Home Blog

ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿ ಬಂಡವಾಳ ಹಾಕಲು ಹೆದರುತ್ತಿದೆ: ಪ್ರಿಯಾಂಕ್ ಖರ್ಗೆ ಆತಂಕ!

0

ಬೆಂಗಳೂರು: ಕೋಮುವಾದದ ಕಾರಣದಿಂದ ಕರಾವಳಿ ಭಾಗದಲ್ಲಿ ಐಟಿ–ಬಿಟಿ ಕಂಪನಿಗಳು ಬಂಡವಾಳ ಹೂಡಿಕೆಗೆ ಹೆದರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.

ನಗರದ ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಐಟಿ–ಬಿಟಿ ಕಂಪನಿಗಳಿಗೆ ಹೂಡಿಕೆ ಮಾಡಲು ನಾವು ಆಹ್ವಾನ ನೀಡುತ್ತೇವೆ. ಕಂಪನಿಗಳು ಸಿದ್ಧವಾಗಿರುತ್ತವೆ. ಆದರೆ ನಾಳೆ ಅವರ ಉದ್ಯೋಗಿಗಳಿಗೆ ತೊಂದರೆ ಉಂಟಾದರೆ ಏನು ಮಾಡಬೇಕು ಎಂಬ ಚಿಂತೆಯೂ ಅವರಲ್ಲಿ ಇದೆ. ಧರ್ಮಗುರುಗಳು ಮತ್ತು ರಾಜಕಾರಣಿಗಳು ಪ್ರಬುದ್ಧವಾಗಿ ಮಾತನಾಡುವವರೆಗೂ ಸಮಾಜದ ಉದ್ಧಾರ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಧರ್ಮಗುರುಗಳು ಸೃಷ್ಟಿಸುವ ಧರ್ಮದ ನಶೆ ನಿಲ್ಲಬೇಕು,” ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, “ನಾನು ಅದಮಾರು ಮಠದಲ್ಲಿ ಓದಿದವನು. ತೇಜಸ್ವಿ ಸೂರ್ಯ ಕಾನ್ವೆಂಟ್‌ನಲ್ಲಿ ಓದಿದ್ದಾರೆ. ಆದರೂ ನನ್ನನ್ನು ಮಾತ್ರ ಕಾನ್ವೆಂಟ್‌ನಲ್ಲಿ ಓದಿದವನು ಎಂದು ಹೇಳಲಾಗುತ್ತದೆ. ಧರ್ಮ ಮನುಷ್ಯನಿಗಾಗಿ ಇರಬೇಕು; ಮನುಷ್ಯ ಧರ್ಮಕ್ಕಾಗಿ ಅಲ್ಲ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, “ಈಗ ಔರಂಗಜೇಬನ ಸಮಾಧಿ ತೆಗೆಯಲು ಜ್ಞಾನೋದಯವಾಗಿದೆ ಎಂದು ಮಾತನಾಡುವುದು ಸರಿಯಲ್ಲ,” ಎಂದು ಕಿಡಿಕಾರಿದರು. ಅವರು ಪರೋಕ್ಷವಾಗಿ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದರು.

ದಾವಣಗೆರೆ| ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 93 ಲಕ್ಷ ರೂ. ವಂಚನೆ!

0

ದಾವಣಗೆರೆ:- ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಮಹಿಳಾ ಟೆಕ್ಕಿಯೊಬ್ಬರಿಗೆ 93 ಲಕ್ಷ ರೂ. ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನಗರದ ಸಿದ್ದವೀರಪ್ಪ ಬಡಾವಣೆಯ 38 ವರ್ಷದ ಮಹಿಳಾ ಟೆಕ್ಕಿಗೆ ಈ ವಂಚನೆ ನಡೆದಿದೆ. ‘ವಿಐಪಿ ರುದ್ರಾ ಷೇರ್ಸ್’ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ನಲ್ಲಿ ಬಂದ ಸಂದೇಶವನ್ನು ನಂಬಿ ಅವರು ಹೂಡಿಕೆ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ಲಾಭ ಸಿಗುತ್ತದೆ ಎಂಬ ಭರವಸೆಯಿಂದ ಹಂತ ಹಂತವಾಗಿ ಒಟ್ಟು 93 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದಾರೆ.

