Home Blog

ಕರ್ನಾಟಕದ ಈ ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ; ಇಂದಿನ ಹವಾಮಾನ ವರದಿ ಹೀಗಿದೆ!

0

ಬೆಂಗಳೂರು:- ಇಂದು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಹಲವು ದಿನಗಳಿಂದ ಶುಷ್ಕ ವಾತಾವರಣವೇ ಆವರಿಸಿದ್ದು, ಇಂದು ಕೆಲ ಪ್ರದೇಶಗಳಲ್ಲಿ ಮಳೆರಾಯನ ಆಗಮನವಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆ 5 ಜಿಲ್ಲೆಗಳಿಗೆ ಇಲಾಖೆ ಯೆಲ್ಲೋ ಅಲರ್ಟ್​ ಸೂಚಿಸಿದೆ.

ದಕ್ಷಿಣ ಕನ್ನಡ , ಚಾಮರಾಜನಗರ, ಕೊಡಗು, ಮೈಸೂರು, ಮಂಡ್ಯದಲ್ಲಿ ಗುಡಗು ಸಹಿತ ಸಾಧಾರಣ ಮಳೆಯಾಗಬಹುದೆಂದು ಇಲಾಖೆ ತಿಳಿಸಿದೆ. ಚಾಮರಾಜನಗರ, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ರಾತ್ರಿ ಸಮಯದಲ್ಲಿ 30 ರಿಂದ 40 kmph ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಸ್ತೆಬದಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು

0

ಚಿತ್ರದುರ್ಗ:  ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಅಪಘಾತ ಇಬ್ಬರ ಜೀವ ಕಸಿದುಕೊಂಡಿದೆ. ರಸ್ತೆಬದಿ ನಿಂತಿದ್ದವರ ಮೇಲೆ ಅಪರಿಚಿತ ವಾಹನ ಹರಿದು ಹೋಗಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

ಕೆಟ್ಟು ನಿಂತಿದ್ದ ಇನ್ನೋವಾ ಕಾರು ರಿಪೇರಿ ಮಾಡುವ ಸಲುವಾಗಿ ನಾಲ್ವರು ರಸ್ತೆಬದಿ ನಿಂತಿದ್ದರು. ಅದೇ ಸಮಯದಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ತಕ್ಷಣವೇ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.

ಗಾಯಗೊಂಡ ಇಬ್ಬರನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಕ್ರಮಗಳ ಕೊರತೆ ಹಾಗೂ ವೇಗ ನಿಯಂತ್ರಣದ ಲೋಪವೇ ಈ ದುರಂತಕ್ಕೆ ಕಾರಣವೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಜೈಲಿನಿಂದಲೇ ಮತ್ತೊಂದು ಆರೋಪ! ಕಮಲಾಕರ್ ಭಟ್ ವಿರುದ್ಧ ಪೋಕ್ಸೊ ಕೇಸ್ – ಶಿವಮೊಗ್ಗಕ್ಕೆ ಸ್ಥಳಾಂತರ ಸಾಧ್ಯತೆ

0

ಕಾರವಾರ/ಶಿವಮೊಗ್ಗ: ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜ್ಯೋತಿಷಿ ಕಮಲಾಕರ್‌ ಭಟ್ ವಿರುದ್ಧ ಇದೀಗ ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಹೊರಬಿದ್ದಿದೆ. ಪೋಕ್ಸೊ ಕಾಯ್ದೆಯಡಿ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹೇಶ್ ನಾಯ್ಕ್ ಪುತ್ರಿ ಸಿದ್ದಾಪುರ ಠಾಣೆಗೆ ದೂರು ಸಲ್ಲಿಸಿದ್ದು, ಬಳಿಕ ಪ್ರಕರಣವನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದೆ. ಬಾಲಕಿ ನೀಡಿರುವ ಹೇಳಿಕೆಯಲ್ಲಿ, ಶಿವಮೊಗ್ಗದಲ್ಲಿರುವ ಕಮಲಾಕರ್ ಭಟ್ ನಿವಾಸದಲ್ಲಿಯೇ ತಾಯಿ ಸುಚಿತ್ರಾ ಗೈರಾಗಿದ್ದ ಸಂದರ್ಭದಲ್ಲಿ ದೌರ್ಜನ್ಯ ನಡೆದಿರುವುದಾಗಿ ಉಲ್ಲೇಖಿಸಲಾಗಿದೆ.

