ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭಿಸುವ ಅಗತ್ಯ ಕ್ರಮಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕು ಮತ್ತು ರೈತರು ಪ್ರಮಾಣೀಕೃತ ಬೀಜಗಳನ್ನೇ ಬಿತ್ತನೆ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಕೃಷಿ ಪೂರಕ ಸಲಕರಣೆಗಳು, ಗೊಬ್ಬರ, ಕ್ರಿಮಿನಾಶ ಪೂರೈಸುತ್ತಿದ್ದು, ರೈತರು ಸೂಕ್ತ ದಾಖಲೆ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಕ್ತ ಮಾರುಕಟ್ಟೆಯಲ್ಲಿ ಅನಧಿಕೃತ ಮಾರಾಟಗಾರರಿಂದ ಪ್ರಮಾಣೀಕೃತವಲ್ಲದ, ಕಳಪೆ ಬೀಜವನ್ನು ರೈತರು ಖರೀದಿಸಬಾರದು ಮತ್ತು ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಗಾವಹಿಸಬೇಕು. ರಿಯಾಯಿತಿ ದರದ ಬೀಜಗಳು ಅರ್ಹ ರೈತರಿಗೆ ಸಿಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಇಲಾಖೆಯಲ್ಲಿ ಕೆಲವರು ಹಸಿರು ವಸ್ತç ಧರಿಸಿ ತಾವೂ ರೈತರೆಂದು ಸುಳ್ಳು ಹೇಳಿಕೊಳ್ಳತ್ತಿದ್ದಾರಲ್ಲದೆ, ಅಧಿಕಾರಿಗಳಿಗೆ ದಬ್ಬಾಳಿಕೆ ಮಾಡಿ ಖೊಟ್ಟಿ ದಾಖಲೆ ಸೃಷ್ಟಿಸಿ ಇಲಾಖೆಯ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಗ್ರಾಫಿಕ್ಸ್ ಫೋಟೋ ಮಾಡಿ ಇಲಾಖೆಯ ಯೋಜನೆ ಮತ್ತು ವಿಮಾ ಸೌಲಭ್ಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ರಚಿಸಿ ವಿಮಾ ವ್ಯವಸ್ಥೆಯಲ್ಲಾಗುತ್ತಿರುವ ಗೋಲ್ಮಾಲ್ ತಡೆಗಟ್ಟಲಾಗುವುದು. ಅಧಿಕಾರಿಗಳನ್ನು ಹೆದರಿಸುವುದು, ದಬ್ಬಾಳಿಕೆ, ದಲ್ಲಾಳಿ ಕೆಲಸ ಮಾಡುವವರನ್ನು ಗುರುತಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿರೇಂದ್ರಗೌಡ ಪಾಟೀಲ, ಸದಸ್ಯರಾದ ರಾಜೀವ ಕುಂಬಿ, ನಿಂಗಪ್ಪ ಬನ್ನಿ, ಶಿವಣ್ಣ ಮಾನ್ವಿ, ಬಸಣ್ಣ ಹಂಜಿ, ರಮೇಶ ಉಪನಾಳ, ಅಶೋಕ ನೀರಾಲೋಟಿ, ಬಸವರೆಡ್ಡಿ ಹನಮರೆಡ್ಡಿ, ರಾಜು ಬೆಂಚಳ್ಳಿ, ಬಸವರಾಜ ಚಕ್ರಸಾಲಿ, ಶಮಕರ ಬ್ಯಾಡಗಿ, ಗಂಗಾಧರ ಗೋಡಿ, ಪ್ರವೀಣ ಗಾಣಿಗೇರ ಸೇರಿದಂತೆ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಈರಣ್ಣ ಅಕ್ಕೂರ, ಪಿ.ಕೆ. ಹೊನ್ನಪ್ಪನವರ, ರೈತ ಅನುವುಗಾರರಾದ ಅಮಿತ ಹಾಲೇವಾಡಿಮಠ, ಮಹೇಶ ನಂದೆಣ್ಣವರ, ಸಿದ್ದು ಕನವಳ್ಳಿ ಇದ್ದರು.
ಸಹಾಯಕ ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ಮಾಹಿತಿ ನೀಡಿ, ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ 50 ಕ್ವಿಂಟಲ್ ಹೆಸರು, 40 ಕ್ವಿಂಟಲ್ ತೊಗರಿ ಬೀಜ ದಾಸ್ತಾನಿದೆ. ಈ ವಾರದಲ್ಲಿ ಗೋವಿನಜೋಳ ಸೇರಿ ಇತರೇ ಬೀಜಗಳು ಬರುತ್ತವೆ. ಜೂನ್ ಮೊದಲ ವಾರದಲ್ಲಿ ಹೆಸರು ಬಿತ್ತನೆ ಮಾಡಬಹುದಾಗಿದ್ದು, ಬಿತ್ತನೆ ಪೂರ್ವ ಬೀಜೋಪಚಾರ ಮಾಡಬೇಕು. ರೈತರ ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರಗಳನ್ನು ಪೂರೈಸಲಾಗುವುದು ಎಂದರು.