Home Blog Page 99

ಮಾನಸಿಕ ಅಸ್ವಸ್ಥನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ: ಸರ್ಕಾರ, ಪೊಲೀಸರ ವಿರುದ್ಧ ಹೈಕೋರ್ಟ್ ಕಿಡಿ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಸಣಾಪುರ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಮಾನಸಿಕ ಅಸ್ವಸ್ಥ ಯುವಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಮ್ಮ ವಿರುದ್ಧ ಯಳಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದ ಚಂದ್ರು ಬಿನ್ ಶಿವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಪೊಲೀಸರ ನಡೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಹೇಳಿಕೆಗಳನ್ನು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆ ವೇಳೆ ನ್ಯಾಯಪೀಠ, “ಇವರು ಪೊಲೀಸ್ ಅಧಿಕಾರಿಯೋ ಅಥವಾ ರಾಜಕಾರಣಿಯೋ? ರಾಜ್ಯದಲ್ಲಿ ಕಾನೂನಿನ ಪ್ರಕಾರ ಆಡಳಿತ ನಡೆಯುತ್ತಿದೆಯೇ ಅಥವಾ ವ್ಯಕ್ತಿಯೊಬ್ಬರ ಆದೇಶದಂತೆ ನಡೆಯುತ್ತಿದೆಯೇ? ಆರೋಪಿಯನ್ನು ಗಡಿಪಾರು ಮಾಡುತ್ತೇನೆ, ರೌಡಿ ಶೀಟರ್ ತೆರೆಯುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವುದು ಪೊಲೀಸ್ ಅಧಿಕಾರಿಗೆ ಶೋಭೆಯಲ್ಲ. ಹಾಗಿದ್ದರೆ ಖಾಕಿ ಸಮವಸ್ತ್ರ ಬಿಚ್ಚಿ ರಾಜಕಾರಣಿಯ ಬಟ್ಟೆ ಹಾಕಿಕೊಳ್ಳಲಿ. ಪ್ರಜಾಪ್ರಭುತ್ವದಲ್ಲಿ ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿತು.

ಇದೇ ವೇಳೆ, “ಒಬ್ಬ ಯುವಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸುವುದು ಎಂದರೆ ಏನರ್ಥ? ಇಂತಹ ಅಮಾನವೀಯ ಘಟನೆಗಳು ಈ ದೇಶದಲ್ಲಿ ನಿಂತುಹೋಗಿ ಎಷ್ಟೋ ವರ್ಷಗಳಾಗಿವೆ. ಪ್ರಜಾಪ್ರಭುತ್ವದಲ್ಲಿ ಇಂತಹ ಕೃತ್ಯಗಳು ಅಕ್ಷಮ್ಯ” ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣಕ್ಕೆ ಸಂಬಂಧಿಸಿದ ದೂರು ಹಾಗೂ ಪ್ರತಿದೂರುಗಳ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲರು, ಸುಮಾರು 100ಕ್ಕೂ ಹೆಚ್ಚು ಜನರ ಗುಂಪು ಮಾನಸಿಕ ಅಸ್ವಸ್ಥ ಯುವಕನನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಡಿಪಾರು, ರೌಡಿ ಶೀಟರ್ ಹಾಗೂ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಇದು ದೂರು ಮತ್ತು ಪ್ರತಿದೂರು ದಾಖಲಾಗಿರುವ ಪ್ರಕರಣವಾಗಿದ್ದು, ಯಾರನ್ನೂ ರಕ್ಷಿಸುವ ಉದ್ದೇಶ ಇಲ್ಲ. ಎಸ್‌ಪಿ ಅವರ ಹೇಳಿಕೆಯನ್ನು ನಕಾರಾತ್ಮಕವಾಗಿ ಪರಿಗಣಿಸಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ ಪ್ರಕಾರ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯರು ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದರು. ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಈ ಎಫ್‌ಐಆರ್‌ ರದ್ದುಪಡಿಸುವಂತೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಪೂಜೆಯ ನೆಪದಲ್ಲಿ ₹2.5 ಕೋಟಿ ವಂಚನೆ: 10 ಕೋಟಿ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ದೋಖಾ

