ಫೆಬ್ರವರಿ 28, ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ. ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. 1921, ಸೆಪ್ಟೆಂಬರ್ ತಿಂಗಳು ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಮರಳಿ ತವರಿಗೆ ರಾಮನ್ ಪ್ರಯಾಣಿಸುತ್ತಿರುವ ಸಮಯ ಹಡಗು ಮೆಡಿಟರೇನಿಯನ್ ಸಮುದ್ರದಲ್ಲಿ ಸಾಗುತ್ತಿದ್ದಾಗ ಸಮುದ್ರದ ಅಚ್ಚ ನೀಲಿ ಬಣ್ಣವನ್ನು ಕಂಡ ರಾಮನ್ ಬೆರಗಾದರು. ಈ ಬಣ್ಣ ಸಮುದ್ರಕ್ಕೆ ಬಂದದ್ದು ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು.
ರಾಮನ್ ತನ್ನೆದುರು ಹರಡಿ ಚೆಲ್ಲಿದ ನೀಲ ನೀರಿನ ರಾಶಿಯನ್ನು ನೋಡುತ್ತಿದ್ದಂತೆ ನೀರಿನ ಅಣುಗಳಿಂದ ನೀಲಿ ಬಣ್ಣದ ಬೆಳಕು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುವುದೇ ಕಾರಣವೆಂದು ಅರಿತು ಹಡಗಿನಲ್ಲಿಯೇ ಸಮುದ್ರದ ನೀರನ್ನು ಬಾಟಲಿಗಳಲ್ಲಿ ಸಂಗ್ರಹಿಸಿ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬಾ ಪ್ರಯಾಣದ ಸಮಯದಲೆಲ್ಲಾ ಓಡಾಡಿದ್ದರು. ಏಳು ವರ್ಷಗಳ ಸತತ ಪರಿಶ್ರಮದ ಬಳಿಕ, 1928 ಫೆಬ್ರವರಿ 28 ಬೆಳಗ್ಗೆ ತಮ್ಮ ಪ್ರಯೋಗದಲ್ಲಿ ರಾಮನ್ ಯಶಸ್ಸು ಕಂಡರು.
ದ್ರವ ಮಾಧ್ಯಮದಲ್ಲಿ ಅಣುಗಳು ಬೆಳಕಿನ ಅಲೆಗಳನ್ನು ಚದರಿಸುವ ಮೂಲಕ ಬೆಳಕಿನ ರೋಹಿತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ ವಿನೂತನ ವಿದ್ಯಮಾನವನ್ನು ಅಂದು ರೋಹಿತ ದರ್ಶಕದಲ್ಲಿ ಗಮನಿಸಿದರು ಮತ್ತು ಆ ರೋಹಿತದ ಛಾಯಾ ಚಿತ್ರವನ್ನು ಪಡೆಯುವಲ್ಲಿ ಯಶಸ್ವಿಯಾದರು. ಅಂದು ಪ್ರತಿಪಾದಿಸಿದ ಈ ವಿದ್ಯಮಾನ ಮುಂದೆ `ರಾಮನ್ ಪರಿಣಾಮ’ ಎಂಬ ಹೆಸರಿನಲ್ಲಿ ಸುಪ್ರಸಿದ್ಧವಾಗಿ ಹಲವಾರು ಸಂಶೋಧನೆಗಳಿಗೆ ಮುನ್ನುಡಿಯಾಯಿತು.
1987ರಿಂದಲೂ ದೇಶಾದ್ಯಂತ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 1930ರಿಂದ ಇಂದಿನವರೆಗೆ ಭಾರತದಲ್ಲೇ ಹುಟ್ಟಿ, ಬೆಳೆದು, ತಮ್ಮ ಕಾರ್ಯಕ್ಷೇತ್ರವನ್ನು ವಿದೇಶಕ್ಕೆ ಬದಲಿಸದ ಏಕೈಕ ನೊಬಲ್ ಪುರಸ್ಕೃತ ವಿಜ್ಞಾನಿ ಸಿ.ವಿ.ರಾಮನ್. ಸರ್ ಚಂದ್ರಶೇಖರ ವೆಂಕಟರಾಮನ್, ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು 1930ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ `ರಾಮನ್ ಎಫೆಕ್ಟ್’ ಎಂಬ ಶೋಧನೆಗಾಗಿ ಬೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು. ಅವರು 7, 1888ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ’ತಿರುವನೈಕಾವಲ್’ ಎಂಬಲ್ಲಿ ಜನಿಸಿದರು. ತಂದೆ ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ ಪ್ರಾಧ್ಯಾಪಕರಾಗಿದ್ದರು. ತಾಯಿ, ಪಾರ್ವತಿ ಅಮ್ಮಾಳ್. ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.
ಇಂದು ‘ರಾಮನ್ ಪರಿಣಾಮ’ ದ್ರವ್ಯದ ಅಣುರಚನೆಯನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೈಕ್ರೋವೇವ್, ಲೇಸರ್, ಇನ್ಫ್ರಾರೆಡ್, ಅಲ್ಟ್ರಾ ವಯೋಲೆಟ್, ಮತ್ತು ಕ್ಷ-ಕಿರಣ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ರಾಮನ್ ಮತ್ತು ಅವರು ಹುಟ್ಟು ಹಾಕಿದ ಅಪ್ಪಟ ಸ್ವಾವಲಂಬನೆಯ ವಿಜ್ಞಾನ ಚಿಂತನೆಯ ಬಗ್ಗೆ ಚರ್ಚೆ ಮಾಡಲೇಬೇಕಾದ ಸಂದರ್ಭವಿದು.
ಸೂಪರ್ ವಾಹಕಕ್ಕೆ ಸಂಬಂಧಿಸಿದ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ಇದೀಗ ನ್ಯಾನೊ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್, ವಾಯು ಚಲನ ವಿಜ್ಞಾನದ ಜಗದ್ಗುರು ರೊದ್ದ ನರಸಿಂಹ, ಬಾಹ್ಯಾಕಾಶ ಕ್ಷೇತ್ರದಲ್ಲಿನ ದೇಶದ ಅಪ್ರತಿಮ ಸಾಧನೆಯ ರೂವಾರಿ ಉಡುಪಿ ರಾಮಚಂದ್ರ ರಾವ್, ಜೀವ ವಿಜ್ಞಾನದ ಕ್ಲಿಷ್ಟ ಲೆಕ್ಕಾಚಾರಗಳನ್ನು ಗಣಿತದೊಂದಿಗೆ ತಾಳೆನೋಡುತ್ತಾ ಪರಿಸರ ವಿಜ್ಞಾನದಲ್ಲಿ ವಿಶ್ವಮಾನ್ಯ ಸಾಧನೆಗೈದಿರುವ ಮಾಧವ ಗಾಡ್ಗೀಳ್, ಪರಮಾಣು ವಿಜ್ಞಾನವನ್ನು ಕಲಿತೂ ಗಾಂಧಿವಾದಿಯಾಗಿ ರೂಪುಗೊಂಡು ಸಾಮಾನ್ಯರಿಗೆ ವಿಜ್ಞಾನ ಮುಟ್ಟಿಸಿದ ಹೆಚ್.ನರಸಿಂಹಯ್ಯ, ರಾಕೆಟ್ ತಂತ್ರಜ್ಞಾನ ಅಭ್ಯಸಿಸಿ ದೇಶದ ಮುಂಚೂಣಿ ಯೋಜನೆಗಳ ಸೂತ್ರಧಾರಿಯಾದ ಅಬ್ದುಲ್ ಕಲಾಮ್ ನಮ್ಮ ವಿಜ್ಞಾನ ವಿದ್ಯಾರ್ಥಿಗಳಿಗೆ ರೋಲ್ ಮಾಡಲ್ಗಳಾಗಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವೂ ಮುಂಚೂಣಿ ರಾಷ್ಟçಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಹುದು. ವಿಜ್ಞಾನಗಳು ಕೇವಲ ಪ್ರಯೋಗಗಳಿಗೆ ಸೀಮಿತವಾಗದೆ, ಎಲ್ಲ ಶೋಷಿತ ಮನುಜರ ಬಿಡುಗಡೆಯ ಹಾದಿಯಾಗಿ, ಸಾಮಾಜಿಕ ದುರಂತಗಳ ಬಗ್ಗೆ ಎಚ್ಚರಿಸುವ ದನಿಯಾಗಬೇಕು. ಇಂದು ಮಾತ್ರವಲ್ಲ, ಅನುದಿನವೂ ವಿಜ್ಞಾನ ದಿನವಾಗಲಿ ಎಂಬುದು ವಿಜ್ಞಾನಾಸಕ್ತರೆಲ್ಲರ ಹಾರೈಕೆ.
ವಿಜ್ಞಾನದ ಮೂಲತತ್ವವು ಸ್ವತಂತ್ರ ಚಿಂತನೆ, ಕಠಿಣ ಪರಿಶ್ರಮ ಮತ್ತು ಉಪಕರಣಗಳಲ್ಲ. ನಾನು ನನ್ನ ನೊಬೆಲ್ ಪ್ರಶಸ್ತಿಯನ್ನು ಪಡೆದಾಗ, ನನ್ನ ಉಪಕರಣಗಳಿಗೆ ನಾನು 200 ರೂಪಾಯಿಗಳನ್ನೂ ಖರ್ಚು ಮಾಡಿರಲಿಲ್ಲ.
– ಸಿ.ವಿ. ರಾಮನ್
ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಏಕಲಾಸಪೂರ.