Home Blog

Bengaluru: MBBS ಸೀಟ್ ಕೊಡಿಸುವುದಾಗಿ 25 ಲಕ್ಷ ವಂಚನೆ! ನಾಲ್ವರ ವಿರುದ್ಧ FIR

0

ಬೆಂಗಳೂರು: ನಗರದಲ್ಲಿ ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ FIR ದಾಖಲಾಗಿದೆ.

ಸಂತ್ರಸ್ತ ಯುವತಿ ಆಯೇಷಾ ಖಥುಮ್ ಅವರಿಗೆ ಸೀಟ್ ಕೊಡಿಸುವುದಾಗಿ ಹೇಳಿ ಹಣ ಪಡೆದ ಆರೋಪದ ಮೇಲೆ ಡಾ. ಕೆ.ಪಿ. ಶರತ್ ಸೇರಿದಂತೆ ಶಂಶೇರ್ ಬೇಗ್ ಮತ್ತು ಸೈಯದ್ ತಬ್ರೇಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ.

ಆಯೇಷಾ ಖಥುಮ್ ತಂದೆ ಲಾಲ್ ಬಾಬು ನೀಡಿದ ದೂರಿನ ಪ್ರಕಾರ, ದ್ವಿತೀಯ ಪಿಯುಸಿ ಹಾಗೂ NLT ಪರೀಕ್ಷೆ ಬರೆದಿದ್ದ ಯುವತಿ MBBS ಪ್ರವೇಶಕ್ಕಾಗಿ ಉತ್ತಮ ಕಾಲೇಜು ಹುಡುಕುತ್ತಿದ್ದರು. ಈ ವೇಳೆ ಪರಿಚಯದ ಸೈಯದ್ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು.

ಶಂಶೇರ್ ಬೇಗ್ ತಾನು ಕಿಮ್ಸ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರ ಪರಿಚಯವಿದೆ ಎಂದು ಹೇಳಿ ಡಾ. ಕೆ.ಪಿ. ಶರತ್ ಅವರನ್ನು ಪರಿಚಯಿಸಿದ್ದಾನೆ. ಬಳಿಕ ಬನಶಂಕರಿ 2ನೇ ಹಂತದಲ್ಲಿರುವ KIMS ಮೆಡಿಕಲ್ ಕಾಲೇಜಿನಲ್ಲಿ ಭೇಟಿಯಾಗಿದ್ದು, ಇದೇ ಕಾಲೇಜಿನಲ್ಲಿ ಆಯೇಷಾಗೆ ಸೀಟ್ ಕೊಡಿಸುವುದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ನಂತರ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ 25 ಲಕ್ಷ ರೂಪಾಯಿ ಡೊನೇಷನ್ ನೀಡಿದರೆ ಸೀಟ್ ಪಕ್ಕಾ ಎಂದು ಹೇಳಲಾಗಿದೆ. ಆರೋಪಿಗಳ ಮಾತು ನಂಬಿದ ಕುಟುಂಬಸ್ಥರು ಯುಪಿಐ ಮತ್ತು ಚೆಕ್ ಮೂಲಕ 10 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಬಳಿಕ ಉಳಿದ 15 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದಾರೆ.

ಆದರೆ ಪೂರ್ತಿ ಹಣ ಪಡೆದ ಬಳಿಕ ಆರೋಪಿಗಳು ಸೀಟ್ ಕೊಡಿಸದೇ ಸಂಪರ್ಕ ತಪ್ಪಿಸಿಕೊಂಡಿದ್ದಾರೆ. ವಿಚಾರಿಸಿದಾಗ ಡಾ. ಕೆ.ಪಿ. ಶರತ್ ಅವರು ಕಿಮ್ಸ್ ಕಾಲೇಜಿನ ಅಧ್ಯಕ್ಷರಲ್ಲ ಎಂಬುದು ಬೆಳಕಿಗೆ ಬಂದಿದೆ. ತಾವು ಮೋಸ ಹೋಗಿರುವುದು ತಿಳಿದು ಆಯೇಷಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

KPSC ಗೆಜೆಟೆಡ್ ನೇಮಕಾತಿಯಲ್ಲಿ ಮತ್ತೆ ಅಕ್ರಮ ಆರೋಪ: ತನಿಖೆಗೆ ಅಭ್ಯರ್ಥಿಗಳ ಆಗ್ರಹ

ಬೆಂಗಳೂರು: KPSC ನಡೆಸುತ್ತಿರುವ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿಬಂದಿದೆ. 384 ಹುದ್ದೆಗಳ ಭರ್ತಿಗಾಗಿ ಇಂಟರ್ವ್ಯೂಗೆ ಕರೆ ನೀಡಿರುವ 1:3 ಅನುಪಾತದ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೊಂದಲಗಳಿವೆ ಎಂದು ಅಭ್ಯರ್ಥಿಗಳು ಆರೋಪಿಸಿ, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಮುಖ್ಯ ಪರೀಕ್ಷೆ ಪೂರ್ಣಗೊಂಡ ಬಳಿಕ ಇಂಟರ್ವ್ಯೂ ಹಂತಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿಯನ್ನು ಮಾ. 2ರಂದು ಕೆಪಿಎಸ್ಸಿ ಪ್ರಕಟಿಸಿತ್ತು. ಆದರೆ, ಈ ಪಟ್ಟಿಯಲ್ಲಿ ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಇದೇ ಮೊದಲಲ್ಲ. ಇದೇ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಲೋಪ ಕಂಡುಬಂದಿದ್ದ ಹಿನ್ನೆಲೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಎರಡು ಬಾರಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿಯಲ್ಲಿಯೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇಡೀ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ವಿಶೇಷ ಸೌಲಭ್ಯ ರದ್ದು: ಪವಿತ್ರಾ ಗೌಡ ಸೇರಿ ಆರೋಪಿಗಳಿಗೆ ಜೈಲು ನಿಯಮ ಕಟ್ಟುನಿಟ್ಟಿನ ಅನುಷ್ಠಾನ

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಹಾಗೂ ಇತರರಿಗೆ ಮನೆಯಿಂದ ಊಟ ತರಿಸಿಕೊಳ್ಳಲು ನೀಡಿದ್ದ ವಿಶೇಷ ಅನುಮತಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯ ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ನೀಡಿತ್ತು. ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಹೆಚ್ಚುವರಿ ಅವಕಾಶವೂ ನೀಡಲಾಗುತ್ತಿತ್ತು. ಈ ಸೌಲಭ್ಯವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ನಂತರ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಟ್ರಯಲ್ ಕೋರ್ಟ್ ಆದೇಶವನ್ನು ರದ್ದುಪಡಿಸಿ, ಜೈಲು ನಿಯಮಗಳು ಎಲ್ಲ ಕೈದಿಗಳಿಗೆ ಸಮಾನವಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ಪ್ರಕರಣ ಸಂಬಂಧ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಆರೋಪಿಗಳ ಪರ ವಕೀಲರು ತನಿಖಾಧಿಕಾರಿಯನ್ನು ಆರೋಪಿಯನ್ನಾಗಿ ಮಾಡುವ ಅರ್ಜಿಯನ್ನು ವಿರೋಧಿಸಿದ್ದಾರೆ. ಮತ್ತೊಂದೆಡೆ, ಪ್ರತಿದಿನವೂ ವಿಚಾರಣೆ ನಡೆಸುವಂತೆ ಸಲ್ಲಿಸಿದ ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕರು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ತೀರ್ಪಿನಿಂದ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ಪ್ರಕರಣದ ಮುಂದಿನ ವಿಚಾರಣೆ ಮೇಲೆ ಗಮನ ಕೆಂದ್ರೀಕೃತವಾಗಿದೆ.

ವಿದೇಶಿ ಪ್ರವಾಸಿಗರ ಮಾಹಿತಿ ನೀಡದೆ ನಿಯಮ ಉಲ್ಲಂಘನೆ: ಗೋಕರ್ಣ ಹೋಂಸ್ಟೇ ಮಾಲೀಕರ ವಿರುದ್ಧ FIR!