0

ಬೆಂಗಳೂರು: ದುಷ್ಟಶಕ್ತಿ ನಿವಾರಣೆ ಹಾಗೂ ವಿಶೇಷ ಪೂಜೆ ಮಾಡುವ ನೆಪದಲ್ಲಿ ಚಾಮರಾಜಪೇಟೆಯ ಮಹಿಳೆಯೊಬ್ಬರಿಂದ ₹2.5 ಕೋಟಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹಣ ನೀಡಿದರೆ ₹10 ಕೋಟಿ ಹಿಂದಿರುಗಿಸುವುದಾಗಿ ನಂಬಿಸಿ ವಂಚಿಸಿರುವ ಆರೋಪದ ಮೇರೆಗೆ ಬಾಬಾ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರುದಾರರಾದ ಕುಮುದಾ ಅವರು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಚಾಮರಾಜಪೇಟೆಯಲ್ಲಿ ವಾಸವಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಅವರ ಪುತ್ರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು, ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸಿದ್ದರಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಆರೋಪಿಗಳು ನಂಬಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಯ ಮೇಲೆ ಸಾಲ ಪಡೆಯುವ ವಿಚಾರದಲ್ಲಿ ಪರಿಚಯವಾಗಿದ್ದ ಮಧ್ಯವರ್ತಿಗಳ ಮೂಲಕ ಅಪ್ಸರ್ ಪಾಷಾ ಎಂಬಾತನನ್ನು ‘ಬಾಬಾ’ ಎಂದು ಪರಿಚಯಿಸಲಾಗಿತ್ತು. ಬಳಿಕ ಮನೆಯಲ್ಲಿ ವಿಶೇಷ ಪೂಜೆ ನಡೆಸುವುದಾಗಿ ಹೇಳಿ ಆರಂಭದಲ್ಲೇ ₹8 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ.

ಇದಾದ ಬಳಿಕ ಇನ್ನಷ್ಟು ಹಣದ ಅಗತ್ಯವಿದೆ ಎಂದು ನಂಬಿಸಿದ ಆರೋಪಿಗಳು, ರಿಸರ್ವ್ ಬ್ಯಾಂಕ್‌ನಿಂದ ₹500 ಕೋಟಿ ಬರಲಿದ್ದು, ಅದನ್ನು ಪಡೆಯಲು ತಾತ್ಕಾಲಿಕವಾಗಿ ಹಣ ಬೇಕಾಗಿದೆ. ಈಗ ₹2.5 ಕೋಟಿ ನೀಡಿದರೆ ಬಳಿಕ ₹10 ಕೋಟಿ ಹಿಂದಿರುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳ ಮಾತು ನಂಬಿದ ಕುಮುದಾ ಅವರು ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆಯನ್ನು ₹8.5 ಕೋಟಿಗೆ ಮಾರಾಟ ಮಾಡಿ, ಅದರಲ್ಲಿ ₹2.5 ಕೋಟಿ ಆರೋಪಿಗಳಿಗೆ ನೀಡಿದ್ದಾರೆ. ಬಳಿಕ ಹಣವನ್ನು ವಾಪಸ್ ಕೇಳಿದಾಗ ಆರೋಪಿಗಳು ಹಣ ನೀಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಇಷ್ಟೇ ಅಲ್ಲದೆ, ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಈ ಸಂಬಂಧ ಬಾಬಾ ಎಂದು ಹೇಳಲಾಗಿರುವ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಸಿಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.

ಚಿನ್ನದ ಕನಸು ಭಗ್ನ: ಕಾಮನ್ವೆಲ್ತ್ ಗೇಮ್ಸ್ʼನಲ್ಲಿ ನೀರಜ್ ಚೋಪ್ರಾಗೆ ಬೆಳ್ಳಿ ಪದಕ!

0

ಗ್ಲಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ. ಚಿನ್ನದ ಪದಕದ ಪ್ರಮುಖ ಸ್ಪರ್ಧಿಯಾಗಿದ್ದ ನೀರಜ್ ಅಂತಿಮವಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ತಮ್ಮ ಅತ್ಯುತ್ತಮ ಪ್ರಯತ್ನದಲ್ಲಿ 85.83 ಮೀಟರ್ ದೂರ ಜಾವೆಲಿನ್ ಎಸೆದು ಎರಡನೇ ಸ್ಥಾನ ಪಡೆದರು. ಭಾರತದ ಮತ್ತೋರ್ವ ಅಥ್ಲೀಟ್ ಯಶ್ವೀರ್ ಸಿಂಗ್ 85.41 ಮೀಟರ್ ಎಸೆದು ಮೂರನೇ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿಕೊಂಡರು.

