Home Blog

ಆಕಾಶದಲ್ಲಿ ಹಾರಾಡಿದ ಸರ್ಕಾರಿ ಶಾಲೆ ಮಕ್ಕಳು; ಸಚಿವ ಜಮೀರ್ ಕಾರ್ಯಕ್ಕೆ ಪೋಷಕರು ಭಾವುಕ!

0

ಬಳ್ಳಾರಿ: ವಿಶ್ವ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಸರ್ಕಾರಿ ಶಾಲೆ ಮಕ್ಕಳ ಕನಸು ನನಸಾಗಿದೆ.

ಬೈ ಸ್ಕೈ ವೀಕ್ಷಣೆಗೆ ಹಂಪಿಗೆ ಬಂದ 60ಕ್ಕೂ ಹೆಚ್ಚು ಮಕ್ಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಉಚಿತವಾಗಿ ಹೆಲಿಕಾಪ್ಟರ್ ರೈಡ್ ಮಾಡಿಸಿದರು.

ಕಮಲಾಪುರದ ಮಯೂರ ಹೋಟೆಲ್ ಆವರಣದಲ್ಲಿ ಮಕ್ಕಳ ಆಸೆ ಕೇಳಿದ ಸಚಿವರು, “ನೀವು ಎಲ್ಲರೂ ಹಾರ್ಬೇಕೆ?” ಎಂದು ಪ್ರಶ್ನಿಸಿದರು. ಎಲ್ಲಾ ಮಕ್ಕಳು ಒಟ್ಟಿಗೆ ಹೌದು ಎಂದಾಗ, ತಮ್ಮ ಖರ್ಚಿನಲ್ಲಿ ಮಕ್ಕಳಿಗೆ ರೈಡ್ ವ್ಯವಸ್ಥೆ ಮಾಡಿದ್ದಾರೆ.

ಮಕ್ಕಳು ಆಕಾಶಕ್ಕೆ ಹಾರಿದ ಸಂಭ್ರಮವನ್ನು ನೋಡಿದ ಪೋಷಕರು ಹರ್ಷದ ಕಣ್ಣೀರು ಸುರಿಸಿದರು. ಮಕ್ಕಳಿಗೆ ಸಿಕ್ಕ ಈ ವಿಶೇಷ ಅನುಭವ ಉತ್ಸವವನ್ನು ಮತ್ತಷ್ಟು ಸ್ಮರಣೀಯವನ್ನಾಗಿ ಮಾಡಿತು.

ಚಿಕ್ಕಮಗಳೂರು| ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ದುರ್ಮರಣ!

0

ಚಿಕ್ಕಮಗಳೂರು:- ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಳೆಹೊಳಿ ಸಮೀಪ ಇರುವ ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ಮೃತ ದುರ್ದೈವಿಗಳನ್ನು ಅಭಿಷೇಕ್ (27) ಹಾಗೂ ಯೋಗೀಶ್ (17) ಎಂದು ಗುರುತಿಸಲಾಗಿದೆ. ಮೃತ ಯುವಕರಿಬ್ಬರು ಮೂಲತಃ ಕೊಡಗು ಜಿಲ್ಲೆಯವರು. ಮೃತ ಅಭಿಷೇಕ್ ಅಕ್ಕ ಕಳಸದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಗೆ ಬಂದಿದ್ದ ಇಬ್ಬರು ಭದ್ರಾ ನದಿಯಲ್ಲಿ ಈಜಲು ಹೋದಾಗ ಭದ್ರಾ ನದಿಯ ಆಳದ ಅರಿವಿಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜು ತಜ್ಞರ ನೆರವಿನಿಂದ ಮೃತ ದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಈವರೆಗೂ ಮೃತದೇಹ ಪತ್ತೆಯಾಗಿಲ್ಲ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ 3,030 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

0

ಗುವಾಹಟಿ: ಅಸ್ಸಾಂನ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾದ 6 ಪಥಗಳ ಎಕ್ಸ್ಟ್ರಾಡೋಸ್ಡ್ ಪ್ರಿಸ್ಟ್ರೆಸ್ಡ್ ಕಾಂಕ್ರೀಟ್ (ಪಿಎಸ್ಸಿ) ಸೇತುವೆಯಾದ ಕುಮಾರ್ ಭಾಸ್ಕರ್ ವರ್ಮಾ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.

