Home Blog Page 2

ಮೋದಿಯವರ ಆಳ್ವಿಕೆಯಲ್ಲಿ ದೇಶ ಬಲಿಷ್ಠವಾಗಿದೆ

ವಿಜಯಸಾಕ್ಷಿ ಸುದ್ದಿ, ಹಾವೇರಿ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ತುಂತುರು ಹನಿ ನೀರಾವರಿ ಪೈಪುಗಳು ಹಾಗೂ ರೈತರ ಪಂಪ್‌ಸೆಟ್‌ಗೆ ಟಿಸಿ ಅಳವಡಿಸಲು ಕಮಿಷನ್ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಭಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕನಕಾಪುರ, ಕುರುಬಗೊಂಡ, ಕಬ್ನೂರ, ಕುಳೇನೂರು, ಸಂಗೂರು, ದೇವಿಹೊಸೂರು, ಆಲದಕಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

bommay

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಬೆಲೆಯೂ ಹೆಚ್ಚಳವಾಗಿದೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಳವಾಗಿದೆ. ಮದ್ಯದ ದರವೂ ಹೆಚ್ಚಳವಾಗಿದೆ. ಈ ಸರ್ಕಾರದ ಅವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ ಎಂದು ಹೇಳಿದರು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಗ್ಯಾರಂಟಿ. ಕಾಂಗ್ರೆಸ್‌ನವರು ಮಹಿಳೆಯರಿಗೆ ಒಂದು ಲಕ್ಷ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಬಹುಮತಕ್ಕೆ ಬೇಕಾದಷ್ಟು ಸ್ಥಾನದಲ್ಲಿ ಸ್ಪರ್ಧೆ ಮಾಡಿಲ್ಲ. ಅವರು ರಾಜ್ಯದ ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡುವ ನಾಯಕ. ದೇಶದ ನೂರು ಕೋಟಿ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲರ ಮನೆಗಳಿಗೂ ನೀರು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಜಲ ಜಿವನ್ ಮಿಷನ್ ಅಡಿ ಮನೆಗಳಿಗೆ ನಳದ ನೀರು ಒದಗಿಸಲಾಗಿದೆ. ಲಾಲ್ ಬಹಾದ್ದೂರು ಶಾಸ್ತ್ರೀ ನಂತರ ಅಪ್ಪಟ ದೇಶ ಪ್ರೇಮಿ ನರೇಂದ್ರ ಮೋದಿಯವರು. ಅವರು ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಕೊಡಿಸಿ ಜೀವ ಉಳಿಸಿದ್ದಾರೆ. ಎಲ್ಲರಿಗೂ 5 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದಾರೆ. ಮನೆಗಳಿಗೆ ನಳದ ಮೂಲಕ ನೀರು ಕೊಡುತ್ತಿದ್ದಾರೆ. ನಾವು ಅವರ ಋಣ ತೀರಿಸಬೇಕಾಗಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಮೋದಿಯವರ ಋಣ ತೀರಿಸೋಣ ಎಂದು ಹೇಳಿದರು.

ಪ್ರಚಾರದ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ್ ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಹತ್ತು ವರ್ಷದಲ್ಲಿ ದುರ್ಬಲ ದೇಶವನ್ನು ಬಲಿಷ್ಠ ದೇಶವನ್ನಾಗಿ ಮಾಡಿದ್ದಾರೆ. ಅವರ ಬಗ್ಗೆ ದೇಶಾದ್ಯಂತ ಅಲೆ ಇದೆ. ಅವರು ಅಪ್ಪಟ ದೇಶ ಭಕ್ತ. ಅವರ ತಾಯಿ ತೀರಿಕೊಂಡಿದ್ದರೂ ಅಂತ್ಯಸಂಸ್ಕಾರ ಮಾಡಿ ದೇಶ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮನಮೋಹನ ಸಿಂಗ್ ಕಾಲದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಿತ್ತು. ಮೋದಿಯವರು ಬಂದ ಮೇಲೆ ಅವರ ತಾಣಗಳಿಗೆ ಹೊಕ್ಕು ಹೊಡೆದು ಬಂದರು. ಭಯೋತ್ಪಾಕದರಿಗೂ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

 

ಪ್ರಜಾಪ್ರಭುತ್ವ ಬಲಪಡಿಸಲು ಕೈ ಜೋಡಿಸಿ : ಎಸ್.ಭರತ್

ವಿಜಯಸಾಕ್ಷಿ ಸುದ್ದಿ, ಗದಗ : ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನವು `ಬೈಸಿಕಲ್ ಜಾಥಾ’ ಮೂಲಕ ಮಂಗಳವಾರ ಜರುಗಿತು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಮುಂಭಾಗ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ ಸಿಇಒ ಎಸ್. ಭರತ್ ಅವರು ಬೈಸಿಕಲ್‌ನಲ್ಲಿ ಸಂಚರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇದೇ ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅರ್ಹರೆಲ್ಲರೂ ತಪ್ಪದೇ ಮತ ಚಲಾಯಿಸಿ. ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನಕ್ಕೆ ಸಹಕರಿಸಬೇಕು. 18 ವರ್ಷ ಪೂರ್ಣಗೊಂಡ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವ ಬಲಪಡಿಸಲು ಕೈ ಜೋಡಿಸಬೇಕು ಎಂದು ಕೋರಿದರು.