ಫೈನಲ್‌ಗೆ ಅರ್ಹತೆ ಪಡೆದಿದ್ದ ಭಾರತದ ಇನ್ನೋರ್ವ ಸ್ಪರ್ಧಿ ರೋಹಿತ್ ಯಾದವ್ 81.56 ಮೀಟರ್ ಎಸೆದು ಏಳನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅವರು ಪದಕ ಗೆಲ್ಲುವಲ್ಲಿ ವಿಫಲರಾದರು.

ಇತ್ತ ಶ್ರೀಲಂಕಾದ ರುಮೇಶ್ ತರಂಗ ಪತಿರಗೆ 89.75 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು.

ಜಾವೆಲಿನ್ ಫೈನಲ್ ಫಲಿತಾಂಶ

  1. ರುಮೇಶ್ ತರಂಗ ಪತಿರಗೆ (ಶ್ರೀಲಂಕಾ) – 89.75 ಮೀಟರ್ (ಚಿನ್ನ)
  2. ನೀರಜ್ ಚೋಪ್ರಾ (ಭಾರತ) – 85.83 ಮೀಟರ್ (ಬೆಳ್ಳಿ)
  3. ಯಶ್ವೀರ್ ಸಿಂಗ್ (ಭಾರತ) – 85.41 ಮೀಟರ್ (ಕಂಚು)
  4. ಆಂಡರ್ಸನ್ ಪೀಟರ್ಸ್ – 83.88 ಮೀಟರ್
  5. ಡೌ ಸ್ಮಿಟ್ – 82.88 ಮೀಟರ್
  6. ಕೆಶಾರ್ನ್ ವಾಲ್ಕಾಟ್ – 82.55 ಮೀಟರ್
  7. ರೋಹಿತ್ ಯಾದವ್ – 81.56 ಮೀಟರ್
  8. ಬೆನ್ ಈಸ್ಟ್ – 81.12 ಮೀಟರ್

ಭಾರತದ ಪರ ಇಬ್ಬರು ಅಥ್ಲೀಟ್‌ಗಳು ಪದಕ ಗೆಲ್ಲುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶದ ಪದಕ ಬೇಟೆಗೆ ಮತ್ತಷ್ಟು ಬಲ ತುಂಬಿದ್ದಾರೆ.

ಮೈಸೂರಿನಲ್ಲಿ ಪ್ರಧಾನಿ ಮೋದಿ ಭದ್ರತಾ ಕವಚ: ರಸ್ತೆ ನಿರ್ಬಂಧ, ಶಿಕ್ಷಣ ಸಂಸ್ಥೆಗಳಿಗೆ ರಜೆ, ನಗರವೇ ಹೈ ಅಲರ್ಟ್

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಪ್ರವಾಸದ ಹಿನ್ನೆಲೆಯಲ್ಲಿ ನಗರದಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಜಾರಿಗೊಂಡಿದೆ. ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ನಿರ್ಮಿಸಿರುವ ‘ವಿವೇಕ ಸ್ಮಾರಕ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಧಾನಿ ಭೇಟಿ ಹಿನ್ನೆಲೆ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಶಿಕ್ಷಣ ಸಂಸ್ಥೆಗಳಿಗೆ ರಜೆ ಹಾಗೂ ಸ್ಮಾರಕದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಭದ್ರತಾ ದೃಷ್ಟಿಯಿಂದ ವಿವೇಕ ಸ್ಮಾರಕ ಸುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದ್ದು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ, ನಗರವನ್ನು ಸಂಪೂರ್ಣ ನಿಗಾದಡಿ ಇಡಲಾಗಿದೆ.

ಮಹಾರಾಣಿ ಶಾಲೆ-ಕಾಲೇಜು, ಮಹಾರಾಜ ಕಾಲೇಜು, ಮರಿಮಲ್ಲಪ್ಪ ಶಾಲೆ-ಕಾಲೇಜು, ಸದ್ವಿದ್ಯ ಶಾಲೆ ಹಾಗೂ ರೋಟರಿ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

ನಿರ್ಬಂಧ ಇರುವ ರಸ್ತೆ ಮಾರ್ಗಗಳು

  • ಡಿಸಿ ಕಚೇರಿ ಜಂಕ್ಷನ್ – ಏಕಲವ್ಯ ವೃತ್ತ
  • ಮುಡಾ ಜಂಕ್ಷನ್ – ಡಾ. ಪದ್ಮ ವೃತ್ತ
  • ಪಡುವಾರಳ್ಳಿ ಜಂಕ್ಷನ್ – ಮೆಟ್ರೋಪೋಲ್ ವೃತ್ತ
  • ರೈಲ್ವೆ ನಿಲ್ದಾಣ ಜಂಕ್ಷನ್ – ಆರ್‌ಟಿಒ ವೃತ್ತ
  • ದಾಸಪ್ಪ ವೃತ್ತ – ಹಸು-ಕರು ವೃತ್ತ
  • ಆಕಾಶವಾಣಿ ವೃತ್ತ – ಮಾಲ್ಗುಡಿ ಜಂಕ್ಷನ್

ಪ್ರಧಾನಿ ಕಾರ್ಯಕ್ರಮ ಮುಗಿದು ನಗರ ತೊರೆಯುವವರೆಗೆ ಈ ಮಾರ್ಗಗಳಲ್ಲಿ ಸಾರ್ವಜನಿಕ ಪ್ರವೇಶ ಇರುವುದಿಲ್ಲ.

ಪ್ರವಾಸದ ಸಂಪೂರ್ಣ ವೇಳಾಪಟ್ಟಿ

ಮಧ್ಯಾಹ್ನ 2:55ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, 3:15ಕ್ಕೆ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನ ತಲುಪಲಿದ್ದಾರೆ. ಬಳಿಕ 3:25ಕ್ಕೆ ರಾಮಕೃಷ್ಣ ಆಶ್ರಮಕ್ಕೆ ತೆರಳಿ ಕೆಲ ನಿಮಿಷ ಧ್ಯಾನ ನಡೆಸಲಿದ್ದಾರೆ. 3:30ರಿಂದ 5:15ರವರೆಗೆ ವಿವೇಕ ಸ್ಮಾರಕ ಸಂಬಂಧಿತ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, 5:55ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಲಿದ್ದಾರೆ.

ಕೈ ಸ್ವಚ್ಛತೆ ಕಡೆಗಣಿಸಿದರೆ ಅಪಾಯ; ಶೀತ, ಜ್ವರ, ಸೋಂಕು ತಡೆಯಲು ಈ ಅಭ್ಯಾಸ ಮುಖ್ಯ!

0

ದಿನನಿತ್ಯದ ಜೀವನದಲ್ಲಿ ಹೆಚ್ಚು ಬಳಸುವ ಕೈಗಳ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಲವು ಸೋಂಕುಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಮೊಬೈಲ್ ಫೋನ್ ಬಳಕೆ, ಹಣದ ವ್ಯವಹಾರ, ಸಾರ್ವಜನಿಕ ಸ್ಥಳಗಳಲ್ಲಿನ ವಸ್ತುಗಳ ಸ್ಪರ್ಶ ಸೇರಿದಂತೆ ಹಲವು ಸಂದರ್ಭಗಳಲ್ಲಿ ಕೈಗಳು ವಿವಿಧ ಮೇಲ್ಮೈಗಳಿಗೆ ಸಂಪರ್ಕಕ್ಕೆ ಬರುತ್ತವೆ. ಈ ವೇಳೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಇತರ ಸೂಕ್ಷ್ಮಜೀವಿಗಳು ಕೈಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಕಲುಷಿತ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದಾಗ ಹಾಗೂ ಕೈ ತೊಳೆಯದೇ ಆಹಾರ ಸೇವಿಸಿದಾಗ ಸೂಕ್ಷ್ಮಜೀವಿಗಳು ದೇಹದೊಳಗೆ ಪ್ರವೇಶಿಸಿ ಶೀತ, ಜ್ವರ, ಫ್ಲೂ, ಅತಿಸಾರ ಹಾಗೂ ಹೊಟ್ಟೆಯ ಸೋಂಕಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ಪ್ರಕಾರ, ಸರಿಯಾದ ರೀತಿಯಲ್ಲಿ ಕೈ ತೊಳೆಯುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಬಹುದು.

ಕೈ ತೊಳೆಯುವ ಸರಿಯಾದ ವಿಧಾನ:

