Home Blog

ಹಾಸನ ಹಿಮ್ಸ್‌ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ

0

ಹಾಸನ: ಹೆರಿಗೆ ಬಳಿಕ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ (30) ಎಂಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯ ಹಠಾತ್ ಬಿಗಡಾಯಿಸಿ ಮೃತಪಟ್ಟಿದ್ದಾರೆ.

ಶನಿವಾರ ಮಧ್ಯರಾತ್ರಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಶೃತಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಹೆರಿಗೆ ಯಶಸ್ವಿಯಾಗಿ ನಡೆದಿತ್ತು. ಆದರೆ ನಂತರ ಶೃತಿ ಕೋಮಾಗೆ ಜಾರಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ವೈದ್ಯರು ತಿಳಿಸಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಪತಿ ಪುನೀತ್ ಅವರು ತಕ್ಷಣ ಕರೆದೊಯ್ದರೂ, ಮಾರ್ಗ ಮಧ್ಯೆ ಶೃತಿ ಕೊನೆಯುಸಿರೆಳೆದಿದ್ದಾರೆ.

ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಶೃತಿಗೆ ಈಗಾಗಲೇ ಐದು ವರ್ಷದ ಗಂಡು ಮಗು ಇದೆ. ಹೆಣ್ಣು ಮಗು ಜನಿಸಿದ್ದ ಸಂತಸ ಕ್ಷಣದಲ್ಲೇ ದುಃಖವಾಗಿ ಬದಲಾಗಿದೆ. ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆ ಮುಂದೆ ಆಕ್ರೋಶ ವ್ಯಕ್ತಪಡಿಸಿ, “ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ, ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ವೈದ್ಯರಾದ ಸುಮಾ ಹೆರಿಗೆ ಮಾಡಿಸಿ, ದಿಢೀರ್ ರಕ್ತ ಬೇಕೆಂದು ತಿಳಿಸಿದರು. ಎಲ್ಲ ವ್ಯವಸ್ಥೆ ಮಾಡಿದರೂ ತಡವಾಗಿ ಕ್ರಮ ಕೈಗೊಂಡರು ಎಂದು ಪತಿ ದೂರಿದ್ದಾರೆ.

ಆದರೆ ಆಸ್ಪತ್ರೆ ಆಡಳಿತ ಮಂಡಳಿ ಆರೋಪವನ್ನು ತಳ್ಳಿಹಾಕಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಹಿಮ್ಸ್ ಶಸ್ತ್ರ ಚಿಕಿತ್ಸಕರು, “ರಾತ್ರಿ ವೇಳೆ ಬಂದರೂ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಯಾವುದೇ ನಿರ್ಲಕ್ಷ್ಯ ನಡೆದಿಲ್ಲ. ಮಹಿಳೆಗೆ ಹಠಾತ್ ಹೃದಯ ಸ್ಥಂಭನ ಉಂಟಾಗಿ ಕೋಮಾಗೆ ಜಾರಿದ್ದಾರೆ. ಮಗು ನಮ್ಮ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ, ಕರುಳ ಬಳ್ಳಿಯನ್ನು ಕಣ್ತುಂಬಿಕೊಳ್ಳುವ ಮೊದಲೇ ತಾಯಿ ಸಾವನ್ನಪ್ಪಿರುವುದು ಕುಟುಂಬಕ್ಕೂ, ಗ್ರಾಮಕ್ಕೂ ದುಃಖದ ಸಂಗತಿಯಾಗಿದೆ.

ಕೌಟುಂಬಿಕ ಸಂಕಷ್ಟದ ಬೆನ್ನಲ್ಲೇ ಯುವಕ ನೇಣಿಗೆ ಶರಣು: ಮಗನ ಸಾವಿಗೆ ಸುದ್ದಿ ಕೇಳಿ ತಾಯಿ ಆತ್ಮಹತ್ಯೆ ಯತ್ನ

0

ಹಾರೋಹಳ್ಳಿ: ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಸಮೀಪದ ಮರಿಗೌಡನದೊಡ್ಡಿ ಗ್ರಾಮದಲ್ಲಿ ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಯಿಂದ ನೊಂದು ಯುವಕನೊಬ್ಬ ನೇಣಿಗೆ ಶರಣಾಗಿರುವ ದುಃಖದ ಘಟನೆ ನಡೆದಿದೆ.

ಗ್ರಾಮದ ನಿವಾಸಿ ವಿಶಾಲ್ (25) ಜಕ್ಕಸಂದ್ರ ಗ್ರಾಮದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದ ಬಳಿಕ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದಕ್ಕೆ ಜೊತೆಗೆ ಕೌಟುಂಬಿಕ ಸಮಸ್ಯೆಗಳೂ ಅವರನ್ನು ಕಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿ ಗೌರಮ್ಮ ತೀವ್ರ ಆಘಾತಕ್ಕೆ ಒಳಗಾಗಿ, ತಾವೂ ಜೀವನ ಅಂತ್ಯಗೊಳಿಸಲು ಯತ್ನಿಸಿದ್ದಾರೆ. ಸ್ಥಳೀಯರು ತಕ್ಷಣ ಗಮನಿಸಿ ಅವರನ್ನು ರಕ್ಷಿಸಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುಟುಂಬಕ್ಕೆ ದುಃಖ ಹೊಸತಲ್ಲ. ಸುಮಾರು ನಾಲ್ಕು ವರ್ಷಗಳ ಹಿಂದೆ ವಿಶಾಲ್ ಅವರ ತಂದೆಯೂ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ. ಈಗ ಮಗನೂ ತಂದೆಯ ಹಾದಿಯನ್ನೇ ಹಿಡಿದಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರೇಬಿಸ್ ಭಯಕ್ಕೆ ಯುವಕ ಬಲಿ? ಕಲ್ಯಾಣ್‌ನಲ್ಲಿ ಬ್ಯಾಂಕ್ ನೌಕರ ಆತ್ಮಹತ್ಯೆ

0

ಕಲ್ಯಾಣ್: ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಾಯಿ ಕಚ್ಚಿದ ಬಳಿಕ ರೇಬಿಸ್ ಭೀತಿ ಮನಸ್ಸಿಗೆ ಹೊತ್ತುಕೊಂಡ ಬ್ಯಾಂಕ್ ನೌಕರನೊಬ್ಬ ಆತ್ಮಹತ್ಯೆಗೆ ಶರಣಾದ ದುಃಖದ ಘಟನೆ ನಡೆದಿದೆ. ಮೃತರನ್ನು 30 ವರ್ಷದ ಆಯುಷ್ ವಿಶ್ವನಾಥ್ ಅಮೀನ್ ಎಂದು ಗುರುತಿಸಲಾಗಿದೆ.

ಕಲ್ಯಾಣ್ ಪೂರ್ವದ ಟಿಸ್ಗಾಂವ್ ನಾಕಾ ಪ್ರದೇಶದ ಸಹಜೀವನ್ ಸೊಸೈಟಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಅಮೀನ್, ಕಳೆದ ಎಂಟು ವರ್ಷಗಳಿಂದ ಭಾರತ್ ಬ್ಯಾಂಕ್ ಥಾಣೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಬೀದಿ ನಾಯಿ ಅವರ ಕಾಲಿಗೆ ಕಚ್ಚಿತ್ತು. ಘಟನೆಯ ಬಳಿಕ ಅವರು ಕೇವಲ ಒಂದು ರೇಬಿಸ್ ನಿರೋಧಕ ಇಂಜೆಕ್ಷನ್ ಮಾತ್ರ ಪಡೆದಿದ್ದರು.

ಕಳೆದ ನಾಲ್ಕು ದಿನಗಳಿಂದ ಅವರ ನಡವಳಿಕೆಯಲ್ಲಿ ಅಸಾಮಾನ್ಯ ಬದಲಾವಣೆ ಕಂಡುಬಂದಿದ್ದವು ಎಂದು ಕುಟುಂಬದವರು ತಿಳಿಸಿದ್ದಾರೆ. ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳದಿಂದ ಆತ್ಮಹತ್ಯಾ ಪತ್ರ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ರೇಬಿಸ್ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಆತಂಕವನ್ನು ಉಲ್ಲೇಖಿಸಿದ್ದಾರೆ.

