ವಿಜಯಸಾಕ್ಷಿ ಸುದ್ದಿ, ಗದಗ : ಆರೋಗ್ಯ ಇದ್ದರೆ ನಾವು ಏನನ್ನಾದರೂ ಸಾಧಿಸಬಲ್ಲೆವು. ಅದಕ್ಕಾಗಿ ಪ್ರತಿದಿನ ತಪ್ಪದೇ ಯೋಗವನ್ನು ಮಾಡಬೇಕು. ಯೋಗದಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು. ಕೇವಲ ಜೂನ್ 21ರಂದು ಯೋಗದಿನದ ಅಂಗವಾಗಿ ಮಾತ್ರ ಮಾಡುವುದಲ್ಲ, ನಮ್ಮ ಜೀವನದಲ್ಲಿ ದಿನನಿತ್ಯ ಯೋಗಭ್ಯಾಸ ಮಾಡಬೇಕೆಂದು ಗದಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಲ್ಲಿಕಾರ್ಜುನ ಎಸ್.ಉಪ್ಪಿನ ಕರೆ ನೀಡಿದರು.
ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಆಯುಷ್ ಮಂದಿರ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಪೂರ್ವಭಾವಿ ಸಭೆ, ಯೋಗೋತ್ಸವ ಕಾರ್ಯಕ್ರಮ ಮತ್ತು ಆಯುಷ್ ಪರಿಚಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಯೋಗ ದಿನವನ್ನು ಆಚರಿಸುತ್ತಿದ್ದು, ಈ ವರ್ಷದಿಂದ ಯೋಗೋತ್ಸವ ಎಂಬ 10 ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಯೋಗದಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸುವ ಉದ್ದೇಶವಾಗಿದೆ. ಅದಕ್ಕಾಗಿ ಶಾಲಾ-ಕಾಲೇಜು, ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಯೋಗದ ತರಬೇತಿಯನ್ನು ಯೋಗ ಶಿಕ್ಷಕರಿಂದ ಕೊಡಲಾಗುತ್ತಿದೆ ಎಂದು ಹೇಳಿದರು.
ಆಯುಷ್ ವೈದ್ಯಾಧಿಕಾರಿ ಡಾ. ಸಂಜೀವ ನಾರಪ್ಪನವರ ಮಾತನಾಡಿ, ಪ್ರತಿದಿನ ಕೇವಲ ಅರ್ಧ ಗಂಟೆ ಸಮಯವನ್ನು ಯೋಗಕ್ಕಾಗಿ ಮೀಸಲಿಟ್ಟರೆ ನಾವು ಜೀವನ ಪೂರ್ತಿ ಆರೋಗ್ಯವಂತರಾಗಿ ಇರಬಲ್ಲೆವು ಎಂದರು.
ಕಾರ್ಯಕ್ರಮದಲ್ಲಿ ಜಯಶ್ರೀ ಮೇವುಂಡಿ, ಕವಿತಾ, ಪಾರ್ವತಿ, ರೇಣುಕಾ ಕೆಸ್ಠೆ, ಗಂಗಕ್ಕ ಚಕ್ರಣ್ಣವರ, ಡಾ. ಅಶೋಕ ಮತ್ತಿಗಟ್ಟಿ, ಡಾ. ಸಾಯಿಪ್ರಕಾಶ, ಡಾ. ಕಮಲಾಕರ ಸೇರಿದಂತೆ ವಿದ್ಯಾರ್ಥಿಗಳು, ಯೋಗ ತರಬೇತುದಾರರಾದ ರೇಖಾ ತಿಮ್ಮನಗೌಡ್ರ, ಆಯುಷ್ ಸಿಬ್ಬಂದಿಗಳಾದ ಯಲ್ಲರಡ್ಡಿ ಬಸವರಡ್ಡಿ, ಸಲ್ಮಾ ಹಣಗಿ, ವಸತಿ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.