ಆರೋಗ್ಯ ತಜ್ಞರ ಪ್ರಕಾರ,

  • ಮೊದಲು ಹರಿಯುವ ನೀರಿನಲ್ಲಿ ಕೈಗಳನ್ನು ಒದ್ದೆ ಮಾಡಿಕೊಳ್ಳಬೇಕು.
  • ನಂತರ ಸಾಬೂನು ಹಚ್ಚಿ ಎರಡೂ ಅಂಗೈ, ಕೈಗಳ ಹಿಂಭಾಗ, ಬೆರಳುಗಳ ಮಧ್ಯಭಾಗ, ಹೆಬ್ಬೆರಳು ಹಾಗೂ ಉಗುರುಗಳ ಕೆಳಭಾಗವನ್ನು ಚೆನ್ನಾಗಿ ಉಜ್ಜಬೇಕು.
  • ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈ ತೊಳೆಯಬೇಕು.
  • ಬಳಿಕ ಸ್ವಚ್ಛವಾದ ನೀರಿನಲ್ಲಿ ಸಾಬೂನನ್ನು ಸಂಪೂರ್ಣವಾಗಿ ತೊಳೆಯಬೇಕು.
  • ಸ್ವಚ್ಛವಾದ ಟವೆಲ್ ಅಥವಾ ಏರ್ ಡ್ರೈಯರ್ ಬಳಸಿ ಕೈಗಳನ್ನು ಒಣಗಿಸಿಕೊಳ್ಳಬೇಕು.

ಸ್ಯಾನಿಟೈಸರ್ ಬಳಸುವಾಗ ಎಚ್ಚರಿಕೆ:

ಸಾಬೂನು ಮತ್ತು ನೀರು ಲಭ್ಯವಿಲ್ಲದ ಸಂದರ್ಭದಲ್ಲಿ ಕನಿಷ್ಠ ಶೇ.60 ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಸರ್ ಬಳಸಬಹುದು. ಆದರೆ ಕೈಗಳಲ್ಲಿ ಮಣ್ಣು, ಎಣ್ಣೆ ಅಥವಾ ಕೊಳಕು ಇದ್ದರೆ ಸ್ಯಾನಿಟೈಸರ್ ಪರಿಣಾಮಕಾರಿಯಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಈ ಸಂದರ್ಭಗಳಲ್ಲಿ ಕೈ ತೊಳೆಯುವುದು ಕಡ್ಡಾಯ:

  • ಅಡುಗೆ ಮಾಡುವ ಮೊದಲು ಮತ್ತು ನಂತರ
  • ಊಟ ಮಾಡುವ ಮೊದಲು
  • ಶೌಚಾಲಯ ಬಳಕೆ ಬಳಿಕ
  • ಕೆಮ್ಮಿದ ಅಥವಾ ಸೀನಿದ ನಂತರ
  • ಕಸ ಮುಟ್ಟಿದ ಬಳಿಕ
  • ಸಾಕುಪ್ರಾಣಿಗಳನ್ನು ಮುಟ್ಟಿದ ನಂತರ
  • ಸಾರ್ವಜನಿಕ ಸ್ಥಳಗಳಿಂದ ಮನೆಗೆ ಬಂದ ತಕ್ಷಣ

ಮಕ್ಕಳಲ್ಲಿ ಕೈ ಸ್ವಚ್ಛತೆ ಅಭ್ಯಾಸ ಮುಖ್ಯ:

ಶಾಲೆ, ಆಟದ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳಿಗೆ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಚಿಕ್ಕ ವಯಸ್ಸಿನಿಂದಲೇ ಕೈ ತೊಳೆಯುವ ಅಭ್ಯಾಸ ಬೆಳೆಸಿದರೆ ಹಲವು ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಹಾಯವಾಗುತ್ತದೆ.

ಕೇವಲ ನೀರಿನಿಂದ ಕೈ ತೊಳೆಯುವುದು, 20 ಸೆಕೆಂಡ್‌ಗಿಂತ ಕಡಿಮೆ ಸಮಯ ಕೈ ತೊಳೆಯುವುದು, ಉಗುರುಗಳ ಕೆಳಭಾಗ ಸ್ವಚ್ಛಗೊಳಿಸದೇ ಇರುವುದು ಸೇರಿದಂತೆ ಹಲವು ತಪ್ಪುಗಳನ್ನು ಜನರು ಮಾಡುತ್ತಾರೆ. ಇಂತಹ ಅಭ್ಯಾಸಗಳನ್ನು ಬದಲಿಸಿಕೊಂಡು ಕೈ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ವಿಜಯ್ ಕರ್ನಾಟಕ ಎಂಟ್ರಿಗೆ ಮಂಡ್ಯ ಆಕ್ರೋಶ! ಕಾವೇರಿ ವಿಚಾರಕ್ಕೆ ಬೀದಿಗಿಳಿದ ಕನ್ನಡಿಗರು

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ವಿವಾದಕ್ಕೆ ಕಾರಣವಾಗಿದ್ದು, ಮಂಡ್ಯದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಆಗಸ್ಟ್ 3ರಂದು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ವಿಜಯ್ ವಿರುದ್ಧ ‘ಗೋ ಬ್ಯಾಕ್’ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ.

