Home Blog

ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಗೌರವ

0

ಗದಗ: ನಗರದ ಕನ್ನಡ ಮತ್ತು ಕಲಾಭಿವೃದ್ಧಿ ಸೇವಾ ಸಂಸ್ಥೆ (ರಿ)ಯ ಶ್ರೀ ರಾಜೇಶ್ವರಿ ಕಲಾಕುಟೀರದ 25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಿಪಿಜಿ ಅಂಧರ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಕಳಕಪ್ಪ ಮುದ್ಲಾಪೂರ, ಪತ್ರಕರ್ತ ಗಣೇಶ್ ಪೈ ಹಾಗೂ ಕಲಾವಿದ ಬಸವರಾಜ ನೆಲಜೇರಿ ಅವರನ್ನು ಕಲಾಕುಟೀರದ ಸಂಸ್ಥಾಪಕರು ಹಾಗೂ ಅತಿಥಿಗಳು ಸನ್ಮಾನಿಸಿದರು.

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ! CM ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಕರ್ನಾಟಕ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಮತ್ತು ಡಿಜಿಟಲ್ ವ್ಯಸನದಿಂದ ಉಂಟಾಗುವ ಆರೋಗ್ಯ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

2026-27ನೇ ಸಾಲಿನ ಬಜೆಟ್‌ ಮಂಡನೆ ವೇಳೆ ಮಾತನಾಡಿದ ಸಿಎಂ, ಹೆಚ್ಚುತ್ತಿರುವ ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವ ರೂಪಿಸುವ ಸ್ಥಳವಾಗಿರುವ ಶಾಲಾ-ಕಾಲೇಜುಗಳು, ವಿಶ್ವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದರು.

ಇನ್ನೂ ಈ ವಿಷಯದ ಕುರಿತು ನಡೆದ ವಿವಿಧ ಸಭೆಗಳಲ್ಲಿ ಚರ್ಚೆ ನಡೆಸಲಾಗಿದ್ದು, ಅಪ್ರಾಪ್ತ ಮಕ್ಕಳಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಯುವ ಮೂಲಕ ಅವರ ಆರೋಗ್ಯ ಮತ್ತು ಭವಿಷ್ಯವನ್ನು ಕಾಪಾಡುವುದು ಸರ್ಕಾರದ ಉದ್ದೇಶವಾಗಿದೆ.

ಮಕ್ಕಳ ಮೇಲೆ ಮೊಬೈಲ್ ಬಳಕೆ ಮತ್ತು ಡಿಜಿಟಲ್ ವ್ಯಸನದ ಪರಿಣಾಮಗಳ ಕುರಿತು ಮಾದ್ಯಮಗಳಲ್ಲಿ ಸಂಪೂರ್ಣ ವರದಿ ಪ್ರಸಾರ ಮಾಡಿತ್ತು. ಈ ವರದಿ ಮಕ್ಕಳಿಗೆ ಉಂಟಾಗುವ ಸಮಸ್ಯೆಗಳನ್ನು ಹೈಲೈಟ್ ಮಾಡಿ ಸಾರ್ವಜನಿಕರು ಹಾಗೂ ಶಾಸಕರ ಗಮನ ಸೆಳೆದಿತ್ತು.

ನಂತರ 2025-26ರ ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆಯನ್ನು ನಿರ್ಬಂಧಿಸುವ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಜಮೀನು ದಾಖಲೆ ಪರಿಶೀಲಿಸಲು ರೈತರಲ್ಲಿ ಕಾವ್ಯಾ ಸೋಮನಕಟ್ಟಿ ಮನವಿ

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನಲ್ಲಿನ ವಿಂಡ್ ಕಂಪನಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನುಗಳ ದಾಖಲಾತಿಗಳನ್ನು ಆಗಾಗ ಪರಿಶೀಲಿಸಿ ಎಚ್ಚರಿಕೆಯಿಂದ ಇರಬೇಕು ಎಂದು ರೈತ ಸಂಘದ ಮಹಿಳಾ ಮುಖಂಡೆ ಕಾವ್ಯಾ ಸೋಮನಕಟ್ಟಿ ಎಚ್ಚರಿಕೆ ನೀಡಿದರು.