ಸುಮಾರು ₹3,030 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಗುವಾಹಟಿಯನ್ನು ಉತ್ತರ ಗುವಾಹಟಿಯೊಂದಿಗೆ ಸಂಪರ್ಕಿಸುತ್ತದೆ. ಇದರ ಮೂಲಕ ಪ್ರಯಾಣದ ಅವಧಿ ಸುಮಾರು 60 ನಿಮಿಷಗಳಿಂದ ಕೇವಲ 7 ನಿಮಿಷಗಳಿಗೆ ಇಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಮೇಲೆ ನಿರ್ಮಿಸಲಾದ ಸೇತುವೆ ಈಶಾನ್ಯ ಭಾರತದಲ್ಲಿ ಮೊದಲ ಎಕ್ಸ್ಟ್ರಾಡೋಸ್ಡ್ ವಿನ್ಯಾಸದ ಸೇತುವೆಯಾಗಿದ್ದು, ತಾಂತ್ರಿಕವಾಗಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ.

ಸೇತುವೆ ಉದ್ಘಾಟನೆಯ ನಂತರ ಮಾತನಾಡಿದ ಪ್ರಧಾನಿ, ಯೋಜನೆ ಈಶಾನ್ಯ ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂದು ಹೇಳಿದರು. ಸೇತುವೆ ಪ್ರದೇಶದ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದರು.

ಶಿವರಾತ್ರಿ ಜಾಗರಣೆಗೆ ತ್ರಿಕೂಟೇಶ್ವರ ಧಾಮ ಸಜ್ಜು: ರಾಜ್ಯದ ನಾನಾಭಾಗಗಳಿಂದ ಭಕ್ತರ ಆಗಮನದ ನಿರೀಕ್ಷೆ

0

ಗದಗ: ಮಹಾ ಶಿವರಾತ್ರಿ ಹಬ್ಬದ ಮಹತ್ವದ ಸಂದರ್ಭದಲ್ಲಿ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನ ಭಕ್ತರ ಮಹಾಪ್ರವಾಹವನ್ನು ಸ್ವಾಗತಿಸಲು ಸಂಪೂರ್ಣ ಸಜ್ಜಾಗಿದೆ. ನಗರವೇ ಹಬ್ಬದ ವಾತಾವರಣಕ್ಕೆ ತೇಲಿಬಿದ್ದಿದ್ದು, ದೇವಾಲಯ ಆವರಣದಲ್ಲಿ ಸಕಲ ಸಿದ್ಧತೆಗಳು ಚುರುಕುಗೊಂಡಿವೆ.

ಭಕ್ತರ ಸುಗಮ ದರ್ಶನಕ್ಕಾಗಿ ವಿಶಾಲ ಪೆಂಡಾಲ್ ನಿರ್ಮಾಣ, ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ಬ್ಯಾರಿಕೇಡ್ ವ್ಯವಸ್ಥೆ, ನೆಲಮಟ್ಟದಲ್ಲಿ ಮ್ಯಾಟ್ ಹಾಸುವ ಕಾರ್ಯ, ಆಕರ್ಷಕ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಗಳು ವೇಗವಾಗಿ ಪೂರ್ಣಗೊಳ್ಳುತ್ತಿವೆ. ದೇವಸ್ಥಾನ ಆವರಣ ಶಿವಭಕ್ತರ ಘೋಷಗಳಿಂದ ಮೆರೆಯುವ ನಿರೀಕ್ಷೆ ಇದೆ.

ನಾಳೆ ಬೆಳಿಗ್ಗೆ 4 ಗಂಟೆಯಿಂದಲೇ ಮಹಾರುದ್ರಾಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ಅನೇಕ ವೈಭವಮಯ ಪೂಜಾ ವಿಧಿಗಳು ನೆರವೇರಲಿವೆ. ಒಂದೇ ಪಾಣಿ ಬಟ್ಟಲಿನಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತತ್ವಗಳನ್ನು ಒಳಗೊಂಡಿರುವ ಉದ್ಭವ ಲಿಂಗವೇ ಈ ಕ್ಷೇತ್ರದ ಮಹತ್ವ. ಇದೇ ವೈಶಿಷ್ಟ್ಯದಿಂದ “ತ್ರಿಕೂಟೇಶ್ವರ” ಎಂಬ ಹೆಸರಿನಿಂದ ಈ ಧಾಮ ಪ್ರಸಿದ್ಧಿ ಪಡೆದಿದೆ.

