ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸರ್ಕಾರದ ವಸತಿ ಶಾಲೆಗಳು ಗ್ರಾಮೀಣ ಭಾಗದ ಬಡ, ಪ್ರತಿಭಾವಂತ ಮಕ್ಕಳ ಆಶಾಕಿರಣ ಮತ್ತು ಶೈಕ್ಷಣಿಕ ಜೀವನದ ನೆಲೆಯಾಗಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಭಾನುವಾರ ತಾಲೂಕಿನ ಗೊಜನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2023-24ನೇ ಸಾಲಿನ ಮಹತ್ವಾಕಾಂಕ್ಷಿ ತಾಲೂಕಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ 2 ಕೋಟಿ ರೂ ವೆಚ್ಚದ ಪುನರುಜ್ಜೀವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವಸತಿ ಶಾಲೆಗಳು ಗುರುಕುಲ ಮಾದರಿಯ ಶಿಕ್ಷಣವನ್ನು ಪ್ರೇರೇಪಿಸುವಂತಾಗಿವೆ. ಅದರಲ್ಲೂ ಗೊಜನೂರಿನ ಮೊರಾರ್ಜಿ ವಸತಿ ಶಾಲೆ ಮಕ್ಕಳ ಸರ್ವತೋಮುಖ ಬೆಳವಣಿಗೆಯೊಂದಿಗೆ ಶೈಕ್ಷಣಿಕ ಸಾಧನೆಯಲ್ಲೂ ಗಮನ ಸೆಳೆದಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗೆ ಸಮಸ್ಯೆಯಿರುವುದನ್ನರಿತು ಸರ್ಕಾರ ಅನುದಾನ ಕಲ್ಪಿಸಿದೆ. ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ಕೆಆರ್ಐಡಿಎಲ್ನವರು ಕಾಮಗಾರಿಯನ್ನು ತ್ವರಿತ ಮತ್ತು ಗುಣಮಟ್ಟದಿಂದ ನಿರ್ಮಿಸಬೇಕು ಎಂದರು.
ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಹಿಂದುಳಿದ ಶಿರಹಟ್ಟಿ ಮತಕ್ಷೇತ್ರದಲ್ಲಿ ವಸತಿ ಶಾಲೆಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿವೆ. ಕ್ಷೇತ್ರದಲ್ಲಿ ಇನ್ನಷ್ಟು ವಸತಿ ಶಾಲೆಗಳಿಗೆ ಮಂಜೂರಾತಿ ಕೊಡುವಂತೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಚಲವಾದಿ, ಮಾಂತಗೌಡ ಪಾಟೀಲ, ನೀಲವ್ವ ಮಾದರ, ರಮೇಶ ದನದಮನಿ, ಸಿ.ಪಿ. ಮಾಡಳ್ಳಿ, ನಿಂಗನಗೌಡ ಪಾಟೀಲ, ಮಂಜುನಾಥ ಕಣವಿ, ಚಂದ್ರಗೌಡ ಪಾಟೀಲ, ನೀಲಪ್ಪ ಗುಡ್ಡಣ್ಣವರ, ಜಾನು ಲಮಾಣಿ, ಜ್ಯೋತಿ ಪಾಟೀಲ, ಶಂಭು ಪಾಟೀಲ, ಪಂಚಪ್ಪ ಸವಣೂರ ಸೇರಿದಂತೆ ಗ್ರಾ.ಪಂ ಸದಸ್ಯರು, ಪ್ರಾಚಾರ್ಯ ಎನ್.ಕೆ. ಹತ್ತಿಕಾಳ, ಶಿಕ್ಷಕರಾದ ನಾರಾಯಣ ಹೊಸೂರ, ಕೆ.ಪಿ. ಪಾಟೀಲ, ಶಿಕ್ಷಕರು, ನಿಲಯ ಪಾಲಕ ಅಮೀರ ನದಾಫ್ ಮುಂತಾದವರಿದ್ದರು.