Home Blog

ಚಾಕೊಲೇಟ್ ಆಸೆ ತೋರಿಸಿ ಮೂವರು ಅಪ್ರಾಪ್ತೆಯರಿಗೆ ಕಿರುಕುಳ: 64 ವರ್ಷದ ವೃದ್ಧ ಬಂಧನ

0

ಬೆಂಗಳೂರು: ಚಾಕೊಲೇಟ್ ಆಸೆ ತೋರಿಸಿ ಮೂವರು ಅಪ್ರಾಪ್ತೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ 64 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೋಷಕರು ಬೆಳಗ್ಗೆ 8:30ಕ್ಕೆ ಮಕ್ಕಳನ್ನು ಶಾಲೆಗೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಶಾಲೆ 10 ಗಂಟೆಗೆ ಆರಂಭವಾಗುತ್ತಿದ್ದರೂ, ಮಕ್ಕಳು ಮುಂಚಿತವಾಗಿಯೇ ಶಾಲೆ ಸಮೀಪ ಬರುತ್ತಿರುವುದನ್ನು ಗಮನಿಸಿದ್ದ ವೃದ್ಧ, ಚಾಕೊಲೇಟ್ ನೀಡಿ ಆಮಿಷವಿಟ್ಟು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಶುಕ್ರವಾರ ಎರಡನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಬಳಿಕ ಆಕೆ ಮನೆಯಲ್ಲಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ನಂತರ ವಿಚಾರಣೆ ನಡೆಸಿದಾಗ ಮೂವರು ಬಾಲಕಿಯರಿಗೆ ಕಿರುಕುಳ ನೀಡಿರುವುದು ಬಹಿರಂಗವಾಗಿದೆ.

ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಮಕ್ಕಳ ಸುರಕ್ಷತೆ ಕುರಿತು ಪೋಷಕರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಅನಧಿಕೃತ ಪಾರ್ಟಿಗಳಿಗೆ ಬ್ರೇಕ್ ಹಾಕಲು ಪೊಲೀಸ್ ದಾಳಿ – ರೆಸಾರ್ಟ್ ಮಾಲೀಕರ ವಿರುದ್ಧ ಕಠಿಣ ಕ್ರಮ

0

ಕೊಪ್ಪಳ: ಜಿಲ್ಲೆಯಲ್ಲಿ ವಿದೇಶಿಗರ ಅಕ್ರಮ ಪಾರ್ಟಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಗಂಗಾವತಿ ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಫೆಬ್ರವರಿ 16ರಂದು ನಡೆದ ಪಾರ್ಟಿಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಲಾಗಿದೆ.

ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಜೆ ವ್ಯವಸ್ಥೆ ಮಾಡಿ, ತೆರೆದ ಜಾಗದಲ್ಲಿ ಪಾರ್ಟಿ ನಡೆಸಲಾಗಿದೆ. ‘ದಿ ಹಂಪಿ ಕೆಫೆ’ ರೆಸಾರ್ಟ್ ಮಾಲೀಕ ಪಿಯೂಷ್ ಹಾಗೂ ವ್ಯವಸ್ಥಾಪಕರ ವಿರುದ್ಧ ಕೆಪಿ ಕಾಯ್ದೆಯಡಿ ಕೇಸ್ ದಾಖಲಾಗಿದೆ.

ಎಸ್‌ಪಿ ರಾಮ್ ಅರಸಿದ್ದಿ ನೇತೃತ್ವದಲ್ಲಿ ತನಿಖೆ ವೇಗ ಪಡೆದುಕೊಂಡಿದ್ದು, ವಿಶೇಷ ತಂಡ ರಚಿಸಿ ಭಾಗವಹಿಸಿದ್ದವರ ವಿವರ ಸಂಗ್ರಹಿಸಲಾಗುತ್ತಿದೆ. ಜಿಲ್ಲಾಡಳಿತವೂ ಟಾಸ್ಕ್ ಫೋರ್ಸ್ ರಚಿಸಿ ಪರಿಶೀಲನೆ ಆರಂಭಿಸಿದೆ.

