ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಗೊಜನೂರ ಗ್ರಾಮದ ಸರಹದ್ದಿನಲ್ಲಿ ಬರುವ ಸುಮಾರು 300 ಎಕರೆಗೂ ಅಧಿಕ ರೈತರ ಜಮೀನುಗಳಿಗೆ ತಲುಪಲು ದಾರಿಯಿಲ್ಲದೆ ಕೃಷಿ ಚಟುವಟಿಕೆಗಳನ್ನು ಮಾಡುವದು ದುಸ್ತರವಾಗುತ್ತಿದ್ದು, ಅದಕ್ಕಾಗಿ ಈ ಭೂಮಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ರೈತರು ಸೋಮವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತರ ಮುಖಂಡ ಚನ್ನಪ್ಪ ಷಣ್ಮುಖಿ, ಬಹುವರ್ಷಗಳಿಂದ ಇಲ್ಲಿನ ರೈತರ ಜಮೀನುಗಳಿಗೆ ಹೋಗಲು ದಾರಿಯಿಲ್ಲದೆ ಅಂದಾಜು 69 ರೈತ ಕುಟುಂಬಗಳಿಗೆ ಬಿತ್ತನೆ ಹಾಗೂ ಬೇಸಾಯ ಮಾಡಲು ತೊಂದರೆ ಆಗುತ್ತಿದೆ. ಅವರಿಗೆ ಅನೂಕೂಲ ಒದಗಿಸಬೇಕು ಎಂದು ಆಗ್ರಹಿಸಿದರು.
ಗೊಜನೂರು ಗ್ರಾಮದ ರಿ.ಸ.ನಂ 24-29, 51-55 ಜಮೀನುಗಳ ರೈತರಿಗೆ ದಾರಿಯಿಲ್ಲದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ನಿಗದಿತ ಸ್ಥಳಕ್ಕೆ ಶೀಘ್ರ ಭೇಟಿ ನೀಡಿ ಸಂಕಷ್ಟದಲ್ಲಿರುವ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡುವದಾಗಿ ಹೇಳಿದರು.
ಗ್ರೇಡ್ 2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಮೇಶ ಮುರಡಿ, ಮಂಜುನಾಥ ಸಂದಿಗೋಡ, ದಾದಾಸಾಬ್ ದೊಡ್ಡಮನಿ, ಜಗದೀಶ ಗುಂಜಳ, ಎಮ್.ಎಮ್. ಪರಸಣ್ಣನವರ, ಶೇಖರಪ್ಪ ಮುರಡಿ, ಈಶ್ವರಗೌಡ ಸಂದಿಗೋಡ, ಆರ್.ಜಿ. ಚಿಂಚಲಿ, ಪಿ.ಕೆ. ಸಂದಿಗೋಡ, ಎಮ್.ಎಮ್. ಶಿರಬಡಗಿ, ದೇವಪ್ಪ ನಿಟ್ಟೂರ, ಬಿ.ಸಿ. ಪರಸಣ್ಣನವರ ಸೇರಿದಂತೆ ಅನೇಕ ರೈತರು ಹಾಜರಿದ್ದರು.