ಸುಸ್ಥಿರ ಭಾರತದ ಭವಿಷ್ಯಕ್ಕಾಗಿ ವಿಜ್ಞಾನ

0
sir c v raman
Spread the love

ಸುಸ್ಥಿರ ಭಾರತ ಎಂದರೆ ಸ್ವಾವಲಂಬಿ ಭಾರತ. ಇದು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಆದರೆ ನಾವು ಈಗಾಗಲೇ ಅನುಭವಿಸಿದ ಕೊರೋನಾ ಸಮಯವನ್ನು ನೆನೆಸಿಕೊಂಡರೆ ನಾವೂ ಸ್ವಾವಲಂಬಿಯಾಗಿದ್ದೇವೆ, ಸುಸ್ಥಿರ ಭಾರತ ಕಟ್ಟಬಲ್ಲೆವು ಎಂಬ ನಂಬಿಕೆ ಹುಟ್ಟುತ್ತದೆ. ಉದಾಹರಣೆ ನಾವು ಸಂಶೋಧಿಸಿದ ಕೊರೋನಾ ವ್ಯಾಕ್ಸಿನ್, ಸ್ವದೇಶಿ ಪಿ.ಪಿ.ಇ ಕಿಟ್‌ಗಳು, ಸ್ವದೇಶಿ ಎನ್-95 ಮುಖಗವಸುಗಳು ಇತ್ಯಾದಿ ಆತ್ಮ ನಿರ್ಭರ ಭಾರತದ ಪೀಠಿಕೆಯಲ್ಲವೇ… ಕೇವಲ ಒಂದು ಯುದ್ಧವನ್ನು ಗೆದ್ದರಾಯಿತೆ, ನಾವಿನ್ನೂ ನಮ್ಮಲ್ಲಿಯ ಆಂತರಿಕ, ವ್ಯಾವಹಾರಿಕ, ರಾಜಕೀಯದಂತಹ ಯುದ್ಧಗಳನ್ನು ಗೆಲ್ಲಬೇಕಿದೆ. ಅಂದರೆ ಮಾತ್ರ ಸುಸ್ಥಿರ ಭಾರತ ಕಟ್ಟಲು ಸಾಧ್ಯ. ವ್ಯಾವಹಾರಿಕವಾಗಿ, ಶೈಕ್ಷಣಿಕವಾಗಿ, ದೇಶರಕ್ಷಣೆಯಂತಹ ವಿಷಯಗಳಲ್ಲದೇ ವಿಜ್ಞಾನದಿಂದ ಸುಸ್ಥಿರ ಭಾರತ ಕಟ್ಟಲು ಸಾಧ್ಯವೇ ಎಂಬುದನ್ನು ಅರ್ಥೈಸಿಕೊಳ್ಳಲು 2024ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಘೋಷವಾಕ್ಯವನ್ನು `ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ’ ಎಂದು ನೀಡಿದ್ದಾರೆ.

Advertisement

ಇಂದು ವಿಜ್ಞಾನ ಎಂದರೆ ಕೇವಲ ದೂರದರ್ಶನ, ಮೊಬೈಲ್, ಕಂಪ್ಯೂಟರ್ ಹಾಗೂ ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸುವದು ಎಂಬಂತಾಗಿದೆ. ಆದರೆ ಈ ಎಲ್ಲ ಅಧುನಿಕ ಯಂತ್ರಗಳಿಗೆ ಪ್ರಮುಖವಾದ ಶಕ್ತಿಯ ಮೂಲ ಸೌರಶಕ್ತಿಯನ್ನೇ ನಾವು ಅಲಕ್ಷಿಸುತ್ತಿದ್ದೇವೆ. ವಿಪರ್ಯಾಸ ಎನ್ನುವಂತೆ ಇದೇ ಭರತ ಖಂಡದಲ್ಲಿ 7ನೇ ನವೆಂಬರ್ 1888ರಲ್ಲಿ ತಮಿಳುನಾಡಿನ ತಂಜಾವುರು ಜಿಲ್ಲೆಯ ತಿರುವೈನಾಕಾವಲ್ ಎಂಬಲ್ಲಿ ಒಬ್ಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದವರೇ ಸರ್ ಸಿ.ವಿ. ರಾಮನ್. ಇವರು ಹುಟ್ಟಿನಿಂದಲೇ ಪ್ರತಿಭಾವಂತರು ಎನ್ನಲು ೧೪ನೇ ವಯಸ್ಸಿನಲ್ಲಿಯೇ ಬಂಗಾರ ಪದಕ ಸಹಿತ ಪ್ರಶಸ್ತಿಯೊಂದಿಗೆ ಪದವಿಯನ್ನು ಮುಗಿಸಿದರು.

18 ವರ್ಷದವರಿರುವಾಗಲೇ MA.,F.C.S ಸ್ನಾತಕೊತ್ತರ ಪದವಿಯನ್ನು ಮುಗಿಸಿ ವೈವಾಹಿಕ ಜೀವನದೊಂದಿಗೆ ಕಲ್ಕತ್ತಾ, ರಂಗೂನ, ಹಾಗೂ ನಾಗಪೂರಗಳಲ್ಲಿ ವಿತ್ತಾಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವಾಗಲೂ ವಿಜ್ಞಾನವು ಅವರನ್ನು ಕೆಣಕುತ್ತಿತ್ತು. ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಾಗಿ ಆಕಾಶವೇಕೆ ನೀಲಿ, ಸಮುದ್ರವೇಕೆ ನೀಲಿ ಎಂಬ ಜಿಜ್ಞಾಸೆ ಅವರನ್ನು `ರಾಮನ್ ಎಫೆಕ್ಟ್’ ಅಥವಾ `ರಾಮನ್ ಪರಿಣಾಮ’ವನ್ನು ಸಂಶೋಧಿಸಲು ಪ್ರಚೋದಿಸಿತು.