ಗದಗ ಮಾತ್ರವಲ್ಲದೆ ಧಾರವಾಡ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ರಾಜ್ಯದ ನಾನಾಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಶಿವನ ದರ್ಶನ ಪಡೆಯಲಿದ್ದಾರೆ.

ಶಿವರಾತ್ರಿ ಪ್ರಯುಕ್ತ ರಾತ್ರಿ ಇಡೀ ಪುರಾಣ, ಪ್ರವಚನ ಹಾಗೂ ಭಕ್ತಿಭಾವದ ಜಾಗರಣೆ ನಡೆಯಲಿದ್ದು, ಶಿವನಾಮ ಸ್ಮರಣೆಯೊಂದಿಗೆ ಧಾರ್ಮಿಕ ಉತ್ಸವ ರಂಗೇರಲಿದೆ.

30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಮದುವೆಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ!: ಕೆರೆಯಲ್ಲಿ ಶವಕ್ಕಾಗಿ ಶೋಧ

0

ಹಾಸನ: ಮದುವೆ ಸಮಾರಂಭಕ್ಕೆ ತೆರಳಿದ್ದ ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿ 29 ವರ್ಷದ ಪ್ರಿಯಾಂಕಾ ನಿಗೂಢವಾಗಿ ಕಾಣೆಯಾಗಿರುವ ಪ್ರಕರಣ ಹಾಸನ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಅವರು ಕಣ್ಮರೆಯಾಗಿದ್ದಾರೆ.

ಅದೇ ದಿನ ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರೊಂದಿಗೆ ಕೊನೆಯ ಬಾರಿ ದೂರವಾಣಿ ಮಾತುಕತೆ ನಡೆಸಿದ್ದ ಅವರು, ಬಳಿಕ ಸಂಪರ್ಕಕ್ಕೆ ಸಿಗದೇ ಹೋದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಕೆರೆಯ ಸಮೀಪ ಇಂದು ಪ್ರಿಯಾಂಕಾ ಅವರ ಉಡುಪುಗಳು, ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿವೆ. ನಿನ್ನೆ ಸ್ಥಳ ಪರಿಶೀಲಿಸಿದಾಗ ಈ ವಸ್ತುಗಳು ಕಾಣಿಸದಿದ್ದುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಿಯಾಂಕಾ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿದ್ದರು. ಆಭರಣಗಳ ಸಮೇತವೇ ಅವರು ನಾಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನಗಳನ್ನೆಬ್ಬಿಸಿದೆ.

ಕಲ್ಕೆರೆ ಗ್ರಾಮದ ಕೆರೆಯ ಪಕ್ಕದಲ್ಲೇ ಉಡುಪುಗಳು ಪತ್ತೆಯಾಗಿರುವ ಹಿನ್ನೆಲೆ, ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿ ಶವವನ್ನು ಕೆರೆಗೆ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದರ ನಡುವೆ, ನಿನ್ನೆ ದೂರು ನೀಡಲು ಕುಟುಂಬಸ್ಥರು ಪರದಾಡಿದರೂ ಅರೇಹಳ್ಳಿ ಹಾಗೂ ಬೇಲೂರು ಪೊಲೀಸರು ಸ್ಪಂದಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. “ತಕ್ಷಣ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ಬೇರೆ ಆಗಿರಬಹುದಿತ್ತು,” ಎಂದು ಕುಟುಂಬದವರು ಕಣ್ಣೀರಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಲಾಶ್ ಮುಚ್ಚಲ್‌ಗೆ ಕಾನೂನು ರಕ್ಷಣೆ: ಮಾನಹಾನಿ ಆರೋಪಗಳ ನಡುವೆ ಬಾಂಬೆ ಹೈಕೋರ್ಟ್ ಕಠಿಣ ಸೂಚನೆ

ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರೊಂದಿಗಿನ ವಿವಾಹ ರದ್ದಾದ ಬಳಿಕ ಹುಟ್ಟಿಕೊಂಡ ವಿವಾದ ಗಂಭೀರ ಕಾನೂನು ತಿರುವು ಪಡೆದುಕೊಂಡಿದೆ. ಮ್ಯೂಸಿಕ್ ಕಂಪೋಸರ್ ಪಲಾಶ್ ಮುಚ್ಚಲ್ ವಿರುದ್ಧ ಹರಿದಾಡುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ.