ಪಟ್ಟಣದ ಪಿಡಬ್ಲ್ಯುಡಿಯ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಲವು ಗ್ರಾಮಗಳಲ್ಲಿ ವಿಂಡ್ ಕಂಪನಿಗಳು ಏಜೆಂಟರ ಮೂಲಕ ರೈತರ ಜಮೀನುಗಳನ್ನು ಲೀಜ್‌ಗೆ ಪಡೆದು ಕೆಲಸಗಳನ್ನು ನಡೆಸುತ್ತಿವೆ. ಆದರೆ ಕೆಲವೆಡೆ ರೈತರ ಅರಿವಿಗೆ ಬಾರದಂತೆ ಹಕ್ಕು ನೋಂದಣಿ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ಹೀಗಾಗಿ ರೈತರು ತಮ್ಮ ಜಮೀನುಗಳ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಈ ವಿಷಯದ ಕುರಿತು ಶೀಘ್ರದಲ್ಲೇ ರೈತ ಸಂಘದ ವತಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ರೈತ ಮುಖಂಡ ಶಿವಲಿಂಗಪ್ಪ ಬೊಪಳಾಪೂರ ಮಾತನಾಡಿ, ಕೇಂದ್ರ ಸರ್ಕಾರ ಅಮೆರಿಕದೊಂದಿಗೆ ಮಾಡಿಕೊಂಡಿರುವ ರೈತ ಒಪ್ಪಂದ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಈ ಒಪ್ಪಂದದಿಂದ ರೈತರ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ವಿದೇಶಿಗಳು ಸೂಚಿಸುವ ಬೆಳೆಗಳನ್ನು ಬೆಳೆಸಬೇಕಾದ ಪರಿಸ್ಥಿತಿ ರೈತರಿಗೆ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳಿಗೆ ವಿರೋಧವಾಗಿ ದೆಹಲಿಯಲ್ಲಿ ಸಾವಿರಾರು ರೈತರು ಹೋರಾಟ ನಡೆಸಿದ್ದು, 750ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದರು ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಹೇಳಿದರು. ರೈತರ ಹಿತಾಸಕ್ತಿಯನ್ನು ಕಾಪಾಡುವ ಆಡಳಿತ ನೀಡಬೇಕು; ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ರೈತ ಮುಖಂಡ ಮೇಘರಾಜ ಭಾವಿ ಮಾತನಾಡಿ, ಕಳಸಾ–ಬಂಡೂರಿ ಹಾಗೂ ಕೃಷ್ಣಾ ನದಿ ಜೋಡಣೆ ಯೋಜನೆಗಳನ್ನು ಜಾರಿಗೆ ತಂದು ನೀರಾವರಿ ಸೌಲಭ್ಯ ಒದಗಿಸಬೇಕು. ಮಳೆಯನ್ನು ಅವಲಂಬಿಸಿರುವ ಗದಗ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಜೊತೆಗೆ ಕೃಷಿ ಪರಿಷತ್ ಸ್ಥಾಪನೆಗೂ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾದೇಗೌಡ ಭಾವಿ, ಸಂಗಣ್ಣ ದಂಡಿನ, ಬಸವರಾಜ ಹೊಸಮನಿ, ಬಸನಗೌಡ ಪಾಟೀಲ, ಯಲ್ಲಪ್ಪ ಹಡಗಲಿ, ವಿರೇಶ ಕಲಹಾಳ, ಇಮಾಮಸಾಬ ಚೋಪದಾರ, ಶೇಖಸಾಬ ನದಾಪ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

“ರೈತರು ತಮ್ಮ ಜಮೀನುಗಳ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಇಂದು ಮಾಡುವ ತಪ್ಪಿನಿಂದ ಭವಿಷ್ಯದಲ್ಲಿ ಮಕ್ಕಳಿಗೆ ತೊಂದರೆ ಉಂಟಾಗಬಾರದು. ವಿಂಡ್ ಕಂಪನಿಗಳ ವ್ಯವಹಾರಗಳಲ್ಲಿ ರೈತರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.”
— ಕಾವ್ಯಾ ಸೋಮನಕಟ್ಟಿ, ರೈತ ಸಂಘದ ಮಹಿಳಾ ಮುಖಂಡೆ