ದೂರುಗಳ ನಡುವೆಯೂ ಅನಧಿಕೃತ ಪಾರ್ಟಿಗಳು ಮರುಕಳಿಸುತ್ತಿರುವುದು ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.

ದಾಳಿಗೆ ಸಂಚು! ದೆಹಲಿಯಲ್ಲಿ ಹೈ ಅಲರ್ಟ್ – ಕೆಂಪು ಕೋಟೆ, ಪ್ರಮುಖ ಧಾರ್ಮಿಕ ತಾಣಗಳಲ್ಲಿ ಬಿಗಿ ಭದ್ರತೆ

0

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಪಾರಂಪರಿಕ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಯೋತ್ಪಾದಕ ದಾಳಿ ಸಂಭವಿಸುವ ಸಾಧ್ಯತೆ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಂಚು ರೂಪಿಸಿದೆ ಎನ್ನಲಾಗಿದೆ. ಐಇಡಿ ದಾಳಿ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಕೆಂಪು ಕೋಟೆ ಸುತ್ತಮುತ್ತ, ಚಾಂದಿನಿ ಚೌಕ್ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ ದೇವಸ್ಥಾನಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಗುಪ್ತಚರ ಇಲಾಖೆ ಮಾಹಿತಿ ಪರಿಶೀಲನೆ ನಡೆಸುತ್ತಿದ್ದು, ಕೇಂದ್ರ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರು ನಿಕಟ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ, ವಾಹನ ತಪಾಸಣೆ, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಹಾಗೂ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡದೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೊಲೆ ಶಂಕೆಯಿಂದ ಕುಟುಂಬ ಮಿಲನದವರೆಗೆ: ಹಾಸನದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಅಂತ್ಯ

0

ಹಾಸನ: ಹಾಸನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಅಂತಿಮವಾಗಿ ಕುಟುಂಬ ಮಿಲನದ ತಿರುವು ಸಿಕ್ಕಿದೆ. ಪ್ರಿಯಾಂಕ ನಾಪತ್ತೆಯಾಗಿದ್ದ ವೇಳೆ ಕಲ್ಕೆರೆ ಕೆರೆ ಬಳಿ ಆಕೆಯ ವಸ್ತುಗಳು ಪತ್ತೆಯಾಗಿದ್ದರಿಂದ ಕೊಲೆ ಶಂಕೆ ಉಂಟಾಗಿತ್ತು.

ಆದರೆ ತನಿಖೆಯಲ್ಲಿ ಆಕೆ ಪ್ರಿಯಕರ ಡೇವಿಡ್ ಜೊತೆ ತೆರಳಿ ನಾಟಕೀಯ ಸನ್ನಿವೇಶ ಸೃಷ್ಟಿಸಿದ್ದುದು ಬೆಳಕಿಗೆ ಬಂತು. ಡೇವಿಡ್ ವಾಸವಿದ್ದ ಮನೆಯಲ್ಲಿ ಆಕೆ ಜೀವಂತವಾಗಿ ಪತ್ತೆಯಾದಳು.

ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಾಂತ್ವಾನ ಕೇಂದ್ರದಲ್ಲಿ ಪತಿ ರುದ್ರೇಶ್ ಹಾಗೂ ಪ್ರಿಯಾಂಕ ನಡುವೆ ಮುಕ್ತ ಮಾತುಕತೆ ನಡೆಯಿತು. ಮೊದಲಿಗೆ ಗಂಡನ ಜೊತೆ ಹೋಗಲು ನಿರಾಕರಿಸಿದ್ದ ಪ್ರಿಯಾಂಕ, ನಂತರ ತನ್ನ ತಪ್ಪಿನ ಅರಿವಿನಿಂದ ಕುಟುಂಬದ ಹಿತದೃಷ್ಟಿಯಿಂದ ಗಂಡನ ಜೊತೆ ಬದುಕಲು ಒಪ್ಪಿಗೆ ನೀಡಿದ್ದಾಳೆ.