ವಿದ್ನ್ಯಾನ್ ಮಾನೆ ಮಾಡಿದ ಸಾರ್ವಜನಿಕ ಹೇಳಿಕೆಗಳು ಪಲಾಶ್ ಅವರ ಘನತೆ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೆಚ್ಚಿನ ಹಾನಿಯನ್ನು ತಡೆಯುವ ಅಗತ್ಯವಿದೆ ಎಂದು ಹೇಳಿ, ಮುಂದಿನ ವಿಚಾರಣೆವರೆಗೆ ಪಲಾಶ್ ಕುರಿತು ಯಾವುದೇ ಮಾನಹಾನಿಕಾರಕ ಹೇಳಿಕೆಗಳನ್ನು ನೀಡದಂತೆ ಮಾನೆ ಅವರಿಗೆ ತಕ್ಷಣದ ತಡೆ ವಿಧಿಸಲಾಗಿದೆ.

ಮಾನೆ ಅವರ ಆರೋಪದ ಪ್ರಕಾರ, 23 ನವೆಂಬರ್ 2025ರಂದು ನಡೆದ ಮದುವೆ ಸಂಭ್ರಮಾಚರಣೆಯ ವೇಳೆ ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ಹೇಳಲಾಗಿದೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದವು.

ಪಲಾಶ್ ಪರ ವಕೀಲ ಶ್ರೇಯಾನ್ಶ್ ಮಿಥಾರೆ, “ನ್ಯಾಯಾಲಯದ ತೀರ್ಪು ನಮ್ಮ ಕಕ್ಷಿದಾರರ ಗೌರವವನ್ನು ಕಾಪಾಡುವ ಮಹತ್ವದ ಹೆಜ್ಜೆ. ಸುಳ್ಳು ಆರೋಪಗಳ ವಿರುದ್ಧ ಕಾನೂನು ರಕ್ಷಣೆ ದೊರೆತಿದೆ,” ಎಂದು ಹೇಳಿದ್ದಾರೆ.

ಪ್ರಕರಣದ ಅಂತಿಮ ತೀರ್ಪು ದೇಶವ್ಯಾಪಿ ಗಮನ ಸೆಳೆಯುವ ಸಾಧ್ಯತೆ ಇದೆ.

ಕಾಂಗ್ರೆಸ್ ಸರ್ಕಾರದ ‘ಸಾಧನಾ ಸಮಾವೇಶ’ ಶೂನ್ಯ ಸಾಧನೆ: ಬಸವರಾಜ ಬೊಮ್ಮಾಯಿ ಟೀಕೆ

0

ಬೆಂಗಳೂರು: ಕರ್ನಾಟಕ ಸರ್ಕಾರ 1,000 ದಿನಗಳನ್ನು ಪೂರೈಸಿದ ಹಿನ್ನೆಲೆ ಹಾವೇರಿಯಲ್ಲಿ ಕಾಂಗ್ರೆಸ್ ವತಿಯಿಂದ ‘ಸಾಧನಾ ಸಮಾವೇಶ’ ಆಯೋಜಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಮಾವೇಶವನ್ನು ‘ಶೂನ್ಯ ಸಾಧನೆಯ ಸಮಾವೇಶ’ ಎಂದು ಟೀಕಿಸಿದರು.

“ಇಂದು ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಶೂನ್ಯ ಸಾಧನೆಯ ಸಮಾವೇಶ ಮಾಡಿದೆ. ಈ ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಜನರು ಬರಲು ಸಾಧ್ಯವಿಲ್ಲ ಎಂದು ಅರಿತು ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ,” ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯನ್ನು ಉಲ್ಲೇಖಿಸಿದ ಬೊಮ್ಮಾಯಿ, “ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸಿ, ಅದರ ಮೂಲಕ ಸಾಲ ಸಿಗುವ ವ್ಯವಸ್ಥೆ ಮಾಡಿದ್ದೇವೆ. ಆದರೆ ಈಗ ಜನರ ಆಸ್ತಿಯನ್ನು ಅವರೇ ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಖಜಾನೆ ಬರಿದಾಗಿರುವುದರಿಂದ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಾ ಶುಲ್ಕವನ್ನು ಬಡವರ ಮೇಲೆ ಹೇರಲಾಗಿದೆ. ಒಬ್ಬ ಬಡವ 3-4 ಲಕ್ಷ ರೂ. ಕಟ್ಟುವ ಪರಿಸ್ಥಿತಿ ಬಂದಿದೆ,” ಎಂದು ಆರೋಪಿಸಿದರು.

