Home Blog Page 2

2027 ವಿಶ್ವಕಪ್‌ಗೆ ಟೀಂ ಇಂಡಿಯಾ ಸಿದ್ಧತೆ: 20 ಆಟಗಾರರ ಪಟ್ಟಿ ಸಿದ್ಧಪಡಿಸಿದ ಬಿಸಿಸಿಐ!

0

ಕಳೆದ ಮೂರು ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಸತತ ಯಶಸ್ಸು ಸಾಧಿಸಿರುವ ಟೀಂ ಇಂಡಿಯಾ ಇದೀಗ 2027ರ ಏಕದಿನ ವಿಶ್ವಕಪ್‌ಗೆ ಕಣ್ಣಿಟ್ಟಿದ್ದು, ಬಿಸಿಸಿಐ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.

2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ, 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಅದಾದ ಬಳಿಕ 2026ರಲ್ಲಿ ಮತ್ತೊಮ್ಮೆ ಟಿ20 ವಿಶ್ವಕಪ್ ಜಯಿಸಿ ಐಸಿಸಿ ಟ್ರೋಫಿಗಳಲ್ಲಿ ಹ್ಯಾಟ್ರಿಕ್ ಸಾಧಿಸಿದೆ. ಇದೀಗ ಮುಂದಿನ ಗುರಿಯಾಗಿ 2027ರ ಏಕದಿನ ವಿಶ್ವಕಪ್‌ನ್ನು ಗೆಲ್ಲುವತ್ತ ಗಮನ ಹರಿಸಲಾಗಿದೆ.

2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿದೆ. 2023ರ ಫೈನಲ್‌ನಲ್ಲಿ ಸೋತಿದ್ದ ಟೀಂ ಇಂಡಿಯಾ ಈ ಬಾರಿ ಟ್ರೋಫಿ ಗೆಲ್ಲುವ ದೃಢನಿಶ್ಚಯ ಹೊಂದಿದೆ.

ಈ ಹಿನ್ನೆಲೆ ಬಿಸಿಸಿಐ ಈಗಾಗಲೇ 20 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ವರದಿಯಾಗಿದೆ. ಆಯ್ಕೆ ಮಂಡಳಿ ಈ ಆಟಗಾರರ ಪ್ರದರ್ಶನದ ಮೇಲೆ ಮಾತ್ರ ಗಮನ ಹರಿಸಲಿದ್ದು, ಐಪಿಎಲ್ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಅವರ ಆಟವನ್ನು ನಿಕಟವಾಗಿ ಅವಲೋಕಿಸಲಿದೆ.

ಐಪಿಎಲ್ ನಡೆಯುವ ವೇಳೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನೇತೃತ್ವದ ತಂಡದ ಸದಸ್ಯರಾದ ಶಿವಸುಂದರ್ ದಾಸ್, ಆರ್.ಪಿ. ಸಿಂಗ್, ಅಜಯ್ ರಾತ್ರ ಮತ್ತು ಪ್ರಗ್ಯಾನ್ ಓಜಾ ವಿವಿಧ ನಗರಗಳಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲಿದ್ದಾರೆ. ಪ್ರತಿ ಆಯ್ಕೆದಾರರು ವಾರಕ್ಕೆ ಕನಿಷ್ಠ ಒಂದು ಪಂದ್ಯ ವೀಕ್ಷಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮುಂಬೈ, ಕೊಲ್ಕತ್ತಾ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ನಡೆಯುವ ಪಂದ್ಯಗಳಲ್ಲಿ ಆಯ್ಕೆದಾರರು ಹಾಜರಿದ್ದು ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಪರಿಶೀಲಿಸಲಿದ್ದಾರೆ.

ಇದರ ಜೊತೆಗೆ 2028ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ ಕ್ರೀಡಾಕೂಟವನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿಯನ್ನು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಈಗಾಗಲೇ ಆಯ್ಕೆಯಾದ 20 ಆಟಗಾರರ ಹೊರತಾಗಿ ಇತರರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಗದಗದಲ್ಲಿ ಕಾಡುಹಂದಿ ದಾಳಿ: ಕುರಿ ಕಾಯುತ್ತಿದ್ದವನ ಮೇಲೆ ಅಟ್ಯಾಕ್, ಸ್ಥಿತಿ ಗಂಭೀರ!

