ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಅಲ್ಪಸಂಖ್ಯಾತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರಾಜ್ಯ ಘಟಕ ರಾಜ್ಯ ಸಮಿತಿಯು ಇಮಾಮಸಾಬ ಬಿ. ಕಲೇಗಾರ ಅವರನ್ನು ರಾಷ್ಟ್ರೀಯ ಅಹಿಂದ ಸಂಘಟನೆ ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್. ಶಿವಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜಮುಖಿ ಕಾರ್ಯದಿಂದ ಸಂತೃಪ್ತಿ
ವಿಜಯಸಾಕ್ಷಿ ಸುದ್ದಿ, ಗದಗ: ಜನಮುಖಿ ಹಾಗೂ ಸಮಾಜಮುಖಿಯಾಗಿ ಕಾರ್ಯ ಮಾಡುವ ವ್ಯಕ್ತಿ ವೈಯಕ್ತಿಕವಾಗಿ ಸಂತೃಪ್ತಿಯ ಭಾವವನ್ನು ಹೊಂದಿದ್ದರೆ, ಅಂತಹ ವ್ಯಕ್ತಿ ಸಮಾಜದಲ್ಲಿ ಜನಮನ್ನಣೆಗೆ ಪಾತ್ರನಾಗುತ್ತಾನೆ ಎಂದು ಗದುಗಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.
ಅವರು ಬುಧವಾರ ಬೆಟಗೇರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆರ್.ಆರ್. ಕಾಶಪ್ಪನವರ ಅವರು ಸೇವಾ ನಿವೃತ್ತರಾದ ನಿಮಿತ್ತ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿರುವವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವ ಮೂಲಕ ಆತ್ಮತೃಪ್ತಿಯನ್ನು ಹೊಂದಬೇಕು. ಕರ್ತವ್ಯದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಆಸಕ್ತಿ ಹೊಂದಿ ಕಾರ್ಯ ನಿರ್ವಹಿಸಬೇಕು. ಆರ್.ಆರ್. ಕಾಶಪ್ಪನವರ ಆರಂಭದಲ್ಲಿ ಇಲ್ಲಿ ಸೇವೆ ಸಲ್ಲಿಸಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದವರು. ಅವರಿನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಂತಾಗಲಿ ಎಂದರು.
ಪ್ರೊ. ಪಿ. ಕೇಶವ, ಡಾ. ವಿರೂಪಾಕ್ಷಿ ಮುಳಗುಂದ, ಡಾ. ಕಸ್ತೂರಿ ದಳವಾಯಿ, ಡಾ. ಹನಮಂತಪ್ಪ ಕಲ್ಮನಿ, ಪ್ರೊ. ಖಲೀಲಅಹ್ಮದ್ ಚಿಕ್ಕೇರೂರ, ಆರ್.ಆರ್. ಕಾಶಪ್ಪನವರರ ಕರ್ತವ್ಯ ನಿರ್ವಹಣೆ, ವ್ಯಕ್ತಿತ್ವವನ್ನು ಬಣ್ಣಿಸಿದರು.
ಆರ್.ಆರ್. ಕಾಶಪ್ಪನವರ ಹಾಗೂ ಸುಮಿತ್ರಾ ದಂಪತಿಯನ್ನು ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗದವರು ಹಾಗೂ ಗೆಳೆಯರ ಬಳಗದವರು ಸನ್ಮಾನಿಸಿ ಗೌರವಿಸಿದರು. ಕವಿತಾ ಜಂಗವಾಡ ಪ್ರಾರ್ಥಿಸಿದರು, ಅಶ್ವಿನಿ ಉಪ್ಪಿನ ಸ್ವಾಗತಿಸಿ ಪರಿಚಯಿಸಿದರು. ಡಾ. ಕಸ್ತೂರಿ ದಳವಾಯಿ ನಿರೂಪಿಸಿದರು. ಜ್ಯೋತಿ ಬೋಳಣ್ಣವರ ವಂದಿಸಿದರು.
ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್
ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಗಳ ಸಹಯೋಗದಲ್ಲಿ ಧಾರವಾಡ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಯಶಸ್ವಿಗೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೇಳಿದರು.
ಅವರು ಬುಧವಾರ ಸಂಜೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಜರುಗಿಸಿ ಮಾತನಾಡಿದರು.
ಧಾರವಾಡ ಜಿಲ್ಲಾ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಎಲ್ಲ ಪದವಿ, ಐಟಿಐ ಕಾಲೇಜುಗಳ ಪದವೀಧರ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರ್ಹತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರೆಯಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗಲು ಸರ್ಕಾರದಿಂದಲೇ ಉದ್ಯೋಗ ಮೇಳ ಆಯೋಜಿಸಿ, ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಈ ಉದ್ಯೋಗ ಮೇಳ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.
ಉದ್ಯೋಗ ಮೇಳಕ್ಕೆ ಆಗಮಿಸುವವರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ಮೇಳಕ್ಕೆ ಆಗಮಿಸುವವರಿಗೆ ಸರಿಯಾದ ಮಾಹಿತಿ ಸಿಗುವಂತೆ ಸಹಾಯ ಕೇಂದ್ರಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಇದ್ದರು. ಸಭೆಯಲ್ಲಿ ಉದ್ಯೋಗ ಮೇಳದ ಸಿದ್ಧತೆಗಳ ಕುರಿತು ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿದರು. ಜಿ.ಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಸ್ವಾಗತಿಸಿದರು. ಜಿಲ್ಲಾ ಯೋಜನಾ ವ್ಯವಸ್ಥಾಪಕ ವಿನೋದ ಕಂಠಿ ನಿರ್ವಹಿಸಿದರು. ವಿನೋದ ಗಾಮನಗಟ್ಟಿ ವಂದಿಸಿದರು.
ಸಭೆಯಲ್ಲಿ ಎಲ್ಲ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಕೈಗಾರಿಕಾ ಇಲಾಖೆ, ಕಾರ್ಮಿಕ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳು, ತಾರಿಹಾಳ ಮತ್ತು ಬೇಲೂರು ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಉದ್ಯೋಗ ಮೇಳದ ಯಶಸ್ವಿ ಆಯೋಜನೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿದಿನ ಪ್ರತ್ಯೇಕವಾಗಿ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ಜರುಗಿಸಿ, ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಪಂಚ ಗ್ಯಾರಂಟಿ ಯೋಜನೆಯಿಂದ ಕ್ರಾಂತಿಕಾರಕ ಬದಲಾವಣೆ: ಸಚಿವ ಎಚ್.ಕೆ. ಪಾಟೀಲ
ವಿಜಯಸಾಕ್ಷಿ ಸುದ್ದಿ, ಗದಗ: ಬಡಜನರ ಬದುಕು ಬದಲಾಯಿಸಿದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ಜರುಗಿದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸಮಾಜವನ್ನು ಸುಧಾರಿಸಿ, ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಾಜ್ಯದ ಪ್ರತಿ ಬಡ ಕುಟುಂಬಕ್ಕೆ 5 ಸಾವಿರ ರೂಪಾಯಿ ಪ್ರತಿ ತಿಂಗಳು ತಲುಪಿಸುವ ಕಾರ್ಯವಾಗುತ್ತಿದೆ. ಜಿಲ್ಲೆಯಲ್ಲಿ 2.28 ಲಕ್ಷ ಕುಟುಂಬಗಳನ್ನು ತಲುಪಿದ್ದೇವೆ. 1 ಕೋಟಿ 10 ಸಾವಿರ ಹಣ ಜನರ ಕೈಮುಟ್ಟಿದೆ ಎಂದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬವನ್ನು ತಲುಪಿರುವುದು ತೃಪ್ತಿಕರವಾಗಿದೆ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಇಂದು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳು ಪ್ರತಿಯೊಬ್ಬ ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುತ್ತುರಾಜ್ ಮಾತನಾಡಿ, ಸಾಕಷ್ಟು ಟೀಕೆಗಳ ನಡುವೆಯೂ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಉತ್ತರ ದೊರಕಿದಂತಾಗಿದೆ ಎಂದರು.
ರಾಜ್ಯದ ತಲಾ ಆದಾಯದ ಹೆಚ್ಚಳದಿಂದಾಗಿ ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆಯನ್ನು ನೀಡಲಾಗುತ್ತಿದೆ. ರಾಜ್ಯದ ಅಂದಾಜು ಒಂದೂವರೆ ಕೋಟಿ ಜನ ಈ ಪಂಚಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಂಚಗ್ಯಾರಂಟಿ ಯೋಜನೆ ಜಾರಿಯಿಂದಾಗಿ ತಲಾದಾಯದಲ್ಲಿಯೂ ಕೂಡ ರಾಜ್ಯವು ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಗಳನ್ನು ನಿರಂತರವಾಗಿ ಜರುಗಿಸಿ ಅರ್ಹ ಎಲ್ಲ ಫಲಾನುಭವಿಗಳನ್ನು ಗ್ಯಾರಂಟಿ ಯೋಜನೆಗೆ ಒಳಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಉಪಾಧ್ಯಕ್ಷರುಗಳಾದ ನೀಲಮ್ಮ ಬೋಳನವರ, ದೀಪಕ ಲಮಾಣಿ, ಹೇಮಂತಗೌಡ ಪಾಟೀಲ, ಪಿ.ಬಿ. ಅಳಗವಾಡಿ, ಫಕ್ರುಸಾಬ ಚಿಕ್ಕಮಣ್ಣೂರ, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರುಗಳಾದ ಅಶೋಕ ಮಂದಾಲಿ, ಸಂಗನಗೌಡ ಪಾಟೀಲ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ನಾಗರಾಜ ಶಿವಪ್ಪ ಮಡಿವಾಳರ, ಶರಣಪ್ಪ ಬೆಟಗೇರಿ, ವೀರಯ್ಯ ಮಠಪತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರುಗಳಾದ ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸಿಕಟ್ಟಿ, ಶರೀಫ್ ಬೆಳೆಯಲಿ, ರಾಜೀವ ಗೊಡಚಪ್ಪ ಕುಂಬಿ, ಶಿವನಗೌಡ ಪಾಟೀಲ, ಆರ್.ಆರ್. ಗಡ್ಡದೇವರಮಠ, ಗೀತಾ ಬೀರಣ್ಣವರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಮುಂತಾದವರು ಉಪಸ್ಥಿತರಿದ್ದರು.
ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಡೋಣಿ ಗ್ರಾಮದ ನಿಂಗಣ್ಣ ಗಡಾದ ಹಾಗೂ ತಂಡದವರು ಪಂಚ ಗ್ಯಾರಂಟಿ ಕುರಿತು ಜನಪದ ಗೀತೆ, ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಗದಗ ಜಿಲ್ಲೆಯ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಲಾಯಿತು.
ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಗದಗ ಜಿಲ್ಲೆಯ ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರು ಸ್ವಾಭಿಮಾನದ ಜೀವನ ಸಾಗಿಸುವ ಉದ್ದೇಶದೊಂದಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇಂತಹ ಕಾರ್ಯಕ್ರಮವನ್ನು ಪಂಚಾಯತ ಮಟ್ಟದಲ್ಲಿಯೂ ಆಯೋಜಿಸುವ ಮೂಲಕ ಪಂಚ ಗ್ಯಾರಂಟಿ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮುಂದಾಗಬೇಕು ಎಂದರು.
“ಪಂಚ ಗ್ಯಾರಂಟಿಗಳನ್ನು ಮಾನವ ಹಕ್ಕುಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಗದಗ ಜನತೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟಿದ್ದು, ಬಡಜನರಿಗೆ ದಕ್ಕಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಆದರೆ ಈ ಮಹತ್ವಾಕಾಂಕ್ಷೆ ಯೋಜನೆಗಳನ್ನು ಅಧಿಕಾರ ವಹಿಸಿದ ಕೆಲ ದಿನಗಳಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಪ್ರತ್ಯುತ್ತರ ನೀಡಲಾಗಿದೆ”
-
ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.
ಗ್ಯಾರಂಟಿ ಸಮಾವೇಶದಲ್ಲಿ ಆಕರ್ಷಿಸಿದ ಮಳಿಗೆಗಳು
ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮಳಿಗೆಗಳೊಂದಿಗೆ ರಾಜ್ಯ ಸರ್ಕಾರ ರೂಪಿಸಿರುವ ಜನಪರ ಕಾರ್ಯಕ್ರಮಗಳ ವಿವಿಧ ಇಲಾಖೆಯ ಮಳಿಗೆಗಳನ್ನು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಬುಧವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೇರಿದಂತೆ ಗಣ್ಯರು, ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಮುಂದಿನ 6 ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣ: ಶಾಸಕ ಮಹೇಶ ಟೆಂಗಿನಕಾಯಿ
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹೊಸುರು ವೃತ್ತದಲ್ಲಿ 4 ಪಿಲ್ಲರ್ಗಳನ್ನು ಅಳವಡಿಸುವ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಟ್ರಾಫಿಕ್ ಸಮಸ್ಯೆಯಾಗದಂತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಮುಂದಿನ 6 ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹಿಂದೂ ಸ್ವರಾಜ್ಯದ ಅಪ್ರತಿಮ ವೀರ ಶಿವಾಜಿ ಮಹಾರಾಜ್!
ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅದರಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಹೆಸರು ಛತ್ರಪತಿ ಶಿವಾಜಿ ಮಹಾರಾಜ'. ಅವರು ಕೇವಲ ಒಬ್ಬ ರಾಜನಾಗಿರಲಿಲ್ಲ, ಬದಲಿಗೆ ಭಾರತೀಯರ ಸ್ವಾಭಿಮಾನದ ಸಂಕೇತವಾಗಿದ್ದರು. ಮೊಘಲರ ಮತ್ತು ಆದಿಲ್ ಶಾಹಿಗಳ ದಬ್ಬಾಳಿಕೆಯಲ್ಲಿ ನಲುಗುತ್ತಿದ್ದ ಜನರಿಗೆ ಸ್ವರಾಜ್ಯ’ದ ಕನಸು ತೋರಿಸಿ, ಅದನ್ನು ನನಸು ಮಾಡಿದ ಧೀಮಂತ ನಾಯಕ ಶಿವಾಜಿ.
ಶಿವಾಜಿಯವರ ವ್ಯಕ್ತಿತ್ವ ರೂಪಿತವಾಗಿದ್ದು ಅವರ ಬಾಲ್ಯದಲ್ಲಿಯೇ. ಪುಣೆಯ ಶಿವನೇರಿ ಕೋಟೆಯಲ್ಲಿ 1630ರಲ್ಲಿ ಜನಿಸಿದ ಶಿವಾಜಿಗೆ, ತಾಯಿ ಜೀಜಾಬಾಯಿಯೇ ಮೊದಲ ಗುರು. ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಾ, ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚೆದೆಯನ್ನು ತಾಯಿಯೇ ಮಗನ ಮನಸ್ಸಿನಲ್ಲಿ ಬಿತ್ತಿದರು. ತಂದೆ ಶಹಾಜಿರಾಜೆ ಭೋಸ್ಲೆ ದೂರದ ಊರಿನಲ್ಲಿದ್ದರೂ, ತಾಯಿ ಜೀಜಾಬಾಯಿ ಮತ್ತು ಗುರು ದಾದಾಜಿ ಕೊಂಡದೇವ ಅವರ ಮಾರ್ಗದರ್ಶನದಲ್ಲಿ ಶಿವಾಜಿ ಒಬ್ಬ ಅಪ್ರತಿಮ ಯೋಧನಾಗಿ ಬೆಳೆದರು.
ಶಿವಾಜಿ ಮಹಾರಾಜರು ತಮ್ಮ 16ನೇ ವಯಸ್ಸಿನಲ್ಲಿಯೇ ತೋರಣ ಕೋಟೆಯನ್ನು ಗೆಲ್ಲುವ ಮೂಲಕ ಸ್ವರಾಜ್ಯ ಸ್ಥಾಪನೆಯ ಮೊದಲ ಹೆಜ್ಜೆ ಇಟ್ಟರು. ಅವರ ಬಳಿ ಬೃಹತ್ ಸೈನ್ಯವಿರಲಿಲ್ಲ. ಆದರೆ ಬುದ್ಧಿವಂತಿಕೆ ಇತ್ತು. ಸಹ್ಯಾದ್ರಿ ಬೆಟ್ಟಗಳ ಭೌಗೋಳಿಕ ರಚನೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಇದನ್ನೇ ಇತಿಹಾಸದಲ್ಲಿ `ಗನಿಮಿ ಕಾವಾ’ ಎಂದು ಕರೆಯಲಾಗುತ್ತದೆ. ಹಠಾತ್ ದಾಳಿ ಮಾಡುವುದು ಮತ್ತು ಶತ್ರುಗಳು ಚೇತರಿಸಿಕೊಳ್ಳುವ ಮುನ್ನವೇ ಮಾಯವಾಗುವುದು ಅವರ ತಂತ್ರವಾಗಿತ್ತು.
ಶಿವಾಜಿಯವರ ಜೀವನದಲ್ಲಿ ಅಫಜಲ್ ಖಾನ್ ನೊಂದಿಗಿನ ಮುಖಾಮುಖಿ ರೋಚಕವಾದದ್ದು. ಬಿಜಾಪುರದ ಬಲಿಷ್ಠ ಸೇನಾಪತಿ ಅಫಜಲ್ ಖಾನ್, ಶಿವಾಜಿಯನ್ನು ಕೊಲ್ಲಲು ಬಂದಾಗ, ಶಿವಾಜಿ ತಮ್ಮ ಬುದ್ಧಿವಂತಿಕೆಯಿಂದ ‘ವ್ಯಾಘ್ರ ನಖ’ (ಹುಲಿಯ ಉಗುರು) ಬಳಸಿ ಆತನನ್ನು ಸಂಹರಿಸಿದರು. ಇದು ಕೇವಲ ದೈಹಿಕ ಬಲದ ಪ್ರದರ್ಶನವಾಗಿರದೆ, ಸಮಯಪ್ರಜ್ಞೆ ಮತ್ತು ಎಚ್ಚರಿಕೆಯ ಪಾಠವಾಗಿತ್ತು.
ಔರಂಗಜೇಬನು ಒಪ್ಪಂದದ ನೆಪದಲ್ಲಿ ಶಿವಾಜಿಯನ್ನು ಆಗ್ರಾಕ್ಕೆ ಕರೆಸಿ ಬಂಧಿಸಿದನು. ಆದರೆ, ಚಾಣಾಕ್ಷ ಶಿವಾಜಿ ಅನಾರೋಗ್ಯದ ನಾಟಕವಾಡಿ, ಸಿಹಿ ಹಂಚುವ ನೆಪದಲ್ಲಿ ಹಣ್ಣಿನ ಬುಟ್ಟಿಗಳಲ್ಲಿ ಕುಳಿತು ಅಲ್ಲಿಂದ ಪಾರಾದರು. ಈ ಘಟನೆ ಮೊಘಲ್ ಸಾಮ್ರಾಜ್ಯಕ್ಕೆ ದೊಡ್ಡ ಅವಮಾನ ಮತ್ತು ಮರಾಠರಿಗೆ ದೊಡ್ಡ ಗೆಲುವಾಯಿತು.
1674ರಲ್ಲಿ ರಾಯಗಡದಲ್ಲಿ ಶಿವಾಜಿಯವರಿಗೆ ಪಟ್ಟಾಭಿಷೇಕವಾಯಿತು. ಅವರು `ಛತ್ರಪತಿ’ ಎಂದು ಘೋಷಿಸಿಕೊಂಡರು. ಇದು ಕೇವಲ ಒಬ್ಬ ವ್ಯಕ್ತಿಯ ಪಟ್ಟಾಭಿಷೇಕವಾಗಿರಲಿಲ್ಲ, ಶತಮಾನಗಳ ಪರಕೀಯರ ಆಳ್ವಿಕೆಯ ನಂತರ ಹಿಂದೂ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತ ಐತಿಹಾಸಿಕ ಕ್ಷಣವಾಗಿತ್ತು.
ಶಿವಾಜಿ ಕೇವಲ ಯುದ್ಧವೀರನಾಗಿರದೆ, ಒಬ್ಬ ದಕ್ಷ ಆಡಳಿತಗಾರನೂ ಆಗಿದ್ದರು. ರಾಜ್ಯಭಾರವನ್ನು ಸುಗಮವಾಗಿ ನಡೆಸಲು ಎಂಟು ಜನ ಮಂತ್ರಿಗಳಿದ್ದ ಅಷ್ಟಪ್ರಧಾನ ಮಂಡಲವನ್ನು ರಚಿಸಿದರು. ಸಮುದ್ರದ ಮೇಲಿನ ಹಿಡಿತದ ಮಹತ್ವವನ್ನು ಅರಿತ ಮೊದಲ ಭಾರತೀಯ ರಾಜ ಶಿವಾಜಿ. ಸಿಂಧುದುರ್ಗದಂತಹ ಜಲದುರ್ಗಗಳನ್ನು ಕಟ್ಟಿ, ಬಲಿಷ್ಠ ನೌಕಾಪಡೆಯನ್ನು ಸ್ಥಾಪಿಸಿದ ಅವರನ್ನು ಭಾರತೀಯ ನೌಕಾಪಡೆಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರಿಂದ ನೇರವಾಗಿ ಕಂದಾಯ ಸಂಗ್ರಹಿಸುವ ಪದ್ಧತಿ ಜಾರಿಗೆ ತಂದರು. ಬರಗಾಲದ ಸಮಯದಲ್ಲಿ ರೈತರಿಗೆ ಧಾನ್ಯ ಮತ್ತು ಸಾಲದ ನೆರವು ನೀಡುತ್ತಿದ್ದರು. ಯುದ್ಧದಲ್ಲಿ ಶತ್ರುಗಳ ಕೋಟೆಯನ್ನು ಗೆದ್ದಾಗ, ಅಲ್ಲಿ ಸಿಗುವ ಮಹಿಳೆಯರನ್ನು ಅತ್ಯಂತ ಗೌರವದಿಂದ, ತಾಯಿಯಂತೆ ಕಂಡು ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ಕಳುಹಿಸುತ್ತಿದ್ದರು. ಅವರ ಸೈನ್ಯದಲ್ಲಿ ಮಹಿಳೆಯರಿಗೆ ಅಗೌರವ ತೋರುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ಮಹಾರಾಜರು ಹಿಂದೂ ಧರ್ಮದ ರಕ್ಷಕರಾಗಿದ್ದರು.
1680ರಲ್ಲಿ ಶಿವಾಜಿ ಮಹಾರಾಜರು ದೈವಾಧೀನರಾದರು. ಆದರೆ ಅವರು ಬೆಳಗಿಸಿದ ಸ್ವರಾಜ್ಯದ ಜ್ಯೋತಿ ನಂದಲಿಲ್ಲ. ಅವರ ಮರಣದ ನಂತರವೂ ಮರಾಠರು ಅದೇ ಸ್ಫೂರ್ತಿಯಿಂದ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ದುರ್ಬಲಗೊಳಿಸಿದರು. ಇಂದಿಗೂ ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿ, ಯುಕ್ತಿ ಮತ್ತು ದೇಶಭಕ್ತಿಯ ಮೂರ್ತರೂಪವಾಗಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿಯೂ ಹೇಗೆ ಎದೆಗುಂದದೆ ಹೋರಾಡಬೇಕು ಎಂಬುದಕ್ಕೆ ಶಿವಾಜಿ ಮಹಾರಾಜರ ಜೀವನವೇ ಒಂದು ತೆರೆದ ಪುಸ್ತಕ. ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ದಾರಿದೀಪ.
-
ಹನುಮಂತ ಬೆಂತೂರ.
ಅಪ್ರೆಂಟಿಸ್, ವಾರ್ತಾ ಮತ್ತು ಸಾ.ಸಂ.ಇಲಾಖೆ-ಗದಗ.
ಕಾರುಣ್ಯವಾರಿಧಿ ಶ್ರೀ ರಾಘವೇಂದ್ರ ಸ್ವಾಮಿಗಳು
ವೆಂಕಟನಾಥರು ಒಮ್ಮೆ ಕುಂಭಕೋಣ ಪ್ರವಾಸ ಮಾಡುತ್ತಿದ್ದಾಗ ವೆಂಕಟನಾಥ ಮತ್ತು ಅವರ ಪತ್ನಿ ಸರಸ್ವತಿ ಬಾಯಿಯವರಿಗೆ ಸಮಾರಂಭಕ್ಕೆ ಆಹ್ವಾನಿಸಲಾಯಿತು. ಆದರೆ ವೆಂಕಟನಾಥರಿಗೆ ಸರಿಯಾದ ಗೌರವಾದರಗಳನ್ನು ಮಾಡದೇ ಆ ಸಮಾರಂಭದಲ್ಲಿ ಶ್ರೀಗಂಧವನ್ನು ತೇಯುವ ಕೆಲಸವನ್ನು ವಹಿಸುತ್ತಾರೆ. ಆದರೆ ವೆಂಕಟನಾಥರು ಭಗವಂತನ ಸಂಕಲ್ಪದಿಂದ ಅಗ್ನಿ ಸೂಕ್ತ ಪಠಿಸುತ್ತ ಗಂಧವನ್ನು ತೇಯ್ದರು. ಆ ಗಂಧ ಲೇಪಿಸಿಕೊಂಡ ವಿಪ್ರರಿಗೆಲ್ಲ ಮೈ ಉರಿ ಶುರುವಾಯಿತು. ಅದಕ್ಕೆ ಕಾರಣವನ್ನು ಹುಡುಕಲಾಗಿ ಗಂಧ ತೇಯುವವರು ಮಹಾನ್ ವ್ಯಕ್ತಿಗಳಾಗಿದ್ದು, ಅವರಿಗೆ ಮಂತ್ರ ಸಿದ್ಧಿಯಾಗಿದೆ. ಅವರು ಅಗ್ನಿ ಸೂಕ್ತ ಪಠಿಸಿದ್ದರಿಂದ ಈ ತರಹದ ಉರಿ ಶುರುವಾಗಿದೆ ಎಂದು ತಿಳಿದು ಬಂದಿತು. ಆಗ ಗೃಹಸ್ಥರು ತಮ್ಮಿಂದ ಅಪರಾಧವಾಗಿದ್ದು ಕ್ಷಮಿಸಬೇಕೆಂದು ವೆಂಕಟನಾಥರಲ್ಲಿ ಬೇಡಿಕೊಂಡರು. ವೆಂಕಟನಾಥರು ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಪುನಃ ಶ್ರೀ ಹರಿಯನ್ನು ಸ್ಮರಣೆ ಮಾಡುತ್ತಾ ವರುಣ ಸೂಕ್ತ ಪಠಿಸಿದಾಗ ಎಲ್ಲರ ಉರಿ ಶಮನವಾಯಿತು. ಇದು ವೆಂಕಟನಾಥರಲ್ಲಿಯ ಮಂತ್ರ ಸಿದ್ಧಿ ಹಾಗೂ ಸಹಾನುಭೂತಿಗೆ ಒಂದು ನಿದರ್ಶನವಾಗಿದೆ.
ಈ ವೆಂಕಟನಾಥರೇ ಮುಂದೆ ಶ್ರೀ ಸುಧೀಂದ್ರ ತೀರ್ಥರಿಂದ ಸನ್ಯಾಸತ್ವ ಸ್ವೀಕರಿಸಿ ರಾಘವೇಂದ್ರ ಸ್ವಾಮಿಗಳಾದರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. ತಂದೆ ತಿಮ್ಮಣ್ಣ ಭಟ್ಟರು, ತಾಯಿ ಗೋಪಿಕಾಂಬೆ. ತಿಮ್ಮಣ್ಣ ಭಟ್ಟರಿಗೆ ಗುರುರಾಜ, ವೆಂಕಟಾಂಬೆ, ವೆಂಕಟನಾಥ ಎಂಬ ಮಕ್ಕಳು ಜನಿಸಿದರು. ವೆಂಕಟನಾಥರು 1595ರಲ್ಲಿ ಈಗಿನ ತಮಿಳುನಾಡಿನ ಭುವನಗಿರಿ ಎಂಬಲ್ಲಿ ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂಪ್ರದಾಯದಲ್ಲಿ ಜನಿಸಿದರು. ಇವರು ಮಧ್ವಾಚಾರ್ಯರ ಅನುಯಾಯಿಗಳಾಗಿ ಮಧ್ವ ಮತದ ದ್ವೆöÊತ ಸಿದ್ಧಾಂತವನ್ನು ಪ್ರತಿಪಾದಿಸಿದರು.
ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ತಕ್ಕಂತಹ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದು ವೆಂಕಟನಾಥರನ್ನು ಶಿಷ್ಯರಾಗಿ ಸ್ವೀಕರಿಸುವಂತೆ ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ತಿಳಿಸಿದಾಗ, ವೆಂಕಟನಾಥರು ನಕಾರಾತ್ಮಕ ಉತ್ತರ ಕೊಟ್ಟರು. ಅದರೆ ವೆಂಕಟನಾಥರಿಗೆ ಸಾಕ್ಷಾತ್ ಸರಸ್ವತೀ ದೇವಿಯೇ ಬಂದು ಸನ್ಯಾಸಾಶ್ರಮವನ್ನು ಸ್ವೀಕರಿಸುವಂತೆ ಆಜ್ಞೆಯಿತ್ತಳು.
ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥರು ಸನ್ಯಾಸಾಶ್ರಮ ಸ್ವೀಕರಿಸಿದರು. ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ರಘುನಾಥಭೂಪಾಲನ ಹಾಗೂ ಆಗಿನ ಶ್ರೇಷ್ಠರಾದ ಅನೇಕ ಜನವಿದ್ವಾಂಸರು, ಆಚಾರ್ಯರ ಸಮ್ಮುಖದಲ್ಲಿ ಶ್ರೀ ಸುಧೀಂದ್ರತೀರ್ಥರು ಸಂನ್ಯಾಸಾಶ್ರಮವನ್ನು ನೀಡಿ, ಶ್ರೀ ರಾಘವೇಂದ್ರ ತೀರ್ಥರೆಂಬ ಅದ್ಭುತವಾದ ಹೆಸರಿನಿಂದ ನಾಮಕರಣವನ್ನು ಮಾಡಿ, ಪ್ರಣವ ಮಂತ್ರೋಪದೇಶಪೂರ್ವಕವಾಗಿ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಿದರು.
ತಮ್ಮ ಪತಿಯ ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಬಾಯಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದರು. ಆಕೆಯ ದುರವಸ್ಥೆಯನ್ನು ನೋಡಿ ಶ್ರೀ ರಾಘವೇಂದ್ರತೀರ್ಥರು ಕರುಣೆಯಿಂದ ಆಕೆಯ ಮೇಲೆ ತೀರ್ಥವನ್ನು ಸಂಪ್ರೋಕ್ಷಿಸಿ ಆಕೆಗೆ ಪಿಶಾಚಿ ಜನ್ಮದಿಂದ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.
ಗದಗ ಜಿಲ್ಲೆಯ ಕಿರಟಗೇರಿಯ ದೇಸಾಯಿಯವರ ಮನೆಯಲ್ಲಿ ಪೂಜಾ ಸಮಾರಂಭವಿರುತ್ತದೆ. ರಾಯರು ಅಲ್ಲಿಗೆ ಆಗಮಿಸಿರುತ್ತಾರೆ. ಕಿರಟಗೇರಿ ದೇಸಾಯಿಯವರ ಮಗನು ಅಲ್ಲಿನ ಜನರ ಭೋಜನಕ್ಕಾಗಿ ತಯಾರಿಸಿದ ಮಾವಿನ ಹಣ್ಣಿನ ಶೀಕರಣಿಯ ದೊಡ್ಡ ಕಡಾಯಿಯಲ್ಲಿ ಬಿದ್ದು ಅಕಾಲ ಮೃತ್ಯು ಹೊಂದಿರುತ್ತದೆ. ರಾಘವೇಂದ್ರಸ್ವಾಮಿಗಳು ಆ ಮಗುವನ್ನು ತಮ್ಮ ತಪಃಶಕ್ತಿಯಿಂದ ಬದುಕಿಸುತ್ತಾರೆ. ರಾಘವೇಂದ್ರ ರಾಯರ ಅನುಗ್ರಹದಿಂದ ಬಡಬ್ರಾಹ್ಮಣನಾದ ವೆಂಕಣ್ಣನು ಅಕ್ಷರಜ್ಞಾನ ಹೊಂದಿ ಆದೋನಿಯ ಆಸ್ಥಾನದ ದಿವಾನನಾದನು.
ರಾಯರು ಸಂಚಾರ ಮಾಡುತ್ತಿದ್ದಾಗ ಆದೋನಿಯ ಪ್ರಾಂತ್ಯದ ನವಾಬನಾದ ಸಿದ್ಧಿ ಮಸೂದ್ಖಾನ್ ನವಾಬನು ರಾಘವೇಂದ್ರ ಸ್ವಾಮಿಗಳ ಪರೀಕ್ಷೆ ಮಾಡಬೇಕೆಂದೆನಿಸುತ್ತದೆ. ರಾಯರ ದರ್ಶನಕ್ಕಾಗಿ ಫಲವನ್ನು ಸ್ವೀಕಾರ ಮಾಡಬೇಕು ಎಂದು ಹೇಳಿ ತಟ್ಟೆಯಲ್ಲಿ ಮಾಂಸವನ್ನು ತಂದು ಬಟ್ಟೆ ಹೊದಿಸಿ ಈ ಫಲವನ್ನು ಸ್ವೀಕರಿಸಬೇಕು ಎಂದು ನವಾಬನು ಹೇಳಿದರು. ಆಗ ರಾಘವೇಂದ್ರ ಸ್ವಾಮಿಗಳು ಶಂಖೋದಕ ಪ್ರೋಕ್ಷಿಸಿದಾಗ ಆ ಮಾಂಸವು ಫಲ ಪುಷ್ಪಗಳಾದವು. ಇದನ್ನು ನೋಡಿದ ನವಾಬನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಬೇಡಿದನು. ರಾಯರಿಗೆ ಕಾಣಿಕೆಯಾಗಿ ಕೊಡಲು ಏನನ್ನಾದರೂ ಬೇಡು ಎಂದು ನವಾಬ ತಿಳಿಸಿದರು.
ರಾಯರು ತುಂಗಭದ್ರಾ ನದಿ ತೀರದ ಮಂಚಾಲೆಯ ಕ್ಷೇತ್ರವನ್ನು ಬೇಡಿದರು. ಅದು ಬರಡು ಭೂಮಿಯಾಗಿದ್ದರಿಂದ ಬೇರೆ ಫಲವತ್ತಾದ ಭೂಮಿಯನ್ನು ಬೇಡಲು ನವಾಬನು ಕೇಳಿಕೊಳ್ಳುತ್ತಾನೆ. ಆದರೆ ರಾಯರು ಆ ಮಂಚಾಲೆ ಕ್ಷೇತ್ರವನ್ನೇ ಕೊಡಲು ತಿಳಿಸುತ್ತಾರೆ. ಯಾಕೆಂದರೆ ರಾಯರು ಪ್ರಹ್ಲಾದರಾಯರಾಗಿ ಅವತರಿಸಿದಾಗ ತಪಸ್ಸು ಮಾಡಿದ ಜಾಗ ಅದಾಗಿರುತ್ತದೆ.
1671ರಲ್ಲಿ ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತೀಯದಂದು ಶ್ರೀ ರಾಘವೇಂದ್ರ ಸ್ವಾಮಿಗಳು ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿ ಸಶರೀರ ವೃಂದಾವನಸ್ಥರಾದರು. ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಮಾಸ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ರಾಘವೇಂದ್ರ ಸ್ವಾಮಿಗಳು ಮಧ್ವಮತಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕರುಣಾಮಯಿಗಳಾದ ರಾಯರ ಸ್ಮರಣೆ ಮಾತ್ರದಿಂದ ಭಕ್ತರುಗಳು ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ರಾಯರ ಸ್ಮರಣೆ ಹಾಗೂ ಸೇವೆಯಿಂದ ಪುನೀತರಾಗೋಣ.
-
ಅಂಜನಾ ರಾಘವೇಂದ್ರ ಕುಬೇರ.
ಗದಗ.
ಕಾಗದ ರಹಿತ ನೋಂದಣಿ ಸುರಕ್ಷಿತ: ಶಿವಕುಮಾರ ಅಪರಂಜಿ
ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸರಕಾರದ ನಿರ್ದೇಶನದಂತೆ ಮುಂದಿನ ದಿನಮಾನಗಳಲ್ಲಿ ಕಾಗದ ರಹಿತ ನೋಂದಣಿ ವ್ಯವಸ್ಥೆ ಜಾರಿಯಾಗಲಿದ್ದು, ಇದರ ಕುರಿತು ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿಯೂ ಸಹ ಕಾರ್ಯಾಗಾರಗಳು ಹಂತ ಹಂತವಾಗಿ ನಡೆಯುತ್ತಿವೆ ಎಂದು ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ ತಿಳಿಸಿದರು.
ಬುಧವಾರ ಶಿರಹಟ್ಟಿಯ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಸರಕಾರದ ನಿರ್ದೇಶನದಂತೆ ಆಯೋಜಿಸಿದ್ದ ಪೇಪರ್ಲೆಸ್ ನೋಂದಣಿ ವ್ಯವಸ್ಥೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೇಪರ್ಲೆಸ್ ವ್ಯವಸ್ಥೆಯಿಂದ ದಸ್ತಾವೇಜಿಗೆ ವಿಶಿಷ್ಟ ಸಂಖ್ಯೆ ಸಿಗಲಿದ್ದು, ದಾಖಲೆ ತಿರುಚಿ ಬೇರೆಯವರಿಗೆ ಮಾರಾಟ ಮಾಡುವದಕ್ಕೆ ಕಡಿವಾಣ, ಭೌತಿಕ ದಾಖಲೆ ಇಲ್ಲದೇ ಇರುವುದರಿಂದ ಕಾಗದ ಸಂಗ್ರಹಿಸುವ ತಂಟೆ ಇಲ್ಲ. ಎಲ್ಲಿ ಬೇಕಾದರೂ ತಮ್ಮ ನೋಂದಣಿಯಾದ ದಾಖಲೆ ಡೌನ್ಲೋಡ್ ಮಾಡಿಕೊಳ್ಳಬಹುದು. ಸುರಕ್ಷಿತ ಸಂಗ್ರಹಣೆ ಮತ್ತು ದೀರ್ಘಕಾಲೀನ ದಾಖಲೆಗಳನ್ನು ಸಂರಕ್ಷಿಸಬಹುದಾಗಿದೆ. ಕಾಗದ ರಹಿತ ಮತ್ತು ಪರಿಸರ ಸ್ನೇಹಿ, ದಾಖಲೆಗಳ ಸುಲಭ ಪರಿಶೀಲನೆ ಮತ್ತು ಡಿಜಿಟಲ್ ಆಡಳಿತಕ್ಕೆ ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದರು.