“ಸರ್ಕಾರಗಳು ರೈತರಿಗೆ ಹಾನಿ ಮಾಡುವ ಯೋಜನೆಗಳ ಬದಲು ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಆರ್ಥಿಕವಾಗಿ ಬಲಪಡಿಸಬೇಕು. ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು,”

-ಮೇಘರಾಜ ಭಾವಿ, ರೈತ ಸಂಘದ ಮುಖಂಡ

ರೈತರ ಪ್ರಮುಖ ಆಗ್ರಹಗಳು

ಉತ್ತರ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಕಳಸಾ–ಬಂಡೂರಿ ಯೋಜನೆ ಜಾರಿಗೆ ತರಬೇಕು. ಕೃಷ್ಣಾ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸಬೇಕು. ಗದಗ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕೆ ಕೃಷಿ ಪರಿಷತ್ ಸ್ಥಾಪಿಸಬೇಕು.

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ಭರ್ತಿ

ಬೆಂಗಳೂರು: ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

2026-27ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿ ಮಾತ್ರ ಐದು ವರ್ಷ ಸಡಿಲಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ವಯೋಮಿತಿ ಆತಂಕದಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಲಾಗಿದೆ.

ಉದ್ಯೋಗ ನೇಮಕಾತಿಯ ಒಳಮೀಸಲಾತಿ ಪ್ರಮಾಣದ ಕುರಿತು ಪ್ರಕರಣಗಳು ನ್ಯಾಯಾಲಯದಲ್ಲಿ ಇರುವ ಹಿನ್ನೆಲೆ ಅಭ್ಯರ್ಥಿಗಳಿಗೆ ಯಾವುದೇ ನಷ್ಟವಾಗದಂತೆ ವಯೋಮಿತಿಯನ್ನು ಐದು ವರ್ಷ ಸಡಿಲಿಕೆ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಕ್ಕೂ ಉತ್ತೇಜನ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಇದೇ ವೇಳೆ ಅರಣ್ಯ ಇಲಾಖೆಯ ವಿವಿಧ ವೃಂದಗಳಲ್ಲಿನ 200 ಹುದ್ದೆಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭರ್ತಿ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಜೊತೆಗೆ ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಬಲ್ಡೋಟ ತೊಲಗಿಸಿ ಹೋರಾಟ 126ನೇ ದಿನಕ್ಕೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಸಭೆ ಎದುರು ಟೆಂಟ್‌ನಲ್ಲಿ ನಡೆಯುತ್ತಿರುವ ‘ಬಲ್ಡೋಟ ತೊಲಗಿಸಿ’ ಹೋರಾಟ 126ನೇ ದಿನಕ್ಕೆ ತಲುಪಿದೆ. ಮುಂದಿನ ಹೋರಾಟದ ರೂಪುರೇಷೆ ಕುರಿತು ಮಾ.7ರಂದು ಬೆಳಗ್ಗೆ 10 ಗಂಟೆಗೆ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ‘ಬೆಂಗಳೂರು ಚಲೋ’ ಸಿದ್ಧತಾ ಸಭೆ ಕರೆಯಲಾಗಿದೆ ಎಂದು ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆದ ಧರಣಿ ಮತ್ತು ಬಂದ್ ಹೋರಾಟ ಯಶಸ್ವಿಯಾದ ಹಿನ್ನೆಲೆ ಈ ಸಭೆ ಆಯೋಜಿಸಲಾಗಿದೆ. ಬಂದ್ ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದಿನ ಹೋರಾಟದ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಬಂದ್ ನಂತರ ಜನಪ್ರತಿನಿಧಿಗಳು ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ವಿಷಯದಲ್ಲಿ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.

ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಮಾತನಾಡಿ, ಬಜೆಟ್‌ನಲ್ಲಿ ಬಾಧಿತ ಹಳ್ಳಿಗಳ ಆರೋಗ್ಯ ಸಮಸ್ಯೆ, ಪರಿಸರ ಹಾನಿ, ಬೆಳೆ ನಷ್ಟ ಹಾಗೂ ಸಾವುಗಳ ಕುರಿತು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಐಐಎಸ್‌ಸಿ ಮತ್ತು ಎಐಐಎಂಎಸ್ ಮೂಲಕ ಪರಿಸರ ಆರೋಗ್ಯ ಸಮೀಕ್ಷೆ ನಡೆಸಬೇಕು. ತುಂಗಭದ್ರಾ ನದಿ ಮಾಲಿನ್ಯ ನಿಯಂತ್ರಣಕ್ಕಾಗಿ ಶುದ್ಧೀಕರಣ ಯೋಜನೆ ರೂಪಿಸಿ ಅನುದಾನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಧರಣಿಯಲ್ಲಿ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಮಂಜುನಾಥ ಜಿ. ಗೊಂಡಬಾಳ, ಶರಣು ಡೊಳ್ಳಿನ, ಸರೋಜಾ ಬಾಕಳೆ, ಮೂಕಪ್ಪ ಮೇಸ್ತಿ, ಶರಣು ಗಡ್ಡಿ, ರುದ್ರಪ್ಪ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಬಸನಗೌಡ ಪಾಟೀಲ ಮೂರನೇ ಬಾರಿ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಸನಗೌಡ (ರಾಜು) ವೆಂಕನಗೌಡ ಪಾಟೀಲ ಅಧ್ಯಕ್ಷರಾಗಿ ಹಾಗೂ ಫಕ್ಕೀರಪ್ಪ ಯಲ್ಲಪ್ಪ ಇಚ್ಚಂಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಹಾಗೂ ಚುನಾವಣಾಧಿಕಾರಿ ಪುಷ್ಪಾ ಕಡಿವಾಳ ಘೋಷಿಸಿದರು.

ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ಪಾಟೀಲ ಹಾಗೂ ನೀಲಪ್ಪ ಹತ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ಫಕ್ಕೀರಪ್ಪ ಇಚ್ಚಂಗಿ ಮತ್ತು ಮಂಜುನಾಥ ಶಂಕಿನದಾಸರ ಸ್ಪರ್ಧೆ ಇದ್ದು, ಕೊನೆ ಕ್ಷಣದಲ್ಲಿ ರಾಜಕೀಯ ತಂತ್ರಗಾರಿಕೆಯಿಂದ ನೀಲಪ್ಪ ಹತ್ತಿ ಹಾಗೂ ಮಂಜುನಾಥ ದಾಸರ ತಮ್ಮ ನಾಮಪತ್ರಗಳನ್ನು ಹಿಂಪಡೆದ ಕಾರಣ ಬಸನಗೌಡ ಪಾಟೀಲ ಮತ್ತು ಫಕ್ಕೀರಪ್ಪ ಇಚ್ಚಂಗಿ ಅವಿರೋಧವಾಗಿ ಆಯ್ಕೆಯಾದರು.

ಬಸನಗೌಡ ಪಾಟೀಲ ಸತತ ಮೂರನೇ ಬಾರಿ ಅಧ್ಯಕ್ಷರಾಗಿರುವುದು ವಿಶೇಷವಾಗಿದೆ. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬ್ಯಾಂಕ್ ಎದುರು ಜಮಾಯಿಸಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ಅನುದಾನ: ಗೃಹಿಣಿಯರಿಗೆ ಬಜೆಟ್ʼನಲ್ಲಿ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ದಾಖಲೆಯ 17ನೇ ಬಜೆಟ್ ಮಂಡಿಸಿರುವ ಅವರು, ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಜೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು. ಜೊತೆಗೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಸುಖೋಯ್ ಯುದ್ಧವಿಮಾನ ಪತನ: ಇಬ್ಬರು ಐಎಎಫ್ ಪೈಲಟ್‌ʼಗಳು ಹುತಾತ್ಮ

0

ದಿಸ್ಪುರ: ಅಸ್ಸಾಂ ರಾಜ್ಯದ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನ ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ.

ಹುತಾತ್ಮರಾದ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.

Su-30 MKI ಯುದ್ಧ ವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಜೋರ್ಹತ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ವಿಮಾನ ಸಂಪರ್ಕ ಕಡಿತಗೊಂಡಿತ್ತು. ನಂತರ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ದೂರದ ಗುಡ್ಡಗಾಡು ಪ್ರದೇಶದಲ್ಲಿ ಅದು ಪತನಗೊಂಡಿರುವುದು ಪತ್ತೆಯಾಗಿದೆ.

ರಷ್ಯಾ ಮೂಲದ ಈ ಯುದ್ಧ ವಿಮಾನದೊಂದಿಗೆ ರಾತ್ರಿ ಸುಮಾರು 7.42 ಗಂಟೆಗೆ ಸಂವಹನ ಕಳೆದುಹೋಗಿತ್ತು. ಬಳಿಕ ಬೆಟ್ಟ ಪ್ರದೇಶದಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಬೆಂಕಿಯ ಉಂಡೆಯಂತೆ ಕಾಣಿಸಿಕೊಂಡುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಭಾರತೀಯ ವಾಯುಪಡೆ ತನಿಖೆ ಆರಂಭಿಸಿದೆ.

ಜನರೇ ಎಚ್ಚರ: ನಿತ್ಯ ನೀವು ಮಾಡುವ ಈ ತಪ್ಪುಗಳಿಂದ ಕಿವಿ ಕೇಳಿಸದಿರಬಹುದು ಹುಷಾರ್!

0

ದೇಹದ ಇತರ ಅಂಗಗಳಂತೆ ಕಿವಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಅತ್ಯಂತ ಮುಖ್ಯ. ಆದರೆ ನಾವು ದಿನನಿತ್ಯ ಮಾಡುವ ಕೆಲವು ಸಣ್ಣ ತಪ್ಪುಗಳು ಕಿವಿಯ ಆರೋಗ್ಯಕ್ಕೆ ಹಾನಿ ಉಂಟುಮಾಡಿ ಕೇಳುವ ಸಾಮರ್ಥ್ಯ ಕಡಿಮೆಯಾಗಲು ಕಾರಣವಾಗಬಹುದು.

ಹಲವರು ಕಿವಿಯಲ್ಲಿ ಉಂಟಾಗುವ ಸಣ್ಣ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇಂತಹ ನಿರ್ಲಕ್ಷ್ಯವು ಮುಂದಿನ ದಿನಗಳಲ್ಲಿ ಕಿವಿಗೆ ಗಂಭೀರ ತೊಂದರೆಗಳನ್ನುಂಟುಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಆದ್ದರಿಂದ ಕಿವಿಯ ಆರೈಕೆಯಲ್ಲಿ ಜಾಗರೂಕತೆ ಅಗತ್ಯ.

ಬಹುತೇಕ ಜನರು ಕಿವಿಯಲ್ಲಿ ತುರಿಕೆ ಅಥವಾ ಅಸೌಕರ್ಯ ಕಂಡುಬಂದಾಗ ಕಾಟನ್ ಬಡ್ ಬಳಸಿ ಕಿವಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಕಿವಿಯೊಳಗೆ ಕಾಟನ್ ಬಡ್ ಹಾಕುವುದು ತಪ್ಪು ಅಭ್ಯಾಸವಾಗಿದೆ. ಇದರಿಂದ ಕಿವಿಯೊಳಗಿನ ಮೇಣ ಹೊರಬರುವ ಬದಲು ಇನ್ನಷ್ಟು ಒಳಗೆ ತಳ್ಳಲ್ಪಟ್ಟು ಕಿವಿಯಲ್ಲಿ ಅಡ್ಡಿಯಾಗುವ ಸಾಧ್ಯತೆ ಇದೆ. ಜೊತೆಗೆ ಕಡ್ಡಿ, ಹೇರ್ ಪಿನ್ ಅಥವಾ ಇತರ ವಸ್ತುಗಳನ್ನು ಕಿವಿಯೊಳಗೆ ಹಾಕುವುದರಿಂದ ಕಿವಿಯ ಒಳಭಾಗಕ್ಕೆ ಗಾಯವಾಗುವ ಅಪಾಯವೂ ಇದೆ. ಆದ್ದರಿಂದ ಕಾಟನ್ ಬಡ್ ಅನ್ನು ಕೇವಲ ಕಿವಿಯ ಹೊರಭಾಗವನ್ನು ಸ್ವಚ್ಛಗೊಳಿಸಲು ಮಾತ್ರ ಬಳಸಬೇಕು. ಕಿವಿಯಲ್ಲಿ ಮೇಣ ಹೆಚ್ಚು ಜಮಾಯಿಸಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