0

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ತಾಂಡಾ ಬಳಿ ಕುರಿ ಮೇಯಿಸುತ್ತಿದ್ದ ವೇಳೆ ಕುರಿಗಾಯಿಯ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ನಡೆದಿದೆ.

ಜಲ್ಲಿಗೇರಿ ತಾಂಡಾದ ನಿವಾಸಿ ಮಹಾಂತೇಶ್ ಚವ್ಹಾನ್ ಅವರು ಕಪ್ಪತ್ತಗುಡ್ಡ ಅರಣ್ಯದ ಅಂಚಿನ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಕಾಡುಹಂದಿ ಏಕಾಏಕಿ ದಾಳಿ ನಡೆಸಿದೆ. ದಾಳಿಯಲ್ಲಿ ಮಹಾಂತೇಶ್ ಅವರಿಗೆ ಮೊಣಕಾಲು, ಮೊಣಕೈ ಹಾಗೂ ಮುಖ ಭಾಗದಲ್ಲಿ ಗಂಭೀರ ಗಾಯಗಳಾಗಿವೆ.

ಕಾಡುಹಂದಿಯನ್ನು ನಾಯಿಗಳು ಬೆನ್ನಟ್ಟಿದ್ದರಿಂದ ಅದು ಆತಂಕಗೊಂಡು ಕುರಿಗಾಯಿಯ ಮೇಲೆ ದಾಳಿ ನಡೆಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಗಾಯಾಳುವನ್ನು ತಕ್ಷಣ ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಶಿರಹಟ್ಟಿ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಟಿತ ಅಪಾರ್ಟ್‌ಮೆಂಟ್‌ನಲ್ಲಿ ಕೋಟಿ-ಕೋಟಿ ವಂಚನೆ ಆರೋಪ: 18 ಜನರ ವಿರುದ್ಧ FIR!

ಬೆಂಗಳೂರು: ಉತ್ತರ ತಾಲೂಕಿನ ಶೆಟ್ಟಿಹಳ್ಳಿಯಲ್ಲಿರುವ ಪ್ರತಿಷ್ಠಿತ ಪ್ರಿನ್ಸ್ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬಂದಿದೆ.

ಸುಮಾರು 700 ಫ್ಲಾಟ್‌ಗಳಿರುವ ಈ ಅಪಾರ್ಟ್‌ಮೆಂಟ್‌ನ ಅಸೋಸಿಯೇಷನ್ ಸದಸ್ಯರು ಸಂಗ್ರಹಿಸಿದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಈ ಸಂಬಂಧ ಅಪಾರ್ಟ್‌ಮೆಂಟ್ ನಿವಾಸಿ ಹಾಗೂ ವಕೀಲೆ ನಿಶಾ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರ ಆಧಾರದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಲಕರ್ಣಿ, ಕಾರ್ಯದರ್ಶಿ ಅಲೆಕ್ಸ್, ಖಜಾಂಚಿ ಪ್ರವೀಣ್ ನಾಯ್ಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಾಹಿತಿಯ ಪ್ರಕಾರ, ಪ್ರತಿ ಫ್ಲಾಟ್‌ನಿಂದ ವರ್ಷಕ್ಕೆ ಸುಮಾರು 60 ಸಾವಿರ ರೂಪಾಯಿ ಸಂಗ್ರಹಿಸಲಾಗುತ್ತಿದ್ದು, 700 ಫ್ಲಾಟ್‌ಗಳಿಂದ ಒಟ್ಟು ಸುಮಾರು 3.6 ಕೋಟಿ ರೂಪಾಯಿ ವಸೂಲಿ ಮಾಡಲಾಗುತ್ತದೆ. ಆದರೆ, ಈ ಹಣವನ್ನು ಸರಿಯಾದ ನಿರ್ವಹಣೆಗೆ ಬಳಸದೇ ಲೆಕ್ಕಪತ್ರಗಳಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಸುಮಾರು 1.73 ಕೋಟಿ ರೂಪಾಯಿ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಖರ್ಚುಗಳನ್ನು ತಪ್ಪಾಗಿ ತೋರಿಸಿರುವುದು ಗಮನಕ್ಕೆ ಬಂದಿದೆ. ವಾಟರ್‌ಮ್ಯಾನ್‌ಗೆ ಅನಗತ್ಯವಾಗಿ 2 ಲಕ್ಷ ರೂಪಾಯಿ ನೀಡಲಾಗಿದೆ ಎಂದು ದಾಖಲಾಗಿದೆ. ಜೊತೆಗೆ, ಆಡಿಟ್ ವೆಚ್ಚವನ್ನು ಒಂದು ವರ್ಷ 35 ಲಕ್ಷ ರೂಪಾಯಿ, ಮತ್ತೊಂದು ವರ್ಷ 24 ಲಕ್ಷ ರೂಪಾಯಿ ಎಂದು ತೋರಿಸಿರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದಲ್ಲದೆ, ಅಸೋಸಿಯೇಷನ್ ಹಣವನ್ನು ಆರೋಪಿಗಳು ತಮ್ಮ ಕುಟುಂಬದ ಸದಸ್ಯರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಹೆಂಡತಿ ಹಾಗೂ ಮನೆ ಕೆಲಸದವರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಈ ಘಟನೆ ಹಿನ್ನೆಲೆ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ವಂಚನೆ ಆರೋಪ ಕೇಳಿಬಂದಿರುವುದು ನಿವಾಸಿಗಳಲ್ಲಿ ಆತಂಕ ಮತ್ತು ಅಸಮಾಧಾನ ಉಂಟುಮಾಡಿದೆ.