ಹತ್ಯೆ ಪ್ರಕರಣದಲ್ಲಿ ಈಗಾಗಲೇ ಮೂರನೇ ಆರೋಪಿಯಾಗಿರುವ ಕಮಲಾಕರ್ ಭಟ್ ಕಾರವಾರ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ತನಿಖೆಗಾಗಿ ಸಿದ್ದಾಪುರ ಠಾಣೆ ಪೊಲೀಸರು ಅವರನ್ನು ಕರೆತಂದಿದ್ದರು. ಇದೀಗ ಪೋಕ್ಸೊ ಪ್ರಕರಣ ದಾಖಲಾಗಿರುವ ಹಿನ್ನೆಲೆ ಅವರನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಒಂದೇ ಸಮಯದಲ್ಲಿ ಹತ್ಯೆ ಹಾಗೂ ಪೋಕ್ಸೊ ಆರೋಪಗಳನ್ನು ಎದುರಿಸುತ್ತಿರುವ ಕಮಲಾಕರ್ ಭಟ್ ಪ್ರಕರಣ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

11 ಗಂಟೆಗಳ ವಿಚಾರಣೆ ಬಳಿಕ ನ್ಯಾಯಾಂಗ ಹಾದಿ: ರಾಜಕೀಯ ಕೇಂದ್ರದ ಕದನವಾದ ಲಮಾಣಿ ಟ್ರ್ಯಾಪ್ ಪ್ರಕರಣ

0

ಗದಗ: ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧದ ಟ್ರ್ಯಾಪ್ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಪ್ರತಿಕ್ರಿಯೆ ಹುಟ್ಟಿಸಿದೆ. ಕಮಿಷನ್ ಬೇಡಿಕೆ ಆರೋಪದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಪೂರ್ವಯೋಜಿತ ಕಾರ್ಯಾಚರಣೆ ನಡೆಸಿ, ಹಣ ಸ್ವೀಕಾರದ ವೇಳೆ ಟ್ರ್ಯಾಪ್ ಮಾಡಿದ್ದಾರೆ.

ಲಿಖಿತ ದೂರು ಆಧರಿಸಿ ರೂಪಿಸಿದ ಟ್ರ್ಯಾಪ್‌ನಲ್ಲಿ ಆರೋಪ ಸಂಬಂಧಿತ ಹಣ ಹಾಗೂ ದಾಖಲೆಗಳನ್ನು ಸ್ಥಳದಲ್ಲೇ ವಶಪಡಿಸಿಕೊಳ್ಳಲಾಗಿದೆ. ಹಣದ ಹಾದಿ, ಸಂಭಾಷಣೆ ಮತ್ತು ಮಧ್ಯವರ್ತಿಗಳ ಪಾತ್ರ ಕುರಿತು ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ.

ಮಧ್ಯಾಹ್ನ 2ರಿಂದ ರಾತ್ರಿ 1.30ರವರೆಗೆ ನಡೆದ ವಿಚಾರಣೆ ವೇಳೆ ಶಾಸಕ ಲಮಾಣಿ ಹಾಗೂ ಅವರ ಪಿಎಗಳಾದ ಮಂಜುನಾಥ್ ವಾಲ್ಮಿಕಿ ಮತ್ತು ಗುರು ಲಮಾಣಿ ಅವರನ್ನು ಪ್ರತ್ಯೇಕವಾಗಿ ಪ್ರಶ್ನಿಸಲಾಗಿದೆ. ಟೆಂಡರ್ ಅನುಮೋದನೆ, ಕಾಮಗಾರಿ ಮಂಜೂರು, ಹಣದ ವ್ಯವಹಾರಗಳ ಕುರಿತು ವಿವರವಾದ ಪರಿಶೀಲನೆ ನಡೆದಿದೆ.

