ವಿಜಯಸಾಕ್ಷಿ ಸುದ್ದಿ, ಗದಗ
ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತು ಆಗಲ್ಲಾ, ಅವರ ತಪಸ್ಸಿನ ಬಗ್ಗೆ ಮಾತನಾಡುತ್ತೀರಾ ಎಂದು ಬಸನಗೌಡ ಯತ್ನಾಳ ಟಾಂಗ್ ನೀಡಿದ್ದಾರೆ.
ಅವರು, ಗದಗ ಕಾಟನ್ ಮಾರ್ಕೆಟ್ ರಸ್ತೆಯ ಹಿಂದೂ ಮಹಾ ಗಣಪತಿ ನೇತೃತ್ವದ ಧರ್ಮಸಭೆಯಲ್ಲಿ ಪಾಲ್ಗೊಂಡು ಯತ್ನಾಳ ಮಾತನಾಡಿದರು.
ಸಾವರ್ಕರ್ ಬಗ್ಗೆ ಮಾತನಾಡುವವರು ಅವರ ಚಪ್ಪಲಿ ಕಿಮ್ಮತ್ತಿಗೂ ಬರಲ್ಲ. ದೇಶದಲ್ಲಿನ ಸಾವರ್ಕರ್ ವಿರೋಧಿಗಳಿಗೆ ಒಂದು ಸವಾಲು ಹಾಕುತ್ತೀನಿ. ಇವರೆಲ್ಲ ತಾಕತ್ತಿದ್ದರೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸಾರ್ವಕರ್ ಅವರನ್ನು ಇಡಲಾಗಿದ್ದ ಜೈಲಿನಲ್ಲಿ ಒಂದು ವಾರ ಇದ್ದು, ಕಾಲಪಾನಿ ಶಿಕ್ಷೆಗೆ ಒಳಗಾಗಿ ಇದ್ದು ಬರಲಿ. ಅಪ್ಪನಿಗೆ ಹುಟ್ಟಿದ್ದರೆ ಒಂದು ವಾರ ಅಲ್ಲಿರಬೇಕೆಂದು ಯತ್ನಾಳ ಸವಾಲು ಹಾಕಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಪದೇ ಪದೇ ಹಿಂದೂ ಯುವಕರ ಹತ್ಯೆ ನಡೆಯುತ್ತಿದ್ದು, ರಾಜ್ಯಕ್ಕೆ ಸಮರ್ಥ ಗೃಹ ಸಚಿವರ ಅವಶ್ಯಕತೆ ಇದೆ ಎಂದು ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ.
ನನ್ನಂತವರು ರಾಜ್ಯದ ಗೃಹ ಸಚಿವರಾದರೆ, ಹಿಂದೂ ಯುವಕರ ಹತ್ಯೆ ಮಾಡುತ್ತಿರುವರರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸುತ್ತಿದ್ದೆ. ಹಿಂದೂಗಳ ರಕ್ಷಣೆಗೆ ನನ್ನಂತಹ ಸಮರ್ಥ ರಾಜ್ಯದ ಗೃಹ ಸಚಿವರಾಗಬೇಕು ಎಂದು ಯತ್ನಾಳ ಏರು ಧ್ವನಿಯಲ್ಲಿ ಹೇಳಿದರು.
ಯತ್ನಾಳ ಅವರ ಈ ಮಾತಿಗೆ ಸಭಿಕರು ಸಿಳ್ಳೆ ಹೊಡೆದು ಬೆಂಬಲ ಸೂಚಿಸಿದರು.
ದೇಶದಲ್ಲಿ ಗಣೇಶ ಹಬ್ಬಕ್ಕೆ ಯಾವುದೇ ಪರವಾನಗಿ ಬೇಕಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಗಣೇಶ ಹಬ್ಬದ ಪಾತ್ರವೂ ಇದೆ. ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣೇಶ ಹಬ್ಬ ಆಚರಣೆಗ ಆರಂಭಿಸುವ ಮೂಲಕ, ಹಿಂದೂ ಸಮಾಜವನ್ನು ಒಟ್ಟುಗೂಡಿಸಿದರು ಎಂದರು.
ಉಪವಾಸ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿಲ್ಲ ಎಂಬ ಸತ್ಯವನ್ನು ನಾವು ಅರಿಯಬೇಕಿದೆ. ಭಾರತ ಮಾತೆಯ ವೀರ ಪುತ್ರರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ರಕ್ತ ಚೆಲ್ಲಿದ ಫಲವಾಗಿ, ನಮಗೆ ಸ್ವಾತಂತ್ರ್ಯ ಲಭಿಸಿದೆ. ದೇಶಕ್ಕೆ ನೆಹರೂ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಕೊಡುಗೆ ಶೂನ್ಯ. ಆದರೂ ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು, ನಮ್ಮ ದುರದೃಷ್ಟಕರ ಎಂದು ಯತ್ನಾಳ ತೀವ್ರ ವಾಗ್ದಾಳಿ ನಡೆಸಿದರು.