ಪೇಪರ್ಲೆಸ್ ನೋಂದಣಿ ವ್ಯವಸ್ಥೆ ಕುರಿತು ನಡೆಯುತ್ತಿದ್ದ ಕಾರ್ಯಾಗಾರವನ್ನು ದಸ್ತು ಬರಹಗಾರರು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು. ಉಪನೋಂದಣಾಧಿಕಾರಿ ಶರಣಪ್ಪ ಪವಾರ, ಜಿಲ್ಲಾ ಐಟಿ ಕನ್ಸಲ್ಟಂಟ್ ಕುನಾಲ್ ಕಾರಭಾರಿ, ಶ್ರೀನಿವಾಸ ಬೆಟಗೇರಿ, ತಾಲೂಕಾ ದಸ್ತು ಬರಹಗಾರರ ಸಂಘದ ಅಧ್ಯಕ್ಷ ಅಶೋಕ ಹುಬ್ಬಳ್ಳಿ, ಶಂಕರ ಕುಸ್ಲಾಪೂರ, ಎಸ್.ವಿ. ದಶಮನಿ, ಮೈನುದ್ದೀನ ಅತ್ತಾರ, ಮಂಜುನಾಥ ಮೆಣನಸಿನಕಾಯಿ, ಮಹಾದೇವಪ್ಪ ಹೊಂಬಾಳಿ, ಪದ್ಮಾವತಿ ಹುಬ್ಬಳ್ಳಿ, ಬಾಬಾಜಾನ್ ಕೋಳಿವಾಡ, ಮಹಾಂತೇಶ ದಶಮನಿ, ಪ್ರವೀಣ ಹುಬ್ಬಳ್ಳಿ, ಚನ್ನಪ್ಪ ಕುರಿ, ಉಮೇಶ ಶೇಳಕೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ದಸ್ತು ಬರಹಗಾರರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನಜೀರ ಡಂಬಳ, ಪೇಪರ್ಲೆಸ್ ವ್ಯವಸ್ಥೆ ಜಾರಿ ಮಾಡುವುದರಿಂದ ಅನಕ್ಷರಸ್ಥರಿಗೆ ಮಾರಕವಾಗಲಿದೆ. ರಾಜ್ಯ ಸಂಘದ ನಿರ್ದೇಶನದಂತೆ ಈ ವ್ಯವಸ್ಥೆಯನ್ನು ಧಿಕ್ಕರಿಸಿ ಸಭೆಯಿಂದ ಹೊರನಡೆಯುತ್ತಿದ್ದೇವೆ. ಒಂದು ಸಾರಿ ಓಟಿಪಿ ತೆಗೆದುಕೊಳ್ಳಲಿಕ್ಕೆ ಹರಸಾಹಸ ಮಾಡಬೇಕಾದ ಸ್ಥಿತಿ ಇರುವಾಗ ಪೇಪರ್ಲೆಸ್ನಿಂದ 3-4 ಬಾರಿ ಓಟಿಪಿ ತೆಗೆದುಕೊಳ್ಳಲು ಕಷ್ಟಸಾಧ್ಯವಾಗಲಿದೆ. ಈ ವ್ಯವಸ್ಥೆ ಕುರಿತು ನಮ್ಮ ಬೇಡಿಕೆಯನ್ನು ರಾಜ್ಯಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರೂ ಸಹಿತ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ ಎಂದರು.
ಮಗುವಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶೇಖರಗೌಡ ರಾಮತ್ನಾಳ
ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ರಕ್ಷಣಾ ಆಯೋಗವು ಮಕ್ಕಳ ರಕ್ಷಣಾ ನೀತಿ ಕುರಿತು ಗಮನದಲ್ಲಿಟ್ಟುಕೊಂಡು ಮಕ್ಕಳ ರಕ್ಷಣಾ ನೀತಿ ಕುರಿತಂತೆ ತರಬೇತಿ ನೀಡುತ್ತಿದೆ. ಪ್ರತಿಯೊಬ್ಬ ಪ್ರಾಂಶುಪಾಲರು ಪ್ರತಿ ಮಗುವಿಗೆ ರಕ್ಷಣೆ, ಕಾನೂನಿನ ರಕ್ಷಣೆ, ಕುಟುಂಬ ವಾತಾವರಣ ಸಿಗುವಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗದಗ ಇವರ ಸಹಯೋಗದಲ್ಲಿ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ಐ.ಟಿ.ಐ, ನರ್ಸಿಂಗ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳಿಗೆ ಹಮ್ಮಿಕೊಂಡಿದ್ದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ನೀತಿ, ಸಲಹಾ ಪೆಟ್ಟಿಗೆ, 1098 ಶಾಶ್ವತ ಗೋಡೆ ಬರಹ ಮೂಲಭೂತ ಸೌಕರ್ಯಗಳ ಕುರಿತು ಗಮನ ಹರಿಸಬೇಕು. ನಿಯಮ ಬದಲಾವಣೆ ಆದಂತೆ ಅದನ್ನು ತಿಳಿದು ಮಗುವಿನ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ, ಪೊಕ್ಸೋ, ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚು ಹೆಚ್ಚು ತರಬೇತಿ ಅರಿವು ಕಾರ್ಯಕ್ರಮಗಳು ಆಗಬೇಕು. ಕಾಯ್ದೆಯ ಸರಿಯಾದ ತಿಳುವಳಿಕೆ ಇಲ್ಲದೆ ಇರುವವರು ತರಬೇತಿ ಪಡೆದು ಕಾಯ್ದೆಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ಮಾತನಾಡುತ್ತಾ, ಮಕ್ಕಳ ರಕ್ಷಣಾ ಸಂಬಂಧಿತ ಕಾಯ್ದೆಗಳನ್ನು ಕಾಲೇಜುಗಳಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಹನುಮಂತ ರೆಡ್ಡಿ, ಬಿ.ಆರ್.ಪಿ ಪ್ರೌಢಶಾಲೆ ವಿಭಾಗ, ಬಿ.ಆರ್.ಸಿ, ಮುಂಡರಗಿ ಇವರು ಮಕ್ಕಳ ರಕ್ಷಣಾ ನೀತಿ-2016, ಪೊಕ್ಸೋ-2012 ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಪಿ.ಎಸ್.ಐ ಹೆಚ್.ಡಿ. ಓದುಗೌಡರ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜಯದೇವಿ ಕವಲೂರು, ಪೂರ್ಣಿಮಾ ಹೊಸಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್ ಮಾತನಾಡಿ, ಪ್ರಾಂಶುಪಾಲರು ತರಬೇತಿಯಲ್ಲಿ ಪಡೆಯುವ ಎಲ್ಲಾ ಅಂಶಗಳನ್ನು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಗುಣಮಟ್ಟದ, ಸಂಸ್ಕಾರಭರಿತ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಶಿಕ್ಷಣವನ್ನು ನೀಡಬೇಕು. ಕಾಲೇಜು ಅವಧಿಯಲ್ಲಿ ಮಕ್ಕಳ ಮೇಲೆ ನಿಗಾವಹಿಸಬೇಕು ಹಾಗೂ ಮಕ್ಕಳು ಮೊಬೈಲ್ನ್ನು ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

