ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ತಾಲೂಕಿನ ನೆಲಗೊಂಡನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಹಾಗೂ ೬೦ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಿವೃತ್ತ ಅಭಿಯಂತರ ಎನ್.ಟಿ. ಸಣ್ಣ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಊರಿನ ಶಾಲೆಯ ಪ್ರಾರಂಭದಲ್ಲಿ ಶಾಲಾ ಕಟ್ಟಡಗಳು ಇರಲಿಲ್ಲ. ಗ್ರಾಮಸ್ಥರಾದ ಎನ್.ಟಿ. ಸಿದ್ದಪ್ಪ ಹಾಗೂ ಬಸಪ್ಪನವರ ಸಹಕಾರದೊಂದಿಗೆ ಕಟ್ಟಡಗಳು ನಿರ್ಮಾಣಗೊಂಡು ಇಂದಿಗೆ ಈ ಶಾಲೆಗೆ ೬೦ ವರ್ಷ ತುಂಬಿದ ಪ್ರಯುಕ್ತ ಊರಿನ ಸಹಕಾರದೊಂದಿಗೆ ಅದ್ದೂರಿಯಾಗಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.
ಮುಖ್ಯ ಅತಿಥಿ, ವೈದ್ಯಾಧಿಕಾರಿ ಎನ್.ಆರ್. ದಿವಾಕರ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಈ ಶಾಲೆಯಲ್ಲಿ ಓದಿದವರು ಉನ್ನತ ಹುದ್ದೆಯಲ್ಲಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.
ವೇದಿಕ್ ಶಾಲೆಯ ಸಂಸ್ಥಾಪಕ ಎನ್.ಟಿ. ಮರುಳುಸಿದ್ದಪ್ಪ, ನಿವೃತ್ತ ಶಿಕ್ಷಕ ಮರುಳುಸಿದ್ದಪ್ಪ, ಸಿಆರ್ಪಿ ಸಿದ್ದೇಶ್ವರ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಮರುಳಸಿದ್ದಪ್ಪ, ಹನುಮಂತ ಚಾರಿ, ಕಾಳಚಾರಿ, ಪ್ರಭುಲಿಂಗಪ್ಪ, ಮುಖ್ಯ ಗುರುಗಳಾದ ಎ.ಹೆಚ್. ಕೊಟ್ರೇಶ್, ಶಿಕ್ಷಕರಾದ ಪಿ.ಬಸವರಾಜ್, ಚಿದಾನಂದಪ್ಪ ಇವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ ಅಧ್ಯಕ್ಷರಾದ ರಂಗಮ್ಮ ಪರುಸಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಮ್ಸಿ ಅಧ್ಯಕ್ಷರಾದ ಕೆ.ಮಂಜುನಾಥ್, ಉಪಾಧ್ಯಕ್ಷರಾದ ರೇಖಾ ಪರಮೇಶ್ವರಪ್ಪ, ಗ್ರಾ.ಪಂ ಸದಸ್ಯರಾದ ಉಷಾ ವಿಜಯ್ ಕುಮಾರ್, ಸುಶೀಲಾ ಬಾಯಿ ಕುಮಾರ್ ನಾಯ್ಕ್, ಶಕುಂತಲಾ ಬಾಯಿ ರಮೇಶ್ ನಾಯ್ಕ್, ಶೆಟ್ಟಿ ನಾಯ್ಕ್, ಪಿ. ಕುಮ್ಲಾ ನಾಯ್ಕ್, ಮುಖಂಡರಾದ ಎನ್.ಜಿ. ಸಿದ್ದಪ್ಪ, ಗುರುಬಸವರಾಜ, ಮುರುಳಿ, ಮುಖ್ಯ ಗುರು ಎಮ್.ಕೂಬ್ಯಾನಾಯ್ಕ್, ಶಿಕ್ಷಕ ಎಮ್.ನಿಂಗಪ್ಪ ಮುಂತಾದವರಿದ್ದರು.