ಆದರೆ ನಂತರ ಲಾಭಾಂಶ ಮಾತ್ರವಲ್ಲದೆ, ಹೂಡಿಕೆ ಮಾಡಿದ ಮೂಲಧನವೂ ವಾಪಸ್ ಬರದಿದ್ದಾಗ ತಮಗೆ ವಂಚನೆ ಆಗಿರುವುದು ಮಹಿಳೆಗೆ ಅರಿವಾಗಿದೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಸಂಕಷ್ಟ; 7 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ!

0

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಇಂದು ಸಿಐಡಿ ತಂಡ 42ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತು.

ಕೋರಮಂಗಲದಲ್ಲಿರುವ ನ್ಯಾಯಾಲಯದಲ್ಲಿ ವೈದ್ಯಕೀಯ ವರದಿಯನ್ನು ಸಲ್ಲಿಸಲಾಗಿದ್ದು, ವಿಚಾರಣೆ ಬಳಿಕ ನ್ಯಾಯಾಧೀಶರು ಅವರಿಗೆ ಸಿಐಡಿ ಕಸ್ಟಡಿ ನೀಡುವಂತೆ ಆದೇಶಿಸಿದರು. ಬೈರತಿ ಬಸವರಾಜ್ ಅವರ ವೈದ್ಯಕೀಯ ವರದಿ ನಾರ್ಮಲ್ ಆಗಿರುವ ಹಿನ್ನೆಲೆಯಲ್ಲಿ ಎಸ್‌ಪಿಪಿ 9 ದಿನಗಳ ಕಸ್ಟಡಿಗೆ ಮನವಿ ಸಲ್ಲಿಸಿದರು. ಇದಕ್ಕೆ ಅವರ ಪರ ವಕೀಲರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.

ವಾದ-ವಿವಾದ ಆಲಿಸಿದ ನ್ಯಾಯಾಧೀಶರು 7 ದಿನಗಳ ಸಿಐಡಿ ಕಸ್ಟಡಿಗೆ ಆದೇಶ ನೀಡಿದ್ದು, ಫೆಬ್ರವರಿ 21ರವರೆಗೆ ಕಸ್ಟಡಿ ಮುಂದುವರಿಯಲಿದೆ. ಬಂಧನದ ಬಳಿಕ ಮೆಡಿಕಲ್ ಟೆಸ್ಟ್ ನಡೆಸಲಾಗಿದ್ದು, ಹೃದಯ ಸಂಬಂಧಿತ ಸಮಸ್ಯೆ ಇರುವುದಾಗಿ ಪತ್ತೆಯಾಗಿದೆ. ಹೀಗಾಗಿ ಹೆಚ್ಚಿನ ತಪಾಸಣೆಗೆ ಬೌರಿಂಗ್ ಆಸ್ಪತ್ರೆ ವೈದ್ಯರು ಜಯದೇವ ಆಸ್ಪತ್ರೆಗೆ ರೆಫರ್ ಮಾಡಿದ್ದರು ಎಂದು ಎಸ್‌ಪಿಪಿ ಅಶೋಕ್ ನಾಯ್ಕ್ ತಿಳಿಸಿದ್ದಾರೆ. ಈ ವರದಿಯ ಆಧಾರದಲ್ಲಿ ಚಿಕಿತ್ಸೆ ಬಗ್ಗೆ ನ್ಯಾಯಾಧೀಶರು ಸೂಚನೆ ನೀಡಿದ್ದು, ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲ, ಎಲ್ಲವೂ ನಾರ್ಮಲ್ ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಆಹಾರದ ಕುರಿತು ಮನವಿ ಮಾಡಲಾಗಿದ್ದು, ಜಯದೇವ ಆಸ್ಪತ್ರೆಯ ಚಾರ್ಟ್ ಪ್ರಕಾರ ಊಟದ ವ್ಯವಸ್ಥೆ ಕಲ್ಪಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ. ಆದರೆ ವಿಶೇಷ ಊಟ ಅಥವಾ ಮನೆ ಊಟಕ್ಕೆ ಸಂಬಂಧಿಸಿದ ಮನವಿಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಎಸ್‌ಪಿಪಿ ಮಾಹಿತಿ ನೀಡಿದ್ದಾರೆ.

ಮುರಿದ ಸೇತುವೆಗೆ ಬೈಕ್ ಬಿದ್ದು ದುರಂತ: ಮೂವರು ಯುವಕರ ಸಾವು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ!

