ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಅಬ್ಬಿಗೇರಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ನಿಮಿತ್ತ ಶನಿವಾರ ಶ್ರಿಮದ್ ರಂಭಾಪುರಿ ಜ. ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಗಳಿಂದ ಜರುಗಿತು.
ಶ್ರೀಗಳು ಬಂಗಾರದ ಕಿರೀಟ ಧರಿಸಿಕೊಂಡು ಅಡ್ಡಪಲ್ಲಕ್ಕಿ ಏರುವ ದೃಶ್ಯವನ್ನು ಏಕಕಾಲಕ್ಕೆ ಭಕ್ತರು ವೀಕ್ಷಿಸಲು ಹಾತೊರೆಯುತ್ತಿದ್ದರು. ನಯನಮನೋಹರವಾದ ಈ ದೃಶ್ಯದಲ್ಲಿ ಶ್ರೀಗಳು ಮಂದಸ್ಮಿತರಾಗಿ ಭಕ್ತರನ್ನು ಆಶೀರ್ವಾದಿಸುತ್ತಾ ಹಸನ್ಮುಖಿಯಾಗಿ ವಿರಾಜಮಾನರಾಗಿದ್ದರು.
ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಶ್ರೀಗಳು ಬೆಳ್ಳಿಯಿಂದ ಸಿದ್ಧಪಡಿಸಿದ ಭವ್ಯ ಪಲ್ಲಕ್ಕಿಯಲ್ಲಿ ಆಸೀನರಾದರು. ನಂತರ ಪ್ರಮುಖ ಬೀದಿಗಳ ಮೂಲಕ ಪಲ್ಲಕ್ಕಿ ಉತ್ಸವದ ಮೆರವಣಿಗೆ ಸಾಗಿ ಬಂದಿತು. ಮಹಿಳಾ ಡೊಳ್ಳಿನ ತಂಡ, ವೀರಗಾಸೆ, ಕುದುರೆಕಾರರು, ಜಗ್ಗಲಿಗೆ, ಕರಡಿಮಜಲು, ವಿವಿಧ ಕಲಾ ತಂಡಗಳು, ಸಕಲ ವಾದ್ಯ, ಗ್ರಾಮದ ಭಜನಾ ತಂಡಗಳು, ಅನೇಕ ವೈಭವಗಳು ಮೆರವಣಿಗೆಯಲ್ಲಿ ಮೇಳೈಸಿದ್ದವು. ಅಬ್ಬಿಗೇರಿ, ಸುಳ್ಯ, ಬಂಕಾಪುರ, ಎಡೆಯೂರು, ಮಳಲಿ, ಅಮ್ಮಿನಭಾವಿ, ಲಕ್ಷ್ಮೇಶ್ವರ, ಹಂಪಸಾಗರ, ಮೈಸೂರು, ಸೂಡಿ ಹಲವಾರು ಮಠಾಧೀಶರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ 1008 ಪೂರ್ಣ ಕುಂಭಗಳನ್ನು ಹೊತ್ತ ಮುತ್ತೈದೆಯರು, ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದರು. ಈವೇಳೆ ಹರಗುರುಚರ ಮೂರ್ತಿಗಳು, ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಸೇರಿದಂತೆ ಅಬ್ಬಿಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಇದ್ದರು.