ಈ ಕುರಿತು ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಎಡಿಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗುರವ್ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ರೇಬಿಸ್ ಬಗ್ಗೆ ತಿಳಿದುಕೊಳ್ಳಿ

ರೇಬಿಸ್ ಸೋಂಕು ಮಾರಕವಾದರೂ, ಸಮಯಕ್ಕೆ ಸರಿಯಾಗಿ ಪಿಇಪಿ (ಪೋಸ್ಟ್ ಎಕ್ಸ್‌ಪೋಜರ್ ಪ್ರೊಫೈಲಾಕ್ಸಿಸ್) ಲಸಿಕೆ ಪಡೆದರೆ ಸಂಪೂರ್ಣವಾಗಿ ತಡೆಯಬಹುದು. ಸೋಂಕಿನ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ 1ರಿಂದ 3 ತಿಂಗಳುಗಳವರೆಗೆ ಸಮಯ ಹಿಡಿಯಬಹುದು. ಒಮ್ಮೆ ಲಕ್ಷಣಗಳು ಆರಂಭವಾದರೆ, ರೋಗವು ಮೆದುಳು ಮತ್ತು ಬೆನ್ನುಹುರಿಯನ್ನು ಹಾನಿಗೊಳಿಸುತ್ತದೆ.

ಪ್ರಾರಂಭಿಕ ಲಕ್ಷಣಗಳಲ್ಲಿ: ಕಚ್ಚಿದ ಸ್ಥಳದಲ್ಲಿ ತುರಿಕೆ, ಸುಡುವಿಕೆ ಅಥವಾ ಮರಗಟ್ಟುವಿಕೆ, ಸೌಮ್ಯ ಜ್ವರ, ತಲೆನೋವು, ಹಸಿವು ಕಡಿಮೆ, ಗಂಟಲು ನೋವು, ಆಯಾಸ, ಸ್ನಾಯು ನೋವು

ವೈದ್ಯರ ಸಲಹೆ ಮತ್ತು ಪೂರ್ಣ ಲಸಿಕೆ ಚಿಕಿತ್ಸೆಯೇ ರೇಬಿಸ್ ವಿರುದ್ಧದ ಸುರಕ್ಷಿತ ಮಾರ್ಗ. ಮಾನಸಿಕ ಭಯವು ಕೆಲವೊಮ್ಮೆ ರೋಗಕ್ಕಿಂತ ಅಪಾಯಕಾರಿಯಾಗಬಹುದು.

ಹೊಸ ದ್ರಾವಿಡ ಪಕ್ಷ ಘೋಷಿಸಿದ ಶಶಿಕಲಾ! ಎಐಎಡಿಎಂಕೆ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ

0

ಚೆನ್ನೈ: ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ಮಂಗಳವಾರ ಹೊಸ ದ್ರಾವಿಡ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಇದೇ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ 78ನೇ ಜನ್ಮ ದಿನಾಚರಣೆಯಂದು ಶಶಿಕಲಾ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದರು. ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಸಂಯೋಜನೆಯ ಈ ಧ್ವಜದಲ್ಲಿ ಸಿ ಎನ್ ಅಣ್ಣಾದೊರೈ, ಎಂ ಜಿ ರಾಮಚಂದ್ರನ್ ಮತ್ತು ಜಯಲಲಿತಾ ಅವರ ಚಿತ್ರಗಳಿವೆ.

ಪಕ್ಷದ ಹೆಸರು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ ಶಶಿಕಲಾ, ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ನನಗೆ ದ್ರೋಹ ಮಾಡಲಾಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಅವನತಿ ಕಂಡಿದೆ” ಎಂದು ಆರೋಪಿಸಿದರು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಪಕ್ಷದಿಂದ ಹೊರಹಾಕಲ್ಪಟ್ಟಿದ್ದ ಶಶಿಕಲಾ, “ನಾನು ಕಳೆದ 9 ವರ್ಷ ಮೌನವಾಗಿದ್ದರೆ ಅದು ತಮಿಳುನಾಡಿನ ಜನರಿಗೆ ದ್ರೋಹವಾಗುತ್ತಿತ್ತು. ಕಾರ್ಯಕರ್ತರು ಮತ್ತು ಜನರಿಗಾಗಿ ಹೊಸ ಪಯಣ ಆರಂಭಿಸುತ್ತಿದ್ದೇವೆ” ಎಂದು ಹೇಳಿದರು.

2026ರ ಮೊದಲಾರ್ಧದಲ್ಲಿ 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿವೆ. ಜೈಲು ಅವಧಿಯಲ್ಲಿ ಪೆರೋಲ್ ಕಡಿತ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. “ನಾನು ಮುಖ್ಯಮಂತ್ರಿಯನ್ನಾಗಿ ಮಾಡಿದ ವ್ಯಕ್ತಿಯೇ ನನ್ನ ಬೆನ್ನಿಗೆ ಇರಿದಿದ್ದ” ಎಂದು ಕಿಡಿಕಾರಿದರು.