ವಿಚಾರಣೆ ಬಳಿಕ ಶಾಸಕರನ್ನು ಕರೆದೊಯ್ಯುವ ವೇಳೆ ಕಾರ್ಯಕರ್ತರು ವಾಹನ ತಡೆಯಲು ಯತ್ನಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತು. ಪೊಲೀಸರು ಬಿಗಿ ಭದ್ರತೆಯಲ್ಲಿ ಸ್ಥಳದಿಂದ ಕರೆದೊಯ್ದರು.

ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಸ್ಟಡಿ ಕೋರಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಶಾಸಕರ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದು, ಫೊರೆನ್ಸಿಕ್ ಪರೀಕ್ಷೆ ಮುಂದಿನ ಪ್ರಮುಖ ಹಂತವಾಗಲಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳು ರಾಜ್ಯ ರಾಜಕೀಯದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವ ಸಾಧ್ಯತೆ ಇದೆ.

ಜನತಾ ದರ್ಶನ ಬೋಗಸ್ ದರ್ಶನವಾಗದಿರಲಿ: ಶಿವಾನಂದ ತಮ್ಮಣ್ಣವರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲರ ಅಧ್ಯಕ್ಷತೆಯಲ್ಲಿ ಫೆ. 27ರಂದು ಜಿಲ್ಲಾ ಮಟ್ಟದ ಜನತಾ ದರ್ಶನ ನಡೆಯಲಿದೆ. ಆದರೆ ಇದು ಕಾಟಾಚಾರದ ಜನತಾ ದರ್ಶನ ಆಗದೆ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಸಭೆಯಾಗಲಿ ಎಂದು ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಶಿವಾನಂದ ತಮ್ಮಣ್ಣವರ ಆಶಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2024ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ನೀಡಿದ ಮನವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಬಾರಿ ನಡೆಯುವ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು ಯಾವ ರೀತಿ ಕಾನೂನಿಗೆ ಗೌರವ ನೀಡುತ್ತಾರೆಂದು ಕಾದು ನೋಡಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.

ಪಂಚ ಗ್ಯಾರಂಟಿ ಬಡವರ ಬದುಕಿನ ಬೆಳಕು: ಪ್ರೊ. ಸಂಗಮೇಶ ಹಾದಿಮನಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಪಾಲಿನ ಸಂಜೀವಿನಿ, ಬಡ ಜನರ ಆಶಾಕಿರಣವಾಗಿದೆ ಎಂದು ಗದಗ ತಾಲೂಕಾ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಪ್ರೊ. ಸಂಗಮೇಶ ಹಾದಿಮನಿ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನುಡಿದಂತೆ ನಡೆದ ಸರಕಾರ ಇದಾಗಿದೆ. ಗೃಹಲಕ್ಷ್ಮೀ ಯೋಜನೆ, ಯುವನಿಧಿ ಯೋಜನೆ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆಗಳ ಮೂಲಕ ಜನರ ವಿಶ್ವಾಸ ಗಳಿಸುವುದರ ಜೊತೆಗೆ ನಾವು ನಿಮ್ಮ ನೋವಿನಲ್ಲೂ ಜೊತೆಗಿದ್ದೇವೆ ಎಂಬ ಭರವಸೆಯೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಆತ್ಮವಿಶ್ವಾಸದಿಂದ ಬದುಕಲು ಸಹಕಾರಿಯಾಗಿದೆ ಎಂದು ಫಲಾನುಭವಿಗಳು ಹೇಳುವಾಗ ಅವರ ಮುಖದಲ್ಲಿನ ಮಂದಹಾಸ ಆತ್ಮತೃಪ್ತಿ ನೀಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಚನಗಳಿಗೆ ಕಾನೂನಾತ್ಮಕ ಸಶಕ್ತೀಕರಣಕ್ಕೆ ಸರ್ಕಾರದ ಚಿಂತನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಬಸವಾದಿ ಶರಣರ ವಚನಗಳು ಸಾರ್ವತ್ರಿಕ ಮನ್ನಣೆ ಪಡೆದಿರುವ ಮೌಲ್ಯಗಳಾಗಿದ್ದು, ಸಮಾಜದಲ್ಲಿ ಇವುಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುವ ನಿಟ್ಟಿನಲ್ಲಿ ವಚನಗಳಿಗೆ ಕಾನೂನಿನ ಬಲ ತಂದು ಅವುಗಳನ್ನು ಸಶಕ್ತೀಕರಣಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ನುಡಿದರು.

