ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣೆ ಹಾಗೂ ತ್ರೈಮಾಸಿಕ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಫೆಬ್ರವರಿ 11 ಮತ್ತು 12ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ.
ಚಿತ್ರದುರ್ಗ ಜಿಲ್ಲೆಯ ತಳಕು ಬೆಸ್ಕಾಂ ಉಪವಿಭಾಗದ ‘ತಳಕು 66/11 ಕೆವಿ’ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆಬ್ರವರಿ 11ರಂದು (ಬುಧವಾರ) ಕೆಪಿಟಿಸಿಎಲ್ ವತಿಯಿಂದ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೇಡರಡ್ಡಿಹಳ್ಳಿ, ತಿಮ್ಮಪ್ಪಯನಹಳ್ಳಿ,
ಎನ್.ದೇವರಹಳ್ಳಿ, ತಳಕು, ಮೊನ್ನೆಕೋಟೆ, ದೇವರೆಡ್ಡಿಹಳ್ಳಿ ಮತ್ತು ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಿರಂತರ ಜ್ಯೋತಿ ಹಾಗೂ ಕೃಷಿ ಬಳಕೆಯ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಎಇಇ ಎನ್.ಜಿ. ಮಮತಾ ಮತ್ತು ಎಂಜಿನಿಯರ್ ವೆಂಕಟೇಶ್ ಮನವಿ ಮಾಡಿದ್ದಾರೆ.
ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎಂಇಐ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿರುವ ಕಾರಣ, ಈ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ಎಜಿಬಿಜಿ ಲೇಔಟ್, ಭೈರವೇಶ್ವರ ಹೋಟೆಲ್ ಸುತ್ತಮುತ್ತ, ಕಾವೇರಿ ಲೇಔಟ್, ಬೋನ್ವಿಲ್ ಏರಿಯಾ, ಚಿಕ್ಕಸಂದ್ರ ಐಆರ್ ಲೇಔಟ್, ಗಣೇಶ ಸಾ ಮಿಲ್ ಪ್ರದೇಶ, ಕೆಂಪೇಗೌಡ ನಗರ, ಬೃಂದಾವನ ಲೇಔಟ್, ಕಲ್ಯಾಣನಗರ, ಬಾಗಲಗುಂಟೆ, ಸೌರ ಲೇಔಟ್, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಉಂಟಾಗಿದೆ.



