ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ದೇಶದ ಭವಿಷ್ಯದ ಶಕ್ತಿಯಾಗಿರುವ ವಿದ್ಯಾರ್ಥಿ ಸಮೂಹಕ್ಕೆ ಯಾವ ದೃಷ್ಟಿಕೋನದಿಂದ ನೋಡಿದರೂ ಸಹ ಶಿಕ್ಷಕರು ಮಾದರಿಯಾದರೆ ಮಾತ್ರ ವಿದ್ಯಾರ್ಥಿಗಳಲ್ಲಿ ನೈತಿಕತೆ ಮೂಡಲು ಸಾಧ್ಯ ಎಂದು ಹುಲಕೋಟಿಯ ಡಾ.ಅರ್ಜುನ ಗೊಳಸಂಗಿ ಹೇಳಿದರು.
ಸ್ಥಳೀಯ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ 2024-25ನೇ ಸಾಲಿನ ಸಾಹಿತ್ಯಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಮಯಪಾಲನೆ, ಶಿಸ್ತು ಹಾಗೂ ಸಂಯಮದ ಪಾಠಗಳೊಂದಿಗೆ ಆಚಾರ-ವಿಚಾರ ಮತ್ತು ಸಂಸ್ಕೃತಿಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಶಿಕ್ಷಕರು ಹಾಗೂ ಉಪನ್ಯಾಸಕರು ಅವುಗಳನ್ನು ಮೊದಲು ಅಳವಡಿಸಿಕೊಳ್ಳಲು ಮುಂದಾಗಬೇಕು. ಅಂದಾಗ ವಿದ್ಯಾರ್ಥಿಗಳಿಗೆ ಮೊದಲ ಮಾದರಿ ವ್ಯಕ್ತಿಯಾಗಿ ಬೋಧಕ ಸಿಬ್ಬಂದಿ ನಿಲ್ಲುತ್ತಾರೆ. ಹೀಗಾಗಿ ಶಿಕ್ಷಕರು ತೆರೆದ ಪುಸ್ತಕದಂತಿರಬೇಕು ಎಂದರು.
ಗವಿವಿ ಸಂಘದ ಆಡಳಿತಾಧಿಕಾರಿ ಪ್ರಶಾಂತ ಶಿವಪ್ಪಗೌಡರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಪಠ್ಯದ ಜತೆಗೆ ಕ್ರೀಡೆ, ಎನ್ಎಸ್ಎಸ್ ಸೇರಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕ ಆರೋಗವನ್ನು ಕಾಪಾಡಿಕೊಳ್ಳಲು ಸಹಾಯಕವಾಗಲಿದೆ ಎಂದರು.
ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎನ್. ಶಿವರಡ್ಡಿ ಮಾತನಾಡಿದರು. 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಾಧನೆ ಮಾಡಿದ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸೌಂದರ್ಯ ನಿಂಬಲಗುಂದಿ, ಕಾರ್ತಿಕ್ ಬಿ.ಎನ್, ಉಪನ್ಯಾಸಕರಾದ ಎ.ಎಸ್. ವಡ್ಡರ, ಎಸ್.ಎನ್. ವಾಲಿಕಾರ, ಎಸ್.ಕೆ. ಕಟ್ಟಿಮನಿ, ಎಂ.ಎಲ್. ಕ್ವಾಟಿ, ವಿ.ಎಂ. ಜೂಚನಿ ಹಾಗೂ ಮಂಜುನಾಥ ನಾಗರಾಳ, ಶ್ರೀಕಾಂತ ಪೂಜಾರ, ಸುನೀಲ್ ಬಡ್ಡಿವಡ್ಡರ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಕಾಲೇಜಿನ ಪ್ರಾಚಾರ್ಯ ಜೆ.ಬಿ. ಗುಡಿಮನಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲುವು ಸಾಧಿಸಲು ನಿರಂತರ ಅಭ್ಯಾಸದ ಜತೆಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವ ಗುಣವನ್ನು ಮೈಗೂಡಿಸಿಕೊಂಡರೆ ಪ್ರತಿ ಹಂತದಲ್ಲೂ ದೊರಕುವ ಸೋಲು-ಗೆಲುವಿನ ಅನುಭವ ವಿದ್ಯಾರ್ಥಿಗಳನ್ನು ಗಟ್ಟಿಗೊಳಿಸುತ್ತವೆ. ಹೀಗಾಗಿ ಪ್ರತಿ ಪರೀಕ್ಷೆಗಳನ್ನು ಸಂಭ್ರಮದಂತೆ ಮತ್ತು ನಿರ್ಣಾಯಕ ಎನ್ನುವಂತೆ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ ಎಂದರು.