ವಿಜಯಸಾಕ್ಷಿ ಸುದ್ದಿ, ರೋಣ : ಪಟ್ಟಣದ ಮುಲ್ಲಾನಭಾವಿ ಕ್ರಾಸ್ನಲ್ಲಿ ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಪವಾಡಸದೃಶವಾಗಿ ಹಿಂಬದಿ ಸವಾರ ಜೀವ ಉಳಿಸಿಕೊಂಡ ಘಟನೆ ಶನಿವಾರ ಮದ್ಯಾಹ್ನ ನಡೆದಿದೆ.
ರೋಣದಿಂದ ಸದಲಗಾ ಕಡೆಗೆ ಹೊರಟ್ಟಿದ್ದ ಬಸ್ ಮುಲ್ಲಾಭಾವಿ ಕ್ರಾಸ್ ಬಳಿ ಬರುತ್ತಿದ್ದಂತೆ ಈ ಘಟನೆ ನಡೆದಿದ್ದು, ಸಿನಿಮೀಯ ರಿತಿಯಲ್ಲಿ ಬೈಕ್ ಸವಾರರು ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಮುಲ್ಲಾನ ಭಾವಿ ಕ್ರಾಸ್ನಲ್ಲಿ ಇಕ್ಕಟ್ಟಿನ ರಸ್ತೆಯಿದ್ದು, ಇಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಈ ವಿಷಯ ಪೊಲೀಸರಿಗೆ ಅರಿವಿದ್ದರೂ ನಿಷ್ಕಾಳಜಿ ವಹಿಸುತ್ತಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ.
ಸಾರಿಗೆ ಸಂಸ್ಥೆಯ ಬಸ್ ಕ್ರಾಸ್ ಬಳಿ ಬರುತ್ತಿದ್ದಂತೆ ಬೈಕ್ ಸವಾರರು ಕೂಡ ಎದುರಿಗೆ ಬಂದಿದ್ದಾರೆ. ಈ ಸಮಯದಲ್ಲಿ ಬೈಕ್ ಬಸ್ನ ಎರಡು ಚಕ್ರದ ನಡುವೆ ಸಿಲುಕಿಕೊಂಡಿದೆ. ಇದನ್ನು ಗಮನಿಸಿದ ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿದ ಪರಿಣಾಮ ಯುವಕರಿಬ್ಬರ ಜೀವ ಉಳಿದಂತಾಗಿದೆ. ಪೊಲೀಸ್ ಇಲಾಖೆ ನಿರ್ಲಕ್ಷ್ಯ ತಾಳದೆ ಈ ವೃತ್ತದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಿ, ಸಂಚಾರ ನಿಯಮಗಳನ್ನು ಬಿಗಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.