ಶಾಂತಿಯ ಬದುಕಿಗೆ ಧರ್ಮಾಚರಣೆ ಅವಶ್ಯಕ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಮೈಸೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶ ಮೌಲ್ಯಗಳ ಅರಿವು-ಆಚರಣೆ ಮುಖ್ಯ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಸೋಮವಾರ ಶ್ರೀರಾಮಪುರದ ಶಿವಭವನದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಮಾನವ ಜೀವನ ವ್ಯರ್ಥವಾಗುತ್ತದೆ. ಸುಖದ ಮೂಲ ಧರ್ಮದ ಆಚರಣೆಯಲ್ಲಿದೆ. ಅರಿತು ಆಚರಿಸಿ ಬಾಳುವುದೇ ನಿಜವಾದ ಧರ್ಮ. ಧರ್ಮ ಎಂಬುದು ಅಶ್ವತವೃಕ್ಷ ಇದ್ದಂತೆ. ಆ ವೃಕ್ಷದ ನೆರಳಿನಲ್ಲಿ ಸಕಲ ಜೀವರಾಶಿಗಳು ಬಾಳಿ ಬದುಕಿಸುವ ಶಕ್ತಿ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಹಿಂಸಾದಿ ಧ್ಯಾನ ಪರ್ಯತರವಾದ ದಶಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ್ದಾರೆ.

ಪ್ರತಿವರ್ಷ ಇಂಥ ಕಾರ್ಯಕ್ರಮಗಳು ಜರುಗಿದರೆ ಯುವ ಜನಾಂಗಕ್ಕೆ ಅರಿವು ಉಂಟಾಗಿ ಸನ್ಮಾರ್ಗದಲ್ಲಿ ನಡೆಯಲು ಸಹಕಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿರೂಪಾಕ್ಷ-ವಿಜಯಮ್ಮ ಮತ್ತು ಮಕ್ಕಳು ಸಂಘಟಿಸಿದ ಈ ಕಾರ್ಯದಲ್ಲಿ ಶಿವಭವನದ ಅಧ್ಯಕ್ಷ ಮಹೇಶ್ ಮೊದಲ್ಗೊಂಡು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಹಕರಿಸಿರುವುದು ಅವರಲ್ಲಿರುವ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ ಎಂದರು.

ಅರಮನೆ ಜಪದಕಟ್ಟಿ ಮಠದ ಡಾ. ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

ವಿರೂಪಾಕ್ಷ, ಟಿ.ಟಿ. ಮಹೇಶ್, ಪ್ರಸನ್ನ ಕುಮಾರ್, ಆದಪ್ಪ ಶೆಟ್ಟರು, ಗಿರೀಶ ಎನ್.ಜಿ, ವೀರೇಶ, ಖಂಡೇಶ್, ಅಶೋಕ ಹಾಗೂ ಕುಮಾರಸ್ವಾಮಿ ಇದ್ದರು. ಹಲವಾರು ಗಣ್ಯರಿಗೆ, ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಧನಗೂರು ಬೃಹನ್ಮಠದ ಮುಮ್ಮಡಿ ಷಡಕ್ಷರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ದಿನೇಶ್ ಶಾಸ್ತ್ರಿಗಳು ಸರ್ವರನ್ನು ಸ್ವಾಗತಿಸಿದರು.

ಸಮಾರಂಭಕ್ಕೂ ಮುನ್ನ ಶಿವಭವನದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಸಕಲ ಭಕ್ತರಿಗೆ ಶುಭ ಹಾರೈಸಿದರು.

ಇಷ್ಟಲಿಂಗಾರ್ಚನೆಯಿಂದ ಸಂಕಷ್ಟಗಳು ದೂರವಾಗಿ ಇಷ್ಟಾರ್ಥ ಫಲಗಳು ಪ್ರಾಪ್ತವಾಗುತ್ತವೆ. ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಪುಣ್ಯ ಫಲ ಪ್ರಾಪ್ತವಾಗುತ್ತದೆ. ವೈಚಾರಿಕತೆ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶಗೊಳ್ಳಬಾರದು. ಸತ್ಯ ಧರ್ಮದ ತಳಹದಿಯ ಮೇಲೆ ಮಾನವ ಜೀವನ ರೂಪಿತಗೊಂಡಾಗ ಬದುಕು ಸಮೃದ್ಧಗೊಳ್ಳುತ್ತದೆ. ಮೈಸೂರು ಮಹಾನಗರದಲ್ಲಿ ಇಷ್ಟಲಿಂಗ ಮಹಾಪೂಜೆ ಹಮ್ಮಿಕೊಂಡಿರುವುದು ಸಕಲ ಭಕ್ತರಿಗೆ ಹರುಷವನ್ನು ಉಂಟುಮಾಡಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು.


Spread the love

LEAVE A REPLY

Please enter your comment!
Please enter your name here