ಪ್ರತಿಭಟನಾಕಾರರು ಟೀ ಕಾಯಿಸಿ, ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುತ್ತಿದೆ ಎಂದು ಆರೋಪಿಸಿದ ಅವರು, ಇದೀಗ ಮಾತುಕತೆಗಾಗಿ ಬರುತ್ತಿರುವುದನ್ನು ವಿರೋಧಿಸಿದ್ದಾರೆ.

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೂ ತಮಿಳುನಾಡು ಅಡ್ಡಿಪಡಿಸುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೊಳ್ಳದ ರೈತರು ಹಾಗೂ ಜನರ ಬೇಡಿಕೆ ಸ್ಪಷ್ಟವಾಗಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.

ಸಿಡಬ್ಲ್ಯೂಎಂಎ ಆದೇಶ ಹಾಗೂ ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ ಹಾಸನದಲ್ಲೂ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ಹಾಸನ ನಗರದಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆಗೆ ಮುಂದಾಗಿದ್ದು, ಮತ್ತೊಂದೆಡೆ ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಜಲಾಶಯಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿವೆ.

ರೈತರ ಆಕ್ರೋಶದ ನಡುವೆ ರಾಜ್ಯ ಸರ್ಕಾರ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸದಿರಲು ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್; ದರದಲ್ಲಿ ಇಳಿಕೆ, ಇಂದಿನ ರೇಟ್ ಎಷ್ಟು ಗೊತ್ತಾ?

0

ನವದೆಹಲಿ: ಚಿನ್ನ ಖರೀದಿದಾರರಿಗೆ ಸ್ವಲ್ಪ ನೆಮ್ಮದಿ ಸುದ್ದಿ ಸಿಕ್ಕಿದೆ.

ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್‌ಗೆ ಸುಮಾರು ₹35ರಷ್ಟು ಕಡಿಮೆಯಾಗಿದೆ.

ಕಳೆದ ಕೆಲವು ತಿಂಗಳಿಂದ ಚಿನ್ನದ ದರದಲ್ಲಿ ನಿರಂತರ ಏರಿಳಿತ ಮುಂದುವರಿದಿದ್ದು, ಇದೀಗ ಮತ್ತೆ ಬೆಲೆಯಲ್ಲಿ ಸಣ್ಣ ಮಟ್ಟಿನ ಬದಲಾವಣೆ ಕಂಡುಬಂದಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,32,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,44,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,32,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 23,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ:

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,816 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,422 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,220 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ.

ಕರ್ನಾಟಕದ ಜಲಾಶಯಗಳಿಗೆ ಜೀವಕಳೆ; ಹೇಮಾವತಿ ಸೇರಿ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಸುರಿದ ಮಳೆಯಿಂದ ಪ್ರಮುಖ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ರೈತರು ಹಾಗೂ ಜನರಲ್ಲಿ ಸಂತಸ ಮೂಡಿದೆ.

ಬರಗಾಲದ ಆತಂಕದಲ್ಲಿದ್ದ ಹಾಸನ ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯಕ್ಕೆ ಕಳೆದ ಒಂದೂವರೆ ತಿಂಗಳಲ್ಲಿ ಬರೋಬ್ಬರಿ 11 ಟಿಎಂಸಿ ನೀರು ಹರಿದು ಬಂದಿದೆ. ಜೂನ್ ಆರಂಭಕ್ಕೆ ಹೋಲಿಸಿದರೆ ಜಲಾಶಯದ ನೀರಿನ ಮಟ್ಟ ಸುಮಾರು 19 ಅಡಿಗಳಷ್ಟು ಏರಿಕೆಯಾಗಿದೆ.

ಕಬಿನಿ ಜಲಾಶಯದಲ್ಲಿ ಒಳಹರಿವು ಹೆಚ್ಚಳ:

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 80.08 ಅಡಿ ಇದ್ದು, ಒಟ್ಟು 17.09 ಟಿಎಂಸಿ ನೀರು ಸಂಗ್ರಹವಾಗಿದೆ. ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 7.28 ಟಿಎಂಸಿ ಇದೆ.

ಜಲಾಶಯಕ್ಕೆ 11,747 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ 60 ಮಿ.ಮೀ ಮಳೆಯಾಗಿದೆ.

ಆಲಮಟ್ಟಿ ಜಲಾಶಯ ಭರ್ತಿ ಹಂತಕ್ಕೆ:

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯ ಕೂಡ ಭರ್ತಿ ಹಂತ ತಲುಪಿದೆ.

ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಸದ್ಯ ನೀರಿನ ಮಟ್ಟ 519.00 ಮೀಟರ್ ಇದೆ.

ಆಲಮಟ್ಟಿ ಜಲಾಶಯಕ್ಕೆ 92,500 ಕ್ಯೂಸೆಕ್ ಒಳಹರಿವು ಇದ್ದು, ನದಿಗೆ 1,11,308 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ತುಂಗಾ ಡ್ಯಾಂ ಸಂಪೂರ್ಣ ಭರ್ತಿ:

ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ಡ್ಯಾಂನ 22 ಕ್ರಸ್ಟ್ ಗೇಟ್‌ಗಳನ್ನು ತೆರೆಯಲಾಗಿದ್ದು, 55,000 ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಬಿಡಲಾಗಿದೆ.

ತುಂಗಾ ಡ್ಯಾಂ ಭರ್ತಿಯಾಗಿರುವುದು ಶಿವಮೊಗ್ಗ ಸೇರಿದಂತೆ ದಾವಣಗೆರೆ, ಬಳ್ಳಾರಿ, ಹಾವೇರಿ ಹಾಗೂ ಗದಗ ಜಿಲ್ಲೆಯ ರೈತರಿಗೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ.

ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹ ಏರಿಕೆ:

ಗೊರೂರು ಹೇಮಾವತಿ ಜಲಾಶಯಕ್ಕೆ ಸದ್ಯ 11,686 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಜಲಾಶಯದ ನೀರಿನ ಮಟ್ಟ 2,890 ಅಡಿಯಿಂದ 2,909 ಅಡಿಗೆ ಏರಿಕೆಯಾಗಿದೆ. ಒಟ್ಟು 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 25.986 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ.65ರಷ್ಟು ಭರ್ತಿಯಾಗಿದೆ.

ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿನ ನಿರ್ವಹಣೆಗೆ ಅನುಕೂಲವಾಗುವ ನಿರೀಕ್ಷೆ ಮೂಡಿಸಿದೆ.

ವೈಯಕ್ತಿಕ ದಾಖಲೆಗಿಂತ ಟ್ರೋಫಿ ಮುಖ್ಯ: ಮನದಾಳದ ಮಾತು ಹಂಚಿಕೊಂಡ ಕೃನಾಲ್ ಪಾಂಡ್ಯ

0

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನುಭವಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಇತ್ತೀಚೆಗೆ ಆರ್‌ಸಿಬಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ಜೀವನ, ಕ್ರಿಕೆಟ್ ಪಯಣ ಮತ್ತು ಯಶಸ್ಸಿನ ಕುರಿತಾದ ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯಶಸ್ಸು ಮತ್ತು ಸೋಲನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಅವರು ಹೇಳಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಂಭಾಷಣೆಯ ವೇಳೆ ಮಾತನಾಡಿದ ಕೃನಾಲ್, “ನಾವು ಸೋತಾಗ ಅಥವಾ ಜೀವನದಲ್ಲಿ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದಾಗ ಅದರಿಂದ ಹೊರಬರುವುದು ಹೇಗೆ ಎಂದು ಹಲವರು ಸಲಹೆ ನೀಡುತ್ತಾರೆ. ಆದರೆ, ದೊಡ್ಡ ಯಶಸ್ಸು ಸಿಕ್ಕಾಗ ಅದನ್ನು ಹೇಗೆ ನಿಭಾಯಿಸಬೇಕು ಎಂದು ಯಾರೂ ಹೇಳುವುದಿಲ್ಲ.

ಯಶಸ್ಸನ್ನು ಜೀರ್ಣಿಸಿಕೊಳ್ಳುವುದು ಕೂಡ ದೊಡ್ಡ ಸವಾಲು. ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಮ್ರತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ” ಎಂದು ಹೇಳಿದರು. ತಮ್ಮ ಕ್ರಿಕೆಟ್ ಬದುಕಿನ ಗುರಿಯ ಬಗ್ಗೆ ಮಾತನಾಡಿದ ಅವರು, ವೈಯಕ್ತಿಕ ಸಾಧನೆಗಿಂತ ತಂಡದ ಯಶಸ್ಸಿಗೆ ಹೆಚ್ಚಿನ ಮಹತ್ವ ನೀಡುವುದಾಗಿ ತಿಳಿಸಿದರು.

