ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಬೆಂಗಳೂರಿನ ಬಿಡದಿಯ ಟೊಯೋಟಾ ಕಂಪನಿಯವರು ಧಾರವಾಡದ ಕನೆಕ್ಟ್ ಸಂಸ್ಥೆಯ ಮೂಲಕ ನಿಮಗೆ ಕೌಶಲ್ಯ ಪರಿಣಿತಿಯನ್ನು ನೀಡಲು ಬಂದಿದ್ದಾರೆ. ಮನೆ ಬಾಗಿಲಿಗೆ ಬಂದಿರುವ ಈ ಅವಕಾಶವನ್ನು ನೀವು ಸದುಪಯೋಗಪಡಿಸಿಕೊಂಡು ನಿಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಿ ಎಂದು ಪಟ್ಟಣದ ಶ್ರೀ ಕೊಟ್ಟೂರುಸ್ವಾಮಿ ಐಟಿಐ ಕಾಲೇಜಿನ ಚೇರಮನ್ ವಿ.ಬಿ. ಸೋಮನಕಟ್ಟಿಮಠ ಹೇಳಿದರು.
ಗುರುವಾರ ಕಾಲೇಜಿನಲ್ಲಿ ಧಾರವಾಡದ ಕನೆಕ್ಟ್ ಸಂಸ್ಥೆಯವರು ನಡೆಸಿದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಇಂತಹ ಸೌಲಭ್ಯಗಳು ಇರಲಿಲ್ಲ. ಈಗ ಅನೇಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ನಿಮ್ಮ ಮನೆ ಬಾಗಿಲಿಗೆ ಬರುತ್ತಿವೆ. ನಮ್ಮ ಶ್ರೀ ಕೊಟ್ಟೂರು ಸ್ವಾಮಿ ಐಟಿಐನ ಪ್ರಾಚಾರ್ಯರು ಮತ್ತು ಸಿಬ್ಬಂದಿಯವರು ನಿಮಗೆ ಇಂಥದ್ದೊಂದು ಅವಕಾಶವನ್ನು ಒದಗಿಸಿಕೊಟ್ಟಿದ್ದು, ಈ ಮೂಲಕ ನಿಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ಬರುವ ಜೂನ್ ತಿಂಗಳಲ್ಲಿ ಇನ್ನಷ್ಟು ಹೆಚ್ಚಿನ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಸಹಸ್ರಾರು ಜನರಿಗೆ ಉದ್ಯೋಗ ದೊರಕುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಇದಕ್ಕೆ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರ ಆಶೀರ್ವಾದವೂ ಇದೆ ಎಂದು ಸೋಮನಕಟ್ಟಿ ತಿಳಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಮಾತನಾಡಿ, ನೀವು ಪಡೆದ ತರಬೇತಿ ಫಲಪ್ರದವಾಗಬೇಕಾದರೆ ಇಂತಹ ಕೌಶಲ್ಯಾಧಾರಿತ ಪ್ರಾಯೋಗಿಕ ತರಬೇತಿನಿಮಗೆ ಅವಶ್ಯಕ. ನಿಮ್ಮ ಮನೆತನವನ್ನು ಆರ್ಥಿಕವಾಗಿ ಸಬಲಪಡಿಸಲು ನೀವು ಈ ತರಬೇತಿಯನ್ನು ಪಡೆದುಕೊಳ್ಳಿ. ಸಿಕ್ಕ ಅವಕಾಶವನ್ನು ಬಳಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಪ್ರಾಚಾರ್ಯ ಬಸವರಾಜ ಜೋಳದ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಐಟಿಐನಲ್ಲಿ ಒಟ್ಟು ಫಿಟ್ಟರ್, ಇಲೆಕ್ರ್ಟಿಶಿಯನ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ಸ್, ಹೊಲಿಗೆ, ವೈರ್ಮನ್ ಹಾಗೂ ಪ್ಲಂಬರ್ ಹೀಗೆ ಆರು ಟ್ರೇಡ್ಗಳಿದ್ದು, ನಿಮಗೆ ಇಷ್ಟವಾಗುವ ಟ್ರೇಡ್ನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಎಸ್.ಎಂ. ಕಮ್ಮಾರ ಸ್ವಾಗತಿಸಿದರು. ಸುಮಾ ಸೋಮನಕಟ್ಟಿಮಠ ನಿರೂಪಿಸಿದರು. ನಾಗರಾಜ ಗುಡದಾರಿ ವಂದಿಸಿದರು.
ಕನೆಕ್ಟ್ ಸಂಸ್ಥೆಯ ಎಚ್.ಆರ್ ಮಲ್ಲಿಕಾರ್ಜುನ ಗೊಂಡಬಾಳ ಮಾತನಾಡಿ, ಈ ಅಪ್ರೆಂಟಿಸ್ ತರಬೇತಿಯು ಒಂದು ವರ್ಷದ್ದಾಗಿದ್ದು, ಈ ಸಮಯದಲ್ಲಿ ಕಂಪನಿಯ ವತಿಯಿಂದ ನೀವು 16875 ರೂ.ಗಳ ಸ್ಟೆöಪೆಂಡ್ನ್ನು ಪಡೆಯುತ್ತೀರಿ. ನೀವು ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿ ದುಡಿದರೆ ನಿಮಗೆ ಬೋನಸ್ ರೂಪದಲ್ಲಿ ಹೆಚ್ಚಿನ ವೇತನ ದೊರೆಯಲಿದೆ. ತರಬೇತಿ ಸಮಯದಲ್ಲಿ ಉಚಿತ ಸಾರಿಗೆ, ಊಟ, ಸಮವಸ್ತç ಮುಂತಾದವುಗಳನ್ನು ನೀಡಲಾಗುತ್ತಿದೆ ಎಂದರು.