ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೀಘ್ರದಲ್ಲೇ QR ಕೋಡ್ಗಳನ್ನು ಅಳವಡಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಿಐಐ ನ್ಯಾಷನಲ್ ಕಾನ್ಫೆರೆನ್ಸ್ನಲ್ಲಿ ಮಾತನಾಡಿರುವ ಅವರು, ಸ್ಮಾರ್ಟ್ ರಸ್ತೆ ಮತ್ತು ಭವಿಷ್ಯ ವಿಷಯವಾಗಿ ಭಾರತೀಯ ಕೈಗಾರಿಕಾ ಒಕ್ಕೂಟ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಮಾತನಾಡುತ್ತಿದ್ದರು.
ಹೆದ್ದಾರಿಗಳ ಉದ್ದಕ್ಕೂ ಸರ್ಕಾರದಿಂದ ಫಲಕಗಳನ್ನು ಅಳವಡಿಸಲಾಗುವುದು. ಫಲಕದಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಪ್ರಯಾಣಿಕರಿಗೆ ಗುತ್ತಿಗೆದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ತುರ್ತು ಸಹಾಯವಾಣಿ ಸಂಪರ್ಕಗಳಂತಹ ಪ್ರಮುಖ ಯೋಜನೆಯ ವಿವರಗಳ ಮಾಹಿತಿ ಸಿಗುತ್ತದೆ ಎಂದಿದ್ದಾರೆ.
ಈ ಮೂಲಕ ದೇಶಾದ್ಯಂತ ಹೆದ್ದಾರಿ ಯೋಜನೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವ ಗುರಿಯನ್ನು ಹೊಂದಿರೋದಾಗಿ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಪ್ರತಿ ಹೆದ್ದಾರಿ ಯೋಜನೆಗೆ ಯಾರು ಜವಾಬ್ದಾರರು ಎಂಬುದನ್ನು ಜನರು ಸುಲಭವಾಗಿ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂಬ ಮಾಹಿತಿಯನ್ನು ನಿತಿನ್ ಗಡ್ಕರಿ ನೀಡಿದರು.