ಇನ್ನೂ ಕೆಲವರು ಕಿವಿಯಲ್ಲಿ ಎಣ್ಣೆ ಹಾಕುವುದು ಆರೋಗ್ಯಕರವೆಂದು ನಂಬುತ್ತಾರೆ. ಆದರೆ ವೈದ್ಯರ ಸಲಹೆ ಇಲ್ಲದೆ ಕಿವಿಗೆ ಎಣ್ಣೆ ಅಥವಾ ಯಾವುದೇ ದ್ರವ ಹಾಕುವುದು ಸರಿಯಲ್ಲ. ಇದರಿಂದ ಸೋಂಕು ಉಂಟಾಗುವ ಸಾಧ್ಯತೆ ಇದೆ. ಕೆಲ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾ ಅಥವಾ ಹುಳುಗಳ ಸೋಂಕು ಕಾಣಿಸಿಕೊಳ್ಳಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಯಾವುದೇ ದ್ರವವನ್ನು ಕಿವಿಗೆ ಹಾಕಬಾರದು ಎಂದು ತಜ್ಞರು ಹೇಳುತ್ತಾರೆ.

ಅದೇ ರೀತಿ ಜೋರಾದ ಶಬ್ದವನ್ನು ಹೆಚ್ಚು ಸಮಯ ಕೇಳುವುದೂ ಕಿವಿಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮದುವೆ ಸಮಾರಂಭಗಳು ಅಥವಾ ಕಾರ್ಯಕ್ರಮಗಳಲ್ಲಿ ಜೋರಾದ ಸಂಗೀತ ಕೇಳುವುದು, ಹೆಡ್‌ಫೋನ್ ಅಥವಾ ಇಯರ್‌ಫೋನ್ ಮೂಲಕ ಹೆಚ್ಚಿನ ಶಬ್ದದಲ್ಲಿ ಹಾಡುಗಳನ್ನು ಕೇಳುವುದು ಕಿವಿಯ ಒಳಭಾಗದ ನರಗಳಿಗೆ ಹಾನಿ ಮಾಡಬಹುದು. ಇಯರ್‌ಫೋನ್ ಬಳಸುವಾಗ ಸಮಯಕ್ಕೆ ವಿರಾಮ ನೀಡುವುದು ಹಾಗೂ ಶಬ್ದದ ಮಟ್ಟವನ್ನು ಕಡಿಮೆ ಇಡುವುದು ಉತ್ತಮ ಅಭ್ಯಾಸವಾಗಿದೆ.

ಕಿವಿಯಲ್ಲಿ ನೋವು, ತುರಿಕೆ, ದ್ರವ ಹೊರಬರುವುದು ಅಥವಾ ಕೇಳುವ ಸಾಮರ್ಥ್ಯ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಕಂಡುಬಂದರೆ ಸ್ವಯಂ ಔಷಧಿ ಬಳಸಬಾರದು. ಯಾವುದೇ ಔಷಧಿ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ತಲೆ ಸುತ್ತುವುದು ಅಥವಾ ಅಚಾನಕ್ ಕೇಳುವ ಶಕ್ತಿ ಕಡಿಮೆಯಾಗುವುದು ಕಂಡುಬಂದರೆ ಕೂಡಲೇ ತಜ್ಞರನ್ನು ಭೇಟಿ ಮಾಡಬೇಕು. ಒಟ್ಟಿನಲ್ಲಿ, ಕಿವಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆರೈಕೆ ಮತ್ತು ಜಾಗೃತಿಯೇ ಅತ್ಯಂತ ಮುಖ್ಯವೆಂದು ತಜ್ಞರು ಸೂಚಿಸಿದ್ದಾರೆ.

