ವಿಜಯಸಾಕ್ಷಿ ಸುದ್ದಿ, ಡಂಬಳ : ಸ್ವಾತಂತ್ರ್ಯಾನಂತರದಲ್ಲಿಯೂ ಜನಸಾಮಾನ್ಯರ ಹಿತಕ್ಕಾಗಿ, ನಿರಂತರವಾಗಿ, ಭ್ರಷ್ಟಮುಕ್ತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆ ಎಂದರೆ ಅಂಚೆ ಇಲಾಖೆಯಾಗಿದೆ ಎಂದು ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.
ಡಂಬಳ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ, ಕೇಂದ್ರ ಸರಕಾರಗಳ ಸೇವೆಯನ್ನು ಜನತೆಗೆ ಉತ್ತಮವಾಗಿ ತಲಿಪಿಸುವ ಕೆಲಸವನ್ನು ಮಾಡುತ್ತಾ ಬರುತ್ತಿರುವ ಈ ಇಲಾಖೆಯಡಿ ನಾವೆಲ್ಲರೂ ಖಾತೆಗಳನ್ನು ಹೊಂದುವುದರ ಮೂಲಕ ಅಂಚೆ ಇಲಾಖೆಯನ್ನು ಶ್ರೀಮಂತಗೊಳಿಸೊಣ. ಅಂಚೆ ಇಲಾಖೆ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಕಟ್ಟಡಗಳಲ್ಲಿಯೇ ಸೇವೆ ಸಲ್ಲಿಸುತ್ತಿದ್ದು, ಸರಕಾರಗಳು ಸ್ವಂತ ಕಟ್ಟಡ ಒದಗಿಸಲು ಮುಂದಾಗಲಿ ಎಂದು ಹೇಳಿದರು.
ಗದಗ ಅಂಚೆ ಬ್ರ್ಯಾಂಚ್ನ ಉಪ ಅಂಚೆ ಅಧೀಕ್ಷಕ ಶ್ರೀಕಾಂತ ಜಾದವ ಮಾತನಾಡಿ, ಅಂಚೆ ಇಲಾಖೆ ಜನರ ಜೀವನಾಡಿಯಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂದೇಶವನ್ನು ರವಾನಿಸುವ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಕೇಂದ್ರ, ರಾಜ್ಯ ಸರ್ಕಾರ ಅಂಚೆ ಕಚೇರಿಯ ಮೂಲಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು, ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಚೆ ಅಧಿಕಾರಿ ರವಿ ಜಾಧವ, ನಾಗರಾಜ, ಖ್ಯಾತ ಜಾನಪದ ಕಲಾವಿದ ಹುಲಗಪ್ಪ ಜೋಂಡಿ, ಡಂಬಳ ಅಂಚೆ ಇಲಾಖೆ ಪೋಸ್ಟ ಮಾಸ್ಟರ್ ಎಚ್.ಆರ್. ಮುಳಗುಂದ, ಅಂಚೆ ಸಿಬ್ಬಂದಿಗಳಾದ ಸಂಗೀತಾ ಚಲವಾದಿ, ಸುಜಾತಾ ಸುಗುರ, ಬಿ.ಎಫ್. ಕಂಪ್ಲಿ, ಎಚ್.ಎಮ್. ಜಕ್ಲಿ, ವಾಯ್.ಎಸ್. ಕುಂಬಾರ್, ಎಸ್.ಎಮ್. ಗೋವಿನಕೊಪ್ಪ, ಗ್ರಾಮದ ಹಿರಿಯರು, ಮಹಿಳೆಯರು ಇದ್ದರು.
ಐಪಿಪಿಬಿ ವ್ಯವಸ್ಥಾಪಕ ಶಿವರಾಜ ಮಾತನಾಡಿ, ಸರಕಾರಗಳ ಉತ್ತಮ ಯೋಜನೆಗಳನ್ನು ಅಂಚೆ ಇಲಾಖೆಯಲ್ಲಿ ಹಮ್ಮಿಕೊಂಡಿದ್ದು, ಈ ಸೇವೆಗಳನ್ನು ಮನೆಯ ಬಾಗಿಲಿಗೆ ಕೊಂಡೊಯ್ಯುವುದರ ಜೊತೆಗೆ ಉಳಿತಾಯ ಖಾತೆ ತೆರೆಯುವಿಕೆ, ಐಪಿಬಿಪಿ ಖಾತೆ ತೆರೆಯುವಿಕೆ, ಆಧಾರ್ ನೋಂದಣಿ-ತಿದ್ದುಪಡಿ, ಮೈ ಸ್ಟಾಂಪ್ ಮೈಲ್ಸ್, ಅಂಚೆ ಜೀವ ವಿಮೆ, ಹೆಣ್ಣುಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಕಾರಣ ಸಾರ್ವಜನಕರು ಅಂಚೆ ಇಲಾಖೆಯೊಂದಿಗೆ ಕೈ ಜೋಡಿಸಿ ಭವಿಷ್ಯ ಜೀವನಕ್ಕೆ ಬಲ ತುಂಬಿಕೊಳ್ಳಬೇಕು ಎಂದು ಹೇಳಿದರು.