Home Blog

ಬೆಂಗಳೂರು| 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕ ಅರೆಸ್ಟ್!

0

ಬೆಂಗಳೂರು:- 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಆರೋಪದಡಿ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ.

ಬೆಂಗಳೂರಿನ ನಾರಾಯಣ ಇ-ಸ್ಕೂಲ್​​​ನ ಪಿಟಿ ಶಿಕ್ಷಕ ರಾಜೇಶ್ ಎನ್ನುವರ ವಿರುದ್ಧ ಆರೋಪ ಕೇಳಿಬಂದಿದ್ದು, FIR ದಾಖಲಿಸಿ, ಬೆಂಗಳೂರಿನ ಹುಳಿಮಾವು ಪೊಲೀಸರು, ಶಿಕ್ಷಕ ರಾಜೇಶ್ ಅವರನ್ನು ಬಂಧಿಸಿದ್ದಾರೆ.

ಶಿಕ್ಷಕ ರಾಜೇಶ್ ಸ್ಟಾಫ್ ರೂಮ್​ನಲ್ಲಿ ಶಿಕ್ಷಕರ ಮುಂದೆ ವಿದ್ಯಾರ್ಥಿ ಕೆನ್ನೆಗೆ ಬಾರಿಸಿದ್ದು, ಹೊಡೆದ ಏಟಿಗೆ ವಿದ್ಯಾರ್ಥಿಯ ಕೆನ್ನೆ ಊದಿಕೊಂಡಿದೆ. ಇದರಿಂದ ಬಾಲಕ ಮನೆಗೆ ಹೋಗಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಶಾಲೆಗೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹುಳಿಮಾವು ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಬೆಟ್ಟ ಹತ್ತುವಾಗ ದುರಂತ: ಕಾಲು ಜಾರಿ ಬಿದ್ದು ವೃದ್ಧ ಸಾವು!

0

ರಾಮನಗರ:- ರಾಮನಗರ ತಾಲೂಕಿನ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವೃದ್ಧ ಸಾವನ್ನಪ್ಪಿರುವ ಘಟನೆ ಜರುಗಿದೆ.

65 ವರ್ಷದ ರೇವಣ್ಣ ಮೃತ ದುರ್ದೈವಿ. ಇಂದು ಬೆಳಗ್ಗೆ ಕುಟುಂಬ ಸಮೇತ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬಂದಿದ್ದ ರೇವಣ್ಣ, ದೇವರ ದರ್ಶನ ಮಾಡಲು ಬೆಟ್ಟ ಹತ್ತುವಾಗ ಕಾಲು ಜಾರಿ ಕಂದಕಕ್ಕೆ ಬಿದ್ದಿದ್ದಾರೆ. ಮೇಲಿಂದ ಬಿದ್ದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೇವಣ್ಣ ಶವ ಮೇಲಕ್ಕೆತ್ತಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಪೀಠೋಪಕರಣ ಮಳಿಗೆಗೆ ಬೆಂಕಿ: 50 ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿ

0

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಕಿಲ್ಲೆ ಓಣಿಯ ಖಾದರ್ಲಿಂಕ್ ಬಳಿ ಇರುವ ಪೀಠೋಪಕರಣ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 50 ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿರುವ ಘಟನೆ ಜರುಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಇಂದು ಮುಂಜಾನೆ ಹೊತ್ತಿದ ಬೆಂಕಿ ಅಕ್ಕ ಪಕ್ಕದ ಮಳಿಗೆಗಳಿಗೂ ಆವರಿಸಿದ್ದು, ಅಂದಾಜು ಐವತ್ತು ಲಕ್ಷದಷ್ಟು ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಕಿಲ್ಲೆ ಓಣಿಯ ಯೂನುಸ್ ಹೊಸಕೊಪ್ಪ ಎಂಬವರಿಗೆ ಸೇರಿದ ಪೀಠೋಪಕರಣದ ಮಳಿಗೆ ಹಾಗೂ ಅಯಾನ್ ಹಾನಗಲ್ ಎಂಬವರಿಗೆ ಸೇರಿದ ಹಾರ್ಡ್‌ವೇರ್ ಮಳಿಗೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗುಲಿ ಹಾನಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಲಾಗಿದೆ.

ಘಟನೆ ಸಂಬಂಧ ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವೈದ್ಯರ ನಿರ್ಲಕ್ಷ್ಯ: ತಾಯಿ ಹೊಟ್ಟೆಯಲ್ಲೇ ನವಜಾತ ಗಂಡು ಶಿಶು ಸಾವು!