0

ಮಧ್ಯಪ್ರದೇಶ: ಕಳೆದ ವರ್ಷ ಭಾರೀ ಮಳೆಗೆ ಭಾಗಶಃ ಕೊಚ್ಚಿಹೋಗಿದ್ದ ಸೇತುವೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ತಡರಾತ್ರಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರು ರಾಹ್ಲಿ ವಿಧಾನಸಭಾ ಕ್ಷೇತ್ರದ ನಿವಾಸಿಗಳಾಗಿದ್ದು, ತೆಂಡುಖೇಡಾದಿಂದ ಝಾಪನ್ ಕಡೆಗೆ ಪ್ರಯಾಣಿಸುತ್ತಿದ್ದರು. ಝಾಪನ್ ಸಮೀಪ ಬೈರ್ಮಾ ನದಿ ಮೇಲೆ ನಿರ್ಮಿಸಲಾದ ಸೇತುವೆ ಕಳೆದ ವರ್ಷದ ಮಳೆಯ ವೇಳೆ ತೀವ್ರವಾಗಿ ಹಾನಿಗೊಂಡು, ಅದರ ಒಂದು ಭಾಗ ಸಂಪೂರ್ಣವಾಗಿ ಕುಸಿದಿತ್ತು. ಆದರೆ ಸೇತುವೆ ಅಪಾಯಕಾರಿಯಾಗಿದೆ ಎಂಬುದನ್ನು ಸೂಚಿಸಲು ಯಾವುದೇ ಎಚ್ಚರಿಕೆ ಫಲಕಗಳು ಅಥವಾ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಲಾಗಿರಲಿಲ್ಲ. ಕತ್ತಲಿನಲ್ಲಿ ಸೇತುವೆ ಮುರಿದಿರುವುದನ್ನು ಅರಿಯದ ಯುವಕರು ವೇಗವಾಗಿ ಸಾಗಿದ ಪರಿಣಾಮ, ಬೈಕ್ ನೇರವಾಗಿ ಕುಸಿದ ಭಾಗಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ.

ಡಿಕ್ಕಿಯ ತೀವ್ರತೆಗೆ ಮೋಟಾರ್‌ಸೈಕಲ್ ಸೇತುವೆಯ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 21 ವರ್ಷದ ಅಜಯ್ ಘೋಸಿ, 21 ವರ್ಷದ ಅಮಿತ್ ಕುರ್ಮಿ ಮತ್ತು 22 ವರ್ಷದ ಪವನ್ ಕುರ್ಮಿ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಕೆಲ ಸಮಯದವರೆಗೆ ಯಾರಿಗೂ ಘಟನೆ ಗಮನಕ್ಕೆ ಬರದೇ ಇದ್ದುದರಿಂದ ರಕ್ಷಣೆಗೆ ಅವಕಾಶವೇ ಸಿಗಲಿಲ್ಲ ಎಂದು ವರದಿಯಾಗಿದೆ.
ಈ ದುರ್ಘಟನೆಯು ಆಡಳಿತ ವ್ಯವಸ್ಥೆಯ ಗಂಭೀರ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ.

ಕಳೆದ ವರ್ಷದಿಂದಲೇ ಹಾನಿಗೊಂಡಿದ್ದ ಸೇತುವೆಯನ್ನು ಮುಚ್ಚದೆ ಇರುವುದು, ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಗದಗದ ತ್ರಿಕೂಟೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ವೈಭವ; ಹರಿದು ಬಂದ ಭಕ್ತ ಸಾಗರ!

0

ಗದಗ:- ಗದಗದ ಐತಿಹಾಸಿಕ ಶ್ರೀ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಸಂಭ್ರಮ ಮನೆಮಾಡಿದೆ.

ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ಭಕ್ತರ ಸಂಚಾರ ಜೋರಾಗಿದೆ. ಅನೇಕ ಪೂಜೆ–ಪುನಸ್ಕಾರಗಳು ಭಕ್ತಿ ಭಾವದೊಂದಿಗೆ ನೆರವೇರಿಸುತ್ತಿದ್ದು, ಸಾವಿರಾರು ಭಕ್ತರು ಶ್ರೀ ತ್ರಿಕೂಟೇಶ್ವರನ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ.