ಸಿದ್ದರಾಮಯ್ಯರ 17ನೇ ಬಜೆಟ್‌ಗೆ ಕ್ಷಣಗಣನೆ: ಬಸ್ ನಿಲ್ದಾಣಗಳಲ್ಲೂ ನೇರ ಪ್ರಸಾರ!

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2026–27ನೇ ಸಾಲಿನ ರಾಜ್ಯದ ಆಯವ್ಯಯವನ್ನು ವಿಧಾನಸೌಧದಲ್ಲಿ ಮಂಡಿಸಲಿದ್ದಾರೆ.

ಬೆಳಿಗ್ಗೆ 10.15ಕ್ಕೆ ಆರಂಭವಾಗುವ ಈ ಆಯವ್ಯಯ ಮಂಡನೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ದಾಖಲೆಯ 17ನೇ ಆಯವ್ಯಯವಾಗಿರುವುದು ವಿಶೇಷವಾಗಿದೆ.

ಈ ಬಾರಿ ಆಯವ್ಯಯ ಮಂಡನೆಗೆ ಮತ್ತೊಂದು ವಿಶೇಷತೆಯೂ ಇದೆ. ರಾಜ್ಯದ ಜನತೆಗೆ ಆಯವ್ಯಯ ಭಾಷಣವನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಮೊದಲ ಬಾರಿಗೆ ರಾಜ್ಯದ ಹಲವು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾದ ಎಲ್‌ಇಡಿ ಹಾಗೂ ದೂರದರ್ಶನ ಪರದೆಗಳ ಮೂಲಕ ನೇರ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ವ್ಯವಸ್ಥೆಯನ್ನು ಕೈಗೊಂಡಿದ್ದು, ಇಂದು ಬೆಳಿಗ್ಗೆ 10.15ರಿಂದ ಆಯವ್ಯಯ ಭಾಷಣದ ನೇರ ಪ್ರಸಾರ ನಡೆಯಲಿದೆ. ಆಯವ್ಯಯ ಮಂಡನೆಯ ಬಳಿಕ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯೂ ಇದೇ ಪರದೆಗಳ ಮೂಲಕ ಪ್ರಸಾರವಾಗಲಿದೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 17ನೇ ಬಾರಿ ಆಯವ್ಯಯ ಮಂಡನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕುತೂಹಲ ಹೆಚ್ಚಾಗಿದೆ. ಈ ನಡುವೆ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅಭಿಮಾನಿಗಳು ವಿಶಿಷ್ಟವಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸುಮಾರು 8 ಸಾವಿರ ಚದರ ಅಡಿ ಪ್ರದೇಶದಲ್ಲಿ ಕಲಾವಿದ ಪುನೀತ್ ಅವರು ಬೃಹತ್ ರಂಗೋಲಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ರಚಿಸಿದ್ದಾರೆ.

ಕರ್ನಾಟಕದ ಭೂಪಟದ ಆಕೃತಿಯನ್ನು ಸೃಷ್ಟಿಸಿ ಅದರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯವ್ಯಯ ಮುಂಗಡ ಪತ್ರವನ್ನು ಹಿಡಿದಿರುವ ರೀತಿಯಲ್ಲಿ ಚಿತ್ರಣ ಮೂಡಿಸಿರುವುದು ವಿಶೇಷವಾಗಿದೆ. ಒಟ್ಟಿನಲ್ಲಿ ಇಂದು ದಾಖಲೆ ಸೃಷ್ಟಿಸುವ ಆಯವ್ಯಯ ಮಂಡನೆ ನಡೆಯಲಿರುವ ಹಿನ್ನೆಲೆಯಲ್ಲಿ ತವರು ಜಿಲ್ಲೆಯಲ್ಲಿ ಅಭಿಮಾನಿಗಳು ಭರ್ಜರಿ ಬೆಂಬಲ ಸೂಚಿಸಿದ್ದಾರೆ.

 

error: Content is protected !!