ಉಡುಪಿ:- ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಸ್ಯ ನಟ ಹಾಗೂ ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು 62 ವರ್ಷ ವಯಸ್ಸಿನವರಾಗಿದ್ದರು. ಧಾರವಾಡ ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ರಾಜು ತಾಳಿಕೋಟೆ, ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಂತರ ಸಿನಿಮಾರಂಗದಲ್ಲೂ ಹೆಸರು ಮಾಡಿದ್ದರು. ‘ಮನಸಾರೆ’, ‘ಪಂಚರಂಗಿ’, ‘ಅಲೆಮಾರಿ’, ‘ಲೈಫು ಇಷ್ಟೇನೇ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಲ್ಲೂ ಭಾಗವಹಿಸಿದ್ದರು.
ಶೈನ್ ಶೆಟ್ಟಿ ಅಭಿನಯದ ಹೊಸ ಚಿತ್ರದ ಶೂಟಿಂಗ್ ಸಲುವಾಗಿ ಅವರು ಉಡುಪಿಗೆ ಆಗಮಿಸಿದ್ದರು. ಶೂಟಿಂಗ್ ಬಳಿಕ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಭಾನುವಾರ ರಾತ್ರಿ ತೀವ್ರ ಹೃದಯಾಘಾತವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಹಿಂದೆ ಕೂಡ ಅವರಿಗೆ ಹೃದಯ ಸಂಬಂಧಿತ ತೊಂದರೆ ಆಗಿದ್ದು, ಚಿಕಿತ್ಸೆ ಪಡೆದಿದ್ದರು. ಈ ಬಾರಿ ಒತ್ತಡ ಹೆಚ್ಚಿದ್ದ ಕಾರಣ ಪುನಃ ಹೃದಯಾಘಾತವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅವರ ಅಂತ್ಯಸಂಸ್ಕಾರವನ್ನು ವಿಜಯಪುರದಲ್ಲಿ ನಡೆಸಲಾಗುತ್ತದೆ ಎಂದು ಅವರ ಪುತ್ರರು ತಿಳಿಸಿದ್ದಾರೆ.