ಈ ದೇವಾಲಯದ ವಿಶೇಷತೆ ಎಂದರೆ ಒಂದೇ ಪಾಣಿಬಟ್ಟಲಿನಲ್ಲಿ ಬ್ರಹ್ಮ–ವಿಷ್ಣು–ಮಹೇಶ್ವರ ತತ್ವಗಳನ್ನು ಪ್ರತಿನಿಧಿಸುವ ಸೃಷ್ಟಿ, ಸ್ಥಿತಿ, ಲಯ ರೂಪದ ತ್ರಿಲಿಂಗ ಉದ್ಭವ ಲಿಂಗಗಳು ವಿರಾಜಮಾನವಾಗಿವೆ. ಜೊತೆಗೆ ಸಾವಿತ್ರಿ–ಸರಸ್ವತಿ–ಗಾಯತ್ರಿ ದೇವತೆಗಳು ಒಂದೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಗಿರುವುದು ಅಪರೂಪದ ವೈಶಿಷ್ಟ್ಯವಾಗಿದೆ. ಇದೇ ಕಾರಣಕ್ಕೆ ಗದಗ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಭಕ್ತರು ಹರಿದುಬರುತ್ತಿದ್ದಾರೆ.

ಮಹಾ ಶಿವರಾತ್ರಿ ಅಂಗವಾಗಿ ಬಿಲ್ವಾರ್ಚನೆ, ಕ್ಷೀರಾಭಿಷೇಕ, ಎಳೆನೀರು ಅಭಿಷೇಕ, ರುದ್ರಾಭಿಷೇಕ, ಲಘು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಯಾಮ ಪೂಜೆ ಹಾಗೂ ಮಹಾ ಮಂಗಳಾರತಿ ಸೇರಿದಂತೆ ಹಲವು ವಿಶೇಷ ಪೂಜೆಗಳು ನಡೆಯಲಿವೆ.

ಸದ್ಯ ದೇವಸ್ಥಾನದ ಆವರಣದಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ಶಿವನಾಮ ಸ್ಮರಣೆಯೊಂದಿಗೆ ಗದಗ ನಗರದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಕನ್ನಡಿಗ ವಿದ್ಯಾರ್ಥಿ ಶವವಾಗಿ ಪತ್ತೆ; ಪೋಷಕರಿಂದ ತುರ್ತು ವೀಸಾ ಅರ್ಜಿ!

0

ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದ್ದ ಕನ್ನಡಿಗ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಸಾಕೇತ್ ಪೋಷಕರು ಅಮೆರಿಕಗೆ ತೆರಳಲು ತುರ್ತು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಮೂಲದ 22 ವರ್ಷದ ಸಾಕೇತ್, ಐಐಟಿ ಮದ್ರಾಸ್ನಲ್ಲಿ ಪದವಿ ಪಡೆದ ಬಳಿಕ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ರಾಸಾಯನಿಕ ಹಾಗೂ ಜೈವಿಕ ಆಣ್ವಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ಸಾಕೇತ್ ಅವರಿಗಾಗಿ ಪೊಲೀಸರು ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸಾಕೇತ್ ಕಾಣೆಯಾಗಿದ್ದ ಬಳಿಕ ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿಯ ಮನೆಯ ಸಮೀಪ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಹೊಂದಿದ್ದ ಬ್ಯಾಗ್ ಪತ್ತೆಯಾಗಿತ್ತು. ಅಲ್ಲದೆ ಲೇಕ್ ಅಂಜಾ ಹಾಗೂ ಬರ್ಕ್ಲಿ ಹಿಲ್ಸ್ ಪ್ರದೇಶಗಳಲ್ಲಿ ಶೋಧ ಕಾರ್ಯ ಮುಂದುವರಿದಿತ್ತು. ಇದೀಗ ಸಾಕೇತ್ ಮೃತದೇಹ ಪತ್ತೆಯಾಗಿರುವುದನ್ನು ಭಾರತೀಯ ರಾಯಭಾರಿ ಕಚೇರಿ, ಸ್ಯಾನ್ ಫ್ರಾನ್ಸಿಸ್ಕೋ ದೃಢಪಡಿಸಿದೆ.

ಮಗನ ಗುರುತು ಪತ್ತೆ ಹಾಗೂ ಮುಂದಿನ ಪ್ರಕ್ರಿಯೆಗಾಗಿ ಕುಟುಂಬಸ್ಥರು ಕ್ಯಾಲಿಫೋರ್ನಿಯಾಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಬೆಂಗಳೂರಿನ ನಾಗರಬಾವಿ ನಿವಾಸಿಯಾದ ಸಾಕೇತ್ ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಮಗನ ಸಾವಿನ ಸುದ್ದಿ ತಿಳಿದು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಶಿವರಾತ್ರಿ ದಿನವೇ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳ ಅಟ್ಟಹಾಸ; ಶಿವಲಿಂಗ, ನಂದಿ ಮೂರ್ತಿಗಳು ಭಗ್ನ- ಗ್ರಾಮಸ್ಥರು ಕಿಡಿ!