ಕಾರವಾರ: ವಿದೇಶಿ ಪ್ರವಾಸಿಗರು ಹೋಂಸ್ಟೇನಲ್ಲಿ ತಂಗಿರುವ ಬಗ್ಗೆ ಕಡ್ಡಾಯ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಆರೋಪದ ಮೇರೆಗೆ ಗೋಕರ್ಣದಲ್ಲಿ ಪೊಲೀಸರು ಹೋಂಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಗೋಕರ್ಣದ ಭೀಮಕೊಂಡದಲ್ಲಿರುವ ‘ವೈಲ್ಡ್ ವಿಲೇಜ್’ ಹೋಂಸ್ಟೇ ಮಾಲೀಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಅರ್ಜೆಂಟೈನಾದ ಪ್ರವಾಸಿಗರಾದ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಮತ್ತು ಅವರ ತಾಯಿ ಕಳೆದ ಎರಡು ದಿನಗಳಿಂದ ಹೋಂಸ್ಟೇನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ವಿದೇಶಿ ಪ್ರಜೆಗಳು ತಂಗಿದಲ್ಲಿ, ಸಂಬಂಧಿತ ಮಾಹಿತಿಯನ್ನು ‘ಸಿ’ ಫಾರ್ಮ್ ಮೂಲಕ ಪೊಲೀಸ್ ಠಾಣೆಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಈ ನಿಯಮವನ್ನು ಪಾಲಿಸದೆ ವಿದೇಶಿ ಪ್ರಜೆಗಳಿಗೆ ವಸತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಇಮಿಗ್ರೇಶನ್ ಮತ್ತು ಫಾರಿನರ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಠಾಣೆಯ ಪಿಎಸ್‌ಐ ಬಿ.ಎಂ. ಅನಿಲ್ ತನಿಖೆ ಕೈಗೊಂಡಿದ್ದಾರೆ.

ಖಮೇನಿ ಹತ್ಯೆ ಕುರಿತ ಪೋಸ್ಟ್: ಶ್ರೀನಗರ ಸಂಸದ ವಿರುದ್ಧ ಎಫ್‌ಐಆರ್

ಶ್ರೀನಗರ: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮತ್ತು ಸಂಬಂಧಿತ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಅಗಾ ಸೈಯದ್ ರುಹುಲ್ಲಾ ಮೆಹದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಸಂಸದರು ಡಿಜಿಟಲ್ ವೇದಿಕೆಗಳಲ್ಲಿ ದಾರಿತಪ್ಪಿಸುವ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿ ಮತ್ತು ಖಮೇನಿ ಹತ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಟೀಕಿಸುವ ಪೋಸ್ಟ್‌ಗಳನ್ನು ಅವರು ಹಂಚಿಕೊಂಡಿದ್ದರು. ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಭದ್ರತಾ ಸಿಬ್ಬಂದಿಯೊಂದಿಗಿನ ಘರ್ಷಣೆಯ ವೀಡಿಯೊಗಳನ್ನು ಸಹ ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನಗರದ ಮಾಜಿ ಮೇಯರ್ ಜುನೈದ್ ಅಜೀಮ್ ಮಾಟೂ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶಪೂರ್ವಕ ತಪ್ಪು ಮಾಹಿತಿಯನ್ನು ಹರಡಲಾಗಿದೆ ಎಂಬ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ.

ಕುಟುಂಬ ಕಲಹ: ಕಾವೇರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ!

0

ಚಾಮರಾಜನಗರ: ಕಾವೇರಿ ನದಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಸಮೀಪ ನಡೆದಿದೆ.