ಕನವಳ್ಳಿಯಲ್ಲಿ ಭೀಕರ ಅಗ್ನಿ ಅವಘಡ: ದನದ ಕೊಟ್ಟಿಗೆಗೆ ಬೆಂಕಿ, 10ಕ್ಕೂ ಹೆಚ್ಚು ಎಮ್ಮೆಗಳು ಸಜೀವ ದಹನ!

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ದನದ ಕೊಟ್ಟಿಗೆಯಲ್ಲಿ ಇದ್ದ 10ಕ್ಕೂ ಹೆಚ್ಚು ಎಮ್ಮೆಗಳು ಸಜೀವವಾಗಿ ದಹನಗೊಂಡ ದುರ್ಘಟನೆ ನಡೆದಿದೆ.

ಗ್ರಾಮದ ರೈತ ಪರಮೇಶ ಜಾಡರ್ ಅವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಬೆಂಕಿ ತೀವ್ರತೆಯಿಂದ ಎಮ್ಮೆಗಳು ಹೊರಬರಲು ಸಾಧ್ಯವಾಗದೇ ಸಜೀವವಾಗಿ ಸುಟ್ಟು ಕರಕಲಾಗಿವೆ.

ಘಟನೆಯಲ್ಲಿ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಎಮ್ಮೆಗಳು ಹಾಗೂ ದನದ ಕೊಟ್ಟಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ ಎಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕೊನೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಇನ್ನಷ್ಟು ಹಾನಿ ತಪ್ಪಿಸಲಾಗಿದೆ.

ಇದೇ ಕನವಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಐದು ಬಾರಿ ಇಂತಹ ಬೆಂಕಿ ಅವಘಡಗಳು ಸಂಭವಿಸಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕಿಡಿಗೇಡಿಗಳ ಸಂಚು ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಘಟನೆಯ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳನ್ನು ಶೀಘ್ರ ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Crime News: ಇಬ್ಬರ ಮಕ್ಕಳ ತಾಯಿಗೆ ಡ್ರ್ಯಾಗರ್ ಇರಿದು ಕೊಲೆಗೈದ ಆರೋಪಿ ಅರೆಸ್ಟ್!

