ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಂಬಾಣಿ ಸಮುದಾಯದ ಆರಾಧ್ಯ ದೈವ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಜನರಲ್ಲಿನ ಅಜ್ಞಾನ, ಅಂಧಕಾರ, ಮೂಡನಂಬಿಕೆಗಳನ್ನು ಹೋಗಲಾಡಿಸಿ ಸುಜ್ಞಾನದ ಬೆಳಕು ಮೂಡಿಸಿದ್ದಾರೆ. ಅವರ ತತ್ವಾದರ್ಶ, ಮೌಲ್ಯ, ಚಿಂತನೆಗಳು ಇಡೀ ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಗುರುವಾರ ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ಲಂಬಾಣಿ ಬಂಜಾರ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ್ರ 285ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಬೆಳಕಾದ ಸೇವಾಲಾಲ್ ಮಹಾರಾಜರು ಲೋಕ ಸಂಚಾರದ ಮೂಲಕ ಜನರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿ ಸಾಮಾಜದ ಶ್ರೇಯೋಭಿವೃದ್ಧಿಗಾಗಿಯೇ ಸಮರ್ಪಿಸಿಕೊಂಡವರು. ಇಂತಹ ಮಹಾತ್ಮರನ್ನು ಸದಾ ಸ್ಮರಿಸುತ್ತಾ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕಾಗಿದೆ. ಲಕ್ಷ್ಮೇಶ್ವರದಲ್ಲಿ 3 ಕೋಟಿ ರೂ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಉಂಟಾದ ನಿವೇಶನದ ತೊಂದರೆ ಸರಿಪಡಿಸಿ ಆದಷ್ಟು ಬೇಗ ಭವನ ನಿರ್ಮಾಣ, ತಾಂಡಾಗಳಲ್ಲಿ ಶಾಲೆ, ದೇವಸ್ಥಾನ ನಿರ್ಮಾಣ, ತಾಂಡಾಗಳ ಕಂದಾಯ ಗ್ರಾಮ ಘೋಷಣೆ ಸೇರಿ ಶಿಕ್ಷಣ, ಮೂಲಭೂತ ಸೌಲಭ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಮಾತನಾಡಿ, ಲಂಬಾಣಿ ಸಮಾಜ ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ, ಉಡುಗೆ-ತೊಡುಗೆ, ಭಾಷೆಯ ಶ್ರೇಷ್ಠತೆಯಿಂದ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಶ್ರಮಿ ಜೀವಿಗಳು ಮತ್ತು ಸ್ವಾಭಿಮಾನದ ಪ್ರತೀಕವಾದ ಸಮಾಜದ ಯುವಕರು ದುಶ್ಚಟಗಳಿಂದ ದೂರವಿದ್ದು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ರಾಜಕೀಯ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂದರು.
ಸಮಾಜದ ಮುಖಂಡರಾದ ದೀಪಕ ಲಮಾಣಿ, ರಾಮಣ್ಣ ಲಮಾಣಿ(ಶಿಗ್ಲಿ) ಮಾತನಾಡಿದರು. ಶಿಕ್ಷಕ ವೆಂಕಟೇಶ ಅರ್ಕಸಾಲಿ ಸೇವಾಲಾಲ ಮಹಾರಾಜರ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಗುರಪ್ಪ ಲಮಾಣಿ, ಕುಬೇರಪ್ಪ ಲಮಾಣಿ, ಈಶಪ್ಪ ಲಮಾಣಿ, ಶಿವಣ್ಣ ಲಮಾಣಿ, ದೀಪಕ ಲಮಾಣಿ, ದೇವಣ್ಣ ಲಮಾಣಿ, ಮಲ್ಲೇಶಪ್ಪ ಲಮಾಣಿ, ಟೋಪಣ್ಣ ಲಮಾಣಿ, ಜಾನು ಲಮಾಣಿ, ಪರಮೇಶ ಲಮಾಣಿ, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಸೋಮಪ್ಪ ಲಮಾಣಿ, ಸರೋಜಮ್ಮ ಲಮಾಣಿ, ವಿಜಯಲಕ್ಷ್ಮಿ ಚೌವ್ಹಾಣ, ಪ್ರೇಮವ್ವ ನಾಯಕ, ಸೋಮರೆಡ್ಡಿ ಲಮಾಣಿ, ಆನಂದ ನಾಯಕ, ಟಾಕರಪ್ಪ ಮಾಳಗಿಮನಿ, ಚಂದ್ರು ಕಾರಬಾರಿ, ಸುರೇಶ ಕುಂಬಾರ, ಪಿಎಸ್ಐ ಈರಣ್ಣ ರಿತ್ತಿ, ತಾವರೆಪ್ಪ ಲಮಾಣಿ ಸೇರಿ ಸಮಾಜದ ಹಿರಿಯರು ಇದ್ದರು.

ಸಮಾಜದ ಅಧ್ಯಕ್ಷ ಶಿವಣ್ಣ ಲಮಾಣಿ ಸ್ವಾಗತಿಸಿದರು. ಎಂ.ಕೆ. ಲಮಾಣಿ, ಸಂತೋಷ ಲಮಾಣಿ ನಿರೂಪಿಸಿದರು.
ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಸಕಲ ಜೀವರಾಶಿಗಳಿಗೆ ಲೇಸನೇ ಬಯಸಿದ ಸಂತ ಶ್ರೀ ಸೇವಾಲಾಲ್ರ ತತ್ವ-ಸಿದ್ಧಾಂತಗಳಡಿ ಬದುಕುವ ಲಂಬಾಣಿ ಸಮಾಜದವರು ಇತರೇ ಸಮಾಜದೊಂದಿಗೆ ಅನ್ಯೋನ್ಯತೆಯಿಂದ ಧರ್ಮನಿಷ್ಠರಾಗಿ ಬಾಳಬೇಕು. ಭಾರತಮಾತೆಯ ಪುಣ್ಯಭೂಮಿಯಲ್ಲಿ ಜನಿಸಿ ಇಲ್ಲಿನ ಅನ್ನ ಉಂಡು, ನೀರು ಕುಡಿದು, ಪಾಕಿಸ್ತಾನ್ ಜಿಂದಾಬಾದ್ ಎನ್ನುವ ದೇಶದ್ರೋಹಿಗಳಿಗೆ ಧಿಕ್ಕಾರವಿರಲಿ ಎಂದು ಪ್ರಸ್ತುತ ನಡೆದಿರುವ ರಾಜಕೀಯ ವ್ಯವಸ್ಥೆಯನ್ನು ಕುಟುಕಿದರು.