ಮೃತರನ್ನು ರಶ್ಮಿ (39) ಎಂದು ಗುರುತಿಸಲಾಗಿದೆ. ಇವರು ಪತಿ ಲೋಕೇಶ್ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಕುಟುಂಬ ಕಲಹ ಹಿನ್ನೆಲೆ ಬೇಸರಗೊಂಡು ವೆಸ್ಲಿ ಸೇತುವೆಯಿಂದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ನದಿಯಿಂದ ಮೇಲೆತ್ತಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಹಾಡು ಹಗಲಲ್ಲೇ 59 ಲಕ್ಷ ರೂ. ಮೌಲ್ಯದ ಬೆಳ್ಳಿ ಕಳ್ಳತನ: ಸಿಬ್ಬಂದಿಯಿಂದಲೇ ಕೃತ್ಯದ ಶಂಕೆ!

0

ಹುಬ್ಬಳ್ಳಿ: ನಗರದ ಹೃದಯಭಾಗವಾದ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಹಗಲಿನಲ್ಲಿ ನಡೆದ ಕಳವು ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಸುಮಾರು 59 ಲಕ್ಷ ರೂಪಾಯಿ ಮೌಲ್ಯದ 24 ಕೆಜಿ ಬೆಳ್ಳಿ ಆಭರಣಗಳು ಕಳುವಾಗಿರುವುದಾಗಿ ವರದಿಯಾಗಿದೆ.

ಬೆಂಗಳೂರು ಮೂಲದ ವ್ಯಾಪಾರಿ ಆಶಿಷ್ ಕುಮಾರ್ ತಮ್ಮದೇ ಕಾರಿನಲ್ಲಿ ಒಟ್ಟು 29 ಕೆಜಿ ಬೆಳ್ಳಿ ಆಭರಣಗಳನ್ನು ಮಾರಾಟ ಉದ್ದೇಶದಿಂದ ಒಪ್ಪಿಸಿದ್ದರು. ಆರೋಪಿಗಳಾದ ಅಮೀತ್ ಪುರೋಹಿತ್ ಹಾಗೂ ಯೋಗೀಶ್ ಸಿಂಗ್ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಭಾಗಶಃ ಮಾರಾಟ ನಡೆಸಿದ ಬಳಿಕ ಉಳಿದ ಆಭರಣಗಳನ್ನು ಹುಬ್ಬಳ್ಳಿಯಲ್ಲಿ ಮಾರಾಟ ಮಾಡಲು ಬಂದಿದ್ದರು.

ಘಟನೆಯ ದಿನ ಕಾರನ್ನು ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಿಲ್ಲಿಸಿ ಅಂಗಡಿಗೆ ತೆರಳಿದ ವೇಳೆ, ಕಾರಿನಲ್ಲಿ ಇರಿಸಿದ್ದ ಎರಡು ಬ್ಯಾಗ್‌ಗಳ ಮೇಲೆ ಯೋಗೀಶ್ ಸಿಂಗ್ ಕಣ್ಣುಹಾಯಿಸಿದ್ದಾನೆ. ಕಾರಿನ ಕೀಲಿಯನ್ನು ತನ್ನ ವಶಕ್ಕೆ ಪಡೆದು, ವಾಹನವನ್ನು ಲಾಕ್ ಮಾಡಿ, ಬ್ಯಾಗ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಕರ್ನಾಟಕ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದ್ದು, ಆರೋಪಿಯ ಚಲನವಲನಗಳ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್​​ ದರ ಏರಿಕೆ ಶಾಕ್ ಕೊಟ್ಟ KERC!

ಬೆಂಗಳೂರು: ವಾಣಿಜ್ಯ ಹಾಗೂ ಕೈಗಾರಿಕಾ ವಲಯಕ್ಕೆ ಕೆಇಆರ್‌ಸಿ ಶಾಕ್ ನೀಡಿದ್ದು, 2025-26ನೇ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ವಿದ್ಯುತ್ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಖಂಡಿಸಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ದರ ಏರಿಕೆ ಕುರಿತು ಫೆಬ್ರವರಿ 20ರಂದು ಸಾರ್ವಜನಿಕರೊಂದಿಗೆ ಚರ್ಚೆ ನಡೆದಿತ್ತು. ಆ ವೇಳೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲ್ಲವೆಂದು ಕೆಇಆರ್‌ಸಿ ಭರವಸೆ ನೀಡಿತ್ತು ಎನ್ನಲಾಗಿದೆ. ಆದರೆ ಇದೀಗ ಆಯೋಗ ಯು-ಟರ್ನ್ ತೆಗೆದುಕೊಂಡಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಯೂನಿಟ್‌ಗೆ ಪರಿಷ್ಕೃತ ದರಗಳು ಹೀಗಿವೆ:

