Home Blog

42ನೇ ವಯಸ್ಸಿಗೆ ಅಮ್ಮನಾದ ಕತ್ರೀನಾ ಕೈಫ್

ಬಾಲಿವುಡ್ ಸ್ಟಾರ್ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮೊದಲ ಮಗುವನ್ನು ನವೆಂಬರ್ 7, 2025 ರಂದು ಸ್ವಾಗತಿಸಿದ್ದಾರೆ. ತಮ್ಮ ಜೀವನದಲ್ಲಿ ಪತಿ-ಪತ್ನಿಯಾಗಿ ಇದ್ದ ಈ ಜೋಡಿ ಈಗ ಅಪ್ಪ-ಅಮ್ಮ ಎಂಬ ಹೊಸ ಜವಾಬ್ದಾರಿಯನ್ನು ಎದುರಿಸುತ್ತಿದ್ದಾರೆ.

ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಜಂಟಿ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ಸಂತೋಷದ ಮೂಟೆ ಬಂದಿದೆ. ಅಪಾರ ಕೃತಜ್ಞತೆಯಿಂದ, ನಾವು ನಮ್ಮ ಗಂಡು ಮಗುವನ್ನು ಸ್ವಾಗತಿಸುತ್ತೇವೆ. ನವೆಂಬರ್ 7, 2025. – ಕತ್ರಿನಾ ಮತ್ತು ವಿಕ್ಕಿ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 23 ರಂದು ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯನ್ನು ಘೋಷಿಸಿದ್ದರು. ತಮ್ಮ ಜೀವನದ ಈ ಅಧ್ಯಾಯವನ್ನು “ಅತ್ಯುತ್ತಮ ಅಧ್ಯಾಯ” ಎಂದು ಅಭಿಪ್ರಾಯಪಟ್ಟಿದ್ದರು. ಪೋಸ್ಟ್ ಜೊತೆ ವಿಕ್ಕಿ ಕತ್ರಿನಾಳ ಮಗುವಿನ ಬಂಪ್ ಅನ್ನು ಮುದ್ದಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 2021 ರಲ್ಲಿ ರಾಜಸ್ಥಾನದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕೆಲವು ತಿಂಗಳುಗಳ ಹಿಂದೆ, ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು, ಸಂತಾನಕ್ಕಾಗಿ ವಿಶೇಷ ಕೋರಿಕೆ ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಸರ್ಪ ದೋಷ ಮತ್ತು ಸಂತಾನ ದೋಷ ನಿವಾರಣೆಗೆ ಪ್ರಸಿದ್ಧವಾಗಿದೆ. ಭಕ್ತರ ನಂಬಿಕೆಯ ಪ್ರಕಾರ, ಇಲ್ಲಿಗೆ ಭೇಟಿ ನೀಡಿದರೆ ಸಂತಾನಕ್ಕೆ ಅಡ್ಡಿಯಾದ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ.

 

ಶಾಲೆ, ಆಸ್ಪತ್ರೆಗಳಿಂದ ಬೀದಿ ನಾಯಿಗಳ ತೆರವಿಗೆ ಸುಪ್ರೀಂ ಕೋರ್ಟ್ ಸೂಚನೆ!

0

ನವದೆಹಲಿ: ಶಾಲೆಗಳು, ಆಸ್ಪತ್ರೆಗಳು ಹಾಗೂ ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳ ಬಳಿ ಬೀದಿ ನಾಯಿಗಳನ್ನು ಇರಿಸಲು ಬಿಡಬಾರದು ಎಂದು ಸುಪ್ರೀಂ ಕೋರ್ಟ್  ಮಹತ್ವದ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ, ವಿಕ್ರಮ್ ನಾಥ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಈ ವಿಚಾರವನ್ನು ಆಲಿಸಿ, ನಾಯಿಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸೆ  ಮಾಡಿದ ನಂತರವೂ ಅದೇ ಪ್ರದೇಶಕ್ಕೆ ಹಿಂತಿರುಗಿಸುವುದನ್ನು ನಿಷೇಧಿಸಿದೆ.