ಭಾರತದ ಉಳಿವಿಗಾಗಿ ಹಿಂದೂ ಸಮಾಜ ಒಂದಾಗಬೇಕಿದೆ. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ, ಈ ದೇಶವನ್ನು ತುಂಡು ಮಾಡಲು ಪ್ರಯತ್ನಿಸುತ್ತಿರುವ ದುಷ್ಟ ಶಕ್ತಿಗಳಿಗೆ ಸೋಲಾಗಲಿದೆ. ಹಿಂದೂ ಸಮಾಜದ ಒಳಿತಿಗಾಗಿ ತಾವು ಹೋರಾಟ ಮುಂದುವರೆಸುವುದಾಗಿ ಯತ್ನಾಳ ಇದೇ ವೇಳೆ ಘೋಷಿಸಿದರು.
ಬಳಿಕ ಬಾಲಿವುಡ್ ಸ್ಟಾರ್ಗಳಾದ ಅಮೀರ್ ಖಾನ್, ಶಾರುಖ್ ಖಾನ್, ಸಲ್ಮಾನ ಖಾನ್, ಸೈಫ್ ಅಲಿಖಾನ್ ಪಾಕಿಸ್ತಾನದ ಏಜೆಂಟರಾಗಿದ್ದಾರೆ ಎಂದು ಶಾಸಕ ಯತ್ನಾಳ್ ಕಿಡಿಕಾರಿದರು. ಭಾರತದ ಅನ್ನ ತಿಂದು ಪಾಕಿಸ್ತಾನ ಪರ ವಕಲಾತು ವಹಿಸುತ್ತಾರೆ. ನಮ್ಮ ಸಿನೆಮಾ ಪ್ರಿಯರು ಸಿನೆಮಾ ನೋಡುವುದರಿಂದ ಈಗ ಇವರು ದೊಡ್ಡ ಬಂಗಲೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದರು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಾಜಿ ಪ್ರಧಾನಿ ನೆಹರು ಭಾವಚಿತ್ರ ಕೈ ಬಿಟ್ಟಿರುವುದನ್ನು ಸಮರ್ಥಿಸಿಕೊಂಡ ಯತ್ನಾಳ, ನೆಹರು ಕೊಡುಗೆ ದೇಶಕ್ಕೆ ಏನಾದರು ಇದೆಯಾ? ನಿಜವಾಗಿ ದೇಶದ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರು. ಗಾಂಧೀಜಿ ಹಠಕ್ಕೆ ಬಿದ್ದ ಕಾರಣ ನೆಹರು ಪ್ರಧಾನಿಯಾದರೇ ಹೊರತು ಯಾರಿಗೂ ಇಷ್ಟವಿರಲಿಲ್ಲ ಎಂದರು.
ಸುಮಾರು ಏಳು ದಶಕಗಳ ಬಳಿಕ ಚೀತಾ ಭಾರತಕ್ಕೆ ಮರು ಪ್ರವೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದೇ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಮರುಪರಿಚಯ ಯೋಜನೆಯಡಿ 70 ವರ್ಷಗಳ ಬಳಿಕ ಚೀತಾಗಳ ಪರಿಚಯಸಿದ್ದಾರೆ.
ಚೀತಾಗಳನ್ನು ಭಾರತಕ್ಕೆ ತರುವುದರ ಮೂಲಕ ಚೀತಾ ಸಂತತಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆದ್ರೆ ಕಾಂಗ್ರೆಸ್ ನವರು ಭಾರತ ಜೋಡು ಯಾತ್ರೆ ಮಾಡುತ್ತಿದ್ದಾರೆ. ಅದು ಭಾರತ ತೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸುಪ್ರೀಂ ಕೋರ್ಟಿನ ಆದೇಶ ಮಸೀದಿ ಮೇಲಿನ ಮೈಕ್ ಗೂ ಇದೆ, ಗಣಪತಿಗೂ ಇದೆ. ಮಸೀದಿ ಮೇಲಿನ ಮೈಕ್ ಯಾವಾಗ ಬಂದ್ ಆಗುತ್ತದೆಯೋ ಅಂದು ಗಣಪತಿ ಮುಂದಿನ ಡಿಜೆ ಬಂದ್ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈಶ್ವರಸಿಂಗ್ ಠಾಕೂರ್, ರವಿ ಶಿದ್ಲಿಂಗ ಹಾಗೂ ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.