ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೇಲ್ ಮೇಲೆ ಹೊರ ಬಂದಿರುವ ದರ್ಶನ್ ಅವರ ನಡೆಗೆ ಕೋರ್ಟ್ ಅಸಮಾಧಾನ ಹೊರ ಹಾಕಿದೆ. ಎಸ್, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಅವರು ವಿಚಾರಣೆಗೆ ಹಾಜರಾಗದಿದ್ದಕ್ಕೆ 57ನೇ ಸಿಸಿಹೆಚ್ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇಂದು ದರ್ಶನ್ ಕೋರ್ಟ್ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆ ಸಂದರ್ಭದಲ್ಲಿ ವಕೀಲರು, ದರ್ಶನ್ ಅವರಿಗೆ ಬೆನ್ನು ನೋವಿದೆ. ಹೀಗಾಗಿ ವಿಚಾರಣೆಗೆ ಬರಲು ವಿನಾಯಿತಿ ಕೋರಿದರು.
ಈ ವೇಳೆ ನ್ಯಾಯಾಧೀಶರು ವಿಚಾರಣೆಗೆ ಆರೋಪಿಗಳು ಗೈರಾಗುವುದು ಸರಿಯಲ್ಲ. ವಿಚಾರಣೆ ಇದ್ದಾಗ ಆರೋಪಿಗಳು ಹಾಜರಾಗಲೇಬೇಕು. ವಿನಾಯಿತಿಗೆ ಮನವಿ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ದರ್ಶನ್ ಮನೆಯಿಂದ ಜಪ್ತಿ ಮಾಡಿಕೊಂಡಿದ್ದ 75 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ವೇಳೆ ಕೋರ್ಟ್, ಆದಾಯ ತೆರಿಗೆ ಇಲಾಖೆ ವಾದ ಮಂಡಿಸಿದ ಬಳಿಕ ಆದೇಶ ನೀಡುವುದಾಗಿ ಹೇಳಿ ಮೇ 20ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. ಈ ವೇಳೆ ತನಿಖೆ ವೇಳೆ ಜಪ್ತಿ ಮಾಡಿದ್ದ ಮೊಬೈಲ್ಗಳ ಹಿಂತಿರುಗಿಸಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದರು.
ಇಂದಿನ ವಿಚಾರಣೆಗೆ ಪವಿತ್ರಾ ಗೌಡ ಮತ್ತು ಉಳಿದ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದರು.