ವಿಜಯಸಾಕ್ಷಿ ಸುದ್ದಿ, ಗದಗ : ಕಾನೂನು ವಿದ್ಯಾರ್ಥಿಗಳು ಹೊಸ ಹೊಸ ಕಾಯ್ದೆಗಳನ್ನು ನಿರಂತವಾಗಿ, ಕಠಿಣ ಪರಿಶ್ರಮದೊಂದಿಗೆ ಅಧ್ಯಯನ ಮಾಡಲು ಮುಂದಾಗಬೇಕು. ಪ್ರಸುತ್ತ ಸಮಾಜದಲ್ಲಿ ವಕೀಲರ ಪಾತ್ರ ಮುಖ್ಯವಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.
ಶಹರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಕರ್ನಾಟಕ ಲೋಕಾಯುಕ್ತರಿಂದ ಕಾನೂನು ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಲೋಕಾಯುಕ್ತ ಕಾಯ್ದೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿರಂತರ ಅಧ್ಯಯನ, ಜ್ಞಾನ ಸಂಪಾದನೆಯೇ ವಕೀಲ ವೃತ್ತಿಯ ಬಂಡವಾಳ. ಇಂಗ್ಲಿಷ್ ಭಾಷೆಯ ಪ್ರೌಢಿಮೆ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯ ತಿಳಿವಳಿಕೆ ಇದ್ದಲ್ಲಿ ವಕೀಲಿ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಲು ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತದೆ. ವಕೀಲ ವೃತ್ತಿ ನೋಬಲ್ ವೃತ್ತಿಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ವಕೀಲರ ಬಳಿ ಬರುತ್ತಾರೆ. ಹೀಗಾಗಿ ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ವಕೀಲರು ಎಲ್ಲಾ ವಿಷಯದ ಬಗ್ಗೆಯೂ ತಿಳಿದುಕೊಂಡಿರಬೇಕು ಎಂದರು.
ಕಾನೂನು ವಿದ್ಯಾರ್ಥಿಗಳು ಕೂಡ ಲೋಕಾಯುಕ್ತ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ. ಏಕೆಂದರೆ ಇಂದಿನ ದಿನಗಳಲ್ಲಿ ಕಾನೂನು ಅರಿವು ಇಲ್ಲದಿರುವ ಸಾರ್ವನಿಕರಿಗೆ ಸಾರ್ವಜನಿಕ ಅಧಿಕಾರಿಗಳು ಯಾವುದಾದರೂ ಕೆಲಸ-ಕಾರ್ಯಗಳಿಗೆ ವಿಳಂಬ ಮಾಡಿದರೆ, ಕೆಲಸಕ್ಕೆ ಹಣದ ಬೇಡಿಕೆಯಿಟ್ಟಲ್ಲಿ ನೇರವಾಗಿ ಲೋಕಾಯುಕ್ತರನ್ನು ಸಂಪರ್ಕ ಮಾಡಲು ಅವಕಾಶವಿದೆ. ಆದ್ದರಿಂದ ಕಾನೂನು ವಿದ್ಯಾರ್ಥಿಗಳಿಗೆ ಸಮಾಜ ಮತ್ತು ವೃತ್ತಿ ನಾಣ್ಯದ ಒಂದೇ ಮುಖವಾಗಿದೆ ಎಂದರು.
ಪ್ರಾಚಾರ್ಯ ಜೈಹನುಮಾನ ಎಚ್.ಕೆ ಮಾತನಾಡಿದರು. ಉಪನ್ಯಾಸಕರಾದ ಡಾ. ವಿಜಯ ಮುರದಂಡೆ, ಎಸ್.ಟಿ. ಮೂರಶಿಳ್ಳಿನ, ಡಾ. ಜ್ಯೋತಿ ಸಿ.ವಿ, ಡಾ. ಸಿ.ಬಿ. ರಣಗಟ್ಟಿಮಠ, ಡಾ. ಶ್ರೀನಿವಾಸ ಪಾಲ್ಕೊಂಡ, ಶರತ್ ದರಬಾರೆ, ಸಿ. ರಾಚಣ್ಣವರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.