ವಿಜಯಸಾಕ್ಷಿ ಸುದ್ದಿ, ರೋಣ : ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ನಮ್ಮ ಗ್ರಾಮದಲ್ಲಿ ನರೇಗಾ ಕೆಲಸಗಳನ್ನು ನಿಡಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಹಾಗೂ ಕಾಯಕ ಬಂಧುಗಳು ಆಸಕ್ತಿಯಿಂದ ಶ್ರಮಿಸಬೇಕೆಂದು ಹುಲ್ಲೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಈರಣ್ಣ ಪತ್ತಾರ ಹೇಳಿದರು.
ಹುಲ್ಲೂರ ಗ್ರಾ.ಪಂ ಸಭಾಭವನದಲ್ಲಿ ನಡೆದ ಕಾಯಕ ಬಂಧುಗಳ ಸಭೆಯನ್ನು ಉದ್ದೇಶಿಸಿ ಮಾನಾಡಿದ ಅವರು, ಮುಂಗಾರು ಮಳೆ ಆರಂಭವಾಗುವ ಮುನ್ನವೇ ಕೂಲಿಕಾರರಿಗೆ ಕೆಲಸ ನೀಡಿ ಗ್ರಾಮ ಪಂಚಾಯಿತಿಗೆ ಕೊಟ್ಟ ನಿಗದಿತ ಗುರಿ ಸಾಧನೆಗೆ ಒತ್ತು ನೀಡುವ ಉದ್ದೇಶ ಹೊಂದಿದ್ದೇವೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ನರೇಗಾ ಕೆಲಸಕ್ಕೆ ಬರುವ ಕೂಲಿಕಾರರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ಸ್ಥಳದಲ್ಲಿ ನೆರಳು, ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಗ್ರಾ.ಪಂ ವತಿಯಿಂದ ಮಾಡಲಾಗುತ್ತಿದೆ ಎಂದರು.
ದುಡಿಯುವ ಕೈಗಳನ್ನು ನರೇಗಾ ಕೆಲಸ ನೀಡಿ ಬಲಪಡಿಸಬೇಕು. ಬೇಸಿಗೆ ಅವಧಿಯಲ್ಲಿ ಕೃಷಿ ಚಟುವಟಿಕೆಗಳ ಇಲ್ಲದಿರುವುದರಿಂದ ನರೇಗಾ ಕೆಲಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಭಾಗವಹಿಸುತ್ತಾರೆ. ಯೋಜನೆಯಡಿ ಬರುವ ಕೂಲಿಕಾರರಿಗೆ ಸರಿಯಾದ ರೀತಿಯಲ್ಲಿ ಕಾಯಕ ಬಂಧುಗಳು ಸ್ಪಂದಿಸಿ ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ, ಬಿಎಫ್ಟಿ, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಪಾಲ್ಗೊಂಡಿದ್ದರು.