ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಇರುವ ಮುಸ್ಲೀಂ ಮೌಲ್ವಿ ಕುಳಿತಿರುವ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎನ್ ಐ ಎಗೆ ಒಪ್ಪಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಜೊತೆ ವೇದಿಕೆ ಹಂಚಿಕೊಂಡ ಮೌಲ್ವಿಯ ವಿರುದ್ದ ವಿಜಯಪುರದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ.
ಅವರಿಗೆ ಐಎಸ್ ಐ ಸಂಪರ್ಕ ಇರುವ ಬಗ್ಗೆ ನಮ್ಮ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಗಳು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ ಐಎ ಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಕುಕ್ಕರ್ ಬಾಂಬ್ ಪ್ರಕರಣದ ಬಗ್ಗೆ ಕಾಂಗ್ರೆಸ್ ನವರು ಲಘುವಾಗಿ ಪರಿಗಣಿಸಿದ್ದರು. ಆದರೆ, ಅವರಲ್ಲಿ ಐದಾರು ಜನರು ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಮುಖ್ಯಮಂತ್ರಿ ಗಳು ಮುಸ್ಲೀಂ ಸಮುದಾಯಕ್ಕೆ 10 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿರುವುದು ಓಲೈಕೆ ರಾಜಕಾರಣದ ಮುಂದುವರೆದ ಭಾಗ ಅಲ್ಲದೇ ಪ್ರಚೋದನಾಕಾರಿಯಾಗಿಯೂ ಇದೆ.
ಇಡೀ ಕಾಂಗ್ರೆಸ್ಸಿನ ನೀತಿ ನೋಡಿದಾಗ ಅವರ ಸಚಿವ ಸಂಪುಟದ ಸಹೊದ್ಯೋಗಿ ಸ್ಪೀಕರ್ನ್ ಅಲ್ಪ ಸಂಖ್ಯಾತರನ್ನು ಮಾಡಿದ್ದೇವೆ ಎಲ್ಲರೂ ಅವರ ಮುಂದೆ ಜಿ ಹುಜುರ್ ಅನಬೇಕು ಎನ್ನುತ್ತಾರೆ ಇದೊಂದು ಪ್ರಚೋದನೆ. ಸಿಎಂ ಆದವರು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು. ದೇಶದ ಸಂಪತ್ತನ್ನು ಬೆಳೆಸಲು ಎಲ್ಲರೂ ದುಡಿಯಬೇಕು. ಅದು ದೇಶಕ್ಕೆ ಇರುತ್ತದೆ. ಅದನ್ನು ಹೇಳುವ ಬದಲು ಒಂದು ಸಮುದಾಯಕ್ಕೆ ಸಂಪತ್ತು ಹಂಚಿಕೆ ಮಾಡುವ ಬಗ್ಗೆ ಹೇಳುತ್ತಾರೆ. ಇದು ಸಮಾಜ ಒಡೆಯುವ ಕೆಲಸ ಎಂದು ಹೇಳಿದರು.
ರೈತರ ಸಾಲ ವಸೂಲಿ ನಿಲ್ಲಿಸಲಿ
ರಾಜ್ಯದಲ್ಲಿ ಬರದಿಂದ ರೈತರು ಕಂಗಾಲಾಗಿದ್ದಾರೆ. ಬರಗಾಲಕ್ಕೆ ಹಣ ಬಿಡಿಗಡೆ ಮಾಡಿಲ್ಲ. ರೈತರಿಗೆ ಬೆಳೆ ಇಲ್ಲ, ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಸರ್ಕಾರ ಇದುವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಕೇಂದ್ರದ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಹಿಂದೆ ಪ್ರವಾಹ ಬಂದಾಗ ನಾವು ಒಂದು ತಿಂಗಳಲ್ಲಿ ಡಿಬಿಟಿ ಮುಖಾಂತರ ರೈತರಿಗೆ ಸುಮಾರು 2000 ಕೋಟಿ ರೂ. ಬಿಡುಗಡೆ ಮಾಡಿದ್ದೆವು. ಅವರು ಕೇವಲ 2000 ಸಾವಿರ ನೀಡುತ್ತೇನೆ ಎನ್ನುತ್ತಾರೆ.
ಇದು ರೈತರಿಗೆ ಅವಮಾನ ಮಾಡಿದಂತೆ. ಕೇಂದ್ರದ ನಿಯಮಂತಾದರೂ ಒಣ ಬೇಸಾಯಕ್ಕೆ ಪ್ರತಿ ಹೆಕ್ಟೇರ್ ಗೆ ಕನಿಷ್ಟ 6000 ರೂ, ನೀರಾವರಿಗೆ 18 ಸಾವಿರ ರೂ. ನೀಡುವ ಕೆಲಸ ಮಾಡಬೇಕು. ನಾವು ರೈತರಿಗೆ ಕಿಸಾನ್ ಸಮ್ಮಾನ್ ನೀಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ರೈತರಿಂದ ಸಾಲ ವಸೂಲಿ ನಿಲ್ಲಿಸಬೇಕು. ಕೂಡಲೆ ಹೊಸ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.