ಬೆಂಗಳೂರು: ನಗರದಲ್ಲಿ ಯುವತಿಗೆ MBBS ಸೀಟ್ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ FIR ದಾಖಲಾಗಿದೆ.
ಸಂತ್ರಸ್ತ ಯುವತಿ ಆಯೇಷಾ ಖಥುಮ್ ಅವರಿಗೆ ಸೀಟ್ ಕೊಡಿಸುವುದಾಗಿ ಹೇಳಿ ಹಣ ಪಡೆದ ಆರೋಪದ ಮೇಲೆ ಡಾ. ಕೆ.ಪಿ. ಶರತ್ ಸೇರಿದಂತೆ ಶಂಶೇರ್ ಬೇಗ್ ಮತ್ತು ಸೈಯದ್ ತಬ್ರೇಜ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ BNS 318(4), 318(2) ಸೇರಿ ಒಟ್ಟು 8 ಸೆಕ್ಷನ್ಗಳಡಿ ಕೇಸ್ ದಾಖಲಿಸಲಾಗಿದೆ.
ಆಯೇಷಾ ಖಥುಮ್ ತಂದೆ ಲಾಲ್ ಬಾಬು ನೀಡಿದ ದೂರಿನ ಪ್ರಕಾರ, ದ್ವಿತೀಯ ಪಿಯುಸಿ ಹಾಗೂ NLT ಪರೀಕ್ಷೆ ಬರೆದಿದ್ದ ಯುವತಿ MBBS ಪ್ರವೇಶಕ್ಕಾಗಿ ಉತ್ತಮ ಕಾಲೇಜು ಹುಡುಕುತ್ತಿದ್ದರು. ಈ ವೇಳೆ ಪರಿಚಯದ ಸೈಯದ್ ತಬ್ರೇಜ್ ಮೂಲಕ ಶಂಶೇರ್ ಬೇಗ್ ಎಂಬಾತನ ಪರಿಚಯವಾಗಿತ್ತು.
ಶಂಶೇರ್ ಬೇಗ್ ತಾನು ಕಿಮ್ಸ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರ ಪರಿಚಯವಿದೆ ಎಂದು ಹೇಳಿ ಡಾ. ಕೆ.ಪಿ. ಶರತ್ ಅವರನ್ನು ಪರಿಚಯಿಸಿದ್ದಾನೆ. ಬಳಿಕ ಬನಶಂಕರಿ 2ನೇ ಹಂತದಲ್ಲಿರುವ KIMS ಮೆಡಿಕಲ್ ಕಾಲೇಜಿನಲ್ಲಿ ಭೇಟಿಯಾಗಿದ್ದು, ಇದೇ ಕಾಲೇಜಿನಲ್ಲಿ ಆಯೇಷಾಗೆ ಸೀಟ್ ಕೊಡಿಸುವುದಾಗಿ ನಂಬಿಸಿ ಶೈಕ್ಷಣಿಕ ದಾಖಲೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ನಂತರ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ 25 ಲಕ್ಷ ರೂಪಾಯಿ ಡೊನೇಷನ್ ನೀಡಿದರೆ ಸೀಟ್ ಪಕ್ಕಾ ಎಂದು ಹೇಳಲಾಗಿದೆ. ಆರೋಪಿಗಳ ಮಾತು ನಂಬಿದ ಕುಟುಂಬಸ್ಥರು ಯುಪಿಐ ಮತ್ತು ಚೆಕ್ ಮೂಲಕ 10 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಬಳಿಕ ಉಳಿದ 15 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದಾರೆ.
ಆದರೆ ಪೂರ್ತಿ ಹಣ ಪಡೆದ ಬಳಿಕ ಆರೋಪಿಗಳು ಸೀಟ್ ಕೊಡಿಸದೇ ಸಂಪರ್ಕ ತಪ್ಪಿಸಿಕೊಂಡಿದ್ದಾರೆ. ವಿಚಾರಿಸಿದಾಗ ಡಾ. ಕೆ.ಪಿ. ಶರತ್ ಅವರು ಕಿಮ್ಸ್ ಕಾಲೇಜಿನ ಅಧ್ಯಕ್ಷರಲ್ಲ ಎಂಬುದು ಬೆಳಕಿಗೆ ಬಂದಿದೆ. ತಾವು ಮೋಸ ಹೋಗಿರುವುದು ತಿಳಿದು ಆಯೇಷಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.

