ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಈರಪ್ಪ ರಿತ್ತಿ ಅವರು ಹಿಂದೂಗಳ ಮೇಲೆ ವಿನಾಕಾರಣ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದು, ಅವರ ಮೇಲೆ ಮೇಲಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀರಾಮಸೇನಾ ಕಾರ್ಯಕರ್ತರು ಲಕ್ಷ್ಮೇಶ್ವರದಲ್ಲಿ ಶುಕ್ರವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಈ ವೇಳೆ ಮಾತನಾಡಿದ ಶ್ರೀರಾಮಸೇನಾ ಮುಖಂಡರು, ಮನೆಯಲ್ಲಿದ್ದ ದೇವಿಹಾಳ ತಾಂಡಾದ ಸೋಮಪ್ಪ ಲಮಾಣಿ ಎಂಬ ವ್ಯಕ್ತಿಯ ಮೇಲೆ ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಸುಳ್ಳು ಪ್ರಕರಣ ದಾಖಲಿಸಿ ಮನಸೋಇಚ್ಛೆ ಥಳಿಸಿದ್ದರಿಂದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಪಿಎಸ್ಐ ಈರಣ್ಣ ರಿತ್ತಿ ಅವರು ಕಂಡ ಕಂಡವರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿ ಜಾತಿ ನಿಂದನೆ ಮಾಡಲು ಇವರಿಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಈ ಹಿಂದೆ ಇದೇ ಪಿಎಸ್ಐ ರಿತ್ತಿಯವರು ಲಕ್ಷ್ಮೇಶ್ವರದಲ್ಲಿ ನವರಾತ್ರಿ ಸಂದರ್ಭದಲ್ಲಿ ಗೋಸಾವಿ ಕುಟುಂಬದವರ ಮೇಲೆ ವಿನಾಕಾರಣ ಲಾಠಿಚಾರ್ಜ್ ನಡೆಸಿದಾಗ ಅನೇಕ ಹಿಂದೂ ಪರ ಸಂಘಟನೆಗಳು ಅವರ ಅಮಾನತ್ತಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ಹೇಳಿದರು.
ಇದೀಗ ಮತ್ತೆ ಮುಗ್ಧ ಲಂಬಾಣಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಜನವಿರೋಧಿ, ಹಿಂದೂ ವಿರೋಧಿಯಾಗಿರುವ ಪಿಎಸ್ಐ ಈರಣ್ಣ ರಿತ್ತಿ ಅವರನ್ನು ಜಿಲ್ಲೆಯಿಂದ ವರ್ಗಾಯಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.
ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಮನವಿ ಸ್ವೀಕರಿಸಿದರು. ಈ ವೇಳೆ ಶ್ರೀರಾಮ ಸೇನಾ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ, ಬಾಳಪ್ಪ ಗೋಸಾವಿ, ಬಸವರಾಜ ಚಕ್ರಸಾಲಿ, ಹರೀಶ ಗೋಸಾವಿ, ಬಸವರಾಜ ಆಲೂರ, ಆದೇಶ ಸವಣೂರ, ಕುಮಾರ ಕಣವಿ, ಪ್ರಾಣೇಶ ವ್ಯಾಪಾರಿ, ಪ್ರವೀಣ ಗುಡಗೇರಿ, ಹನುಮಂತ ರಾಮಗೇರಿ, ಕಿರಣ ಚಿಲ್ಲೂರಮಠ, ವೆಂಕಟೇಶ ಗೋಸಾವಿ, ವಿನಾಯಕ ಸಪಡ್ಲ, ಪ್ರಕಾಶ ಕುಂಬಾರ, ಪವನ ಹಗರದ, ಆಕಾಶ ಕುಂಬಾರ, ಈರಣ್ಣ ಕುಂಬಾರ, ಚಿನ್ನು ಹಾಳದೋಟದ, ಕೃಷ್ಣ ಗೋಸಾವಿ ಮುಂತಾದವರಿದ್ದರು.