0

ಯಾದಗಿರಿ:- ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಹೊಟ್ಟೆಯಲ್ಲೇ ಗಂಡು ಮಗು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಹೆರಿಗೆ ನೋವಿನಿಂದ ಮಹಿಳೆ ನರಳುತ್ತಿದ್ದರೂ ಆಸ್ಪತ್ರೆಯಲ್ಲಿ ಬೆಡ್ ಕೊಡದೆ, ಚಿಕಿತ್ಸೆ ನೀಡಿಲ್ಲ ಎಂದು ದೂರಲಾಗಿದೆ. ಮಗುವಿನ ಮೃತದೇಹದ ಜೊತೆ ಆಸ್ಪತ್ರೆ ಮುಂದೆ ಕುಳಿತು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ನೀಲಬಾಯಿ ಎಂಬ ಮಹಿಳೆಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವರನ್ನು ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದರು. ಆದರೆ ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಸರಿಯಾಗಿ ಸ್ಪಂದಿಸಿಲ್ಲ. ಅವರಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಲ್ಲದೆ ಕನಿಷ್ಠ ಬೆಡ್​​ ಕೂಡ ನೀಡಿಲ್ಲ. ಇವತ್ತು ಬೆಳಿಗ್ಗೆ ಅವರಿಗೆ ರಕ್ತಸ್ರಾವ ಶುರುವಾದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಮಗುವನ್ನು ಹೊರತೆಗೆದಿದ್ದಾರೆ. ಆದರೆ ದುರಾದ್ರಷ್ಟವಶಾತ್​​ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ.

ಸಮಯಕ್ಕೆ ಸರಿಯಾಗಿ ನೀಲಬಾಯಿ ಅವರಿಗೆ ಹೆರಿಗೆ ಮಾಡಿಸಿದ್ದರೆ ಮಗು ಬದುಕುತ್ತಿತ್ತು ಎಂದು ಕುಟುಂಬಸ್ಥರು ಕಿಡಿ ಕಾರಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೃತ ನವಜಾತ ಶಿಶುವಿನ ಶವದ ಜೊತೆ ಆಸ್ಪತ್ರೆ ಮುಂದೆ ಕಣ್ಣೀರು ಹಾಕುತ್ತಾ ಪ್ರತಿಭಟನೆ ನಡೆಸಿದ್ದಾರೆ. ನೀಲಬಾಯಿ ದೇವಪ್ಪ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 9 ವರ್ಷಗಳ ಬಳಿಕ ಈಗ ಗಂಡು ಮಗು ಆಗಿತ್ತು. ಆದರೆ, ಮಗು ತಾಯಿಯ ಹೊಟ್ಟೆಯಲ್ಲೇ ಮೃತಪಟ್ಟಿರೋದು ಕುಟುಂಬಸ್ಥರ ದುಃಖ ಹೆಚ್ಚು ಮಾಡಿದೆ.

Gold Rate: ಚಿನ್ನದ ದರ ಏರಿಕೆ… ಇಂದಿನ ರೇಟ್ ಎಷ್ಟು ಗೊತ್ತಾ!?

0

ಚಿನ್ನದ ಬೆಲೆ ಶನಿವಾರದಂತೆ ಭಾನುವಾರವೂ ಏರಿಕೆ ಆಗಿದ್ದು, ಗೋಲ್ಡ್ ಪ್ರಿಯರು ಕಂಗಾಲಾಗಿದ್ದಾರೆ.

ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ 20 ರೂ ಅಲ್ಪ ಹೆಚ್ಚಳ ಹೊಂದಿದೆ. ಹತ್ತು ದಿನದಲ್ಲಿ ಬೆಲೆ ಗ್ರಾಮ್​ಗೆ 220 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,19,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,30,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,19,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 19,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 19,900 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 7ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,015 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,930 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 9,761 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 190 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,015 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,930 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 190 ರೂ.

ತಪ್ಪಿದ ಚಾಲಕನ ನಿಯಂತ್ರಣ: ಕೆರೆಗೆ ಪಲ್ಟಿ ಹೊಡೆದ ಕಾರು, ಸ್ಥಳೀಯರ ಸಹಾಯದಿಂದ ಮೂವರು ಪಾರು!

0

ಶಿವಮೊಗ್ಗ:– ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಪಲ್ಟಿ ಹೊಡೆದಿರುವ ಘಟನೆ ರಿಪ್ಪನ್‍ಪೇಟೆಯ ತಾವರೆಕೆರೆಯಲ್ಲಿ ಜರುಗಿದೆ.

ಘಟನೆ ಬೆನ್ನಲ್ಲೇ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನದಿಂದ ಕೊಲ್ಲೂರಿಗೆ ಮಾರುತಿ ಆಲ್ಟೋ ಕಾರಿನಲ್ಲಿ ಮೂವರು ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ತಾವರೆಕೆರೆಗೆ ಕಾರು ಉರುಳಿದೆ. ಕಾರು ಕೆರೆಗೆ ಉರುಳುತ್ತಿದ್ದಂತೆ ತಕ್ಷಣ ಸ್ಥಳಿಯರು ಕಾರನ್ನು ಬದಿಗೆ ತಂದು, ಮೂರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.

ರಿಪ್ಪನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗದಗ|ಬಿಜೆಪಿ ಮುಖಂಡನ ಹುಟ್ಟು ಹಬ್ಬದಲ್ಲಿ ರಕ್ತದಾನ ಮಾಡಿದ ಪತ್ರಕರ್ತರು!

0

ಗದಗ:- ಬಿಜೆಪಿಯ ಯುವ ಮುಖಂಡ ವಸಂತ ಪಡಗದ ಅವರ 38ನೇ ಹುಟ್ಟು ಹಬ್ಬದಂದು ಗದಗನ ಹಲವು ಪತ್ರಕರ್ತರು ರಕ್ತದಾನ ಮಾಡುವ ಮೂಲಕ ಮಾದರಿಯಾದರು.

ಗದಗ ನಗರದ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿರುವ ವಾಡಿಯಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ವಸಂತ ಪಡಗದ ಅವರ 38ನೇ ಹುಟ್ಟುಹಬ್ಬದ ನಿಮಿತ್ತ ವಸಂತ ಪಡಗದ ಅಭಿಮಾನಿ ಬಳಗ, ಅಂಬಿಕಾ ರಕ್ತನಿಧಿ ಹಾಗೂ ಬಾಲ ವಿನಾಯಕ ರಕ್ತದಾನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯವಾಣಿ ಜಿಲ್ಲಾ ವರದಿಗಾರ ಶಿವಾನಂದ ಹಿರೇಮಠ, ಉದಯವಾಣಿ ಜಿಲ್ಲಾ ವರದಿಗಾರ ಅರುಣ ಕುಮಾರ್ ಹಿರೇಮಠ, ಜಿಲ್ಲಾ ವರದಿಗಾರ ಪ್ರವೀಣ್ ಕುಮಾರ್ ಮಾಂತಾ ಸೇರಿದಂತೆ ಹಲವರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ವಸಂತ ಪಡಗದ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ವಸಂತ ಪಡಗದ ಅಭಿಮಾನಿ ಬಳಗದ ಶರಣು ಮರಿಗೌಡರ, ಜಯಪ್ಪ ಕುರ್ತಕೋಟಿ, ಮಂಜುನಾಥ ರಾಯಚೂರು, ಮೋಹನ ವರವಿ, ಮುತ್ತಣ್ಣ ಪಡಗದ, ಸಂಗಪ್ಪ ದೊಡ್ಡಣ್ಣವ್ವರ, ಕುಮಾರ ಕಣವಿ, ಪ್ರವೀಣ ಕರಿಬಿಷ್ಠಿ, ಷಣ್ಮುಖ, ಅರುಣ ಹೊಂಬಾಳಿ, ಬಸವರಾಜ ತುಪ್ಪದ, ಪಂಚಾಕ್ಷರಿ ಅಂಗಡಿ, ಮಹೇಶ ಗಾಣಿಗೇರ, ಸಂಗಪ್ಪ ಚಿತ್ತರಗಿ ರಜತ್ ಭೀಮಕರ ಸೇರಿದಂತೆ ಅನೇಕರು ಹಾಜರಿದ್ದರು.

ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಫೈನಾನ್ಸ್ ಗೆ ಕಟ್ಟಬೇಕಾಗಿದ್ದ ಲಕ್ಷ-ಲಕ್ಷ ಹಣ ಆನ್ಲೈನ್ ಗೇಮ್ ಗೆ ಬಳಕೆ: ವಾಪಸ್ ದುಡ್ಡು ಕಟ್ಟಲಾಗದೇ ಯುವಕ ಸೂಸೈಡ್

0

ಧಾರವಾಡ:- ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಫೈನಾನ್ಸ್‌ಗೆ ಕಟ್ಟಬೇಕಿದ್ದ 3 ಲಕ್ಷ ರೂ.ಗೂ ಅಧಿಕ ಹಣವನ್ನು ಆನ್‌ಲೈನ್ ಗೇಮ್‌ಗೆ ಬಳಕೆ ಮಾಡಿ, ಬಳಿಕ ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಬಸವರಾಜ ಸಕ್ರಪ್ಪನ್ನವರ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಧಾರವಾಡ ತಾಲೂಕಿನ ಮಂಗಳಗಟ್ಟಿ ಮೂಲದವ ಎನ್ನಲಾಗಿದೆ. ಊರಿನಲ್ಲಿಯೇ ಫೈನಾನ್ಸ್ ಹಣವನ್ನ ಕಲೆಕ್ಷನ್ ಮಾಡುವ ಕೆಲಸ ಮಾಡುತ್ತಿದ್ದ.

ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಸಂಗ್ರಹಿಸಿದ್ದ ಫೈನಾನ್ಸ್ ಹಣವನ್ನು ಆಟಕ್ಕೆ ಬಳಸಿಕೊಂಡಿದ್ದ. ಹೀಗೆ ಬಳಸಿಕೊಂಡು 3 ಲಕ್ಷ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದ. ಫೈನಾನ್ಸ್ ಹಣವನ್ನು ವಾಪಸ್ ಕಟ್ಟಲಾಗದೇ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನನ್ನ ಆಸ್ತಿ, ನನ್ನ ಸಂಪಾದನೆ, ನನಗಿಷ್ಟವಾದ ವಾಚ್, ಶೂ ಧರಿಸ್ತೀನಿ: ಡಿಕೆ ಶಿವಕುಮಾರ್ ಪಂಚ್‌

0

ಹಾಸನ:- ನನ್ನ ಶ್ರಮ, ನನ್ನ ಸಂಪಾದನೆ, ನನಗಿಷ್ಟವಾದ ವಾಚ್‌, ಶೂ ಧರಿಸ್ತೀನಿ. ಬಿಜೆಪಿಯವರಿಗೆ ಕಷ್ಟವೇನೂ ಎಂದು ಡಿಕೆ ಶಿವಕುಮಾರ್ ಪಂಚ್‌ ಡೈಲಾಗ್ ಹೊಡೆದಿದ್ದಾರೆ.

ವಿಪಕ್ಷ ನಾಯಕರು ನಿಮ್ಮ ವಾಚ್ ವಿಚಾರವಾಗಿ ಟೀಕೆ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾನು ನನ್ನ ದುಡ್ಡಲ್ಲಿ ಎಷ್ಟು ವಾಚ್ ಬೇಕಾದ್ರೂ ಖರೀದಿ ಮಾಡ್ತೀನಿ, ಖರೀದಿ ಮಾಡುವ ಶಕ್ತಿ ನನಗಿದೆ. ಯಾರು ಯಾವ ಪ್ಯಾಂಟ್ ಹಾಕುತ್ತಾರೆ, ಯಾವ ವಾಚ್ ಹಾಕುತ್ತಾರೆ, ಯಾವ ಕನ್ನಡಕ ಹಾಕುತ್ತಾರೆ ಎಂದು ನಾನು ಪ್ರಶ್ನೆ ಮಾಡುವುದಿಲ್ಲ.

ಇದು ವೈಯಕ್ತಿಕ ವಿಚಾರ, ಅವರವರ ಆಸೆಗಳು. ಕೆಲವರು ಒಂದು ಸಾವಿರದ ಶೂ ಧರಿಸಿದ್ರೆ, ಕೆಲವರು 1 ಲಕ್ಷದ ಶೂ ಧರಿಸುತ್ತಾರೆ. ನಾನು 1 ಸಾವಿರ ರೂಪಾಯಿ ವಾಚನ್ನೂ ಕಟ್ತೀನಿ, 10 ಲಕ್ಷ ರೂ. ವಾಚನ್ನೂ ಕಟ್ತೀನಿ. ಅದು ನನಗೆ ಬಿಟ್ಟ ವಿಚಾರ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ. ಪಾಪ, ವಿರೋಧ ಪಕ್ಷದ ನಾಯಕರಿಗೆ ಅನುಭವದ ಕೊರತೆ ಇದೆ. ಅವರಿಗೆ ಚುನಾವಣೆ ನಿಂತ ಅನುಭವವೂ ಇಲ್ಲ. ಹೀಗಾಗಿ ಗೊತ್ತಿಲ್ಲದೇ ಮಾತನಾಡಿದ್ದಾರೆ. ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವುದರಿಂದ ಪ್ರತಿಕ್ರಿಯೆ ನೀಡಿದ್ದೇನೆ. ಬೇರೆಯವರಾಗಿದ್ದರೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದರು.

ಚಿಕ್ಕಮಗಳೂರು: ಕಾರ್ಮಿಕನ ಮೇಲೆ ಕಾಡಾನೆ ದಾಳಿ; ಬಾಳೆಹೊನ್ನೂರಲ್ಲಿ ವ್ಯಕ್ತಿ ಸ್ಥಿತಿ ಗಂಭೀರ!

0

ಚಿಕ್ಕಮಗಳೂರು:- ಬಾಳೆಹೊನ್ನೂರಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಜರುಗಿದೆ.

ಗಣಪತಿ ಗಾಯಗೊಂಡ ಕಾರ್ಮಿಕ. ಆನೆ ದಾಳಿಯಿಂದ ಕಾರ್ಮಿಕ ಪ್ರಜ್ಞೆ ಕಳೆದುಕೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಎಡಗೈ ಮಾತ್ರ ನಡುಗುತ್ತಿದ್ದು, ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.

ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

error: Content is protected !!