ರಾಷ್ಟ್ರೀಯ ಹೆದ್ದಾರಿಗಳುರಾಜ್ಯ ಹೆದ್ದಾರಿಗಳು ಮತ್ತು ಇತರ ರಸ್ತೆಗಳಿಂದ ಬೀದಿ ದನಗಳನ್ನು ಅಲ್ಲಿಂದ ಬೇರೆಡೆಗೆ ಕಳುಹಿಸುವಂತೆ ಸೂಚಿಸಲಾಗಿದೆರಸ್ತೆಗಳಲ್ಲಿ ದನಗಳನ್ನು ಹಿಡಿಯಲು ಮತ್ತು ಅವುಗಳನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಮೀಸಲಾದ ಹೆದ್ದಾರಿ ಗಸ್ತು ತಂಡವನ್ನು ಸ್ಥಾಪಿಸಲು ನ್ಯಾಯಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿತುಅಲ್ಲಿ ಸರಿಯಾದ ಆರೈಕೆಯನ್ನು ಒದಗಿಸಲಾಗುತ್ತದೆ.

ಸಾರ್ವಜನಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳ ಆತಂಕಕಾರಿ ಹೆಚ್ಚಳವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತೆಗೆದುಕೊಂಡಿತು. ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಆಸ್ಪತ್ರೆಗಳಂತಹ ಸಂಸ್ಥೆಗಳು ಬೀದಿ ನಾಯಿಗಳಿಂದ ಮುಕ್ತವಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.ಶಿಕ್ಷಣ ಸಂಸ್ಥೆಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಆಸ್ಪತ್ರೆಗಳು ಇತ್ಯಾದಿಗಳ ಆವರಣಗಳಿಂದ ಬೀದಿ ನಾಯಿಗಳನ್ನು ತೆಗೆದುಹಾಕಿ ಶ್ವಾನ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ಆದೇಶಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಮುಖ ತೀರ್ಪಿನಲ್ಲಿ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಬೀದಿಗಳಲ್ಲಿ ಅಲೆದಾಡುವ ಪ್ರಾಣಿಗಳನ್ನು ಹಿಡಿಯಲು ಮತ್ತು ಆಶ್ರಯ ಮನೆಗಳಲ್ಲಿ ಇರಿಸುವ ಮೂಲಕ ಅವುಗಳನ್ನು ನೋಡಿಕೊಳ್ಳಲು ಜಂಟಿ ಕಾರ್ಯಾಚರಣೆ ತಂಡವನ್ನು ರಚಿಸುವಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಕಬ್ಬು ಬೆಳೆಗಾರರ ಕಿಚ್ಚು: ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ರೈತರು! 

0

ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಕ್ವಿಂಟಾಲ್‌ಗೆ 3,500 ರೂ. ಬೆಲೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ನಡೆಸುತ್ತಿದೆ. ಇದರ ನಡುವೆ ಹುಕ್ಕೇರಿ ತಾಲೂಕಿನ ಸಾವಿರಾರು ರೈತರು ಟ್ರ್ಯಾಕ್ಟರ್​ಗಳ ಸಮೇತ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದಾರೆ.

ಈ ವೇಳೆ ರಾಜ್ಯ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಆಗಿದ್ದ ಪರಿಣಾಮ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಇದರಿಂದ ವಾಹನ ಸವಾರರು ಪರದಾಡಿದರು. ಒಂದು ಗಂಟೆ ಬಳಿಕ ಸರ್ವೀಸ್ ರಸ್ತೆಯಲ್ಲಿ ರೈತರು ಹೋರಾಟ ಶುರು ಮಾಡಿದ್ದಾರೆ. ಇಲ್ಲಿಯೇ ಅಡುಗೆ ಕೂಡ ಮಾಡುತ್ತಿದ್ದಾರೆ. 3,500 ರೂ. ದರ ಘೋಷಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಸಾರ್ವಜನಿಕರಿಗೆ ಪೊಲೀಸರು ಮುಕ್ತ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಿದ್ದರಾಮಯ್ಯ ಅವರ ಸಭೆ  ಆರಂಭವಾಗಿದೆ.  38 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಆಡಳಿತ ಮಂಡಳಿಯ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಕಬ್ಬುಗೆ ಪ್ರತಿ ಟನ್ ಗೆ 3,500 ರೂಪಾಯಿ ಬೆಲೆ ನೀಡಬೇಕೆಂದು ಆಗ್ರಹಿಸಿ ರೈತರು ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಸಭೆ ನಡೆಸಲಾಗುತ್ತಿದೆ.

