ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜಗತ್ತಿನ ಶ್ರೇಷ್ಠ ಖುಷಿಮುನಿಗಳಾಗಿದ್ದ ವೇದವ್ಯಾಸ ಮಹರ್ಷಿಗಳು ಹುಟ್ಟಿದ ದಿನವಾಗಿರುವ ಈ ಪೌರ್ಣಿಮೆಯನ್ನು ಗುರುಪೌರ್ಣಿಮೆಯಾಗಿ ಆಚರಿಸುವ ಮೂಲಕ ಗುರುವಿನ ಸ್ಮರಣೆ ಮಾಡಿಕೊಳ್ಳಲಾಗುತ್ತಿದೆ. ವ್ಯಕ್ತಿಯ ಬದುಕಿಗೆ ಸಂಸ್ಕಾರ, ಸದ್ವಿಚಾರ, ಸುಜ್ಞಾನ, ಸತ್ ಸಂಪ್ರದಾಯ, ಮಾನವೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ನಾಗರಿಕರನ್ನಾಗಿ ಮಾಡುವ ಗುರು ಸದಾ ಸ್ಮರಣೀಯ ಎಂದು ಶಿಕ್ಷಕಿ/ಸಾಹಿತಿ ನಿರ್ಮಲಾ ಅಡವಿ ಹೇಳಿದರು.
ಅವರು ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ನಡೆಯುವ ‘ಪುಲಿಗೆರೆ ಪೌರ್ಣಿಮೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ವೇದವ್ಯಾಸರ ಜನ್ಮದಿನವಾದ ಆಷಾಢ ಮಾಸದ ಶುಕ್ಲ ಪಕ್ಷದ ಪೌರ್ಣಮಿ ದಿನವನ್ನು ಗುರು ಪೌರ್ಣಮಿ ಎಂದು ಕರೆಯಲಾಗುತ್ತದೆ. ಏಕಲವ್ಯ ತನ್ನ ಗುರುಗಳಾದ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳು ಗುರು ಕಾಣಿಕೆಯಾಗಿ ನೀಡಿದ ದಿನವಿದು. ಶಿವನು ಸಪ್ತ ಋಷಿಗಳಿಗೆ ಯೋಗಾಭ್ಯಾಸ ಮಾಡಿಸಿದ ದಿನ ಬೌದ್ಧ ಧರ್ಮದ ಗುರುಗಳಾದ ಗೌತಮ ಬುದ್ಧರು ತನ್ನ ಅನುಯಾಯಿಗಳಿಗೆ ಪ್ರಥಮ ಬೋಧನೆ ನೀಡಿದ ಶ್ರೇಷ್ಠ ದಿನವೂ ಇದಾಗಿದೆ ಎಂದರು.
ಚಂಬಣ್ಣಾ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಓದುನವರ, ಪಾರ್ವತಿ ಕಳ್ಳಿಮಠ, ಸುರೇಶ ರಾಚನಾಯ್ಕರ, ಸಿದ್ದನಗೌಡ ಬಳ್ಳೊಳ್ಳಿ, ವಿರೂಪಾಕ್ಷಪ್ಪ ಆದಿ, ಬಸವರಾಜ ಪುಠಾಣಿ, ನೀಲಪ್ಪ ಕರ್ಜಕ್ಕಣ್ಣನವರ, ಎನ್.ಆರ್. ಸಾತಪೂತೆ, ಬಿ.ಎಸ್. ಈಳಗೇರ, ಎಚ್.ಜಿ. ದುರಗಣ್ಣವರ, ಸೋಮಣ್ಣ ಅಣ್ಣಿಗೇರಿ, ವೀರಣ್ಣ ಅಕ್ಕೂರ, ಸಂತೋಷ ಸಾತಪೂತೆ, ಪಿ.ಸಿ. ಕಾಳಶೆಟ್ಟಿ, ಶ್ರೀಪಾಲ ಗೊಂಗಡಿ, ಬಸವರಾಜ ಹೆಬ್ಬಾಳ, ಬಸವರಾಜ ಮೆಣಸಿನಕಾಯಿ, ಎನ್.ಎ. ತಹಸೀಲ್ದಾರ, ಎನ್.ಎಸ್. ಗೊರವರ, ಮಾಲಾ ದಂಧರಗಿ, ಸುಮಾ ಚೊಟಗಲ್, ವಿ.ಎಫ್. ಯಲಿಶಿರೂಂದ ಉಪಸ್ಥಿತರಿದ್ದರು. ಸೋಮಶೇಖರ ಕೆರಿಮನಿ, ಜಯಪ್ರಕಾಶ ಹೊಟ್ಟಿ, ಸ್ನೇಹಾ ಹೊಟ್ಟಿ, ಜಿ.ಎಸ್. ಗುಡಗೇರಿ ನಿರ್ವಹಿಸಿದರು.
ಸಿ.ಡಿ.ಪಿ.ಓ ಮೃತ್ಯಂಜಯ ಗುಡ್ಡದಾನ್ವೇರಿ ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ನೀಡಿದ `ಕಾಯಕ ರತ್ನ’ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಪೂರ್ಣಾಜಿ ಖರಾಟೆಯವರನ್ನು ಶ್ರೀಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯವರು ಮತ್ತು ಲಕ್ಷ್ಮೇಶ್ವರ ತಾಲೂಕಾ ವೈಜ್ಞಾನಿಕ ಸಂಶೋಧನಾ ಪರಿಷತ್ ಘಟಕದ ಎಲ್ಲ ಪದಾಧಿಕಾರಿಗಳು ಸನ್ಮಾನಿಸಿದರು.