ಕಡ್ಡಾಯವಾಗಿ ಮತದಾನ ಮಾಡಿ-ಪ್ರಜಾಪ್ರಭುತ್ವ ಬಲಪಡಿಸಿ, ನಮ್ಮ ಮತ-ನಮ್ಮ ಹಕ್ಕು, ಮತದಾರರು ಮತದಾನದಿಂದ ಹೊರಗುಳಿಯಬಾರದು, ಪ್ರತಿಶತ ಮತದಾನ–ಉತ್ತಮ ಸಮಾಜ ನಿರ್ಮಿಸಿ, ಮತದಾನಕ್ಕಿಂತ ಮತ್ತೊಂದಿಲ್ಲ, ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಎಂಬ ಘೋಷವಾಕ್ಯಗಳು ಮೊಳಗಿದವು.
ಜಿ.ಪಂ ಉಪ ಕಾರ್ಯದರ್ಶಿ ಸಿ.ಬಿ. ದೇವರಮನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ಬೈಸಿಕಲ್ ಜಾಥಾದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬೈಸಿಕಲ್ ಜಾಥಾವು ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭಗೊಂಡು ಪಂಚಾಕ್ಷರಿ ನಗರದ ಶುದ್ಧ ಕುಡಿಯುವ ನೀರಿನ ಘಟಕ, ಚೇತನ ಕ್ಯಾಂಟೀನ್, ಹಾತಲಗೇರಿ ನಾಕಾ, ಬಳ್ಳಾರಿ ಗೇಟ್, ಕುರಹಟ್ಟಿ ಪೇಟೆ, ಟೆಂಗಿನಕಾಯಿ ಬಜಾರ, ಜರ್ಮನ್ ಆಸ್ಪತ್ರೆ, ಸಹಸ್ರಾರ್ಜುನ ವೃತ್ತ, ಮಹಾರಾಣ ಪ್ರತಾಪ ಸಿಂಹ ವೃತ್ತ, ಹಳೇ ಕೋರ್ಟ್ ವೃತ್ತ, ಗಾಂಧಿ ವೃತ್ತ, ರೋಟರಿ ವೃತ್ತ, ಭೂಮರಡ್ಡಿ ವೃತ್ತದ ಮೂಲಕ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಬಂದು ತಲುಪಿತು.

ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಅವರಿಗೆ ಮೌಲ್ಯಯುತ ಮತ್ತು ನೈತಿಕ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯ ಸಂಚಾಲಕಿ ಬಿ.ಕೆ. ಸರೋಜಕ್ಕ ಹೇಳಿದರು.

ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯಲ್ಲಿ ಕಳೆದ 10 ದಿನಗಳಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಮುಖ್ಯವಾಗಿ ಬೇಕಾಗಿರುವ ನೈತಿಕ ಮತ್ತು ಮೌಲ್ಯಯುತ ಶಿಕ್ಷಣ ಇಲ್ಲದ್ದರಿಂದ ಭವಿಷ್ಯದಲ್ಲಿ ಅವರು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ದುಶ್ಚಟದಿಂದ ದೂರ ಉಳಿಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಹಿರಿಯರಿಗೆ ಗೌರವ, ಸಾತ್ವಿಕ ಆಹಾರ ಸೇವನೆ, ಉತ್ತಮ ದಿನಚರಿ, ಒಳ್ಳೆಯ ಸ್ನೇಹವನ್ನು ಬೆಳೆಸಿಕೊಳ್ಳುವುದರಿಂದ ಈ ಸಮಾಜಕ್ಕೆ ಸದೃಡವಾದ ನಾಗರಿಕರನ್ನಾಗಿ ಮಾಡಬಹುದು ಎಂದರು.

5ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ಮೌಲ್ಯಯುಕ್ತ ಆಟಗಳು, ಹಾಡುಗಳು, ಶ್ಲೋಕಗಳ ಕಂಠಪಾಠ, ಜ್ಞಾಪಕ ಶಕ್ತಿ, ಏಕಾಗ್ರತೆ, ದೃಢತೆ, ಇಚ್ಛಾಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುವುದು ಮತ್ತು ರಾಜಯೋಗ ಧ್ಯಾನದ ಬಗ್ಗೆ ತರಬೇತಿ ನೀಡಲಾಯಿತು. ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ಡಾ. ವೈಶಾಲಿ ಬಿರಾದಾರ, ಕೆ.ಸಿ. ಹಿರೇಮಠ, ಸಿದ್ದಪ್ಪ ಚಬ್ಬರಭಾವಿ ಸೇರಿದಂತೆ ದೈವಿ ಪರಿವಾರದವರು ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಅನ್ವಯಿಸುತ್ತವೆ : ಗುರುನಾಥ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಾಂಗ್ರೆಸ್ ಪಕ್ಷ ಬಡವರಿಗಾಗಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳು ಎಂದು ಟೀಕೆ ಮಾಡಿ, ಬಡವರನ್ನು ಹೀಯಾಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುರುನಾಥ ದಾನಪ್ಪನವರ ಆರೋಪಿಸಿದರು.

ಅವರು ಎಪಿಎಮ್‌ಸಿ ಯಾರ್ಡ್ನಲ್ಲಿ ಕೂಲಿಕಾರ್ಮಿಕರು ಮತ್ತು ಹಮಾಲರ ಸಂಘದ ಸದಸ್ಯರನ್ನು ಉದ್ದೇಶಿಸಿ ಹಾವೇರಿ ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠರ ಪರವಾಗಿ ಪ್ರಚಾರ ಕೈಗೊಂಡು ಮಾತನಾಡಿದರು.