ಗಂಡುಮಗುವಿಗೆ ಜನ್ಮ ನೀಡಿದ ಕತ್ರಿನಾ ಕೈಫ್‌! ಖುಷಿ ಹಂಚಿಕೊಂಡ ವಿಕ್ಕಿ ಕೌಶಲ್

0

ಬಾಲಿವುಡ್​ ಸ್ಟಾರ್ ದಂಪತಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್​​ ಪೋಷಕರಾಗಿದ್ದಾರೆ. ಕತ್ರಿನಾ ಕೈಫ್ ನವೆಂಬರ್ 07ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಕ್ಕಿ ಕೌಶಾಲ್ ಹಾಗೂ ಕತ್ರಿನಾ ಕೈಫ್ ಈ ಸುದ್ದಿಯನ್ನ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ನವೆಂಬರ್ 7 ಈ ಸುದ್ದಿ ಹಂಚಿಕೊಂಡಿದ್ದು, ಬಾಲಿವುಡ್‌ನ ಆಪ್ತರಾದ ಪ್ರಿಯಾಂಕ ಚೋಪ್ರಾ, ಕರಿನಾ ಕಪೂರ್, ಶ್ರೇಯಾ ಗೋಷಾಲ್ ಹಾಗೂ ಕತ್ರಿನಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಕ್ಕಿ ಹಾಗೂ ಕತ್ರಿನಾಗೆ ಶುಭ ಹಾರೈಸುತ್ತಿದ್ದಾರೆ.

ಬಾಲಿವುಡ್ ತಾರಾ ದಂಪತಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗುವಿಗಾಗಿ ಕುಕ್ಕೆ ಸುಬ್ರಮಣ್ಯ ದೇವರ ಮೊರೆ ಹೋಗಿದ್ದ ಬಾಲಿವುಡ್ ತಾರಾ ಜೋಡಿಗೆ ಮಗು ಜನಿಸಿದೆ. ಮದುವೆ ಬಳಿಕ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಕತ್ರಿನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ತಾರಾ ದಂಪತಿಗಳು ಇತ್ತೀಚೆಗೆ ಬೇಬಿ ಶೋವರ್ ಫೋಟೋಗಳನ್ನ ಹಂಚಿಕೊಂಡು ಸಿಹಿ ಸುದ್ದಿಯನ್ನ ನೀಡಿತ್ತು. ಇದೀಗ ಗಂಡು ಮಗುವನ್ನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಬಂಡೀಪುರ, ನಾಗರಹೊಳೆ ಸಫಾರಿಗೆ ತಾತ್ಕಾಲಿಕ ನಿಷೇಧ: ಸಚಿವ ಈಶ್ವರ ಖಂಡ್ರೆ ಆದೇಶ 

0

ಬೆಂಗಳೂರು: ಬಂಡಿಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಿ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಹೌದು ನಾಗರಹೊಳೆ ಮತ್ತು ಬಂಡೀಪುರದಲ್ಲಿ ಹುಲಿ ದಾಳಿಯಿಂದ ಜೀವ ಹಾನಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ,

ಸಚಿವ ಈಶ್ವರ ಖಂಡ್ರೆ ಅವರು ತಕ್ಷಣದಿಂದಲೇ ಸಫಾರಿ ಮತ್ತು ಚಾರಣವನ್ನು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಗೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದ್ದು, ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳಲಾಗಿದೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಯಿಂದ ಮೂರು ಅಮೂಲ್ಯ ಜೀವ ಹಾನಿ ಆಗಿರುವುದು ಅತೀವ ನೋವು ತಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹುಲಿ ದಾಳಿಯ ನಂತರ ಅಕ್ಟೋಬರ್ 27ರಂದು ಬಂಡೀಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಹಾಗೂ ಕಳೆದ 2ರಂದು ಚಾಮರಾಜನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಾಸಕರುಗಳ ಸಮ್ಮುಖದಲ್ಲಿ ರೈತರು, ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ಹುಲಿ ಸೆರೆಗೆ ಎಲ್ಲ ಸಾಧ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಜೊತೆಗೆ ಸಫಾರಿ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ದಾಳಿ ನಡೆದಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಈ ಹಿನ್ನೆಲೆ ಮುಂದಿನ ಆದೇಶದವರೆಗೆ ಇಂದಿನಿಂದಲೇ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲು ಮತ್ತು ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಟ್ರಕ್ಕಿಂಗ್ (ಚಾರಣ) ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