ಅವರು ಶನಿವಾರ ನಗರದ ತೋಂಟದಾರ್ಯ ಮಠದಲ್ಲಿ ಕನ್ನಡದ ಜಗದ್ಗುರುಗಳು ಹಾಗೂ ಬಸವತತ್ವದ ದಂಡನಾಯಕರಾಗಿದ್ದ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 77ನೇ ಜಯಂತಿ ಅಂಗವಾಗಿ ಭಾವೈಕ್ಯತಾ ದಿನಾಚರಣೆ, ಗ್ರಂಥಗಳ ಬಿಡುಗಡೆ, ವಚನ ಪಾಠಶಾಲೆ ಉದ್ಘಾಟನೆ ಮತ್ತು ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ನಡುವೆ ಇದ್ದರೆ ರಾಜ್ಯ ಸರ್ಕಾರ ವಚನಗಳಿಗೆ ಕಾನೂನಿನ ಬಲ ತುಂಬಲು ಹೊರಟಿರುವ ನಡೆಯನ್ನು ಖಂಡಿತ ಶ್ಲಾಘಿಸುತ್ತಿದ್ದರು. ಬಸವತತ್ವಗಳ ಕಟ್ಟುನಿಟ್ಟಿನ ಪರಿಪಾಲಕರಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ತೋಂಟದಾರ್ಯ ಮಠದ ಜಾತ್ರೆಗೆ ಹೊಸ ಭಾಷ್ಯ ಬರೆದು ಜಾತ್ರೆಗಳನ್ನು ಜನೋಪಯೋಗಿ ಹಾಗೂ ಸಮಾಜಮುಖಿಯಾಗಿ ಆಚರಿಸುವ ಪರಂಪರೆ ಹಾಕಿಕೊಟ್ಟರು. ಪುಸ್ತಕಗಳನ್ನು ಪ್ರಕಟಿಸುವ, ಹಂಚುವ ಮುಖೇನ ಕೇವಲ ಧಾರ್ಮಿಕತೆಗೆ ಸೀಮಿತವಾಗಿದ್ದ ಜಾತ್ರೆಗಳನ್ನು ಸಾಂಸ್ಕೃತಿಕವಾಗಿ ಮಾರ್ಪಡಿಸಿದರು. ಇಂದಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಹ ಅದೇ ಪರಂಪರೆಯನ್ನು ಮುಂದುವರೆಸಿದ್ದು, ಇಂದು ಹೆಸರಾಂತ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕುರಿತ ಗ್ರಂಥಗಳನ್ನು ಬಿಡುಗಡೆ ಮಾಡುವ ಭಾಗ್ಯ ನನಗೆ ದೊರೆತಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಮಾತನಾಡಿ, ಸಿದ್ಧಲಿಂಗ ಶ್ರೀಗಳು ತಮ್ಮ ಸಾಧನೆಗಳೊಂದಿಗೆ ಅಜರಾಮರರಾಗಿದ್ದಾರೆ. ಶ್ರೀಮಠದ ಪೀಠಕ್ಕೆ ಬಂದಾಗಿನಿಂದ ಅವರು ಲಿಂಗೈಕ್ಯರಾಗುವವರೆಗೆ ಅವರ ಸಾಧನೆಗಳು ಅಪರಿಮಿತವಾಗಿದ್ದು, ನೂರಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದ್ದಾರೆ. ಮುಖ್ಯವಾಗಿ ಬಸವತತ್ವವನ್ನು ವಿಶ್ವದಾದ್ಯಂತ ಪಸರಿಸಿದ ಮಹಾನ್ ಗರಿಮೆ ಶ್ರೀಗಳಿಗೆ ಇದೆ. ಸಿದ್ಧಲಿಂಗ ಶ್ರೀಗಳು ಕೋಟಿಗೊಬ್ಬರಾಗಿದ್ದು, ಇಂಥ ಮಹಾತ್ಮರ ಒಡನಾಟ ದೊರೆತಿದ್ದು ನಮ್ಮ ಸೌಭಾಗ್ಯ ಎಂದರು.

ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕನ್ನಡದ ಜಗದ್ಗುರುಗಳೆಂದೇ ಖ್ಯಾತರಾಗಿದ್ದ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ರೈತಪ್ರೇಮಿಗಳು ಹಾಗೂ ಜಾನಪದ, ಕಲೆ, ಸಂಗೀತ-ಸಾಹಿತ್ಯದ ಪ್ರೋತ್ಸಾಹಕರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ನನ್ನ ಕಾರ್ಯಗಳನ್ನು ಮೆಚ್ಚಿ ಮನಸಾರೆ ಅಭಿನಂದಿಸಿ ಆಶೀರ್ವದಿಸುತ್ತಿದ್ದ ಶ್ರೀಗಳ ಜವಾರಿ ಭಾಷೆ, ಗಟ್ಟಿ ಧ್ವನಿಯನ್ನು ನಾನು ಮರೆಯಲು ಸಾಧ್ಯವಿಲ್ಲ. ಅವರಿಂದ ಅನೇಕ ನುಡಿಮುತ್ತುಗಳನ್ನು, ಭಾಷೆಯ ಪ್ರಯೋಗವನ್ನು ನಾನು ಕಲಿತಿದ್ದೇನೆ ಎಂದರು.

ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ವಚನ ನೃತ್ಯ ಜರುಗಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಡಾ. ಎಂ.ಎ. ಕಲಬುರ್ಗಿ ಅಧ್ಯಯನ ಸಂಸ್ಥೆಯಿನದ ಪ್ರಕಟಗೊಂಡ ‘ತೋಂಟದಾರ್ಯ ಸಂಸ್ಥಾನಮಠ ಸಾಹಿತ್ಯ ಪ್ರಕಟಣೆಗಳು; ತಾತ್ವಿಕ ಸ್ವರೂಪ’, ‘ಮಾಯದಂಥಾ ಬೆಳದಿಂಗಳ’, ‘ಚಲವಾದಿ ಗೌರಮ್ಮನ ಕಥೆಗಳು’ ಗ್ರಂಥಗಳು ಲೋಕಾರ್ಪಣೆಗೊಂಡವು. ತೋಂಟದಾರ್ಯ ಮಠದ `ವಚನ ಪಾಠಶಾಲೆ’ಯ ಉದ್ಘಾಟನೆ ನೆರವೇರಿತು.

ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೈರನಹಟ್ಟಿ ಮಠದ ಶಾಂತಲಿಂಗ ಮಹಾಸ್ವಾಮಿಗಳು, ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು ಸಮ್ಮುಖವಹಿಸಿದ್ದರು.

ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಮಾಜಿ ಸಂಸದರಾದ ಐ.ಜಿ. ಸನದಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷರಾದ ವಿನಾಯಕ ಮಾನ್ವಿ, ಶಶಿ ಸಾಲಿ, ಹೇಮಾ ಪಟ್ಟಣಶೆಟ್ಟಿ, ಗ್ರಂಥಗಳ ಲೇಖಕರಾದ ಶಶಿಧರ ತೋಡಕರ, ವಿದ್ಯಾವತಿ ಅಕ್ಕಿ, ವೆಂಕಟಾಪೂರ ಶರಣರು ಮುಂತಾದವರು ಹಾಜರಿದ್ದರು.