0

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿರುವ ತುಂಗಭದ್ರಾ ನದಿ ತೀರದ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ರಾತ್ರೋರಾತ್ರಿ ಶಿವಲಿಂಗ ಹಾಗೂ ನಂದಿ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಶಿವರಾತ್ರಿಯ ದಿನವೇ ಶಿವಲಿಂಗದ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ದೇವಸ್ಥಾನದ ಸಮೀಪದಲ್ಲಿರುವ ಹೊನ್ನತ್ತೆಮ್ಮನ ಮೂರ್ತಿಗಳನ್ನೂ ಸಹ ದುಷ್ಕರ್ಮಿಗಳು ಹಾನಿಗೊಳಿಸಿರುವುದು ತಿಳಿದುಬಂದಿದೆ.

ಶನಿವಾರ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೇವಸ್ಥಾನಕ್ಕೆ ತೆರಳಿ ಸುಣ್ಣ, ಬಣ್ಣ ಬಳಿದು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಮುಂಜಾನೆ ಪೂಜೆಗಾಗಿ ತೆರಳಿದಾಗ ಮೂರ್ತಿಗಳು ಭಗ್ನಗೊಂಡಿರುವುದನ್ನು ಕಂಡು ಭಕ್ತರು ತೀವ್ರ ಆಘಾತ ವ್ಯಕ್ತಪಡಿಸಿದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

ಘಟನೆ ಸ್ಥಳಕ್ಕೆ ಅಧಿಕಾರಿಗಳು ತಡವಾಗಿ ಬಾರದಿರುವುದಕ್ಕೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಕ್ರಮ ಜರುಗಿಸಿ ದೇವಸ್ಥಾನಕ್ಕೆ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಮಂಡ್ಯ| ರಾಸಾಯನಿಕ ಸಂಗ್ರಹ ಟ್ಯಾಂಕ್ ಸ್ಫೋಟ: ಇಬ್ಬರು ಸಾವು, ಮೂವರು ಗಂಭೀರ; ಓರ್ವನ ಕೈ ಕಟ್!

0

ಮಂಡ್ಯ:– ತಾಲೂಕಿನ ಬಸರಾಳು ಸಮೀಪದ ಕಾರೆಕಟ್ಟೆ ಗ್ರಾಮದಲ್ಲಿ ಭಾರೀ ದುರಂತ ಸಂಭವಿಸಿದೆ.

ಕಾರಕಟ್ಟೆ ಬಳಿಯ ಕೀರ್ತಿ ಕೆಮಿಕಲ್ಸ್ ಇಂಡಸ್ಟ್ರೀಸ್‌ನಲ್ಲಿ ರಾಸಾಯನಿಕ ಸಂಗ್ರಹಕ್ಕಾಗಿ ಬಳಸುತ್ತಿದ್ದ ಬೃಹತ್ ಟ್ಯಾಂಕ್ ಸ್ಫೋಟಗೊಂಡಿದೆ.

ಘಟನೆಯಲ್ಲಿ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರ ಛಿದ್ರಗೊಂಡಿರುವುದಾಗಿ ತಿಳಿದುಬಂದಿದೆ. ಸ್ಥಳದಲ್ಲಿದ್ದ ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವನ ಕೈ ಸಂಪೂರ್ಣ ಕಟ್ ಆಗಿರುವ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ದುರ್ಘಟನೆ ಬಳಿಕ ಕಾರ್ಖಾನೆ ಮಾಲೀಕ ಸ್ಥಳದಿಂದ ನಾಪತ್ತೆಯಾಗಿರುವ ಮಾಹಿತಿ ದೊರೆತಿದೆ. ಸ್ಥಳಕ್ಕೆ ಬಸರಾಳು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಹಾಗೂ ಗಾಯಾಳುಗಳ ಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಈ ಸಂಬಂಧ ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಿಗೂಢವಾಗಿ ಕಣ್ಮರೆಯಾಗಿದ್ದ ಮಹಿಳೆ ಕೊನೆಗೂ ಪ್ರತ್ಯಕ್ಷ; ಗಂಡನ ಸ್ನೇಹಿತನ ಮನೆಯಲ್ಲಿ ಸಿಕ್ಕಿಬಿದ್ದ ಐನಾತಿ ಲೇಡಿ!

