HomeArt and Literatureವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ

ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಸಂತ ಶಿಕ್ಷಕ ಬಿ.ಜಿ. ಅಣ್ಣಿಗೇರಿ

For Dai;y Updates Join Our whatsapp Group

ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ವಿದ್ಯಾರ್ಥಿಯ ಬದುಕನ್ನು ರೂಪಿಸುವ ಮಾರ್ಗದರ್ಶಿ. ಈ ಮಾತಿಗೆ ಗದಗಿನ “ಗಾಂಧಿ”, “ಶಿಕ್ಷಣ ಭೀಷ್ಮ” ಹಾಗೂ “ಸಂತ ಶಿಕ್ಷಕ” ಎಂದೇ ಖ್ಯಾತರಾದ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳು ಜೀವಂತ ಉದಾಹರಣೆಯಾಗಿದ್ದರು.

ಜುಲೈ ೨೩, ೧೯೩೦ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಮುದೇನಗುಡಿ ಗ್ರಾಮದ ಬಡ ಕುಟುಂಬದಲ್ಲಿ ಗುರುಪ್ಪ ಮತ್ತು ಭೋರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಬಸವಂತಪ್ಪ ಗುರಪ್ಪ ಅಣ್ಣಿಗೇರಿ ಅವರು, ಸರಳತೆಯಲ್ಲಿಯೇ ಶ್ರೇಷ್ಠತೆಯನ್ನು ಕಂಡ ಮಹನೀಯರಾಗಿದ್ದರು. ಬಾಲ್ಯದಲ್ಲಿಯೇ ಬಾಜೀರಾವ ವೈ. ಕುಲಕರ್ಣಿ ಅವರಂತಹ ಆದರ್ಶ ಶಿಕ್ಷಕರ ಮಾರ್ಗದರ್ಶನ ಪಡೆದ ಅವರು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಆಧ್ಯಾತ್ಮಿಕ ಚಿಂತನೆ, ಧ್ಯಾನ, ಯೋಗ ಹಾಗೂ ಶಿಸ್ತಿನ ಬದುಕು ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿದ್ದವು.

೧೯೫೪ರಲ್ಲಿ ಗದಗಿನ ಮಾಡೆಲ್ ಹೈಸ್ಕೂಲ್‌ನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅಣ್ಣಿಗೇರಿ ಗುರುಗಳ ಬದುಕು ಕ್ರಮೇಣ ಸಾವಿರಾರು ವಿದ್ಯಾರ್ಥಿಗಳ ಬದುಕಿನ ಆಶಾಕಿರಣವಾಯಿತು. ಸಣ್ಣ ಕೋಣೆಯೊಂದರಲ್ಲಿ ವಾಸಿಸುತ್ತಿದ್ದ ಅವರು, ಹಳ್ಳಿಗಳಿಂದ ಬಂದ ಬಡ ವಿದ್ಯಾರ್ಥಿಗಳಿಗೆ ತಮ್ಮ ಆಶ್ರಯದಲ್ಲಿಯೇ ಉಚಿತ ಶಿಕ್ಷಣ, ಊಟ ಹಾಗೂ ವಸತಿ ಸೌಲಭ್ಯ ಒದಗಿಸುತ್ತಿದ್ದರು. ತಮ್ಮ ಸಂಬಳದ ಬಹುಪಾಲನ್ನು ವಿದ್ಯಾರ್ಥಿಗಳ ಸೇವೆಗಾಗಿಯೇ ಮೀಸಲಿಟ್ಟಿದ್ದರು.

ಬೆಳಿಗ್ಗೆ ಮತ್ತು ಸಾಯಂಕಾಲ ನೂರಾರು ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಇಂಗ್ಲಿಷ್ ಬೋಧಿಸುತ್ತಿದ್ದ ಅಣ್ಣಿಗೇರಿ ಗುರುಗಳು, ಕಠಿಣವೆನಿಸುವ ಗಣಿತ ವಿಷಯವನ್ನೂ ಅತ್ಯಂತ ಸರಳವಾಗಿ, ವಿದ್ಯಾರ್ಥಿಗಳ ಮನಮುಟ್ಟುವಂತೆ ಕಲಿಸುವ ಅಪೂರ್ವ ಸಾಮರ್ಥ್ಯ ಹೊಂದಿದ್ದರು. ಅವರ ಪಾಲಿಗೆ ಶಿಕ್ಷಣವು ಕೇವಲ ಉದ್ಯೋಗವಾಗಿರಲಿಲ್ಲ; ಅದು ಬದುಕಿನ ಧ್ಯೇಯವಾಗಿತ್ತು.

ವಿದ್ಯಾರ್ಥಿಗಳ ಸರಿ-ತಪ್ಪುಗಳನ್ನು ತಿದ್ದಿ, ಅವರಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವುದು ಅವರ ಶಿಕ್ಷಣದ ಪ್ರಮುಖ ಉದ್ದೇಶವಾಗಿತ್ತು. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಆರು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳ ಸೇವೆಯಲ್ಲಿ ತೊಡಗಿಸಿಕೊಂಡ ಅವರು, ನಿವೃತ್ತಿಯ ನಂತರವೂ ತಮ್ಮ ಬೋಧನಾ ಸೇವೆಯನ್ನು ನಿಲ್ಲಿಸಲಿಲ್ಲ. ನವೋದಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾ ತಮ್ಮ ಕೊನೆಯ ಉಸಿರಿನವರೆಗೂ ಶಿಕ್ಷಣ ಸೇವೆಯನ್ನು ಮುಂದುವರಿಸಿದರು.

ಸೆಪ್ಟೆಂಬರ್ ೫, ೨೦೧೯ರಂದು ತಮ್ಮ ೮೯ನೇ ವಯಸ್ಸಿನಲ್ಲಿ ಲಿಂಗೈಕ್ಯರಾದ ಅಣ್ಣಿಗೇರಿ ಗುರುಗಳು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ಹಾಕಿಕೊಟ್ಟ ಸೇವಾ ಪರಂಪರೆ ಇಂದಿಗೂ ಜೀವಂತವಾಗಿದೆ. ಅವರ ಪಿಂಚಣಿ ಹಣ ಹಾಗೂ ಶಿಷ್ಯರು ನೀಡಿದ ಕೊಡುಗೆಗಳಿಂದ ಸ್ಥಾಪಿತವಾದ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನವು ಅವರ ಆಶಯ ಮತ್ತು ಆದರ್ಶಗಳನ್ನು ಮುಂದುವರಿಸಿಕೊಂಡು ಸಾಗುತ್ತಿದೆ.

ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ, ಶಾಲಾ ಬ್ಯಾಗ್, ಪ್ರಮಾಣಪತ್ರ ಹಾಗೂ ಇತರ ಪ್ರೋತ್ಸಾಹಗಳನ್ನು ನೀಡುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.

ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಇಂದಿಗೂ ೮ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉಚಿತ ಬೋಧನೆ ನೀಡಲಾಗುತ್ತಿದೆ. ಹಳ್ಳಿಗಳ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ೧೪ ವಿದ್ಯಾರ್ಥಿಗಳು ಆಶ್ರಮದಲ್ಲಿ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಆಧುನಿಕ ಬೋಧನಾ ವ್ಯವಸ್ಥೆಯೊಂದಿಗೆ ತರಗತಿಗಳು ನಡೆಯುತ್ತಿದ್ದರೂ, ಅಣ್ಣಿಗೇರಿ ಗುರುಗಳು ಪ್ರತಿಪಾದಿಸಿದ ಗುರು-ಶಿಷ್ಯ ಪರಂಪರೆಯ ಸೇವಾ ಮನೋಭಾವ ಅಚಲವಾಗಿ ಮುಂದುವರಿದಿದೆ. ೨೦೨೬-೨೭ನೇ ಸಾಲಿನ ಬೇಸಿಗೆ ಶಿಬಿರದಲ್ಲಿ ಸುಮಾರು ೬೫೦ರಿಂದ ೭೦೦ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದಿರುವುದು ಈ ಸೇವಾ ಪರಂಪರೆಯ ವ್ಯಾಪ್ತಿ ಮತ್ತು ಮಹತ್ವಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶಾಲವಾದ ತರಗತಿ ಕೊಠಡಿ ನಿರ್ಮಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಇದು ಅಣ್ಣಿಗೇರಿ ಗುರುಗಳ ಕನಸಿನ ಶಿಕ್ಷಣ ಸೇವೆಯನ್ನು ಇನ್ನಷ್ಟು ವಿದ್ಯಾರ್ಥಿಗಳ ಬದುಕಿಗೆ ತಲುಪಿಸುವ ಮಹತ್ವದ ಹೆಜ್ಜೆಯಾಗಿದೆ.

ಅಣ್ಣಿಗೇರಿ ಗುರುಗಳು ಕಲ್ಲಿನಂತಿದ್ದ ವಿದ್ಯಾರ್ಥಿಗಳ ಬದುಕನ್ನು ಸುಂದರ ಮೂರ್ತಿಗಳನ್ನಾಗಿ ರೂಪಿಸಿದ ಅಪರೂಪದ ಶಿಲ್ಪಿಯಾಗಿದ್ದರು. ಅವರ ಬದುಕು ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಶಿಕ್ಷಣದ ನಿಜವಾದ ಅರ್ಥ ಕೇವಲ ಜ್ಞಾನವನ್ನು ಹಂಚುವುದಲ್ಲ, ಮತ್ತೊಬ್ಬರ ಬದುಕನ್ನು ಬೆಳಗಿಸುವುದಾಗಿದೆ.

ಗುರುಗಳು ಇಂದು ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ, ಅವರ ಆದರ್ಶ, ಶಿಸ್ತು, ಸರಳತೆ ಹಾಗೂ ನಿಸ್ವಾರ್ಥ ಸೇವೆಯ ಬೆಳಕು ಇಂದಿಗೂ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಪುಣ್ಯಸ್ಮರಣೆಯನ್ನು ಆಚರಿಸುವುದು ಎಂದರೆ ಕೇವಲ ಒಬ್ಬ ಮಹಾನ್ ಶಿಕ್ಷಕರನ್ನು ನೆನೆಯುವುದಲ್ಲ; ಅವರು ಬದುಕಿನುದ್ದಕ್ಕೂ ಪಾಲಿಸಿದ ನಿಸ್ವಾರ್ಥ ಶಿಕ್ಷಣ ಸೇವೆಯ ಆದರ್ಶವನ್ನು ಮುಂದುವರಿಸುವ ಸಂಕಲ್ಪ ಮಾಡುವುದು ಕೂಡ ಆಗಿದೆ.

ಮಂಜುಳಾ ತುಂಬರಮಟ್ಟಿ

ಶಿಕ್ಷಕಿ,

ಬಿ.ಜಿ. ಅಣ್ಣಿಗೇರಿ ಆಶ್ರಮ, ಗದಗ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img