Home Blog

ಬೀದರ್| AI ಕ್ಯಾಮೆರಾ ಮೂಲಕ ಆಟೋದಲ್ಲಿ ಮಹಿಳೆ ಕಳೆದುಕೊಂಡಿದ್ದ 29 ಸಾವಿರ ಪತ್ತೆಹಚ್ಚಿದ ಪೊಲೀಸ್!

0

ಬೀದರ್: ಎಐ ಕ್ಯಾಮೆರಾ ಸಹಾಯದಿಂದ ಮಹಿಳೆಯೊಬ್ಬರು ಆಟೋದಲ್ಲಿ ಕಳೆದುಕೊಂಡಿದ್ದ 29 ಸಾವಿರ ಹಣವನ್ನು ಪತ್ತೆ ಹಚ್ಚುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಜ್ಯೋತಿ ಎಂಬ ಮಹಿಳೆ ಡಿಹೆಚ್‌ಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಂತೆ ಕಳೆದ ಮೂರು ದಿನಗಳ ಹಿಂದೆ ಆಟೋದಿಂದ ಪ್ರಯಾಣಿಸುತ್ತಿದ್ದಾಗ ಹಣವನ್ನು ಮರೆತು ಹೋಗಿದ್ದರು.

ಮನೆಯಿಂದ ಕಚೇರಿಗೆ ಬಂದು ಹಣ ಪರಿಶೀಲಿಸಿದಾಗ ಹಣದ ಬ್ಯಾಗ್ ಕಳೆದುಕೊಂಡಿದ್ದು ಗೊತ್ತಾಗಿ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ನೆರವಾಗಿದ್ದು AI ಕ್ಯಾಮೆರಾ. ಆಟೋದಿಂದ ಬಿದ್ದಿದ್ದ ಹಣವನ್ನು ಬೈಕ್ ಸವಾರರು ಎತ್ತಿಕೊಂಡಿದ್ದ ದೃಶ್ಯ ಎಐ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇದೀಗ ಆ 29 ಸಾವಿರ ರೂ. ಹಣವನ್ನು ಬೀದರ್ ಪೊಲೀಸರು ಮಹಿಳೆಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಮಂಗಳವಾರ ಪವರ್ ಕಟ್; ಎಲ್ಲೆಲ್ಲಿ?

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಮಂಗಳವಾರ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಬ್ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವುದರಿಂದ ನಾಳೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಇರಲ್ಲ ಕರೆಂಟ್?

*ಮಾನ್ಯತಾ ಟೆಕ್ ಪಾರ್ಕ್
*ಮಾರುತಿ ಲೇಔಟ್
*ಭುವನೇಶ್ವರನಗರ
*ಏರ್ ಲೇಔಟ್
*ರಾಜೇನಹಳ್ಳಿ
*ಪಿಡಿ ಲೇಔಟ್
*ಶ್ರೀರಾಂಪುರ
*ಮಾಸ್ಟರ್ ಬಿಲ್ಡರ್
*ಚಾಮುಂಡೇಶ್ವರಿ ಬಡಾವಣೆ

ನಗರದ ಇತರೆ ಭಾಗಗಳಾದ ವರ್ತೂರು ರಸ್ತೆ, ನಾಗವಾರಪಾಳ್ಯ, ನಾಗಪ್ಪ ರೆಡ್ಡಿ ಲೇಔಟ್, ಅಬ್ಬೆರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಧರ್ಮರಾಜ ಪಾಳ್ಯ, ವಿಜಯನಗರ ಪೈ ಲೇಔಟ್, ಉದಯನಗರ, ಗಂಗಪ್ಪ ಲೇಔಟ್, ಸದಾನಂದನಗರ, ಕಸ್ತೂರಿ ನಗರ, ಕೃಷ್ಣಪ್ಪನ ಪಾಳ್ಯ, ಸುದ್ಧಗುಂಟೆಪಾಳ್ಯ, ಆರ್ಎಂ ಝಡ್ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ ಮತ್ತು ಅಯ್ಯಪ್ಪ ದೇವಸ್ಥಾನ ರಸ್ತೆಗಳಲ್ಲಿಯೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಕೆಎಸ್‌ಎಂಸಿಎ ನೂತನ ಎಂಡಿಯಾಗಿ ಬಿ. ಆನಂದ್ ಅಧಿಕಾರ ಸ್ವೀಕಾರ

0

ಗದಗ: ಕೆಎಸ್‌ಎಂಸಿಎ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಿ. ಆನಂದ್ ಅವರಿಗೆ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸತೀಶ ಕೃಷ್ಣ ಸೈಲ್ ಹಾರ್ದಿಕವಾಗಿ ಸ್ವಾಗತಿಸಿದರು.

ಲಿಂಗವನ್ನು ಪ್ರಾಣಕ್ಕಿಂತ ಮೇಲಾಗಿ ಪ್ರೀತಿಸಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರೀಗುರುವಿನಿಂದ ಶಿವದೀಕ್ಷಾ ಸಂಪನ್ನರಾಗಿ ಇಷ್ಟಲಿಂಗ ಪಡೆದು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ. ಲಿಂಗದೀಕ್ಷೆಯು ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳುವ ಚೈತನ್ಯ ಶಕ್ತಿ ಸಾಧನವಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ಅವರು ಭಾನುವಾರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಶಿವಲಿಂಗ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ-ಲಿಂಗದೀಕ್ಷೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಆಶೀರ್ವಚನ ನೀಡಿದರು.

ಶ್ರೀ ಗುರು ಶಿಷ್ಯ ಸದ್ಭಕ್ತರಿಗೆ ಲಿಂಗಧಾರಣೆ ಮಾಡಿ, ಮಂತ್ರ ಸಂಸ್ಕಾರದ ಮೂಲಕ ಶುದ್ಧೀಕರಣಗೊಳಿಸಿ ಜ್ಞಾನೋಪದೇಶ ಮಾಡಿ, ಈ ಲಿಂಗವನ್ನು ಪ್ರಾಣಕ್ಕಿಂತ ಮೇಲಾಗಿ ಪ್ರೀತಿಸಿ, ಪೂಜಿಸಿದಾಗ ಮಾತ್ರ ಲಿಂಗದೀಕ್ಷೆಗೆ ಅರ್ಥ ಬರುತ್ತದೆ. ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೆ ವಿಶಿಷ್ಟ ಸ್ಥಾನವಿದ್ದು, ಲಿಂಗದೀಕ್ಷಾ ಮತ್ತು ಅಯ್ಯಾಚಾರ ಸಂಸ್ಕಾರಗಳು ಅತ್ಯಂತ ಮಹತ್ವದ್ದಾಗಿದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ಹೆಚ್ಚುತ್ತದೆ. ಸಮಾಜದಲ್ಲಿನ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರಾಪ್ತವಾಗುತ್ತದೆ.

ವಿಭೂತಿ, ಲಿಂಗ, ಜೋಳಿಗೆ, ದಂಡ ಇವು ಸಂಸ್ಕಾರದ ಸಂಕೇತಗಳಾಗಿವೆ. ಲಿಂ. ಗಂಗಾಧರ ಶ್ರೀಗಳು ಮಹಾಶಿವರಾತ್ರಿಗೆ ಮಾಡುತ್ತಿದ್ದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಲಿಂ. ಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಕ್ಷೇತ್ರದಲ್ಲಿ ತ್ರಿಕೋಟಿಲಿಂಗ ಸ್ಥಾಪನೆ ಕಾರ್ಯ ನಡೆದಿದ್ದು ಈ ಭಾಗದ ಶಿವಭಕ್ತರಿಗೆ ಕಾಶಿ ಕ್ಷೇತ್ರ ದರ್ಶನವಾದಂತೆ ಎಂದು ಹೇಳಿದರು.

ಲಕ್ಷ್ಮೇಶ್ವರ, ಕುಂದಗೋಳ, ಶಿಗ್ಗಾಂವ ತಾಲೂಕಿನ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿದ್ದರು. 50ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ಕಾರ್ಯ ನೆರವೇರಿಸಲಾಯಿತು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅಪಾರ ಭಕ್ತರು ಲಿಂ. ವೀರಗಂಗಾಧರ ಜಗದ್ಗುರುಗಳ ಗದ್ದುಗೆ ದರ್ಶನ ಪಡೆದು ತ್ರಿಕೋಟಿ ಶಿವಲಿಂಗ ಸ್ಥಾಪನೆಗಾಗಿ ಸಿದ್ಧಗೊಂಡಿರುವ ಶಿವಲಿಂಗ ಪೂಜೆ ಮಾಡಿದರು. ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಮಾನವ ಧರ್ಮ ಮಹಾಮಂಟಪ, ಅಡ್ಡಪಲ್ಲಕ್ಕಿ ಕಲಾ ಮಂಟಪಗಳು ತಳಿರು ತೋರಣ, ಹೂವು, ದೀಪಾಲಂಕಾರದಿಂದ ಕಂಗೊಳಿಸಿದವು.

ನಿರಾಕಾರ ಸ್ವರೂಪದ ಚೇತನಶಕ್ತಿಯೇ ಶಿವ ಪರಮಾತ್ಮ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಣ್ಣಿಗೆ ಕಾಣದ, ಭಾವಕ್ಕೆ ಮೀರಿದ, ಆದಿ-ಅಂತ್ಯವಿಲ್ಲದ ನಿರಾಕಾರ ಸ್ವರೂಪದ ಚೇತನಶಕ್ತಿಯೇ ಶಿವಪರಮಾತ್ಮ. ಶಿವರಾತ್ರಿಯ ಶುಭ ಘಳಿಗೆಯಲ್ಲಿ ಶಿವನನ್ನು ಶ್ರದ್ಧೆ, ಭಕ್ತಿ, ತನ್ಮಯತೆಯಿಂದ ಧ್ಯಾನಿಸಿದರೆ ದೇಹ ಹಾಗೂ ಮನಸ್ಸಿಗೆ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದು ಹೂವಿನಶಿಗ್ಲಿ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಅವರು ಭಾನುವಾರ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ, ಸಾಂಸ್ಕೃತಿಕ, ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿವಜ್ಞಾನದ ಅರಿವು ಜೀವನ ಸಾಕ್ಷಾತ್ಕಾರಕ್ಕೆ ಸೋಪಾನವಾಗಿದೆ. ಅಜ್ಞಾನ ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಬದುಕಿನಲ್ಲಿ ಬೆಳಗಿಸು ಎಂದು ಶಿವನನ್ನು ಉಪವಾಸ, ಜಪ-ತಪ, ಪೂಜೆ, ಸ್ಮರಣೆ, ಭಜನೆಯ ಮೂಲಕ ಪ್ರಾರ್ಥಿಸುವ ಶುಭ ದಿನವೇ ಶಿವರಾತ್ರಿ. ಶಿವರಾತ್ರಿ ದಿನ ವಿಶೇಷವಾಗಿ ಶಿವ ದೇಗುಲಗಳಲ್ಲಿ ಪೂಜೆ, ಪ್ರಾರ್ಥನೆ, ಭಜನೆ, ಮಂತ್ರ, ಹೋಮ, ಯಾಗದ ಮೂಲಕ ಅಂತರಾತ್ಮಕ್ಕೆ ಶಿವನ ಇರುವಿಕೆಯ ಅರಿವಾಗುತ್ತದೆ ಎಂದರು.

ಪಿಎಸ್‌ಐ ನಾಗರಾಜ ಗಡಾದ ಮಾತನಾಡಿ, ನಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ವಿಶೇಷವಾದ ಅರ್ಥವಿದ್ದು, ತಾಯಂದಿರು ಮಕ್ಕಳೊಂದಿಗೆ ಪಾಲ್ಗೊಳ್ಳಬೇಕು. ತನ್ಮೂಲಕ ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು ಅವರಲ್ಲೂ ನಮ್ಮ ಧರ್ಮ, ಸಂಸ್ಕಾರ, ಆಚರಣೆ, ಸಂಪ್ರದಾಯಗಳ ಬಗ್ಗೆ ಪೂಜ್ಯನೀಯ ಭಾವನೆ ಮೂಡಿಸಬೇಕು ಎಂದರು.

ಯುವ ಮುಖಂಡರಾದ ಆನಂದ ಗಡ್ಡದೇವರಮಠ ಹಾಗೂ ಸುನೀಲ ಮಹಾಂತಶೆಟ್ಟರ ಮಾತನಾಡಿ, ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಪ್ರತೀಕವಾಗಿವೆ. ಇಂದಿನ ತಂತ್ರಜ್ಞಾನದ ಯುಗದಲ್ಲೂ ಇವುಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಡಾ. ಸುಧಾಮೂರ್ತಿಯವರು ದೇವಸ್ಥಾನ ಜೀರ್ಣೋದ್ಧಾರಗೊಳಿಸಿದ ನಂತರ ದೇವಸ್ಥಾನದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಭಕ್ತರ ಸಂಖ್ಯೆ ಹೆಚ್ಚಿದೆ. ಪುಲಿಗೆರೆ ಉತ್ಸವದಂತೆ ಶಿವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವು ಸಹ ಮೆರಗು ನೀಡುವಂತೆ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಸೋಮೇಶ್ವರ ದೇವಸ್ಥಾನದ ಅರ್ಚಕರ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದಿಗಂಬರ ಪೂಜಾರ, ಉಪಾಧ್ಯಕ್ಷರಾಗಿ ರಾಘವೇಂದ್ರ ಪೂಜಾರ, ಕಾರ್ಯದರ್ಶಿಯಾಗಿ ಸಮೀರ ಪೂಜಾರ ಹಾಗೂ ಖಜಾಂಚಿಯಾಗಿ ಕೃಷ್ಣ ಪೂಜಾರ ಅವರ ಅಧಿಕಾರ ಪದಗ್ರಹಣ ನೆರವೇರಿತು.

ಇದೇ ಸಂದರ್ಭದಲ್ಲಿ ಡಾ. ನಿಂಗನಗೌಡ ಚ.ಪಾಟೀಲ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವರ ಕುರಿತು ರಚಿಸಿದ `ತಿರುಳ್‌ಗನ್ನಡನಾಡು ಪುಲಗೆರೆಯ ಶ್ರೀ ಸೋಮೇಶ್ವರ ಮಹಿಮೆ’ ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ಸೋಮೇಶ್ವರ ದೇವಸ್ಥಾನ ಅರ್ಚಕರ ಸಮಿತಿ ನೂತನ ಅಧ್ಯಕ್ಷ ದಿಗಂಬರ ಪೂಜಾರ ವಹಿಸಿದ್ದರು. ವೇದಿಕೆಯಲ್ಲಿ ಸೋಮೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ, ಅರ್ಚಕರಾದ ಸೋಮನಾಥ ಪೂಜಾರ, ರಾಘವೇಂದ್ರ ಪೂಜಾರ, ನಾಗರಾಜ ಪೂಜಾರ, ಚಿಕ್ಕರಸಯ್ಯ ಪೂಜಾರ, ಕೃಷ್ಣ ಪೂಜಾರ, ಗುರುರಾಜ ಪೂಜಾರ ಮುಂತಾದವರಿದ್ದರು. ಶ್ವೇತಾ ಪೂಜಾರ, ಅಲಕನಂದಾ ಕುಲಕರ್ಣಿ, ದರ್ಶಿನಿ ಪೂಜಾರ ನಿರೂಪಿಸಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಶಿಕ್ಷಕ ಕಲಾವಿದ, ಸಂಗೀತ ಶಿಕ್ಷಕ ಡಾ. ಅರ್ಜುನ ವಠಾರ ಅವರಿಂದ ಶಾಸ್ತ್ರೀಯ ಸಂಗೀತ, ಗೋಕಾಕದ ಪಂ. ನಟರಾಜ ಮಹಾಜನ ಅವರಿಂದ ವಾದ್ಯರಹಿತ ಸಂಗೀತ ಸೇವೆ ನಡೆಯಿತು. ಸ್ಥಳೀಯ ವೇದಿಕಾ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು, ಬೆಂಗಳೂರಿನ ವಿ. ದೀಪಿಕಾ ಹೆಚ್.ಎಸ್, ಅನುಶ್ರೀ ಆರ್, ಗದಗನ ನಿಮಿಷಾಂಬಾ ಜ್ಯೋತಿಶ್ರೀ ನಾಟ್ಯ ಅಕಾಡೆಮಿ, ಕುಂದಗೋಳದ ನಾಟ್ಯ ತಂಡದವರಿಂದ ನಾಟ್ಯ ವೈಭವ ಮೇಳೈಸಿತ್ತು. ಹುಬ್ಬಳ್ಳಿಯ ಶಿವಾ ತಂಡದವರ ಗಂಗಾರತಿ ವಿಶೇಷ ಕಾರ್ಯಕ್ರಮ ಜನಮನ್ನಣೆಗೆ ಪಾತ್ರವಾಯಿತು.

ಮಾರ್ಚ್ 6ರಂದು 17ನೇ ಬಜೆಟ್‌ ಮಂಡಿಸಿ ದಾಖಲೆ ಬರೆಯಲಿದ್ದಾರೆ ಸಿದ್ದರಾಮಯ್ಯ!

0

ಬೆಂಗಳೂರು: ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಅಧಿಕೃತ ವೇಳಾಪಟ್ಟಿಯ ಪ್ರಕಾರ, ಅಂದು ಬೆಳಗ್ಗೆ 10:15ಕ್ಕೆ ಬಜೆಟ್ ಮಂಡನೆ ಆರಂಭವಾಗಲಿದೆ. ಕಳೆದ ಬಾರಿ ಕೂಡ ಮಾರ್ಚ್ 7ರಂದು ಇದೇ ಸಮಯದಲ್ಲಿ ಬಜೆಟ್ ಮಂಡನೆ ನಡೆದಿತ್ತು. ಈ ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ, ಒಟ್ಟು 14 ದಿನಗಳ ಕಾಲ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ ಈಗಾಗಲೇ ಇಲಾಖಾವಾರು ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದು, ಮುಂಬರುವ ಚುನಾವಣೆಯನ್ನು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಗಮನದಲ್ಲಿ ಇಟ್ಟುಕೊಂಡು ಈ ಬಜೆಟ್ ವಿಶೇಷ ಮಹತ್ವ ಹೊಂದಿದೆ.

ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಡಲೆ ಬೀಜ ಖರೀದಿ ಕೇಂದ್ರಕ್ಕೆ ಸೋಮವಾರ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕಡಲೆ ಬೆಳೆ ಬೆಳೆದ ರೈತರ ಅನುಕೂಲಕ್ಕಾಗಿ ತಾಲೂಕಾ ಕೇಂದ್ರದಲ್ಲಿ ಕಡಲೆ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿ ಕ್ವಿಂಟಾಲ್‌ಗೆ 5875 ರೂ. ದರ ನಿಗದಿಪಡಿಸಿದ್ದು, ಗರಿಷ್ಠ 40 ಕ್ವಿಂಟಾಲ್‌ವರೆಗೆ ಮಾರಾಟ ಮಾಡಲು ಅವಕಾಶವಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಜಾನು ಲಮಾಣಿ, ಗಂಗಾಧರ ಮೆಣಸಿನಕಾಯಿ, ಜಗದೀಶ ಸ್ವಾಮಿ, ಚನ್ನವೀರಪ್ಪ ಕಲ್ಯಾಣಿ, ಸಿ.ಬಿ. ಕೊಡ್ಲಿವಾಡ, ಉಮೇಶ ತೇಲಿ, ಚನ್ನಪ್ಪ ಹಲಸೂರ, ವಿ.ಬಿ. ಕೊಡ್ಲಿವಾಡ, ನಂದಾ ಪಲ್ಲೇದ, ಎಸ್.ಸಿ. ಅಡ್ರಕಟ್ಟಿ, ಮಲ್ಲಿಕಾರ್ಜುನ ಕಬಾಡಿ, ಜಗದೀಶ ತೇಲಿ, ವಿಠ್ಠಲ ಭಿಡವೆ ಮುಂತಾದವರು ಉಪಸ್ಥಿತರಿದ್ದರು.