ಕುಟುಂಬ ಮೌಲ್ಯಗಳಿಗೆ ಆದ್ಯತೆ ನೀಡಿದ ನಿರ್ಧಾರದಿಂದ ಸಂಚಲನ ಮೂಡಿಸಿದ್ದ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ.

2023ರ ಗ್ರೆನೇಡ್ ಪತ್ತೆ ಪ್ರಕರಣ: ಮೋಸ್ಟ್ ವಾಂಟೆಡ್ ಶಂಕಿತ ಉಗ್ರ NIA ಬಲೆಗೆ!

0

ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ಶಂಕಿತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು ಅರ್ಷದ್ ಖಾನ್ ಎಂದು ಗುರುತಿಸಲಾಗಿದೆ. ಈತ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ರೂವಾರಿ ಜುನೈದ್ ಅಹ್ಮದ್‌ನ ಆಪ್ತ ಸ್ನೇಹಿತನಾಗಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಈ ಹಿಂದೆ ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅರ್ಷದ್ ಖಾನ್‌ನ್ನು ಶಂಕೆ ಮೇರೆಗೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದನು. ಪ್ರಕರಣ ಎನ್‌ಐಎಗೆ ವರ್ಗಾವಣೆಯಾದ ಬಳಿಕ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಪರಿಣಾಮವಾಗಿ ಶಂಕಿತನ ವಿರುದ್ಧ ಪ್ರೊಕ್ಲಮೇಷನ್ ಜಾರಿಗೊಳಿಸಲಾಗಿತ್ತು.

ಇದೀಗ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ರೂವಾರಿ ಜುನೈದ್ ಅಹ್ಮದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಬಂಧಿತ ಅರ್ಷದ್ ಖಾನ್‌ನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

33 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ದಂಪತಿಗೆ ಮರಣದಂಡನೆ

0

ಲಕ್ನೋ: 33 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಉತ್ತರ ಪ್ರದೇಶದ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಸಂತ್ರಸ್ತ ಮಕ್ಕಳಲ್ಲಿ ಕೆಲವರು ಕೇವಲ ಮೂರು ವರ್ಷ ವಯಸ್ಸಿನವರಾಗಿದ್ದರು ಎಂಬುದು ಪ್ರಕರಣದ ಭೀಕರತೆಯನ್ನು ತೋರಿಸುತ್ತದೆ.

ಉತ್ತರ ಪ್ರದೇಶದ ಬಂದಾದಲ್ಲಿರುವ ಪೋಕ್ಸೊ ಕಾಯ್ದೆಯ ವಿಶೇಷ ನ್ಯಾಯಾಧೀಶರ ನ್ಯಾಯಾಲಯ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಆರೋಪಿಗಳಾದ ರಾಮಭವನ್ ಮತ್ತು ಅವರ ಪತ್ನಿ ದುರ್ಗಾವತಿ ಅವರನ್ನು ಮಕ್ಕಳ ರಕ್ಷಣೆಯ ಲೈಂಗಿಕ ಅಪರಾಧಗಳ ಕಾಯ್ದೆ (POCSO) ಸೇರಿದಂತೆ ಹಲವು ವಿಧಿಗಳಡಿ ದೋಷಿ ಎಣಿಸಲಾಗಿದೆ.

ದೌರ್ಜನ್ಯಕ್ಕೆ ಒಳಗಾದ ಪ್ರತಿಯೊಬ್ಬ ಮಕ್ಕಳಿಗೂ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ಆರೋಪಿಗಳ ಮನೆಯಿಂದ ವಶಪಡಿಸಿಕೊಂಡಿರುವ ಹಣವನ್ನು ಸಂತ್ರಸ್ತ ಮಕ್ಕಳಿಗೆ ಸಮಾನವಾಗಿ ಹಂಚಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಮೇರೆಗೆ ಕೇಂದ್ರೀಯ ತನಿಖಾ ದಳ (CBI) 2020ರ ಅಕ್ಟೋಬರ್‌ನಲ್ಲಿ ರಾಮಭವನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು. ತನಿಖೆಯ ವೇಳೆ ಆರೋಪಿಗಳು ಗಂಭೀರ ಹಾಗೂ ಅಮಾನವೀಯ ಕೃತ್ಯಗಳನ್ನು ಎಸಗಿರುವುದು ಬೆಳಕಿಗೆ ಬಂದಿದೆ.

