ವಿಜಯಸಾಕ್ಷಿ ಸುದ್ದಿ, ಗದಗ : ಮಕ್ಕಳು ಉಲ್ಲಾಸಮಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಪ್ರತಿಭಾ ಕಾರಂಜಿಯನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಶ್ರಮಿಸೋಣ. ಪ್ರತಿಭೆಗಳ ಅನಾವರಣವೇ ಪ್ರತಿಭಾ ಕಾರಂಜಿ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.
ಅವರು ಗದಗ ಶಹರ ಸರಕಾರಿ ಶಾಲೆ ನಂ. 12ರಲ್ಲಿ ಕ್ಲಸ್ಟರ್ ನಂಬರ್ ೫ರ ಪ್ರತಿಭಾ ಕಾರಂಜಿ ಕುರಿತು ಶಾಲಾ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಾತನಾಡಿದರು.
ಎಲ್ಲ ಮಕ್ಕಳು ಒಂದೇ ಕಡೆ ಕೂಡಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವದರಿಂದ ಮಕ್ಕಳಿಗೆ ಅನುಕೂಲವಾಗುವಂತೆ ನಾವೆಲ್ಲರೂ ಕಾಳಜಿ ವಹಿಸೋಣ ಎಂದರು.
ಮುಖ್ಯೋಪಾಧ್ಯಾಯೆ ಎಫ್.ಜೆ. ದಲಬಂಜನ್ ಮಾತನಾಡಿ, ಶಾಲೆಗಳಲ್ಲಿ ಮಕ್ಕಳು ತಾವು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದೇವೆ ಎಂದು ಸಂಭ್ರಮದಿಂದ ಸಹಪಾಠಿಗಳೊಂದಿಗೆ ಬಂದು ಭಾಗವಹಿಸುತ್ತಾರೆ. ನಾವೆಲ್ಲರೂ ಅವರ ಖುಷಿಗೆ ಇನ್ನಷ್ಟು ಪ್ರೋತ್ಸಾಹ ನೀಡೋಣ ಎಂದರು.
ಮುಖ್ಯೋಪಾಧ್ಯಾಯೆ ಎಂ.ಬಿ. ಬಾರಾಟಕ್ಕೆ ಮಾತನಾಡಿ, ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅಭಿನಂದನಾ ಪತ್ರದೊಂದಿಗೆ ಪದಕಗಳನ್ನು ವಿತರಿಸುವ ಕುರಿತು ವಿವರಿಸಿದರು.
ಇನ್ನೋರ್ವ ಮುಖ್ಯೋಪಾಧ್ಯಾಯೆ ಟಿ.ಎಸ್. ಮಣ್ಣೂರ ಮಾತನಾಡಿ, ಬರುವ ಮಕ್ಕಳೆಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂತಸದಿಂದ ಮರಳಲು ಪೂರಕವಾದ ಎಲ್ಲ ತಯಾರಿಯನ್ನು ಮಾಡಿಕೊಳ್ಳೋಣ ಎಂದರು.
ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಪ್ರಕಾಶ ದೊಡ್ಡಮನಿ, ಬಸವರಾಜ ಮೆಣಸಿನಕಾಯಿ, ಹಸೀನಾ ನರಗುಂದ, ಎಂ.ಎಸ್. ಸರ್ವಿ, ಸುಜಾತಾ ಡಿ.ಕೆ. ಮುಂತಾದವರು ಸಲಹೆ-ಸೂಚನೆ ನೀಡಿದರು.
ಕ್ಲಸ್ಟರ್ ನಂ. 5ರ ಸಿ.ಆರ್.ಪಿ ಎಸ್.ಸಿ.ಹಿರೇಮಠ ಮಾತನಾಡಿ, ಎಲ್ಲ ಮುಖ್ಯೋಪಾಧ್ಯಾಯರು ಆತ್ಮೀಯತೆಯಿಂದ ಉತ್ತಮ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸುತ್ತಿರುವುದಕ್ಕೆ ಅಭಿನಂದಸಿದರು.
ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ, ನೂತನ ಸಿಆರ್ಪಿ ಎಸ್.ಸಿ. ಹಿರೇಮಠ, ಮುಖ್ಯೋಪಾಧ್ಯಾಯೆ ಪಿ.ಎಸ್. ಮಣ್ಣೂರರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಐ.ಎಚ್. ಬಳಬಟ್ಟಿ ಸ್ವಾಗತಿಸಿದರು. ಸಿ.ಜಿ. ಹುಡೇದ ನಿರೂಪಿಸಿದರು. ಎಸ್.ವ್ಹಿ. ವಕ್ಕಳದ ವಂದಿಸಿದರು. ಎಸ್.ಬಿ. ಕಣಕಿ, ಮಂಜುನಾಥ ಹುಯಿಲಗೋಳ, ಜಗದೀಶ ಶೀಲವಂತರ, ಎಸ್.ಬಿ. ದೊಡ್ಡಮನಿ, ಎಸ್.ಟಿ. ಲಮಾಣಿ, ವ್ಹಿ.ಜಿ. ಪಾಟೀಲ, ಎ.ಎಂ. ಕೆಂಚರಡ್ಡಿಯವರ, ಕೆ.ಸಿ. ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಎಚ್.ಆರ್. ಕೋಣಿಮನಿ ಮಾತನಾಡಿ, ಈ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ನಮ್ಮ ಶಾಲೆಯ ಶಿಕ್ಷಕ ಸಮುದಾಯವು ಯಾವ ಕೊರತೆ ಆಗದಂತೆ ಕಾರ್ಯಕ್ರಮ ನಿರ್ವಹಿಸುತ್ತಿದ್ದು, ಈ ಕಾರ್ಯಕ್ರಮವನ್ನೂ ಯಶಸ್ವಿಗೊಳಿಸುತ್ತೇವೆ ಎಂದರು.
Advertisement