ವಾರದೊಳಗೆ ಸಿಎಂ ವಿಚಾರದ ಗೊಂದಲ ಸರಿಪಡಿಸದಿದ್ದರೆ ನಾವೇ ಹೈಕಮಾಂಡ್ ಭೇಟಿ ಮಾಡುತ್ತೇವೆ: ಕೆ.ಎಂ. ಉದಯ್

0

ಮಂಡ್ಯ: ವಾರದೊಳಗೆ ಮುಖ್ಯಮಂತ್ರಿ ಬದಲಾವಣೆಯ ನಿರ್ಧಾರ ತೆಗೆದುಕೊಳ್ಳುವಂತೆ ಹೈಕಮಾಂಡ್‌ಗೆ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ. ಉದಯ್ ಗಡುವು ನೀಡಿದರು.

ಮದ್ದೂರಿನಲ್ಲಿ ಮಾತನಾಡಿ, “ಸಿಎಂ ಕುರಿತು ಗೊಂದಲವನ್ನು ಸರಿಪಡಿಸದಿದ್ದರೆ ನಾವು ಸ್ವತಃ ಹೈಕಮಾಂಡ್ ಭೇಟಿ ಮಾಡುತ್ತೇವೆ. ನಂತರ ಅವರ ತೀರ್ಮಾನ ಯಾವುದು ಆಗಲಿ, ನಾವು ಅದಕ್ಕೆ ಬದಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಅವರು ಸಂಘಟನೆಯೊಳಗಿನ ಹೊಸ ಶಾಸಕರ ಸೇರ್ಪಡೆ ಹಾಗೂ ಸಂಪುಟ ಬದಲಾವಣೆ ಕುರಿತು ಹೈಕಮಾಂಡ್ ದಿನಾಂಕ ತಿಳಿಸುತ್ತದೆ. ನಾವು ಅದನ್ನು ನೀಡುವುದಿಲ್ಲ ಎಂದು ಸೂಚಿಸಿದರು.

ಹೈಕಮಾಂಡ್ ಸಿಎಂ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು. ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ನೀಡುವ ವಿಚಾರದಲ್ಲಿ ವಿರೋಧವಿಲ್ಲ, ಆದರೆ ಸಮರ್ಥ ನಾಯಕನನ್ನೇ ಆಯ್ಕೆ ಮಾಡಬೇಕು ಎಂದು ಹೇಳಿದರು.

`ಮಿಷನ್ ಪ್ರಕೃತಿ’ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿದ ಜೋಡಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಭೂಮಿಯ ನೈಸರ್ಗಿಕ ಅವನತಿಯನ್ನು ನಿಲ್ಲಿಸುವುದು ಮತ್ತು ಮಾನವರು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಭವಿಷ್ಯವನ್ನು ನಿರ್ಮಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಮತ್ತು ವರ್ಲ್ಡವೈಲ್ಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್-ಇಂಡಿಯಾ) ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದ 5 ಸಾವಿರ ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿನಲ್ಲಿ ಮಿಷನ್ ಪ್ರಕೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಆಯೋಜಿಸಲಾಗಿತ್ತು.

ಮಿಷನ್ ಪ್ರಕೃತಿ ಕಾರ್ಯಕ್ರಮವು ಶಿಕ್ಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳೇ ನಡೆಸುವ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಶಾಲೆ, ಮನೆ ಮತ್ತು ಸಮುದಾಯಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜವಾಬ್ದಾರಿಯುತ ಅಭ್ಯಾಸಗಳನ್ನು ಪ್ರಾಯೋಗಿಕವಾಗಿ ಮಾಡಿ ತಿಳಿದುಕೊಂಡು ಅನುಷ್ಠಾನ ಮಾಡುವುದಾಗಿದೆ. ಈ ಕಾರ್ಯಕ್ರಮವು ಐದು ಪ್ರಮುಖ ಕ್ಷೇತ್ರಗಳಾದ ಜೀವ ವೈವಿಧ್ಯ, ನೀರು, ತ್ಯಾಜ್ಯ, ಆಹಾರ ಮತ್ತು ಶಕ್ತಿ ಎಂಬ ವಿಷಯಗಳ ಅಡಿಯಲ್ಲಿ ಮಕ್ಕಳು ಪ್ರಾಯೋಗಿಕವಾಗಿ ಶಾಲೆ ಹಾಗೂ ಸಮುದಾಯದ ಆಡಿಟ್ ಕೈಗೊಂಡು ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಗುರುತಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುವುದು ಮತ್ತು ಪರಿಹಾರೋಪಾಯಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಪರಿಸರ ಸಂರಕ್ಷಣೆ ಕುರಿತು ಜವಾಬ್ದಾರಿ ಮೂಡಿಸುವುದಾಗಿದೆ.

ಮಕ್ಕಳು ಕೈಗೊಂಡ ಎಲ್ಲಾ ಕಾರ್ಯಗಳ ಮಾಹಿತಿಯನ್ನು ಸ್ಯಾಟ್ಸ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಪ್ಲೋಡ್ ಮಾಡಲಾದ ಎಲ್ಲಾ ಶಾಲೆಗಳ ಮಾಹಿತಿಯನ್ನು ಮೌಲ್ಯಮಾಪನ ಕೈಗೊಂಡ ನಂತರ 5 ಸಾವಿರ ಶಾಲೆಗಳ ಪೈಕಿ 10 ಉತ್ತಮ ಕಾರ್ಯ ನಿರ್ವಹಣೆ ಮಾಡಿದ ಶಾಲೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಯಿತು. ಈ ಪೈಕಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಡಳ್ಳಿ ಕೂಡ ಪ್ರಶಸ್ತಿ ಪಡೆದುಕೊಂಡಿದ್ದು, ಬೆಂಗಳೂರಿನ ವಿಕಾಸ ಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

ಡಯಟ್‌ನ ಪ್ರಾಚಾರ್ಯ ಬಸವರಾಜ ನಾಲತವಾಡ, ಮಿಷನ್ ಪ್ರಕೃತಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಡಯಟ್‌ನ ಉಪನ್ಯಾಸಕರಾದ ಪ್ರಕಾಶ ಅಂಗಡಿ, ಡಯಟ್‌ನ ಎಲ್ಲಾ ಹಿರಿಯ ಉಪನ್ಯಾಸಕರು, ಕಲಘಟಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಾಯತ್ರಿ ದೇವಿ ಸಜ್ಜನ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಪಾಂಡುರಂಗ ಪೂಜೇರಿ, ದುಮ್ಮವಾಡ ಕ್ಲಸ್ಟರ್ ಸಿಆರ್‌ಪಿ ಪ್ರಶಾಂತ್ ರೆಡ್ಡೇರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು, ದುಮ್ಮವಾಡ ಗ್ರಾಮದ ಸಮಸ್ತ ನಾಗರಿಕರು, ಹಿರಿಯರು ಮಿಷನ್ ಪ್ರಕೃತಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪ್ರಶಸ್ತಿಯನ್ನು ಶಾಲೆಯ ಹಸಿರುಪಡೆಯ ಮಕ್ಕಳು, ಶಾಲಾ ನೋಡಲ್ ಶಿಕ್ಷಕಿಯರಾದ ಪ್ರತಿಭಾ ದೊಡ್ಡಮನಿ, ಮುಖ್ಯೋಪಾಧ್ಯಾಯ ಎಮ್.ಎ. ಸುಂಕದ, ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು, ಮಿಷನ್ ಪ್ರಕೃತಿ ಕಾರ್ಯಕ್ರಮದ ತಾಲೂಕಾ ನೋಡಲ್ ಅಧಿಕಾರಿ ಸುಜಾತ ಚವ್ಹಾಣ ಸ್ವೀಕರಿಸಿದರು. ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು, ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಗುಣಮಟ್ಟ ಹಾಗೂ ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

`ನಡಿತೈತಿ ಬಿಡು’ ಎನ್ನುವ ಅಧಿಕಾರಿಗಳು ಮನೆಗೆ ಹೋಗಿ!

