ಜಾಮೀನು, ಬಂಧನ, ಚಾರ್ಜ್ಶೀಟ್ ಎಲ್ಲವೂ ಫರೆನ್ಸಿಕ್ ದೃಢೀಕರಣದ ಮೇಲೆ ಅವಲಂಬಿತವಾಗಿದೆ.
ರಾಜಕೀಯವಾಗಿ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದಲ್ಲಿ ಪ್ರತಿಷ್ಠೆ ಪ್ರಶ್ನೆಯಾಗಿದ್ದು, ಮುಂದಿನ ವಿಧಾನಸಭಾ ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ತನಿಖೆ ಮುಂದುವರಿದಿದ್ದು, ಎಫ್ಎಸ್ಎಲ್ ವರದಿ ನಿರೀಕ್ಷೆಯಲ್ಲಿದೆ.