0

ಹಾಸನ: ಮದುವೆಗೆಂದು ಬಂದಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಪ್ರಿಯಾಂಕಾ ಪತ್ತೆಯಾಗಿದ್ದು, ಪ್ರಕರಣದಲ್ಲಿ ಅನೈತಿಕ ಸಂಬಂಧ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ, ಕುಣಿಗಲ್‌ನ ಗೊಟ್ಟಿಕೆರೆ ಪ್ರದೇಶದಲ್ಲಿ ಡೇವಿಡ್ ಎಂಬಾತನ ಮನೆಯಲ್ಲಿ ಪ್ರಿಯಾಂಕಾ ಇದ್ದುದು ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೇಲೂರು ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.

ಡೇವಿಡ್ ಮನೆಯಲ್ಲೇ ಪ್ರಿಯಾಂಕಾ ಕಳೆದ ಎರಡು ದಿನಗಳಿಂದ ವಾಸವಿದ್ದಳು ಎನ್ನಲಾಗಿದೆ.
ಈ ಪ್ರಕರಣವು ಬೇಲೂರು ಪೊಲೀಸರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ಸೀನ್ ಕ್ರಿಯೇಟ್ ಮಾಡಿ ಪ್ರಿಯಾಂಕಾ ನಾಪತ್ತೆಯಾಗಿದ್ದ ಹಿನ್ನೆಲೆ ತನಿಖೆ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಪೊಲೀಸರ ಸತತ ಪ್ರಯತ್ನದ ಫಲವಾಗಿ, ಪತಿಯ ಸ್ನೇಹಿತನಾಗಿರುವ ಡೇವಿಡ್ ಮನೆಯಲ್ಲಿ ಕೊನೆಗೂ ಮಹಿಳೆ ಪತ್ತೆಯಾಗಿದ್ದಾರೆ.

ತನಿಖೆಯ ವೇಳೆ ಡೇವಿಡ್ ಕುಣಿಗಲ್ ಪಟ್ಟಣದ ಗೊಟ್ಟಿಕೆರೆ ಪ್ರದೇಶದಲ್ಲಿ ವಾಸವಾಗಿದ್ದು, ಪಟ್ಟಣದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಪ್ರಿಯಾಂಕಾ, ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆಂದು ಬಂದಿದ್ದಳು. ಫೆಬ್ರವರಿ 12ರ ರಾತ್ರಿ 8 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದ ಬಳಿ ಈಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ನಾಪತ್ತೆಯಾಗುವ ಮುನ್ನ ಸಂಜೆ 7.30ರ ಸುಮಾರಿಗೆ ಕುಟುಂಬದವರಿಗೆ ಕರೆ ಮಾಡಿದ್ದ ಪ್ರಿಯಾಂಕಾ, ‘ಯಾರೋ ಒಬ್ಬರ ಜೊತೆ ಇದ್ದೇನೆ’ ಎಂದು ಹೇಳಿ ಕರೆ ಕಟ್ ಮಾಡಿದ್ದಳು. ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಬೇಲೂರು ತಾಲೂಕಿನ ಕಲ್ಕೆರೆ ಸಮೀಪ ಮಹಿಳೆಯ ಒಳಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣದ ಮೇಲೆ ಮತ್ತಷ್ಟು ಅನುಮಾನ ಮೂಡಿಸಿತ್ತು.

ಪ್ರಸ್ತುತ ಪೊಲೀಸರು ಪ್ರಿಯಾಂಕಾಳನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

ಗೋಲ್ಡ್ ಪ್ರಿಯರ ಗಮನಕ್ಕೆ| ಇಂದು ಚಿನ್ನದ ಬೆಲೆ ಗ್ರಾಮ್​ಗೆ 180 ರೂ ಏರಿಕೆ!

0

ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡಿದ್ದು, ಆಭರಣಗಳ ಹಾವು ಏಣಿ ಆಟ ಮುಂದುವರಿದಿದೆ.

ಈ ವಾರ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಚಿನ್ನದ ಬೆಲೆ ವಾರಾಂತ್ಯದಲ್ಲಿ ತುಸು ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 180 ರೂನಿಂದ 200 ರೂವರೆಗೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,44,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,57,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,44,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 15ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,775 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,460 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,831 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,775 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,460 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ.

error: Content is protected !!