ಬಂಡೀಪುರ, ನಾಗರಹೊಳೆ ಸಫಾರಿಯ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಮತ್ತು ವಾಹನ ಚಾಲಕರ ಸಹಿತ ಎಲ್ಲ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲು ಹಾಗೂ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪದೆ ಪದೇ ದಾಳಿ ಮಾಡುತ್ತಿರುವ ಹುಲಿಯನ್ನು ಹಿಡಿಯಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬಿಯರ್ ಬಾಟಲಿಯಿಂದ ಹೊಡೆದು ವ್ಯಕ್ತಿಯ ಕೊಲೆ.!

0

ಬೆಂಗಳೂರು: ಬೆಂಗಳೂರಿನಲ್ಲಿ ಬಿಯರ್ ಬಾಟಲಿನಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ನಡೆದಿದೆ. ತ್ಯಾಗರಾಜನಗರ ನಿವಾಸಿ ಸುರೇಶ್ (45) ಕೊಲೆಯಾದ ವ್ಯಕ್ತಿಯಾಗಿದ್ದು, ವೇಲು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಸುರೇಶ್ ತನ್ನ ಸ್ನೇಹಿತ ವೇಲು ಹಾಗೂ ಇತರರೊಂದಿಗೆ ರಾತ್ರಿ ವೇಳೆ ಡ್ರಿಂಕ್ಸ್ ಪಾರ್ಟಿ ಮಾಡಲು ಹೋಗಿದ್ದರು.

ಅವರು ಎಂಆರ್ ಪಿಯಲ್ಲಿ ಮೊದಲು ಕುಡಿಯಲು ಮದ್ಯದ ಬಾಟಲಿಗಳನ್ನು ಖರೀದಿಸಿದ್ದಾರೆ. ನಂತರ ಆಟೋದಲ್ಲಿ ಕುಳಿತುಕೊಂಡು ಕುಡಿದುಕೊಂಡೇ ಸುತ್ತಾಡುತ್ತಿದ್ದರು. ಈ ಸಮಯದಲ್ಲಿ ವೇಲು ಮತ್ತು ಸುರೇಶ್ ನಡುವೆ ಕ್ಷುಲಕ ವಿಷಯಕ್ಕೆ  ಜಗಳವಾಯಿತು.

ಜಗಳ ಹೆಚ್ಚಾಗುತ್ತಾ ಹೋದಂತೆ, ವೇಲು ಕೋಪದಿಂದ ಬಿಯರ್ ಬಾಟಲ್ ಎತ್ತಿಕೊಂಡು ಸುರೇಶ್  ತಲೆಯ ಮೇಲೆ ಜೋರಾಗಿ ಹೊಡೆದಿದ್ದಾನೆ. ಈ ಹಲ್ಲೆಯಿಂದ ಸುರೇಶ್ ತೀವ್ರವಾಗಿ ಗಾಯಗೊಂಡಿದ್ದು ಮೃತಪಟ್ಟಿದ್ದಾರೆ.
ನಂತರ ವಿಚಾರ ತಿಳಿದು ಪೊಲೀಸರು ದೂರು ದಾಖಲಿಸಿಕೊಂಡು ತ್ವರಿತ ಕ್ರಮ ಕೈಗೊಂಡರು. ಆರೋಪಿ ವೇಲು ಎಂಬಾತನನ್ನು ಸ್ಥಳದಿಂದಲೇ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ವಂದೇ ಮಾತರಂ” ಪದಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ: ಪ್ರಧಾನಿ ಮೋದಿ