ಸಂತ್ರಸ್ತೆಯರಲ್ಲಿ ಕೆಲವರ ಖಾಸಗಿ ಅಂಗಗಳಲ್ಲಿ ಗಂಭೀರ ಗಾಯಗಳಾಗಿದ್ದು, ಕೆಲವು ಮಕ್ಕಳು ವರ್ಷಗಳ ಕಾಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ತೀರ್ಪು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಕಠಿಣ ಶಿಕ್ಷೆ ಅಗತ್ಯವೆಂಬ ಸಂದೇಶ ನೀಡಿದೆ.

ಕಾಂಗ್ರೆಸ್ ಕರ್ನಾಟಕದಲ್ಲಿ ಕರಾಳದಿನ ಸುವರ್ಣ ಮಹೋತ್ಸವ ಆಚರಿಸುತ್ತಿದೆ: ನಿಖಿಲ್ ಕುಮಾರಸ್ವಾಮಿ

0

ಬೆಂಗಳೂರು: ಕಾಂಗ್ರೆಸ್ಸಿಗರ ರಕ್ತದಲ್ಲೇ ಸರ್ವಾಧಿಕಾರ ಇದೆ. ಇಂದಿರಾಗಾಂಧಿ ಅವರು ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ 50 ವರ್ಷ ತುಂಬಿದೆ. ಆ ಕರಾಳದಿನವನ್ನು ಕರ್ನಾಟಕದಲ್ಲಿ ಸುವರ್ಣ ಮಹೋತ್ಸವವನ್ನು ಕಾಂಗ್ರೆಸ್ ಆಚರಿಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈ ಬಗ್ಗೆ ಬೆಂಗಳೂರಿನ ಜೆಪಿ ನಗರದ ನಿವಾಸದ ಬಳಿ ಮಾತನಾಡಿದ ಅವರು, ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಕುರಿತು ತೀವ್ರವಾಗಿ ಖಂಡಿಸಿದರು.

ವಿಧಾನಸೌಧ ನಮ್ಮ ರಾಜ್ಯದ ಶಕ್ತಿ ಸೌಧ, ಇಂಥ ಶಕ್ತಿ ಸೌಧದಲ್ಲಿ ಎಮರ್ಜೆನ್ಸಿ 2.0ತಂದಿದ್ದಾರೆ. ಇಂಥ ಸರ್ವಾಧಿಕಾರದ ಮನಸ್ಥಿತಿ ಕಾಂಗ್ರೆಸ್ ಪಕ್ಷದ DNA ಬದಲಾಗಿಲ್ಲ, ಅವರ ರಕ್ತದಲ್ಲೇ ಬಂದಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಸಂವಿಧಾನದ ಅಡಿಯಲ್ಲಿ ಮಾಧ್ಯಮದವರ ಅಭಿಪ್ರಾಯವನ್ನು ವ್ಯಕ್ತಿಪಡಿಸುವುದಕ್ಕೆ ಎಲ್ಲರಿಗೂ ಹಕ್ಕಿದೆ.
ಭದ್ರತೆ ಮತ್ತು ತಾಂತ್ರಿಕ ಕಾರಣದಿಂದ ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧಿಸಿರುವುದು ಅವರು ಹೇಡಿತನ. ಇದರ ಉದ್ದೇಶ ವಿಧಾನಸೌಧದಲ್ಲಿ ಸರ್ಕಾರದ ಜನಪ್ರತಿನಿದಿಗಳು ನಡೆಸುತ್ತಿರುವ ಅವ್ಯವಹಾರ, ಭ್ರಷ್ಟಾಚಾರವನ್ನು ಮುಚ್ಚಕುವುದಕ್ಕೆ ಮಾಧ್ಯಮಗಳ ನಿರ್ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಕರ್ತರ ಪ್ರತಿಭಟನೆ ವಿಚಾರಕ್ಕೆ ಮಾತನಾಡಿದ ಅವರು. ನಿಮ್ಮ ಹೋರಾಟಕ್ಕೆ ಜೆಡಿಎಸ್ ಪಕ್ಷದ ಬೆಂಬಲವಿದೆ. ಇದು ಮಾಧ್ಯಮಗಳ ಹೋರಾಟವಲ್ಲ, ಏಳುಕೋಟಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟ. ನಿಮ್ಮ ಜತೆ ನಾವಿದ್ದೇವೆ ಎಂದು ಅವರು ಹೇಳಿದರು.

ಪ್ರಚೋದನೆ ಹೇಳಿಕೆ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ

​ಕೋಲಾರದ ವೇಮಗಲ್‌ನಲ್ಲಿ ಹೆಲಿಕಾಪ್ಟರ್ ಘಟಕಕ್ಕೆ ಶಾಸಕ ಕೊತ್ತೂರು ಮಂಜುನಾಥ್‌ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ಬರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳಬೇಕು. ಪ್ರಚೋದನೆ ಹೇಳಿಕೆ ನೀಡುತ್ತಿರುವುದು ಒಬ್ಬ ಶಾಸಕರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಅಭಿವೃದ್ಧಿಗೆ ಸಹಕರಿಸಿ ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯಕ್ಕೆ ಒಂದು ಕೈಗಾರಿಕೆ ಸ್ಥಾಪನೆ ಆಗುತ್ತೆ ಎಂದರೆ, ಒಬ್ಬ ಶಾಸಕ ಅದಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ಕೊಡ್ಬೇಕು. ಇಲ್ಲಿ ಯಾರನ್ನ ಯಾರು ಬಿಟ್ಟು ಮಾಡುವ ಪ್ರಶ್ನೆಯಿಲ್ಲ. ಮೊದಲು ಇಂಥ ಸಂಸ್ಕೃತಿಯನ್ನ ಬಿಟ್ಟು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರದ ಸರಕಾರಕ್ಕೆ ಬೆಂಬಲ ಕೊಡ್ಬೇಕು ಎಂದು ಒತ್ತಿ ಹೇಳಿದರು.

ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಒಗ್ಗಟ್ಟಿನಿಂದ ಹೋಗ್ತೇವೆ. ರಾಜ್ಯದಲ್ಲಿ NDA 140 ರಿಂದ 150 ಸ್ಥಾನವನ್ನ ಗೆಲ್ಲುತ್ತೆವೆ. ಮಾನ್ಯ ಮುಖ್ಯಮಂತ್ರಿಗಳು ಯಾವ ಅರ್ಥದಲ್ಲಿ ಟ್ವೀಟ್ ಮಾಡಿದ್ದರೋ ಗೊತ್ತಿಲ್ಲ. ಆದರೆ ಕುರ್ಚಿ ಕದನದ ಬಿಟ್ಟು ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಬೇಕು ಎಂದು ಹೇಳಿದರು.

ಮುಡಾ ಕೇಸ್‌ಗೆ ಹೊಸ ತಿರುವು: ಸ್ನೇಹಮಯಿ ಬಂಧನ, ಪುತ್ರನಿಂದ ಗಂಭೀರ ಆರೋಪ

0

ಮೈಸೂರು: ಮುಡಾ ಹಗರಣದ ಆರೋಪಗಳ ಮಧ್ಯೆ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿರುವುದು ಹೊಸ ತಿರುವು ಪಡೆದುಕೊಂಡಿದೆ. ಡಿಬಿ ನಟೇಶ್ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಮ್ ವಿಭಾಗ ಕ್ರಮ ಕೈಗೊಂಡಿದೆ.

