ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ದಾರಿದೀಪ. ಸತ್ಯ, ಶಾಂತಿ ಎಲ್ಲರ ಬಾಳಿಗೂ ಅಗತ್ಯವಿದೆ. ಜೀವನದ ಉನ್ನತಿಗೆ ಸಂಸ್ಕಾರ, ಸಂಸ್ಕೃತಿಗಳ ಅರಿವು, ಆಚರಣೆ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದಿಂದ ಸಂಘಟಿಸಿದ ಧರ್ಮೋತ್ತೇಜಕ ಸಂಗಮ ಸಮಾವೇಶದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸಾತ್ವಿಕ ಮತ್ತು ತಾತ್ವಿಕ ಹಿತ ಚಿಂತನೆಗಳನ್ನು ಬೋಧಿಸುವುದರ ಮೂಲಕ ಭಾವೈಕ್ಯತೆಗೆ ಭದ್ರ ಬುನಾದಿ ಹಾಕಿದ ಶಕ್ತಿ ವೀರಶೈವ ಧರ್ಮದಲ್ಲಿದೆ. ಶಿವ ಸಂಸ್ಕೃತಿ ಎಷ್ಟು ಪ್ರಾಚೀನವೋ ಅಷ್ಟೇ ವೀರಶೈವ ಧರ್ಮ ಸಂಸ್ಕೃತಿ ಪುರಾತನವಾಗಿದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಧರ್ಮ. ಶ್ರೀ ಜಗದ್ಗುರು ರೇಣುಕಾಚಾದಿ ಪಂಚಾಚಾರ್ಯರ ತತ್ವ ಸಿದ್ಧಾಂತಗಳು ನೆಮ್ಮದಿಗೆ ಮೂಲ ಸೆಲೆಯಾಗಿದೆ ಎಂದರು.
ಅ.ಭಾ.ವೀ ಮಹಾಸಭಾದ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಎಸ್.ಜೆ.ಆರ್.ಸಿ ಮಹಿಳಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರೇಮಾ ಸಿದ್ಧರಾಜು ಮಾತನಾಡಿ, ವೀರಶೈವ ಧರ್ಮ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದೆ. ಕಾಯಕ ಮತ್ತು ದಾಸೋಹಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ. ಈ ಧರ್ಮದ ತತ್ವ ಸಿದ್ಧಾಂತಗಳಿಗೆ ತಲೆ ಬಾಗಿ ಬರುವವರೆಲ್ಲರಿಗೂ ಬಾಗಿಲು ತೆಗೆದಿದೆ ಎಂದು ತಿಳಿಸಿದರು.
ಎಡೆಯೂರು ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿ ಗುರುಪೀಠ ಮತ್ತು ವೀರಶೈವ ಧರ್ಮ ಪರಂಪರೆ ಬಗೆಗೆ ಸಂಕ್ಷಿಪ್ತವಾಗಿ ವಿವರಿಸಿದರು. ಧನಗೂರು ಮುಮ್ಮಡಿ ಷಡಕ್ಷರ ಶಿವಾಚಾರ್ಯರು, ಬೆಳ್ಳಾವಿ ಮಹಂತ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಬಿಜ್ಜಳ್ಳಿ ನಂದೀಶ, ಪ್ರೇಮಾ ಕೋವಾ ರೇವಣ್ಣ, ಎಂ. ಮಾದಯ್ಯ, ನಾಗೇಂದ್ರಸ್ವಾಮಿ, ಬೀರೂರು ಶಿವಸ್ವಾಮಿ ಮೊದಲ್ಗೊಂಡು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಟಿ.ಎಸ್. ಉಮಾಶಂಕರ ಸ್ವಾಗತಿಸಿದರು. ಪಾಲನೇತ್ರ ನಿರೂಪಿಸಿದರು. ಶಿವಶಂಕರ ಶಾಸ್ತಿç ತಂಡದವರಿAದ ಭಕ್ತಿಗೀತೆ, ಪ್ರಜ್ಞಾ ಇವರಿಂದ ಭರತ ನಾಟ್ಯ ಜರುಗಿತು.
ಶ್ರೀ ಜಗದ್ಗುರು ರಂಭಾಪುರಿ ಪೀಠದ ಮುಖವಾಣಿ ‘ರಂಭಾಪುರಿ ಬೆಳಗು’ ಜುಲೈ ತಿಂಗಳ ಸಂಚಿಕೆಯನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಿಡುಗಡೆ ಮಾಡಿ ಮಾತನಾಡಿ, ಮನಶುದ್ಧಿಗೆ ಮತ್ತು ಜೀವನ ಪರಿವರ್ತನೆಯತ್ತ ಮುನ್ನಡೆಯಲು ಉತ್ತಮ ಸಾಹಿತ್ಯದ ಅವಶ್ಯಕತೆಯಿದೆ. ಆಧ್ಯಾತ್ಮ ಜ್ಞಾನದ ಅರಿವು ಜೀವನೋತ್ಸವಕ್ಕೆ ಸ್ಫೂರ್ತಿಯಾಗಿದೆ ಎಂದರು.