ಇನ್ನಷ್ಟು ಆರೋಪಗಳನ್ನು ಮಾಡಿರುವ ಅವರು, “ಈ ವ್ಯವಸ್ಥೆ ಜಾರಿಗೆ ತರುವ ವೇಳೆ ಕಂದಾಯ ಇಲಾಖೆಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಇದು ಸಾಧನೆಯ ಸಮಾವೇಶವಲ್ಲ, ಭ್ರಷ್ಟಾಚಾರದ ಸಾಧನೆಯ ಸಮಾವೇಶ. ಬಡವರ ಮೇಲೆ ಆರ್ಥಿಕ ಭಾರ ಹೇರುವ ಕೆಲಸ ಈ ಸರ್ಕಾರ ಮಾಡುತ್ತಿದೆ,” ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ಅಕ್ರಮ ಆರೋಪ: ಯತ್ನಾಳ್ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ

0

ವಿಜಯಪುರ: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿಜಯಪುರ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಆರೋಪಿಸಿದ್ದರು.

ಈ ಸಂಬಂಧ ಸಲ್ಲಿಸಲಾದ ಮನವಿಯನ್ನು ಕಲಬುರಗಿ ಉಚ್ಚ ನ್ಯಾಯಾಲಯ ವಜಾಗೊಳಿಸಿ ಮನವಿದಾರರಿಗೆ ದಂಡ ವಿಧಿಸಿತ್ತು. ನಂತರ ಅವರು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಮನವಿಯನ್ನು ವಜಾಗೊಳಿಸಿ ಮನವಿದಾರರಿಗೆ ದಂಡ ವಿಧಿಸಿದೆ.

ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸುಳ್ಳು ಆರೋಪ ಮಾಡಿ ತಮ್ಮ ವಿರುದ್ಧ ಚುನಾವಣಾ ಮನವಿ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಕಲಬುರಗಿ ಉಚ್ಚ ನ್ಯಾಯಾಲಯವು 2026ರ ಜು.18ರಂದು ಮನವಿಯನ್ನು ವಜಾಗೊಳಿಸಿ ದಂಡ ವಿಧಿಸಿತ್ತು ಎಂದು ಹೇಳಿದ್ದಾರೆ.

ಆ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಅಲ್ಲಿಯೂ ಮನವಿ ವಜಾಗೊಂಡಿದ್ದು ದಂಡ ವಿಧಿಸಲಾಗಿದೆ. ತೀರ್ಪಿನ ಮರುಪರಿಶೀಲನೆಗಾಗಿ ಮತ್ತೊಮ್ಮೆ ಮನವಿ ಸಲ್ಲಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಲಾಯಿತು. ಆದರೆ ಆ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಈ ರೀತಿಯ ಬೆದರಿಕೆಗಳಿಗೆ ನಾನು ಹೆದರುವವನಲ್ಲ. ನನ್ನ ಮೇಲೆ ರಾಜಕೀಯ ಪ್ರೇರಿತ ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅಂತ್ಯದವರೆಗೆ ಕೊಂಡೊಯ್ಯುತ್ತೇನೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ವಿಜಯಪುರದ ಜನತೆ ಸದಾ ನನ್ನೊಂದಿಗಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಯತ್ನಾಳ್ ತಿಳಿಸಿದ್ದಾರೆ.

ಕಾಂಗ್ರೆಸ್ ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ, ಏಳನೇ ಗ್ಯಾರಂಟಿ ನೀರಿನ ಗ್ಯಾರಂಟಿ: ಡಿ.ಕೆ. ಶಿವಕುಮಾರ್

0

ಹಾವೇರಿ: ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ, ಎತ್ತಿನಹೊಳೆಗೆ ಅನುಮತಿ ಕೊಟ್ಟರೆ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

ಹಾವೇರಿಯಲ್ಲಿ ಶನಿವಾರ ನಡೆದ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. “ನಾನು ಚುನಾವಣೆಗೆ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ,

ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಈ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿರುವ ಕಾರಣಕ್ಕೆ ಪಂಚ ಗ್ಯಾರಂಟಿ ನೀಡಿ, ಆರನೇ ಗ್ಯಾರಂಟಿ ಭೂಮಿ ಗ್ಯಾರಂಟಿ ನೀಡುತ್ತಿದ್ದೇವೆ. ಭೂ ದಾಖಲೆ ಇಲ್ಲದ 1,11,111 ಜನರಿಗೆ ಪೋಡಿ ಮಾಡಿ, ಖಾತಾ ಮಾಡಿ ದಾಖಲೆ ನೀಡಲಾಗಿದೆ. ಆಮೂಲಕ ನಿಮ್ಮ ಮುಂದಿನ ಪೀಳಿಗೆಗೆ ಆಸ್ತಿ ದಾಖಲೆ ಕೊಟ್ಟ ಏಕೈಕ ಸರ್ಕಾರ ಈ ಕಾಂಗ್ರೆಸ್ ಸರ್ಕಾರ” ಎಂದು ತಿಳಿಸಿದರು.

“ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ 35-40 ಲಕ್ಷ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಕಾವೇರಿ ನದಿಗೆ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಮ್ಮ ಮಾರ್ಗದರ್ಶನದಲ್ಲಿ ಕಾನೂನು ತಜ್ಞರ ತಂಡ ವಾದ ಮಂಡಿಸಿ ಸುಪ್ರೀಂ ಕೋರ್ಟ್ ನಲ್ಲಿ ಈ ಯೋಜನೆ ಪರವಾಗಿ ತೀರ್ಪು ಬಂದಿದೆ. ಆಮೂಲಕ ತಮಿಳುನಾಡು ಹಾಕಿದ್ದ ಆಕ್ಷೇಪಣಾ ಅರ್ಜಿ ವಜಾಗೊಳಿಸಲಾಗಿದೆ. ಈಗ ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ.

ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಇನ್ನು ಕುಡಿಯುವ ನೀರು ಪೂರೈಕೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ 3 ತಿಂಗಳಲ್ಲಿ ಅನುಮತಿ ಕೊಟ್ಟರೆ ಸಾಕು. ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಹರಿಸುವ ಕೆಲಸವನ್ನು ಈ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಮಾಡಲಿದ್ದಾರೆ.

ಕೃಷ್ಣಾ, ಕಾವೇರಿ, ಮಹದಾಯಿ ಯೋಜನೆಗಳ ಮೂಲಕ ರೈತರ ಬದುಕು ಹಸನ ಮಾಡಲು ನಮ್ಮ ಸರ್ಕಾರ 7ನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡಲಿದೆ. ಪ್ರತಿಯೊಬ್ಬರಿಗೆ ಕುಡಿಯಲು ನೀರು, ವ್ಯವಸಾಯಕ್ಕೆ ನೀರು, ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಘೋಷಿಸಿದರು.

ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟು ಬರಲಿವೆ, ಬರೆದಿಟ್ಟುಕೊಳ್ಳಿ

“ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು ಇಂಧನ ಇಲಾಖೆಯಿಂದ ವರ್ಷಕ್ಕೆ 20 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ. ಇಂತಹ ಐಸಿಹಾಸಿಕ ಕಾರ್ಯಕ್ರಮಗಳನ್ನು ನಾವು ನೀಡುತ್ತಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ನಮಗೆ 136 ಸೀಟುಗಳು ಬಂದಿದ್ದವು, ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟುಗಳು ಬರಲಿವೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ.

ನನಗೆ ನಮ್ಮ ಶಾಸಕರಿಗೆ ಆತ್ಮವಿಶ್ವಾಸವಿದೆ. 3 ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಎರಡು ಕಡೆ ಮಾಜಿ ಮುಖ್ಯಮಂತ್ರಿಗಳ ಪುತ್ರರು ಸ್ಪರ್ಧೆ ಮಾಡಿದ್ದರು. ಆ ಕ್ಷೇತ್ರಗಳು ನಮ್ಮ ಬಳಿ ಇರಲಿಲ್ಲ. ಆ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ನೀಡಿ ನಮ್ಮ ಸಂಖ್ಯಾಬಲವನ್ನು 139ಕ್ಕೆ ಏರಿಕೆ ಮಾಡಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದ. ನಿಮ್ಮ ಈ ಋಣ ತೀರಿಸಲು ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದೇವೆ” ಎಂದು ತಿಳಿಸಿದರು.

ಬಿಜೆಪಿ, ದಳದ ಸರ್ಕಾರ ಇಂತಹ ಒಂದೇ ಒಂದು ಜನಪರ ಕಾರ್ಯಕ್ರಮ ನೀಡಿದೆಯೇ?

“ಜನರು ನೆಮ್ಮದಿಯಿಂದ ಬದುಕುತ್ತಿರುವ ದಿನಗಳು, ಮಹಿಳೆಯರು ಸಂತೋಷದಿಂದ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ದಿನಗಳು, ಗೃಹಿಣಿಯರ ಬದುಕಿನಲ್ಲಿ ಬದಲಾವಣೆ ಕಂಡ ದಿನಗಳು, ಯುವಕರು ಉದ್ಯೋಗ ಸೃಷ್ಟಿಮಾಡಿಕೊಳ್ಳುತ್ತಿರುವ ದಿನಗಳನ್ನು ನಾವು ನೀವು ನೋಡುತ್ತಿದ್ದೇವೆ. ಯಡಿಯೂರಪ್ಪನವರೇ, ಮಿಸ್ಟರ್ ಕುಮಾರಸ್ವಾಮಿ,

ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನಿಮ್ಮ ಆಡಳಿತ ಅವಧಿಯಲ್ಲಿ ಇಂತಹ ಒಂದು ಕೆಲಸವನ್ನು ನೀವು ಮಾಡಿದ್ದರೆ, ಜನರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿ ಹಾಗೂ ಜನತಾ ದಳದವರು ಕೊಟ್ಟಿದ್ದರೆ, ರಾಜಕೀಯದಲ್ಲಿ ನಿಮಗೆ ಮಾತನಾಡುವ ಶಕ್ತಿ ಇರುತ್ತಿತ್ತು. ಆದರೆ ನೀವು ಅದನ್ನು ಕಳೆದುಕೊಂಡಿದ್ದೀರಿ” ಎಂದು ವಾಗ್ದಾಳಿ ನಡೆಸಿದರು.

ಕೊಲ್ಕತ್ತದಿಂದ ಶಿಲ್ಲಾಂಗ್‌ʼಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ!

0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಸ್ಫೋಟಕ ಇರುವ ಬಗ್ಗೆ ಬೆದರಿಕೆ ಪತ್ರ ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ಭಾರೀ ಆತಂಕ ಉಂಟಾಗಿದೆ.

ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಘಾಲಯದ ಶಿಲ್ಲಾಂಗ್ ನಗರಕ್ಕೆ ತೆರಳಬೇಕಿದ್ದ ಇಂಡಿಗೋ ಸಂಸ್ಥೆಯ ವಿಮಾನ ಸಂಖ್ಯೆ 6ಇ–7304 ಬೆಳಿಗ್ಗೆ 9 ಗಂಟೆ 15 ನಿಮಿಷಕ್ಕೆ ಹೊರಡಲು ಸಿದ್ಧವಾಗಿತ್ತು.

ಈ ವೇಳೆ ಪ್ರಯಾಣಿಕರು ವಿಮಾನಕ್ಕೆ ಹತ್ತುತ್ತಿದ್ದ ಸಂದರ್ಭದಲ್ಲಿ, ವಿಮಾನದ ಶೌಚಾಲಯದಲ್ಲಿ ಒಂದು ಕಾಗದದ ಚೂರು ಪತ್ತೆಯಾಗಿದೆ. ಅದರಲ್ಲಿ ವಿಮಾನದೊಳಗೆ ಸ್ಫೋಟಕ ಇಡಲಾಗಿದೆ ಎಂದು ಬರೆಯಲಾಗಿತ್ತು.  ಘಟನೆ ತಿಳಿಯುತ್ತಿದ್ದಂತೆಯೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.

ಬಳಿಕ ವಿಮಾನವನ್ನು ಪ್ರತ್ಯೇಕ ನಿಲುಗಡೆ ಪ್ರದೇಶಕ್ಕೆ ಸ್ಥಳಾಂತರಿಸಿ ಸಂಪೂರ್ಣ ತಪಾಸಣೆ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದ ನಿರ್ದೇಶಕ ವಿಕ್ರಮ್ ಸಿಂಗ್ ಅವರ ಮಾಹಿತಿಯಂತೆ, ಪರಿಶೀಲನೆ ಪ್ರಕ್ರಿಯೆ ಮುಂದುವರಿದಿದ್ದು ಭದ್ರತೆಯನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಪ್ರಕರಣ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

error: Content is protected !!