ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪಂಚಮಸಾಲಿ ಸಮಾಜಕ್ಕೆ ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜಕ್ಕೆ ಕೇವಲ ಒಂದೇ ಸೀಟು ನೀಡಿ ಮೂಗಿಗೆ ತುಪ್ಪ ಸವರುವ ಕಾರ್ಯವನ್ನು ಬಿಜೆಪಿ ಮಾಡಿದೆ. ಚುನಾವಣೆ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದವರು ಬೇಕು, ಆದರೆ ಅಧಿಕಾರ ನೀಡುವ ವಿಷಯ ಬಂದಾಗ ಪಂಚಮಸಾಲಿಗಳು ಬೇಡ ಎನ್ನುವ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಲಕ್ಷ್ಮೇಶ್ವರದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜಕಾರಣಿಗಳು ಚುನಾವಣೆಗೆ ಮಾತ್ರ ಪಂಚಮಸಾಲಿ ಸಮಾಜವನ್ನು ಬಳಸಿಕೊಳ್ಳುತ್ತಾರೆ. ಸಮಾಜದ ಜನಪ್ರತಿನಿದಿಗಳಿಗೆ ಯಾವುದೇ ಪ್ರಮುಖ ಹುದ್ದೆಗಳನ್ನು ನೀಡದೆ ಅನ್ಯಾಯ ಮಾಡುತ್ತಾರೆ. ಒಬಿಸಿ ಮಿಸಲಾತಿ ಪಂಚಮಸಾಲಿ ಸಮಾಜಕ್ಕೆ ಲಭಿಸಿದರೆ ಸಮಾಜವು ಶಿಕ್ಷಣ,, ಉದ್ಯೋಗ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯ. ಕೇಂದ್ರದ ಒಬಿಸಿ ನಿಲುವನ್ನು ಗಟ್ಟಿಯಾಗಿ ಪ್ರತಿಪಾದನೆ ಮಾಡುವವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಮಾಜದ ಮುಖಂಡರನ್ನು ಸೇರಿಸಿ ಯಾರನ್ನ ಬೆಂಬಲಸಬೇಕೆಂಬ ನಿರ್ಧಾರಕ್ಕೆ ಬರುವದಾಗಿ ಶ್ರೀಗಳು ಸ್ಪಷ್ಟಪಡಿಸಿದರು.
ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗಳಿಗೆ 2ಡಿ ಮೀಸಲಾತಿ ನೀಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗಿದೆ. ಸಮುದಾಯದ ಜನ ಜಾಗೃತರಾಗಿದ್ದಾರೆ. ಈಗಾಗಲೇ ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮುದಾಯ ಸಭೆ ಮಾಡುತ್ತಿದ್ದೇವೆ. ಆ ಸಭೆಯಲ್ಲಿ ಸಮುದಾಯದ ಭಕ್ತರ ಅಭಿಪ್ರಾಯ, ಅನಿಸಿಕೆ ಸಂಗ್ರಹಿಸುತ್ತಿದ್ದೇವೆ. ಸಮುದಾಯದವರು ಚುನಾವಣೆಯಲ್ಲಿ ಏನು ಮಾಡಬೇಕು ಎಂಬುದನ್ನು ಶೀಘ್ರದಲ್ಲೇ ಘೋಷಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಮುಂಡರಗಿ, ಶಿರಹಟ್ಟಿ ತಾಲೂಕಗಳು ಸಮಾಜ ಬಾಂಧವರು ಹಾಜರಿದ್ದರು.