  • LT-3(A) ವಾಣಿಜ್ಯ ಬಳಕೆ: ₹7ರಿಂದ ₹7.10ಕ್ಕೆ ಏರಿಕೆ

  • LT-5 ಕೈಗಾರಿಕಾ ಬಳಕೆ: ₹4.50ರಿಂದ ₹5.20ಕ್ಕೆ ಏರಿಕೆ

  • HT-2(A) ಮೆಟ್ರೋ, ರೈಲ್ವೆ ಮತ್ತು ಇತರೆ: ₹6.60ರಿಂದ ₹6.70ಕ್ಕೆ ಏರಿಕೆ

  • HT-2(B) ಕಾಂಪ್ಲೆಕ್ಸ್, ಥಿಯೇಟರ್, ಹೋಟೆಲ್ ಬಳಕೆ: ₹5.95ರಿಂದ ₹6.90ಕ್ಕೆ ಏರಿಕೆ

ದರ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಲಿದೆ ಎಂದು ಕೈಗಾರಿಕಾ ವಲಯ ಎಚ್ಚರಿಸಿದೆ. ಸರ್ಕಾರ ಮತ್ತು ಆಯೋಗವು ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ.

ಹಾಸನದಲ್ಲಿ ಘೋರ ದುರಂತ: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ – ವಿದ್ಯಾರ್ಥಿಗಳ ಎದುರೇ ಶಿಕ್ಷಕ ಸಾವು!

ಹಾಸನ: ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟ ದುರ್ಘಟನೆ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ. ಅವರು ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪಾಠ ಹೇಳುತ್ತಿದ್ದ ವೇಳೆ ಸತೀಶ್ ಏಕಾಏಕಿ ಅಸ್ವಸ್ಥಗೊಂಡು ತರಗತಿ ಕೊಠಡಿಯಲ್ಲೇ ಕುಸಿದು ಬಿದ್ದಿದ್ದಾರೆ.

ಘಟನೆ ಗಮನಿಸಿದ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ತಕ್ಷಣವೇ ನೆರವಿಗೆ ಧಾವಿಸಿ ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ತೀವ್ರ ಹೃದಯಾಘಾತದಿಂದಾಗಿ ಅವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಶಿಕ್ಷಕರ ಅಕಾಲಿಕ ನಿಧನದಿಂದ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ.

ಬೇಡಿದ ವರ ಕೊಡುವ  “ಮುಳ್ಳ ಅಗಸಿ”ಯ ಕಾಮ-ರತಿ ಮೂರ್ತಿ ಪ್ರತಿಷ್ಠಾಪನೆ: 173ನೇ ವರ್ಷದ ಧಾರ್ಮಿಕ ಸಂಭ್ರಮ

0

ಗದಗ: ನಗರದ ಬಸವೇಶ್ವರ ದೇವಸ್ಥಾನದಲ್ಲಿ “ ಬೇಡಿದ ವರ ಕೊಡುವ ಕಾಮಣ್ಣ” ಎಂದೇ ಪ್ರಸಿದ್ಧಿಯಾಗಿರುವ ಮುಳ್ಳ ಅಗಸಿಯ 173ನೇ ವರ್ಷದ ಕಾಮ–ರತಿ ಮೂರ್ತಿ ಪ್ರತಿಷ್ಠಾಪನೆ ಮಂಗಳವಾರ ಭಕ್ತಿ ಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಪ್ರತಿಷ್ಠಾಪನೆ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನ ಆವರಣದಲ್ಲಿ ಭಕ್ತರ ಸಂಭ್ರಮ ಮನೆಮಾಡಿತ್ತು. ಹರ್ಷೋದ್ಗಾರಗಳ ನಡುವೆ ಕಾಮ–ರತಿ ಮೂರ್ತಿಗಳನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ವಿವಿಧ ವಾದ್ಯಗೋಷ್ಠಿಗಳ ನಾದ, ಭಕ್ತರ ಜಯಘೋಷಗಳ ಮಧ್ಯೆ ಮೂರ್ತಿಗಳು ದೇವಸ್ಥಾನಕ್ಕೆ ಆಗಮಿಸಿದವು.

