ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗ್ರಾಮದ ಸೈನಿಕ ಸಂಜೀವಕುಮಾರ ಚಿಮ್ಮನಕಟ್ಟಿ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಭೀಮಾಂಬಿಕಾ ದೇವಸ್ಥಾನದಿಂದ ವಿರುಪಾಕ್ಷೇಶ್ವರ ದೇವಸ್ಥಾನದವರೆಗೂ ನಿವೃತ್ತ ಸೈನಿಕನನ್ನು ಮೆರವಣಿಗೆ ಮಾಡಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿದ್ದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ, ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಂಡರು.
ಕಳೆದ 24 ವರ್ಷಗಳ ಕಾಲ ಜಮ್ಮು ಕಾಶ್ಮೀರ, ರಾಜಸ್ತಾನ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ತ್ರೀವೇಂದ್ರಮ್ ರಾಜ್ಯಗಳ ವಿವಿಧ ಗಡಿಗಳಲ್ಲಿ ದೇಶದ ಭದ್ರತೆ ಮತ್ತು ರಕ್ಷಣೆಯಲ್ಲಿ ಅಮೋಘ ಸೇವೆ ಸಲ್ಲಿಸಿರುವ ಸಂಜೀವಕುಮಾರ ಅವರ ನಿವೃತ್ತ ಜೀವನ ಸುಖಕರವಾಗಿರಲಿ, ಮುಂದೆ ಸೈನಿಕ ಸೇವೆ ಬಯಸುವ ಯುವಕರಿಗೆ ಅವರ ಮಾರ್ಗದರ್ಶನ ಸಿಗಲಿ ಎಂದು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ಧಲಿಂಗೇಶ್ವರ ಶ್ರೀಗಳು, ಪ್ರಾಚಾರ್ಯರಾದ ನೀಲಕಂಠ ಮುಕ್ಕಣ್ಣವರ, ಮಾಜಿ ಸೈನಿಕ ದತ್ತಾತ್ರೇಯ ಜೋಶಿ ಸೇರಿದಂತೆ ಮಾಜಿ ಸೈನಿಕರು ಹಾರೈಸಿದರು. ಸಂಜೀವಕುಮಾರ ದಂಪತಿಯನ್ನು ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.
ಗ್ರಾ.ಪಂ ಸದಸ್ಯ ಮಂಜುನಾಥ ಗುಡಸಲಮನಿ, ಹನುಮಂತಪ್ಪ ವಿಠೋಜಿ, ರವಿಚಂದ್ರ ಅಬ್ಬಿಗೇರಿ ಸೇರಿದಂತೆ ಮಾಜಿ ಸೈನಿಕ ಬಳಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.