ಶಿವಾನಂದ ಮಠದಲ್ಲಿ ಸಂಭ್ರಮದ ರಥೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕಳಸಾಪೂರ ರಸ್ತೆಯಲ್ಲಿರುವ ಶ್ರೀ ಶಿವಾನಂದ ಬ್ರಹ್ಮಮಠದ ಜಾತ್ರೆಯ ಅಂಗವಾಗಿ ಸೋಮವಾರ ಮಹಾರಥೋತ್ಸವ ಹಾಗೂ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ-ಸಂಭ್ರಮದಿಂದ ಜರುಗಿತು.

ಮಹಾಶಿವರಾತ್ರಿ ಹಾಗೂ ಜಾತ್ರೆಯ ನಿಮಿತ್ತ ಮಠದ ಗದ್ದುಗೆಗೆ ಸೋಮವಾರ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಗದಗ-ಬೆಟಗೇರಿ ಅವಳಿ ನಗರ ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಗ್ರಾಮೀಣ ಭಾಗದಿಂದ ಸಾವಿರಾರು ಭಕ್ತಾದಿಗಳು ಬಿಸಿಲನ್ನೂ ಲೆಕ್ಕಿಸದೆ ಗದ್ದುಗೆ ದರ್ಶನ ಪಡೆದು ಪುನೀತರಾದರು.

ಸಂಜೆ ನಡೆದ ಜಗದ್ಗುರು ಅಭಿನವ ಶಿವಾನಂದ ಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಭವ್ಯವಾಗಿ ಜರುಗಿತು. ಪಾದಗಟ್ಟೆಯವರೆಗೆ ಸಾಗಿದ ಮಹಾರಥೋತ್ಸವದ ಹಾದಿಯುದ್ದಕ್ಕೂ ಭಕ್ತರು ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟದೈವಕ್ಕೆ ಭಕ್ತಿ ಸಮರ್ಪಿಸಿದರು.

ಸಂಭ್ರಮದ ಮೆರವಣಿಗೆಗೆ ಡೊಳ್ಳು ಕುಣಿತ, ಚಂಡೆ ಮದ್ದಳೆ, ನಂದಿಕೋಲು, ಸಮ್ಮಾಳ ಮೇಳಗಳು ಮೆರಗು ನೀಡಿದವು. ವಿವಿಧ ಭಜನಾ ಮಂಡಳಿಗಳ ಗಾಯನವು ಮಠದ ಆವರಣದಲ್ಲಿ ಆಧ್ಯಾತ್ಮಿಕ ಕಳೆಯನ್ನು ಹೆಚ್ಚಿಸಿತ್ತು. ಜಾತ್ರಾ ಹಿನ್ನೆಲೆಯಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಬೆಳಕಿನ ಜೊತೆಗೆ ಬದುಕಿಗೆ ಭರವಸೆ ನೀಡಿದ ಗ್ಯಾರಂಟಿ ಯೋಜನೆ

ರಾಜ್ಯದ ಜನಸಾಮಾನ್ಯರ ಜೀವನದಲ್ಲಿ ನೇರ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ಪ್ರಮುಖವಾಗಿದೆ. ಮನೆಮಂದಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಮೂಲಕ ಕುಟುಂಬದ ಖರ್ಚನ್ನು ತಗ್ಗಿಸುವುದು ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ ನಿಗದಿತ ಮಿತಿಯೊಳಗಿನ ವಿದ್ಯುತ್ ಬಳಕೆಗೆ ಉಚಿತ ಸೌಲಭ್ಯ ನೀಡಲಾಗುತ್ತಿದೆ. ವಿದ್ಯುತ್ ವೆಚ್ಚವು ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ದೊಡ್ಡ ಹೊರೆ ಆಗಿದ್ದ ಸಂದರ್ಭದಲ್ಲೇ ಈ ಯೋಜನೆ ಆಶಾಕಿರಣವಾಗಿ ಮೂಡಿಬಂದಿದೆ. ವಿದ್ಯುತ್ ಮೂಲಭೂತ ಅಗತ್ಯವಾಗಿರುವ ಈ ಕಾಲಘಟ್ಟದಲ್ಲಿ, ಸರ್ಕಾರದ ಈ ಕ್ರಮವು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಯೋಜನೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಲಕ್ಷಾಂತರ ಕುಟುಂಬಗಳಿಗೆ ನೇರ ಲಾಭ ಸಿಕ್ಕಿದ್ದು, ಮನೆಯ ಆರ್ಥಿಕ ಯೋಜನೆ ಸುಗಮವಾಗಿದೆ. ಉಳಿದ ಹಣವನ್ನು ಶಿಕ್ಷಣ, ಆರೋಗ್ಯ ಹಾಗೂ ಇತರ ಅಗತ್ಯಗಳಿಗೆ ಬಳಸುವ ಅವಕಾಶ ಜನರಿಗೆ ದೊರಕಿದೆ.