“ನಾನು ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಎಷ್ಟು ರನ್ ಗಳಿಸಿದ್ದೇನೆ ಎಂಬುದಕ್ಕಿಂತ, ನನ್ನ ತಂಡ ಎಷ್ಟು ಟ್ರೋಫಿಗಳನ್ನು ಗೆದ್ದಿದೆ ಎಂಬುದೇ ನನಗೆ ಹೆಮ್ಮೆ ತರುತ್ತದೆ. ತಂಡದ ಗೆಲುವು ಯಾವಾಗಲೂ ನನ್ನ ಮೊದಲ ಆದ್ಯತೆ” ಎಂದು ಕೃನಾಲ್ ಹೇಳಿದ್ದಾರೆ.

ದೊಡ್ಡ ಪಂದ್ಯಗಳ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ದೊಡ್ಡ ವೇದಿಕೆಗಳು ನನಗಾಗಿಯೇ ಸೃಷ್ಟಿಯಾಗಿವೆ ಎಂದು ನಾನು ನಂಬುತ್ತೇನೆ. ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ಇರುವುದು ಹಾಗೂ ಪ್ರಸ್ತುತ ಕ್ಷಣದ ಮೇಲೆ ಗಮನ ಕೇಂದ್ರೀಕರಿಸುವುದು ಯಶಸ್ಸಿನ ಗುಟ್ಟು. ಹಿರಿಯರ ಆಶೀರ್ವಾದ ಮತ್ತು ದೇವರ ಕೃಪೆಯೇ ನನ್ನನ್ನು ಇಲ್ಲಿಯವರೆಗೆ ತಂದಿದೆ” ಎಂದರು.

ತಮ್ಮ ಸ್ಪರ್ಧಾತ್ಮಕ ಮನೋಭಾವದ ಬಗ್ಗೆ ಮಾತನಾಡಿದ ಕೃನಾಲ್, ಬಾಲ್ಯದಲ್ಲಿ ತಂದೆಯಿಂದ ಕಲಿತ ಶಿಸ್ತು ಮತ್ತು ಛಲವೇ ಇಂದು ತಮ್ಮ ವ್ಯಕ್ತಿತ್ವವನ್ನು ರೂಪಿಸಿದೆ ಎಂದು ನೆನಪಿಸಿಕೊಂಡರು. ಬಾಲ್ಯದ ಕಠಿಣ ಪರಿಶ್ರಮವೇ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.

ಕೃನಾಲ್ ಪಾಂಡ್ಯ ಅವರ ಈ ಮಾತುಗಳು ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲದೆ, ಜೀವನದಲ್ಲಿ ಯಶಸ್ಸಿನ ಕನಸು ಕಾಣುವ ಪ್ರತಿಯೊಬ್ಬ ಯುವಕರಿಗೂ ಪ್ರೇರಣೆಯ ಸಂದೇಶವಾಗಿದೆ. ಯಶಸ್ಸು ಬಂದಾಗ ಅಹಂಕಾರ ಪಡದೆ, ಸೋಲು ಎದುರಾದಾಗ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಯುವುದೇ ನಿಜವಾದ ಸಾಧನೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ರಾಯಚೂರಿಗೆ ಪ್ರವಾಹ ಭೀತಿ; ಕಾಡ್ಲೂರು ದೇವಸ್ಥಾನ ಜಲಾವೃತ, ನದಿ ಪಾತ್ರದ ಜನರಿಗೆ ಎಚ್ಚರಿಕೆ

ರಾಯಚೂರು: ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ.

ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ನದಿ ದಂಡೆಯಲ್ಲಿರುವ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನಕ್ಕೆ ಭಕ್ತರು ತೆರಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯ ಭರ್ತಿಯಾಗಲು ಇನ್ನೂ ಸುಮಾರು 4 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದೆ.

ಸದ್ಯ ನಾರಾಯಣಪುರ ಜಲಾಶಯಕ್ಕೆ 1.1 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ನಾರಾಯಣಪುರ ಜಲಾಶಯದ ಹೊರಹರಿವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗುವ ಹಂತ ತಲುಪಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದರೆ ರಾಯಚೂರು, ಲಿಂಗಸುಗೂರು ಹಾಗೂ ದೇವದುರ್ಗ ತಾಲೂಕುಗಳ ಹಲವು ಸೇತುವೆಗಳು ಮುಳುಗುವ ಸಾಧ್ಯತೆ ಇದೆ.

ಕೃಷ್ಣಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ನದಿ ಬಳಿ ತೆರಳದಂತೆ ಜಿಲ್ಲಾಡಳಿತ ಮನವಿ ಮಾಡಿದೆ.