ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ 1 ಕೋಟಿ 10 ಲಕ್ಷ ಜನರನ್ನು ಬಡತನ ರೇಖೆಯಿಂದ ಮೆಲೇತ್ತುವ ಮೂಲಕ ರಾಜ್ಯದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಾಡಳಿತದಿಂದ ಮಂಗಳವಾರ ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಜರುಗಿದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಿದೆ. ಮಹಿಳೆಯರಲ್ಲಿ ಮನೆ ನಡೆಸಿಕೊಂಡು ಹೋಗುವ ಆತ್ಮವಿಶ್ವಾಸ ಮೂಡಿದ್ದು ಗ್ಯಾರಂಟಿ ಯೋಜನೆಯಿಂದ. ಗ್ಯಾರಂಟಿ ಯೋಜನೆಯಿಂದ ಸರ್ಕಾರವು ದಿವಾಳಿ ಆಗುತ್ತದೆ ಎಂದು ಹಲವರು ಬೊಬ್ಬೆ ಹೊಡೆದರು. ಲೋಕಸಭಾ ಚುನಾವಣೆ ನಡೆದ ತಕ್ಷಣ ಗ್ಯಾರಂಟಿ ನಿಲ್ಲುತ್ತದೆ ಎಂದು ಸುಳ್ಳು ಸುದ್ದಿ ಬಿತ್ತುತ್ತಾರೆ. ಅದಕ್ಕೆ ಗಮನ ನೀಡಬಾರದು. ಹಾಗೂ ಗ್ಯಾರಂಟಿ ಯೋಜನೆಗೆ ಅವಶ್ಯವಾಗುವ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ. ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದಂತೆ ನುಡಿದಂತೆ ನಡೆದಿದ್ದೇವೆ, ಬಡವರ, ಮದ್ಯಮ ವರ್ಗದವರ ಕಾಳಜಿ ಆಧಾರದ ಮೇಲೆ ಅವರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಇಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಮುಖಂಡರಾದ ಟಿ.ಈಶ್ವರ, ಜಿ.ಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ, ಲಕ್ಷ್ಮೇಶ್ವರ ಪುರಸಭೆ, ಶಿರಹಟ್ಟಿ ಪ.ಪಂ ಸದಸ್ಯರು, ಲಕ್ಷ್ಮೇಶ್ವರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ತಹಸೀಲ್ದಾರ ವಾಸುದೇವ ಸ್ವಾಮಿ, ಶಿರಹಟ್ಟಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ , ಶಿರಹಟ್ಟಿ ತಹಶೀಲ್ದಾರರು ಹಾಗೂ ಪ.ಪಂ. ಆಡಳಿತಾಧಿಕಾರಿ ಅನಿಲ ಬಡಿಗೇರ, ಶಿರಹಟ್ಟಿ ಆರಕ್ಷಕ ವೃತ್ತ ನಿರೀಕ್ಷಕ ನಾಗರಾಜ ಮಾಡಳ್ಳಿ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಶಿರಹಟ್ಟಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಿದ್ಧರಾಯ ಕಟ್ಟಿಮನಿ ಹಾಜರಿದ್ದರು.
ಈಶ್ವರ ಮೇಡ್ಲೇರಿ ನಿರೂಪಿಸಿದರು. ತಹಸೀಲ್ದಾರ ವಾಸುದೇವ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಹಟ್ಟಿ ತಹಸೀಲ್ದಾರ ಅನಿಲ ಬಡಿಗೇರ ಸ್ವಾಗತಿಸಿದರು. ಶಿರಹಟ್ಟಿ ತಾ.ಪಂ ಇ.ಓ ಡಾ.ನಿಂಗಪ್ಪ ಓಲೇಕಾರ ವಂದಿಸಿದರು. ಎರಡೂ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಫಲಾನುಭವಿಗಳು ಹಾಜರಿದ್ದರು.
ಪಂಚಗ್ಯಾರಂಟಿ ಯೋಜನೆಗಳಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ 44014 ಫಲಾನುಭವಿಗಳು, ಲಕ್ಷ್ಮೇಶ್ವರ ಯೋಜನೆಯಡಿಯಲ್ಲಿ 46732, ಗೃಹಜ್ಯೋತಿ 45089, ಶಕ್ತಿ ಯೋಜನೆಯಡಿಯಲ್ಲಿ 61.38 ಲಕ್ಷ, ಯುವನಿಧಿ 47 ಜನರು ಎರಡು ತಾಲೂಕುಗಳಲ್ಲಿ ಫಲಾನುಭವಿಗಳಾಗಿದ್ದಾರೆ ಎಂದು ರಾಜೇಶ ಕಲ್ಯಾಣಶೆಟ್ಟರ, ಮಂಜುಳಾ ಆಕಳದ, ಮೃತ್ಯುಂಜಯ ಗುಡ್ಡದಾನ್ವೇರಿ ಯೋಜನೆಯ ಪ್ರಗತಿ ವಿವರಿಸಿದರು.
ಇವು ಶ್ರೀಮಂತರ ಯೋಜನೆಗಳಲ್ಲ, ಬಡವರಿಗೆ ಯಾವುದೇ ಏಜೆಂಟರಿಲ್ಲದೆ ತಲುಪುತ್ತಿರುವ ಯೋಜನೆಗಳಾಗಿವೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ದಕ್ಷ ಕಾರ್ಯವೈಖರಿಯಿಂದ ಪಂಚ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುವಂತಾಗಿವೆ. ಇದಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೂ ಜೀವಂತವಾಗಿರುವುದೋ ಅಲ್ಲಿಯವರೆಗೆ ಈ ಗ್ಯಾರಂಟಿ ಯೋಜನೆಗಳು ಇರುತ್ತವೆ.
– ಜಿ.ಎಸ್. ಪಾಟೀಲ.
ಶಾಸಕರು, ಖನಿಜ ನಿಗಮದ ಅಧ್ಯಕ್ಷರು.