ಹಿರಿಯ ಸಾಹಿತಿಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಸಿದ್ಧಲಿಂಗ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಸಿದ್ಧರಾಮ, ಇಂದಿನ ನಮ್ಮ ಪೂಜ್ಯರ ಹೆಸರು ಸಿದ್ಧರಾಮ ಮಹಾಸ್ವಾಮಿಗಳು, ಹೀಗೆ ಲಿಂಗೈಕ್ಯ ಗುರುಗಳ ಪ್ರತಿರೂಪವೇ ಇಂದಿನ ಶ್ರೀಗಳಾಗಿದ್ದಾರೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಅನನ್ಯ ಪ್ರೀತಿ ಹಾಗೂ ಕೃಪಾಶೀರ್ವಾದಕ್ಕೆ ನಾನು ಪಾತ್ರನಾಗಿದ್ದೇನೆ. ಅವರ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದಲ್ಲಿ ನನ್ನಿಂದ ‘ಕಲ್ಯಾಣದ ಹಾದಿ’ ಗ್ರಂಥವನ್ನು ಬರೆಯಿಸಿದರು. ಇಂದಿನ ಅವರ ಜಯಂತಿಯಲ್ಲಿ ನನ್ನ ಕುರಿತು ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಸೌಭಾಗ್ಯವಾಗಿದೆ ಎಂದರು.

ಧರ್ಮಸ್ಥಳ, ಮಂಗಳೂರಿಗೆ ನೇರ ಬಸ್ ಆರಂಭ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಶುಕ್ರವಾರ ಗದಗದಿಂದ ಧರ್ಮಸ್ಥಳ ಹಾಗೂ ಮಂಗಳೂರು ನಗರಕ್ಕೆ ನೇರ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು.

ಗದಗ ಮಾರ್ಗವಾಗಿ ಹೊರಡುವ ಬಸ್ ಲಕ್ಷ್ಮೇಶ್ವರ, ಹಾವೇರಿ, ರಾಣೇಬೆನ್ನೂರು, ಹರಿಹರ, ಶಿವಮೊಗ್ಗ, ಕಡೂರು, ಉಡುಪಿ, ಚಿಕ್ಕಮಗಳೂರು, ಉಜಿರೆ, ಧರ್ಮಸ್ಥಳಕ್ಕೆ ತಲುಪುವ 2 ಬಸ್‌ಗಳು ಪ್ರತಿದಿನ ಸಂಜೆ 7 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡಲಿದೆ. ಬಸ್‌ನ ಪ್ರಯಾಣದ ದರ 455 ರೂಪಾಯಿ ಇರುತ್ತದೆ.

ಗದಗ ಮಾರ್ಗವಾಗಿ ಹೊರಡುವ ಬಸ್ ಹುಬ್ಬಳ್ಳಿ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿ, ಮಂಗಳೂರಿಗೆ ತಲುಪುವ 2 ಬಸ್‌ಗಳು ಪ್ರತಿದಿನ ಬೆಳಗ್ಗೆ 8 ಗಂಟೆಗೆ ಗದಗ ಬಸ್ ನಿಲ್ದಾಣದಿಂದ ಹೊರಡಲಿದ್ದು, ಬಸ್‌ನ ಪ್ರಯಾಣದ ದರ 472 ರೂಪಾಯಿ ಇರುತ್ತದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗ್ಯಾರಂಟಿ ಸಮಿತಿಯ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಗ್ಯಾರಂಟಿ ಸಮಿತಿ ಸದಸ್ಯರಾದ ಕೆ.ಎಚ್. ಪಾಟೀಲ್, ಮೀನಾಕ್ಷಿ ಬೆನಕಣ್ಣವರ, ಸಾವಿತ್ರಿ ಹೂಗಾರ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಪರಶುರಾಮ್ ವೈ. ಗಡೆದ, ವಿಭಾಗೀಯ ತಾಂತ್ರಿಕ ಶಿಲ್ಪಿ ಚಂದ್ರಶೇಖರ ಇಟಗಿ, ವಿಭಾಗೀಯ ಸಂಚಾರಾಧಿಕಾರಿ ಪಿ.ವಿ. ಮೆತ್ರಿ, ಗದಗ ಡಿಪೋ ಮ್ಯಾನೇಜರ್ ಬಿ.ಎಲ್. ಗೆನ್ನೂರು, ಬೆಟಗೇರಿ ಡಿಪೋ ಮ್ಯಾನೇಜರ್ ರೋಹಿಣಿ ಆರ್.ಬಿ, ನಿಲ್ದಾಣಾಧಿಕಾರಿ ಎಂ.ಬಿ. ತಿಮ್ಮನಗೌಡ್ರು, ಸಾರಿಗೆ ನಿಯಂತ್ರಕರಾದ ಎಸ್.ಎಫ್. ಸಂಗಣ್ಣನವರ, ಎ.ಎಸ್. ಅಂಗಡಿ, ಬಿ.ಎನ್. ಪಾಟೀಲ್, ಎಸ್.ಎನ್. ಕಡೆಮನಿ ಉಪಸ್ಥಿತರಿದ್ದರು.

ಡಾ. ಪದ್ಮಾರಿಗೆ `ಕನ್ನಡದ ಸೇವಾರತ್ನ’ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಾರಾಷ್ಟ್ರ ಮಂಡಳಿ, ಎನ್.ಎಂ.ಆರ್. ಸ್ಕ್ಯಾನ್ ಸೆಂಟರ್ ಬಿಲ್ಡಿಂಗ್, ಕೋರ್ಟ್ ಸರ್ಕಲ್, ಕ್ಲಬ್ ರೋಡ್ ಹುಬ್ಬಳ್ಳಿಯ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್, ನಕ್ಷತ್ರ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ ಗದುಗಿನ ಕಲಾವಿದೆ ಡಾ. ಪದ್ಮಾ ಜೆ.ಕಬಾಡಿ ಅವರ ಸಾಹಿತ್ಯ, ಸಾಂಸ್ಕೃತಿಕ ಸೇವೆಗಳನ್ನು ಪರಿಗಣಿಸಿ ಫೆ. 22ರಂದು ರಾಜ್ಯ ಮಟ್ಟದ `ಕನ್ನಡದ ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ನಕ್ಷತ್ರ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಪುಷ್ಪ ಹಿರೇಮಠ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಬಾಲಾಜಿ ಆಸ್ಪತ್ರೆಯಲ್ಲಿ ಲೋಕಾ ಟ್ರ‍್ಯಾಪ್

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಸಕ ಡಾ. ಚಂದ್ರು ಲಮಾಣಿ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲೇ ಗುತ್ತಿಗೆದಾರ ವಿಜಯ ಪೂಜಾರ ಅವರು ಶಾಸಕರ ಸಮ್ಮುಖದಲ್ಲೇ ಅವರ ಆಪ್ತ ಸಹಾಯಕ ಮಂಜು ವಾಲ್ಮೀಕಿಗೆ 5 ಲಕ್ಷ ರೂಪಾಯಿ ನಗದನ್ನು ನೀಡುವುದನ್ನು ಮೊದಲೇ ಹೊಂಚು ಹಾಕಿ ಕುಳಿತಿದ್ದ ಧಾರವಾಡ ಲೋಕಾಯುಕ್ತ ಎಸ್.ಪಿ. ಸಿದ್ದಲಿಂಗಪ್ಪ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು.

ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಗಾಬರಿಗೊಂಡ ಸಹಾಯಕ ಮಂಜು ವಾಲ್ಮೀಕಿ ತನ್ನ ಬಳಿಯಿದ್ದ ಹಣದ ಕಟ್ಟೆಯನ್ನು ಆಸ್ಪತ್ರೆಯ ಹಿಂಭಾಗದ ರಸ್ತೆ ಬದಿ ಎಸೆದು ಸ್ಥಳದಿಂದ ಓಡಿಹೋಗಲು ಯತ್ನಿಸಿದಾಗ ಲೋಕಾಯುಕ್ತ ಸಿಬ್ಬಂದಿ ಆತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಎಸೆಯಲ್ಪಟ್ಟ ನಗದನ್ನು ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ರಾತ್ರಿ 9 ಗಂಟೆಯಾದರೂ ಲೋಕಾಯುಕ್ತರು ಶಾಸಕರ ವಿಚಾರಣೆ ಮುಂದುವರೆಸಿದ್ದರು. ಆಸ್ಪತ್ರೆಯ ಮುಂದೆ ಕಾರ್ಯಕರ್ತರ ಹೈಡ್ರಾಮಾ ನಡೆದೇ ಇತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೇಚಿಗೆ ಸಿಲುಕಿದ್ದರು.

error: Content is protected !!