0

ನವದೆಹಲಿ: ವಂದೇ ಮಾತರಂ ಪದಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವದ ಪ್ರಯುಕ್ತ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವರ್ಷಪೂರ್ತಿ ನಡೆಯುವ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ

ಮಾತನಾಡಿದ ಅವರು, ವಂದೇ ಮಾತರಂ, ಈ ಪದಗಳು ಒಂದು ಮಂತ್ರ, ಒಂದು ಶಕ್ತಿ, ಒಂದು ಕನಸು, ಒಂದು ಸಂಕಲ್ಪ. ವಂದೇ ಮಾತರಂ, ಈ ಪದಗಳು ನಮ್ಮನ್ನು ಇತಿಹಾಸಕ್ಕೆ ಕರೆದೊಯ್ಯುತ್ತವೆ. ಇದು ನಮ್ಮ ವರ್ತಮಾನವನ್ನು ಹೊಸ ವಿಶ್ವಾಸದಿಂದ ತುಂಬುತ್ತದೆ ಮತ್ತು ನಮ್ಮ ಭವಿಷ್ಯಕ್ಕೆ ಸಾಧಿಸಲಾಗದ ಯಾವುದೇ ಸಂಕಲ್ಪವಿಲ್ಲ, ನಾವು ಭಾರತೀಯರು ಸಾಧಿಸಲಾಗದ ಯಾವುದೇ ಗುರಿ ಇಲ್ಲ ಎಂಬ ಭರವಸೆಯನ್ನು ನೀಡುತ್ತದೆ ಎಂದು ಹೇಳಿದರು.

ಇಂದು, ವಂದೇ ಮಾತರಂಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶದ ಲಕ್ಷಾಂತರ ಮಹಾನ್ ಪುರುಷರು, ಭಾರತ ಮಾತೆಯ ಮಕ್ಕಳಿಗೆ ನಾನು ನನ್ನ ಗೌರವಯುತ ಗೌರವವನ್ನು ಸಲ್ಲಿಸುತ್ತೇನೆ ಮತ್ತು ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೋಹನ್‌ ಭಾಗವತ್‌

0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇಂದು ನಗರದ ಮೈಸೂರು ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಡಾ. ಭಾಗವತ್ ಅವರೊಂದಿಗೆ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ ಹಾಗೂ ಕ್ಷೇತ್ರೀಯ ಪ್ರಚಾರಕ್ ಭರತ್ ಕುಮಾರ್ ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ನವೆಂಬರ್‌ 8 ಮತ್ತು 9ರಂದು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಾ.ಮೋಹನ್ ಭಾಗವತ್ ಮಾತನಾಡಲಿದ್ದಾರೆ. ಈ ಹಿನ್ನೆಲೆ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.

ಕಾಂಗ್ರೆಸ್​ʼನಲ್ಲಿ ನವೆಂಬರ್ ಕೌತುಕ: ಇಂದು ರಾಜಣ್ಣ ನಿವಾಸದಲ್ಲಿ ಸಿಎಂಗೆ ಔತಣಕೂಟ

0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ಬಣ ಸಕ್ರಿಯವಾಗಿದೆ. ಇಂದು ಕೆ ಎನ್ ರಾಜಣ್ಣ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಔತಣಕೂಟ ಏರ್ಪಡಿಸಲಾಗಿದೆ. ಈ ಔತಣಕೂಟದಲ್ಲಿ ಸಚಿವ ಸಂಪುಟ ಪುನಾರಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮಧ್ಯಾಹ್ನ 1 ಗಂಟೆಗೆ ವಿಧಾನಸೌಧದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸಭೆ ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಳಿಕ 2 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ತುಮಕೂರು ನಗರಕ್ಕೆ ತಲುಪಲಿದ್ದಾರೆ.

ಜಿಲ್ಲೆಯ ವಿವಿಧೆಡೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ, ಉದ್ಘಾಟನೆ ನೆರವೇರಿಸಲಿದ್ದಾರೆ. ಇದಕ್ಕೂ ಮುನ್ನ ಅಂದರೆ ಮಧ್ಯಾಹ್ನ 2.30ರಿಂದ 3.30ರವರೆಗೆ ರಾಜಣ್ಣ ಅವರ ಕ್ಯಾತ್ಸಂದ್ರ ನಿವಾಸದಲ್ಲಿ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಸಮಯವನ್ನೂ ಕಾಯ್ದಿರಿಸಲಾಗಿದೆ.

ಹೈಕಮಾಂಡ್‌ನಿಂದ ಕ್ರಮ ಎದುರಿಸಿರುವ ನಾಯಕ ತಾವು ನೀಡಿದ್ದ ಕ್ರಾಂತಿ ಹೇಳಿಕೆಗೆ ಪೂರಕವಾಗಿ ನವೆಂಬರ್‌ ತಿಂಗಳಲ್ಲೇ ಔತಣಕೂಟ ಆಯೋಜಿಸಿರುವುದು, ಆ ಔತಣಕೂಟದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುತ್ತಿರುವುದಕ್ಕೆ ವಿವಿಧ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಬಣದ ಕೆಲ ಸಚಿವರೂ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಮೊಬೈಲ್ ಕಳೆದುಹೋದ ದೂರಿನ ಆಧಾರದಲ್ಲಿ ಮೊಬೈಲ್ ಪತ್ತೆ ಮಾಡಿ, ಹಿಂದುರುಗಿಸಿದ ಜಿಲ್ಲಾ ಪೊಲೀಸ್ ಇಲಾಖೆ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಸನ್‌ 2023ರಿಂದ ಇಲ್ಲಿಯವರೆಗೆ ಒಟ್ಟು 620 ಮೊಬೈಲ್ ಫೋನ್‌ಗಳನ್ನು ಸಾರ್ವಜನಿಕರು ಕಳೆದುಕೊಂಡಿದ್ದು, ಅವುಗಳನ್ನು ಸಿಇಐಆರ್‌ ಪೋರ್ಟಲ್ ಮೂಲಕ ಪತ್ತೆ ಮಾಡಿ 2025ನೇ ವರ್ಷದ ಜುಲೈ ತಿಂಗಳವರೆಗೂ 175 ಫೋನ್ ಮೊಬೈಲ್‌ಗಳನ್ನು ಪತ್ತೆ ಮಾಡಿ, ಮೂಲ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.

ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಆಗಸ್ಟ್ 1, 2025ರಿಂದ ಇಲ್ಲಿಯವರೆಗೆ ಸಿಇಐಆರ್‌ ಪೋರ್ಟಲ್ ಮೂಲಕ ಪತ್ತೆ ಮಾಡಿದ ಅಂದಾಜು 7,94,400 ರೂ.ಗಳ ಮೌಲ್ಯದ ಒಟ್ಟು 50 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರ ನೇತೃತ್ವದಲ್ಲಿ, ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸದರಿ ಮೊಬೈಲ್ ಫೋನ್‌ಗಳನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಸಿಇಐಆರ್‌ ಪೋರ್ಟಲ್ ಮೂಲಕ ಪತ್ತೆ ಮಾಡುವಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಶರಣೇಶ ಜಾಲಿಹಾಳ, ಅಭಿಜಿತ್ ಎ, ಎಎಸ್‌ಐ ಉಲ್ಲಾಸ್ ದುದಾಳಕರ ಹಾಗೂ ಸಿಬ್ಬಂದಿಗಳಾದ ಎಸ್‌.ಐ. ಜವಳಿ, ಬಸವರಾಜ ಬನ್ನಟ್ಟಿ, ಶಶಿಧರ ಕೊಚ್ಚರಗಿ, ಬಸವರಾಜ ಶಿರಕೋಳ, ಎನ್‌.ಬಿ. ಕಂಬೋಗಿ, ಎಮ್‌.ಜಿ. ಕರ್ಲವಾಡ, ಸಂಗೀತಾ ಎಮ್‌.ಸೋಗಿ, ಎಮ್‌.ಟಿ. ಗುಡ್ಡಪ್ಪನವರ, ಪರಮೇಶ್ವರ ಬಾಗಲಕೋಟಿ, ಯಲ್ಲಾನಾಯಕ ಪಾಟೀಲ, ಎನ್‌.ಬಿ. ಕರಜಗಿ, ರಮೇಶ ಕಟ್ಟಿ, ಕೃಷ್ಣ, ಸುಜಾತಾ ಕುರಿ ಅವರು ತನಿಖಾ ತಂಡದಲ್ಲಿದ್ದು ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.

ಈ ಸಂದರ್ಭದಲ್ಲಿ, ಮೊಬೈಲ್ ಕಳುವಾದಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಪೊಲೀಸ್ ಇಲಾಖೆ ವಿವರಿಸಿದೆ. ಕಳುವಾದ ಮೊಬೈಲ್‌ಗಳನ್ನು ಬಳಸದಂತೆ ಎಚ್ಚರ ವಹಿಸಬೇಕು. ಮೊಬೈಲ್‌ಗಳನ್ನು ಕಳೆದುಕೊಂಡಾಗ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್‌ಪಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು, ನಂತರ ಅದರಲ್ಲಿ ಲಾಗಿನ್ ಆಗಿ ಕಳೆದುಕೊಂಡವರ ಹೆಸರು, ವಿಳಾಸ ಮತ್ತು ಕಳೆದು ಹೋದ ಫೋನ್‌ಗೆ ಸಂಬಂಧಿಸಿದ ಅಗತ್ಯ ಮಾಹಿತಿ ಭರ್ತಿ ಮಾಡಿ ದೂರು ಸಲ್ಲಿಸಬೇಕು. ತಕ್ಷಣ ಕಳೆದು ಹೋದ ಫೋನ್‌ನಲ್ಲಿದ್ದ ಸಿಮ್‌ನ್ನು ಬ್ಲಾಕ್ ಮಾಡಿಸಿ ಹೊಸ ಸಿಮ್ ಕಾರ್ಡ್‌ನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದರು.
ನಂತರ ಗೂಗಲ್‌ನಲ್ಲಿ ceir.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅದರಲ್ಲಿರುವ Block/Unblock stolen mobile ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ನಂಬರ್, ಐಎಮ್‌ಇಐ ನಂಬರ್, ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಬಗೆಗಿನ ಸಂಪೂರ್ಣ ಮಾಹಿತಿ ಭರ್ತಿ ಮಾಡಿದ ನಂತರ ನಿಮ್ಮ ಸಿಮ್ ನಂಬರ್‌ಗೆ ಬ್ಲಾಕ್ ಮಾಡಲು ಒಂದು OTP ಬರುತ್ತದೆ. ಆಗ ಸದರಿ OTP ಹಾಕಿ ವೆರಿಫೈ ಮಾಡಿ ಸಬ್ಮಿಟ್ ಮಾಡಿದಾಗ ದೂರು ದಾಖಲಾಗಿ ನಿಮಗೆ 18 ಅಂಕಿಗಳ ಬ್ಲಾಕಿಂಗ್ ರಿಕ್ವೆಸ್ಟ್ ಐಡಿ ದೊರೆಯುತ್ತದೆ. ಆಗ ಮಾತ್ರ ನಿಮ್ಮ ದೂರು ಅಧಿಕೃತವಾಗಿ ದಾಖಲಾಗಿರುವುದು ಖಚಿತವಾಗುತ್ತದೆ ಎಂದು ವಿವರಿಸಿದರು.

ಒಂದು ವೇಳೆ ನೀವು ಮೊಬೈಲ್ ಕಳೆದುಕೊಂಡಾಗ ನಿಮ್ಮ ಹತ್ತಿರ ಕಳೆದು ಹೋದ ಮೊಬೈಲ್‌ನ ಐಎಮ್‌ಇಐ ನಂಬರ್ ಇಲ್ಲದೆ ಇದ್ದರೆ ನೀವು ನಿಮ್ಮ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಬೇಕು. ಫೋನ್‌ಗಳನ್ನು ಖರೀದಿಸುವ ಮೊದಲು ಐಎಮ್‌ಇಐ ಸಂಖ್ಯೆಗಳನ್ನು ಪರಿಶೀಲಿಸಿ ಖರೀದಿಸುವುದು ಉತ್ತಮ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ತಿಳಿಸಿದ್ದಾರೆ.

error: Content is protected !!