ಗೃಹಜ್ಯೋತಿ ಯೋಜನೆಯ ಸದುಪಯೋಗ ಪಡೆಯಲು ಜನರು ತಮ್ಮ ವಿದ್ಯುತ್ ಸಂಪರ್ಕವನ್ನು ನೋಂದಾಯಿಸಿಕೊಂಡು ಸರಿಯಾದ ಮಾಹಿತಿಯನ್ನು ನೀಡಬೇಕು. ಅನಗತ್ಯ ವಿದ್ಯುತ್ ವ್ಯರ್ಥವನ್ನು ತಪ್ಪಿಸಿ, ಜವಾಬ್ದಾರಿಯುತ ಬಳಕೆ ಮಾಡುವ ಮೂಲಕ ಯೋಜನೆಯ ದೀರ್ಘಕಾಲೀನ ಲಾಭವನ್ನು ಉಳಿಸಬಹುದು.

ಯೋಜನೆಯು ಕೇವಲ ಉಚಿತ ವಿದ್ಯುತ್ ನೀಡುವಷ್ಟಕ್ಕೇ ಸೀಮಿತವಲ್ಲ. ಇದು ವಿದ್ಯುತ್ ಉಳಿಸುವ ಅರಿವು ಮೂಡಿಸುವುದಕ್ಕೂ ಕಾರಣವಾಗಿದೆ. ಅನೇಕ ಮನೆಗಳಲ್ಲಿ ವಿದ್ಯುತ್ ಉಳಿತಾಯ ಸಾಧನಗಳ ಬಳಕೆ ಹೆಚ್ಚಾಗಿದೆ. ಇದು ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಸಹ ಒಳ್ಳೆಯ ಬೆಳವಣಿಗೆ.

ಗೃಹಜ್ಯೋತಿ ಯೋಜನೆಯಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನದಲ್ಲಿ ಆರ್ಥಿಕ ನೆಮ್ಮದಿ ಮೂಡಿದೆ. ಮಹಿಳೆಯರ ಸ್ವಾವಲಂಬನೆ ಹೆಚ್ಚಲು, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲು ಮತ್ತು ಕುಟುಂಬದ ಒಟ್ಟಾರೆ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಿದೆ.

ಸರ್ಕಾರದ ಜನಪರ ಯೋಜನೆಗಳು ಜನರ ಕೈಗೆ ನೇರ ಲಾಭ ತಲುಪಿದಾಗ ಮಾತ್ರ ಅದರ ನಿಜವಾದ ಯಶಸ್ಸು ಸಾಧ್ಯ. ಗೃಹಜ್ಯೋತಿ ಯೋಜನೆ ಆ ದಿಕ್ಕಿನಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಒಂದು ಉತ್ತಮ ಮಾದರಿಯಾಗಿದೆ.

ಒಟ್ಟಾರೆ, ಗೃಹಜ್ಯೋತಿ ಯೋಜನೆ ಮನೆಗಳಿಗೆ ಬೆಳಕು ನೀಡುವುದಷ್ಟೇ ಅಲ್ಲ, ಜನರ ಬದುಕಿಗೆ ಆಶಾಕಿರಣವಾಗಿ ಪರಿಣಮಿಸಿದೆ. ಜನರು ಜವಾಬ್ದಾರಿಯುತವಾಗಿ ವಿದ್ಯುತ್ ಬಳಕೆ ಮಾಡಿದರೆ, ಈ ಯೋಜನೆ ಮುಂದಿನ ಪೀಳಿಗೆಗಳಿಗೂ ಉಪಯುಕ್ತವಾಗಲಿದೆ.

“ಗೃಹಜ್ಯೋತಿ ಯೋಜನೆ ಜನಸಾಮಾನ್ಯರ ಬದುಕಿನ ವೆಚ್ಚವನ್ನು ನೇರವಾಗಿ ಕಡಿಮೆ ಮಾಡುವ ಜನಪರ ಕಾರ್ಯಕ್ರಮವಾಗಿದೆ. ಪ್ರತೀ ಕುಟುಂಬಕ್ಕೂ ಆರ್ಥಿಕ ನೆಮ್ಮದಿ ನೀಡುವುದು ಸರ್ಕಾರದ ಬದ್ಧತೆ. ವಿದ್ಯುತ್ ಉಳಿಸಿ ಜವಾಬ್ದಾರಿಯುತ ಬಳಕೆ ಮಾಡಿದರೆ ಈ ಯೋಜನೆಯ ಲಾಭವನ್ನು ಇನ್ನಷ್ಟು ವರ್ಷಗಳ ಕಾಲ ಜನರು ಅನುಭವಿಸಬಹುದು. ಜನರ ಸಹಕಾರವೇ ಯೋಜನೆಯ ಯಶಸ್ಸಿಗೆ ಮುಖ್ಯ ಕಾರಣವಾಗಿದೆ”

  • ಎಚ್.ಕೆ. ಪಾಟೀಲ.
    ಗದಗ ಜಿಲ್ಲಾ ಉಸ್ತುವಾರಿ ಸಚಿವರು.

ಗದಗ ಜಿಲ್ಲೆಯ ಗೃಹಜ್ಯೋತಿ ಯೋಜನೆಯ ಪ್ರಗತಿ ವಿವರ: ಯೋಜನೆ ಆರಂಭದಿಂದ ಜನವರಿ 2026ರವರೆಗೆ ಒಟ್ಟು 278428 ಸ್ಥಾವರಗಳ ಪೈಕಿ 274305 ಸ್ಥಾವರಗಳು ನೋಂದಣಿಯಾಗಿವೆ. ಆ ಪೈಕಿ ತಾಲೂಕಾವಾರು ವಿವರ: ಗದಗ-99240, ಗಜೇಂದ್ರಗಡ-22443, ಲಕ್ಷೆö್ಮÃಶ್ವರ-26543, ಮುಂಡರಗಿ- 32960, ನರಗುಂದ-25308, ರೋಣ-46143, ಶಿರಹಟ್ಟಿ-21668. 31-1-2026ರವರೆಗೆ ನೋಂದಣಿಯಾಗದೇ ಬಾಕಿ ಇರುವ ಸ್ಥಾವರಗಳನ್ನು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಗತಿಯಲ್ಲಿರುತ್ತದೆ.

  • ಹನುಮಂತ ಬೆಂತೂರ.
    ಪ್ರ-ಶಿಕ್ಷಣಾರ್ಥಿ,
    ವಾರ್ತಾ ಮತ್ತು ಸಾ.ಸಂ.ಇಲಾಖೆ, ಗದಗ.

ಅನುವಾದ ಕಾರ್ಯ ಅತ್ಯಂತ ಕ್ಲಿಷ್ಟಕರ: ಬಸು ಬೇವಿನಗಿಡದ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಶ್ರೀಧರ ಗಸ್ತಿ ಓರ್ವ ಶಿಕ್ಷಕರಾಗಿ ಮಕ್ಕಳ ಮನಸ್ಸನ್ನು ಅರಳಿಸಿ, ಅವರ ಕಲ್ಪನಾ ಶಕ್ತಿಯನ್ನು ವೃದ್ಧಿಸುವ ಕಾರ್ಯವನ್ನು ಮಕ್ಕಳ ಸಾಹಿತ್ಯದ ಮೂಲಕ ಮಾಡಿದ್ದು ಅಭಿನಂದನೀಯ ಎಂದು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.

ಅವರು ಕ.ವಿ.ವ ಸಂಘದಲ್ಲಿ ಧಾರವಾಡದ ಚಿಲಿಪಿಲಿ ಪ್ರಕಾಶನದ ವತಿಯಿಂದ ಸಾಹಿತಿ ಶ್ರೀಧರ ಗಸ್ತಿ ಅವರ ‘ದಿ ಕಪ್‌ಟಿಚ್ಡ್ ಬೈ ದೇವಮ್ಮ’ ಹಾಗೂ ‘ಎಳೆಬಾಳೆ ಸುಳಿ ನಾನವ್ವ’ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಧರ ಗಸ್ತಿ ಓರ್ವ ಸೃಜನಶೀಲ ಬರಹಗಾರರು ಮಾತ್ರವಲ್ಲ, ಕಥೆಗಾರರು, ಅನುವಾದಕಾರರು ಹೌದು. ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ತಮ್ಮ ಶಾಲಾ ಜೀವನದ ವಾಸ್ತವಿಕ ಅನುಭವಗಳ ಸಾರವಾಗಿವೆ. ಅವರ ಸಾಹಿತ್ಯದಲ್ಲಿ ಬದುಕಿನ ಸತ್ಯಗಳಿವೆ. ಪ್ರಾಚೀನತೆಗಿಂತ ಆಧುನಿಕತೆಯ ವಾಸ್ತವಿಕ ಕಥೆಗಳಿವೆ. ಅವರು ರಚಿಸಿದ ಮಕ್ಕಳ ಕಥೆಗಳು ಕೇವಲ ಮಕ್ಕಳು ಮಾತ್ರವಲ್ಲ, ವಯಸ್ಕರರೂ ಓದುವಂತವುಗಳು. ವಾಯ್.ಜಿ. ಭಗವತಿಯವರ ‘ದೇವಮ್ಮನ ಲೋಟ’ ಕನ್ನಡ ಕೃತಿಯನ್ನು ಶ್ರೀಧರ ಗಸ್ತಿ ಆಂಗ್ಲ ಭಾಷೆಗೆ ಅನುವಾದಿಸಿ, ಅನ್ಯಭಾಷಿಕರಿಗೂ ಕನ್ನಡ ಭಾಷಾ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸಿದ್ದಾರೆ. ಅನುವಾದ ಕಾರ್ಯ ಬಹಳ ಕ್ಲಿಷ್ಟಕರವಾದುದು. ದೇವಮ್ಮನ ಲೋಟದಲ್ಲಿ ಜಾತಿಯ ತಾರತಮ್ಯ, ಸಾಮಾಜಿಕ ಅನಿಷ್ಟಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಲಾಗಿದೆ ಎಂದು ಹೇಳಿದರು.

