ವಿಜಯಸಾಕ್ಷಿ ಸುದ್ದಿ, ಗದಗ: ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ ಸ್ಲಂ ಜನರ ಬಲಿಷ್ಠತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಗದಗ ನಗರದಲ್ಲಿ ಮೇ 26ರಂದು ವಿಭಾಗ ಮಟ್ಟದ ಬೃಹತ್ ಸಮಾವೇಶ ಮತ್ತು ಸ್ಲಂ ಹಬ್ಬ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಗದಗ-ಬೆಟಗೇರಿ ನಗರ ಸೇರಿದಂತೆ ವಿಭಾಗ ಮಟ್ಟದಲ್ಲಿ ಬರುವ ಎಲ್ಲಾ ಜಿಲ್ಲೆಗಳ ಸಂಘಟನೆ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ವಿನಂತಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಗದಗ ನಗರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಲಂ ಜನರ ಜ್ವಲಂತ ಸಮಸ್ಯಗಳಿಗೆ ಸರ್ಕಾರಗಳು ಪ್ರಾಮಾಣಿಕವಾಗಿ ಸ್ಪಂದಿಸಬೇಕೆಂದು ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ವಸತಿ, ಹಕ್ಕು-ಪತ್ರ, ನಾಗರಿಕ ಸೌಲಭ್ಯಗಳ ಜೊತೆಗೆ ಸ್ಲಂ ಜನರಿಗೆ ರಾಜ್ಯ ಸರ್ಕಾರ ಭೂಮಿ ಹಕ್ಕು ಖಾತ್ರಿಗೊಳಿಸಬೇಕೆಂದು ಸಮಾವೇಶದ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ವಿಭಾಗ ಮಟ್ಟದಲ್ಲಿ ಬರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ-ಬೆಟಗೇರಿ, ಕೊಪ್ಪಳ, ಹೊಸಪೇಟ ನಗರಗಳ ಸ್ಲಂ ನಿವಾಸಿಗಳು ಸಾವಿರಾರು ಸಂಖ್ಯೆಯಲ್ಲಿ ಬಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಾವಿತ್ರಿಬಾ ಫುಲೆ ಹುಬ್ಬಳ್ಳಿ ಘಟಕದ ಸಂಚಾಲಕಿ ಶೋಭಾ ಕಮತರ ಮಾತನಾಡಿ, ನಮ್ಮ ವಿಭಾಗ ಮಟ್ಟದಲ್ಲಿರುವ ಎಲ್ಲಾ ಸಚಿವರಿಗೆ ಮತ್ತು ಶಾಸಕರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಸಮಾವೇಶದ ಜೊತೆಗೆ ವಿಭಾಗ ಮಟ್ಟದ ಸ್ಲಂ ಹಬ್ಬವನ್ನು ಹಮ್ಮಿಕೊಂಡಿದೆ ಎಮದರು.
ಮಹಿಳಾ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿ, ಗದಗ-ಬೆಟಗೇರಿ ನಗರದ ಎಲ್ಲಾ ಸ್ಲಂಗಳಲ್ಲಿ ಕಾರ್ಯಕ್ರಮದ ಕುರಿತು ಸಭೆಗಳನ್ನು ನಡೆಸುವ ಮೂಲಕ ಮಾಹಿತಿಯನ್ನು ನೀಡಿ ಕಾರ್ಯಕ್ರಮದ ಯಶಸ್ವಿಗಾಗಿ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ಪ್ರಸ್ತಾವಿಕವಾಗಿ ಮಾಡನಾಡಿದರು. ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಮೆಹರುನಿಸಾ ಡಂಬಳ, ಮಂಜುನಾಥ ಶ್ರೀಗಿರಿ, ಮೈಮುನ ಬೈರಕದಾರ, ಮುನ್ನಾ ಅಗಡಿ, ಮಕ್ತುಮಸಾಬ ಮುಲ್ಲಾನವರ, ವಿಲಾಸ ಗೋಸಾವಿ, ಮೆಹರುನಿಸಾ ಢಾಲಾಯತ, ದಾದು ಗೋಸಾವಿ, ಸಲೀಮ ಹರಿಹರ, ಮಹ್ಮದಸಾಬ ಗಡಾದ, ಆಯಿಸಾ ಉಮಚಗಿ, ವಿಶಾಲಕ್ಷಿ ಹಿರೇಗೌಡ್ರ, ರತ್ನವ್ವ ಗೌಡ್ರ, ಸಾಕ್ರುಬಾಯಿ ಗೋಸಾವಿ ಸೇರಿದಂತೆ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಹೊಸಪೇಟೆ ವಿಜಯನಗರ ಜಿಲ್ಲಾ ಸಮಿತಿ ಸಂಚಾಲಕಿ ವೆಂಕಮ್ಮ ಮಾತನಾಡಿ, ಮೇ 26ರಂದು ಹಮ್ಮಿಕೊಂಡಿರುವ ವಿಭಾಗ ಮಟ್ಟದ ಸಮಾವೇಶ ಮತ್ತು ಸ್ಲಂ ಹಬ್ಬ ಕಾರ್ಯಕ್ರಮದ ಪೂರ್ವಭಾವಿಯಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬರುವ ಸ್ಲಂ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕ್ರಮದ ಮಾಹಿತಿಯನ್ನು ನೀಡಬೇಕು, ವಿಭಾಗ ಮಟ್ಟದ ಸಮಾವೇಶ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.