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ನಮಗೆ, ನಮಗೆಲ್ಲರಿಗೂ ಇರುವ ಸಂಬಳ, ಸವಲತ್ತು ಸಾರ್ವಜನಿಕರಿಂದ ಬಂದಿದ್ದು, ನಮ್ಮ ನಮ್ಮ ಕೆಲಸ, ಕರ್ತವ್ಯಗಳನ್ನು ಮಾನವೀಯತೆ, ಆತ್ಮಸಾಕ್ಷಿಯಿಂದ ಮಾಡಬೇಕು. ವಿನಾಕಾರಣ ವಿಳಂಬ, ಉದ್ಯೋಗದಲ್ಲಿ ಆಲಸ್ಯ ತೋರಿಸುವ ಮತ್ತು `ನಡಿತೈತಿ ಬಿಡು’ ಎನ್ನುವ ಮನೋಭಾವನೆಯ ಅಧಿಕಾರಿ, ಸಿಬ್ಬಂದಿಗಳು ಮನೆಗೆ ಹೋಗಬಹುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು ಮಂಗಳವಾರ ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಧಾರವಾಡ ಜಿಲ್ಲಾಡಳಿತ ಆಯೋಜಿಸಿದ್ದ ಜಿಲ್ಲಾ ಮಟ್ಟದ 12ನೇ ಜನತಾ ದರ್ಶನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.

ಜನತಾ ದರ್ಶನದಲ್ಲಿ ಬರುವ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಉತ್ತರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಸಲ್ಲಿಕೆ ಆಗುವ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡಬೇಕು. ಬೇರೆ ಹಂತಕ್ಕೆ ಅರ್ಜಿ ರವಾನಿಸಬೇಕಾದಲ್ಲಿ ಅರ್ಜಿದಾರನಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಆದರೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕ ಕಳಕಳಿ, ಮಾನವೀಯತೆ ನೋಡದೆ ಯಾಂತ್ರಿಕವಾಗಿ ವರ್ತಿಸುತ್ತಿದ್ದಾರೆ ಎಂಬುದು ಸಲ್ಲಿಕೆ ಆಗುತ್ತಿರುವ ಅರ್ಜಿಗಳಿಂದ ತಿಳಿದುಬರುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಅಧಿಕಾರಿ, ನೌಕರರು ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಜಿಲ್ಲಾ ಹಂತದ ಕಚೇರಿಗಳಿಗೆ, ಜನತಾ ದರ್ಶನಕ್ಕೆ ಬರುವುದು ಉಚಿತವಲ್ಲ. ಎಲ್ಲ ಅಧಿಕಾರಿ ಸಿಬ್ಬಂದಿಗಳು ತಮ್ಮ ಹಂತದಲ್ಲಿಯೇ ಸಾರ್ವಜನಿಕ ಸಮಸ್ಯೆಗಳನ್ನು ಸಂಯಮದಿಂದ ಆಲಿಸಿ ಪರಿಹರಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಕಳುಹಿಸಬೇಕೆಂದು ಅವರು ಹೇಳಿದರು.

ವಿವಿಧ ಗ್ರಾಮಗಳಿಂದ ಹಾಗೂ ನಗರ ಪ್ರದೇಶಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಅಧಿಕಾರಿಗಳನ್ನು ಕರೆದು, ಚರ್ಚಿಸಿ, ಇತ್ಯರ್ಥಕ್ಕೆ ನಿರ್ದೇಶಿಸಿದರು. ಇಂದಿನ ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 87ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ, ಪರಿಹಾರಕ್ಕೆ ಸೂಚಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಐಎಎಸ್ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಉಪವಿಭಾಗಾಧಿಕಾರಿ ಶಾಲಂ ಹಿಸೇನ್ ವೇದಿಕೆಯಲ್ಲಿದ್ದು, ಸಾರ್ವಜನಿಕ ಅಹವಾಲು ಇತ್ಯರ್ಥಪಡಿಸಲು ಸಚಿವರಿಗೆ ನೆರವಾದರು.

ಜನತಾ ದರ್ಶನದಲ್ಲಿ ವಿವಿಧ ನಗರ, ಗ್ರಾಮಗಳ ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಶಿರಸ್ತೆದಾರ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಶಿರಸ್ತೆದಾರರಾದ ಶ್ರೀಧರ ಕೆ ವಂದಿಸಿದರು. ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡರ ಸಾರ್ವಜನಿಕ ಅಹವಾಲುಗಳನ್ನು ಕ್ರೋಢೀಕರಿಸಿ, ಜನತಾ ದರ್ಶನ ನಿರ್ವಹಿಸಿದರು.

