ಗದಗ: ಪೊಲೀಸ್ ಸರ್ಪಗಾವಲಿನ ನಡುವೆಯೂ ಶ್ರೀರಾಮ ಸೇನೆ ಕಾರ್ಯಕರ್ತರು ಜಾತ್ರೆಗೆ ನುಗ್ಗಿ ಪ್ರತಿಭಟನೆಗೆ ಮುಂದಾದ ಶ್ರೀರಾಮ ಸೇನೆಯ ಮುಖಂಡ ರಾಜು ಖಾನಪ್ಪನವರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದ ಘಟನೆ ತೋಂಟದಾರ್ಯ ಮಠದ ಬಳಿ ಜರುಗಿದೆ.
ಗದಗ ನಗರದ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಅನ್ಯ ರಾಜ್ಯದ ವ್ಯಾಪಾರಸ್ಥರನ್ನು ಕೈ ಬಿಟ್ಟು ಕನ್ನಡಿಗರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದ್ದು, ಇಂದು ಗದಗ ಬಂದ್ಗೆ ಕರೆ ಕೊಡಲಾಗಿತ್ತು.
ಬಂದ್ ನಡೆಸದಂತೆ ನಿಷೇಧಾಜ್ಞೆ ಜಾರಿ ಮಾಡಿ ಮಠದ ಸುತ್ತಲೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಇದರ ನಡುವೆಯೂ ಪೊಲೀಸರ ಕಣ್ಣುತಪ್ಪಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು, ಜೈ ಶ್ರೀರಾಮ ಘೋಷಣೆ ಕೂಗುತ್ತ ಜಾತ್ರೆಗೆ ನುಗ್ಗಿದರು.
ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣ ಪೊಲೀಸರು ಎಂಟ್ರಿ ಕೊಟ್ಟರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ನಡುವೆ ನೂಕಾಟ, ತಳ್ಳಾಟ ಏರ್ಪಟ್ಟಿತ್ತು. ಅದಲ್ಲದೆ ತೋಂಟದಾರ್ಯ ಮಠದ ವಿರುದ್ಧ ಧಿಕ್ಕಾರ ಕೂಗಿದ ಶ್ರೀರಾಮ ಸೇನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತೋಂಟದಾರ್ಯ ಮಠಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಶ್ರೀರಾಮ ಸೇನೆ ರಾಜ್ಯ ಪ್ರಧಾನಕಾರ್ಯದರ್ಶಿ ರಾಜು ಖಾನಪ್ಪನವರ್ ಸೇರಿ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಡಿ ಆರ್ ವ್ಯಾನ್ ನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.