ಈ ಸಿದ್ಧಾಂತದ ಪ್ರಕಾರ ವಿವಿಧ ಪಾರದರ್ಶಕ ವಸ್ತುಗಳ ಮೂಲಕ ಬೆಳಕನ್ನು ಹಾಯಿಸಿದಾಗ ಬೆಳಕಿನ ಕಿರಣಗಳು ಚದುರಿ ವಿವಿಧ ವರ್ಣಪಟಲಗಳು ಹೊರಡುತ್ತವೆ. ಹಾಗೆ ಹೊರಬಿದ್ದ ಪಟಲಗಳಲ್ಲಿ ಹೊಸಗೆರೆಗಳು ಕಾಣಿಸಿಕೊಳ್ಳುತ್ತವೆ. ಈ ಗೆರೆಗಳಿಗೂ ಬೆಳಕಿನ ಚದುರುವಿಕೆಗೂ ಮೂಲ ವಸ್ತುವಿನಲ್ಲಿರುವ ಅಣು ಸಂಯೋಜನೆ ಕಾರಣ ಎಂದು ತಮ್ಮ ಸಿದ್ಧಾಂತವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಭೌತಶಾಸ್ತ ಸಂಘದ ಅಡಿಯಲ್ಲಿ ೨೮ನೇ ಫೆಬ್ರುವರಿ 1928ರಂದು ಮೊಟ್ಟ ಮೊದಲ ಬಾರಿಗೆ ಪ್ರಸ್ತುತಪಡಿಸಿದರು. ಅದರ ದ್ಯೋತಕವಾಗಿಯೇ ಪ್ರತಿ ವರ್ಷ ಫೆಬ್ರುವರಿ 28ರಂದು ನಾವು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ.

ಹಲವು ರಾಷ್ಟçಗಳ ವಿಶ್ವವಿದ್ಯಾಲಯಗಳಿಂದ ಪ್ರಶಸ್ತಿಗಳನ್ನು ಪಡೆದ ರಾಮನ್ನರಿಗೆ 1954ರಲ್ಲಿ ಭಾರತದ ಸರ್ವಶ್ರೇಷ್ಠ ಪ್ರಶಸ್ತಿಯಾದ `ಭಾರತ ರತ್ನ’ ನೀಡಿ ಗೌರವಿಸಲಾಯಿತು. ಭಾರತದ ವಿಜ್ಞಾನ ಸಂತ 21ನೇ ನವೆಂಬರ್, 1970ರಂದು ವಿಧಿವಶರಾದರು.

ರಾಷ್ಟ್ರೀಯ ವಿಜ್ಞಾನ ದಿನಚರಣೆಯಂದು, ರಾಷ್ಟೀಯ, ಅಂತಾರಾಷ್ಟ್ರೀಯ ವೈಜ್ಞಾನಿಕ ಅವಿಷ್ಕಾರಗಳನ್ನು ಪ್ರತಿಯೊಬ್ಬ ಭಾರತೀಯ ತಿಳಿದುಕೊಳ್ಳುವಂತೆ ಮಾಡುವುದಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದರಿಂದ ಪ್ರತಿಯೊಬ್ಬ ಭಾರತೀಯ ವಿಜ್ಞಾನಿಯ ಕೊಡುಗೆಯನ್ನು ಸ್ಮರಿಸುವುದರೊಂದಿಗೆ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಿ ಅವರು ತಮ್ಮ ವೃತ್ತಿ ಜೀವನವನ್ನು ಜನಪರ ಉಪಯೋಗಿ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆಸುವಂತೆ ಪ್ರೇರಣೆ ನೀಡುತ್ತದೆ.

ವಿಶ್ವದ ಸುಸ್ಥಿರತೆ ಆ ದೇಶ ಬಳಸುವ ವಿಜ್ಞಾನ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಏಕೆಂದರೆ ದೇಶದ ಭವಿಷ್ಯ ನಿಂತಿರುವುದೇ ಪರಿಸರ, ಆಹಾರ, ಶಿಕ್ಷಣ, ರಕ್ಷಣೆ ಹಾಗೂ ನಂಬಿಕೆಯ ಮೇಲೆ. ಆದ್ದರಿಂದ ಪ್ರತಿಯೊಂದು ರಾಷ್ಟçಗಳೂ ಪ್ರಜೆಗಳಿಗೆ ಪ್ರಾಥಮಿಕ ಹಂತದಿAದ ಪರಿಸರ ರಕ್ಷಣೆ, ಆಹಾರ ಉತ್ಪಾದನೆ, ವಿಜ್ಞಾನದ ಅವಿಷ್ಕಾರಗಳ ಮೇಲೆ ನಂಬಿಕೆ, ಆಸಕ್ತಿ ಬೆಳೆಯುವಂತೆ ಜೀವನ ಪದ್ಧತಿ ರೂಢಿಸಿದಲ್ಲಿ ಈ ವರ್ಷದ ಘೋಷವಾಕ್ಯಕ್ಕೊಂದು ಅರ್ಥ ಬಂದೀತು.
– ರಾಮಚಂದ್ರ ಮೋನೆ.
ವಿಜ್ಞಾನ ಶಿಕ್ಷಕರು, ಗದಗ.


Spread the love

LEAVE A REPLY

Please enter your comment!
Please enter your name here