ಬೆಂಗಳೂರು: ಗಂಗೊಂಡನಹಳ್ಳಿಯಲ್ಲಿ ಇಬ್ಬರು ಮಕ್ಕಳ ತಾಯಿಯನ್ನು ಡ್ರ್ಯಾಗರ್ ನಿಂದ ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಿನ್ನೆ ಸಂಜೆ ಫೀರ್ದೋಸ್ ಬಾನು ಎಂಬ ಮಹಿಳೆಯನ್ನು ಹಫೀಜ್ ಎಂಬ ಯುವಕ ಹತ್ಯೆಗೈದಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ತನಿಖೆ ವೇಳೆ, ಮಹಿಳೆ ಮತ್ತು ಆರೋಪಿಯ ನಡುವೆ ಪರಿಚಯವಿದ್ದು, ಇತ್ತೀಚೆಗೆ ಆಕೆ ಆರೋಪಿಯನ್ನು ದೂರ ಮಾಡಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಫೆಬ್ರವರಿ 28ರಂದು ಇಬ್ಬರ ನಡುವೆ ಗಲಾಟೆಯೂ ನಡೆದಿದ್ದು, ಆ ಸಂದರ್ಭದಲ್ಲಿ ಫೀರ್ದೋಸ್ ಕುಟುಂಬಸ್ಥರು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಆರೋಪಿಗೆ ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ರಾಜಿ ಮಾಡಿಸಿದ್ದರು.

ಆದರೆ, ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಫೀರ್ದೋಸ್ ಬಾನು ಅವರನ್ನು ಹಿಂಬಾಲಿಸಿಕೊಂಡು ಬಂದ ಹಫೀಜ್, ಮಾರಕಾಸ್ತ್ರದಿಂದ ಹಲವು ಬಾರಿ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ವಲಯ ಡಿಸಿಪಿ ಯತೀಶ್ ಅವರು, ಮೃತ ಮಹಿಳೆ ಮತ್ತು ಆರೋಪಿಗೆ ಪ್ರತ್ಯೇಕವಾಗಿ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ ಎಂದು ತಿಳಿಸಿದ್ದಾರೆ. ಆರೋಪಿ ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾಲೇಔಟ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಶಿವಮೊಗ್ಗದಲ್ಲಿ ಭೀಕರ ಅಪಘಾತ: ಕಾರು ಪಲ್ಟಿ, ತಪ್ಪಿದ ಅನಾಹುತ!

ಶಿವಮೊಗ್ಗ: ನಗರದ ಜನನಿಬಿಡ ಪ್ರದೇಶವಾದ ಅಕ್ಕಮಹಾದೇವಿ ವೃತ್ತದಲ್ಲಿ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ವೇಗವಾಗಿ ಬಂದ ಬ್ರೀಜಾ ಕಾರು ಮತ್ತು ಆ್ಯಂಬ್ಯುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ.

ಅಪಘಾತದ ಭೀಕರ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಆ್ಯಂಬ್ಯುಲೆನ್ಸ್ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

“‘ಸರ್ಕೆ ಚುನರಿ’ ಸಾಂಗ್‌ಗೆ ಅಶ್ಲೀಲ ನೃತ್ಯ: ನೋರಾ ಫತೇಹಿ ವಿರುದ್ಧ ಫತ್ವಾ

‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಕೆ ಚುನರಿ’ ಹಾಡು ಸೃಷ್ಟಿಸಿರುವ ವಿವಾದ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈಗಾಗಲೇ ಸಿಬಿಎಫ್ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿರುವ ನಡುವೆ, ಉತ್ತರ ಪ್ರದೇಶದ ಧಾರ್ಮಿಕ ಸಂಸ್ಥೆಯೊಂದು ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ.

ಹಾಡಿನ ದೃಶ್ಯಗಳು ‘ಪ್ರಚೋದನಾತ್ಮಕ ಮತ್ತು ಅಶ್ಲೀಲ’ವಾಗಿವೆ ಎಂದು ಆರೋಪಿಸಿರುವ ದಾರುಲ್ ಇಫ್ತಾ ಸಂಸ್ಥೆ, ಇಂತಹ ವಿಷಯಗಳು ಧಾರ್ಮಿಕ ಮೌಲ್ಯಗಳಿಗೆ ವಿರುದ್ಧವೆಂದು ಹೇಳಿದೆ.

ಈ ವಿವಾದ ರಾಷ್ಟ್ರಮಟ್ಟದಲ್ಲೂ ಪ್ರತಿಧ್ವನಿಸಿದ್ದು, ಲೋಕಸಭೆ ಅಧಿವೇಶನದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಾಡಿನ ನಿಷೇಧವನ್ನು ಘೋಷಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.

ಇದರ ನಡುವೆ ರಾಷ್ಟ್ರೀಯ ಮಹಿಳಾ ಆಯೋಗವು ನೋರಾ ಫತೇಹಿ, ಸಂಜಯ್ ದತ್ ಹಾಗೂ ಗೀತರಚನೆಕಾರರಿಗೆ ನೋಟಿಸ್ ಜಾರಿ ಮಾಡಿದೆ.

ವಿವಾದ ಹೆಚ್ಚುತ್ತಿರುವ ಸಂದರ್ಭದಲ್ಲೇ ನೋರಾ ಫತೇಹಿ ಸ್ಪಷ್ಟನೆ ನೀಡಿ, ಹಾಡಿನ ಹಿಂದಿ ಆವೃತ್ತಿಯ ವಿಷಯಗಳು ತನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ತಾನು ಈ ವಿವಾದದಿಂದ ದೂರವಿರಲು ಪ್ರಯತ್ನಿಸಿದ್ದಾರೆ.

RCB ಅಭಿಮಾನಿಗಳಿಗೆ ಬಂಪರ್ ಆಫರ್: ಟಿಕೆಟ್ ಇದ್ದರೆ ಮೆಟ್ರೋದಲ್ಲಿ ಉಚಿತ ಪ್ರಯಾಣ!

ಬೆಂಗಳೂರು: ಐಪಿಎಲ್ ಆರಂಭಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಭಿಮಾನಿಗಳಿಗೆ ವಿಶೇಷ ಸೌಲಭ್ಯ ಘೋಷಿಸಿದೆ. ತವರಿನ ಪಂದ್ಯಗಳಿಗೆ ಟಿಕೆಟ್ ಖರೀದಿಸುವವರಿಗೆ ‘ನಮ್ಮ ಮೆಟ್ರೋ’ದಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಖರೀದಿಸಿದವರಿಗೆ, ಅದರ ಜೊತೆಗೆ ಮೆಟ್ರೋ ಪ್ರಯಾಣಕ್ಕಾಗಿ ಕ್ಯೂಆರ್ ಕೋಡ್ ನೀಡಲಾಗುತ್ತದೆ. ಅಭಿಮಾನಿಗಳು ಮೆಟ್ರೋ ನಿಲ್ದಾಣಗಳಲ್ಲಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಉಚಿತ ಪ್ರಯಾಣ ಸೌಲಭ್ಯ ಪಡೆಯಬಹುದು.

ಟಿಕೆಟ್ ಖರೀದಿ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಾತ್ರ ಲಭ್ಯವಿದ್ದು, ತಂಡದ ಅಧಿಕೃತ ವೆಬ್‌ಸೈಟ್ ಅಥವಾ ಆಪ್ ಮೂಲಕ ಪಡೆಯಬಹುದು. ಟಿಕೆಟ್ ಮಾರಾಟದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಯಾವುದೇ ಅನಧಿಕೃತ ವೆಬ್‌ಸೈಟ್ ಅಥವಾ ವ್ಯಕ್ತಿಗಳಿಂದ ಟಿಕೆಟ್ ಖರೀದಿಸಬಾರದು ಎಂದು ಫ್ರಾಂಚೈಸಿ ಎಚ್ಚರಿಕೆ ನೀಡಿದೆ.

ಪಂದ್ಯ ವೀಕ್ಷಕರಿಗೆ ಸೀಮಿತ ಪಾರ್ಕಿಂಗ್ ಸೌಲಭ್ಯವನ್ನು ಮುಂಗಡವಾಗಿ ಬುಕ್ ಮಾಡುವ ಅವಕಾಶವಿದ್ದು, ಪಾರ್ಕಿಂಗ್ ಸ್ಥಳದಿಂದ ಕಬ್ಬನ್ ರಸ್ತೆವರೆಗೆ ಶಟಲ್ ಸೇವೆಯೂ ಒದಗಿಸಲಾಗುತ್ತದೆ.

2026ರ ಐಪಿಎಲ್ ಟೂರ್ನಿ ಮಾರ್ಚ್ 28ರಿಂದ ಆರಂಭವಾಗಲಿದ್ದು, ಮೊದಲ ಹಂತದ ವೇಳಾಪಟ್ಟಿ ಈಗಾಗಲೇ ಬಿಡುಗಡೆಗೊಂಡಿದೆ. ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಆರಂಭಿಕವಾಗಿ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ ರೈಸರ್ಸ್​ ಹೈದರಾಬಾದ್​  ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

 

Gold Rate Rise: ಭಾರಿ ಕುಸಿತದ ಬಳಿಕ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ! ಇಂದಿನ ದರ ಹೀಗಿದೆ?