ರಂಗಕರ್ಮಿ ಝಕೀರ ನದಾಫ್ `ಎಳೆಬಾಳೆ ಸುಳಿನಾನವ್ವ’ ಕೃತಿಯ ಕುರಿತು ಮಾತನಾಡಿ, ಮಕ್ಕಳ ನಾಟಕ ಬರೆಯುವುದು ಪ್ರಯಾಸದಾಯಕ. ಮಕ್ಕಳ ಮನಸ್ಥಿತಿ, ಭಾವನೆ ಅರಿತು ನಾಟಕ ರಚಿಸಬೇಕಾಗುತ್ತದೆ. ಸಾಮಾಜಿಕ ಅನಿಷ್ಟಗಳ ಕುರಿತು ನಾಟಕ ರಚಿಸಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದು ಅಭಿನಂದನೀಯ ಎಂದು ಹೇಳಿದರು.

ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ ಮಾತನಾಡಿ, ಚಿಲಿಪಿಲಿ ಸಂಸ್ಥೆ ಉದಯೋನ್ಮುಖ ಸಾಹಿತಿಗಳಿಗೊಂದು ವರದಾನ. ಅನೇಕ ಯುವ ಸಾಹಿತಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ. ಗಸ್ತಿಯವರ ಎರಡೂ ಕೃತಿಗಳು ಉತ್ಕೃಷ್ಟವಾಗಿವೆ ಎಂದು ಹೇಳಿದರು.

ಮಕ್ಕಳ ಸಾಹಿತಿಗಳಾದ ವಾಯ್.ಜಿ. ಭಗವತಿ ಹಾಗೂ ಶ್ರೀಧರ ಗಸ್ತಿ ಮಕ್ಕಳ ಸಾಹಿತ್ಯದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ.ಹೊರಕೇರಿ, ಡಾ. ಜಿನದತ್ತ ಹಡಗಲಿ, ಬಾಬಾಜಾನ ಮುಲ್ಲಾ, ಜಕಾತಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಎನ್.ಜಿ. ಗುರುಪುತ್ರನವರ, ಬಿ.ಬಿ. ಪಾಟೀಲ, ಮೀನಾಕಮಾರಿ ಆಚಾರ್ಯ, ಸುಧಾ ಕಬ್ಬೂರ, ತನುಜಾ ಮುಗದ, ಮಾಧುರಿ ಕುಲಕರ್ಣಿ, ಭಾರತಿ ಬಡಿಗೇರ, ಪ್ರಮೀಳಾ ಜಕ್ಕಣ್ಣನವರ ಮುಂತಾದವರಿದ್ದರು.

ನಿ. ಶ್ರೀಶೈಲ ಸ್ವಾಗತಿಸಿದರು. ಎನ್.ಬಿ. ದ್ಯಾಪೂರ ನಿರ್ವಹಿಸಿದರು. ಅಶೋಕ ಡೊಂಬರಕೊಪ್ಪ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಶ್ರೀಧರ ಗಸ್ತಿ ಹಾಗೂ ವಾಯ್.ಜಿ. ಭಗವತಿ ಇಬ್ಬರೂ ಶಿಕ್ಷಕ ವೃತ್ತಿಯ ಜೊತೆಗೆ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವುದು ಅಭಿಮಾನದ ಸಂಗತಿ. ಸಾಹಿತಿಗಳಿಗೆ, ಬರಹಗಾರರಿಗೆ ಮೊದಲು ಸಾಹಿತ್ಯದ ಹಸಿವು ಮುಖ್ಯ. ಆಧುನಿಕತೆಯಲ್ಲೂ ಸುಶಿಕ್ಷಿತರೇ ಹೆಚ್ಚು ಮೌಢ್ಯಕ್ಕೆ ಒಳಗಾಗುತ್ತಿರುವುದು ಒಂದು ದುರಂತ. ಮಕ್ಕಳ ಸಾಹಿತಿಗಳು ಕಲಾಂ ಅವರಂತೆ ಮಕ್ಕಳ ಭಾವನೆಗೆ ಬಣ್ಣ ತುಂಬುವ ಕಾರ್ಯ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

error: Content is protected !!