ಕೋರ್ಟ್‌ನಲ್ಲಿ ವಾದ ಮಂಡಿಸಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಬಂಧನವಾಗಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಅವರ ಪುತ್ರ ವಿವೇಕ್ ನ್ಯಾಯಾಲಯದಲ್ಲಿ ಹಾಜರಾಗಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಸಿಸಿಬಿ ಕಚೇರಿಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. ಅನಾಮಧೇಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂಬ ಆತಂಕವಿದೆ. ತಂದೆಗೆ ಏನಾದರೂ ಆದರೆ ರಾಜ್ಯ ಸರ್ಕಾರವೇ ಜವಾಬ್ದಾರ,” ಎಂದು ಅವರು ಹೇಳಿದರು.

ಈ ಘಟನೆ ಮುಡಾ ಪ್ರಕರಣದ ತನಿಖೆಗೆ ಮತ್ತೊಂದು ಗಂಭೀರ ತಿರುವು ನೀಡಿದೆ.

ಸ್ನೇಹಮಯಿ ಕೃಷ್ಣ ದಿಢೀರ್ ಬಂಧನ ಸೃಷ್ಟಿಸಿದ ಅನುಮಾನ! ಲಂಚದ ಆರೋಪ ಮಾಡಿದ್ದೇ ಮುಳುವಾಯ್ತಾ?

0

ಮೈಸೂರು/ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಸತತ 17 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ತಮ್ಮ ವಿರುದ್ಧ ನಕಲಿ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆಂದು ಸಿಸಿಬಿಗೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯಕ್ಕೆ ಪ್ರಮುಖ ಆಡಿಯೋ ಹಾಗೂ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಸಿದ್ಧರಾಗಿದ್ದ ಸಂದರ್ಭದಲ್ಲೇ ಬಂಧನ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.

ಮೂರು ಪ್ರಮುಖ ಆರೋಪಗಳು

1. ಲಂಚ ಆರೋಪ:
ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು. ಹಣ ಸಾಗಿಸಲಾಯಿತು ಎನ್ನಲಾದ ಕಾರಿನ ಭಾವಚಿತ್ರವನ್ನೂ ಬಿಡುಗಡೆ ಮಾಡಿದ್ದರು.

2. ಆಡಿಯೋ ಬಿಡುಗಡೆ:
ಡಿ.ಬಿ. ನಟೇಶ್ ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿದ್ದರು. ಕೇವಲ ಆರು ಸೆಕೆಂಡ್‌ಗಳ ‘ಟ್ರೈಲರ್’ ಮಾತ್ರ ಬಿಡುಗಡೆ ಮಾಡಿದ್ದಾಗಿ ಹೇಳಿ, ಸಂಪೂರ್ಣ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದರು.

3. ಸಂಪರ್ಕ ಯತ್ನ ಆರೋಪ:
ಆಡಿಯೋದಲ್ಲಿ ನಟೇಶ್ ಅವರು ಸ್ನೇಹಮಯಿ ಕೃಷ್ಣ ಅವರನ್ನು ಹೇಗಾದರೂ ಸಂಪರ್ಕಕ್ಕೆ ತೆಗೆದುಕೊಳ್ಳುವಂತೆ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.

ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ. ಆಡಿಯೋಗಳ ಪ್ರಾಮಾಣಿಕತೆ ಹಾಗೂ ಆರೋಪಗಳ ಸತ್ಯಾಸತ್ಯತೆ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಿಎಂ ಬೊಮ್ಮಾಯಿ ಪರ್ಸನಲ್ ಸೆಕ್ರೆಟರಿ ಮಗ ಆತ್ಮಹತ್ಯೆ!

0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪರ್ಸನಲ್ ಸೆಕ್ರೆಟರಿ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೇಮಂತ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.

ಪರ್ಸನಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದ ಚಂದ್ರು ಅವರ ಪುತ್ರನಾದ ಹೇಮಂತ್, ಸಂಜಯನಗರದಲ್ಲಿನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಲೊಟ್ಟೆಗೊಲ್ಲಹಳ್ಳಿಯ ಮನೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಾಹಿತಿ ತಿಳಿದ ಸಂಜಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!