ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಮಕ್ಕಳನ್ನು ನಿರಂತರ ಪ್ರೋತ್ಸಾಹಿಸುವುದರೊಂದಿಗೆ ಧೈರ್ಯ ಹಾಗೂ ಪ್ರೀತಿಯನ್ನು ತುಂಬಿ ತರಗತಿಯ ಬೋಧನೆಯಲ್ಲಿ ಸ್ಪಷ್ಟ ನಿಯಮಗಳು, ನಿರಂತರ ಕ್ರಿಯೆ-ಪ್ರತಿಕ್ರಿಯೆ ಹಾಗೂ ಧನಾತ್ಮಕವಾದ ಕ್ರಿಯೆಗಳನ್ನು ಅನುಸರಿಸಿ ಮಕ್ಕಳ ವಯಕ್ತಿಕ ಅಗತ್ಯತೆಗಳನ್ನು ಗುರುತಿಸಿ, ವಿಶೇಷಚೇತನ ಮಕ್ಕಳಗೆ ಅಗತ್ಯವಿದ್ದಲ್ಲಿ ಸಹಕಾರ ಹಾಗೂ ಸಹಾಯ ಕಲ್ಪಿಸಬೇಕೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟಪ್ಪನವರ ಹೇಳಿದರು.
ಅವರು ಶನಿವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಗದುಗಿನ ಹಿರಿಯ ಪ್ರಾಥಮಿಕ ಶಾಲೆ ನಂ. 15ರಲ್ಲಿ ಜರುಗಿದ ವಿಶೇಷ ದಾಖಲಾತಿ ಆಂದೋಲನದಲ್ಲಿ ವಿಶೇಷ ಮಗುವನ್ನು ಶಾಲೆಗೆ ದಾಖಲಿಸಿ ಮಾತನಾಡಿದರು.
ವಿಶೇಷ ಮಕ್ಕಳ ದಿನಂಪ್ರತಿ ಕಾರ್ಯಚಟುವಟಿಕೆಗಳಿಗೆ ಪಾಲಕರು, ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಅವರ ಬೆಂಗಾವಲಾಗಿ ನಿಲ್ಲಬೇಕು. ಸಮಯ ಪಾಲನೆ, ಮಕ್ಕಳ ಆರೋಗ್ಯ ಶೈಕ್ಷಣಿಕ ಅಭಿವೃದ್ಧಿಯು ವಿಶೇಷ ಮಕ್ಕಳಿಗೆ ಅವಶ್ಯವಿದ್ದು ಅದು ಮಕ್ಕಳಿಗೆ ಸಮರ್ಪಕವಾಗಿ ತಲುಪುವಂತೆ ನಾವೆಲ್ಲರೂ ಕಾಳಜಿ ವಹಿಸಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ವಿಶೇಷ ಮಕ್ಕಳ ಪಾಲನೆಯಲ್ಲಿ ಪಾಲಕರ ಜವಾಬ್ದಾರಿ ದೊಡ್ಡದು. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಕ್ಕಳ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ ಬೆಳವಣಿಗೆಯು ಪ್ರಗತಿಯತ್ತ ಸಾಗುತ್ತದೆ. ಮಕ್ಕಳ ನೂನ್ಯತೆಗಳನ್ನು ತಿಳಿದು ಬೋಧನೆಗೆ ಇಳಿದಾಗ ಮಕ್ಕಳಲ್ಲಿ ಕಲಿಕೆ ಕಂಡು ಬರುತ್ತದೆ ಎಂದರು.
ವಿಶೇಷಚೇತನ ಮಗು ಕೃಷ್ಣಪ್ರಿಯಾ ಬದಿ ಪ್ರಾರ್ಥಿಸಿದರು. ಮುಖೋಪಾಧ್ಯಾಯೆ ವಿ.ಎನ್. ಬಸಾಪೂರ ಸ್ವಾಗತಿಸಿದರು. ಪಿ.ಎಸ್. ಬ್ಯಾಳಿ ನಿರೂಪಿಸಿದರು. ಬಿ. ಯಶೋಧಾ ವಂದಿಸಿದರು. ವ್ಹಿ.ಬಿ. ಕರಬಸಗೌಡ್ರ, ಮೀನಾಕ್ಷಿ ಕೊರವನವರ, ಗೀತಾ ಹಾಸಲಕರ್, ಪಾಲಕರು-ಪೋಷಕರು ಉಪಸ್ಥಿತರಿದ್ದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿಶೇಷ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಪ್ರಶಂಸೆ ಬಹು ಮುಖ್ಯವಾದುದು. ಮಕ್ಕಳ ಕೆಲವೊಂದು ಅತೀರೇಕದ ಹಾಗೂ ಅನಗತ್ಯ ವರ್ತನೆಗಳನ್ನು ತಿದ್ದಲು ನಾವು ಅವರ ಧನಾತ್ಮಕ ಕೆಲಸಗಳಿಗೆ ಬೆಂಬಲ ನೀಡುವುದರ ಮೂಲಕ ಸರಿ-ತಪ್ಪು ತಿಳುವಳಿಕೆಯನ್ನು ನೀಡಬೇಕು. ಮುಖ್ಯವಾಗಿ ಈ ಮಕ್ಕಳ ಭಾವನೆಗಳನ್ನು ತಿಳಿದುಕೊಂಡು ಅವುಗಳಿಗೆ ಬೆಲೆಕೊಟ್ಟು ಸಮಸ್ಯೆಗಳನ್ನು ಅರಿತು ನಾವು ಸ್ಪಂದಿಸಬೇಕು ಎಂದರು.