87 ಅಹವಾಲು ಸ್ವೀಕಾರ

ಧಾರವಾಡ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಕಂದಾಯ ಇಲಾಖೆಯ 21, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ 20, ನಗರಾಭಿವೃದ್ಧಿ ಇಲಾಖೆ 19, ವಸತಿ ಇಲಾಖೆ 7, ಸಾರಿಗೆ ಇಲಾಖೆ 4, ಗೃಹ ಇಲಾಖೆ ಮತ್ತು ಇಂಧನ ಇಲಾಖೆ 3 ಹಾಗೂ ಕೃಷಿ, ಶಾಲಾ ಶಿಕ್ಷಣ ಇಲಾಖೆ, ಆಹಾರ ಇಲಾಖೆಯ 2, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆಗಳ ತಲಾ ಒಂದು ಅಹವಾಲುಗಳು ಸೇರಿದಂತೆ ಒಟ್ಟು 87 ಅರ್ಜಿಗಳ ಸ್ವೀಕರಿಸಲಾಯಿತು. ಸ್ವೀಕರಿಸಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಾತಕ ನೆಪದಲ್ಲಿ ಮದುವೆ ಕೈಬಿಟ್ಟರೆ ಕಾನೂನು ಕ್ರಮ ಖಚಿತ: ಹೈಕೋರ್ಟ್​ ತೀರ್ಪು

0

ನವದೆಹಲಿ: ಮದುವೆಯ ಭರವಸೆ ನೀಡಿ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿ, ನಂತರ ಜಾತಿ ಅಥವಾ ಜಾತಕ ಹೊಂದಾಣಿಕೆಯಿಲ್ಲ ಎಂಬ ಕಾರಣ ಮುಂದಿಟ್ಟು ಮದುವೆಯನ್ನು ನಿರಾಕರಿಸುವುದು ಗಂಭೀರ ಅಪರಾಧ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ನಿರಂತರವಾಗಿ ವಿವಾಹದ ಭರವಸೆ ನೀಡಿ ದೀರ್ಘಕಾಲ ಲೈಂಗಿಕ ಸಂಬಂಧ ಮುಂದುವರಿಸಿಕೊಂಡು, ಅಂತಿಮವಾಗಿ ಮದುವೆಗೆ ನಿರಾಕರಿಸುವುದು ಕಾನೂನುಬಾಹಿರ ಕೃತ್ಯವಾಗಿದ್ದು, ಇಂತಹ ಪ್ರಕರಣಗಳಲ್ಲಿ ಕೇವಲ ಪರಸ್ಪರ ಸಮ್ಮತಿಯನ್ನಷ್ಟೇ ಅಲ್ಲದೆ ಆರೋಪಿಯ ನಡವಳಿಕೆಯನ್ನು ಕೂಡ ನ್ಯಾಯಾಲಯ ಪರಿಶೀಲಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಅತ್ಯಾಚಾರ ವಿಧಾನದಡಿ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಧಾನದಡಿ ಪ್ರಕರಣ ದಾಖಲಾಗಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ದೂರುದಾರ ಯುವತಿ ಹಲವು ಬಾರಿ ಮದುವೆಯ ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲಾಗಿದೆ ಎಂದು ಆರೋಪಿಸಿದ್ದು, ಅಂತಿಮವಾಗಿ ಜಾತಕ ಹೊಂದಾಣಿಕೆಯಿಲ್ಲ ಎಂಬ ನೆಪ ಹೇಳಿ ಮದುವೆ ನಿರಾಕರಿಸಲಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಜಾತಕ ಅಥವಾ ಕುಟುಂಬದ ಅಭಿಪ್ರಾಯವೇ ಮುಖ್ಯವಾಗಿದ್ದರೆ ಅದನ್ನು ಮೊದಲೇ ಪರಿಶೀಲಿಸಬೇಕಿತ್ತು, ನಂತರ ಸುಳ್ಳು ಭರವಸೆ ನೀಡಿ ಸಂಬಂಧ ಮುಂದುವರಿಸುವುದು ಮೋಸಕ್ಕೆ ಸಮಾನ ಎಂದು ಕೋರ್ಟ್ ತಿಳಿಸಿದೆ.