ಬೆಂಗಳೂರು: ಚಿನ್ನದ ಬೆಲೆ ನಿನ್ನೆ ಭಾರೀ ಕುಸಿತ ಕಂಡಿದ್ದರೆ, ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ನಿನ್ನೆ ಒಂದೇ ದಿನದಲ್ಲಿ 7 ಸಾವಿರ ರೂಪಾಯಿಗೂ ಹೆಚ್ಚು ಇಳಿಕೆಯಾಗಿದ್ದ ಚಿನ್ನದ ದರ, ಇಂದು ಏರಿಕೆಯಾಗಿದೆ.

ಮಾರ್ಚ್ 20, 2026 (ಶುಕ್ರವಾರ) ರಂದು 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ 650 ರೂಪಾಯಿ ಏರಿಕೆ ಕಂಡು, 1,50,930 ರೂಪಾಯಿಗೆ ತಲುಪಿದೆ. 1 ಗ್ರಾಂ ಚಿನ್ನದ ಬೆಲೆ 65 ರೂಪಾಯಿ ಏರಿಕೆ ಆಗಿ 15,093 ರೂಪಾಯಿಗೆ ದಾಖಲಾಗಿದೆ.

ಇನ್ನೊಂದೆಡೆ, 22 ಕ್ಯಾರೆಟ್ ಚಿನ್ನದ ದರವೂ ಹೆಚ್ಚಾಗಿದೆ. 1 ಗ್ರಾಂಗೆ 60 ರೂಪಾಯಿ ಏರಿಕೆ ಆಗಿ 13,835 ರೂಪಾಯಿ ಆಗಿದೆ. 10 ಗ್ರಾಂ ಬೆಲೆ 600 ರೂಪಾಯಿ ಏರಿಕೆ ಕಂಡು, 1,38,350 ರೂಪಾಯಿಗೆ ತಲುಪಿದೆ.

ಆದರೆ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಇಂದು ಬೆಳ್ಳಿ ದರ 5,000 ರೂಪಾಯಿ ಕುಸಿತಗೊಂಡು, ಪ್ರತಿ ಕೆಜಿ ಬೆಲೆ 2,55,000 ರೂಪಾಯಿಗೆ ಇಳಿದಿದೆ.

ಇರಾನ್–ಅಮೆರಿಕಾ ಸಂಘರ್ಷ, ಡಾಲರ್ ಮೌಲ್ಯದ ಏರಿಳಿತ ಸೇರಿದಂತೆ ಅಂತರರಾಷ್ಟ್ರೀಯ ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರುಪೇರುಗಳು ಕಂಡು ಬರುತ್ತಿವೆ.

ತುಮಕೂರು ಲಾಕಪ್ ಡೆತ್: ಸಿಐಡಿ ತನಿಖೆಗೆ ಆದೇಶ – ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ತುಮಕೂರಿನಲ್ಲಿ ನಡೆದ ಲಾಕಪ್ ಡೆತ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನಿನ್ನೆ ವಿಚಾರಣೆ ನಡೆಯುವ ಸಂದರ್ಭದಲ್ಲೇ ವ್ಯಕ್ತಿ ಮೃತಪಟ್ಟಿದ್ದಾನೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದ್ದರಿಂದ ಸಿಐಡಿ ತನಿಖೆಗೆ ಆದೇಶಿಸಲಾಗಿದೆ,” ಎಂದು ಹೇಳಿದರು.

ಕುಟುಂಬಸ್ಥರು ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಸಿಐಡಿ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರುತ್ತದೆ. ಮರಣೋತ್ತರ ಪರೀಕ್ಷೆಯಲ್ಲೂ ಸ್ಪಷ್ಟತೆ ಸಿಗಲಿದೆ,” ಎಂದು ತಿಳಿಸಿದ್ದಾರೆ.

“ತನಿಖೆಯ ವರದಿ ಆಧರಿಸಿ, ಯಾರಾದರೂ ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

error: Content is protected !!