“ಬೇಡಿದ ವರ ಕೊಡುವ ಕಾಮಣ್ಣ” ಎಂಬ ಖ್ಯಾತಿಗೆ ಪಾತ್ರವಾಗಿರುವ ಮುಳ್ಳ ಅಗಸಿಯ ಕಾಮಣ್ಣನಿಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಸ್ಥಳೀಯರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ಹರಕೆ ಸಲ್ಲಿಸಿದರು.

ಮೂರ್ತಿಗಳಿಗೆ ವಿಭಿನ್ನ ಬಗೆಯ ಹೂಗಳಿಂದ ತೋರಣ ಅಲಂಕಾರ, ದೀಪಾಲಂಕಾರ ಹಾಗೂ ಆಕರ್ಷಕ ವಸ್ತ್ರಾಭರಣಗಳಿಂದ ವಿಶೇಷ ಸಿಂಗಾರ ಮಾಡಲಾಗಿತ್ತು. ವೇದ ಮಂತ್ರೋಚ್ಚಾರಣೆಯ ಮಧ್ಯೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಮತ್ತು ವಿವಿಧ ನಿವೇದನಗಳನ್ನು ಅರ್ಪಿಸಿ ಪ್ರತಿಷ್ಠಾಪನೆ ವಿಧಿವಿಧಾನಗಳು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಿಂಗಪ್ಪ ಪಡಗದ, ವೀರನಗೌಡ ಮರಿಗೌಡರ, ತೋಟಯ್ಯ ವಿಭೂತಿಮಠ, ಸಿದ್ದರಾಮಪ್ಪ ಹುಂಬಿ, ಮಂಜುನಾಥ ಲಕ್ಕುಂಡಿ, ಎಫ್.ವಿ. ಮರಿಗೌಡ್ರ, ಪ್ರಶಾಂತ ಶಾಬಾದಿಮಠ, ಸೋಮಪ್ಪ ಪುರದ, ಶಂಕರ ಕರಬಿಷ್ಠಿ, ರಮೇಶ ಸಂಕಣ್ಣವರ, ಸಿದ್ಧಲಿಂಗೇಶ ಸಂಗನಾಳ, ಪ್ರಶಾಂತ ಮುದೇಗೊಣ್ಣವರ,

ಗಂಗಾಧರ ಕೊಪ್ಪದ, ಸಿದ್ಧಲಿಂಗೇಶ ಗಾಣಿಗೇರ, ಸದಾಶಿವಯ್ಯ ಹಿರೇಮಠ, ಸಿದ್ದಲಿಂಗಗೌಡ ಉಮಚಗಿ, ಪ್ರಭು ಕಲಬಂಡಿ, ಬಸವರಾಜ ಕಬನೂರ, ಶಿವಾನಂದ ಹೂಗಾರ, ಮಂಜುನಾಥ ಲಕ್ಷಟ್ಟಿ, ಪ್ರಶಾಂತ ನೆರೇಗಲ್ಲ, ಮಂಜು ಪುರದ, ವೀರೇಶ ಸಾಲಿಮಠ, ಕಳಕಪ್ಪ ನವಲಗುಂದ, ರಾಚಪ್ಪ ಲಕ್ಕುಂಡಿ, ಈರಣ್ಣ ಗಡಗಿ, ರಾಚಪ್ಪ ಹುಂಬಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

error: Content is protected !!