ವಾಟ್ಸಾಪ್ ಸಂದೇಶಗಳಲ್ಲಿ ಕೂಡ ಶೀಘ್ರ ಮದುವೆಯ ಭರವಸೆ ನೀಡಿರುವುದು ದಾಖಲೆಗಳ ಮೂಲಕ ದೃಢಪಟ್ಟಿದ್ದು, ಈ ಎಲ್ಲ ಅಂಶಗಳು ಮಹಿಳೆಯ ಒಪ್ಪಿಗೆಯನ್ನು ತಪ್ಪು ಭರವಸೆಯ ಮೂಲಕ ಪಡೆದಿರುವ ಸಾಧ್ಯತೆಯನ್ನು ಸೂಚಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಇಂತಹ ಕೃತ್ಯಗಳು ಸಮಾಜದಲ್ಲಿ ಗಂಭೀರ ಪರಿಣಾಮ ಉಂಟುಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಕಾಂಗ್ರೆಸ್ ಸಂಘಟನೆಗೆ ಹೊಸ ನೇಮಕ: ಚಂದ್ರಪ್ಪ ದೊಡ್ಡಮನಿಗೆ ಜವಾಬ್ದಾರಿ

0

ಲಕ್ಷ್ಮೇಶ್ವರ: ತಾಲೂಕಿನ ಅಕ್ಕಿಗುಂದ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಚಂದ್ರಪ್ಪ ಹೆಗ್ಗಪ್ಪ ದೊಡ್ಡಮನಿ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ನೇಮಕ ಮಾಡಿ ಆದೇಶಪತ್ರ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ಸುಜಾತಾ ದೊಡ್ಡಮನಿ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ: 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

0

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಶಾಲಾ ಬಾಲಕನ ಹತ್ಯೆ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಮೃತ ಬಾಲಕನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ, ಶಾಲಾ ವಿದ್ಯಾರ್ಥಿಯನ್ನು ಥಳಿಸಿ ಹತ್ಯೆಗೈದಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಅಗತ್ಯ ನೆರವು ಒದಗಿಸುವುದರ ಜೊತೆಗೆ, ಈ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು. ಬಾಲಕನ ಸಾವಿಗೆ ನ್ಯಾಯ ಒದಗಿಸಲು ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಹತ್ಯೆಯಲ್ಲಿ ಭಾಗಿಯಾದವರು ಅಪ್ರಾಪ್ತ ವಯಸ್ಸಿನ ಹುಡುಗರಾಗಿದ್ದಾರೆ ಎಂಬ ಮಾಹಿತಿ ತೀವ್ರ ಆಘಾತ ಉಂಟುಮಾಡಿದೆ ಎಂದು ಅವರು ಹೇಳಿದ್ದಾರೆ. ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಬೇಕಾದ ಮಕ್ಕಳು ದುಶ್ಚಟಗಳಿಗೆ ಒಳಗಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ದುರದೃಷ್ಟಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ಏನೇ ಇರಲಿ, ಅಪರಾಧ ಎಸಗಿದವರು ಯಾರೇ ಆಗಿರಲಿ, ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಬಾಲ್ಯದಲ್ಲೇ ದ್ವೇಷ, ಹಿಂಸೆ ಮತ್ತು ಅಪರಾಧ ಪ್ರವೃತ್ತಿ ಬೆಳೆಸಿಕೊಳ್ಳುವುದು ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಕೆ ನೀಡಿದ ಅವರು, ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂದಿದ್ದಾರೆ. ಮಕ್ಕಳು ತಪ್ಪು ಹಾದಿ ಹಿಡಿದರೆ ತಕ್ಷಣ ತಿದ್ದಿ ಬುದ್ದಿ ಹೇಳುವ ಜವಾಬ್ದಾರಿ ಪೋಷಕರದ್ದು ಎಂದು ಹೇಳಿದ್ದಾರೆ. ಅಲ್ಲದೆ ಶಾಲೆಗಳ ಸುತ್ತಮುತ್ತ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಆಡಳಿತ ಮಂಡಳಿಗಳು ಕಟ್ಟುನಿಟ್ಟಾಗಿ ನಿಗಾ ವಹಿಸಬೇಕು, ಅಗತ್ಯವಿದ್ದರೆ ಪೊಲೀಸ್ ನೆರವು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಮಗನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬವನ್ನು ಸಾಂತ್ವನಪಡಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಮೃತ ಬಾಲಕನ ಪೋಷಕರಿಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ದುಷ್ಕೃತ್ಯದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ಗರಿಷ್ಠ ಶಿಕ್ಷೆ ದೊರಕುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಆ ನೊಂದ ಕುಟುಂಬಕ್ಕೆ ನೀಡಿರುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ ಮತ್ತು ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡಿದ ಅವರು, ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

error: Content is protected !!