ಗ್ಯಾರಂಟಿ ಯೋಜನೆಗಳು ಎಲ್ಲ ಜಾತಿ, ಧರ್ಮ, ಪಕ್ಷದವರಿಗೂ ಅನ್ವಯಿಸುತ್ತವೆ. ಗ್ಯಾರಂಟಿ ಯೋಜನೆಗಳನ್ನು ಟೀಕೀಸುವ ಮೊದಲು ಬಡವರಿಗೆ, ನೊಂದವರಿಗೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಶ್ರಮಿಕರ, ಕಾರ್ಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಪಡಗೇರಿ ಮಾತನಾಡಿ, ಕಾಂಗ್ರೆಸ್ ಜನಪರ ಯೋಜನೆಗಳನ್ನು ಮನೆ ಮನೆಗೂ ಹೇಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಜಣ್ಣ ಹೊಳಲಾಪುರ, ನೀಲಪ್ಪ ಪೂಜಾರ, ಶರಣು ಗೋಡಿ, ಕಿರಣ ನವಲೆ, ಎಪಿಎಮ್‌ಸಿ ಹಮಾಲರ ಸಂಘದ ಅಧ್ಯಕ್ಷ ಮುದಕಣ್ಣ ಗದ್ದಿ, ಸಂತೋಷ ಚಕ್ರಸಾಲಿ, ಲೆಂಕೆಪ್ಪ ಶೆರಸೂರಿ, ಮಲ್ಲಪ್ಪ ಗದ್ದಿ, ನೀಲಪ್ಪ ಶೆರಸೂರಿ, ನಿಂಗಪ್ಪ ಶೆರಸೂರಿ ಸೇರಿದಂತೆ ಕಾರ್ಮಿಕ ಮುಖಂಡರು, ಕೂಲಿ ಕಾರ್ಮಿಕರ ಇದ್ದರು.

ಪಕ್ಷದ ಗೆಲುವಿಗೆ ಮತ್ತಷ್ಟು ಬಲ : ಜಿ.ಎಸ್. ಗಡ್ಡದೇವರಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಆಮ್ ಆದ್ಮಿ ಪಕ್ಷ ನೈತಿಕ, ಸೈದ್ಧಾಂತಿಕವಾಗಿ ತನ್ನದೇ ಆದ ನೆಲೆಗಟ್ಟನ್ನು ಹೊಂದಿರುವ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಜಿಲ್ಲೆಯ ಆಮ್ ಆದ್ಮಿ ಪಕ್ಷದಿಂದ ಬೆಂಬಲ ಸೂಚಿಸುತ್ತಿರುವುದು ಪಕ್ಷದ ಗೆಲುವಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಗದಗ ಜಿಲ್ಲಾ ಮಾಜಿ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.

ಅವರು ತಮ್ಮ ನಿವಾಸದಲ್ಲಿ ಗದಗ ಜಿಲ್ಲೆಯ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿ ಮಾತನಾಡಿದರು.

ಆಮ್ ಆದ್ಮಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದು ಒಂದು ದೊಡ್ಡ ಶಕ್ತಿ ಬಂದಂತಾಗಿದೆ. ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಆಮ್ ಆದ್ಮಿ ಪಕ್ಷ ಸೇರಿ ಕೆಲಸ ಮಾಡುತ್ತಿವೆ ಹಾಗೆಯೇ ಇಲ್ಲಿಯೂ ಸಹ ಒಟ್ಟಾಗಿ ಕ್ಷೇತ್ರದಲ್ಲಿ ಸಂಚಾರ ಮಾಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದರು.

ಕಾಂಗ್ರೆಸ್ ಮುಖಂಡರಾದ ಚನ್ನಪ್ಪ ಜಗಲಿ, ವಿರೂಪಾಕ್ಷಪ್ಪ ಪಡಗೇರಿ, ಗುರುನಾಥ ದಾನಪ್ಪನವರ, ಶರಣು ಗೋಡಿ, ಕಿರಣ ನವಲೆ, ರಾಜು ಹೊಳಲಾಪುರ, ಶಿವಾನಂದ ಲಿಂಗಶೆಟ್ಟಿ, ಕೆ.ಓ. ಹುಲಿಕಟ್ಟಿ, ಮಹಾಂತೇಶ ತೋಟದ, ಮುದಕಣ್ಣ ಗದ್ದಿ, ಮೋಹನ ನಂದೆಣ್ಣನವರ, ಎಎಪಿ ಸದಸ್ಯರಾದ ಅಶೋಕ ಉಳ್ಳಾಗಡ್ಡಿ, ರಾಹುಲ ಮಡಿವಾಳರ, ಷಣ್ಮುಖ ಬಡ್ನಿ, ಬಸವರಾಜ ಬಡ್ನಿ, ಮೌಲಾಸಾಬ್ ಜಾಲವಾಡಗಿ, ಸುಭಾಷಚಂದ್ರ ಕುಂಬಾರ, ಶಿವಣ್ಣ ಹಳ್ಳಿಗುಡಿ ಮುಂತಾದವರಿದ್ದರು.

ಗದಗ ಜಿಲ್ಲಾ ಎಎಪಿ ಮುಖಂಡ ಮಲ್ಲಿಕಾರ್ಜುನ ದೊಡ್ಡಮನಿ ಮಾತನಾಡಿ, ರಾಷ್ಟçಮಟ್ಟದಲ್ಲಿ ಇಂಡಿಯಾ ಒಕ್ಕೂಟದಲ್ಲಿ ಎಎಪಿ ಸೇರಿಕೊಂಡಿದ್ದು, ಅದರಂತೆ ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.

ಕೊಣ್ಣೂರು ಚೆಕ್‌ಪೋಸ್ಟ್ ಗೆ ಅಧಿಕಾರಿಗಳ ಭೇಟಿ

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕೊಣ್ಣೂರು ಮತ್ತು ಕಲಕೇರಿ ಚೆಕ್‌ಪೋಸ್ಟ್ ಗಳಲ್ಲಿ  ಚುನಾವಣೆ ಅಕ್ರಮ ತಡೆಗಟ್ಟಲು ತಾಲೂಕು ಆಡಳಿತ ಮತ್ತು ಚುನಾವಣೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರತಿನಿತ್ಯ ಚೆಕ್‌ಪೋಸ್ಟ್ ಗಳಿಗೆ ಭೇಟಿ ನೀಡುತ್ತಿರುವ ಚುನಾವಣೆ ಅಧಿಕಾರಿಗಳು, ಅಕ್ರಮ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ, ನರಗುಂದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲೂಕಿನ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಗಳಾದ ಸೋಮಶೇಖರ್ ಬಿರಾದರ್ ಕೊಣ್ಣೂರು ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚೆಕ್‌ಪೋಸ್ಟ್ ನಲ್ಲಿ ನಡೆಸಲಾಗುವ ತಪಾಸಣೆಯ ದಾಖಲೆಗಳನ್ನು ಮತ್ತು ತಪಾಸಣೆ ಕಾರ್ಯವನ್ನು ಸೆರೆಹಿಡಿಯುವ ಕ್ಯಾಮೆರಾದ ಸೂಕ್ತ ಕಾರ್ಯ ನಿರ್ವಹಣೆಯ ಕುರಿತು ಪರಿಶೀಲಿಸಿದರು. ಕೆಲವು ವಾಹನಗಳನ್ನು ತಡೆದ ಇಓ ಮತ್ತು ತಹಸೀಲ್ದಾರರು ತಪಾಸಣೆ ನಡೆಸಿದರು. ಸ್ಥಳದಲ್ಲಿದ್ದ ಚೆಕ್‌ಪೋಸ್ಟ್ ಸಿಬ್ಬಂದಿಗಳಿಗೆ ಚುನಾವಣೆ ಅಕ್ರಮದಲ್ಲಿ ಯಾರೇ ಭಾಗಿಯಾದರೂ ಅಂತಹವರ ವಿರುದ್ಧ ಚುನಾವಣೆ ನಿಯಮಾನುಸಾರ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ದೂದಪೀರಾಂರವರ ಉರುಸು ಏ.21ರಿಂದ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಲಕ್ಷ್ಮೇಶ್ವರದ ದೂದನಾನಾ ದರ್ಗಾದ ದೂದಪೀರಾಂರವರ 135ನೇ ಉರುಸು ಕಾರ್ಯಕ್ರಮ ಏ.21 ಮತ್ತು ಏ.22 ಎರಡು ದಿನಗಳ ಕಾಲ ನಡೆಯಲಿದೆ. ಈ ಬಾರಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೂದಪೀರಾಂ ದರ್ಗಾ ಕಮಿಟಿಯ ಅಧ್ಯಕ್ಷ ಸುಲೇಮಾನ ಕಣಕೆ ಮತ್ತು ಎಸ್.ಕೆ. ಹವಾಲ್ದಾರ ಮಾಹಿತಿ ನೀಡಿದರು.

urusu

ಅವರು ಮಂಗಳವಾರ ದರ್ಗಾ ಹಾಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಉರುಸು ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನೂರಾರು ವರ್ಷಗಳಿಂದ ಹಿಂದೂ-ಮುಸ್ಲಿ ಮತ್ತು ಸರ್ವ ಧರ್ಮದ ಸಮಾಜ ಬಾಂಧವರು ಇಲ್ಲಿನ ದೂದನಾನಾರವರಿಗೆ ಶೃದ್ಧಾ-ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ.

ತನ್ಮೂಲಕ ಭಕ್ತಿ ಮತ್ತು ಜಾಗೃತ ಕೇಂದ್ರವಾಗಿ ಬೆಳೆದು ನಿಂತಿದೆ. ಇಂದು ದೇಶಾದ್ಯಂತ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಹೊಂದುತ್ತಿದ್ದಾರೆ. ನಾಡಿನ ಅನೇಕ ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ, ಅಗತ್ಯ ಸೌಲಭ್ಯಗಳನ್ನು ಮಾಡಲಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ದೂದಪೀರಾಂರವರ 135ನೇ ವರ್ಷದ ಉರುಸು ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಾಡಳಿತದ ನಿರ್ದೇಶನದಂತೆ ಖವ್ವಾಲಿ, ಧರ್ಮಜಾಗೃತಿ ಸಭೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ಕೈಬಿಟ್ಟು ಧಾರ್ಮಿಕ ಸಂಪ್ರದಾಯಗಳನ್ನು ಪರಂಪರೆಯಂತೆ ಆಚರಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಚುನಾವಣೆ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ಉಪಾಧ್ಯಕ್ಷ ಎ.ಜಿ. ಸೂರಣಗಿ, ದಾದಾಪೀರ ಮುಚ್ಚಾಲೆ, ದರ್ಗಾ ಕಮಿಟಿ ವಾಯ್ಸ್ ಚೇರಮನ್ ಆಯ್.ಕೆ. ಮಿರ್ಜಾ, ಕಾರ್ಯದರ್ಶಿ ಡಿ.ಡಿ. ಕಾರಡಗಿ, ಕೆ.ಡಿ. ಸೂರಣಗಿ, ಎಫ್.ಎನ್. ಪಲ್ಲಿ, ಎನ್.ಎಚ್. ಸಿದ್ದಿ, ಎಸ್.ಎಚ್. ಶಮಲೆವಾಲೆ, ಎಂ.ಎಚ್. ಸಿದ್ದಾಪೂರ, ಎ.ಕೆ. ಸೂರಣಗಿ ಎಂ.ಎ. ಮುಳಗುಂದ, ಯು.ಡಿ. ಚೌರಿ, ಅಬ್ದುಲ್‌ಕರೀಂ ಕರೀಮ್‌ಖಾನವರ, ಜಾಫರಸಾಬ ಹುಬ್ಬಳ್ಳಿ, ಆಜಮ್ ಜಮಾದಾರ, ಜಾಕೀರ ಹವಾಲ್ದಾರ, ಪಿರ್ದೋಶ ಆಡೂರ, ಸಿಕಂದರ ಕಣಕೆ ಸೇರಿ ಹಲವರಿದ್ದರು.

ಎನ್.ಎಂ. ಗದಗ ಮಾತನಾಡಿ, ಉರುಸು ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸಾವಿರಾರು ಭಕ್ತರು ಆಗಮಿಸುವದರಿಂದ ಅವರಿಗೆ ತೊಂದರೆಯಾಗದಂತೆ ಇಲ್ಲಿನ ದರ್ಗಾ ಹಾಗೂ ಅಂಜುಮನ್ ಕಮಿಟಿ ವತಿಯಿಂದ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಆಗಮಿಸಿದ ಭಕ್ತರಿಗೆ ಕುಡಿಯುವ ನೀರು, ವಾಹನ ನಿಲುಗಡೆ, ವಸತಿ ಹಾಗೂ ಜನರ ದಟ್ಟಣೆ ನಿಯಂತ್ರಣಕ್ಕೆ ಸ್ವಯಂ ಸೇವಕರನ್ನು ನೇಮಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದರು.

ಕೈಗೆಟಕುವ ದರದಲ್ಲಿ ಮೇವು ಪೂರೈಕೆ : ಶ್ರೀಶೈಲ್ ತಳವಾರ

0

ವಿಜಯಸಾಕ್ಷಿ ಸುದ್ದಿ, ಗದಗ : ಬರಗಾಲದಿಂದಾಗಿ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವಿನ ಬ್ಯಾಂಕ್ ಆರಂಭ ಮಾಡಲಾಗಿದೆ. ಪ್ರತಿ ಕೆ.ಜಿ ಮೇವಿಗೆ ಎರಡು ರೂಪಾಯಿಯಂತೆ ರೈತರಿಗೆ ಕೈಗೆಟುಕುವ ದರದಲ್ಲಿ ತಾಲೂಕು ಆಡಳಿತದಿಂದ ಮೇವನ್ನು ಮಾರಾಟ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಕೊಣ್ಣೂರು ಹೋಬಳಿ ಮಟ್ಟದ ಎಲ್ಲ ರೈತರು ಪಡೆದುಕೊಳ್ಳಬೇಕೆಂದು ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.

ಕೊಣ್ಣೂರಿನ ಎಪಿಎಂಸಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಆಡಳಿತ ವತಿಯಿಂದ 2024-25ನೇ ಸಾಲಿನ ಬರಗಾಲ ಯೋಜನೆಯ ಅಡಿಯಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಮೇವು ಪೂರೈಸುವ ಮೇವು ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಬರಗಾಲದಿಂದಾಗಿ ಕುಡಿಯುವ ನೀರು, ಜಾನುವಾರಗಳಿಗೆ ಮೇವಿನ ಕೊರತೆ ನೀಗಿಸಲು ತಾಲೂಕು ಆಡಳಿತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ಸದ್ಯ ಕೊಣ್ಣೂರು ಹೋಬಳಿ ಮಟ್ಟದಲ್ಲಿ ಸುಮಾರು ಎರಡೂವರೆ ಸಾವಿರ ಜಾನುವಾರಗಳಿಗೆ ಮೇವಿನ ಕೊರತೆ ತಪ್ಪಿಸಲು ಮೇವಿನ ಬ್ಯಾಂಕ್ ಉದ್ಘಾಟನೆ ಮಾಡಲಾಗಿದೆ. ಇದರ ಸದುಪಯೋಗವನ್ನು ಕೊಣ್ಣೂರು ಹೋಬಳಿ ವ್ಯಾಪ್ತಿಗೆ ಬರುವ ವಾಸನ, ಶೀರೋಳ, ಕೊಣ್ಣೂರು, ರೆಡ್ಡರ ನಾಗನೂರು, ಹದಲಿ, ಸುರಕೋಡ ಮತ್ತು ಬೈರನಹಟ್ಟಿ ಗ್ರಾ.ಪಂ ವ್ಯಾಪ್ತಿಯ ರೈತರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಮೇವು ಬ್ಯಾಂಕ್‌ನಿಂದ 1 ಜಾನುವಾರಿಗೆ ಪ್ರತಿನಿತ್ಯ 6 ಕೆ.ಜಿ ಮೇವನ್ನು ಕೊಡಲಾಗುವುದು. ಪ್ರತಿ ರೈತರಿಗೆ 50 ಕೆ.ಜಿವರೆಗೂ ಮೇವನ್ನು ವಿತರಿಸಲಾಗುವುದು. ರೈತರು ಒಂದು ಕೆ.ಜಿ ಮೇವನ್ನು 2 ರೂಪಾಯಿ ಕೊಟ್ಟು ಖರೀದಿ ಮಾಡಬಹುದು. ಇದರಿಂದ ಬರಗಾಲದಲ್ಲಿ ರೈತರ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ ಎಂದರು.

ಕೊಣ್ಣೂರು ಗ್ರಾಮದ ರೈತರಾದ ಸಿದ್ದಪ್ಪ ಡಂಬಳ ಮತ್ತು ಅಲ್ಲಿಸಾಬ್ ಸುರಕೋಡ ಅವರಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದರ್ ಮೇವಿನ ಗಂಟನ್ನು ವಿತರಿಸುವ ಮೂಲಕ ಮೇವಿನ ಬ್ಯಾಂಕ್‌ನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೊಣ್ಣೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ, ಗ್ರಾಮ ಆಡಳಿತಾಧಿಕಾರಿ ಟಿ.ಆರ್. ಪಾಟೀಲ್, ಪಶುಪಾಲನಾ ಇಲಾಖೆಯ ಜಿ.ಎ. ನಿರಾಣಿ, ಕಂದಾಯ ನಿರೀಕ್ಷಕ ಐ.ವಾಯ್. ಕಳಸಣ್ಣವರ, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.

ಮೇವಿನ ಬ್ಯಾಂಕ್‌ನಲ್ಲಿ ಸದ್ಯ 4 ಟನ್ ಮೇವು ದಾಸ್ತಾನು ಮಾಡಲಾಗಿದ್ದು, ಮುಂದಿನ 2-3 ತಿಂಗಳಿಗೆ ಸಾಕಾಗುವಷ್ಟು ಮೇವನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೇವು ಪೂರೈಕೆ ಮತ್ತು ಸರಬರಾಜಿಗೆ ಟೆಂಡರ್ ಕರೆದು ಟೆಂಡರುದಾರರನ್ನು ಗುರ್ತಿಸಲಾಗಿದೆ. ಮೇವು ಬ್ಯಾಂಕ್‌ನಲ್ಲಿ ಮೇವು ಖಾಲಿಯಾದ ಕೂಡಲೇ ಟೆಂಡರುದಾರರ ಮೂಲಕ ಮೇವು ದಾಸ್ತಾನು ಮಾಡಲಾಗುವುದು. ಮೇವು ಬ್ಯಾಂಕ್ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5.30ರವರೆಗೆ ತೆರದಿರುತ್ತದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು.
– ಡಾ. ವೆಂಕಟೇಶ.
ಸಹಾಯಕ ನಿರ್ದೇಶಕರು,
ಪಶುಸಂಗೋಪನಾ ಇಲಾಖೆ, ನರಗುಂದ.

ಎಚ್‌ಡಿಕೆ ಮಹಿಳಾ ಸಮುದಾಯದ ಕ್ಷಮೆ ಕೇಳಿ : ಕರೀಮಸಾಬ ಸುಣಗಾರ

0

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣೆಂದರೆ ಸಾಕ್ಷಾತ್ ದೇವಿಯ ಸ್ವರೂಪ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ತ್ರೀಯರನ್ನು ಅವಮಾನಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ತಾಯಿ ಸ್ಥಾನವನ್ನು ಅಗೌರವಿಸಿದ್ದಾರೆ. ಇಂತಹ ರಾಜಕಾರಣಿಗಳು ನಮಗೆ ಬೇಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಕರೀಮಸಾಬ ಸುಣಗಾರ ಹೇಳಿದ್ದಾರೆ.

ಈ ಬಗ್ಗೆ ಅವರು ಪತ್ರಿಕಾ ಹೇಳಿಕೆ ನೀಡಿ, ಸಂವಿಧಾನಿಕ ಉನ್ನತ ಹುದ್ದೆಯಲ್ಲಿದ್ದು, ರಾಜ್ಯದ ಆಡಳಿತ ನಿರ್ವಹಿಸಿರುವ ಕುಮಾರಸ್ವಾಮಿಯವರಿಂದ ಇಂತಹ ಅಗೌರವವನ್ನು ಮಹಿಳಾ ಸಮುದಾಯ ಸಹಿಸದು.

ಹೆಣ್ಣು ಕಾಳಿ ಆಗುವ ಮುನ್ನವೇ ಮಾಜಿ ಮುಖ್ಯಮಂತ್ರಿಗಳು ಮಹಿಳಾ ಸಮುದಾಯದಲ್ಲಿ ಕ್ಷಮೆ ಯಾಚಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜನ ಪರವಾಗಿ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡಿ ಜನರ ಮನ ಗೆದ್ದಿದೆ, ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲರು ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅವರಿಂದ ಸೈ ಎನಿಸಿಕೊಂಡಿದ್ದಾರೆ ಎಂದು ಕರೀಮಸಾಬ ಸುಣಗಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುರುಷಾರ್ಥ-ಭಗವಂತನ ಕೃಪೆ

0

ಅದು ರಾಮ-ರಾವಣರ ಯುದ್ಧ ಸನ್ನಿಹಿತವಾದ ಕಾಲ. ಸ್ವರ್ಣಲಂಕೆಯನ್ನು ತಲುಪಲು ಬೇಕಾದ ಸೇತುವೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಎಲ್ಲಾ ಕಪಿಗಳು ಸುತ್ತಮುತ್ತಲ ಗುಡ್ಡ ಬೆಟ್ಟಗಳಿಂದ ಸಣ್ಣ ಕಲ್ಲುಗಳನ್ನು ತಂದು ಸೇತುವೆಯ ನಿರ್ಮಾಣದಲ್ಲಿ ತೊಡಗಿದ್ದವು. ಎಲ್ಲರ ಪ್ರಯತ್ನದ ಫಲವಾಗಿ ಪುಟ್ಟ ಸೇತುವೆ ನಿರ್ಮಾಣವಾಯಿತು.

ಆದರೆ ಪ್ರಭು ಶ್ರೀರಾಮನಿಗೆ ಸೇತುವೆ ಅಷ್ಟೊಂದು ಬಲಿಷ್ಠವಾಗಿಲ್ಲ ಎಂಬ ಭಾವನೆ. ಸೇತುವೆ ತುಂಬಾ ತೆಳುವಾಗಿ ನಿರ್ಮಾಣವಾಗಿದೆ ಎಲ್ಲ ಕಪಿಗಳ ಭಾರಕ್ಕೆ ಬಿದ್ದು ಹೋಗಬಹುದು ಎಂಬ ಭಯ, ಜೊತೆಗೆ ತನ್ನಿಂದ ಯಾರಿಗೂ ಹಾನಿಯಾಗಬಾರದು ಎಂಬ ಮುಂದಾಲೋಚನೆ ಕೂಡ. ಆದ್ದರಿಂದ ಎಲ್ಲರಿಗಿಂತ ಮುಂಚೆ ತಾನು ಸೇತುವೆಯ ಮೇಲೆ ನಡೆದು ಹೋಗುವ ಪ್ರಯತ್ನದ ಅಂಗವಾಗಿ ಆತ ಹೆಜ್ಜೆ ಇಟ್ಟನು. ಪ್ರಭು ಶ್ರೀ ರಾಮ ಸೇತುವೆಯ ಮೇಲೆ ಕಾಲಿಟ್ಟೊಡನೆ ಸಮುದ್ರದಲ್ಲಿದ್ದ ಎಲ್ಲಾ ಜಲಚರಗಳು ಬಂದು ಸೇತುವೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದವು. ಎಲ್ಲ ಜಲಚರಗಳ ಪ್ರಯತ್ನದ ಫಲವಾಗಿ ಸೇತುವೆ ಅತ್ಯಂತ ಬಲಿಷ್ಠವಾಯಿತು.

ಸೇತುವೆಯ ಮೇಲೆ ನಡೆದಾಡಿದ ಶ್ರೀರಾಮ ತೃಪ್ತನಾಗಿ ಹಿಂದಿರುಗಿ ಬಂದು ಸಮುದ್ರದ ದಡದಲ್ಲಿರುವ ಕಲ್ಲೊಂದರ ಮೇಲೆ ಕುಳಿತ.

ಇದನ್ನೆಲ್ಲ ಗಮನಿಸುತ್ತಿದ್ದ ಜಾಂಬವಂತ ಕರಡಿ ಶ್ರೀರಾಮನ ಬಳಿ ಬಂದು `ಪ್ರಭು, ಎಲ್ಲವೂ ನಿನ್ನ ಕೃಪೆಯಿಂದಲೇ ಆಗುತ್ತದೆ ಎಂಬುದು ಇಂದು ಸಾಬೀತಾಯಿತು. ಆದರೆ ನನ್ನದೊಂದು ಸಂದೇಹ’ ಎಂದು ಅರಿಕೆ ಮಾಡಿಕೊಂಡನು. ನಸುನಕ್ಕ ಪ್ರಭು ಶ್ರೀ ರಾಮ `ಹೇಳು ಜಾಂಬವಂತ, ಏನು ನಿನ್ನ ಸಂದೇಹ? ಎಂದು ಕೇಳಲು ಜಾಂಬವಂತನು `ಪ್ರಭು, ನಿನ್ನ ಕೃಪಾ ಕಟಾಕ್ಷದಿಂದಲೇ ಸೇತುವೆ ಬಲವಾಯಿತು ಎಂಬುದಾದರೆ ಇಷ್ಟೆಲ್ಲಾ ಶ್ರಮಪಟ್ಟು ಕಪಿಗಳಿಂದ ಸೇತುವೆಯನ್ನು ನಿರ್ಮಿಸುವ ಸಾಹಸ ಏಕೆ’ ಎಂದು ಪ್ರಶ್ನಿಸಿದ.

ಪ್ರಭು ಶ್ರೀರಾಮನು ಜಾಂಬವಂತನನ್ನು ಉದ್ದೇಶಿಸಿ ಹೇಳಿದ, `ಜಾಂಬವಂತ, ನಿನ್ನ ಸಂದೇಹ ನನಗೆ ಅರ್ಥವಾಯಿತು. ಎಲ್ಲವನ್ನೂ ನಾನೇ ಮಾಡಲು ಸಾಧ್ಯವಿರುವಾಗ ಸೇತುವೆ ನಿರ್ಮಾಣ ಮಾಡಲು ಕಪಿಗಳನ್ನು ಏಕೆ ತೊಡಗಿಸಿದೆ ಎಂದಲ್ಲವೇ? ಎಲ್ಲ ಕಪಿಗಳು ಮಾಡಿದ್ದು ತಮ್ಮ ಪುರುಷಾರ್ಥವನ್ನು ಅಂದರೆ ತಮ್ಮ ಕಾರ್ಯವನ್ನು. ಪುರುಷಾರ್ಥ ಎನ್ನುವುದು ಒಂದು ಹಂತದವರೆಗೆ ಮಾತ್ರ ಸಾಧ್ಯವಾಗುತ್ತದೆ. ಅದಕ್ಕೆ ನನ್ನ ಕೊಡುಗೆ ಕೇವಲ ಕೃಪೆ. ಕೃಪೆ ಸೀಮಾತೀತವಾದದ್ದು. ಪುರುಷಾರ್ಥದೊಂದಿಗೆ ಕೃಪೆಯು ಬೆರೆತಾಗ ಸಾರ್ಥಕ ಕಾರ್ಯವಾಗುತ್ತದೆ. ಅಂತೆಯೇ ಇಂದು ಕಪಿಗಳ ಪುರುಷಾರ್ಥಕ್ಕೆ ನನ್ನ ಕೃಪೆಯೂ ಸೇರಿ ಈ ಸೇತುವೆ ನಿರ್ಮಾಣವಾಗಿದೆ’ ಎಂದು ಹೇಳಿದನು.

ಅದೆಷ್ಟು ಸುಂದರವಾದ ಮಾತಲ್ಲವೇ ಸ್ನೇಹಿತರೆ? ಎಲ್ಲವೂ ದೇವರ ಕೃಪೆ, ಎಲ್ಲವನ್ನು ದೇವರೇ ಮಾಡುತ್ತಾನೆ ಎಂದು ಹೇಳಿ ನಾವು ಸುಮ್ಮನೆ ಕುಳಿತುಕೊಂಡರೆ ಕಾರ್ಯಸಿದ್ಧಿ ಆಗದು. ದೇವರು ಹೇಗಾದ್ರೂ ಪಾಸ್ ಮಾಡುತ್ತಾನೆ ಎಂದು ಪರೀಕ್ಷೆಗೆ ಓದದಿದ್ದರೆ ಪಾಸಾಗಲು ಸಾಧ್ಯವೇ?

ಇದಕ್ಕೆ ಪೂರಕವಾಗಿ ಇನ್ನೊಂದು ಕಥೆ ನೆನಪಿಗೆ ಬರುತ್ತದೆ. ದೇವರ ಮೇಲೆ ಅಪಾರ ಭಕ್ತಿಯುಳ್ಳ ಓರ್ವ ವ್ಯಕ್ತಿ ತನ್ನ ಊರಿಗೆ ನೆರೆ ಬಂದಾಗ ದೇವರನ್ನು ಕಾಪಾಡು ಎಂದು ಬೇಡಿಕೊಂಡನು. ದೇವರೇ ಬಂದು ತನ್ನನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಆತನದ್ದು. ಊರಿನವರೆಲ್ಲ ಆತನನ್ನು ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಪ್ರಯತ್ನಿಸಿದರಾದರೂ ಆತ ಒಪ್ಪಲಿಲ್ಲ. ಆತನನ್ನು ಬಿಟ್ಟು ಅವರು ಹೊರಟು ಹೋದರು.

ಕೆಲ ಸಮಯದ ನಂತರ ಮತ್ತೊಂದು ದೋಣಿಯಲ್ಲಿರುವ ಜನರು ಕೂಡ ಆತನನ್ನು ಬೇಗ ಬರುವಂತೆ ಕರೆದರೂ ಕೂಡ ಆತ `ಇಲ್ಲ, ದೇವರೇ ಬಂದು ನನ್ನನ್ನು ರಕ್ಷಿಸುತ್ತಾನೆ’ ಎಂದು ಹೇಳಿದ. ಅವರು ಕೂಡ ಆತನನ್ನು ಬಿಟ್ಟು ಹೊರಟು ಹೋದರು. ನೀರಿನ ಪ್ರವಾಹ ಏರುತ್ತಲೇ ಹೋಯಿತು ಮತ್ತೂ ಕೆಲ ಗಂಟೆಗಳ ನಂತರ ದೊಡ್ಡ ಮರದ ದಿಮ್ಮಿಯೊಂದು ಆತ ಕುಳಿತ ಕಟ್ಟಡದ ಬಳಿ ತೇಲುತ್ತಾ ಬಂದಿತ್ತು. ಅದರ ಮೇಲೆ ಆತ ಕುಳಿತರೆ ಇಲ್ಲವೇ ಅದನ್ನು ಹಿಡಿದುಕೊಂಡರೆ ಆತ ಮುಳುಗದೆ ಸುರಕ್ಷಿತ ದಡಕ್ಕೆ ಹೋಗಿ ಸೇರುವ ಸಾಧ್ಯತೆ ಇತ್ತು. ಆದರೂ ಕೂಡ ದೇವರು ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಆತ ಹೋಗಲೇ ಇಲ್ಲ.

ಅಂತಿಮವಾಗಿ ನೆರೆಯ ಪ್ರವಾಹದಲ್ಲಿ ಕೊಚ್ಚಿ ಹೋದ ಆತ ಮರಣ ಹೊಂದಿದ.

ಮರಣದ ನಂತರ ಆತನ ಆತ್ಮ ದೇವಲೋಕಕ್ಕೆ ಬಂದಾಗ ಅಲ್ಲಿ ತನ್ನ ಇಷ್ಟದೈವವನ್ನು ಕಂಡ ಆ ವ್ಯಕ್ತಿ `ಇದೇನು ದೇವ, ನಾನು ನಿನ್ನನ್ನು ನಂಬಿದರೆ ನೀನು ನನ್ನ ಕೈ ಹಿಡಿದು ಕಾಪಾಡಲಿಲ್ಲ!? ಎಂದು ದೂರಿದ.

ಆಗ ದೇವರು ನಸುನಗುತ್ತಾ `ಮಗು, ನಾನು ನಿನ್ನನ್ನು ಕಾಪಾಡಲೆಂದೇ ಎರಡು ಬಾರಿ ದೋಣಿಯಲ್ಲಿ ಜನರನ್ನು ಕಳುಹಿಸಿದೆ, ಮೂರನೇ ಬಾರಿ ಮರದ ದಿಮ್ಮಿಯ ರೂಪದಲ್ಲಿ ನಿನ್ನ ಬಳಿ ಬಂದೆ ಆದರೆ ನೀನು ಬರಲಿಲ್ಲ. ನಿನ್ನ ಸ್ವ ಪ್ರಯತ್ನ ಇಲ್ಲದೆ ಹೋದರೆ ನಾನೇನು ಮಾಡಿದರೂ ಅದು ವಿಫಲವೇ ಆಗುತ್ತದೆ ಎಂಬುದು ನಿನಗೆ ಅರಿವಾಗಲೇ ಇಲ್ಲ’ ಎಂದು ಹೇಳಿದನು. ಇದೀಗ ಆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಯಿತು.

ಸ್ನೇಹಿತರೆ, ಇಲ್ಲಿ ನಾವು ಅರಿತುಕೊಳ್ಳಬೇಕಾಗಿರುವುದು ಎರಡು ವಿಷಯಗಳನ್ನು. ಒಂದು, ಸ್ವ ಪ್ರಯತ್ನದಿಂದ ಪುರುಷಾರ್ಥ ಸಾಧನೆ. ಎರಡನೆಯದಾಗಿ, ಭಗವಂತನ ಕೃಪೆ ನಮ್ಮ ಮೇಲಾಗುವುದು ನಮ್ಮ ಕಾರ್ಯನಿರ್ವಹಣೆಯ ಬಲದಿಂದಲೇ ಹೊರತು ಕೇವಲ ಮೊರೆ ಇಡುವುದರಿಂದ ಅಲ್ಲ ಎಂದು. ದೇವರು ಕೂಡ ನಮ್ಮ ಮೊರೆಯನ್ನು ಆಲಿಸುವುದು ನಾವು ಆತನನ್ನು ನಂಬುವುದರ ಜೊತೆ ಜೊತೆಗೆ ಶ್ರದ್ಧೆಯಿಂದ ಕಾರ್ಯ ತತ್ಪರರಾದಾಗ ಮಾತ್ರ ಎಂಬುದನ್ನು ಅರಿತು ಬದುಕಿನಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಹೋಗೋಣ.
– ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ.

error: Content is protected !!