ಕೋಲಾರ: ಕೋರ್ಟಿನ ಆದೇಶದ ಮೇರೆಗೆ ನಾಳೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಕುರಿತು ಇಂದು ಕೋಲಾರದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಬಿಜೆಪಿ ನಿಯೋಗದೊಂದಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಹಳ ಕಡಿಮೆ ಅಂತರದಲ್ಲಿ ಅಭ್ಯರ್ಥಿ ಸೋಲು- ಗೆಲುವು ಆಗಿದೆ. ಆ ಸಂದರ್ಭದಲ್ಲಿ ಕೆಲವರ ಮಧ್ಯಪ್ರವೇಶದ ಕಾರಣದಿಂದ ನಮ್ಮ ಅಭ್ಯರ್ಥಿ ಸೋತಿದ್ದು, ಮರು ಎಣಿಕೆ ಮಾಡಿರಲಿಲ್ಲ ಎಂದರು.
ಕೊನೆ ಕ್ಷಣದಲ್ಲಿ ನಮ್ಮ ಏಜೆಂಟರನ್ನು ಒತ್ತಾಯದಿಂದ ಹೊರದಬ್ಬಿದ್ದರು. ಈ ಎಲ್ಲ ಕಾರಣದಿಂದ ನಮಗೂ ಅನುಮಾನ ಇತ್ತು. ಅದರಿಂದ ಕೋರ್ಟಿಗೆ ಹೋಗಿದ್ದು, ಆದೇಶ ಬಂದಿದೆ. ಬಳಿಕ ಸುಪ್ರೀಂ ಕೋರ್ಟಿಗೂ ಹೋಗಿದೆ ಎಂದು ವಿವರ ನೀಡಿದರು. ಯಾವುದೇ ಎಣಿಕೆ ನಡೆಯುವಾಗ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುತ್ತದೆ. ಇಡೀ ರಾಜ್ಯದ ಇತರ ಕ್ಷೇತ್ರಗಳ ಕ್ಯಾಮೆರಾ ದಾಖಲಾತಿ ಇದೆ. ಆದರೆ, ಮಾಲೂರಿನದು ಯಾಕೆ ಇಲ್ಲ ಎಂದು ಕೇಳಿದರು.
ಮತಗಳು ಹೊಂದಾಣಿಕೆ ಆಗುತ್ತಿಲ್ಲ ಎಂಬ ಆಕ್ಷೇಪವಿದೆ. ಇದು ಕೂಡ ಅನುಮಾನಕ್ಕೆ ಕಾರಣ ಎಂದರು. ನಿಷ್ಪಕ್ಷಪಾತ ಮತ್ತು ನ್ಯಾಯಯುತವಾಗಿ ಎಲ್ಲವನ್ನೂ ಎಣಿಕೆ ಮಾಡುವುದಾಗಿ ಜಿಲ್ಲಾಧಿಕಾರಿಗಳೂ ಒಪ್ಪಿದ್ದಾರೆ ಎಂದು ತಿಳಿಸಿದರು. ಇಡೀ ದೇಶದಲ್ಲಿ ಏನಾಗುತ್ತಿದೆ? ಕಾಂಗ್ರೆಸ್ ಏನು ಮಾಡುತ್ತಿದೆ? ಅದೆಲ್ಲ ನಮಗೂ ಗೊತ್ತಿದೆ ಎಂದು ಹೇಳಿದರು. ಇದು ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯಬೇಕೆಂದು ತಿಳಿಸಿದ್ದೇವೆ; ಒತ್ತಡ ಹಾಕುವವರನ್ನು ದೂರ ಇಡಲು ಕೋರಿರುವುದಾಗಿ ತಿಳಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, 1952ರಲ್ಲಿ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಸೋತಿದ್ದರಲ್ಲವೇ? ಆಗ ಮತಗಳ್ಳತನ ಮಾಡಿದ್ದು ಯಾರು ಎಂದು ಕೇಳಿದರು. 1971-72ರಲ್ಲಿ ಮತಗಳ್ಳತನ ಆಗಿದೆ ಎಂದು ರಾಜ್ ನಾರಾಯಣ್ ಅವರು ಕೋರ್ಟಿಗೆ ಹೋದಾದ ಅಲಹಾಬಾದ್ ಹೈಕೋರ್ಟ್ ಕೊಟ್ಟ ತೀರ್ಪು ಏನು? ಆ ತೀರ್ಪಿನ ಮೂಲಕ ಈ ದೇಶದಲ್ಲಿ ನಡೆದ ಗಂಡಾಂತರ ಎಂತೆಂತವು? ಈ ದೇಶಕ್ಕೆ ಬಾಬಾಸಾಹೇಬರು ಕೊಟ್ಟ ಸಂವಿಧಾನಕ್ಕೆ ಎರಡೂವರೆ ವರ್ಷ ಜೀವವೇ ಇರಲಿಲ್ಲ. ಇವತ್ತು ಕೋರ್ಟ್ಗಳು ಹೇಗೆ ಕೆಲಸ ಮಾಡುತ್ತಿವೆ? ಕೋರ್ಟ್ಗಳು ಆಗ ಆದೇಶ ಕೊಡುವಂತಿರಲಿಲ್ಲ; ಎಂಥ ಆದೇಶಗಳಾದವು? ಎಂದು ಕೇಳಿದರು.


