ಬೆಂಗಳೂರು: ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಆಗಿದ್ದರೂ ಜನರಿಗೆ ನೀಡಿದ ಮಾತಿನಂತೆ ಅವನ್ನು ಈಡೇರಿಸಲೇಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಒತ್ತಡ ಉಂಟಾಗಿದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, “ಗ್ಯಾರಂಟಿ ನಮ್ಮ ವಾಗ್ದಾನ. ಕರ್ನಾಟಕದ ಜನತೆಗೆ ನೀಡಿದ ಭರವಸೆ. ಆ ಮಾತಿನಂತೆ ನಡೆದುಕೊಳ್ಳಬೇಕು” ಎಂದು ಹೇಳಿದರು.
ಯಾರು ಚುನಾವಣೆಯನ್ನು ಎದುರಿಸಿದ್ದಾರೋ, ಅವರು ಜನರಿಗೆ ನಂಬಿಕೆ ನೀಡಿದ್ದಾರೆ. ಹೊರೆ ಆದರೂ ಆಗಲಿ, ಏನೇ ಆಗಲಿ ಕೊಟ್ಟ ಮಾತನ್ನು ಈಡೇರಿಸಲೇಬೇಕು. ಹೊರೆ ಆಗುತ್ತದೆ ಎನ್ನುವುದಾದರೆ ಗ್ಯಾರಂಟಿ ಘೋಷಿಸುವ ಮೊದಲು, ಮಾತು ಕೊಡುವ ಮೊದಲು ಚಿಂತನೆ ಮಾಡಬೇಕಾಗಿತ್ತು. ಈಗ ಮಾತು ಕೊಟ್ಟಿರುವುದರಿಂದ ಅದರಂತೆ ನಡೆದುಕೊಳ್ಳಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಐದು ವರ್ಷಗಳ ಕಾಲ ಯಾವುದೇ ಕಷ್ಟ ಎದುರಾದರೂ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ, ಗ್ಯಾರಂಟಿ ಯೋಜನೆಗಳನ್ನು ಸಿರಿವಂತರು ಪಡೆಯುತ್ತಿರುವುದನ್ನು ಅವರು ಆಕ್ಷೇಪಿಸಿದರು. “ಗ್ಯಾರಂಟಿ ಯೋಜನೆಗಳು ಅಸಹಾಯಕರು, ಜೀವನ ಸಾಗಿಸಲು ಕಷ್ಟಪಡುವವರು ಹಾಗೂ ಬದುಕಿನಲ್ಲಿ ಹೋರಾಟ ಮಾಡುತ್ತಿರುವವರಿಗಾಗಿ. ಸಿರಿವಂತರು ಈ ಸೌಲಭ್ಯ ಪಡೆಯುವುದು ಸರಿಯಲ್ಲ” ಎಂದು ಕಿವಿಮಾತು ಹೇಳಿದರು.

